ಆಣೆಯಲಿ ಮಾತಾಡಿ ಭರವಸೆಯನುಸಿರಾಡಿ
ತೆಕ್ಕೆತೆಟುಕದ ತೆರೆಯ ನೆರಳು ನೀನು;
ನಂಬಿರುವ ಬರಿ ತೋಳ ಹುಂಬ ನಾನು,
ಗೀಸಿ ಅಗಲಿಸಿದ ತುಟಿ , ಅರೊಳಚ್ಛೇರು ಬೆಳ-
ದಿಂಗಳನು ಸುರಿವ ಹುಸಿನಗೆಯು ನೀನು;
ಎರಡು ಕಣ್ಣುಳ್ಳ ಬಿಕನೇಸಿ ನಾನು.
ಮಲೆನಾಡ ಸಿರಿಮೈಗೆ ಹಸಿರೊರಸಿ, ಹೂ ಮೆತ್ತಿ
ಮುದ್ದಿಡುವ ಮನ್ಸೂನ ಮಳೆಯು ನೀನು;
ಬೆಳವಲದ ಉಸುಬಿನ ಮಸಾರಿ ನಾನು.
ಬ್ರಹ್ಮಮಗುವಿದ್ದಾಗ ಥೇಟು ಹೆಣ್ಣಿನ ಹಾಗೆ ೧೦
ಪಾಟಿಯಲಿ ಬರೆದ ಹುಸಿ ಚಿತ್ರ ನೀನು;
ಅಂಕಲಿಪಿ ಓದಿರುವ ಜ್ಞಾನಿ ನಾನು.
ಇದ್ದಿಲ್ಲ, ಈಗಿಲ್ಲ, ಹಗಲೆಲ್ಲ ವರ್ಣಿಸಿದ
ಹಳೆಯ ಕಾವ್ಯಗಳ ಕವಿ ಸಮಯ ನೀನು;
ಏನೆ ಆದರು ಹೌದು ರಸಿಕ ನಾನು.
ಈಗಿದ್ದ ನದಿ ಮತ್ತೆ ಇನ್ನೊಂದು ಕ್ಷಣಕುಂಟೆ?
ಓ ಅದರ ಜೀವಂತ ವ್ಯಾಖ್ಯೆ ನೀನು;
ಅದ ಬರೆದ ಇಷ್ಟಗಲ ಹಾಳೆ ನಾನು.
ತುಟಿ ನೀಡಿ, ಮೈಸವರಿ, ನವಿರು ನವಿರಿಗೆ ಹೊಸೆದು,
ಮಾತಾಡಿ, ಮಟಾಮಾಯ-ಕನಸು ನೀನು; ೨೦
ತುಟಿನೆಕ್ಕಿ ತುರುಸುತಿಹ ಪ್ರಾಯ ನಾನು.
ನೀ ಯಾರೊ, ಎಂತೊ, ಹೆಸರೇನೋ, ಸರಿ ಇತ್ತೀಚೆ
ನಾನೂನು ಅರಿತೆ: ಮೃತ ಸ್ಮರಣೆ ನೀನು;
ಅದ ಹುಗಿದು ಕಟ್ಟಿರುವ ಗೋರಿ ನಾನು.
Leave A Comment