೨೦೧. ಜಿನರಾಜನೀನೆಜಯಶೀಲ
ಜಿನರಾಜ ನೀನೆ ಜಯಶೀಲನೆಂಬುದಕೆ
ಜನನಾದಿ ಪದಿನೆಂಟ ಜಯಿಸಿದುದೆ ಸಾಕ್ಷಿ || ಪಲ್ಲವಿ
ಧರೆಗೆ ನಿರ್ಭಯ ದಯಾಪರನು ನೀನೆಂಬುದಕೆ
ಕರದೊಳಾಯುಧವಿಲ್ಲದಿರುವುದೆ ಸಾಕ್ಷಿ
ನರ ಸುರೋರಗರಾಜರೊಡೆಯ ನೀನೆಂಬುದಕೆ
ಶಿರದ ಮೇಲಿಹ ಮೂರು ಸತ್ತಿಗೆಯ ಸಾಕ್ಷಿ || ೧
ಪೊಡವಿಗನುಪಮದಮಲ ಮೂರ್ತಿ ನೀನೆಂಬುದಕೆ
ಒಡವೆ ವಸ್ತಗಳಿಲ್ಲದಿರುವುದೇ ಸಾಕ್ಷಿ
ಸಡಗರದೊಳನಂತ ಸುಖ ನಿನ್ನೊಳುಂಟೆಂಬುದಕೆ
ಮಡದಿಯರನಗಲಿಹ ಮಹಿಮೆಯೇ ಸಾಕ್ಷಿ || ೨
ಆದೀಶ ನೀನಲ್ಲದಿನ್ನಿಲ್ಲವೆನಗೆಂಬುದಕೆ
ಈ ಧರೆಗೆ ಪಶ್ಚಿಮಾಂಬುಧಿಯೆ ಸಾಕ್ಷಿ
ಈ ದೇಹ ವಿಡಿದಿರ್ಪ ಆಸನ್ನ ಭವ್ಯರಿಗೆ
ನೀ ದೇವನೆಂಬುದಕೆ ನಿಜರೂಪೆ ಸಾಕ್ಷಿ || ೩
೨೦೨. ತನ್ನಿಂದತಾಸುಖಿ
ತನ್ನಿಂದ ತಾ ಸುಖಿ ತನ್ನಿಂದ ತಾ ದುಃಖಿ
ಚೆನ್ನಾಗಿ ನಂಬಿರೋ ಪರಮಾತ್ಮನ || ಪಲ್ಲವಿ
ದಾನಪೂಜೆಗಳಲಿ ನೋಂಪಿಗಳಲಿ ಕೃತಕಾರಿ
ತಾನಂದದಲಿ ವ್ರತ ಜಪಂಗಳಲಿ
ತಾನೆ ಪುಣ್ಯವಮಾಡಿ ಸ್ವರ್ಗಕ್ಕೆ ಹೋಹಾಗ
ಹೋ! ನಿಲ್ಲು ಬರಬೇಡ ಎಂಬುವರುಂಟೆ? || ೧
ಪರಮ ಧರ್ಮವ ಬಿಟ್ಟು ವ್ಯಸನದೆ ಮನವಿಟ್ಟು
ಸುರೆ ಮಾಂಸ ಪರಸತಿಯಾಸೆಯಲಿ
ಹಿರಿದು ಪಾಪವ ಮಾಡಿ ನರಕಕ್ಕೆ ಬೀಳ್ವಾಗ
ಭರದಿ ಬಂದಲ್ಲಿ ಹಿಡಿದೆತ್ತುವರುಂಟೆ? || ೨
ಪಾಪಪುಣ್ಯವನಾತ್ಮಯೋಗದಿ ಸುಟ್ಟು ನಿ
ರ್ಲೇಪದೀ ಒಡಲ ಬಿಸುಟು ಮುಕ್ತಿಗೆ
ತಾ ಪುಟನೆಗೆವಾಗ ತಡೆಯುಂಟೆ ಪರಮ ಪ್ರ
ತಾಪಿ ನಮ್ಮ ಚಿದಂಬರ ಪುರುಷನಿಗೆ || ೩
೨೦೩. ತಾರಮ್ಮಯ್ಯಜಿನಪತಿ
ತಾರಮ್ಮಯ್ಯ ಜಿನಪತಿಗಾರು ವಸ್ತುಗಳು || ಪಲ್ಲವಿ
ಬಲವನೆ ಕೊಡುವ ನಿರ್ಮಲ ತೀರ್ಥಾಂಬುವ
ಮಲಯಜ ಮಿಶ್ರತ ಜಲದ ಕುಂಭಗಳ || ೧
ಚಂದನ ಹಿಮಕುಂಕುಮ ಸಂಮಿಶ್ರದೊಳು
ಬಂಧುರವಾಗಿಹ ಗಂಧದ ತಟ್ಟೆಯನು || ೨
ಸುಕ್ಷೇತ್ರದೆ ಬೆಳೆದಕ್ಷಯ ಪರಿಮಲ
ದಕ್ಷೂಣಾಮಲದಕ್ಷತೆ ಪುಂಜವ || ೩
ಪರಿಮಳಮಲ್ಲಿಗೆ ಜಾಜೀ ಚಂಪಕಪುಷ್ಪ
ದರಳು ಸರಂಗಳನಿರಿಸಿದ ತಟ್ಟೆಯನು || ೪
ಮಿರುಗುವ ಘೃತಪಾಯಸ ಎಗ್ಗೂರಿಗೆ ಬಹು
ಪರಿಮಳ ಭರಿತದ ಪರಮಾನ್ನಗಳ || ೫
ಪಾಪವ ಕೆಡಿಸಿದಿಗ್ವ್ಯಾಪಿ ಸಮುಜ್ವಲ
ರೂಪಿನ ಕರ್ಪೂರದೀಪದಾರತಿಯ || ೬
೨೦೪. ದಯೆವೆಲಸೆನ್ನಿದಾರಿಗೆ
ದಯೆವೆಲಸೆನ್ನಿ ದಾರಿಗೆ ಬನ್ನಿ
ಜಯ ಜಯ ಅಪರಾಜಿತೇಶನೆಂದೆನ್ನಿ || ಪಲ್ಲವಿ
ತನು ನಿತ್ಯವಲ್ಲ ಜವನಿಗಿದಿರಿಲ್ಲ
ಕನಸಿನ ಬಾಳಿದು ಗರ್ವವು ಸಲ್ಲ || ೧
ಇಂದ್ರನಿಗೆರವು ಇನ್ನಾರಿಗಿರವು
ಚಂದ್ರನ ಕಲೆಯಂತೆ ಸಿರಿಯಿನ್ನೆರವು || ೨
ಅಪರಾಜಿತೇಶ ಅಧಿಕಪ್ರಕಾಶ
ಜಪಿಸಿರೋ ಕಾಡುವ ಕರ್ಮನಾಶ || ೩
೨೦೫. ದಾನಕೆಸಲ್ಲದಸಿರಿ
ದಾನಕೆ ಸಲ್ಲದ ಸಿರಿ ಇದ್ದೇನಿಲ್ಲದೇನು? ಆತ್ಮ
ಧ್ಯಾನಕೆ ಬಾರದ ಬುದ್ಧಿ ಇದ್ದೇನಿಲ್ಲದೇನು || ಪಲ್ಲವಿ
ಪರಹಿತಕಾಗದ ಬಲವಿದ್ದೇನು? ಇಲ್ಲದೇನು? ವ್ರತವ
ಧರಿಸಿ ನಡೆಯದ ದೇಹವಿದ್ದೇನು? ಇಲ್ಲದೇನು?
ಕರುಣೆಗೆಟ್ಟು ತಪವು ತಾನಿದ್ದೇನು? ಇಲ್ಲದೇನು ಬಂಧು
ವೆರಸಿ ಭೋಗಿಸದ ಭೋಗವಿದ್ದೇನು? ಇಲ್ಲದೇನು? || ೧
ಚಿಂತೆವೆರಸಿದ ರಾಜ್ಯವಿದ್ದೇನು? ಇಲ್ಲದೇನು ಕಾಮ
ತಂತ್ರಕೊಳಗಾದ ವಿದ್ಯೆ ಇದ್ದೇನು ಇಲ್ಲದೇನು?
ಭ್ರಾಂತರೊಳಗಣ ಗೋಷ್ಠಿ ಇದ್ದೇನು? ಇಲ್ಲದೇನು? ಅನ್ಯ
ಕಾಂತೆಗೊಲಿದನ ಬಾಳು ಇದ್ದೇನು? ಇಲ್ಲದೇನು? || ೨
ವಾದಿಸುವ ಬಂಟ ತಾನಿದ್ದೇನು? ಇಲ್ಲದೇನು? ತಪ್ಪ
ಸಾಧಿಸುವ ಒಡೆಯ ತಾನಿದ್ದೇನು? ಇಲ್ಲದೇನು?
ಕಾದು ಗೋಳಿಡುವ ಕಾಂತೆ ಇದ್ದೇನು? ಇಲ್ಲದೇನು? ಸಮು
ದ್ರಾಧೀಶನಲ್ಲದ ದೇವನಿದ್ದೇನು? ಇಲ್ಲದೇನು? || ೩
೨೦೬. ನಾನೊಬ್ಬರಹಾಗಿಲ್ಲ
ನಾನೊಬ್ಬರ ಹಾಗಿಲ್ಲ ನನಗೊಬ್ಬರ ಒಲವಿಲ್ಲ
ನಾನು ನಾನಲ್ಲದೆ ಪರರಾರು ನನಗಿಲ್ಲ || ಪಲ್ಲವಿ
ಬಡಕೆಂದಾತ್ಮನ ಕಂಡು ಬಹುಕಾಲ ಬಳಲಿದೆನು
ಮಡಿಯುತ ಹುಟ್ಟುತ ಹಲವು ಜನ್ಮದಿ ತೊಳಲಿದೆನು
ನುಡಿಗೆ ಗೋಚರವಾದ ಪರಬೊಮ್ಮನೇ ತಾನಾಗಿದ್ದು
ನುಡಿಸದೆ ಎನ್ನೊಳು ನಿಂತು ನೋಡುವೆನೀಕ್ಷಣದಿ || ೧
ಹಾಲು ನೀರೊಡಗೂಡಿದ ಹಾಗೆನ್ನ ಜೀವನವು
ಮೇಳವಿಸಿದ ತನುವೆರವು ಇನ್ನುಳಿದವರೇನು?
ಸಾಲುಕರ್ಮವ ಸುಡುವ ಶಕ್ತಿಯುಂಟಾತ್ಮನೊಳು
ಬೀಳುವ ಚಿತ್ತವ ತರುಬಿ ನೋಡುವೆನೀಕ್ಷಣದಿ || ೨
ಅರಿಯದವರಿಗೆ ದೇವ ಅಲ್ಲಲ್ಲಿ ಹೊರಗಿಹನು
ಅರಿತಮೇಲಾ ದೇವ ಹೊರಗಿಲ್ಲೊಳಗಿಹನು
ಅರಿವುದು! ಕಾಂಬುದು! ಸುಪ್ರಭೆ ತಾನಾಗಿ
ಮೆರೆವ ಚಿದಂಬರ ಪುರುಷನ ನೋಡುವೆನೀಕ್ಷಣದಿ || ೩
೨೦೭. ಪಾಪಿಬಲ್ಲನೇಪರರ
ಪಾಪಿ ಬಲ್ಲನೇ ಪರರ ಸುಖದುಃಖದಿಂಗಿತವ?
ಕೋಪಿ ಬಲ್ಲನೇ ನಿಜದಿ ಮನುಜರಂತರಂಗವ || ಪಲ್ಲವಿ
ಕತ್ತೆ ಬಲ್ಲುದೇ ಹೊತ್ತ ವಸ್ತುಗಳ ಬೆಲೆಗಳನು?
ಮೃತ್ಯುಬಲ್ಲುದೇ ತಾನು ದಯಾದಾಕ್ಷಣ್ಯವ?
ತೊತ್ತುಬಲ್ಲಳೇ ತನ್ನ ಮಾನ ಮಾರ್ಗಂಗಳನು?
ಬೆಕ್ಕುಬಲ್ಲುದೇ ಹಾಲು ಮೀಸಲೆಂಬುದನು? || ೧
ಹೇನು ಬಲ್ಲದೇ ಮುಡಿದ ಪರಿಮಳದ ವಾಸನೆಯ?
ಶ್ವಾನ ಬಲ್ಲುದೇ ತಾನು ರಾಗ ಭೇದಂಗಳನು?
ಮೀನು ಬಲ್ಲುದೇ ನೀರ ಸವಿ ಸ್ವಾದವೆಂಬುದನು?
ಮಾನ ಹೀನಬಲ್ಲನೇ ಭಕ್ತಿ ವಿಶ್ವಾಸವನು? || ೨
ಹೇಡಿ ಬಲ್ಲನೇ ರಣದ ಹಿಮ್ಮೆಟ್ಟು ಕುಂದೆಂಬುದನು?
ಕೋಡಗ ಬಲ್ಲುದೇ ತಾನು ರತ್ನದ ಬೆಲೆಗಳನು?
ಬೇಡಿದೊಡೆ ಗುಣವೀವ ಕಡಲಾದಿ ಜಿನನಲ್ಲದೆ ಮಿಕ್ಕ
ನಾಡಾದಿ ದೈವಗಳೆಲ್ಲ ತಾವು ಕೊಡಬಲ್ಲವೇನು? || ೩
೨೦೮. ಭಜನೆಮಾತ್ರಸಾಲದೆ?
ಭಜನೆ ಮಾತ್ರ ಸಾಲದೇ? ಆ ಜಿನೇಂದ್ರನ
ಸುಜನ ಸುಜ್ಞಾನ ಜನಾನಂದರೂಪನ
ನಿಜಗುಣ ರತ್ನತ್ರಯನಪ್ಪ ಜಿನೇಂದ್ರನ || ಪಲ್ಲವಿ
ಪಿಂತಣಭವಂಗಳೊಳು ಅಂಟಿದಕರ್ಮ
ಸಂತತಿ ಜಯಿಸುವಲ್ಲಿ
ಅಂತರಂಗದ ಶುಕ್ಲಧ್ಯಾನವಾಸದೊಳರ
ಹಂತನೇ ತನ್ಮಾತ್ಮನೆಂದು ಭಾವಿಸುವಂಥ || ೧
ಕುಟಿಲ ವಿಧಿಯಾಟದ ನರ್ತನದಲ್ಲಿ
ಘಟಿಸುವ ಪಾಠಕದ
ಪಟುತರ ಕೆಡುವ ರಕ್ಷೆಯ ಭಕ್ತಿಯೊಳು ಕರ್ಮ
ಭಟರಗೆಲಿದ ನಿರಂಜನ ಸಿದ್ಧರಡಿಗಳ || ೨
ದುರ್ವಾರ ದುಃಖದೊಳು ವ್ಯಂತರ ಗ್ರಹ
ಪರ್ವಿದ ಸಮಯದೊಳು
ಗರ್ವಿತ ನೃಪ ಚೋರವ್ಯಾಘ್ರ ದುಃಖಂಗಳೊಳು
ನಿರ್ವಾಣಪತಿ ಸರ್ವತೋಮುಖ ಸಲಹೆಂಬ || ೩
ಭವರುಜೆಯಡಿಸಿದಾಗ ಅಂತರ ಚಾರರು
ಕವಿದು ಕಾಲ್ಗೆಡಿಸುವಾಗ
ಧ್ರುವಚಿತ್ತವಿಡಿದಾತ್ಮ ಯೋಗಭಾವದೊಳು
ರವಿಕೋಟಿದ್ಯುತಿಭಾಸಮಾನ ಸರ್ವಜ್ಞನ || ೪
ಯೋಗಾಭ್ಯಾಸವ ಮಾಳ್ವಾಗ ಮಾರ ನಿದ್ರೆ
ರಾಗ ಸಂಭವಿಸುವಾಗ
ರಾಗಾದಿ ದೋಷವ ನೀಗಿದ ನಿತ್ಯಾತ್ಮ
ಶ್ರೀಗಧಿನಾಥ! ಮಾಂ ಪಾಹಿ ಭಗವಾನೆಂಬ || ೫
೨೦೯. ಮಾನವಜನ್ಮಕೆಬಂದು
ಮಾನವ ಜನ್ಮಕೆ ಬಂದು ಮುತ್ತನಾಗದೆ ವ್ರತವಿ
ಧಾನದಿಂದ ಶುದ್ಧನಹರೇನಾಯ್ತು? || ಪಲ್ಲವಿ
ನಾಕು ಸಂಘಕೊಲಿದು ನಾಕುದಾನವಕೊಟ್ಟು ಇರದ
ನೇಕ ಫಲಗಳ ಪಡೆವರೇನಾಯ್ತು?
ಜೋಕೆಯಿಂದ ಒಂದೆರಡು ನೋಂಪಿಯ ನೋಂತು ಸ್ವರ್ಗ
ಲೋಕದ ಪಟ್ಟವನಾಳವೊಡೇನಾಯ್ತು? || ೧
ಇರುಳೂ ಹಗಲು ಒಡಲ ಸುಖಕೆ ಕುಡಿಯುತಿದ್ದೆಯೈ ಸಂಜೆ
ಎರಡರೊಳಗೆ ಜಪವ ಮಾಡುವೊಡೇನಾಯ್ತು?
ಪರಮ ಭಕ್ತಿಯಿಂದ ಒಂದೆರಡು ಘಳಿಗೆಯಾದರೂ ಪುಣ್ಯ
ಚರಿತೆಯನಿರದೇ ಕೇಳುವೊಡೇನಾಯ್ತು? || ೨
ಈ ಮೈ ಬೇರೆ ನೀ ಬೇರೆಂದು ನಿಮಿಷವಾದರೂ ಆತ್ಮಾ
ರಾಮನಾಗಿ ಶುದ್ಧನಹರೇನಾಯ್ತು
ಶ್ರೀಮಂದರಸ್ವಾಮಿ ನೀನೆ ಶರಣೆಂದು ಆ ಮೋಕ್ಷ
ಸೀಮೆಗಧಿನಾಥನಹರೇನಾಯ್ತು? || ೩
೨೧೦. ಲಾಭಲಾಭದಿನದಿನಕೆ
ಲಾಭ ಲಾಭ ದಿನದಿನಕೆ ಲಾಭ ಕಾಣಿರೋ
ಪ್ರಾಭೃತವನೋದಿ ಧ್ಯಾನಕೆ ಮನವಿಟ್ಟಂದಿನಿಂದ || ಪಲ್ಲವಿ
ಪೊಲ್ಲದೊಡಲ ತಪಸಿಗೊಡ್ಡಿ ಇಂದು ನಾಳೆ ಸ್ವರ್ಗ
ದಲ್ಲಿ ದಿವ್ಯ ದೇಹವಹುದು ಲಾಭ ಕಾಣಿರೋ
ಬಲ್ಲಿದ ನೀನಾತ್ಮ ಯೋಗ ಕೂಡಲು ಮತ್ತಾಸ್ವರ್ಗ
ದಲ್ಲಿಂದ ಬರಲಾತ್ಮ ತನು ಮೃತಲಾಭ ಕಾಣಿರೋ || ೧
ಪವನಯೋಗದಿ ಮನವ ಜಯಿಸಿ ಎನ್ನೊಡಲ ರೋ
ಗವನೊತ್ತಿ ಕಳೆವೆ ತಾನದು ಲಾಭ ಕಾಣಿರೋ
ಭವ ಭಯವನಳಿವ ಕಲೆಯನೆಳಿಸುವೆ ನಿಂದು ನಾಳೆ
ಜವನ ತೊತ್ತಳಿದುಳಿವೆನದು ಲಾಭ ಕಾಣಿರೋ || ೨
ನಿಚ್ಚ ನಿಚ್ಚ ಧ್ಯಾನ ಖಡ್ಗದಿಂದ ಕರ್ಮಗಳನು
ಕೊಚ್ಚಿ ಕೊಚ್ಚಿ ಕಳೆವೆ ತಾನದು ಲಾಭ ಕಾಣಿರೋ
ಮೆಚ್ಚಿ ನಿರಂಜನಸಿದ್ಧನ ನೆನೆವೆ ನಾನಿನ್ನು
ಅಚ್ಯತಾತ್ಮ ಸಿದ್ಧ ನನಗೆ ಲಾಭ ಕಾಣಿರೋ || ೩
Leave A Comment