ಮಣಿಯಲೆನ್ನ ಶಿರವು ನಿನ್ನ
ಚರಣಧೂಳಿತಲದಲಿ.
ನನ್ನ ಅಹಂಕಾರವೆಲ್ಲ
ಮುಳುಗಲಶ್ರುಜಲದಲಿ!
ನನಗೆ ನಾನೆ ಪೂಜೆಗೈಯೆ
ಸೊಡರನೆತ್ತಲು
ಬೆಳಕು ಬರುವ ಬದಲು ಅಯ್ಯೊ
ಬರಿಯ ಕತ್ತಲು!
ಅಹಂಕಾರದಂಧಕಾರ
ಮುತ್ತುತಿದೆ ಸುತ್ತಲು!
ನನ್ನ ನಾನೆ ಮೆರೆಯದಂತೆ
ನಾನು ಗೈವ ಕರ್ಮದಿ
ನಿನ್ನ ಇಚ್ಛೆ ಪೂರ್ಣವಾಗ –
ಲೆನ್ನ ಜೀವಧರ್ಮದಿ.
ತಳೆಯಲೆನ್ನ ಜ್ಞಾನ ನಿನ್ನ
ಚರಮಶಾಂತಿಯ;
ಬೆಳಗಲೆನ್ನ ಪ್ರಾಣ ನಿನ್ನ
ಪರಮಕಾಂತಿಯ.
ನನ್ನನಳಿಸು, ನೀನೆ ನೆಲಸು
ಹೃದಯಪದ್ಮದಲದಲಿ!
೧೯೩೦ – ೧೯೩೧
* ರವೀಂದ್ರರ ಕವನವೊಂದರ ಅನುವಾದ.
Leave A Comment