೧೩೧. ದುರಿತಾರಿತ್ರಿಜಗದುನ್ನತದ
ದುರಿತಾರಿ ತ್ರಿಜಗದುನ್ನತದ ಭಾಗ್ಯದ ನಿಧಿಯೆ
ಪರಮ ಸುಖ ಸಂಪದವನೀವ ಚಿಂತಾಮಣಿಯೆ
ವರಮೋಕ್ಷ ಲಕ್ಷ್ಮೀಪತಿಯೆನಿಪ ನಿರ್ದೋಷಿಯನು
ದೋಷಿಯೆಂಬರು ಮೂಢಜನರು || ಪಲ್ಲವಿ
ಆದಿಯೊಳುತ್ಪನ್ನನಾದ ಕಾರಣದಿ ಸುಬೋಧ ನಿಧಿ ವೃಷಭವಾಹನವನೇ
ರಿದೆಯಾಗಿ ಭೇದಿಸಿ ನಿನ್ನ ಚರಣವ ಕಾಣಲರಿಯದೆ ಬಳಲುತಿವೆ ಹರಿವಿರಂಚಿ
ಮೇದಿನಿಯೊಳಗೆ ಹದಿನೆಂಟು ದೋಷಂಗಳನು ಬಾಧೆಯಿಲ್ಲದೆ ಗೆಲ್ದು ಸರ್ವಜ್ಞಾನಿ
ಯಾದೆ ಸಾಧಿಸಿ ಚವುರಾಸೀತಿ ಲಕ್ಷಗುಣಗಳ ತಳೆದ ದೇವಾದಿದೇವ ನೀನೇ || ೧
ಸಲೆ ಲೋಕದ ವಸ್ತು ವಿಸ್ತಾರದಾ ಅಳುವಿಲ್ಲದಾಗಮ ತತ್ವನಿರ್ಣಯದನಿಧಿ
ವಿಲಸಿತಾ ವಾಗ್ವಧೂಮುಖದೊಳುದಯಿಸಲರ್ಧನಾರೀಶನೆಂದೆನಿಸಿದೈ
ಅಳಿವಿಲ್ಲದ ಶಾಶ್ವತಾಮೃತದ ಶರಧಿ ತಾನೊಲಿದು ಸುದತಿಯ
ರೂಪವನಾಂತು ಬಂದಳು ಕಂಡೂ
ಘಳಿಲನೆ ತೆಗೆದುತ್ತಮಾಂಗದಲಿ ಧರಿಸಿ ಗಂಗಾಧರನೂ ನೀನಾದೆಯೈ || ೨
ಅಷ್ಟ ವಿಧ ಕರ್ಮಂಗಳನು ಗೆಲಲು ನೀ ಪರಮ
ನಿಷ್ಠೆಯಿಂದಲಿ ತಪಸು ಮಾಡುತ್ತವಿರಲಾಗಿ
ಬಿಟ್ಟ ಕೇಶವು ಬೆಳೆದು ಜೆಡೆಗಳಾದವು ಜಟಾಮುಕುಟಧರನೆಂದೆನಿಸಿದೈ
ಉಟ್ಟುದನೂ ತೊರೆದು ಇಂದ್ರಿಯ ವಿಷಯ ವ್ಯಸನಗಳ
ಸುಟ್ಟು ಮುರುಳ್ಗಳ ಕೂಡಾಡುತ್ತ ಮಿರಲಾಗಿ
ಕಷ್ಟ ಭವಗೆಡಿಸಿ ತಿರಿದುಂಡನೆಂಬರು ಜಗದಕರ್ತ ಸರ್ವಜ್ಞ ನಿನ್ನ || ೩
ಅಷ್ಟಮದವೆಂಬ ಗಜಾಸುರನ ಸಮರದಲಿ
ಮೆಟ್ಟಿ ಮೂದಲಿಸಿ ತಿವಿದಾಳ್ದುದೆಲೆ ಗಜಚರ್ಮ
ವುಟ್ಟು ಮೆರೆದನುಯೆಂದು ಜಡರು ಬಣ್ಣಿಪರು ಮದವೈರಿ ಹರನೆ ನಿನ್ನಾ
ದುಷ್ಟ ಮನಸಿಜನ ತಪವೆಂಬ ತೀವ್ರಾಗ್ನಿಯಿಂ
ಸುಟ್ಟರುಹಿ ಕಳೆದು ಭುವನಕೆ ಅತಿಧೀರ ನೀ ಭಸ್ಮ
ವಿಟ್ಟಕಾರಣದಿ ವಿಭೂತಿಭೂಷಣನಾದೆ ಶಂಭು ಜಗವಂದ್ಯ ನೀನೇ || ೪
ಎಸೆವ ಜ್ಞಾನೋದಯದಿ ನೊಸಲ ಕಣ್ಣುದಯಿಸಲು
ವಿಷಮ ಜಾತಿ ಜರಾಮರಣ ತ್ರಿಪುರಗಳನುರುಪಿ
ಅಸದಳವೆನಿಪ ಅಜ್ಞಾನಂಧಕಾಸುರನ ಮೆಟ್ಟಿ ನಾಟ್ಯವನಾಡಿದೈ
ಮಿಸುಪ ತ್ರಿಜ್ಞಾನ ತ್ರಿಶೂಲವನೂ ಪಿಡಿದು ನೀ
ವಸುಧೆಯೊಳಗುಳ್ಳ ಜೀವಂಗಳನೆಲ್ಲವನು ತ
ನ್ನಸುವ ಕಾಯ್ವಂತೆ ಕಾಯ್ದನುಯೆಂದು
ಪಸರಿಸಿತು ಮೃಡನ ಢಮರುಗದ ಧ್ವನಿಯೂ || ೫
ಸುರನರೋರಗ ಖಚರ ಜ್ಯೋತಿಷ್ಕರಾದಿ ಕಿನ್ನರರು ಕಿಂಪುರುಷರಂ
ಗರುಡ ಗಂಧರ್ವರಂ ನೆರೆದು ಬಂದರು ಪರಮ
ಹರುಷದಿಂದಲೆ ಸದಾಶಿವನ ಬಲಗೊಂಡು ಪೂಜಿಸಲೆಲ್ಲರೂ
ಹರುಷದಿಂದೆರಗೆ ಮಣಿಮುಕುಟರಂಜಿತಕಿರಣ ಹರನ ತನು ಪ್ರಭೆಯೊಳಗೆ
ಶಿರದ ಗೊಂಚಲ ಎಸೆಯೆ ಧರೆಯೊಳಗೆ ರುಂಡಮಾಲಾಧರನು ಯೆಂ
ಬರೆಲೆ ನಿರ್ದೋಷಿ ರುದ್ರ ನಿನ್ನಾ || ೬
ಉರವಣಿಸಿ ಜಾತಿಜರಾಮರಣಗಳ ಸಂಹರಿಸಿ
ಹರನಾದೆ ಶಾಶ್ವತ ಮುಕ್ತಿ ಲಕ್ಷ್ಮಿಗೆ ನೀನು ವರನಾದ ಕಾರಣದಿ ನಿತ್ಯ
ನಿರಂಜನನು ನಿರ್ಭಯ ಸದಾಶಿವನ ನೀನಾದೆಯೈ
ಹರಿಹರನು ಅಜನು ಅರುಹನಾದೊಡಾಗಲಿ
ತಿರುತ ಹದಿನೆಂಟು ದೋಷವ ಗೆಲಿದವನೆ ದೇವರ ದೇ
ವರದಾದಿ ಶಿವನು ಜಾಯಣ್ಣನಾಧಾರ ತ್ರಿಜಗಾಧಿಪತಿಯು ನೀನೆ || ೭
೧೩೨. ದೇಗುಲವನೆಪೂಜಿಸುತಹರೆ
ದೇಗುಲವನೆ ಪೂಜಿಸುತಹರೆ ದೇವನಾರು ಕಾಣರಲ್ಲಿಯೋ || ಪಲ್ಲವಿ
ಒಂದು ದೇಗುಲವೆರಡು ದೇಗುಲ ರೂ
ಪಂದ ನುಂಗಿತು ಮೂರು ದೇಗುಲವು
ಒಂದುಗೂಡಿಕೊಂಡು ದೇವನ ನುಂಗಿದ
ಪಿಂದಿದನಾರು ತಿಳಿಯರಯ್ಯೋ || ೧
ಆವರುಂಟು ಕೆಲಬರು ಸಾಮರ್ಥ್ಯವ ಪಿರಿದು ಮಾಡಿ
ದೇವನ ಕಾಣುತಲಿಹರೆ
ಕುರುಬರೊಂದು ಕನ್ನಡಿ ಹುಲ್ಲುಗಿರಿ ತನ್ನ
ಮರಿಯೆಂದು ಮುಟ್ಟಿ ಕೊಡುವಂದದಲಿ || ೨
ಉಂಟೆಲ್ಲಾ ಹಲವುವೊಂದು ಹಿರಿದು ಕಿರಿ
ದುಂಟೆರಡು ಗುಣದೊಳಗರಿದೂ
ವಂಟಿಗಾರಿಕೆಯಲ್ಲಿ ನಿನ್ನ ಕಂಡವ
ರುಂಟು ಮುಕ್ತಿ ಚಿದಂಬರ ಪುರುಷಾ || ೩
೧೩೩. ದೊರೆತನವೆನಿನಗೆ
ದೊರೆತನವೆ ನಿನಗೆ ಎನ್ನೊಡನೆ ಭಾಕ್ತಿಕ ರನ್ನ
ಸರಿಯೆಂದು ಭಾವಿಸದೆರವು ಕಾಣುವರೆ || ಪಲ್ಲವಿ
ಉತ್ತಮ ನಿಮ್ಮಲಿರುವ ಚಿತ್ತದ ಕೊನೆಯೊಳಗಿರಿಸಿ
ಮತ್ತನ್ಯ ವಸ್ತುವ ಕೈವಿಡಿಯದ ಸಜ್ಜನರು
ಹೊತ್ತರಿದು ನಿಮ್ಮ ಹಾದಿಯ ನೋಡುತಹರೆ
ತೆತ್ತರ ನಿಮಗೇನು ತೆರದಿದ್ದರೆ || ೧
ಭಕ್ತಿಯಿಂದ ಪೂಜಿಸಿ ಮೋಕ್ಷದೊಳಗಿಷ್ಟ ಸುಖ ಭೋಜನವ
ನಿಪ್ಪತ್ತು ನಿಮ್ಮ ಸನ್ನಿಧಿಯೊಳುಣುತ ಹರೆ
ವೊಪ್ಪತ್ತೆ ಸಾಕು ನಿಮ್ಮ ರಮನೆಯ ತೂಂಭಾರ
ಕಪ್ಪಣೆಯ ಪಾಲಿಸೂ ಕೃಪೆಯಿಂದೆನಗೊಲಿದರುಹಾ || ೨
ಒಡೆಯನಿಲ್ಲದ ಬಂಟನಲ್ಲ ನಿಮ್ಮಯ ಗುಣವ
ಬಿಡದೆ ನೋಡಿದೆನು ಮಾಹೇಂದ್ರ ಕೀರುತಿಯಾ
ವೊಡನೆ ಬಂದರೆ ನಿಮ್ಮೂರ ಹೆಬ್ಬಾಗಿಲೊಳು ತಡೆ
ವುದಕೆ ಸೇಂಗೆಯುಂಟೆ ನಿನಗೆಯಾಧೀಶಾ || ೩
೧೩೪. ಧರ್ಮವೆಬಲ್ಲಿತಲ್ಲಾಬಹು
ಧರ್ಮವೆ ಬಲ್ಲಿತಲ್ಲಾ ಬಹು
ಕರ್ಮವ ಕೆಡಿಸಿ ಮೋಕ್ಷ ಮನೆಯೊಳಿರಿಸುವ ಜಿನ
ಧರ್ಮವೇ ಬಲ್ಲಿತಲ್ಲಾ || ಪಲ್ಲವಿ
ಉಂಡಾಕ್ಷಣ ಭಸ್ಮವಹ ರೋಗದಿಂದ ಜಗ
ಭಂಡನಾದಾರ್ಯನು ನಂದೀಶನೂ
ಕಂಡು ಕೈವಿಡಿದೆತ್ತೀಶ ಸರ್ವರ ಕೈಯಲಿ
ಕೊಂಡಾಡಿ ಸಿದ್ಧರೆನಿಸಿತಾ ಹೊ || ೧
ಸಿದ್ಧಾಂತಿತಾನಹ ಮಾಘಣಂದೀಶನು
ದೊದ್ದೆಗಳಂತೆ ಮೋಹಕೆ ಸಿಲುಕಿ
ಬಿದ್ದನ ಮೈ ಹೊಯಿದೆಬ್ಬಿಸಿ ಮೊದಲಂತೆ
ಸಿದ್ಧಾಂತಿಕರೆಂದೆನಿಸಿತಾ ಹೊ || ೨
ದೇವ ಸಮಂತಭದ್ರಾರ್ಯನುದರದೊಳು
ತೀವಿದಸನ ಲಯವಾಗುತಿರೆ
ಭಾವಿಸಿ ನೋಡಿ ಕಾಂಚಿಪುರದೊಳಾಗದಿ
ರಾವರು ಸರಿಯಿಲ್ಲೆಂತೆನಿಸಿತಾ ಹೊ || ೩
ಎಲ್ಲಾ ಶ್ರಾವಕಯೆಲ್ಲಾ ಮುನಿಜನ
ವೆಲ್ಲ ಭವ್ಯ ಸಮ್ಮೋಹಗಳೂ
ಕೊಲ್ಲದ ಜೀವದಯಾಪರ ಸಮಯದ
ಯೆಲ್ಲರು ತಮ್ಮ ವರೆನಿಸಿತಾ ಹೊ || ೪
ಕ್ರೋಧ ಮೋಹ ಮಾಯಲೋಭವೆನ್ನಯ
ಬೋಧವಡಂಗಿದ ವೇಳೆಯೊಳು
ಓದುವರೋದನಾಲಿಸಿ ಇಂದಿನದೊಂದು
ದಾರಿಯ ತೋರಿ ಸಂತೈಸಿತಾ ಹೊ || ೫
ಜಿನಮತದೊಳು ಇನಿತುಂಟು ಭವ್ಯರು
ಮುನಿಜನರುಂಟೆನಿತನಿತೂ
ನೆನೆವೆನು ನಿತ್ಯ ನಿರಂಜನ ಸಿದ್ಧನ
ತನುಜ ರತ್ನಾಕರ ಸಿದ್ಧನಾ ಹೊ || ೬
ಸತ್ಯದಾಚಾರ ಸದ್ಧರ್ಮವೆ ಶರಣೆಂದು
ಉತ್ತಮ ಜಿನಕುಲದೊಳಗೆ ಪುಟ್ಟಿ
ನಿತ್ಯ ನಿರಂಜನನ ಪಾದವ ನೆನೆಯದೆ
ಯತ್ತಲಲ್ಲದೆ ನಾನು ಕೆಟ್ಟಿಹೆನಲ್ಲ ಹೊ || ೭
೧೩೫. ನಗೆಯಲ್ಲವೆಇದು
ನಗೆಯಲ್ಲವೆ ಇದು ನಗೆಯಲ್ಲವೆ
ಸುಗುಣರೆಲ್ಲರು ಕೇಳಿ ನಗರೆ ಗುರುವೇ || ಪಲ್ಲವಿ
ಅವರೆಂಟು ಮಂದಿಯು ಹೆಡ್ಡರು ಕುರುಡರು
ಅವರವ್ವೆ ಹೆಡ್ಡೆ ಕುರುಡಿಯಲೈಯ
ಅವರ ತಾಯಿಗೆ ಮೂವರು ಮಕ್ಕಳ
ಅವರು ಹೆಡ್ಡರು ಕುರುಡಲಾರದರಲೈಯಾ || ೧
ಹೆಡ್ಡರು ಕುರುಡರು ಕೂಡಾಡಿ ಮತ್ತೊಬ್ಬ
ದೊಡ್ಡ ಸುಜ್ಞಾನಿ ತಾನೆ
ಹೆಡ್ಡಾದ ಕುರುಡಾದ ವೊಂದು ಕಡ್ಡಿಗೆ
ಕಡೆಯಾಗಿ ಬಳಲಿದೆ ಗುರುವೆ || ೨
ಅವರನರಸಲಾಗಿ ಅವರ ತಡೆಯಲಾಗಿ
ಅವರ ಮೈಯಿಂದ ತನ್ನವರು ಪುಟ್ಟಿದರು
ಅವರು ಮೂವರು ಬೇಟಕ್ಕೆ ಹೋದರು
ಭವ ಮುಕ್ತಿ ಚಿದಂಬರ ಪುರುಷನ || ೩
೧೩೬. ನನ್ನಮಾತಕೇಳು
ನನ್ನ ಮಾತ ಕೇಳು ನನ್ನ ಮನವೆ ಕೇಳ್ದ
ಡಿನ್ನು ನಿಜಾನಂದವನೇ ಘನವ || ಪಲ್ಲವಿ
ಹತ್ತು ಗಾಳಿಗಳ ಸಾಧ್ಯ ಮಾಡು ನಡು
ನೆತ್ತಿಗೆ ವಾಯುವ ತಂದು ಕೊಡು
ಮತ್ತೆ ಕಣ್ಮುಚ್ಚಿ ಆತ್ಮನ ನೋಡು ಪ್ರಭೆ
ಮೊತ್ತದಲ್ಲಿ ಮೂಡಿ ಮೊಳಗಾಡು || ೧
ಜುಮ್ಮುದಟ್ಟುತಿದಕೊ ಸರ್ವಾಂಗವೊಳ
ಗುಮ್ಮುರೆದೆಕೊ ಸುಜ್ಞಾನಂತರಂಗ
ವೊಮ್ಮೆಯು ಸೇರದು ಬಹಿರಂಗಾ ಪರ
ಬೊಮ್ಮವಿದು ಮುಕ್ತಿ ಪ್ರಸಂಗಾ || ೨
ಧ್ಯಾನವೊಂದರಿಂದ ಆತ್ಮ ಶುದ್ಧ ಜಲ
ಸ್ನಾನದಿಂದ ಮೈಗೆ ಪ್ರಸಿದ್ಧ
ಧ್ಯಾನಿಸಿ ನೋಡಲ ಸ್ವಯಂ ಬುದ್ಧ ಆತ್ಮ
ತಾನೆ ಗುರು ನಿರಂಜನ ಸಿದ್ಧ || ೩
೧೩೭. ನಮ್ಮವರೆಲ್ಲರುಹೋದ
ನಮ್ಮವರೆಲ್ಲರು ಹೋದ ಹಾದಿಯಲಿ ನಾವು
ನಮ್ಮ ಸೀಮೆಗೆ ಹೋಹರೇನಂಜಿಕೆ || ಪಲ್ಲವಿ
ಸಪ್ತ ವ್ಯಸನದಲಿ ನಡೆದಾಡಿ ಲಲಿತಾಂಗವಾ
ತಪದಲ್ಲಿ ಮುಕ್ತನಾಯಿತಲ್ಲಲ್ಲ
ಗುಪ್ತಿಗಳ ಪಾರಿಷೇಣ ಕುಮಾರ ಸು
ಖಾಪ್ತಿಯನಂದು ಪಡೆದತ್ತಿಲ್ಲವೆ || ೧
ಯುಕ್ತಿಗೆಂದಲ್ಲ ವಿದ್ಯಾರ್ಥಕೆ ಮುನಿಯಾಗಿ
ಮುಕ್ತನಾಯಿತಲ್ಲವೆ ರವಿಮಿತ್ರನೂ
ಶಕ್ತಿಯೊಂದಾಚಮನವೆಂಬ ನೋಂಪಿಯ ನೋಂತು
ವ್ಯಕ್ತನಾಯಿತಿಲ್ಲವೆ ಶಿವಕುಮಾರ || ೧
ಮಿಗೆ ವಜ್ರಜಂಘರು ತೊಂಭತ್ತೆಣ್ಬರು
ಸುಗಮ ತಪದಿಂದ ಮುಕ್ತರಾಗಿಲ್ಲವೆ
ಸಗರ ಕುಮಾರರು ನೂರರುವತ್ತನಾಲ್ಕು ಸಾವಿರ
ಸಗರನೊಡನೆ ಮುಕ್ತರಾಯಿತಲ್ಲವೆ || ೨
ಕಪಟವಾಹನ ತಮ್ಮ ನೊಂದವರಾಗನು
ತಪಸಿನಿಂದ ತಾ ಸುಖಿಯಾಯಿತಲ್ಲವೆ
ಅಪರಾಜಿತೇಶ್ವರ ಮೆಚ್ಚಲು ಭೀಮಯೋಗಿಯ
ನ್ನ ಪವರ್ಗದ ಪಡೆಯಿತಲ್ಲವೆ x x x || ೩
೧೩೮. ನೆಮಿನಮಿಸಿಎಡೆಬಿಡದೆ
ನೆಮಿನಮಿಸಿ ಎಡೆಬಿಡದೆ ನೆನೆವೆ ಜಿನಪತಿಯ
ಶ್ರೀಮದಮರೇಂದ್ರ ನಾಗೇಂದ್ರ ಚಕ್ರೇಶ್ವರ || ಪಲ್ಲವಿ
ಸ್ತೋಮ ಮಣಿಮಕುಟ ಕೀಲಿತ ದಪಯುಗಲು
ಸಾಮಚಾಂಕ ಪೀಠವಾಂತ ಛತ್ರತ್ರಯವು
ಚಾಮರ ವ್ರಜ ದಿವ್ಯ ಶಬ್ದ ಹೂಮಳೆಯು
ವ್ಯೋಮದಿಂ ಕರೆವ ನಿರಂಜನ ಸಿದ್ಧ || ೧
ದುಂದುಭಿಯು ಕಂಕೇಲಿ ತರು ಪ್ರಭಾಮಂಡಲಗ
ಳೆಂದೀ ಮಹಾಪ್ರಾತಿಹಾರ್ಯ ರಂಜಿಸುವ
ಸಂದ ಶಂಭರಾರಿ ತ್ರಿಜಗದಿಂದ ಪೂಜಿತನಾದ
ಸುಂದರಾಂಗನಿಗೆ ನಲವಿಂದ ವಂದಿಪೆನು || ೨
ಪಂಚ ಕಲ್ಯಾಣಗಳ ತಾಳೀ ಮೂಲೋಕ ಪ್ರ
ಪಂಚ ಕಾಲತ್ರಯವನರಿದು ತನ್ನೊಳಗೆ
ಪಂಚಮ ಜ್ಞಾನ ಸಂಪನ್ನ ಮೂರ್ತಿ
ಪಂಚ ಸಂಸಾರವನು ಕಳೆದು ರಕ್ಷಿಪುದು || ೩
ಸಹಜದೊಳು ಬಂದವತಿಶಯ ಹತ್ತು ಘಾತಿಗಳ
ದಹನದಿಂ ಹತ್ತು ದೇವೋಪನೀತಾ
ವಹವು ಪದಿನಾಲ್ಕಿಂತು ಮೂವತ್ತನಾಲ್ಕು ಭರ
ಸಹಿತ ಮೆರೆವಮಲ ಸಂಪದನೆ ರಕ್ಷಿಸುವುದು || ೪
ಜ್ಞಾನ ದರ್ಶನ ವೀರ್ಯ ಸುಖವನಂತಗಳುಳ್ಳ
ಭಾನು ಶಶಿಕೋಟೆ ಸಂಕಾಶ ನಿರ್ಮೋಹ
ಧ್ಯಾನಕಳವಟ್ಟು ಬಂದೆನ್ನ ಮನದೊಳು ನಿಂದು
ಶ್ರೀ ನಿರಂಜನ ಕಡಲ ಶಿವನೇ ರಕ್ಷಿಪುದು ||
೧೩೯. ನಮೋನಮೋನಮೋ
ನಮೋ ನಮೋ ನಮೋ ನಮೋ ಸ್ವಾಮಿ ನಮೋ ಗುರುದೇವ ನಮೋ
ನಿಮ್ಮ ಮಹಾತ್ಮ್ಯಕೆ ಸರಿಯುಂಟೆ ಸ್ವಾಮಿ ಕುಮಾರ ಯೋಗೀಂದ್ರ || ಪಲ್ಲವಿ
ಅಗ್ನಿರಾಜನ ಕುಮಾರ ನಗ್ನ ವೇಷಧಾರಿ ಶುಭ
ಲಗ್ನದೆ ಕರ್ಮವ ಧ್ಯಾನದಗ್ನಿಯಿಂದ ಸುಟ್ಟೆಯಲ್ಲ || ೧
ಸಿರಿದೆಂಟು ಪ್ರಾಯದ ಕುಮಾರ ಮುನಿ ತಪಸೆಯಿಂದ
ಕಾರುಣ ದೀಪ ಕುಮಾರಾದಿಯೆಂದಾಯಿತಲ್ಲಾ || ೨
ಬಿಸಿರಹಳ್ಳಿಯ ಬೆಟ್ಟದಲ್ಲಿ ಹೊಸ ಮಲೆಯೆ ಗುಹೆಯಲ್ಲಿ
ಎಸೆದಿರ್ದ ಕಾರಣ ನಿನ್ನ ಹೆಸರು ಕೀರ್ತಿವಾಯಿತಲ್ಲಾ || ೩
ತ್ರಾಂಬೆನಾರೋಹಿಳು ಸುರದಿ ಮುಂಚೆ ನವಿಲೇಟೆಕಾಯ
ಕೈಯನಿಳುಹಿ ಮೋಕ್ಷದಂಚೆಗೆ ಬಾಗಿಸಿದೆಯಲ್ಲಾ || ೪
ಕೀರ್ತಿಸಲಳವೆ ಪುಣ್ಯಮೂರ್ತಿ ರತ್ನಾಕರನ ಸಂ
ಪೂರ್ತಿಯ ಗುರುವೇ ಸ್ವಾಮಿ ಕಾರ್ತೀಕ ಯೋಗೀಂದ್ರ || ೫
Leave A Comment