ಶ್ರೀ ಗಿರಿಜಾ[ಸ್ಯಾಂಬುಜ ದಿನನಾಯಕ]
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||
ಶ್ರೀ ಗೌರಿ[ಯರ್ಧಾಂ]ಗ ಭಾ[ಗೀ]ರಥೀಮೌಳಿ |
ನಾಗಭೂಷಣ ಪರಮೇಶ |
ಆಗಮಾತೀತ ಪರಮ ಋಷಿಮುನಿವಂದ್ಯ
ಬೇಗದಿಂ ಕೊಡು ಮತಿಗಳನು || ೨ ||
[ದು]ಷ್ಟಾರಿಮದಭಂಗ ದುರಿತಸಂಹರ [ಶೃಂಗ]
ಸೃಷ್ಟಿಗಧಿಕ ಶಂಭುಲಿಂಗ |
ಅಷ್ಟದಿಕ್ಪಾಲಕರೊಡೆಯ ಗೌರೀಶನೆ
ಸೃಷ್ಟಿಸು ಮತಿಗೆ ಮಂಗಳವ || ೩ ||
ಸತಿಯರೊಳಗೆ ರೂಪವತಿಯ ನೆಚ್ಚಿನ ಪುಣ್ಯ
ವತಿಯಾದಳಾ ಪಾರ್ವತಿಯ |
ಕ್ಷಿತಿಯ ಜನರಿಗೆಲ್ಲ ಮತಿಯ ಕೊಡುವ ಮಾನ್ಯ
ವತಿಯುಮೆದೇವಿಯ ನೆನೆವೆ || ೪ ||
ಇಂದು ಪಾರ್ವತಿದೇವಿಗೆರಗಿ ಶ್ರೀ ಲೋಕೇಶ
ಗೊಂದಿಸಿ ವರಗಳ ಪಡೆದು |
ಚಂದದಿಂದಲಿ ಉಮೆಯಳ ನಾನು ಭಜಿಸಿ ಆ
ನಂದದಿ ಪೇಳ್ವೆನೀ ಕಥೆಯ || ೫ ||
ಲೇಪಾಕ್ಷಿಪುರವಾಸ ಲೀಲಾವಿಲಾಸನೆ
ಪಾಪಸಂಹರನೆ ಕರುಣಿಸು |
ಮಾಪತಿಯಾವಾಸ ಭದ್ರಕಾಳೀಶನೆ ಉ
ಮಾಪತಿ ಕುವರ ವೀರೇಶ || ೬ ||
ಹರನ ಮೋಹದ ಪುತ್ರ ಹರಿನೀಲಗಾತ್ರನೆ
[ಉರು]ತರಗುಣ [ಮ]ಹಾವೀರ |
ಪರಮಭಕ್ತರ ಪೋಚ ಕರುಣದಿಂದೆಮಗೆ ನೀ
ವರವ ಪಾಲಿಸು ಚೆನ್ನವೀರ || ೭ ||
ಕಾಮನ ಪೆತ್ತನೆ ಕಮಲಲೋಚನ ಸತ್ಯ
ಭಾಮೆಯರರಸ ಶ್ರೀಕೃಷ್ಣ |
ಈ ಮಹಿಯೊಳಗೆ ನಾನಾ ಜೀವಾತ್ಮನೆ
ಕಾಮಿತ ಫಲದಾಯಕನೆ || ೮ ||
ಕಲಿಯುಗದೊ[ಳ]ಗೆ ಕರ್ನಾಟದೊಳರ್ಜುನ
ಹಲವು ಶಾಪಗಳಿಂದ ಜನಿಸಿ |
ಬಲವಂತವಾಗಿನ್ನು ತಾ ಪುಟ್ಟಿ ಬರುವಂಥ
ಗೆಲುವಿನ ಕಥೆಯ ಪೇಳುವೆನು || ೯ ||
ಅಂದಿನ ಪಾರ್ಥ [ತಾ] ಇಂದಿನ ನಾಯಕ
ಬಂದು ಜನಿಸುವಂಥ ಬಗೆಯ |
ಚಂದದಿಂದೊರೆದು ಪೇಳುವೆನು ಈ ಕಥೆಯನು
ಚಂದ್ರಶೇಖರನ ವರದಿಂದ || ೧೦ ||
ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ
ಓ[ದಿ]ದಡಲಿ ತಿಳಿದಂತೆ |
ಈ ಧರೆಯೊಳಗೆಲ್ಲ ಪರನಾರಿ[ಯರಿ]ಗೆ ತಾ
ಸೋದರನೆಂಬಂಥ ಕಥೆಯ || ೧೧ ||
ಆಧಾರವಿಡಿದು ಪೇಳಿದನಾ ಗಂಗಯ್ಯ
ಈ ಧರೆಯ ವಿದ್ವಾಂಸರೊಳಗೆ |
ಸಾಧಿಸಿ ಅವರ ಸೇವಕನಾಗಿ ಪೇ[ಳ್ವೆ]ನು
ಯಾದವಸಖ ಪಾರ್ಥ ಕಥೆಯ || ೧೨ ||
ಕುಲದಲ್ಲಿ ಪೂವಲಿ ಮುಮ್ಮಡಿಸಿಂಗನು
ಬಲವಂತನಾಗೊಬ್ಬ ಶಬರ |
ಹಲವು ಕಾಲದೊಳು ಕಂಪಳಕೆ ತಾನರಸಾಗಿ
ಇಳೆಯನಾಳುತ ಇರುತಿಹನು || ೧೩ ||
ನೂರಾರು ಮಂದಿ ಕಿರಾತರ[ನೊಡಗೊಂಡು]
ಆರಣ್ಯ ಅಡವಿಯೊಳ್ ತಾನು |
ಕಾರುಣ್ಯನಿಧಿಯೆ ಕಂಪಿಲದೇವರೆಂಬುತ
ಮಾರಹರನ ಪೂಜೆಯಿಂದ || ೧೪ ||
ಸತಿಪುರುಷರು ತಾವು ಅತಿ ಹರುಷದೊಳಿರೆ
ಮತಿವಂತೆ ಮಂಚಕ್ಕನವಳು |
ಗತಿಯಿಲ್ಲ ಮುಂದೆ ಕಂಪಳಕೆಂದು ಪುತ್ರನ
ಅತಿ ಹರುಷದೊಳು ಬೇಡಿದಳು || ೧೫ ||
ಕೊಟ್ಟನು ಬಿಲ್ಲಿನ ಮೇಲಣ ಪುಷ್ಪವ
ಇಟ್ಟನು ಮುಂದಕ್ಕೆ ಹೂವ |
ಕಟ್ಟಿಕೊಂಡಳು ಸೆರಗಿಗೆ ಪ್ರಸಾದವ
ಅಷ್ಟರೊಳ್ ಗರ್ಭ ಸೂಚಿಸಲು || ೧೬ ||
ಉದಿಸಿದನೊರ್ವ ಕುಮಾರಕ ಜನಿಸಿದ
ಪೊಡವಿಯನಾಳ್ವಂತನಾಗಿ |
ಸುದತಿಯೊರ್ವಳ ಕೂಡಿ ಸುತ[ನು] ಸಾಹಸವಾಗಿ
ಸದರನೇರುವ ಮುಂದೆ ಇವನು || ೧೭ ||
ಇಂತಪ್ಪ ಪುತ್ರನುದಿಸಲು ಕಂಪಿಲನೆಂದು}
ಕಾಂತೆ ಪೆಸರನಿಟ್ಟಳಾಗ |
ಸಂತೋಷದಲ್ಲಿ ಬಾಳುತಲಿರೆ [ಕಂಪಿಲ]
ಕಂತುಹರನ ಕರುಣದಿಂದ || ೧೮ ||
ದಿನಕೊಂದು ಚೆಂದದಿ ಬೆಳೆದು ದೊಡ್ಡವನಾಗಿ
ಮನೆಯೊಳು ತಾನಿರುತಿಹನು |
ವಿನಯದಿ ಸೋದರತ್ತೆಯ ಮಗಳನು ತಂದು ಜನಕ
ಮದುವೆಯ ಮಾಡಿದನು || ೧೯ ||
ತಮ್ಮ ಮಕ್ಕಳು ತಾವು ಕೂಡಿ ಸಂತೋಷದಿ
ಹೊಂದಿದ ಶಬರರು ಸಹಿತ |
ಕಂದರ್ಪದಹ ಪರಮಾತ್ಮನ ಕೃಪೆಯಿಂದ
ಚೆಂದದಿ ಬಾಳುತಲಿಹರು || ೨೦ ||
ಕೆಲವು ಕಾಲವು ಹೋದ ಬಳಿಕ ಮುಮ್ಮಡಿಸಿಂಗ
ಅಳಿದು ಹೋದನು ವೃದ್ಧನಾಗಿ |
ಬಳಿಕ ಕಂಪಿಲ ತಾನು ಹತ್ತೆಂಟು ವರುಷಾಗಿ
ಬಲವಂತನಾಗಿರುತಿರ್ದ || ೨೧ ||
ತಂದೆ ಮುಮ್ಮಡಿಸಿಂಗ ಸಂದುಹೋದ ಬಳಿಕ
ಬಂದಿತು ಬರಗಾಲ ದಿವಸ |
ಕಂದನ ಹಿಡಿಯಲಾರದೆ ಮಂಚಕ್ಕನು
ಬಂದಳು ಆ ಸ್ಥಲ ಬಿಟ್ಟು || ೨೨ ||
ಮೂಡಲದೆಸೆಯಿಂದ ಪಡುವಣ ದೇಶಕ್ಕೆ
ಕಾಡರಸಿ [ತಾ]ವಾಗ ಬರಲು |
ಕೂಡ್ಯೊಂದು ನಾಲ್ಕೆಂಟು ಮನೆಯ ಕಿರಾತರು
ಕೂಡಿ ಬಂದರು ಬಂಧುಬಳಗ || ೨೩ ||
[ಜಟ್ಟಂಗಿ] ರಾಮನ ಗಿರಿಗಾಗಿ ಬಂದರು
ಕೋಟಾಳೆ ಕಂಪಳ ಸಹಿತ |
ಕೋಟೇಶ್ವರನ ಪಾದವ ಕಂಡು ಪಡೆದರು
ಕಾಟಣ್ಣನೆಂಬಂಥ ಮಗನ || ೨೪ ||
ಮನೆದೈವವಾದನು ಜಟ್ಟಂಗಿ ರಾಮೇ[ಶ]
ಮನೆ ದೊಡ್ಡದಾ[ಯ್ತು] ಕಂಪಿಲನ |
ವನದೊಳು ಹಟ್ಟಿಯ ಹಾಕಿ ಕೆಲವು ಕಾಲ
ದಿನಗಳೆದರು ಅರ್ತಿಯಿಂದ || ೨೫ ||
ನಡುಮಲೆ ಮುಚ್ಚಾದ ಗುಡ್ಡದ ಮರೆಗಾಗಿ
ಒಡನೆ ಕಂಪಳ ಎದ್ದು ಹೋಗಿ |
ಅಡವಿಯೊಳ್ ಹಟ್ಟಿಯ ಹಾಕಿಕೊಂಡೆಲ್ಲರು
ಬಡತನದೊಳು ಇರುತಿಹರು || ೨೬ ||
ಬೇಟೆಯನಾಡುತ ಬಂದರು ಮಲೆಯೊಳು
ಮೀಟಾದ ಲೋಹಾರಿ ಗಿರಿ[ಯ]
ದಾಟುತ ಕಂಡರು ತಾರಕಸಂಹಾರಿ
ಕೋಟೀಶ್ವರನ ಪಾದವನು || ೨೭ ||
ಕಂಡಡ್ಡ ಬಿದ್ದು ಕಾಣಿಕೆಯಿಕ್ಕಿ ಫಲಗಳ
ಕಾಂಡ ಗೆಣಸು ಜೇನತುಪ್ಪ |
ಲಂಡ ಕಿರಾತರು ಕಂಪಿಲ ಸಹವಾಗಿ
ಖಂಡುಗ ಹರಕೆಯನಾಂತು || ೨೮ ||
ಅಲ್ಲಿಂದ ನಡೆದರು ಹೊಸಮಲೆ ಕಣಿವೆಗ
ಳೆಗಲ್ಲ ತಾವು ನೋಡುತಲಿ |
ಬಲ್ಲಿದರಾಗಿ ಬರಲು ಬಹು ಮಲೆಯೊಳು
ಬಲ್ಲಂತೆ ಮಾತನಾಡಿದರು || ೨೯ ||
ಸುತ್ತಣ ಅಡವಿ ಅರಣ್ಯವ ನೋಡುತ
ಒತ್ತಿ ಬೇಂಟೆಯನಾಡುತವರು |
ಕತ್ತಲೆಯೊಳು ತಮ್ಮ ಕಂಪಳಕೆ ಬಂದರು
ಹೊತ್ತು ತಂದರು ಮೃಗಗಳನು || ೩೦ ||
ಈ ರೀತಿಯಲಿ ತಾವು ಹಟ್ಟಿಯ ಮಾಡಿನ್ನು
ಸೇರಿಕೊಂಡರು ಹೊ[ಸ]ಮಲೆಯ |
ಕಾರಣ ಇವರಿಂದ ಪುಟ್ಟುವದು ಮುಂದೆ
ಪೂರಾಯವಾಯಿತ್ತು ಸಂಧಿ || ೩೧ ||
ಅಂತು ಸಂಧಿ ೧ ಕ್ಕಂ ಪದನು ೩೧ ಕ್ಕಂ ಮಂಗಳ ಮಹಾಶ್ರೀ
Leave A Comment