ದುಂದುಮೆ ಕೇಳ್ರಿ ದುಂದುಮೆ | ಪಲ್ಲ |
ಚಂದಾದಿ ಕೇಳಿರಿ ಕಂದುಗೊರಳ ಭಕ್ತ ಮ
ಲ್ಲೇಂದ್ರನು ಗಂಧ ಸಿಂಧುರವಾಹನ
ನೆಂದು ಮರ್ತ್ಯದಲ್ಲಿ ಶಿವಕೃಪೆಯಿಂದ ಜನಿಸಿ
ಬಂದು ರಾಜಿಸವಂಥ ದೇವೇಂದ್ರನು ೧
ಛಪ್ಪನ್ನ ದೇಶದೊಳೊಪ್ಪುವ ಕಿತ್ತೂರ
ಮುಪ್ಪಿನ ಮಡಿವಾಳ ಸ್ವಾಮಿಯರ
ಸರ್ಪಭೂಷಣ ಶಿವಭಕ್ತ ಮಲ್ಲೇಂದ್ರರ
ತಪ್ಪದೆ ಸಲಹುವಾ ಶಿವಶಂಕರ ೨
ಅರಸು ಮಲ್ಲೇಂದ್ರನ ಬರವನು ಕಂಡು
ಧರೆಯೊಳು ಕಿತ್ತೂರ ಪುರದೊಳು ದಂಡು
ಮೂರು ಪಂಚೇರಿನ ತೋಫಿನ ಗುಂಡು
ಅದರ ವಿಸ್ತಾರವು ಪರಿಪರಿದಂದು ೩
ಛತ್ರಾಮರ ನಿತ್ಯ ಆನೆಯಂಬಾರಿ
ಚಿತ್ರದ ಪಾಲಕಿ ಸುತ್ತ ವಿಸ್ತಾರ
ಮುತ್ತಿನ ಪಾಲಕೆ ಹತ್ತುವರಾರು
ಸತ್ಯುಳ್ಳ ಮಲ್ಲೇಂದ್ರ ಭೂಪನೆಂಬವರು ೪
ಸರಳಗಟ್ಟಗೆ ಸಾಲು ಕುದುರೆಯ ಮುಂದ
ನಿವಳಾಗಿ ಮುರ್ಛಾಲು ಎಡಬಲದಿಂದ
ಭೂವರ ಮಲ್ಲೇಂದ್ರ ಬರುವದು ಚಂದ
ವರ ಪುಣ್ಯ ವಿಸ್ತಾರ ಹೇಳುವೆ ಮುಂದ ೫
ಶಿವಪೂಜೆ ಸಂಭ್ರಮ ಕೇಳಿರೆಲ್ಲಾರು
ತಾವರೆ ಪುಷ್ಪವು ಮೂರು ಸಾವಿರು
ದೇವರ ಅಭಿಷೇಕ ಪರಿಪರಿ ಕ್ಷೀರು
ದೇವ ಸೇವೆ ಮಾಡುವಂಥ ಶರಣಾರು ೬
ಪರಸ್ತ್ರೀಯರೆಲ್ಲರು ತಾಯಿ ಸಮಾನ
ಪತಿವ್ರತ ಆಚಾರ ನಡಿಸುವ ನೇಮ
ಶರಧಿಯ ಧರಿಸಿದ ಭಕ್ತನ ಗ್ನಾನ
ಗುರುಸಿದ್ಧ ಚರತಿಯ ಗುರುವಿನ ಧ್ಯಾನ ೭
ಆಷಾಢ ಮುಂದಿನ ಮಾಸದ ಭಕ್ತಿ
ಲೇಸಾಗಿ ಪೇಳುವೆ ಕೇಳಿರಯ್ಯ
ಸಾಸಿರ ಸಾಕು ಕಡೆಮನಿ ವಿಲಕ್ಷಣ
ಭಿಕ್ಷೆ ನೀಡುವಂಥ ಭಕ್ತ ಕಾಣಯ್ಯ ೮
ಶ್ರಾವಣ ಮಾಸದಿ ಭಕ್ತಿಯ ನೋಡು ದೈವ
ಜಂಗಮ ಕೂಡಿ ಸಾವಿರ್ಹನ್ನೆರಡು
ಭವ ಶುದ್ಧ ಆಶೀರ್ವಾದ ಕೊಂಡು
ಭೂವರ ಮಲ್ಲೇಂದ್ರ ವರ ಪುಣ್ಯಗಾರ
ಸಿರವೈದು ಉಳ್ಳಾನ ದಯ ಪರಿಪೂರ ೧೦
ಚೆನ್ನಿಗ ಚೆಲ್ವಿ ಭಕ್ತ ಪ್ರತಾಪ
ಪುಣ್ಣೇದ ಶ್ರೀಮಂತ ಕೇಳಿದಾ ಭೂಪ
ಮಾನ್ಯ ಮಾನ್ಯರೊಳು ನುಡಿದ ಶ್ರೀಮಂತ
ಆನೆ ನೆರಳ ಭೂಪ ಭೋಗ ಸುರಪ ೧೧
ಕಿತ್ತೂರ ನಗರಕ್ಕೆ ಹೋಗಿ ಬಾರೆಂದು
ಮುತ್ತಿನ ಮಾಲೆಯ ಸರವನು ತಂದು
ಸತ್ಯಸುವಿಚಾರನಂದು ಅಚ್ಚ ಹೊನ್ನಿನ
ಹತ್ತುಸಾವಿರ ದ್ರವ್ಯ ಹಾರಿಸುಯೆಂದ ೧೨
ಪಟ್ಟದ ಹಿರಿಬಾಜೀರಾಯನು ಬೇಗ
ಶ್ರೇಷ್ಠ ಕಾರಭಾರಿ ಮಾಣಿಕೇಶ್ವರನಾಗ
ಸೃಷ್ಟಿಯೊಳಗೆ ಕಿತ್ತೂರರಸಿನ ಈಗ
ಎಷ್ಟು ಹೇಳಲಿ ಅವರ ಪುಣ್ಯವಿಂದಿಗೆ ೧೩
ಕಾರ್ತಿಕಸ್ವಾಮಿ ಬೆಟ್ಟ ನೆವವ ಮಾಡಿ
ಹೊರಟಾನು ಮಣಿದು ಶಹರವ ಬಿಟ್ಟು
ಆರ್ತಿಯ ಎಡಬಲ ನಿತ್ಯದಿ ಪೊಗಲಾರು
ಗುರುತದ ಬಲಹೊಸ್ತು ಅಭಯವ ಕೊಟ್ಟು ೧೪
ರಸ್ತೆ ಮಾಧವರಾಯ ಬಂದನು ಪುಂಡ
ವಿಸ್ತಾರದಿ ಅಲ್ಲೆ ತಂದನು ದಂಡ
ಹಸ್ತಿ ಕುದುರೆ ಮಂದಿ ಕೂಡಿತು ಹಿಂಡ
ಮಸ್ತದಿ ಸಾಲಾಗಿ ನಡೆದ ಪ್ರಚಂಡ ೧೫
ಹೊರಟಿತು ಐವತ್ತು ಸಾವಿರ ಫೌಜು
ಪಟವರ್ಧನರೆಡಬಲ ಬಂದರು ಬಾಜು
ಆನೆ-ಕುದುರಿ-ಒಂಟಿ ಕಟ್ಟೀತು ರೇಜು
ತಾನೊಂದು ಶ್ರೀಮಂತ ಮಾಡಿದ ಮೋಜು ೧೬
ಪಂಢರ ಪುರದೊಳು ಕೂಡಿತು ದಂಡು
ಮಂಡಲ ಕುದುರೆಯ ದೂಡಿತು ದಂಡು
ಹೆಂಡರ ಮಕ್ಕಳನಾ ಕೂಡಿಕೊಂಡು
ಝಂಡೆಗಟ್ಟಿತು ಹಿರಿಹೊಳಿಯೊಳು ದಂಡು ೧೭
ನಾಲ್ಕಾರು ದಿನ ಅಲ್ಲಿ ಛಾವಣಿ ಮಾಡಿ
ಏಕಚಿಂತಾಮಣಿರಾಯನ ಕೂಡಿ
ಪಂಕ್ತಿಯ ಜೋಡಿ ಹೋಳಿಗಿ ತುಪ್ಪಾ ನೀಡಿ
ರೊಕ್ಕರೂಪಾಯಿ ವರ ಭಿಕ್ಷಾವ ಮಾಡಿ ೧೮
ಅಪ್ಪ ದೇಸಾಯಿ ತಾ ಬಂದಾನು ಧೀರ
ತೋಪು ತಂದಾನು ನೋಡುತ ಹದಿನಾರ
ಅಪ್ಪ ನಿಪ್ಪಾಣಿಯ ಅವ ಶಮಶೇರ
ಒಪ್ಪಿತು ಫೌಜವು ಹತ್ತು ಸಾವಿರ ೧೯
ನಣದಿಗೀ ಹಳ್ಳಕ ಇಳಿಸಿದ ತಂದು
ಖಣಖಣ ದ್ರವ್ಯ ನಿವಾಳಿಸಿ ನಿಂದು
ಹಣಗಳ ಸೂರಿಮಾಡಿದ ಬಾಳೊಂದು
ಜಾಣ ದೇಸಾಯಿ ಅಪ್ಪಾಸಾಹೇಬನಂದು ೨೦
ಎಲ್ಲಾರು ಒಂದಾಗಿ ಮುಂದಕೆ ಸಾಗಿ
ನಿಲ್ಲದೆ ಗೋಡ್ಗೇರಿಗೆ ಇದಿರಾಗಿ
ಬಲ್ಲಿದ ಚಂದಿರ ಗುಣವತಿ ಸಾಗಿ
ಇಲ್ಲೆ ಬಂದಿಳದೀತು ಹೊಂಗಲಿಗೆ ೨೧
ಹೊಂಗಲ ಪುರದೊಳು ಕಂಡಾನು ತೋಟ
ಮಂಗಲಕರವಾಗಿ ಕಂಡೀತು ನೋಟ
ಶೃಂಗಾರ ವನದೊಳು ಹಾಕಿದ ಊಟ
ಗಾಂಗೇಗೆ ಶ್ರೀಮಂ ಆಡಿದ ಆಟ ೨೨
ಒಂದು ದಿನ ಅಲ್ಲಿ ಛಾವಣಿ ಮಾಡಿ
ಮುಂದಕ್ಕೆ ಕೆರೀಪಾಳೆವ ನೋಡಿ
ಬಂದಿತು ಬಾಜೀರಾಯನ ದಳಗೂಡಿ
ಚೆಂದದಿ ಕುದುರೆಯ ರಥಗಳ ಹೂಡಿ ೨೩
ಮರುದಿನ ಹೊತ್ತೇರಿ ಇಳಿವಿದ ದಂಡು
ಬೆರಗಾದ ಬಾಜೀರಾಯ ಪ್ಯಟಿಕಂಡು
ಹರದಾರಿ ಅಂಗಡಿ ಜವಳಿಯ ದಿಂಡು
ಕರೆದು ದೈವದವರ ಸೆಟ್ಟರ ಹಿಂಡು ೨೪
ಎಲ್ಲ ದೈವಕೆ ಕೊಂಡೆಸೆದ ವಸ್ತ್ರಪಾತ್ರಗಳ
ನಿಲ್ಲದೆ ನುಡಿಸಿದ ಭೇರಿ ಕಹಳೆಗಳ
ಅಲ್ಲಿಂದ ಸೊಂಡೂರ ದೇವ ಯತಿಗಳ
ಬಲ್ಲೀದ ಕಾರ್ತಿಕಸ್ವಾಮಿ ಜಾತ್ರೆಗಳ ೨೫
ಪಾರ್ವತೀ ಪುತ್ರನ ಕಂಡು ಶ್ರೀಮಂತ
ಪರ್ವತ ಗಿರಿಯನು ಹತ್ತಿದ ಸಮರ್ಥ
ಉರಗ ಭೂಷಣರೂಪ ಕಾರ್ತಿಕ ಕರ್ತ
ಬೇಕೆಷ್ಟು ಧರ್ಮ ಮಾಡಿದ ಬಾಳರ್ಥ ೨೬
ಬಾಜೀರಾಯನು ಭಕ್ತಿ ಮಾಡಿದ ಬಾಳ
ಮೂಜಗದೊಡೆಯನು ಮುಂದೆ ಧರ್ಮಗಳ
ರಾಜೇದ ಬ್ರಹ್ಮರಿಗೆ ಅನ್ನದಾನಗಳ
ಪೂಜೆಗಟ್ಟಿದ ಮುತ್ತುಮಾಲೆ ರತ್ನಗಳ ೨೭
ಅಕ್ಷರ ಮೂರುಳ್ಳ ಶಿಖರಕ್ಕೆ ಒಂದು
ಲಕ್ಷವರದ ಕಳಸ ಇಟ್ಟಾನು ತಂದು
ಸಾಕ್ಷಿ ತಾ ಕಾರ್ತಿಕೇಶ್ವರಗ ಮತ್ತೊಂದು
ಅಪೇಕ್ಷ ಮಾಡಿದ ಸುತರು ಬೇಕೆಂದು ೨೮
ಪುತ್ರನ ಬಯಸಿದನು ಬಾಜೀರಾಯ
ಕಾರ್ತಿಕೊಜ್ರ ಉಡುಗರೆ ತುರಾಯ
ಪ್ರಾರ್ಥನೆ ಮಾಡಿದ ಭಕ್ತಿ ಸಾರಾಯ
ಪರ್ವತ ಗಿರಿಯಿಂದ ಇಳಿದ ಮಹಾರಾಯ ೨೯
ರಂಗಮಂಟಪ ಚಂದ್ರ ಸತಿಗೆ ಪರಮ
ಭಂಗಾರ ಕಳಸ ಹೊಳೆವ ದೇವಾರವ
ಗಂಗಾಧರನ ವರಪುತ್ರನ ಕರವ
ಮಂಗಲ ಪದವಿಯ ಕೊಡುವನು ವರವ ೩೦
ಹಂಪಸಾಗರ ನಡೆದು ಗೂಡೂರ ದಾಟಿ
ಕೆಂಪು ಕನಕಗಿರಿಯ ಹೊಸ ಪ್ಯಾಟಿ
ಅಪರಿಮಿತವಾದ ಬಾಗಡ ಕೋಟಿ
ತಪ ದೂರವಾಯಿತು ಖಾದಿಯ ಕೋಟಿ ೩೧
ಬೂದಿಹಾಳದ ಆಚಾರಿಯ ಕಂಡು
ಬಾದಾಮಿಯ ತಳದೊಳು ಇಳಿಸಿದ ದಂಡು
ಆ ದಿನ ಶರಣರ ಬೆಟ್ಟಿ ತಕ್ಕೊಂಡು
ಹೋದಾನು ದೀಕ್ಷಿತರ ಪಾದಕ್ಕೆಯೆಂದು ೩೨
ಗುರ್ಲಹೊಸೂರ ಹೊಕ್ಕ ಶ್ರೀಮಂತ
ಆರು ಮೂರು ತಾಸು ಹರುಷಾಗಿ ನಿಂತ
ಧರೆಯೊಳು ದೀಕ್ಷಿತರ ಪಾದ ಪವಿತ್ರ
ಭರ್ಜರಿ ತಸರೀಪ ಕೊಡಿಸಿದ ವಸ್ತ್ರ ೩೩
ಕಿತ್ತೂರ ಮಲ್ಲೇಂದ್ರ ಭೂಪನು ಕೇಳಿ
ಹತ್ತು ಸಾವಿರ ಮಂದಿ ಹಿಡಿಸಿದ ಕಾಳಿ
ಅತ್ತಿ ನೀಲವ್ವಗ ದುಃಖವ ಪೇಳಿ
ಪುತ್ರರ ಜೋಕೆಂದು ಧೈರ್ಯವ ತಾಳಿ ೩೪
ಅತ್ತಿಯ ಪಾದಕ್ಕೆ ವಂದನೆ ಮಾಡಿ
ಸತ್ಯುಳ್ಳ ತಾಯಿ ನೀಲವ್ವನ ಕೊಂಡಾಡಿ
ಬಂತವ್ವ ಶ್ರೀಮಂತ ಬಾಜೀರಾಯ ನೋಡಿ
ಇರಬೇಕು ಸತಿಯರು ಪ್ರೀತಿಂದ ಕೂಡಿ ೩೫
ಹಿರಿಯ ಬಾಪುಸಾಹೇಬನ ಕರೆದ ಮಲ್ಲೇಂದ್ರ
ಮರಗಬ್ಯಾಡ ನನ್ನ ಮಗನೆ ದೇವೇಂದ್ರ
ಬರತೀನಿ ಕೇಳೊ ಬೇಗನೆ ಅಮರಸುಂದ್ರ
ಶರಿರಕೊಪ್ಪುವ ಮುಖ ಸೂರ್ಯಚಂದ್ರ ೩೬
ಬರೆಸಿದ ಅರಮನಿ ಬಂದರ ಬದಕ
ವರ ವಜ್ರಮುತ್ತು ಮಾಣಿಕ ದೊಡ್ಡ ಪದಕ
ಹರುಷದಿ ಗಳಿಸಿದ ಅರಮನಿ ಬದಕ
ಕರೆದು ಒಪ್ಪಿಸಿದನು ಬಾಪುಸಾಹೇಬನ ಜರಕ ೩೭
ಆನೆ ಕುದುರೆ ಮಂದಿ ತೋಪೆಲ್ಲ ತರಿಸಿ
ನೀನು ಸಲಹು ಎಂದು ಹಸ್ತಾವ ಇರಿಸಿ
ಜ್ಞಾನುಳ್ಳ ಬಾಪುಸಾಹೇಬನ ಹರಸಿ
ಅನುವಾಗಿ ಮಗನಿಗೆ ಬುದ್ಧಿಯ ಸುರಿಸಿ ೩೮
ಚಿಕ್ಕ ತಮ್ಮರೊಳು ಪ್ರೀತಿಲಿ ಕೂಡಿ
ಅಕ್ಕರದಿಂದಲ್ಲಿ ಕೂಡಿ ಮಾತಾಡಿ
ಮಕ್ಕಳು ನೀವಿಬ್ಬರೂ ಒಡಗೂಡಿ
ದುಕ್ಕ ಸೈರಿಸೋ ನಿನ್ನ ಹಡೆದಾಕಿ ನೋಡಿ ೩೯
ಸತಿಯ ಚನ್ನವ್ವನ ಪ್ರೀತಿಯ ಗಂಡ
ಅತಿ ದುಃಖ ಮಾಡಿದ ಮಲ್ಲೇಂದ್ರ ಪುಂಡ
ಸತಿಯಾರು ಭೂಮಿಗೆ ಹೊರಳಿದ್ದು ಕಂಡ
ಪತಿ ಮಲ್ಲೇಂದ್ರಭೂಪ ತಾನೆತ್ತಿಕೊಂಡ ೪೦
ಅಳಬೇಡ ನೀ ನನ್ನ ಕಳ್ಳುಳ್ಳ ಸತಿಯೆ
ಎಳೆಯ ಮಕ್ಕಳ ಮ್ಯಾಲ ಇರಬೇಕು ರತಿಯ
ಬಳಗಕ್ಕೆ ಕುಡುತಲಿ ನೀ ಮೇಲ್ಮತಿಯ
ಬಾಳಲೋಚನ ಶಿವಪಾದವೆ ಗತಿಯ ೪೧
ರಾಜಲಕ್ಷ್ಮಿ ಆಳಿಕೊಂಡಿರು ನೀನು
ಬಾಜೀರಾಯನ ಕೂಡ ಹೋದೇನು ನಾನು
ಮೋಜೀನ ಹಿರಿಯತ್ತಿ ನೀಲವ್ವನು
ಭುಜಬಲ ಐದಾನು ಬಾಪುಸಾಹೇಬನು ೪೨
ಮಡದಿ ಕರೆದುಅತ್ತಿಕೈಯೊಳು ಕೊಟ್ಟು
ನಡುವಿನ ಪುತ್ರನ ಕರಕೊಂಡು ಹೊಂಟು
ಗಡೆ ಕಿಲ್ಲೆದೊಳು ಶಿವಬಸಪ್ಪನ ಇಟ್ಟು
ಎಡಬಲ ಮಕ್ಕಳೊಳು ನೀನು ಶ್ರೇಷ್ಠ ೪೩
ಗುರುಪುತ್ರ ವೀರಪ್ಪಗ್ಹೇಳಿದ ಬುದ್ಧಿ
ಬರೆಬರೆದು ಕಳಸಯ್ಯ ಅರಮನಿ ಸುದ್ದಿ
ಪರದಂಡು ಬಂದರ ಹಾಕೈ ಗುದ್ದಿ
ಕರೆದು ಹೇಳಿದನು ಕುರುಬರಿಗೆ ಬುದ್ಧಿ ೪೪
ಅರಮನಿ ಅಂಗಳ ಹೊರೆಯಕ್ಕ ಬಂದು
ವರಪುತ್ರ ಬಾಪುಸಾಹೇಬನ ಕರೆತಂದು
ಹಿರಿಯಳ ವಾಕ್ಯವ ಮೀರಬೇಡೆಂದು
ಗುರುತದ ವಚನವ ತಕ್ಕೊಂಡ ನೊಂದು ೪೫
ಆರು ಸಾವಿರ ಫೌಜು ಕೂಡಿ ಮಲ್ಲೇಂದ್ರ
ಸ್ವಾರಿ ಹೊಂಟಿತು ಅಮರಾವತಿಯ ದೇವೇಂದ್ರ
ಏರಿದನಾನೆ ಅಂಬಾರಿಯ ನಂದ
ಭರದಿಂದ ಹೊಂಗಲಕ ಬಂದ ಮಲ್ಲೇಂದ್ರ ೪೬
ಹರಿಭಕ್ತ ಬಾಜೀರಾಯನು ಸಾಗಿ
ಮರಿಹಾಳ ದಾಟಿ ಇಳಿದಾನು ಹೋಗಿ
ದೊರೆ ಮಲ್ಲಸರ್ಜನು ತಾ ಇದಿರಾಗಿ
ಪರಿಗಟ್ಟಿ ನಿಂತಾನು ತಾ ಚಲುವಾಗಿ ೪೭
ಕಿತ್ತೂರ ದೇಸಾಯಿ ಬಂದದ್ದು ಕಂಡು
ಹಂತೇಲಿದ್ದವರನ್ನು ತಾ ಕರೆಸಿಕೊಂಡು
ಉತ್ತರದೇಶಕ್ಕೆ ನಡೆಸಿದ ದಂಡು
ಸತ್ಯುಳ್ಳ ಬೆಳಗಾವಿ ಕಿಲ್ಲೇವ ಕಂಡು ೪೮
ಪುಣೇದ ಮಾರ್ಗವ ಹಿಡಿಸಿದ ಫೌಜು
ಮಾನ್ಯ ಮಾನ್ಯರೆಡಬಲ ಬಂದರು ಬಾಜು
ಆನಿ ಕುದುರಿ ಒಂಟಿ ಕಟ್ಟೀತು ರೇಜು
ತಾನೊಂದು ಶ್ರೀಮಂತ ಮಾಡಿದ ಮೋಜು ೪೯
ಎಡೆಯೂರ ಕೃಷ್ಣನ ಹೊಳೆಯೊಳಗೆಲ್ಲ
ಬೆಡದೆ ನಮ್ಮವರಿಗೆ ಮಾಡಿದ ಗುಲ್ಲ
ನಡುನಾಡ ಹೊಂಗಲದೊಳು ಬರಲಿಲ್ಲ
ಗೌಡ ಶೇಗುಣಿಸಿ ತಾ ಬಂದಾನಲ್ಲ ೫೦
ಮುಂದಕೆ ಮಿರ್ಜಿಯ ಪುರವನು ದಾಟಿ
ತಂದನು ಶೇಗುಣಿಸಿ ಗೌಡನು ಚೀಟಿ
ಚಂದುಳ್ಳ ತುರಾಯಿ ಮುತ್ತಿನ ಕಂಟಿ
ಮೂರುಸಾವಿರ ಬಿದ್ದ ಜರದ ದುಪ್ಪಟ್ಟಿ ೫೧
ಅಲ್ಲಪ್ಪಗೌಡನು ಹೇಳಿದ ವಾರ್ತಿ
ಬಲ್ಲೀದ ಕಿತ್ತೂರ ದೊರೆಗಳ ಕೀರ್ತಿ
ಎಲ್ಲರೊಳಗೆ ದಯ ಇರಬೇಕು ಪೂರ್ತಿ
ಮಲ್ಲಸರ್ಜಗ ರೊಕ್ಕ ಇಲ್ಲೆಂದ ಕೊರ್ತಿ ೫೨
ಶ್ರೀಮಂತ ನುಡದಾನು ಗೌಡನ ಜೋಡ
ಜುಮೇದಾರನಾಗಿ ಒಗೆದಾನು ನಾಡ
ಬ್ರಹ್ಮರು ಮರು ಒಗತಾನ ಮಾಡಿದ ಕೇಡ
ನಮ್ಮ ಜೋಯಿಸರ್ನ ಬಡಿತಾನ ನೋಡ ೫೩
ಸರಕಾರ ಎದುರಿನ ಬಾಕಿಯ ರಸ್ತಾ
ದರಕಾರ ಇಲ್ಲೆಂದು ಇಟ್ಟುಕೊಂಡ ಸ್ವಸ್ತಾ
ಹಿರಿಮಾಣಿಕೇಶ್ವರನೊಳು ಮಾಡಿದ ಕಸ್ತಾ
ದೊರೆ ಮಲ್ಲಸರ್ಜನು ಮಾಡಿದ ಮಸ್ತಾ ೫೪
ಬಾಕಿಯ ನಕಾರು ಲಕ್ಷವ ಹೊರಿಸಿ
ಹಾಕಿದ ಅಲ್ಲಪ್ಪ ಕತಬಿಯ ಬರಿಸಿ
ವಕೀಲ ಮಾಡಿದ ರಸ್ತಾವ ತರಿಸಿ
ಜೋಕಿಲೆ ಹೇಳಿದ ಮಲ್ಲಸರ್ಜನ ಕರಸಿ ೫೫
ಆರು ಲಕ್ಷಕ ಗೌಡ ಜಾಮೀನ ಆದ
ವೀರಪ್ಪ ದೇಸಾಯಿ ಭೇಟಿಗೆ ಹೋದ
ಶೂರ ಬಾಜೀರಾಯ ಕೇಳಿದ ಭೇದ
ಬಾರೆಂದು ಹಸ್ತವ ಪಡದವನಾದ ೫೬
ಮಲ್ಲೇಂದ್ರ ಮಗನಿಗೆ ವಸ್ತ್ರವ ಕೊಡಿಸಿ
ನೆಲ್ಲಿಕಾಯಂಥ ಮುತ್ತುಗಳಿಡಿಸಿ
ಅಲ್ಲಾಬ ಜರತರ ಡಗಲಿಯ ತೊಡಿಸಿ
ಜಲ್ಲಿ ಸತ್ತಿಗಿ ಮುತ್ತಿನ ಗೊಂಡೆ ವಹಿಸಿ ೫೭
ಮಲ್ಲೇಂದ್ರ ಮಗನಿಗೆ ಮೆಚ್ಚಿ ಶ್ರೀಮಂತ
ಪಾಲಕಿ ಚಾಮರ ಹಿಡಿಸಿದ ಛತ್ರ
ಇಲ್ಲಿಂದ ತಿರುಗಿ ನೀ ನಡೆಯಲೊ ಪುತ್ರ
ಬಲ್ಲೀದ ಶ್ರೀಮಂತ ಹೇಳಿದ ಉತ್ರ ೫೮
ಕಿತ್ತೂರ ದೊರೆಗಳಿಗೆ ಅಪ್ಪಣೆ ಕೊಟ್ಟು
ಉತ್ತಮ ಬಾಜೀರಾಯನು ದಯವಿಟ್ಟು
ಕುತ್ತೀಗಿ ಕೋದು ಹಿಂದಕ ತಾ ಹೊಂಟು
ಮತ್ತೊಂದು ಗೌಡ ಮಾಡಿದ ಬುದ್ಧಿ ಕೆಟ್ಟು ೫೯
ಆರು ಲಕ್ಷಕ ಎನ್ನ ಜಾಮೀನ ಕೊಟ್ಟು
ದಾರಿಯೊಳ್ಹಿಂದಕ್ಕೆ ತಿರುಗಿದಿ ಹೊಂಟು
ಬಾರಯ್ಯ ಶ್ರೀಮಂತ ಸ್ವಾರಿಯ ಗುಂಟ
ಬರುವಂತೆ ಶ್ರೀಮಂತಗೊಸ್ತ್ರವ ಕೊಟ್ಟ ೬೦
Leave A Comment