ಇದುವರೆಗೆ-ಸಾಮಾನ್ಯ ವಾಕ್ಯ, ಸಂಯೋಜಿತವಾಕ್ಯ, ಮಿಶ್ರವಾಕ್ಯಗಳ ಸಾಮಾನ್ಯ ಪರಿಚಯ ಮಾಡಿಕೊಂಡಿರಿ. ಒಂದೊಂದು ವಾಕ್ಯದಲ್ಲೂ ಕರ್ತೃ, ಕರ್ಮ (ಸಕರ್ಮಕ ಧಾತುವಾಗಿದ್ದರೆ ಮಾತ್ರ), ಕ್ರಿಯಾಪದಗಳು ಮುಖ್ಯವಾಗಿರಬೇಕು. ಒಮ್ಮೊಮ್ಮೆ ವಾಕ್ಯದಲ್ಲಿ ಈ ಪದಗಳಲ್ಲಿ ಯಾವುದಾದರೂ ಒಂದು ಪದವಿರದಿದ್ದರೆ, ಸಂದರ್ಭ ಮತ್ತು ಇರುವ ಪದಗಳ ಅರ್ಥದ ಸಹಾಯದಿಂದ ಇರಬೇಕಾದ ಪದದ ಆಧ್ಯಾಹಾರ ಮಾಡಿಕೊಳ್ಳಬೇಕಾಗುತ್ತದೆ. ಹೀಗಿರುವ ಕರ್ತೃ, ಕರ್ಮ, ಕ್ರಿಯೆಗಳಿಂದ ಕೂಡಿದ ವಾಕ್ಯದಲ್ಲಿ ಕರ್ತೃವಿಗೂ ಕರ್ಮಕ್ಕೂ, ಕ್ರಿಯಾಪದಕ್ಕೂ ವಿಶೇಷಣ ಪದಗಳೂ ಇರುತ್ತವೆ.
ಉದಾಹರಣೆಗೆ-
ದೊಡ್ಡ ದೊಡ್ಡ ಮಕ್ಕಳು ತಂದೆ ತಾಯಿಗಳ ಕಾರ್ಯದಲ್ಲಿ ತಮ್ಮ ಕೈಲಾದ ಸಹಾಯವನ್ನು ಅವಶ್ಯವಾಗಿ ಮಾಡಲೇಬೇಕು.
ಈ ವಾಕ್ಯದಲ್ಲಿ ‘ಮಾಡಲೇಬೇಕು’-ಎಂಬುದೇ ಕ್ರಿಯಾಪದ. ‘ಮಕ್ಕಳು’-ಕರ್ತೃ, ‘ಸಹಾಯವನ್ನು’-ಕರ್ಮ. ಅಂದರೆ ‘ಮಕ್ಕಳು ಸಹಾಯವನ್ನು ಮಾಡಲೇಬೇಕು’ ಎಂಬ ಈ ಮೂರು ಪದಗಳು ಕ್ರಮವಾಗಿ ಕರ್ತೃ, ಕರ್ಮ, ಕ್ರಿಯೆಗಳಾದರೆ-ಇವುಗಳಿಗೆ ಒಂದೊಂದಕ್ಕೂ ವಿಶೇಷಣ ಪದಗಳಿವೆ.
(i) ಮಕ್ಕಳು-ಎಂಬುದಕ್ಕೆ ‘ದೊಡ್ಡ ದೊಡ್ಡ’ ಎಂಬಿವು ವಿಶೇಷಣಗಳು.
(ii) ಸಹಾಯವನ್ನು-ಎಂಬುದಕ್ಕೆ ತಂದೆ ತಾಯಿಗಳ ಕಾರ್ಯದಲ್ಲಿ ಎಂಬ ಪದಗಳೂ,
(iii) ಮಾಡಲೇಬೇಕು[1]-ಎಂಬ ಕ್ರಿಯಾಪದಕ್ಕೆ ಅವಶ್ಯವಾಗಿ ಎಂಬುದೂ ವಿಶೇಷಣಗಳು.
ಹೀಗೆ ಕರ್ತೃ, ಕರ್ಮ, ಕ್ರಿಯಾಪದ ಇತ್ಯಾದಿ ಪ್ರಧಾನ ಪದಗಳಿಗೆ ಇರುವ ಕರ್ತೃ ವಿಶೇಷಣಗಳು, ಕರ್ಮವಿಶೇಷಣಗಳು, ಕ್ರಿಯಾವಿಶೇಷಣಗಳೇ ಮೊದಲಾದುವನ್ನು ಅವುಗಳ ಸಂಬಂಧವನ್ನು ಬೇರ್ಪಡಿಸಿ ಹೇಳುವ ವಿಧಾನವೇ ವಾಕ್ಯವಿಭಜನೆಯೆನಿಸುವುದು. ಈ ಕ್ರಮದಿಂದ ನಮಗೆ ವಾಕ್ಯ ರಚನೆ ಸ್ಪಷ್ಟವಾಗುವುದು.
[1] ಮಾಡಲೇಬೇಕು ಎಂಬಲ್ಲಿ ಬೇಕು ಎಂಬುದಿಷ್ಟೇ ಅವ್ಯಯಕ್ರಿಯಾಪದ. (ಕ್ರಿಯಾರ್ಥಕಾವ್ಯಯ) ಮಾಡಲೇಬೇಕು ಎಂದು ಕ್ರಿಯಾಪದವಾಗಿ ತೋರಿಸುವುದು ಕೇವಲ ಸ್ಪಷ್ಟತೆಗೋಸ್ಕರ ಮಾತ್ರ.
Leave A Comment