Categories
ಕನ್ನಡ ಪಂಪಮಹಾಕವಿ ವಿರಚಿತ ಪಂಪಭಾರತಂ ಪ್ರಾಚೀನ ಕೃತಿಗಳು

ಉಪೋದ್ಘಾತ

ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ. ೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯವು ಯಾವುದೋ ಒಂದು ರೀತಿಯಲ್ಲಿದ್ದಿರಬೇಕು. ರಾಜ್ಯದ ಆಡಳಿತಗಳ ಸಂಘಟ್ಟದಿಂದಲೂ ಸಾಮಾಜಿಕ ಜೀವನದ ಚಳುವಳಿಗಳಿಂದಲೂ ಸಾಹಿತ್ಯದಲ್ಲಿ ಕ್ರಮೇಣ ಬದಲಾವಣೆಗಳು ತೋರಿ ಬರತೊಡಗಿದವು. ಒಂದು ಕಾಲವು ಇನ್ನೊಂದು ಕಾಲವಾಗಿ ಪರಿವರ್ತನೆಯಾಗುವಾಗ ಇವೆರಡು ಕಾಲಗಳ ಸಂಘಟನೆಗಳಿಂದಲೂ ಪರಸ್ಪರ ಸಮಾಗಮಗಳಿಂದಲೂ ಸಮಾಜದಲ್ಲಿ ಅನೇಕ ಹೊಸವಿಚಾರಗಳು ತಲೆದೋರಿ ತತಲವಾಗಿ ಕೃತಿಗಳು ಹೊರಬಿದ್ದು ವ್ಯವಹಾರದಲ್ಲಿ ಬರುವುವು. ಆದರೆ ಈ ಎರಡು ಕಾಲಗಳ ಸಂ ಸಮಯದಲ್ಲಿ ಸಿಕ್ಕಿಕೊಂಡಿರುವ ಕಾಲದ ಪರಿಸ್ಥಿತಿಯು ಬಹುವಿಲಕ್ಷಣವಾಗಿರುವುದು. ಜನಾಂಗವು ಪೂರ್ವಕಾಲದ ನಡವಳಿಕೆಗಳನ್ನು ಒಂದೇ ಸಲ ಬಿಟ್ಟು ಬಿಡುವುದಿಲ್ಲ. ಇದಕ್ಕೆ ಹೆಚ್ಚು ಕಾಲ ಬೇಕಾಗುತ್ತದೆ. ಈ ಮಧ್ಯೆ ಪೂರ್ವದ ನಡತೆಗಳನ್ನು ಬಿಡದಂತೆಯೂ ಹೊಸ ಚಳುವಳಿಗಳನ್ನು ಸಂಪೂರ್ಣವಾಗಿ ನಿರಾಕರಿಸದಂತೆಯೂ ಹಾಗೂ ಹೀಗೂ ಇರತಕ್ಕದ್ದು ಸ್ವಭಾವ. ಕ್ರಮೇಣ ಹಳೆಯ ಚಾಳಿಗಳೆಲ್ಲ ಮಾಯವಾಗಿ ನವೀನ ಪದ್ಧತಿಗಳು ಸಮಾಜದಲ್ಲಿ ಊರಿಕೊಳ್ಳುವುವು. ಆಮೇಲೆ ಅವುಗಳಿಗೆ ಪೂರ್ಣ ಆಶ್ರಯವು ದೊರೆತು ಅವುಗಳು ಸರ್ವತೋಮುಖವಾಗಿ ಬೆಳೆದು ತತ್ಕಾಲದ ಪ್ರಚಲಿತ ಪದ್ಧತಿಗಳಾಗಿ ಪರಿಣಮಿಸುವುವು. ಕರ್ನಾಟಕದ ಹತ್ತನೆಯ ಶತಮಾನದ ಸ್ಥಿತಿಯೂ ಹೀಗೆಯೇ. ೯-೧೦ನೆಯ ಶತಮಾನಗಳ ಹಿಂದೆ ಕರ್ನಾಟಕ ಸಾಹಿತ್ಯವು ಹೇಗಿತ್ತೆಂಬುದನ್ನು ಖಚಿತವಾಗಿ ನಿರ್ಧರಿಸಲು ಸಾಕಷ್ಟು ಸಲಕರಣೆಗಳು ಇನ್ನೂ ದೊರೆತಿಲ್ಲ. ಲಬ್ಧವಾದ ಕೆಲವು ಗ್ರಂಥಗಳ ಸಹಾಯದಿಂದಲೂ ಶಾಸನಗಳ ನೆರವಿನಿಂದಲೂ ಹೇಗಿದ್ದಿತೆಂಬುದನ್ನು ಊಹಿಸಲು ಅವಕಾಶವಿದೆ.

ಸುಮಾರು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಉತ್ತರ ದೇಶದಲ್ಲಿ ತಲೆದೋರಿದ ವೀರಕ್ಷಾಮದ ನಿಮಿತ್ತ ದಕ್ಷಿಣಕ್ಕೆ ವಲಸೆ ಬಂದ ಭದ್ರಬಾಹುವಿನ ತಂಡದವರು ಅಲ್ಲಿಂದ ಮುಂದಕ್ಕೆ ತಮ್ಮ ದಿಗಂಬರ ಪಂಥವನ್ನು ದಕ್ಷಿಣದಲ್ಲಿ ಬೆಳೆಸಿಕೊಂಡು ಬಂದರು. ಶ್ರವಣ ಬೆಳುಗೊಳವು ಅವರ ಕೇಂದ್ರವಾಯಿತು. ಅಲ್ಲಿಂದ ಅವರು ತಮ್ಮ ಧರ್ಮಪ್ರಸಾರವನ್ನು ಉದಾರವಾಗಿ ಮಾಡತೊಡಗಿದರು. ವೈದಿಕ ಧರ್ಮಕ್ಕೆ ನೇರವಿರೋಧವಾಗಿದ್ದ ಬೌದ್ಧ ಜೈನಧರ್ಮಗಳಲ್ಲಿ ಬೌದ್ಧಮತವು ಜನರ ಮೇಲೆ ವಿಶೇಷ ಪ್ರಭಾವಶಾಲಿಯಾಗದೆ ೮-೯ನೆಯ ಶತಮಾನದ ವೇಳೆಗೆ ನಾಮಾವಶೇಷವಾಗಿರಬೇಕು. ಜೈನರಿಗೆ ಹಿಂದೆ, ಕರ್ನಾಟಕದಲ್ಲಿ ದ್ರಾವಿಡಸಂಸ್ಕೃತಿಯೂ ಒಂದು ಬೌದ್ಧಸಾಹಿತ್ಯವೂ ಇದ್ದಿರಬೇಕು. ಇವೆರಡು ಆ ಕಾಲಕ್ಕೆ ಹಿಂದೆಯೇ ಮಾಯವಾಗಿರಬೇಕು. ಜೈನರಾದರೋ ಬೌದ್ಧರಂತಲ್ಲದೆ ತಮ್ಮ ಮತ ಧರ್ಮಗಳನ್ನು ದೇಶಕಾಲಕ್ಕೆ ಅನ್ವಯಿಸುವಂತೆ ಮಾರ್ಪಡಿಸಿಕೊಂಡು ಅವುಗಳಿಂದ ತಾವೂ ಪ್ರಭಾವಿತರಾಗಿ ದೇಶೀಯರ ಮನಸ್ಸನ್ನು ಆಕರ್ಷಿಸಿದರು. ಜೈನ ಸಂನ್ಯಾಸಿಗಳು ವಿರಕ್ತರೂ ಆಚಾರಶೀಲರೂ ಆಗಿದ್ದುದರಿಂದ ರಾಜ ನಿರ್ಮಾಪಕರಾಗಿ ಅವರ ಆದರ ಪೋಷಣೆಗೂ ಅವರ ಸಾಮಂತರ ಮತ್ತು ಅಕಾರಿಗಳ ಗೌರವಕ್ಕೂ ಪಾತ್ರರಾದರು. ಜೈನರ ಪಂಚಾಣುವ್ರತಗಳೂ, ದಾನಧರ್ಮಗಳೂ, ಪ್ರಜಾಸಮೂಹದ ಆದರ ಗೌರವಗಳಿಗೆ ಪಾತ್ರವಾಗಿ ಅವರ ಜೈನಧರ್ಮವು ಮನರಂಜಕವಾಯಿತು. ವೈದಿಕ ಪಂಥಕ್ಕೆ ಸರಿಹೋಗುವ ಅವರ ಆಚಾರ ವ್ಯವಹಾರಗಳೂ, ಜಾತಿಪದ್ಧತಿಗಳೂ ಕಾಲಾನುಕ್ರಮದಲ್ಲಿ ವೈದಿಕ ಆಕಾರಗಳನ್ನೇ ತಾಳಿದವು. ಜೈನಪಂಡಿತರೂ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿದ್ದ ತಮ್ಮ ಮತಗ್ರಂಥಗಳನ್ನು ಸಂಸ್ಕ ತ ಮತ್ತು ದೇಶೀಯ ಭಾಷೆಗಳಿಗೆ ಅಳವಡಿಸಿ ಪರಿವರ್ತಿಸಿ ತಮ್ಮ ಶಾಸ್ತ್ರಗ್ರಂಥಗಳನ್ನು ಆಗ ಪ್ರಚಾರದಲ್ಲಿದ್ದ ಇತರ ಶಾಸ್ತ್ರಗ್ರಂಥಗಳ ಮಾದರಿಯಲ್ಲಿ ರಚಿಸಿ ಇತರ ಪಂಡಿತರೊಡನೆ ವಾಕ್ಕಾರ್ಥಮಾಡಿ ಅವರನ್ನು ಜಯಿಸಿ ಅವರಿಂದ ತಾವೂ ಜಯಿಸಲ್ಪಟ್ಟು ತಮ್ಮ ಶಾಸ್ತ್ರಗ್ರಂಥಗಳನ್ನು ಜೀವಂತವಾಗಿ ಬೆಳೆಸಿಕೊಂಡು ಬಂದರು.ಜೈನರು ಕರ್ನಾಟಕದಲ್ಲಿ ಕಾಲೂರಿದ ಮೇಲೆ ಅವರ ಪ್ರಾಬಲ್ಯವು ಕ್ರಮಕ್ರಮವಾಗಿ ಹೆಚ್ಚುತ್ತ ಹೋಗಿ ಕಾಲಕ್ರಮದಲ್ಲಿ ಕರ್ನಾಟಕವು ಅವರ ಒತ್ತಂಬಕ್ಕೆ ಒಳಪಟ್ಟು ತನ್ನ ನಿಜವಾದ ದ್ರಾವಿಡ ಸಂಸ್ಕೃತಿಯನ್ನು ತ್ಯಜಿಸಿರಬೇಕೆಂದು ಹೇಳಬಹುದು. ಮತಾಭಿಮಾನಿಗಳಾದ ಜೈನರು ತಮಗಿಂತ ಹಿಂದೆ ಇದ್ದ ಗ್ರಂಥಗಳನ್ನು ಇಲ್ಲದ ಹಾಗೆ ಮಾಡಿದುದರಿಂದಲೋ ಸರಿಯಾಗಿ ರಕ್ಷಿಸದೇ ಇದ್ದುದರಿಂದಲೋ ಆಗಿನ ಗ್ರಂಥಗಳೆಲ್ಲ ನಾಶವಾಗಿರಬೇಕು. ಆದರೆ ಒಂದು ವಿಷಯವನ್ನುಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರಬೇಕು. ಅದುವರೆಗಿದ್ದ ಗ್ರಂಥಗಳಲ್ಲಿ ಅನಾದರಣೆಯನ್ನು ತೋರಿದರೂ ಜೈನರು ಕನ್ನಡದಲ್ಲಿ ಅನಾದರಣೆಯನ್ನು ತೋರಲಿಲ್ಲ. ಅವರು ಕನ್ನಡ ಭಾಷೆಯನ್ನು ಮೆಚ್ಚಿ ಅದನ್ನು ಚೆನ್ನಾಗಿ ವ್ಯಾಸಂಗ ಮಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆದು ತನ್ಮೂಲಕವಾಗಿ ತಮ್ಮ ಮತತತ್ತ್ವಗಳನ್ನು ಜನಸಾಮಾನ್ಯರಿಗೆ ಬೋಸತೊಡಗಿದರು. ಕರ್ನಾಟಕದ ದ್ರಾವಿಡ ಸಂಸ್ಕ ತಿಯ ಸ್ಥಾನದಲ್ಲಿ ತಮ್ಮ ಸಂಸ್ಕೃತಿಯನ್ನು ನೆಲೆಗೊಳಿಸಿದರು. ಮೇಲೆಯೇ ತಿಳಿಸಿರುವಂತೆ ತಮ್ಮ ಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷಾಂತರಿಸಿ ಪಂಡಿತಪಾಮರರಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ಸಮಂತಭದ್ರ ಕವಿಪರಮೇಷ್ಠಿ ಪೂಜ್ಯಪಾದ ಮೊದಲಾದವರು ಸಂಸ್ಕೃತ ಭಾಷೆಯಲ್ಲಿಯೇ ತಮ್ಮ ಗ್ರಂಥಗಳನ್ನು ರಚಿಸಿ ತಮ್ಮ ಪ್ರಭಾವವನ್ನು ನೆಲೆಗೊಳಿಸಿದಂತೆ ಕಾಣುತ್ತದೆ. ಅವರಿಂದ ಮುಂದೆ ಬಂದವರು ಸಂಸ್ಕೃತ ಕನ್ನಡ ಭಾಷೆಗಳೆರಡನ್ನೂ ಮತಪ್ರಚಾರಕ್ಕಾಗಿ ಉಪಯೋಗಿಸಿಕೊಂಡು ಕರ್ನಾಟಕವನ್ನು ಸ್ವಾನ ಪಡಿಸಿಕೊಂಡರು. ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ಕನ್ನಡದಲ್ಲಿ ಅನೇಕ ಗದ್ಯಪದ್ಯಾತ್ಮಕ ಗ್ರಂಥಗಳು ತನ್ನ ಕಾಲದಲ್ಲಿದ್ದವೆಂದು ಹೇಳಿ ಕೆಲವು ಕವಿಗಳ ಹೆಸರನ್ನು ಸೂಚಿಸಿದ್ದಾನೆ. ಆದರೆ ಆ ಕವಿಗಳ ಕೃತಿಗಳಾವುವೂ ಉಪಲಬ್ದವಾಗಿಲ್ಲ.

ಕರ್ನಾಟಕ ರಾಜಮನೆತನಗಳಲ್ಲಿ ಕದಂಬ, ಗಂಗ ಮತ್ತು ರಾಷ್ಟ್ರಕೂಟರು ಜೈನಧರ್ಮದ ಪ್ರಭಾವಕ್ಕೆ ಒಳಪಟ್ಟವರು. ಅವರು ಜೈನಗುರುಗಳಿಗೂ ಬಸದಿಗಳಿಗೂ ಅನೇಕ ದತ್ತಿಗಳನ್ನು ಬಿಟ್ಟಿದ್ದಾರೆ. ಅವರ ಪ್ರಭಾವಕ್ಕೆ ಒಳಗಾಗಿ ತಾವೂ ಜೈನಮತವನ್ನವಲಂಬಿಸಿದ್ದಾರೆ. ಗಂಗರ ದಂಡನಾಯಕನಾದ ರಾಚಮಲ್ಲನೇ ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ಸ್ಥಾಪಿಸಿದವನು. ನೃಪತುಂಗ ಅಮೋಘವರ್ಷ ಮತ್ತು ಕೃಷ್ಣರು ವೀರಜೈನರೇ ಆಗಿದ್ದರು. ನಾಲ್ಕನೆಯ ಇಂದ್ರನು ಶ್ರವಣಬೆಳುಗೊಳದಲ್ಲಿ ಸಲ್ಲೇಖನ ವ್ರತದಿಂದ ನಿರ್ವಾಣ ಹೊಂದಿದಂತೆ ತಿಳಿದುಬರುತ್ತದೆ. ಹತ್ತನೆಯ ಶತಮಾನದಲ್ಲಿ ಚಾಳುಕ್ಯದೊರೆಯಾದ ತೈಲಪನು ಇಮ್ಮಡಿಕಕ್ಕನನ್ನು ಸೋಲಿಸಿ ದಕ್ಷಿಣದಲ್ಲಿ ರಾಜ್ಯಾಪತ್ಯವನ್ನು ವಹಿಸಿಕೊಂಡು ಪುನ ಚಾಳುಕ್ಯರಾಜ್ಯವನ್ನು ಸ್ಥಾಪಿಸಿದನು. ಚಾಳುಕ್ಯರು ಶೈವರೇ ಆದರೂ ಜೈನಮತದಲ್ಲಿ ಪೂರ್ಣವಾದ ಸಹಾನುಭೂತಿಯನ್ನು ತೋರಿದರು.

ಆದಿಕಾಲದ ಕನ್ನಡಕವಿಗಳು ತಮ್ಮ ಕಾವ್ಯ ರಚನೆಗೆ ಆ ಕಾಲದ ಸಂಸತಕಾವ್ಯಗಳನ್ನು ಮಾದರಿಯನ್ನಾಗಿ ಅಂಗೀಕಾರ ಮಾಡಿದರು. ಆಗಿನ ಕಾಲಕ್ಕೆ ಸಂಸ್ಕೃತ ಸಾಹಿತ್ಯದ ಉನ್ನತ ಕಾಲ ಆಗಿ ಹೋಗಿತ್ತು. ಕಾವ್ಯಲಕ್ಷಣಗಳನ್ನು ಕುರಿತು ಅನೇಕ ಗ್ರಂಥಗಳು ತಲೆದೋರಿದ್ದವು. ಅವುಗಳ ಕಾವ್ಯಗಳ ದೋಷಗಳನ್ನು ಖಚಿತವಾಗಿ ನಿಷ್ಕರ್ಷೆ ಮಾಡಿದ್ದವು. ಭಾವದ ತೀವ್ರತೆಯೂ ಸರಳತೆಯೂ ಮಾಯವಾಗಿ ರೀತಿ, ಗುಣಾಲಂಕಾರಗಳಿಗೂ ಕವಿ ಸಮಯಗಳಿಗೂ ಪ್ರಾಶಸ್ತ್ಯವುಂಟಾಗಿದ್ದಿತು. ಆನಂದವರ್ಧನನ ಧ್ವನಿತತ್ತ್ವವು ಪ್ರತಿಪಾದಿತವಾಗಿದ್ದರೂ ರೂಢಿಗೆ ಬಂದಿರಲಿಲ್ಲವೆಂದು ಕಾಣುತ್ತದೆ. ನೃಪತುಂಗನ ಕಾಲಕ್ಕೆ ಕನ್ನಡ ಭಾಷೆಯಲ್ಲಿ ಒಂದು ಹೊಸ ಪರಿವರ್ತನೆಯು ತಲೆದೋರಿದ್ದಿತು. ಕಾವ್ಯಗಳೂ ಹೊಸರೀತಿಯಲ್ಲಿ ರಚಿತವಾಗುತ್ತಿದ್ದವು. ಕನ್ನಡದಲ್ಲಿ ಕಾವ್ಯಗಳನ್ನು ಬರೆಯುವ ಕವಿಗಳು ಸಂಸ್ಕೃತ ಭಾಷೆಯಲ್ಲಿ ತಮಗಿದ್ದ ಹೆಚ್ಚಾದ ಪಾಂಡಿತ್ಯದಿಂದ ಕನ್ನಡ ಭಾಷೆಯಲ್ಲಿ ಸಂಸ್ಕೃತವನ್ನು ವಿಶೇಷವಾಗಿ ತುಂಬ ತೊಡಗಿದರು. ಆ ಭರದಲ್ಲಿ ಕನ್ನಡ ನುಡಿಯ ಗಡಿಯ ಮರ್ಯಾದೆಯೂ ಮೀರಿ ಕನ್ನಡ ಕಾವ್ಯಗಳೆಲ್ಲ ಸಂಸ್ಕೃತ ಮಯವಾಗುವುದಕ್ಕೆ ಪ್ರಾರಂಭವಾದುವು. ಈ ಪರಿಸ್ಥಿತಿಯನ್ನು ನೋಡಿ ನೃಪತಂಗನು ವ್ಯಸನಪಟ್ಟ. ಕನ್ನಡದಲ್ಲಿ ಸಂಸ್ಕೃತವನ್ನು ಎಷ್ಟರಮಟ್ಟಿಗೆ ಮೇಳನ ಮಾಡಬಹುದು; ಬೆರಸುವಾಗ ಯಾವ ನಿಯಮವನ್ನನುಸರಿಸಬೇಕು ಮೊದಲಾದ ವಿಷಯಗಳನ್ನೊಳಗೊಂಡ ‘ಕವಿರಾಜಮಾರ್ಗ’ವೆಂಬ ಲಕ್ಷಣ ಗ್ರಂಥವೊಂದನ್ನು ರಚಿಸಿದನು. ಕನ್ನಡ ಲಕ್ಷಣ ಗ್ರಂಥಗಳಲ್ಲಿ ಇದೇ ಮೊತ್ತಮೊದಲನೆಯದು. ಈ ಲಕ್ಷಣ ಗ್ರಂಥವನ್ನನುಸರಿಸಿ ಹೊಸಮಾದರಿಯ ಗ್ರಂಥಗಳು ಹೊರಬೀಳತೊಡಗಿರಬೇಕು. ಕರ್ನಾಟಕದಲ್ಲಿ ಎಲ್ಲೆಲ್ಲಿಯೂ ಸಾಹಿತ್ಯಾಭಿಮಾನವು ತಲೆದೋರಿ ಹತ್ತನೆಯ ಶತಮಾನದ ವೇಳೆಗೆ ಕನ್ನಡದಲ್ಲಿ ಬೆಳ್ಳಿಯ ಬೆಳಸು ತಲೆದೋರಿತು. ವೀರಾಗ್ರೇಸರರೂ ತ್ಯಾಗವೀರರೂ ಆದ ರಾಜರುಗಳೂ ಅವರ ಮಂತ್ರಿ ಸೇನಾಪತಿಗಳೂ ಕವಿಗಳಿಗೆ ಪೋಷಕವಾದುದಲ್ಲದೆ ಸ್ವಯಂ ಕವಿಗಳಾದರು. ರಾಜರುಗಳೇ ಅಲ್ಲದೆ ಧರ್ಮಾಭಿಮಾನಿಗಳನೇಕರು ಕವಿಗಳಿಗೆ ಆಶ್ರಯದಾತರಾದರು. ಕವಿಗಳು ಕಲಿಗಳೂ ಆಗಿ ತಮಗೆ ದೊರೆತ ಆಶ್ರಯವನ್ನು ಸದುಪಯೋಗಿಸಿಕೊಂಡು ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕೂ ತಮ್ಮ ಧರ್ಮಋಣವನ್ನು ಪೂರ್ಣಮಾಡುವುದಕ್ಕೂ ಲೌಕಿಕ ಮತ್ತು ಧಾರ್ಮಿಕ ಗ್ರಂಥಗಳನ್ನು ರಚಿಸಿದರು. ಆಗಿನ ಕಾಲದ ಗಂಗ, ರಾಷ್ಟ್ರಕೂಟ ಚಾಳುಕ್ಯರಾಜರ ವಿಶೇಷ ಪ್ರೋತ್ಸಾಹದಿಂದ ಕನ್ನಡರತ್ನತ್ರಯರೆಂದು ಪ್ರಸಿದ್ಧರಾದ ಪಂಪ ಪೊನ್ನ ರನ್ನರು ವೀರರಸಪ್ರಧಾನ ವಾದ ರಾಮಾಯಣ ಭಾರತ ಕಥೆಗಳ ಮೂಲಕ ತಮ್ಮ ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿಸಿದರೂ ಶಾಂತಿರಸಪ್ರಧಾನವಾದ ತೀರ್ಥಂಕರರ ಚರಿತ್ರೆಗಳನ್ನು ರಚಿಸಿ ತಾವು ಜಿನಸಮಯದೀಪಕರಾದುದೂ ಇದಕ್ಕೆ ಪ್ರತ್ಯಕ್ಷಸಾಕ್ಷಿ. ಇವರ ಕೃತಿಗಳ ಮಣಿವೆಳಗಿನಿಂದಲೇ ಆ ಕಾಲದ ಸಾಹಿತ್ಯ ಪ್ರಪಂಚವು ಜ್ವಾಜಲ್ಯಮಾನವಾಗಿದೆ-

ಪಂಪ : ಕನ್ನಡ ರತ್ನತ್ರಯರಲ್ಲಿ ಮೊದಲಿಗ ಪಂಪ. ಕಾಲದೃಷ್ಟಿಯಿಂದಲ್ಲದಿದ್ದರೂ ಯೋಗ್ಯತೆಯ ದೃಷ್ಟಿಯಿಂದ ಈತನು ಕನ್ನಡದ ಆದಿಕವಿ. ಅಲ್ಲದೆ ಕವಿವೃಷಭ. ‘ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪಂ’ ಎಂಬ ನಾಗರಾಜನ ಉಕ್ತಿಯು ಅಕ್ಷರಶ ಸತ್ಯ. ಈತನ ಕಾವ್ಯಗಳು ‘ಮುನ್ನಿ ಕಬ್ಬಗಳೆಲ್ಲವನು ಇಕ್ಕಿ ಮೆಟ್ಟಿದು’ ದಲ್ಲದೆ ಅಲ್ಲಿಂದ ಮುಂದೆ ಬಂದವುಗಳಿಗೆ ಮಾರ್ಗದರ್ಶಕವಾದುವು ಕನ್ನಡಿಗರ ಸುದೈವದಿಂದ ಪಂಪನು ತನ್ನ ಕಾವ್ಯಗಳಲ್ಲಿ ತನ್ನ ಪೋಷಕನ, ತನ್ನ ಮತ್ತು ತನ್ನ ಕಾವ್ಯಗಳ ವಿಷಯಕವಾದ ಪೂರ್ಣವಿವರಗಳನ್ನು ಕೊಟ್ಟಿದ್ದಾನೆ. ಅವುಗಳ ಸಹಾಯದಿಂದ ವಾಚಕರು ಕೃತಿಗಳ, ಕೃತಿಕರ್ತನ, ಮತ್ತು ಕೃತಿಭರ್ತನ ಪೂರ್ಣ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗಿದೆ.

ಪೂರ್ವಸಮುದ್ರ ತೀರದಲ್ಲಿದ್ದ ತೆಲುಗು ದೇಶಕ್ಕೆ ಸೇರಿದ ವೆಂಗಿಪಱವಿನಲ್ಲಿ ವಸಂತ, ಕೊಟ್ಟೂರು, ನಿಡುಗುಂದಿ, ವಿಕ್ರಮಪುರ ಎಂಬ ಅಗ್ರಹಾರಗಳಿದ್ದುವು. ಅವುಗಳಲ್ಲಿ ಅಗ್ರಗಣ್ಯನೂ ಊರ್ಜಿತಪುಣ್ಯನೂ ವತ್ಸಗೋತ್ರೋದ್ಭವನೂ ನಯಶಾಲಿಯೂ ಸಕಲಶಾಸ್ತ್ರಾರ್ಥ ಮತಿಯೂ ಆದ ಮಾಧವಸೋಮಯಾಜಿ ಎಂಬ ಬ್ರಾಹ್ಮಣನಿದ್ದನು. ಆತನು ಅನೇಕ ಯಜ್ಞಗಳನ್ನು ಮಾಡಿ ಸರ್ವಕ್ರತುಯಾಜಿಯಾದನು. ಆತನ ಯಜ್ಞಕುಂಡಗಳಿಂದ ಹೊರಟ ಹೋಮಧೂಮವು ದಿಗ್ವಿನಿತೆಯರಿಗೆ ಕೃತಕಕುರುಳಿನಂತೆಯೂ ತ್ರಿಭುವನಕಾಂತೆಗೆ ಕಂಠಾಭರಣದಂತೆಯೂ ಶೋಭಿಸುತ್ತಿದ್ದರೂ ಅವುಗಳಲ್ಲಿ ಆಹುತಿ ಮಾಡಿದ ಪಶುಹತ್ಯಾದೋಷದಿಂದ ಆತನ ಧವಳಕೀರ್ತಿ ಕರಿದಾಯಿತೆಂದು ಕವಿಯ ಕೊರಗು. ಆತನ ಮಗ ಅಭಿಮಾನಚಂದ್ರ. ಇವನು ಅರ್ಥಿಗಳು ಯಾಚಿಸಿದ ಸಾರವಸ್ತುಗಳನ್ನೆಲ್ಲ ನಿರ್ಯೋಚನೆಯಿಂದಿತ್ತು ಗುಣದಲ್ಲಿ ಪುರುಷೋತ್ತಮನನ್ನೂ ಮೀರಿಸಿದನು. ಭುವನಭವನಖ್ಯಾತನಾದ ಅಭಿಮಾನಚಂದ್ರನ ಮಗ ಕೊಮರಯ್ಯ. ಈತನು ವೇದವೇದಾಂಗಪಾರಗ. ಪುರಾತನಚರಿತ. ಈತನಿಗೆ ಗುಣಮಣಿರತ್ನಾಕರನೂ ಅಜ್ಞಾತಮೋನೀಕರನೂ ಆದ ಅಭಿರಾಮದೇವ ರಾಯನೆಂಬುವನು ತನಯ. ಈತನು ‘ಜಾತಿಯೊಳೆಲ್ಲ ಉತ್ತಮಜಾತಿಯ ವಿಪ್ರಕುಲಂಗೆ ನಂಬಲೇ ಮಾತೋ ಜಿನೇಂದ್ರ ಧರ್ಮಮೆವಲಂ ದೊರೆ ಧರ್ಮದೊಳೆಂದು ನಂಬಿ ತಜ್ಜಾತಿಯನುತ್ತರೋತ್ತರಂ ಮಾಡಿ ನೆಗೞದನ್.’ ಇತ್ತೀಚಿಗೆ ಲಬ್ಧವಾದ ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದ ಅಭಿರಾಮದೇವರಾಯನಿಗೆ ಭೀಮಪಯ್ಯನೆಂಬ ಹೆಸರೂ ಇದ್ದಂತೆ ತೋರುತ್ತದೆ. ಪಂಪನ ತಾಯಿ ಅಣ್ಣಿಗೇರಿಯ ಸಿಂಘಣ ಮಗಳಾದ ಅಬ್ಬಣಬ್ಬೆ. ಇವರ ಮಗನೇ ಕವಿತಾ ಗುಣಾರ್ಣವನಾದ ಪಂಪ. ಪಂಪನಿಗೆ ಜಿನವಲ್ಲಭನೆಂಬ ಒಬ್ಬ ತಮ್ಮನಿದ್ದನು. ಇವನು ಪಂಪನಂತೆಯೇ ಕವಿಯೂ ಪಂಡಿತನೂ ಆಗಿದ್ದನು. ವೆಂಗಿಪೆಳುವು ತೆಲುಗುದೇಶದ ಒಂದು ಭಾಗವಾಗಿದ್ದರೂ ಅವನು ಆ ಪ್ರಾಂತ್ಯದ ಅಂದರೆ ವೆಂಗಿಮಂಡಲದ-ವೇಮಲ ವಾಡದ ಚಾಳುಕ್ಯರ ಆಶ್ರಯದಲ್ಲಿದ್ದರೂ ಪಂಪನ ತಾಯಿಯ ತವರೂರಾದ ಅಣ್ಣಿಗೇರಿಯು ಕನ್ನಡದೇಶವೇ ಪಂಪನಿಗೆ ಮೊದಲಿನಿಂದಲೂ ಕನ್ನಡದೇಶದ ನಿಕಟ ಸಂಬಂಧವಿದ್ದಿರಬೇಕು.

ಪಂಪನು ದುಂದುಬಿಗಭಿರನಿನದ, ದುಂದುಭಿಸಂವತ್ಸರೋದ್ಭವ,

‘ಕದಳೀಗರ್ಭಶ್ಯಾಮಂ
ಮೃದು ಕುಟಿಲ ಶಿರೋರುಹಂ, ಸರೋರುಹವದನಂ
ಮೃದು ಮಧ್ಯಮತನು, ಹಿತಮಿತ
ಮೃದುವಚನಂ, ಲಲಿತಮಧುರ ಸುಂದರವೇಷಂ||

 

ವತ್ಸಕುಲತಿಲಕನ್, ಅಭಿಜನ
ವತ್ಸಲನ್, ಅಭಿಮಾನಮೂರ್ತಿ, ಕುಕವಿಯಶೋನಿ
ರ್ಮತ್ಸರನ್, ಅಮೃತಮಯೋಕ್ತಿ, ಶ
ರತ್ಸಮಯಸುಧಾಂಶುವಿಶದಕೀರ್ತಿ ವಿತಾನಂ’

ಆತನು ಲಲಿತಾಲಂಕರಣ, ರಸಿಕ, ಶಿಸ್ತುಗಾರ, ಸ್ವಾಭಿಮಾನಿ ಎಂದರೂ ಒಪ್ಪುತ್ತದೆ. ತಾನು ವನಿತಾಕಟಾಕ್ಷಕುವಲಯವನ ಚಂದ್ರವನಾಗಿದ್ದುದನ್ನು, ಕೇರಳವಿಟೀಕಟೀ ಸೂತ್ರಾರುಣಮಣಿಯಾಗಿದ್ದುದನ್ನು, ಮಲಯ ಮತ್ತು ಆಂಧ್ರ ಯುವತಿಯರು ತನ್ನ ರೂಪಕ್ಕೆ ಮಾರುಹೋಗಿ ತನಗೆ ಅನರಾಗಿದ್ದುದನ್ನು ಆತನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾನೆ. ಸ್ತ್ರೀಲಾವಣ್ಯದ ಆಕರ್ಷಣೆಯ ಒಳಗುಟ್ಟು

ಆತನಿಗೆ ಗೊತ್ತು. ಆದುದರಿಂದಲೇ ಆತನು ತನ್ನ ಕಾವ್ಯದಲ್ಲಿ ‘ಸಾರಂ ಅನಂಗಜಂಗಮಲತಾಲಲಿತಾಂಗಿಯರಿಂದಮಲ್ತೆ ಸಂಸಾರಂ’ ಎಂದು ಘೋಷಿಸಿರುವುದು. ಸಂಸಾರಸಾರೋದಯನಾದ ಆತನಿಗೆ ಭೋಗಸಾಮಗ್ರಿಗಳಾದ ಸ್ನಾನ, ಅನುಲೇಪನ, ಪುಷ್ಪಧಾರಣ, ಭೋಜನ, ತಾಂಬೂಲಚರ್ವಣ, ದುಕೂಲಾಚ್ಛಾದನ, ವನವಿಹಾರ, ಜಲಕ್ರೀಡಾದಿ ಸಮಸ್ತ ವಿಷಯಗಳಲ್ಲಿಯೂ ಅತ್ಯತಿಶಯವಾದ ಅನುಭವವೂ ರಸಿಕತೆಯೂ ಇತ್ತೆಂದು ಕಾಣುತ್ತದೆ. ಈ ಅನುಭವದ ವೈಭವವನ್ನು ನೋಡಬೇಕು ‘ಆದಿಪುರಾಣ’ದ ಹನ್ನೊಂದನೆಯ ಆಶ್ವಾಸದಲ್ಲಿ ಬರುವ ಭರತ ಚಕ್ರವರ್ತಿಯ ಚೈತ್ರಯಾತ್ರಾ ಸಂದರ್ಭದಲ್ಲಿ. ಆದರೂ ಪಂಪನಿಗೆ ಭೋಗದ ಮಿತಿಯೂ ತ್ಯಾಗದ ಹಿತವೂ ಚೆನ್ನಾಗಿ ತಿಳಿದಿತ್ತು. ಧರ್ಮಾರ್ಥಕಾಮಗಳ ಇತಿಮಿತಿಯು ಸ್ಪಷ್ಟವಾಗಿತ್ತು. ಅದನ್ನೇ ಅವನು ಮುಂದಿನ ಪದ್ಯಭಾಗದಲ್ಲಿ ವಿಶದಪಡಿಸಿದ್ದಾನೆ.

ಧರ್ಮಂ ಪ್ರಧಾನಂ, ಅರ್ಥಂ
ಧರ್ಮಾಂಘ್ರಿಪಫಳಂ, ಅವರ್ಕೆ ರಸಮದು ಕಾಮಂ||

ಪಂಪನ ಬಾಲ್ಯದ ವಿವರಗಳೇನೂ ತಿಳಿದಿಲ್ಲ. ಈತನ ವಿದ್ಯಾಭ್ಯಾಸವು ಸರ್ವತೋಮುಖವಾಗಿರಬೇಕು. ರಾಮಾಯಣ, ಮಹಾಬಾರತ, ಮತ್ತು ಜೈನಧರ್ಮ ಗ್ರಂಥಗಳ ಪರಿಚಯ ಈತನಿಗೆ ವಿಶೇಷವಾಗಿತ್ತು. ಪ್ರಾಕೃತ ಸಂಸ್ಕೃತ ಭಾಷೆಗಳಲ್ಲಿಯೂ ಪೂರ್ಣ ಪಾಂಡಿತ್ಯವಿತ್ತು. ಸಂಗೀತ, ನೃತ್ಯ, ಶಿಲ್ಪ, ವೈದ್ಯ, ಅರ್ಥಶಾಸ್ತ್ರ, ಕಾಮಶಾಸ್ತ್ರ, ನೀತಿಶಾಸ್ತ್ರ ಮೊದಲಾದುವುಗಳನ್ನು ಇವನು ಅಭ್ಯಾಸ ಮಾಡಿದ್ದಿರಬೇಕು. ಈತನ ಗುರು ಕೊಂಡಕುಂದಾನ್ವಯಕ್ಕೆ ಸೇರಿದ ದೇವೇಂದ್ರಮುನಿ. ಈತನಲ್ಲಿ ಪಂಪನಿಗೆ ಬಹಳಭಕ್ತಿ. ಆದುದರಿಂದಲೇ ಅವನು ತನ್ನನ್ನು ಆದಿಪುರಾಣದಲ್ಲಿ ‘ದೇವೇಂದ್ರ ಮುನೀಂದ್ರವಂದ್ಯ ಪರಮಜಿನೇಂದ್ರಮುಖ ವಾಕ್ಚಂದ್ರಿಕಾಪ್ರಸರಪ್ರಸಾದೋದೀರ್ಣ ಸೂಕ್ತಿಕಲ್ಲೋಲ ಮಾಲಾಕೀರ್ಣಕವಿತಾಗುಣಾರ್ಣವಂ’ ಎಂದು ಕರೆದುಕೊಂಡಿದ್ದಾನೆ. ಈ ದೇವೇಂದ್ರಮುನಿಯು ಶ್ರವಣಬೆಳಗೊಳ ದಲ್ಲಿದ್ದನೆಂಬುದು ಶಾಸನಗಳಿಂದ ತಿಳಿದು ಬರುತ್ತದೆ. ಪಂಪನು ವೆಂಗಿಪೞುವಿನಿಂದ ಇಲ್ಲಿಗೆ ಬಂದು ನೆಲಸಿ ಈ ಗುರುವಿನ ಪಾದದಡಿಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಈ ಕಾಲದಲ್ಲಿಯೇ ಅವನಿಗೆ ‘ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ’ ‘ಕೋಗಿಲೆಯಾಗಿ ಮೇಣ್ ಮಱಿದುಂಬಿಯಾಗಿ ಪುಟ್ಟುವುದು ನಂದನದೊಳ್ ಬನವಾಸಿದೇಶದೊಳ್’ ಎಂಬುದಾಗಿ ಅವನು ನಾನಾ ರೀತಿ ಹಾತೊರೆಯುವ ಬನವಾಸಿ ದೇಶದ ಸಂಬಂಧವುಂಟಾಗಿರಬೇಕು.

ಪಂಪನ ವಿದ್ಯಾವೈದುಷ್ಯದಿಂದ ಆಕರ್ಷಿತನಾದ, ಆಗ ವೆಂಗಿಮಂಡಲದ ಪಶ್ಚಿಮದ ಕಡೆ ಕನ್ನಡ ಸೀಮೆಗೆ ಸಮೀಪವಾದ ಲೆಂಬುಳ ಪಾಟಕವೆಂಬ ಪಟ್ಟಣದಲ್ಲಿ ರಾಜ್ಯವಾಳುತ್ತಿದ್ದ ರಾಷ್ಟ್ರಕೂಟರ ಮೂರನೆಯ ಕೃಷ್ಣನ ಸಾಮಂತರಾಜನಾದ ಅರಿಕೇಸರಿಯು ಪಂಪನನ್ನು ತನ್ನ ಆಸ್ಥಾನಕ್ಕೆ ಪ್ರೀತಿಯಿಂದ ಬರಮಾಡಿಕೊಂಡು ವಿಶೇಷವಾಗಿ ಮನ್ನಿಸಿ ಅವನಿಂದ ಗ್ರಂಥಗಳನ್ನು ಬರೆಯಿಸಿ ಪಂಚರತ್ನಗಳನ್ನೂ ಉಡುಗೊರೆಗಳನ್ನೂ ಧರ್ಮಪುರವೆಂಬ ಶಾಸನಾಗ್ರಹಾರವನ್ನೂ ದಯಪಾಲಿಸಿದನು. ಅಲ್ಲದೆ ತನ್ನ ಗುಣಾರ್ಣವನೆಂಬ ಬಿರುದಿಗೆ ಒಪ್ಪುವಂತೆ ಅವನಿಗೆ ‘ಕವಿತಾಗುಣಾರ್ಣವ’ನೆಂಬ ಬಿರುದನ್ನು ಕೊಟ್ಟನು. ಅವನ ಆಶ್ರಯದಲ್ಲಿ ಪಂಪನು ಆತ್ಮತೃಪ್ತಿಗಾಗಿಯೂ ತನ್ನ ಧರ್ಮಋಣದ ಪರಿಹಾರಕ್ಕಾಗಿಯೂ ಶಕವರ್ಷ ೮೬೩ಕ್ಕೆ ಸರಿಯಾದ ಪ್ಲವಸಂವತ್ಸರದಲ್ಲಿ ತನ್ನ ೩೯ನೆಯ ವಯಸ್ಸಿನಲ್ಲಿ ಅಂದರೆ ಕ್ರಿ.ಶ. ೯೪೧ರಲ್ಲಿ ಪ್ರಶಸ್ತವಾದ ತಿಥಿವಾರನಕ್ಷತ್ರಗಳಿಂದ ಕೂಡಿದ ಶುಭಮುಹೂರ್ತದಲ್ಲಿ ಆದಿತೀರ್ಥಂಕರನ ಚರಿತ್ರೆಯಾದ ‘ಆದಿಪುರಾಣ’ವನ್ನು ಬರೆದು ಮುಗಿಸಿದನು. ಇದಾದ ಕೆಲವು ದಿನಗಳಾದ ಮೇಲೆತನ್ನ ಆಶ್ರಯದಾತನ ಕೀರ್ತಿ ಸ್ಥಾಪನೆಗಾಗಿ ‘ವಿಕ್ರಮಾರ್ಜುನ ವಿಜಯ’ ಅಥವಾ ‘ಪಂಪಭಾರತ’ವೆಂಬ ಮತ್ತೊಂದು ಗ್ರಂಥವನ್ನೂ ರಚಿಸಿದನು. ಒಂದನ್ನು ಮೂರು ತಿಂಗಳುಗಳಲ್ಲಿಯೂ ಮತ್ತೊಂದನ್ನು ಆರು ತಿಂಗಳಲ್ಲಿಯೂ ರಚಿಸಿದೆನೆಂದೂ ಒಂದರಲ್ಲಿ ಜಿನಾಗಮವನ್ನೂ ಇನ್ನೊಂದರಲ್ಲಿ ಲೌಕಿಕವನ್ನೂ ಬೆಳಗಿರುವೆನೆಂದೂ ಕವಿಯೇ ಹೇಳಿಕೊಂಡಿದ್ದಾನೆ.

ಆದಿಪುರಾಣ- ನಮಗೆ ದೊರೆತಿರುವ ಪಂಪನ ಕೃತಿಗಳಲ್ಲಿ ಇದು ಮೊದಲನೆಯ ಕೃತಿ. (ಇದಕ್ಕೆ ಹಿಂದೆ ಪಂಪನು ಇನ್ನೂ ಕೆಲವು ಕೃತಿಗಳನ್ನು ರಚಿಸಿರಬಹುದು). ಇದು ಒಂದು ಧಾರ್ಮಿಕ ಗ್ರಂಥ. ಪ್ರಥಮತೀರ್ಥಂಕರನಾದ ಪುರುದೇವನ ಕಥೆ. ಇದರಲ್ಲಿ ಧರ್ಮದ ಜೊತೆಗೆ ಕಾವ್ಯಧರ್ಮವನ್ನೂ ನಿರೂಪಿಸುತ್ತೇನೆಂದು ಪಂಪನೇ ಹೇಳುತ್ತಾನೆ. ಧರ್ಮಗ್ರಂಥವಾದ ಇದರಲ್ಲಿ ಪುರಾಣದ ಅಷ್ಟಾಂಗಗಳಾದ ಲೋಕಾಕಾರಕಥನ, ನಗರ ಸಂಪತ್ಪರಿವರ್ಣನ, ಚತುರ್ಗತಿಸ ರೂಪ, ತಪೋಧ್ಯಾನವ್ಯಾವರ್ಣನ ಮೊದಲಾದುವುಗಳನ್ನು ಒಂದೂ ಬಿಡದೆ

ಶಾಸ್ತ್ರೀಯವಾದ ರೀತಿಯಲ್ಲಿ ವರ್ಣಿಸಬೇಕು. ಅಲ್ಲದೆ ಪಂಪನ ಆದಿಪುರಾಣಕ್ಕೆ ಮೂಲ, ಜಿನಸೇನಾಚಾರ್ಯರ ಸಂಸ್ಕೃತ ಪೂರ್ವಪುರಾಣ. ಆ ವಿಸ್ತಾರವಾದ ಪುರಾಣವನ್ನು ಅದರ ಮೂಲರೇಖೆ, ಉದ್ದೇಶ, ಸ್ವರೂಪ-ಯಾವುದೂ ಕೆಡದಂತೆ ಸಂಗ್ರಹಿಸುವುದು ಮಾತ್ರ ಅವನ ಕಾರ್ಯ. ಆದುದರಿಂದ ಈ ಗ್ರಂಥದಲ್ಲಿ ಅವನಿಗೆ ತನ್ನ ಪ್ರತಿಭಾಕೌಶಲವನ್ನು ಪ್ರಕಾಶಿಸಲು ವಿಶೇಷ ಅವಕಾಶವಿಲ್ಲ. ಆದರೂ ಪಂಪನು ತನ್ನ ಕಾರ್ಯವನ್ನು ಬಹುಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಆತನು ಪೂರ್ವಪುರಾಣಕ್ಕೆ ಬಹುಮಟ್ಟಿಗೆ ಋಣಿ. ಜಿನಸೇನಾಚಾರ್ಯರ ಕಥಾಸರಣಿಯನ್ನೇ ಅಲ್ಲದೆ ಭಾವಗಳನ್ನೂ ವಚನಗಳನ್ನೂ ವಚನಖಂಡಗಳನ್ನೂ ಪದ್ಯಭಾಗಗಳನ್ನೂ ವಿಶೇಷವಾಗಿ ಉಪಯೋಗಿಸಿ ಕೊಂಡಿದ್ದಾನೆ. ಆತನ ಗ್ರಂಥದ ಬಹುಭಾಗ ಪೂರ್ವಪುರಾಣದ ಅನುವಾದವಿದ್ದಂತೆಯೇ ಇದೆ. ಅಷ್ಟಾದರೂ ಅಲ್ಲಿ ಪಂಪನ ಕೈವಾಡ ಪ್ರಕಾಶವಾಗದೇ ಇಲ್ಲ. ಧರ್ಮಾಂಗಗಳನ್ನು ಬಿಟ್ಟು ಕಾವ್ಯಾಂಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಪಂಪನ ಪ್ರತಿಭಾಪಕ್ಷಿ ಗರಿಗೆದರಿ ಗಗನವಿಹಾರಿಯಾಗುತ್ತದೆ. ತನ್ನ ಸ್ವತಂತ್ರವಿಲಾಸದಿಂದ ವಾಚಕರ ಮೇಲೆ ಪ್ರತ್ಯೇಕವಾದ ಸಮ್ಮೋಹನಾಸ್ತ್ರವನ್ನು ಬೀರಿ ಮಂತ್ರಮುಗ್ಧರನ್ನಾಗಿಸುತ್ತದೆ. ಸಂಗ್ರಹ ಮತ್ತು ಅನುವಾದ ಕಾರ್ಯದಲ್ಲಂತೂ ಆತನು ಅತಿನಿಪುಣ. ಆದಿತೀರ್ಥಂಕರನ ಭವಾವಳಿಗಳನ್ನೂ ಪಂಚಕಲ್ಯಾಣಗಳನ್ನೂ ಕವಿಯು ಬಹು ಎಚ್ಚರಿಕೆಯಿಂದ ಸಂಗ್ರಹಿಸಿ ಸುಂದರವಾಗಿ ವರ್ಣಿಸಿದ್ದಾನೆ. ಜಿನಸೇನನ ಮಹಾಸಾಗರದಿಂದ ಅಣಿಮುತ್ತುಗಳನ್ನು ಆಯುವುದರಲ್ಲಿ ತನ್ನ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಥೆಗೆ ನೇರ ಸಂಬಂಧ ಪಡೆದ ಭಾಗಗಳನ್ನೆಲ್ಲ ತನ್ನ ವಿವೇಕಯುತವಾದ ಕತ್ತರಿಪ್ರಯೋಗದಿಂದ ತೆಗೆದುಹಾಕಿ ಗ್ರಂಥದ ಪೂರ್ವಾರ್ಧದಲ್ಲಿ ವಿಸ್ತ ತವಾಗಿರುವ ಭವಾವಳಿಗಳಲ್ಲಿ ಏಕಪ್ರಕಾರವಾಗಿ ಹರಿದು ಬರುವ ಸೂತ್ರಧಾರೆಯನ್ನು ಸ್ಪಷ್ಟೀಕರಿಸಿದ್ದಾನೆ. ಮೊದಲನೆಯ ಐದು ಜನ್ಮಗಳಲ್ಲಿ ಜೀವದ ಒಲವು ಐಹಿಕ ಭೋಗ ಸಾಮ್ರಾಜ್ಯದ ಕಡೆ ಅಭಿವೃದ್ಧಿಯಾಗುತ್ತ ಬಂದು ವ್ರತದಿಂದ ತಪಸ್ಸಿನಿಂದ ಕಡೆಯ ಐದು ಭವಗಳಲ್ಲಿ ಕ್ರಮಕ್ರಮವಾಗಿ ಆ ಭೋಗಾಭಿಲಾಷೆಯು ಮಾಯವಾಗಿ ತ್ಯಾಗದಲ್ಲಿ ಲೀನವಾಗಿ ಅನಂತವಾದ ಮೋಕ್ಷ ಸಿದ್ಧಿಯಾಗುವುದನ್ನು ಕವಿಯು ಬಹುರಮಣೀಯವಾಗಿ ವರ್ಣಿಸಿದ್ದಾನೆ. ಗ್ರಂಥದ ಉತ್ತಾರರ್ಧದಲ್ಲಿ ತೀರ್ಥಂಕರನ ಅನೇಕ ಪುತ್ರರಲ್ಲಿ ಪ್ರಸಿದ್ಧರಾದ ಭರತ ಬಾಹುಬಲಿಗಳ ಕಥೆ ಉಕ್ತವಾಗಿದೆ. ಇದರಲ್ಲಿ ಅಕಾರ ಲಾಲಸೆಯ, ಕೀರ್ತಿಕಾಮನೆಯ, ವೈಭವಮೋಹದ ಪರಮಾವಯನ್ನೂ ಅದರಿಂದ ವೈರಾಗ್ಯ ಹುಟ್ಟಬಹುದಾದ ರೀತಿಯನ್ನೂ ಬಹು ಕಲಾಮಯವಾಗಿ ಚಿತ್ರಿಸಿದ್ದಾನೆ. ‘ಭೋಗಂ ರಾಗಮನಾಗಿಸಿದೊಡಂ ಹೃದ್ರೋಗಮನುಂಟುಮಾಡುಗುಂ’ ‘ಅಮರೇಂದ್ರೋನ್ನತಿ, ಖೇಚರೇಂದ್ರವಿಭವಂ, ಭೋಗೀಂದ್ರ ಭೋಗಂ ಇವೆಲ್ಲಮಧ್ರುವಂ, ಅಭೀಷ್ಟಸುಖಪ್ರದಮದೊಂದೆ ಮುಕ್ತಿಸ್ಥಾನಂ.’ ಅದಕ್ಕೆ ಭೋಗವನ್ನು ತ್ಯಾಗದಲ್ಲಿಯೂ ವೈಭವವನ್ನು ವೈರಾಗ್ಯದಲ್ಲಿಯೂ ಲೀನಗೊಳಿಸುವುದೇ ಸಾಧನ ‘ಜಿನಧರ್ಮಾಮಾರ್ಮಂ’ ‘ಜಿನಚರಣಮೆ ಶರಣಂ’ ಇದೇ ಕಾವ್ಯದುದ್ದಕ್ಕೂ ಅನುರಣಿತವಾಗುತ್ತಿರುವ ಪಲ್ಲವಿ. ಈ ಭಾವವನ್ನು ವಾಚಕರ ಹೃದಯದಲ್ಲಿ ಪ್ರವೇಶಮಾಡಿಸುವ ಕಾರ್ಯದಲ್ಲಿ ಕವಿ ಕೃತಕೃತ್ಯನಾಗಿದ್ದಾನೆ. ಈ ಗ್ರಂಥದಲ್ಲಿ ಬರುವ ಚಿತ್ರಪರಂಪರೆ, ಭಾವಗಳ ಒಳತೋಟಿ, ಪಾತ್ರಗಳ ವ್ಯಕ್ತಿತ್ವವರ್ಣನಾ ವೈಖರಿ, ನಾಟಕೀಯತೆ ಇವು ಎಂತಹವನನ್ನಾದರೂ ಮುಗ್ಧಗೊಳಿಸುತ್ತವೆ. ಅದರ ಸ್ವಾರಸ್ಯದ ಸವಿಯನ್ನು ಅನುಭವಿಸುವುದಕ್ಕೆ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದಲಾದರೂ ಪರಿಚಯ ಮಾಡಿಕೊಳ್ಳುವುದೊಂದೇ ಮಾರ್ಗ.

ಆದಿಪುರಾಣದ ವಿಹಾರವಿಮರ್ಶೆ: ವೈರಾಗ್ಯಮೂರ್ತಿಯಾದ ಆದಿ ತೀರ್ಥಂಕರನಿಗೆ ಆ ಪರಿಪಾಕವುಂಟಾಗಬೇಕಾದರೆ ಹತ್ತು ಜನ್ಮಗಳಲ್ಲಿ ತೊಳಲಬೇಕಾಯಿತು. ಮೊದಲನೆಯ ಜನ್ಮದಲ್ಲಿ ಆತನು ಸಿಂಹಪುರದಲ್ಲಿ ಶ್ರೀಷೇಣ ಮತ್ತು ಸೌಂದರಿಯರ ಮಗನಾಗಿ ಹುಟ್ಟಿದನು. ಪ್ರಾಪ್ತವಯಸ್ಕನಾಗಲು ತಂದೆಯು ರಾಜ್ಯವನ್ನು ನ್ಯಾಯಪ್ರಾಪ್ತವಾಗಿ ತನಗೆ ಕೊಡದೆ ಜನಪ್ರಿಯವಾದ ಕಿರಿಯ ಮಗನಿಗೆ ಕೊಟ್ಟನು. ಇದರಿಂದ ಜಯವರ್ಮನಿಗೆ ವಿಶೇಷ ನೋವುಂಟಾಯಿತು. ಈ ಜನ್ಮದಲ್ಲಿ ಪಡೆಯಲಾರದ ವೈಭವವನ್ನು ಮುಂದಿನ ಜನ್ಮದಲ್ಲಾದರೂ ಪಡೆದು ಈಗ ನನಗುಂಟಾದ ಅಭಿಭವವನ್ನು ನೀಗುತ್ತೇನೆಂದು, ಸ್ವಯಂಪ್ರಭುಗುರು ಪಾದಮೂಲದಲ್ಲಿ ಜಿನದೀಕ್ಷೆಯನ್ನು ಪಡೆದು ಘೋರತಪಸ್ಸಿನಲ್ಲಿ ನಿರತನಾದನು. ಆ ಕಾಲಕ್ಕೆ ಸರಿಯಾಗಿ ಅಂತರಿಕ್ಷದಲ್ಲಿ ನಲ್ಲಳೊಡಗೂಡಿ ಸಮಸ್ತ ವೈಭವದಿಂದ ಹೋಗುತ್ತಿದ್ದ ವಿದ್ಯಾಧರನ ವಿಲಾಸಕ್ಕೆ ಮಾರುಹೋಗಿ ತಾನೂ ಅದನ್ನು ಪಡೆಯ ಬೇಕೆಂದಾಸೆ ಪಟ್ಟನು. ತಪಸ್ಸಿನಿಂದ ಪಡೆಯಬೇಕಾಗಿದ್ದ ಅನಲ್ಪಸುಖವನ್ನು ಮಾರಿ ಅಲ್ಪಸುಖಕ್ಕೆ ಮನಸೋತು ಗತಜೀವಿತವಾಗಿ ಅಳಕಾಪುರದ ಅತಿಬಳರಾಜನಿಗೂ ಆತನ ಮಹಾದೇವಿ ನಯನಮನೋಹರಿ ಮನೋಹರಿಗೂ ಮಹಾಬಳನೆಂಬ ಮಗನಾಗಿ ಹುಟ್ಟಿದನು. ತನು ಸಮಸ್ತ ವಿದ್ಯಾಧರ ವಿದ್ಯಾಸಾಗರನೂ ಅಶೇಷ ಶಾಸ್ತ್ರಪರಿಣತನೂ ಯವ್ವನಪರಿಪೂರ್ಣನೂ ಆಗಲಾಗಿ ಪೂರ್ವಜನ್ಮದ ತಪಸ್ಸಿನ ಫಲದಿಂದ

ಮೊಗಮುತುಲ್ಲ ಸರೋಜಹಾಸಿ, ನಯನಂ ನೀಲಾಂಬುಜರ್ಸ್ಪ, ಬಾ
ಹುಗಳಾಜಾನುವಿಳಂಬಿಗಳ್, ತೊಡಗಳುಂ ರಂಭಾಮೃದುಸ್ತಂಭ ಶೋ
ಭೆಗಳಂ ಗೆಲ್ದವು. ವಕ್ಷಮಂಬರಚರ ಶ್ರೀ ಗೇಹಮೆಂಬೊಂದೆ ರೂ
ಪೆ ಗಡಂ, ನೋಡಲೊಡಂ ಮರುಳ್ಗೊಳಿಸುಗುಂ ವಿದ್ಯಾಧರಸ್ತ್ರೀಯರಂ||

ಹೀಗೆ ವಿದ್ಯಾರೂಪಬಲ ಸಂಪನ್ನನಾದ ಕುಮಾರನಿಗೆ ಅತಿಬಳನು ಯುವರಾಜ ಪಟ್ಟವನ್ನು ಕಟ್ಟಲು

ಲಲಿತಾಲಂಕರಣಪ್ರಸನ್ನ ರಸವದ್ಗೇಯಂಗಳೊಳ್ ಮೂಡುತುಂ,
ಮುೞುಗುತ್ತುಂ, ಖಚರೀಜನಾನನನವಾಂಭೋಜಂಗಳೊಳ್ ಕಂಪನೀ
ೞ್ಕೊಳುತುಂ, ನಂದನರಾಜಿಯೊಳ್ ನಲಿಯುತುಂ, ತದ್‌ರಾಜಹಂಸಂ, ನಿರಾ
ಕುಳಮೀ ಮಾೞ್ಕೆ ಗಳಿಂದೆ, ಪೊೞ್ತುಗಳೆದಂ, ಸಂಸಾರಸಾರೋದಯಂ||

ಹೀಗಿರಲು ಒಂದು ದಿನ ರಾಜನು ಸಕಲವೈಭವದಿಂದ ಸಭಾಸ್ಥಾನದಲ್ಲಿದ್ದಾಗ ಆತನ ಮಂತ್ರಿಯಾದ ಸ್ವಯಂಬದ್ಧನೆಂಬುವನು ರಾಜನ ಅಭ್ಯುದಯಕಾಂಕ್ಷಿಯಾಗಿ ಅವನನ್ನು ಕುರಿತು

‘ನಿನ್ನೀ ವಿದ್ಯಾಧರಲಕ್ಷ್ಮಿ ಪುಣ್ಯಜನಿತಂ ವಿದ್ಯಾಧರಾಶ್ವರಾ’
ಭವವಾರಾಶಿನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಮೆಂ
ಬಿವೆ ಮೆಯ್ಯಾಗಿರೆ ಸಂದ ಧರ್ಮಮೆ ವಲಂ ಪೊತ್ತೆತ್ತುಗಂ, ಮುಕ್ತಿಪ
ರ್ಯವಸಾನಂಬರಮಾನುಶಷಂಗಿಕಫಲಂ, ಭೂಪೇಂದ್ರ, ದೇವೇಂದ್ರ ರಾ
ಜ್ಯವಿಲಾಸಂ ಪೆಱತಲ್ತು, ನಂಬು, ಖಚರಕ್ಷ್ಮಾಪಾಲಚೂಡಾಮಣೀ ||

ಎಂದು ಧರ್ಮಪ್ರಭಾವವನ್ನು ತತಲಸ್ವಭಾವವನ್ನು ತಿಳಿಸಲು ಅಲ್ಲಿಯೇ ಇದ್ದ ಮಹಾಮತಿ ಸಂಭಿನ್ನಮತಿ ಶತಮತಿಗಳೆಂಬ ಇತರ ಮಂತ್ರಿಗಳು ತಮ್ಮ ಲೋಕಾಯತಿಕ ಯೋಗಾಚಾರ ಮಾಧ್ಯಮಿಕ ಮತಕ್ಕನುಗುಣವಾಗಿ ಜೀವಾಭಾವವನ್ನೂ ಐಹಿಕ ಸುಖಪಾರಮ್ಯವನ್ನೂ ಬೋಸಲು ಸ್ವಯಂಬುದ್ಧನು ಅನುಭೂತ ಶ್ರುತದೃಷ್ಟಖೇಚರ ಕಥಾನೀಕಗಳಿಂದಲೂ ಯುಕ್ತಿಯಿಂದಲೂ ಜೀವಸಿದ್ಧಿಯನ್ನು ನಿಶ್ಚಯಿಸಿ ಪರಪಕ್ಷದೂಷಣಪುರಸ್ಸರವಾಗಿ ಸ್ವಪಕ್ಷವನ್ನು ಸಾಸಲು ಮಹಾಬಳನು ಸ್ವಯಂಬುದ್ಧನೇ ತನಗೆ ವಿಶ್ವಾಸಭೂಮಿಯಾಗಲು ಆತನ ಮಾರ್ಗವನ್ನೇ ಅನುಸರಿಸಿ ಅನೇಕ ವರ್ಷಕಾಲ ರಾಜ್ಯಭಾರ ಮಾಡಿ ಕೊನೆಯಲ್ಲಿ ಘೋರತಪಶ್ಚರಣೆಯ ಮೂಲಕ ಪ್ರಾಯೋಪಗಮನ ವಿಯಿಂದ ಶರೀರಭಾರವನ್ನಿಳಿಸಿ ಅನಲ್ಪಸುಖನಿವಾಸವೆನಿಸಿ ದೀಶಾನುಕಲ್ಪದಲ್ಲಿ ಲಲಿತಾಂಗದೇವನಾಗಿ ಹುಟ್ಟಿದನು. ಅಲ್ಲಿದ್ದ ಅನೇಕ ಮನೋನಯನವಲ್ಲಭೆಯರಲ್ಲಿ

‘ಅದು ಸುಖದೊಂದು ಪಿಂಡಂ, ಅದು ಪುಣ್ಯದ ಪುಂಜಂ, ಅದಂಗಜಂಗೆ
ಬಾೞು ಮೊದಲದು ಚಿತ್ತಜಂಗೆ ಕುಲದೈವಂ, ಅಂಗಚಕ್ರವರ್ತಿಗೆ
ತ್ತಿದ ಪೊಸವಟ್ಟಂ, ಅಂತದು ಮನೋಜನ ಕೈಪಿಡಿ’

ಎಂದು ರೂಪಿನ ಗಾಡಿಯಿಂದ ಕೂಡಿದ ಸ್ವಯಂಪ್ರಭೆಯು ಅವನ ಮನಸ್ಸನ್ನು ಸೂರೆಗೊಂಡಳು.

ನೆಗೞ್ದಮರಾಂಗನಾಜನದ ರೂಪುಗಳೆಲ್ಲಮದೀಕೆಯದೊಂದು ದೇ
ಸೆಗೆ ನಿಮಿರ್ವೊಂದು ಪುರ್ವಿನ ನಯಕ್ಕಮಮರ್ವೊಂದ ದಗುಂತಿಗೊಂದು ಭಂ
ಗಿಗೆ ನೆಗೞ್ದೊಂದು ಮೆಲ್ಪ್ಟಿನ ತೊದಳ್ನುಡಿಗಪ್ಪೊಡಮೆಯ್ದೆವಾರವೇ
ನೊಗಸುವಮೆಂದು ತಳ್ತಗಲನಾಕೆಯನಾ ಲಲಿತಾಗಂವಲ್ಲಭಂ ||

ವ್ರತದಿಂದ ಪಡೆದ ಇಂದ್ರಲೋಕವೈಭವವು ಮನಕ್ಕಾಹ್ಲಾದವನ್ನುಂಟು ಮಾಡುವ ಆ ಸತಿಯಿಂದ ಸಾರ್ಥಕವಾಯಿತೆಂದು ಲಲಿತಾಂಗದೇವನು ಸಂತೋಷಪಟ್ಟನು.

ಅಣಿಮಾದ್ಯಷ್ಟಗುಣಪ್ರಭೂತವಿಭವಂ, ದೇವಾಂಗನಾ ಮನ್ಮಥ
ಪ್ರಣಯಪ್ರೀಣಿತ ಮಾನಸಂ, ಸುರವಧೂಲೀಲಾವಧೂತ ಪ್ರತಿ
ಕ್ಷಣ ಚಂಚಚ್ಚಮರೀರುಹುಂ, ಪಟುನಟಪ್ರಾರಬ್ಧಸಂಗೀತಕಂ
ತಣಿದಂ ಸಂತತಮಿಂತು ದಿವ್ಯಸುಖದೊಳ್ ಸಂಸಾರಸಾರೋದಯಂ ||

ಆದರೆ ಈ ತಣಿವು ಎಷ್ಟು ಕಾಲ! ಆತ್ಮ ಪುಣ್ಯೋಪಾರ್ಜಿತಾಮರಲೋಕವಿಭವ ಮುಗಿಯುತ್ತ ಬಂದು ಆರು ತಿಂಗಳು ಮಾತ್ರ ಉಳಿಯಿತು. ಲಲಿತಾಂಗದೇವನು ಮುಡಿದಿದ್ದ ಹೂಮಾಲೆ ಬಾಡಿತು. ದೇಹಕಾಂತಿ ಮಸುಕಾಯಿತು. ಆಭರಣಗಳು ಕಾಂತಿಹೀನವಾದವು.

ತನ್ನ ಅವಸಾನಕಾಲದ ಸೂಚನೆಯುಂಟಾಯಿತು. ಅಲ್ಲಿಯ ಭೋಗವನ್ನು ಬಿಡಲಾರದೆ ಸುತ್ತಲಿನ ಕಲ್ಪವೃಕ್ಷಗಳನ್ನೂ ವಿಮಾನದ ಮಣಿಕಟ್ಟನ್ನೂ ಭೂಮಿಕೆಗಳನ್ನೂ ತನ್ನನ್ನು ಉಳಿಸಿಕೊಳ್ಳಬೇಕೆಂದು ಬೇಡಿದನು. ಕೊನೆಗೆ ತನ್ನ ಕಾಮಸಾಮ್ರಾಜ್ಯ ಸರ್ವಸ್ವಭೂತೆಯಾದ ನಲ್ಲಳ ಮುಖವನ್ನು ನೋಡಿ ‘ಮೆಯ್ಗಳೆರಡಾದೊಡಮೇನ್’ ಅಸುವೊಂದೆ ನೋೞ್ಪೊಡೆಂಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನು ಯ್ವಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇೞ್ ಸ್ವಯಂಪ್ರಭೆ’ ಎಂದು ಅಂಗಲಾಚಿದನು. ಆಗ ಆ ಪ್ರಲಾಪವನ್ನು ಕೇಳಿ ಸಾಮಾನಿಕದೇವರು ಬಂದು

ನಿನಗೊರ್ವಂಗಲ್ಲವಸ್ಥಾಂತರಮಮರಜನಕ್ಕೆಲ್ಲಮೀ ಪಾಂಗೆ, ಕಾರು
ಣ್ಯನಿನಾದಂ ನಿನ್ನನಾದಂ ನಗಿಸುಗುಮೆೞೆದುಯ್ವಂತಕಂಗಿಲ್ಲ ದೇವಾಂ
ಗನೆಯರ್ ಮಾಱುಂಪರೇ ಪೇೞು ಜನನ ಮೃತಿ ಜರಾತಂಕ ಶೋಕಾಗ್ನಿಯಂದಾ
ವನುವೀ ಸಂಸಾರದೊಳ್ ಬೇಯದನೊಳನೆ, ಶರಣ್ ಧರ್ಮದಿಂದೊಂದುಮುಂಟೆ ||

‘ಅಘವೈರಿಯಲ್ಲದುೞದಂ ಗೆಲಲಾರ್ಕುಮೆ ಮೃತ್ಯುರಾಜನಂ’ ಎಂದು ಎಚ್ಚರಿಸಲು ಲಲಿತಾಂಗನು ತನ್ನ ಉಳಿದ ಆಯಸ್ಸನ್ನು ಜಿನಾರ್ಚನೆ ಯಲ್ಲಿಯೇ ಕಳೆದು ಶರತ್ಸಮಯದ ಮೋಡದಂತೆ ಕರಗಿ ಉತ್ಪಲಖೇಟರೆಂಬ ಪುರದಲ್ಲಿ ವಜ್ರಬಾಹು ಮತ್ತು ವಸುಂಧರೆಯರಿಗೆ ವಜ್ರಜಂಘನೆಂಬ ಮಗನಾಗಿ ಹುಟ್ಟಿದನು. ಸ್ವಯಂಪ್ರಭೆಯೂ ಇನಿಯನಗಲ್ಕೆಯನ್ನು ಸಹಿಸಲಾರದೆ

ಮದನನ ಕೈದುವೆಲ್ಲಿದನ್, ಅನಂಗನ ಕೈಪೊಡೆಯೆಲ್ಲಿದಂ, ವಿಳಾ
ಸದ ಕಣಿಯೆಲ್ಲಿದಂ, ಚದುರ ಪುಟ್ಟಿದನೆಲ್ಲಿದನೆಲ್ಲಿದಂ, ವಿನೋ
ದದ ಮೊದಲೆಲ್ಲಿದಂ, ಸೊಬಗಿನಾಗರಮೆಲ್ಲಿದನ್, ಇಚ್ಛೆಯಾಣ್ಮನೆ
ಲ್ಲಿದನ್, ಎರ್ದೆಯಾಣ್ಮನೆನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ||

ಎಂದು ಪ್ರಾಣವಲ್ಲಭವಿಯೋಗ ಶೋಕೋದ್ರೇಕವ್ಯಾಕುಳೆಯಾಗಿ ಮಹತ್ತರ ದೇವಿಯರ ಸೂಚನೆಯ ಪ್ರಕಾರ ಮರುಭವದಲ್ಲಿ ಇನಿಯನನ್ನು ಪಡೆಯುವುದಕ್ಕಾಗಿ ಜಿನಪತಿಯನ್ನು ಪೂಜಿಸಿ ಗುರುಪಂಚಕವನ್ನು ನೆನೆದು ಉತ್ಸನ್ನಶರೀರೆಯಾಗಿ ಪುಂಡರೀಕಿಣಿಯಲ್ಲಿ ವಜ್ರದಂತನಿಗೂ ಲಕ್ಷ್ಮಿಮತೀಮಹಾದೇವಿಗೂ ಕಾಮನ ಮಂತ್ರ ದೇವತೆಯಂತೆ ಅತ್ಯಂತ ಸೌಂದರ್ಯದಿಂದ ಕೂಡಿದ ಶ್ರೀಮತಿಯೆಂಬ ಮಗಳಾಗಿ ಹುಟ್ಟಿ ನವಯವ್ವನ ಲಕ್ಷ್ಮಿಯನ್ನು ತಾಳಿದಳು. ಹಿಂದಿನ ಜನ್ಮದ ವಾಸನೆ ಶ್ರೀಮತಿಯೆಂಬ ಮಗಳಾಗಿ ಹುಟ್ಟಿ ನವಯವ್ವನಲಕ್ಷ್ಮಿಯನ್ನು ತಾಳಿದಳು. ಹಿಂದಿನ ಜನ್ಮದ ವಾಸನೆ ಶ್ರೀಮತಿ ವಜ್ರಜಂಘರಿಬ್ಬರನ್ನೂ ಬೆನ್ನಟ್ಟಿ ಬರುತ್ತದೆ. ಇಬ್ಬರೂ ಪರಸ್ಪರ ಸಮಾಗಮಕ್ಕೆ ಹಾತೊರೆಯುತ್ತಾರೆ. ಶ್ರೀಮತಿಯು ತನ್ನ ಹಿಂದಿನ ಜನ್ಮದ ನೆನಪುಗಳನ್ನೆಲ್ಲ ಚಿತ್ರಿಸಿದ್ದ ಚಿತ್ರಪಟದ ಸಹಾಯದಿಂದ ಅವಳ ಸಖಿಯಾದ ಪಂಡಿತೆಯೆಂಬುವಳು ಅವರಿಬ್ಬರನ್ನೂ ಒಟ್ಟುಗೂಡಿಸುತ್ತಾಳೆ. ತಂದೆಯಾದ ವಜ್ರದಂತನು ಮಗಳ ವಿವಾಹವನ್ನು ಅತಿ ವಿಜೃಂಭಣೆಯಿಂದ (ಈ ವಿವಾಹದ ವೈಭವವನ್ನು ಮೂಲದಲ್ಲಿಯೇ ಓದಿ ತೃಪ್ತಿ ಪಡಬೇಕು.)ನಡೆಸಿ ಮಗಳನ್ನು ಅಳಿಯನೊಡನೆ ಕಳುಹಿಸುತ್ತಾನೆ. ಇಲ್ಲಿ ಪಂಪನಿಗೆ ಮಹಾಕವಿ ಕಾಳಿದಾಸನ ಶಾಕುಂತಲದ ನಾಲ್ಕನೆಯ ನಾಲ್ಕು ಶ್ಲೋಕಗಳು ಸ್ಮರಣೆಗೆ ಬರುವುವು. ಅವುಗಳಲ್ಲಿ ಒಂದೆರಡರ ಸಾರವನ್ನು ಬಟ್ಟಿಯಿಳಿಸಿದ್ದಾನೆ. ರಾಜಾರಾಜನಾದ ವಜ್ರದಂತನು ಅಳಿಯನ ಮೊಗವನ್ನು ನೋಡಿ-

ಬಗೆದುಂ ನಿನ್ನವ್ವವಾಯೋನ್ನತಿಯನ್, ಇವಳ ಸ್ನೇಹ ಸಂಬಂಧಮಂ ನೀಂ
ಬಗೆದುಂ, ಸಂದೆಮ್ಮನಣ್ಪಂ ಬಗೆದುಮಱಯದೇನಾನುಮೆಂದಾಗಳುಂ ಮೆ
ಲ್ಲಗೆ ನೀಂ ಕಲ್ಪಿಪ್ಪುದೆಮ್ಮಂ ನೆನೆದೆರ್ದೆಗಿಡದಂತಾಗೆ ಪಾಲಿಪ್ಪುದಿಂತೀ
ಮೃಗಶಾಬೇಕ್ಷಾಕ್ಷಿಯಂ ಮನ್ನಿಸುವುದಿನಿತನಾಂ ಬೇಡಿದೆಂ ವಜ್ರಜಂಘಾ ||

ಎಂದೂ ಲಕ್ಷ್ಮೀಮತಿ ಮಹಾದೇವಿಯು ಪ್ರಿಯಾತ್ಮಜೆಯ ಮುಖವನ್ನು ಅತಿಪ್ರೀತಿಯಿಂದ ನೋಡಿ-

ಮನಮದಂಜಿ ಬೆರ್ಚಿ ಬೆಸಕೆಯ್, ನಿಜವಲ್ಲಭನೇನನೆಂದೊಡಂ
ಕಿನಿಸದಿರ್, ಒಂದಿದಗ್ರಮಹಿಷೀಪದದಲ್ಲಿ ಪದಸ್ಥೆಯಾಗು, ನಂ
ದನರನಗಣ್ಯಪುಣ್ಯಧನರಂ ಪಡೆಯೆಂದಮರ್ದಪ್ಪಿಕೊಂಡು ತ
ತ್ತನುಜೆಯಗಲ್ಕೆಯೊಳ್ ನೆಗಪಿದರ್, ಬಸಮಲ್ಲದ ಬಾಷ್ಪವಾರಿಯಂ ||

ಅಲ್ಲದೆ ಅನಂತ ಸಾಮಂತಾಂತ ಪುರಪುರಿಪರಿವಾರದೊಡನೆ ಕೂಡಿ ಅವರನ್ನು ಸ್ವಲ್ಪ ದೂರ ಕಳುಹಿಸಿ ಬರುವ ಸಂದರ್ಭದಲ್ಲಿ

ಪೊಡವಡುವಪ್ಪಿಕೊಳ್ವ, ನೆನೆಯುತ್ತಿರಿಮೆಂಬ, ಸಮಸ್ತವಸ್ತುವಂ
ಕುಡುವ, ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ, ಬುದ್ಧಿವೇೞ್ವ, ಕೈ
ಯೆಡೆ ನಿಮಗೆಂದೊಡಂಬಡಿಪ, ನಲ್ಲರಗಲ್ಕೆಗೆ ಕಣ್ಣನೀರ್ಗಳಂ
ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್

ಶ್ರೀಮತಿ ವಜ್ರಜಂಘರು ತಮ್ಮೂರನ್ನು ಸೇರಿದರು. ಅತಿವೈಭವದಿಂದ ಅನೇಕ ಸಮಸ್ತ ಭೋಗಗಳನ್ನು ಅನುಭವಿಸಿದರು. ಹೀಗಿರುವಲ್ಲಿ ಒಂದು ದಿನ ರಾತ್ರಿ ಶಯ್ಯಾಗೃಹದಲ್ಲಿ ಈ ದಂಪತಿಗಳು ಮಲಗಿರುವಾಗ ಸೆಜ್ಜೆವಳನು ಕೇಶಸಂಸ್ಕಾರಕ್ಕೆಂದು ಧೂಪಗುಂಡಿಗೆಯಲ್ಲಿ ಅಳವರಿಯದೆ ವಾಸನಾದ್ರವ್ಯವನ್ನಿಕ್ಕಿ ಆ ಸೆಜ್ಜೆವನೆಯ ಗವಾಕ್ಷಜಾಲಗಳನ್ನು ತೆರೆದಿಡಲು ಮರೆತುಬಿಟ್ಟನು. ಇದರ ಹೊಗೆ ಸುತ್ತಿ ಶ್ರೀಮತಿ ವಜ್ರಜಂಘರು ಪ್ರಾಣ ಬಿಟ್ಟರು.

ಮೊದಲೊಳ್ ನೀಳ್ದು ಪೊದೞ್ದು ಪರ್ವಿ ಪದಪಂ ಕೈಕೊಂಡು ಮಂದೈಸಿ ಮಾ
ಣದೆ ತನ್ನಂದದೊಳೇೞ್ಗೆಗುಂದದೆ ನಿರುದ್ಧೋಚ್ಛಾ ಸಮಪ್ಪನ್ನೆಗಂ
ಪುದಿದಾ ದಂಪತಿಯಂ ಪುದುಂಗೊಳಿಸಿ, ಲೋಕಾಶ್ಚರ್ಯವಂ ಮಾಡಿ ಕೊಂ
ದುದು ಕೃಷ್ಣಾಗರುಧೂಪಧೂಮನಿವಹಂ ಕೃಷ್ಣೋರಗಂ ಕೊಲ್ವವೊಲ್ ||

ಭೋಗಾಂಗಮಾಗಿಯುಂ ಕೃ
ಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ
ಭೋಗಿಗಳನಿಂತು ಸಂಸೃತಿ
ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್||

ಅನಿತು ಸುಖದನಿತು ಭೋಗದ
ಮನುಜಯುಗಂ ನೋಡೆ ನೋಡೆ ತತ್‌ಕ್ಷಣದೊಳ್ ತಾ
ನಿನಿತೊಂದು ದೆಸೆಯನೆಯ್ದಿದುದು

ಆದರೂ ‘ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮನಂದೊಡೆಗಳೆದರ್ ಓಪರೋಪರೊಳೊಡಸಾಯಲ್ ಪಡೆದರ್’ ಇನ್ನಿದಕ್ಕಿಂತ ಭಾಗ್ಯವೇನು ಬೇಕು’?

ಹೀಗೆ ಸಹಮರಣದಿಂದ ಸತ್ತ ಶ್ರೀಮತಿ ವಜ್ರಜಂಘರ ಪ್ರೇಮಸಂಬಂಧ ಮುಂದಿನ ಜನ್ಮದಲ್ಲಿಯೂ ಅನುವರ್ತಿಸುತ್ತದೆ. ಅವರ ಭೋಗಕಾಂಕ್ಷೆಯೂ ಕಡಿಮೆಯಾಗುವುದಿಲ್ಲ. ಪುನ ಭೋಗಭೂಮಿಯಲ್ಲಿಯೇ ಹುಟ್ಟುತ್ತಾರೆ. ಹಿಂದಿನ ಸ್ವಯಂಬುದ್ಧನೇ ಪ್ರೀತಿಂಕರನೆಂಬ ರೂಪದಿಂದ ಬಂದು

ಸೂಕ್ತಂ ಭವ್ಯಜನಪ್ರ
ವ್ಯಕ್ತಂ ಜೈನಾಗಮೋಕ್ತಮಿಂ ನಿನಗೆ ಮದೀ
ಯೋಕ್ತಮಿದೆರ್ದೆಯೊಳ್ ನೆಲಸುಗೆ
ಮುಕ್ತಿ ಶ್ರೀಹಾರವಿಭ್ರಮಂ ಸಮ್ಯಕ್ವಂ ||

ಎಂದೆಂದೊಡಮ್ಮ ನೀನುಂ
ಸಂದಯಮಣಮಲ್ಲದಿದನೆ ನಂಬಿನಿತಂ ನಿ|
ನ್ನೊಂದಿದ ನಾರೀರೂಪದ
ದಂದುಗದೊಳ್ ತೊಡರ್ದು ಬಿಡದೆ ನವೆಯುತ್ತಿರ್ಪೈ ||