ಶ್ರೀ ಗುರುದೇವನಿಗೆರಗುವೆನು;
ಗುರು ಚರಣದಲಿ ನಾ ಕರಗುವೆನು!
೧
ಸರ್ವಧರ್ಮಗಳ ವಾರಿಧಿಗೆ,
ಪುಣ್ಯದ ಸುರನದಿಗೆ,
ಬ್ರಹ್ಮಾನಂದ ಮಹೋದಧಿಗೆ,
ಶಾಂತಿಯ ಚಿರನಿಧಿಗೆ,
ಕತ್ತಲೆಯವನಿಗೆ
ಬೆಳಕಿತ್ತವನಿಗೆ
ಪರಮಹಂಸ ಗುರುದೇವನಿಗೆ!
೨
ದಕ್ಷಿಣೇಶ್ವರದ ಗುಡಿಯಲ್ಲಿ
ತಿರು ತಾಯಡಿಯಲ್ಲಿ
ವರ ವಟವೃಕ್ಷದ ಬುಡದಲ್ಲಿ
ಗಂಗೆಯ ದಡದಲ್ಲಿ
ಬಂಧವನೊಡೆದ
ಮುಕ್ತಿಯ ಪಡೆದ
ರಾಮಕೃಷ್ಣ ಗುರುದೇವನಿಗೆ!
೩
ಪರಮ ಪರಮಾವತಾರನಿಗೆ,
ಜಗದೋದ್ಧಾರನಿಗೆ;
ಶ್ರೀ ಜಗದಂಬೆಯ ಭಕ್ತನಿಗೆ,
ನಿತ್ಯ ವಿಮುಕ್ತನಿಗೆ;
ವರ ವೈರಾಗಿಗೆ,
ಪರಮತ್ಯಾಗಿಗೆ,
ಶ್ರೀ ಸಚ್ಚಿದಾನಂದಾತ್ಮನಿಗೆ!
೪
ನನ್ನೆದೆಯಲಿ ಮನೆಮಾಡಿಹಗೆ,
ಕವಿತೆಯ ನೀಡಿಹಗೆ,
ಹರಿಹರ ರೂಪದ ಪಾವನಗೆ
ವಿಶ್ವವ ಕಾವನಿಗೆ;
ಯೋಗೀಶ್ವರನಿಗೆ,
ಜಗದೀಶ್ವರನಿಗೆ,
ಶ್ರೀ ರಾಮಕೃಷ್ಣ ದೇವನಿಗೆ!
೨೭ – ೪ – ೧೯೨೯
Leave A Comment