ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು. ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-
ಅಹಹಾ + ಎಷ್ಟು ಚೆನ್ನಾಗಿದೆ?
ಅಯ್ಯೋ + ಇದೇನು?
ಓಹೋ + ಇದೇನು?
ಓಹೋ + ಅವನು ಬಂದನೇ?
ಅಕ್ಕಾ + ಇತ್ತ ಬಾ
ಮೇಲಿನ ನಾಲ್ಕು ವಾಕ್ಯಗಳನ್ನು ನೋಡಿರಿ. ಅಹಹಾ + ಎಷ್ಟು ಚೆನ್ನಾಗಿದೆ, ಆ ಕಾರಕ್ಕೆ (ಹ್ ವ್ಯಂಜನದ ಮುಂದಿನ ಆಕಾರಕ್ಕೆ) ಎ ಕಾರ ಪರವಾಗಿದೆ (ಎದುರಿಗೆ ಬಂದಿದೆ). ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ? ಅದರಂತೆ, ಅಯ್ಯೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ. ಓಹೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ, ಅಕ್ಕಾ + ಇತ್ತ ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ. ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ, ಆಗಮವನ್ನಾಗಲಿ ಮಾಡಲೇಬಾರದು. ಅವು ಹೇಗಿವೆಯೋ ಹಾಗೇ ಬಿಡಬೇಕು. ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ಪ್ರಕೃತಿಭಾವ ಎಂದು ವ್ಯಾಕರಣದಲ್ಲಿ ಹೇಳುತ್ತಾರೆ. ಆದ್ದರಿಂದ ಪ್ರಕೃತಿ ಭಾವಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-
(೧೯) ಸ್ವರದ ಮುಂದೆ ಸ್ವರವು ಬಂದರೂ, ಕೆಲವು ಕಡೆಗಳಲ್ಲಿ ಲೋಪ, ಆಗಮ ಮೊದಲಾದ ಸಂಧಿಕಾರ್ಯಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುವರು.
ಹಾಗಾದರೆ ಎಂಥ ಕಡೆ ಈ ಪ್ರಕೃತಿಭಾವ ಬರುವುದೆಂಬುದನ್ನು (ಸಂಧಿಕಾರ್ಯವಾಗದಿರು ವಿಕೆಯನ್ನು) ಗಮನಿಸಿರಿ:-
(i) ಪ್ಲುತಸ್ವರಗಳ
ಅಣ್ಣಾ(೩) | + | ಇತ್ತಬಾ | = | ಅಣ್ಣಾ, ಇತ್ತ ಬಾ |
ದೇವರೇ(೩) | + | ಇನ್ನೇನು ಗತಿ | = | ದೇವರೇ, ಇನ್ನೇನು ಗತಿ |
ಅಮ್ಮಾ(೩) | + | ಅದು ಬೇಕು | = | ಅಮ್ಮಾ, ಅದು ಬೇಕು |
ರಾಮಾ(೩) | + | ಅಲ್ಲಿ ನೋಡು | = | ರಾಮಾ, ಅಲ್ಲಿ ನೋಡು |
ಗುರುವೇ(೩) | + | ಉದ್ಧರಿಸು | = | ಗುರುವೇ, ಉದ್ಧರಿಸು |
(ii) ಭಾವಸೂಚಕಾವ್ಯಯಗಳಾದ[2] ಅಹಹಾ! ಅಬ್ಬಾ! ಅಯ್ಯೋ! ಅಕ್ಕಟಾ! ಓಹೋ! ಛೇ! __ ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ್ಯಗಳಾಗುವುದಿಲ್ಲ.
(ಬಹುಶಃ ಈ ಭಾವಸೂಚಕಾವ್ಯಯಗಳೆಲ್ಲ ಸ್ವರಾಂತಗಳಾಗಿರುತ್ತವೆ. ಇವುಗಳ ಮುಂದೆ ಸ್ವರ ಬಂದರೆ ಪ್ರಕೃತಿಭಾವ ಬರುವುದು)
ಉದಾಹರಣೆಗೆ:-
ಅಯ್ಯೋ + ಅವನಿಗೇನಾಯಿತು? = ಅಯ್ಯೋ! ಅವನಿಗೇನಾಯಿತು?
ಅಬ್ಬಾ + ಅದು ಹಾವೇ? = ಅಬ್ಬಾ! ಅದು ಹಾವೇ?
ಅಕ್ಕಟಾ + ಇಂದ್ರನಿಗೆ ಹಾನಿಯೇ? = ಅಕ್ಕಟಾ! ಇಂದ್ರನಿಗೆ ಹಾನಿಯೇ?
ಓಹೋ + ಅವನೇನು? = ಓಹೋ! ಅವನೇನು?
ಎಲಾ + ಅಧಮನೇ? = ಎಲಾ! ಅಧಮನೇ
ಛೇ + ಅದೆಲ್ಲಿ = ಛೇ! ಅದೆಲ್ಲಿ.
(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಆ + ಅಂಗಡಿ = ಆ ಅಂಗಡಿ
ಆ + ಅರಸು = ಆ ಅರಸು
ಆ + ಐಶ್ವರ್ಯ = ಆ ಐಶ್ವರ್ಯ
ಆ + ಆಡು = ಆ ಆಡು
ಆ + ಆಕಳು = ಆ ಆಕಳು
ಆ + ಔನ್ನತ್ಯ = ಆ ಔನ್ನತ್ಯ
ಆ + ಔದಾರ್ಯ = ಆ ಔದಾರ್ಯ
Leave A Comment