೬೧. ಕೃಪೆಯಿಲ್ಲವೇಕೊಎನ್ನಮೇಲೆ
ರಾಗ: ಹುಸೇನ್ ತಾಳ: ರೂಪಕತಾಳ
ಕೃಪೆಯಿಲ್ಲವೇಕೊ ಎನ್ನ ಮೇಲೆ ದೇವದೇನೇ
ಅಪರಾಧಗಳನು ಕ್ಷಮಿಸಿ ಕಾಯೋ ಪಾರ್ಶ್ವನಾಥನೇ || ಪಲ್ಲವಿ
ಗತಿಯು ನೀನೆ ಹಿತರ ಕಾಣೆ ಪಿತನು ನೀನೆಂದು
ಅತಿಶಯದಿ ನಿನ್ನ ಚರಣ ಸ್ತುತಿಪೆ ನಾ ನಿಂತು || ೧
ನಾಡಾಡಿಗೊಡೆಯ ಬೇಡಿಕೊಂಬೆ ಗಾಢದಿಂದಲಿ
ತಾಡಮಾಡದೆ ಕೊಡು ವರವ ಪೂರ್ಣಹರುಷದಿ || ೨
ಘಾತಿಯಘಾತಿಯನ್ನು ಘಾತಿಸಿದನೇ
ಪ್ರೀತಿಯಿಂದ ಭಕ್ತರನ್ನು ಪೊರೆವ ದೇವನೇ || ೩
ಬೆಳ್ಗುಳಪುರದ ಪಾರ್ಶ್ವನಾಥ ಪ್ರೇಮದಿಂದಲಿ
ಕಾಮಿತಾರ್ಥವನ್ನು ಕೊಡುವ ಸ್ವಾಮಿಜಿನಪನೇ || ೪
೬೨. ನೇಮಿಶಜಿನಪೋತ್ತಮನೇ
ರಾಗ: ನಾರಾಯಣಿ ತಾಳ: ಅಟ್ಟಿತಾಳ
ನೇಮಿಶ ಜಿನಪೋತ್ತಮನೇ ಭಕ್ತರ ಕಾಯ್ವ
ಪ್ರೇಮಶರಧಿ ಚಂದ್ರಮನೇ
ಕಾಮಹರಸುತ್ರಾಮವಂದಿತ ನಾಮನೇ ಗುಣಧಾಮನೇ
ಕ್ಷೇಮಕರ ಸುಮಕೋಮಲಾಂಗನೆ || ಪಲ್ಲವಿ
ಈ ತೆರ ಸ್ತುತಿಗೊಳುತಾ ನೇಮಿಶ್ವರ ಪಾತಕಸವರಿಡುತ
ಭೂತಳಕೆ ಪುರುಹೂತ ನಿತ್ಯದಿ ಕಳುಹಿದಾ ನಿಳುಹಿದಾ
ಪ್ರೀತಿದ್ರವ್ಯಗಳೋತುಗೊಳುತಲಿ || ೧
ಇರುತಿರಲೊಂದಿನದಿ ಬಲರಾಮಕೃಷ್ಣರವೆರಸುತಲತಿ ಮುದದಿ
ತರುಣಿಯರು ಸಹ ಚರಿಸಿ ವನದೊಳಗಾಡುತಾ ಪಾಡುತಾ
ಮೆರೆವ ಸರಸಿಯ ಸರಸಿಗೈದಲು || ೨
ಹರುಷದಿ ಜಲಕೇಳಿಯನಾಡುತಲಿ ಬಳಲಿ ಸರಿದರು ಮೇಲ್ಗಡೆಯ
ಪರಮ ನೇಮೀಶ್ವರನು ಧರಿಸಿದಂಬರವನು ಮೆರೆವನು
ತರುಣಿಭಾಮೆಯ ಕರಕೆ ನೀಡಲು || ೩
ಮೂರ್ಲೋಕದೊಳು ವೀರನು ಎನ್ನೊಲ್ಲಭನ ಸರಿ ಪೋಲುವರನು ಕಾಣೆನು
ಕೀಳು ಸತಿಯರವೋಲು ನೀನೆನಗಾಡಿದೆ ಏನಾಡಿದೆ
ಮೇಲನರಿಯದೆ ಪೇಳಬಹುದೇ ||
ಎನೆ ಸತ್ಯಭಾಮೆಯಳಾ ನುಡಿ ಕೇಳಿ ನೇಮಿಜಿನಪನು ಕೋಪಿಸಲು
ಬಳಿಕ ಶ್ರೀಧರಬಲರು ಬಂದತಿಮೋದದಿ ವಿನೋದದಿ
ಒಲಿದು ನೇಮವಗೊಳುತ ಪೋದರು || ೫
ನೀಲವರ್ಣದ ದೇವನು ಗಣರೊಡನೆ ಶಸ್ತ್ರದ ಶಾಲೆಗೆ ತೆರಳಿದನು
ಲೋಲನಯನಾ ಮೇಲೆ ಶಂಖವ ಕರದೊಳು ಭರದೊಳು
ಲೀಲೆಯಂ ಗುಣಪಾಲವಿಡಿದನು || ೬
ವಾಮನಾಸಿಕರಂಧ್ರದಿ ಆ ಪಾಂಚಜನ್ಯವನಾ ಮಹಿಮನು ಭರದಿ
ಭೀಮಬಲನಿಸ್ಸೀಮನೂದಲು ನಾದದಿಂ ಪಯೋದದಿಂ
ಆ ಮಹಾತ್ರೈಭೂಮಿ ನಡುಗಿತು || ೭
ಸುರರು ಕುಸುಮವೃಷ್ಟಿಯ ಧರೆಗೆರೆಯಲಾಕ್ಷಣ ಹರಿಬಹಳಾಚ್ಚರಿಯ
ವೆರಸಿ ಮನದೊಳಗರಿತು ಪೇಳ್ದನು ಭರದೊಳು ಮತ್ಸರದೊಳು
ಅರರೆ ನೇಮೀಶ್ವರನು ಮೆರೆವನು || ೮
ಧರೆಮೂರ ದೊರೆತನವು ಎನ್ನದು ನೇಮೀಶ್ವರ ಸೆಲೆಯುವ ದಿಟವು
ತ್ವರಿತದಿಂದುರು ತರದುಪಾಯವಗೈವೆ ತಾನೆನ್ನುತಾ
ಅರಸ ಬಲರಾಮರೊಳು ಪೇಳ್ದನು || ೯
ಪೊಸಯೌವನವನಾಂತನು ನಮ್ಮಯ ನೇಮಿಶಶಿಗೆ ವಿವಾಹವನು
ಕುಶಲದಿಂ ಪಸರಿಸಲು ಬೇಕೆನೆ ತೋಷದಿ ವಿಲಾಸದಿ
ಅಸಮಪುರರಂಜಿಸಿದುದಾಗಲು || ೧೦
ಐನೂರು ಕನ್ನೆಯರು ಶೃಂಗರಿಸಿ ಲಗ್ನಕೆ ಸಾನುರಾಗದಿಯಮರ
ಮಾನಿನೀಯರವರೇನನೆಂಬೆನು ಗಾನದಿಂ ಯಾನದಿಂ
ಭಾನುತೇಜನ ಧ್ಯಾನ ಗೈದರು || ೧೧
ಭರತಶೃಂಗಾರದೊಳು ಜಿನೇಶ್ವರ ಮೆರೆವಣಿಗೆಯ ಬರಲು
ತುರುಗಳನು ಕಟ್ಟಿರಿಸಿ ಸಾಲೊಳು ಬಿಸಿಲೊಳು ತೃಷೆಯೊಳು
ಉರುತರದಿ ಬಾಡಿರಲಿದೇನೆನೆ || ೧೨
ಅದರೊಳೋರುವ ಗೋಪನು ಪೇಳಿದನು ನಿಮ್ಮಯ ಮದುವೆ ಭೋಜನ
ಕೆಂದಿನ್ನು ಚದುರ ಕೃಷ್ಣನ ಪದುಳದಪ್ಪಣೆಯೆಂದವ
ನಂದವನರಿತು ಬಿಡಿಸಿದ ತುರುಗಳೆಲ್ಲವ || ೧೩
ಪಿಂತಿರುಗುತ್ತ ದೇವನು ವೈರಾಗ್ಯವ ನಂತರ ತಾಳಿದನು
ಇಂತಿರಲು ಲೌಕಾಂತಿಕರು ಬಂದೆಂದರು ನಿಂದರು
ಸಂತಸದಿ ಪರಮಾಂತೆ ಬೋಧೆಯ || ೧೪
ಅರಿತಾಗಲಮರಗಣವೆರಸುತಲಿ ಸುರಪನು ಪರಿನಿಷ್ಕ್ರ ಮಣಕಲ್ಯಾಣ
ಪರಮಪೂಜೆಯ ವರಜಿನೇಂದ್ರಗೆ ಹರುಷದಿ ಸರಸದಿ
ವಿರಚಿಸಿದನುರುತರದ ವಿಭವದಿ || ೧೫
ಶ್ರಾವಣಶುದ್ಧದೊಳು ಚತುರ್ಥಿಯ ತೀವಿದ ಚಿತ್ರೆಯೊಳು
ದೇವ ವಂದಿತ ದೇವ ದೀಕ್ಷೆಯಗೊಂಡನು ಮುಂಕೊಂಡನು
ಭಾವಶುದ್ಧದೊಳಾ ಉದ್ಯಾನದಿ || ೧೬
೬೩. ಪೋಷಿಸೈನೇಮೀಶಜಿನಪನೇ
ರಾಗ: ಕೇತಾರಗೌಳ ತಾಳ: ರೂಪಕತಾಳ
ಪೋಷಿಸೈ ನೇಮೀಶ ಜಿನಪನೇ ತವ ದಾಸಜನರ ಬಹು
ದೋಷರಹಿತ ಶ್ರೀಶವಿನುತ ಭಾಸುರಾಂಗ ವಾಸವಾರ್ಚಿತ || ಪಲ್ಲವಿ
ಎಂದು ತ್ರಿದಶವೃಂದ ಸ್ತುತಿಸಲಂದು ಮನದೊಳು ಆ
ನಂದನೇಮಿಚಂದ್ರ ತಪದಿ ನಿಂದನಾ ಪೂರ್ಣೇಂದುಭಾಷ || ೧
ಆರುದಿನದಾಹಾರವಿಲ್ಲದೆ ಚಾರುತಪದಿರಲ್ ಅ
ಪಾರಮಹಿಮ ಪಾರಣೆಂಗೆ ಸಾರಿದಂ ಗಿರಿನಗರವದರ || ೨
ಅತ್ತಲಾ ವರದತ್ತನೆಂಬ ಪೃಥ್ವೀಪೋತ್ತಮ
ಸತ್ಯ ನಿಧಿಗೊಂಬತ್ತು ವಿಧದ ಭಕ್ತಿಯಿಂ ಮುದವೆತ್ತು ಪೂಜಿಸೆ || ೩
ಧರಣೀಪತಿಯ ಪರಮಭಕ್ತಿಗಿರದೆ ಮೆಚ್ಚುತಾ
ಹರುಷದಿಂದ ಹರಸು ತೆಂದ ನಿರುಪಮಸುಖ ತರದ ಬೋಧ || ೪
ಕಂತುವೈರಿಯನಂತರೋರ್ಜಯಂತಗಿರಿಯೊಳು
ಅನಂತಮಹಿಮ ನಿಂತನೇಕೋ ಚಿಂತನೆಯೊಳಾಂತು ತಪವ || ೫
ಈ ಸುಚಾತುರ್ಮಾಸ ತಪೋವಾಸನಾಗಿರಲ್
ಜಿನೇಶಘಾತಿದೋಷವೆಲ್ಲ ನಾಶಗೈದ ದಿನೇಶಭಾಸ || ೬
ಯತಿವರೇಣ್ಯ ನುತಗೆ ದಿವ್ಯ ಮತಿಯ ಪ್ರಾಪ್ತಿಸೇ
ಕ್ಷಿತಿಯ ತೊರೆದು ವ್ರತಿಪ ಗಗನಪಥದಿ ನಿಂದ ಸತತಾನಂದ || ೭
ಅರಿತನಾಗ ಸುರಪ ಬೇಗ ವರಕುಬೇರಗೆ
ತಾನೊರೆಯ ಸಮವಸರಣವನ್ನು ವಿರಚಿಸಿದನು ಪರಮ ವಿಧದಿ || ೮
ಕಾಣುತಾಮರರಾಣ್ಯ ಕೇವಲಜ್ಞಾನಪೂಜೆಯ
ಪರಮಾನುರಾಗದಿ ಧ್ಯಾನಮೂರ್ತಿಗೆ ತಾನೆಗೈದ ನಿನ್ನೇನನೆಂಬೆನು || ೯
೬೪. ಕೇಳಿಮನವೊಲಿದು
ರಾಗ: ಪೀಲು ತಾಳ: ಆದಿತಾಳ
ಕೇಳಿ ಮನವೊಲಿದು ಚಂದ್ರಪ್ರಭಸ್ವಾಮಿ ಪದವಿಯನು || ಪಲ್ಲವಿ
ಶ್ರೀ ಸುರನರನಾಗ ವಂದಿತ ಚರಣಾಬ್ಜ
ಸಾಸಿರನಾಮದೊಡೆಯಗೆ ವಂದನೆ ಮಾಡಿ ಕೇಳಿ || ೧
ಚಂದ್ರನಾಥನ ಪಂಚಕಲ್ಯಾಣವನು ಪೇಳ್ವೆ
ಚಂದದಿಂದೇಳು ಭವಗಳು ಸಹಿತವಾಗಿ || ೨
ವರಪುಷ್ಕರದ್ವೀಪದ ಪೂರ್ವ ಮಂದರ
ದುರುತರಪರವಿದೇಹ ಮಧ್ಯದೊಳಿಹ || ೩
ಸೀತೋದಾನದಿಯುತ್ತರ ಗಂಧಿಲದೊಳು
ಸಾತಿಶಯಕೆ ನೆಲೆಯೆನಿಸಿದ ಶ್ರೀಪುರ || ೪
ಆ ಪುರದಧಿಪತಿ ಶ್ರೀಷೇಣನೆಂಬಗೆ
ಚಾಪಲನೇತ್ರೆ ಶ್ರೀಕಾಂತೆ ವಲ್ಲಭೆಯಾಗಿ || ೫
ರಾಜ್ಯಭಾರವನನುಭವಿಸುತಲನುದಿನ
ರಾಜನೊಪ್ಪಿದನು ಶಚಿಯ ಪತಿಯಂದದಿ || ೬
ಪುತ್ರನ ಪಡೆಯಬೇಕೆಂದು ದಂಪತಿಗಳು
ಚಿತ್ತಶುದ್ಧದಲಿ ಜಿನೇಂದ್ರನ ಪೂಜಿಸೆ || ೭
ಶ್ರೀವರ್ಮನೆಂಬ ಕುವರನುದಯಿಸಿದನು
ಸಾರ್ವಭೌಮಗೆ ಸಮನೆನಿಸಿ ಸುಖದೊಳಿರೆ || ೮
ಶ್ರೀಪ್ರಭತೀರ್ಥೇಶ್ವರನ ಸಮವಸೃತಿ
ಆ ಪುರದುದ್ಯಾನವನಕೆ ಬರಲು ಕೇಳಿ || ೯
ಸುತ್ರಾಮನಂದದಿ ಶ್ರೀಷೇಣರಾಜನು
ಪುತ್ರಸಹಿತ ಪೋಗಿ ಜಿನರಿಗೊಂದನೆ ಮಾಡಿ || ೧೦
ತತ್ತ್ವೋಪದೇಶವ ಕೇಳಿ ರಾಜೇಂದ್ರಗೆ
ಚಿತ್ತಶುದ್ಧದೊಳು ನಿರ್ವೇಗಪುಟ್ಟಿತು ಮತ್ತೆ || ೧೧
ಜಿನವಚನವ ಕೇಳಿ ಶ್ರೀವರ್ಮಕುವರಗೆ
ಜನಿಸಿತು ಹೃದಯದಿ ಘನತರಸಮ್ಯಕ್ತ್ವ || ೧೨
ಜಿನರಿಗೊಂದನೆ ಮಾಡಿ ಮರಳಿ ಸಂಭ್ರಮದಿಂದ
ಅನಿಮಿಷಪತಿಯಂದದಿ ಪುರವನು ಪೊಕ್ಕು || ೧೩
ಪಟ್ಟವ ಕಟ್ಟಿ ಶ್ರೀವರ್ಮಕುಮಾರಗೆ
ಇಟ್ಟು ಮುಕ್ತಿಯ ರಮಣಿಗೆ ಮನವನು ರಾಜ || ೧೪
ಶ್ರೀಪ್ರಭತೀರ್ಥೇಶ್ವರನ ಸನ್ನಿಧಿಯೊಳು
ಪಾಪವ ಕೆಡಿಸುವ ದೀಕ್ಷೆಯ ಧರಿಸಿದ || ೧೫
ಇತ್ತಲು ಶ್ರೀವರ್ಮ ಸಕಲಸಾಮ್ರಾಜ್ಯವ
ನೊತ್ತಿ ಆಳುವ ಆಷಾಢಪೌರ್ಣಮಿಯೊಳು || ೧೬
ಘನತರವಾಗಿ ಜಿನರ ಪೂಜೆಯ ಮಾಡಿ
ಅನಶನವನು ಮಾಡಿಕೊಂಡು ರಾತ್ರಿಯ ಕಾಲ || ೧೭
ಸೌಧವನೇರಿ ಕುಳ್ಳಿರೆ ಸತಿಯರುಗೂಡಿ
ಔದಾರ್ಯಶೀಲನು ಕಂಡುಳ್ಕಪಾತವ || ೧೮
ಮನದೊಳು ವೈರಾಗ್ಯ ಜನಿಸಿತು ನೃಪತಿಗೆ
ತೃಣವೆಂದು ತಿಳಿದನು ಸಕಲಸಂಪದಗಳ || ೧೯
ಶ್ರೀಕಾಂತನೆಂಬ ಕುವರಗೆ ರಾಜ್ಯವ ಕೊಟ್ಟು
ಸ್ವೀಕರಿಸಿದನು ದೀಕ್ಷೆಯ ತೀರ್ಥಂಕರಲ್ಲಿ || ೨೦
ಶ್ರೀ ಪ್ರಭರಿಯೊಳು ಪ್ರತಿಮಾಯೋಗದಿ ನಿಂದು
ಪಾಪಹರನು ಸಮಾಧಿ ಮರಣದಿಂದ|| ೨೧
ಸೌಧರ್ಮಕಲ್ಪದೊಳಗೆ ಜನಿಯಿಸಲಾಗ
ಶ್ರೀಧರನೆಂಬ ನಾಮವನು ಧರಿಸಿದನು|| ೨೨
ಅಣಿಮಾದಿಗುಣ ಮೊದಲಾದ ಸುಖದೊಳಿರ್ದ
ಅನಿಮಿಷಗಾಯು ಸಂಪೂರ್ಣವಾಗಲು ಇತ್ತ|| ೨೩
ಧಾತಕಿಖಂಡ ದಕ್ಷಿಣದಿಷುಕಾರದ
ಖ್ಯಾತಿಗೆ ಪೂರ್ವದ ಭರತಾವನಿಯೊಳು|| ೨೪
ಅಲಕಾಖ್ಯವಿಷಯದ ಮಧ್ಯದೊಳಿರುತಿಹ
ಅಲಕಪುರಕೆ ಸಮವೆನಿಸಿ ಅಯೋಧ್ಯೆಯ || ೨೫
ಅಜಿತಂಜಯನೆಂಬರಸಗೆ ವಲ್ಲಭೆ
ಅಜಿಸೇನೆಯು ತಾನು ಸುಖದೊಳಗಿರುತಿರೆ|| ೨೬
ಪುತ್ರಾರ್ಥವಾಗಿ ಜಿನರ ಪೂಜೆಯ ಮಾಡಿ
ಸುಪ್ತಿಯೊಳಿರೆ ಶುಭಸ್ವಪ್ನವ ಕಂಡಳು|| ೨೭
ಶ್ರೀಧರದೇವ ಬಂದುದರದಿ ನೆಲಸಿರ್ದು
ಭೂಧರಧೈರ್ಯನು ಶುಭದಿನದೊಳು ಪುಟ್ಟಿ || ೨೮
ಪುತ್ರನಿಗಜಿತಸೇನನು ಎಂಬ ನಾಮವ
ಸುಪ್ರಸಿದ್ಧದಿ ಕರೆದನು ರಾಜೇಂದ್ರನು|| ೨೯
ಶುಕ್ಲಪಕ್ಷದ ಚಂದ್ರನಂದದಿ ಬೆಳೆಯಲು
ವಿಕ್ರಮಿಯಾಗಿರುತ್ತಿರಲೊಂದು ದಿನದೊಳು|| ೩೦
ಬಂದು ಸ್ವಯಂಪ್ರಭಜಿನರ ಸಮವಸೃತಿ
ನಿಂದುದಶೋಕವನದೊಳು ವಾರ್ತೆಯ ಕೇಳಿ|| ೩೧
ಇಂದ್ರವೈಭವದಿಂದ ಪೋಗಿ ರಾಜೇಂದ್ರನು
ವಂದನೆಯನು ಮಾಡಿ ಧರ್ಮತತ್ತ್ವವ ಕೇಳಿ|| ೩೨
ನಿರ್ವೇಗಪರನಾಗಿ ಬಂದು ಕುಮಾರಗೆ
ಸರ್ವಸಾಮ್ರಾಜ್ಯವನಿತ್ತು ಕೇವಲಿಯಾದ|| ೩೩
ಅಜಿತಸೇನನು ಚಕ್ರಧರನಾಗಿ ಕೀರ್ತಿಯ
ತ್ರಿಜಗದೊಳಗೆ ಪಸರಿಸುತ ಸುಖದೊಳಿರೆ|| ೩೪
ಒಂದಾನೊಂದು ದಿವಸ ಮನೋಹರವೆಂಬ
ಚಂದದುದ್ಯಾನವನಕೆ ಗುಣಪ್ರಭಜಿನ || ೩೫
ಬಂದರು ಎಂಬ ವಾರ್ತೆಯ ಕೇಳಿ ಪೋಗಿ ತಾ
ವಂದನೆಯ ಮಾಡಿ ಭಕ್ತಿ ಪೂರ್ವಕದಿಂದ || ೩೬
ತನ್ನ ಭವವ ಕೇಳಿ ನಿರ್ವೇಗಪರನಾಗಿ
ಸನ್ನುತ ಜಿತಶತ್ರುವಿಗೆ ರಾಜ್ಯವ ಕೊಟ್ಟು || ೩೭
ದೊರೆಗಳ ಒಡಗೂಡಿ ಸಂಯಮಧುರನಾಗಿ
ಇರುತಿರೆ ಗಗನತಿಲಕವೆಂಬ ಗಿರಿಯೊಳು || ೩೮
ಸನ್ಯಾಸನ ವಿಧಿಯಿಂದ ತನುವ ಬಿಟ್ಟು
ಉನ್ನತಚ್ಯುತಕಲ್ಪದೊಳಗೆ ಜನಿಸಿದನು|| ೪೦
ಮಾನಸಪ್ರವಿಚಾರ ಮೊದಲಾದ ಸುಖದೊಳು
ಅನಿಮಿಷಗಾಯು ಸಂಪೂರ್ಣವಾಗಲು ಇತ್ತ || ೪೧
ಧಾತಕಿಖಂಡದ್ವೀಪದ ಪೂರ್ವಭಾಗದ
ಸೀತಾನದಿಯ ತೆಂಕಣ ದಿಕ್ಕಿನೊಳಗಿಹ|| ೪೨
ಮಂಗಲಾವತಿಯೆಂಬ ದೇಶದೊಳಗೆ ಸರ್ವ
ಮಂಗಲನಿಗೆ ತಾ ನೆಲೆಯಾಗಿರುತಿಹ|| ೪೩
ರತ್ನಸಂಚಯವೆಂಬ ಪುರಕಧಿನಾಥನು
ರತ್ನಸಾನುವಿಗೆ ಸಮಾನಧೈರ್ಯವನುಳ್ಳ|| ೪೪
ಕನಕಪ್ರಭನೆಂಬರಸಗೆ ವಲಭೆ
ಕನಕಮಾಲೆಯ ರತಗೆಣೆಯೆನಿಪ್ಪಳು|| ೪೫
ಅವರ ಗರ್ಭದೊಳಚ್ಚುತೇಂದ್ರ ಬಂದುದಿಸಲು
ಅವನಿಗೆ ಪದ್ಮನಾಭನು ಎಂಬ ಪೆಸರಿಡೆ|| ೪೬
ನವಯೌವನ ಪಡೆದ ಪದ್ಮನಾಭಗೆ
ಯುವತಿಯಾದಳು ಸೋಮಪ್ರಭೆಯೆಂಬಳು|| ೪೭
ಪುತ್ರನುದಿಸಿದನು ಕನಕನಾಭನು ಎಂಬ
ಪುತ್ರಪೌತ್ರರುಗೂಡಿ ಸುಖದೊಳಗಿರುತಿರೆ|| ೪೮
ಒಂದು ದಿವಸದೊಳು ಪುರದುದ್ಯಾನಕೆ
ಕಂದರ್ಪವಿಜಯ ಶ್ರೀಧರಜಿನೇಂದ್ರನು|| ೪೯
ಬಂದುದ ಕೇಳಿ ರಾಜೇಂದ್ರ ಪುತ್ರರುಗೂಡಿ
ವಂದನೆಯನು ಮಾಡಿ ಧರ್ಮ ತತ್ತ್ವವ ಕೇಳಿ|| ೫೦
ನಿರ್ವೇಗಪರನಾಗಿ ಕನಕರಾಜೇಂದ್ರನು
ಉರ್ವಿಯ ಪತ್ರಗೆ ಕೊಟ್ಟು ಮುಕ್ತಿಗೆ ಸಂದ|| ೫೧
ಪದ್ಮನಾಭನು ಶ್ರಾವಕವ್ರತವನು ತಾಳಿ
ಇದ್ದನಾ ರಾಜ್ಯ ಸುಖದೊಳನವರತವು|| ೫೨
ಶ್ರೀಧರಜಿನರ ಸನ್ನಿಧಿಯಲ್ಲಿ ತತ್ತ್ವವ
ಮೇದಿನಿಪತಿ ಕೇಳಿ ನಿರ್ವೇಗ ಪರನಾಗಿ|| ೫೩
ತನುಜ ಸುವರ್ಣನಾಭನಿಗೆ ರಾಜ್ಯವ ಕೊಟ್ಟು
ಅನುಕರಿಸಿದ ನೃಪರೊಡಗೂಡಿ ದೀಕ್ಷೆಯ|| ೫೪
ಷೋಡಶ ಭಾವನೆಗಳನು ಭಾವಿಸಿ ಮುನಿ
ಕೂಡೆ ತೀರ್ಥಂಕರನಾಮವನು ಪಡೆದು ಮತ್ತೆ|| ೫೫
ಸಿಂಹನಿಷ್ಕ್ರೀಡಿತಘೋರತಪದಿ ಮುನಿ
ಸಿಂಹಸಮಾನದಿಂದಲಿ ತನುವನು ಬಿಟ್ಟು|| ೫೬
ಮುಕ್ತಿಗೆ ನೆರೆಮನೆಯೆನಿಸುವ ಪಂಚಾ
ಣುತ್ತರೆಯೊಳು ವೈಜಯಂತ ವಿಮಾನದಿ|| ೫೭
ಯುವರಾಜನೆಂಬಂತೆ ಶಿವರಾಜ ಪದವಿಗೆ ಅನು
ಭಿಸಿದನಹಮಿಂದ್ರ ಪದವಿಯನು|| ೫೮
ಮೂರು ಅಧಿಕ ಮೂವತ್ತು ಸಾಗರಕಾಲ
ಸಾರಸುಖದೊಳಿರಲಾರುದಿಂಗಳುಳಿಯಲು|| ೫೯
ಜಂಬೂದ್ವೀಪದ ಭರತಾರ್ಯಖಂಡದಿ
ಇಂಬಿನ ಚಂದ್ರಪುರವೆಂಬ ಪಟ್ಟಣ|| ೬೦
ಅಮರೇಂದ್ರನ ಪುರಕೆಣೆಯೆನಿರ್ಪುದು
ಅಮಲಗುಣನು ಮಹಾಸೇನನೆಂಬರಸನು|| ೬೧
ಆತಗೆ ಲಕ್ಷ್ಮಿಣೀದೇವಿಯೆಂಬರಸಿಯು
ಭೂತಳದೊಳು ಖ್ಯಾತಿವಡೆದ ದಂಪತಿಗಳು || ೬೨
ಉಪಮೆಯಿಲ್ಲದ ಸಂತೋಷದೊಳಿರುತಿರೆ
ಸಪವಿತ್ರ ಜಿನನುದಿಪನು ಅವಧಿಯೊಳು || ೬೩
ಇಂದ್ರಗೆ ತೋರೆ ಕುಬೇರಗೆ ಬೆಸಸಲು
ಚಂದದ ರತ್ನವೃಷ್ಟಿಯ ಕರೆಯೆನುತಲಿ || ೬೪
ಗರ್ಭಕೆ ಬರಲಾರುದಿಂಗಳು ಮೊದಲಾಗಿ
ನಿರ್ಭರಭಕ್ತಿಯಿಂದಲಿ ಕುಬೇರನು || ೬೫
ಮೂರುವರೆಯು ಕೋಟಿ ರತ್ನವೃಷ್ಟಿಗಳನು
ಮೂರು ಸಂಜೆಯೊಳು ರಾಜೇಂದ್ರನಂಗಣದೊಳು || ೬೬
ಈ ಪರಿಯಲಿ ರತ್ನವೃಷ್ಟಿಯಗರೆಯಲು
ಆ ಪುರಜನಕೆ ಸಕಲಸಂಪದವಾಗೆ || ೬೭
ಇಂದ್ರನ ಬೆಸನದಿ ಶ್ರೀದೇವಿ ಮೊದಲಾಗಿ
ಬಂದು ಲಕ್ಷ್ಮಿಣೀದೇವಿಗೊಂದನೆಯನು ಮಾಡಿ || ೬೮
ಗಂಗಾನದಿ ಮೊದಲಾಗಿ ಜಲಗಳನು
ಗಾಂಗೇಯಕುಂಭದೊಳಗೆ ತೀವಿ ತಂದಾಗ || ೬೯
ಅಭಿಷೇಕವ ಮಾಡಿ ಲಕ್ಷ್ಮಿಣೀದೇವಿಗೆ
ಅಭಿಮತಸಿದ್ಧಿಯು ನಮಗಾಗಲಿಯೆಂದು || ೭೦
ದಿವ್ಯಾಂಬರವನುಡಿಸಿ ಕೊಂಡಾಡುತ
ದಿವ್ಯಭೂಷಣಗಳನಿಟ್ಟು ದೇವಿಯರೆಲ್ಲ || ೭೧
ದಿವ್ಯ ಸುಗಂಧಚಂಪಕಪುಷ್ಟಮಾಲೆಯ
ದಿವ್ಯದೇಹನ ತಾಯ ಮುಡಿಗೆ ಮುಡಿಸಿದರು || ೭೨
ಕಣ್ಣಿಗಂಜನವಿಟ್ಟು ಕಮಲವಾಸಿನಿಯರು
ಚೆನ್ನೆಯ ನೊಸಲಿಗೆ ತಿಲಕವನಿಟ್ಟರು || ೭೩
ಛತ್ರವನೆತ್ತಿ ಡಾಳಿಸುತ ಚಾಮರಗಳ
ಮುತ್ತಿನ ಸೇಸೆಯನಿಕ್ಕಿ ನಮಿಸಿದರು || ೭೪
ನಿತ್ಯನರ್ತನವಾದ್ಯ ನೂತನಗಳ ಜಿನ
ಮಾತೆಯ ಮುಂದೆ ತೋರುತ ಸಂಭ್ರಮದಿಂದ || ೭೫
ಜಿನನುದಿಸುವ ಪರ್ಯಂತರ ಮಾತೆಯ
ಅನವರತವು ಸೇವೆಯ ಮಾಡುತಲಿರೆ || ೭೬
ಚೈತ್ರ ಬಹುಳ ಪಂಚಮಿಯಂತ್ಯಜಾವದಿ
ಮಾತೆಕಂಡಳು ಷೋಡಶ ಸ್ವಪ್ನಗಳನು|| ೭೭
ಮಂದಗಮನೆಯೆದ್ದು ಮಜ್ಜನವನು ಮಾಡಿ
ಚಂದದಾಭರಣವ ತೊಟ್ಟು ಸಂಭ್ರಮದಿಂದ || ೭೮
ಮಂಡಲೇಶ್ವರಗೆ ತಾ ಕಂಡ ಸ್ವಪ್ನವ ಪೇಳೆ
ಮಂಡೆಯ ತಡೆವುತ ಜಿನಪನಿನ್ನುದರದಿ || ೭೯
ಜನಿಸುವನೆಂದು ರಾಜೇಂದ್ರ ಪೇಳಲು ಕೇಳಿ
ಮನದೊಳು ಘನತರ ಹರುಷವ ತಾಳಿರೆ || ೮೦
ಮುನ್ನ ಪೇಳಿದ ಅಹಮಿಂದ್ರದೇವನು ಬಂದು
ಚೆನ್ನೆ ಲಕ್ಷ್ಮಿಣೀದೇವಿಯುದರದಿ ನೆಲಸಲು || ೮೧
ಗರ್ಭಾವತರಣಕಲ್ಯಾಣವ ಸುರಪತಿ
ನಿರ್ಭರಭಕ್ತಿಯಿಂದದಲಿಮಾಡಿ ಪೋದನು || ೮೨
ಪಳುಕಿನ ಕೊಡದೊಳಗಿರುವ ಸೊಡರಿನಂತೆ
ಬೆಳೆವುತ ತ್ರಿಜ್ಞಾನಿ ಮಾತೆಯುದರದಿ || ೮೩
ನವಮಾಸವು ತುಂಬೆ ಸುರಪತಿಯರು ಬೇಗ
ಭುವನದೊಳಗೆ ಸಡಗರಗೊಳಿಸುತಲಾಗ || ೮೪
ಪುಷ್ಯಬಹುಳ ಏಕಾದಶೀ ದಿನದೊಳು
ನಿಷ್ಕಲಂಕನು ಜಿನಚಂದ್ರನುದಿಸಿದನು || ೮೫
ಇಂದ್ರಗಾಸನಕಂಪವಾಗಲವಧಿಯಿಂದ
ಇಂದುವರ್ಣದ ಜಿನನುದಯವ ತಿಳಿದನು || ೮೬
ಉರಗಲೋಕದ ಶಂಖ ಸುರಲೋಕದ ಘಂಟೆ
ವರಜ್ಯೋತಿರ್ಲೋಕದೊಳಗೆ ಸಿಂಹನಾದದಿ || ೮೭
ವ್ಯಂತರಲೋಕದೊಳಗೆ ಭೇರೀಧ್ವನಿಯಿಂದ
ಕಂತು ವಿಜಯಜಿನನುದಯವ ತಿಳಿದರು || ೮೮
ನಾಲ್ಕು ವಿಧದ ದೇವಗಣವ ಬರಿಸಿ ಬೇಗ
ನಾಕಪತಿಯು ಶಚೀಸಹಿತಗಜವನೇರಿ || ೮೯
ಬಂದು ಶ್ರೀ ಚಂದ್ರಪುರದ ರಾಜೇಂದ್ರನ
ಅಂದವಾಗಿಹ ರಾಜಾಂಗಣದೊಳು ನಿಲೆ || ೯೦
ಇಂದ್ರನ ಸತಿ ಗೃಹವನು ಪೊಕ್ಕು ಕಂಡಳು
ಚಂದ್ರನ ಬಿಂಬದಿಂದತಿಶಯ ಶಿಶುವನು || ೯೧
ಬಲಗೊಂಡು ಮಾತೃಸಹಿತ ಜಿನಶಿಶುವನು
ಅಲಘು ಭಕ್ತಿಯೊಳು ವಂದಿಸಿ ಇಂದ್ರಾಣಿಯು || ೯೨
ನಿದ್ರೆಯ ಬರಿಸಿ ಮಾಯದ ಶಿಶುವನು ಇಟ್ಟು
ಶುದ್ಧಚಿತ್ತದಿ ಜಿನಬಾಲಕನನು ಎತ್ತಿ || ೯೩
ತನುವನು ಆ ಶಿಶುಪಾದಕ್ಕೆ ಫಣೆಯಿಟ್ಟು
ಅನುರಾಗದಿಂ ತಂದು ಪತಿಗೆ ಶಿಶುವ ಕೊಡೆ || ೯೪
ಇಂದ್ರ ತೆಗೆದುಕೊಂಡು ಕಂದರ್ಪವಿಜಯನ
ಚಂದವ ನೋಡಿ ಪಾದಕ್ಕೆ ಫಣೆಯನಿಟ್ಟು || ೯೫
ದೇವಸಭೆಯು ಜಯಜಯವೆಂದು ನಮಿಸಲು
ದೇವಲೋಕದ ವಾದ್ಯಗಳರವ ಮೊಳಗಲು || ೯೬
ಗಜದ ಸ್ಕಂಧಕ್ಕೆ ಶಿಶುವನು ಬಿಜಮಾಡಿ
ಭುಜದಿಂದ ತಾಳಿಕೊಂಡನು ದೇವೇಂದ್ರನು || ೯೭
ಬತ್ತೀಸ ಮುಖವನು ಧರಿಸಿ ಗಜೇಂದ್ರನು
ಮತ್ತೆ ಒಂದೊಂದು ಮುಖಕೆ ದಂತಗಳೆಂಟು || ೯೮
ಒಂದೊಂದು ದಂತಕೆ ಕಮಲಸರೋವರ
ಒಂದು ಸರಸಿಗೆ ಬತ್ತೀಸ ಸರೋಜವು || ೯೯
ಒಂದು ಸರೋಜಕೆ ಮೂವತ್ತೆರಡು ದಲ
ಒಂದು ದಲಕೆ ಮೂವತ್ತೆರಡು ನರ್ತಕಿಯರು || ೧೦೦
ಕಮಲದಲವ ಮುಟ್ಟದೆ ನರ್ತಿಸುತಿರೆ
ಅಮಲಗುಣಗಳ ಪಾಡುತ ಜಿನಚಂದ್ರನ || ೧೦೧
ಈಶಾನೇಂದ್ರನು ಆತಪತ್ರವನೆತ್ತಿ
ಸಾಸಿರನಾಮದೊಡೆಯ ಜಿನಶಿಶುವಿಗೆ || ೧೦೨
ಮೇಗಣೆರಡು ಇಂದ್ರರು ಚಾಮರಗಳ
ರಾಗದಿ ಡಾಳಿಸುತಿರೆ ಎಡಬಲದೊಳು || ೧೦೩
ಈ ಪರಿಯಲಿ ನಭದಲಿ ಸಂಭ್ರಮದಿಂದ
ಆ ಪರಮೇಶನ ಜನ್ಮಾಭಿಷೇಕಕೆ || ೧೦೪
ಉತ್ತರಮುಖವಾಗಿ ನಡೆದು ಮೇರುವಿಗಾಗಿ
ಉತ್ತಮಪಾಂಡುಕ ವನಕೆ ತೆರಳಿದರು || ೧೦೫
ಈಶಾನದಿಕ್ಕಿನ ರತ್ನಗಂಬಲವೆಂಬ
ಭಾಸುರ ಪಾಂಡುಕ ಶಿಲೆಯ ಮೇಲೊಪ್ಪುವ || ೧೦೬
ರತ್ನನಿರ್ಮಿತದಭಿಷೇಕದ ಪೀಠದಿ
ರತ್ನತ್ರಯವನುಳ್ಳ ಜಿನಶಿಶುವನು ಇಟ್ಟು|| ೧೦೭
ತಂದರು ಪದಿನಾಲ್ಕು ನದಿಗಳ ಜಲವನು
ಇಂದ್ರಪ್ರತೀಂದ್ರರು ಕಲಶಾರ್ಚನೆ ಮಾಡಿ || ೧೦೮
ನಿಂದರು ಜಿನಶಿಶುವಿನ ಎಡಬಲದೊಳು
ತಂದು ಕೊಡಲು ಕಲಶಗಳ ಕಲ್ಪೇಂದ್ರರು || ೧೦೯
ಮಂಗಲವಾದ್ಯ ಮೊಳಗಲು ಜಿನೇಂದ್ರಗೆ
ಮಂಗಲದಭಿಷೇಕವ ತೊಡಗಿದರಾಗ || ೧೧೦
ಎಂಟು ಯೋಜನದಗಲದ ಕುಂಭಗಳಿರೆ
ಒಂದೊಂದು ಯೋಜನಮುಖದ ವಿಸ್ತಾರವು || ೧೧೧
ಈ ಪರಿಯಲಿ ಸ್ವರ್ಣಘಟಗಳ ನಿರ್ಮಿಸಿ
ಆ ಪಂಚಮಾಬ್ಧಿಯ ಪರ್ಯಂತ ಸುರಸಂಘ || ೧೧೨
ಈ ತೆರದೊಳು ನಿಂದು ಸಕಲಸಂಭ್ರಮದಿಂದ
ಒತ್ತಿ ಕ್ಷೀರವ ಮೊಗೆಮೊಗೆದು ಸುರರು ತಂದು || ೧೧೩
ಇಂದ್ರ ಪ್ರತೀಂದ್ರರ ಹಸ್ತದೊಳಗೆ ಕೊಡೆ
ಸಂದಣಿಸಿದರು ಸಹಸ್ರ ತೋಳುಗಳನು || ೧೧೪
ಭಾಜನಂಗಳು ಕಲ್ಪತರುಗಳೊ ಎಂಬಂತೆ
ಸೋಜಿಗವಾಯಿತು ನೋಡುವ ಸುರರ್ಗೆಲ್ಲ || ೧೧೫
ದೇವಲೋಕದ ಸರ್ವವಾದ್ಯವು ಮೊಳಗಲು
ದೇವಸಭೆಯು ಜಯಜಯವೆಂದು ನಮಿಸಲು || ೧೧೬
ಕ್ಷೀರವರ್ಣದ ಶಿಶುವಿಗೆ ದೇವೇಂದ್ರನು
ಕ್ಷೀರಾಭಿಷೇಕವ ಮಾಡುತಲಿರಲಾಗ || ೧೧೭
ಮೇರುವಿನಿಂದ ಭೋರೆಂದು ಪಾಲಿಳಿಯಲು
ತೋರಿ ರಜತ ಗಿರಿಯೊ ಎಂಬಂದದಿ || ೧೧೮
ಈ ಪರಿಯಿಂದಭಿಷೇಕವಾಗಲು ಮತ್ತೆ
ಪಾಪಹರಗೆ ಗಂಧಾಭಿಷೇಕವ ಮಾಡಿ || ೧೧೯
ಅಷ್ಟವಿಧದ ವಸ್ತುಗಳಿಂದ ಪೂಜಿಸಿ
ಅಷ್ಟಕರ್ಮವ ಕೆಡಿಸುವ ಜಿನಶಿಶುವನು || ೧೨೦
ದಿವ್ಯಜಲಗಳಿಂದ ತನುವ ಪ್ರಕ್ಷಾಲಿಸಿ
ದಿವ್ಯವಸನದಿಂದೊರಸಿ ದಿವ್ಯಾಂಗವ || ೧೨೧
ಅನಿಮಿಷೇಂದ್ರನ ಸತೀ ಶಚೀಮಹಾದೇವಿಯು
ಅನುರಾಗದಿಂ ನೇತ್ರಗಳಿಗೆ ಕಜ್ಜಲವಿಟ್ಟು || ೧೨೨
ಬೊಟ್ಟುನಿಟ್ಟಳು ಜಿನಶಿಶುವಿನ ಫಣೆಯೊಳು
ಇಟ್ಟು ಮಸ್ತಕದೊಳು ರತ್ನದ ಶಿಖಿಯನು || ೧೨೩
ರತ್ನದ ಬಾಲದೊಡಿಗೆಯ ತೊಡಿಸಿದಳು
ರತ್ನತ್ರಯವನುಳ್ಳ ಜಿನಬಾಲಕನಿಗೆ || ೧೨೪
ಇಂದ್ರನು ಸಾಸಿರ ನೇತ್ರವ ಪಡೆದು ತಾ
ಚಂದವ ನೋಡಬೇಕೆಂದು ನೋಡಿದ ಮತ್ತೆ || ೧೨೫
ಕಂದರ್ಪವಿಜಯನೆ ಕರುಣಸಮುದ್ರನೆ
ಇಂದುವರ್ಣದ ಕಾಯವನುಳ್ಳ ಜಿನಪನೆ || ೧೨೬
ಭವ್ಯಾಬ್ಜಮಿತ್ರನೆ ಭವಭಯಹರಣನೆ
ಅವ್ಯಯಸುಖವನು ಪಡೆವ ಜಿನೇಂದ್ರನೆ || ೧೨೭
ಕರುಣಾಬ್ಧಿಚಂದ್ರನೆ ಕರ್ಮವಿದೂರನೆ
ಕರುಣಿಸು ನನಗೆ ನಿನ್ನಂಥ ಪದವಿಯನು || ೧೨೮
ಈ ಪರಿಯಲಿ ಪಾಡುತ ನೃತ್ಯವನಾಡಿ
ಪಾಪಹರನ ಪಾದಕೆರಗಿ ಸುರೇಂದ್ರನು || ೧೨೯
ಸುರವಾರಣವನೇರಿಸಿಕೊಂಡು ಶಿಶುವನು
ಸುರಗಿರಿಯನು ಬಲಗೊಂಡು ಪುರಕೆ ಬಂದು || ೧೩೦
ಜನನೀಜನಕರ್ಗೆ ಜಿನಕುವರನ ತೋರಿ
ಅನಿಮಿಷಪತಿ ಸಿಂಹಪೀಠದೊಳಗೆ ಇಟ್ಟು || ೧೩೧
ಪುರಜನ ಮೊದಲಾದ ಬಂಧುಜನಗಳನು
ಬರಿಸಿ ಸಂಭ್ರಮದಿಂದ ಅವರ ಮನ್ನಣೆ ಮಾಡಿ || ೧೩೨
ಚಂದ್ರನ ಕಾಂತಿಯಿಂದಧಿಕವಾಗಲು ದೇಹ
ಚಂದ್ರಪ್ರಭನೆಂಬ ನಾಮವನಿಟ್ಟನು || ೧೩೩
ಯತಿಗಣವಂದ್ಯನೆ ಸುರಸ್ತೋಮ ತಿಲಕನೆ
ಕ್ಷಿತಿಯೊಳು ಧರ್ಮಾಮೃತವನುಗರೆವವನೆ || ೧೩೫
ಮಂಗಲರೂಪನೆ ಅಮಲಶರೀರನೆ
ತುಂಗಮುಕ್ತಿಯ ಸುಖವನು ಕೊಡು ನನಗೆಂದು || ೧೩೬
ಆನಂದನರ್ತನವನ್ನು ಆಡಿ ಸುರಪತಿ
ಸಾನುರಾಗದಿ ಜಿನರಿಗೆ ವಂದನೆ ಮಾಡಿ || ೧೩೭
ಬಾಲಕ್ರೀಡೆಗೆ ತಕ್ಕ ಬಾಲಸುರರನಿಟ್ಟು
ಬಾಲಕಜಿನಪನ ತಾಯಿತಂದೆಗೆ ಕೊಟ್ಟು || ೧೩೮
ಚಂದ್ರನಾಥನಿಗೆ ಸಕಲದೇವೇಂದ್ರರು
ವಂದಿಸಿ ಜಯಜಯಘೋಷಣೆಯನ್ನು ಮಾಡಿ || ೧೩೯
ಅಮರೇಂದ್ರನು ತನ್ನ ಅಮರಗಜವನೇರಿ
ಅಮರರೊಡನೆ ಕೂಡಿ ಅಮರಲೋಕಕೆ ಪೋದ || ೧೪೦
ಬಾಲಕಾಲವು ಸಲೆ ಸಕಲಸಾಮ್ರಾಜ್ಯವ
ನಾಳುತ್ತ ಸುಖದೊಳಗಿರಲೊಂದು ದಿನದೊಳು || ೧೪೧
ರನ್ನಗನ್ನಡಿಯ ನೆಳಲ ನೋಡಿ ಜಿನಪತಿ
ತನ್ನ ಮನದೊಳು ವೈರಾಗ್ಯವ ತಾಳಿದ || ೧೪೨
ಲೌಕಾಂತಿಕದೇವರು ಬಂದು ಬೋಧಿಸೆ
ಲೋಕವಂದ್ಯಗೆ ವೈರಾಗ್ಯ ಹೆಚ್ಚಿಸಿ ಪೋಗೆ || ೧೪೩
ವರಚಂದ್ರನೆಂಬವನಿಗೆ ರಾಜ್ಯವ ಕೊಡೆ
ಸುರಪತಿ ದೇವಸಮೂಹಸಹಿತ ಬಂದು || ೧೪೪
ಪರಮೋತ್ಸವದಿಂದ ಪರಮಜಿನೇಂದ್ರಗೆ
ಪರಿಷ್ಕ್ರಮಣ ಕಲ್ಯಾಣಪೂಜೆಯ ಮಾಡಿ || ೧೪೫
ವಿಮಲೆಯೆಂದೆಂಬ ಪಲ್ಲಕ್ಕಿಯೇರಿಸಿ ಕೊಂಡು
ಅಮರರು ಸಹ ಸರ್ವತ್ರ ವನಕೆ ಪೋಗಿ || ೧೪೬
ಇಂದ್ರನು ರತ್ನದ ಪಡಲಿಗೆಯೊಳಗಾಂತು
ಪೊಂದಿಸಿದನು ಕ್ಷೀರಾಂಬುಧಿಯೊಳು ಬೇಗ || ೧೪೮
ಪೌಷೀಯ ಕೃಷ್ಣಪಕ್ಷದ ಏಕಾದಶಿಯೊಳು
ಸಾಸಿರ ಅರಸುಗಳೊಡನೆ ಸಂಯಮಿಯಾಗೆ || ೧೪೯
ವಾಸವಪತಿ ಮೊದಲಾಗಿ ನಮಿಸಿ ತಮ್ಮ
ವಾಸಕೆಪೋದರು ಜಯಜಯವೆನುತಲಿ || ೧೫೦
ಷಷ್ಟೋಪವಾಸಪಾರಣೆಗೆ ನಳೀಯೆಂಬ
ಪಟ್ಟಣಕ್ಕಾಗಿ ಭಾವರಿಯಿಡೆ ಜಿನಪತಿ || ೧೫೧
ಸೋಮದತ್ತನು ಎಂಬ ನೃಪನರಮನೆಯೊಳು
ಸ್ವಾಮಿಗೆ ಪಾರಣೆಯಾಗಲು ನಭದಿಂದ || ೧೫೨
ಪಂಚಾಶ್ಚರ್ಯವಾಯಿತು ಯೋಗ್ರೀಂದ್ರನು
ಚಂಚಲರಹಿತ ಯೋಗದಿ ನಿಲ್ಲೆ ವನದೊಳು || ೧೫೩
ಮೂರು ತಿಂಗಳು ಛದ್ಮಸ್ಥಕಾಲದಿ ಮೌನ
ಧರರಾಗಿರುತಿರೆ ತಪದೊಳು ಜಿನರು || ೧೫೪
ಧರ್ಮಧ್ಯಾನಗಳಿಂದ ಕರ್ಮವ ಸಡಿಲಿಸಿ
ನಿರ್ಮಲಶುಕ್ಲಧ್ಯಾನದಿ ಘಾತಿಗಳ ಸುಟ್ಟು || ೧೫೫
ಪಾವನಫಾಲ್ಗುಣಶುದ್ಧ ಸಪ್ತಮಿಯೊಳು
ಕೇವಲಜ್ಞಾನವಾಯಿತು ಜಿನಚಂದ್ರಗೆ || ೧೫೬
ಭೂಮಿಯಿಂದೈದು ಸಾಸಿರಬಿಲ್ಲಿ ನಂತರ
ಸ್ವಾಮಿ ಚಂದ್ರಪ್ರಭ ಗಗನದೊಳಿರಲಾಗ || ೧೫೭
ಇಂದ್ರನು ಬೆಸಸಿದಂದದಿ ಕುಬೇರನು
ಚಂದದ ಸಮವಸರಣವ ರಚಿಸಿದನು || ೧೫೮
ಸಾಸಿರದೆಂಟು ಎಸಳನುಳ್ಳ ಕಮಲವ
ಭಾಸುರಮೂರ್ತಿ ನಾಲ್ವೆರಳು ಸೋಂಕದೆ ನಿಂದು || ೧೫೯
ಇಂದ್ರನು ದೇವಸಮೂಹಸಹಿತ ಬಂದು
ವಂದಿಸಿ ಕೇವಲಜ್ಞಾನ ಪೂಜೆಯ ಮಾಡಿ || ೧೬೦
ಸಾಸಿರದೆಂಟು ನಾಮಗಳಿಂದ ಸ್ತುತಿಯಿಸಿ
ವಾಸವಪತಿ ಸಾಷ್ಟಾಂಗವೆರಗಿದದನು || ೧೬೧
ಅಷ್ಟಾದಶದೋಷರಹಿತ ಜಿನೇಂದ್ರನು
ಅಷ್ಟಮಹಾಪ್ರಾತಿಹಾರ್ಯ ಸಹಿತವಾಗಿ || ೧೬೨
ದ್ವಾದಶಗಣಪತಿವೃತನಾಗಿ ಜಿನರಾಜ
ದ್ವಾದಶಾಂಗವನುಪದೇಶವ ಮಾಡುತ || ೧೬೩
ಅಂಗವಂಗಾದಿದೇಶಗಳ ವಿಹಾರದಿ
ಮಂಗಲಧರ್ಮಾಮೃತವನು ಕರೆಯುತ || ೧೬೪
ಈ ಪರಿಯಿಂದ ಬಹುಕಾಲ ಸಂಚರಿಸಲು
ಪಾಪರಹಿತವಾಯ್ತು ಭವ್ಯಜನರಿಗೆಲ್ಲ || ೧೬೫
ಸಮವಸರಣವನು ತ್ಯಜಿಸಿ ಮುನಿಗಣಗೂಡಿ
ಅಮರೇಂದ್ರವಂದ್ಯನಘಾತಿ ಕೆಡಿಪೆನೆಂದು || ೧೬೬
ಸಮ್ಮೇದಗಿರಿಯೊಳು ಸಿದ್ಧಶಿಲೆಯ ಮೇಲೆ
ನಿರ್ಮಲಶುಕ್ಲಧ್ಯಾನವನು ಧ್ಯಾನಿಸುತಲಿ || ೧೬೭
ಒಂದು ತಿಂಗಳು ಪರಿಯಂತರ ಜಿನಪತಿ
ನಿಂದು ಪ್ರತಿಮಾಯೋಗದ ಕಡೆಯೊಳು ಮತ್ತೆ || ೧೬೮
ದಂಡ ಕವಾಟ ಪ್ರತರ ಪೂರಣೆಯಿಂದ
ಖಂಡಿಸಿ ಕ್ಷಣದೊಳಘಾತಿಕರ್ಮಗಳನ್ನು || ೧೬೯
ಫಾಲ್ಗುಣಶುದ್ಧ ಸಪ್ತಮಿಯಪರಾಹ್ನದಿ
ಪಾಲ್ಗಡಲನು ಮಿಂದ ಸ್ವಾಮಿ ಮುಕ್ತಿಗೆ ಸಂದ || ೧೭೦
ಗೀರ್ವಾಣಪತಿ ಸುರಸಮಿತಿಸಹಿತ ಬಂದು
ನಿರ್ವಾಣಕಲ್ಯಾಣವನು ಮಾಡಿ ಪೋದನು || ೧೭೧
ಶ್ರೀವರ್ಮ ಶ್ರೀಧರ ದೇವ ಅಜಿತಸೇನ
ದೇವ ಅಚ್ಚುತಕಲ್ಪದ ಪದ್ಮನಾಭನೆ || ೧೭೨
ಕ್ಷೇಮದಿ ವೈಜಯಂತದ ಅಹಮಿಂದ್ರನೆ
ಸ್ವಾಮಿ ಚಂದ್ರಪ್ರಭ ಕೊಡು ಮುಕ್ತಿಪದವಿಯ || ೧೭೩
ಧರೆಯೊಳಧಿಕವಾದ ಸಿಂಹಪುರದಿ ನಿಂದ
ವರಚಂದ್ರಪ್ರಭಜಿನರ ಸನ್ನಿಧಿಯೊಳು || ೧೭೪
ಸೇನಗಣಾಂಬರ ದಿನಕರನೆನಿಸಿದ
ಭೂನುತಲಕ್ಷ್ಮೀಸೇನಮುನಿಯ ಶಿಷ್ಯ || ೧೭೫
ಚಂದ್ರಸಾಗರವರ್ಣಿ ಪೇಳಿದನೀ ಪದ
ಚಂದ್ರಸೂರ್ಯರ ಕಾಲಪರ್ಯಂತಿರಲೆಂದು || ೧೭೬
Leave A Comment