ಶ್ರೀಗಿರಿಜಾ[ಸ್ಯಾಂಬುಜ ದಿನ] ನಾಯಕ
ಭೋಗಿಭೂಷಣ ಭಾಳನೇತ್ರ |
ಭಾಗೀರಥಿಧರ ಭವರೋಗವೈದ್ಯನೆ
ನಾಗ[ಕುಂಡಲ] ಶರಣೆಂಬೆ || ೧ ||
ತಂದೆ ಕುದುರೆಗಳ ರಾಮಯ್ಯಗೆ ತೋರದೆ
ಅಂದೆ ಕುಮಾರರಿಗಿತ್ತ |
ಯೆಂದು ಬಗೆ[ದು ಇಂ]ತು ಕಂದ ರಾಮಯ್ಯ |
ಮುಂದೆ ವೈಹಾಳಿ ಬಯಲಲ್ಲಿ || ೨ ||
ಬಂದನು ಇದಿರಲಿ ರಾಮನಾಥನು ಆಗ
ಕುಂದದೈವರು ಕುಮಾರಕರ |
ಕೊಂದು ಗೋಳಾಡಿಸಿ ತುರಂಗಗಳ ತಂದು
ಅಂದು ಕಟ್ಟಿದ ಲಾಯದೊಳಗೆ || ೩ ||
ತುರಗವೈದನು ಕೊಂಡು ಹೋದ[ನೆ]ನುತ ಬಂದು
ವರದ ಐವರು ಕುಮಾರಕರು |
ಪುರಜನವರಿಯೆ ಒಯ್ದನು ತುರುಗವನೆಂದು
ನೆರೆದು ಹೇಳಿದರು ಕಂಪಿಲ[ಗೆ] || ೪ ||
ಹೇಳಿದ ಸುದ್ದಿಯ ಕೇಳಿ ಕಂಪಿಲರಾಯ
ತಾಳಿದ ಮನದಿ ಕೋಪವನು |
ಊಳಿಗದವರ ಕೈಲಿ ಹೇಳಿ ಕಳುಹಿಸಿ ತನ್ನ
ಬಾಲರಾಮಯ್ಯನ ಕರೆ [ಸೆ] || ೫ ||
ಏನು ಕಾರಣ ನಮ್ಮ ಕರೆಸಿದೆ ಕಂಪಿಲ
ಏನು ಊಳಿಗವು ಹೇಳೆನಲು |
ಏನ ಹೇಳಲಿ ರಾಮ ಕುವರರೈವರ ಕೊಂದು
ನೀನು ಒಯ್ದೆಂತೆ ತೇಜಿಯವನು || ೬ ||
ಚಿಕ್ಕವರನು ಕೊಂದು ಕುದುರೆಯನೊಯಿವರೆ
ತಕ್ಕುದೆ ನಿನಗೆ ಈ ಬುದ್ದಿ |
ಮಿಕ್ಕ ಮಾತೇನು ಮಕ್ಕಳ ಕೈಯಿನೊಯಿದಂಥೆ
ಅಕ್ಕರಿಂದಲಿ [ತಾ] ಬೊಲ್ಲನನು || ೭ ||
ಎಪ್ಪತ್ತಿರಾಜನ ಬೊಲ್ಲನ [ತಾಯೆಂ]ದು
ಒಪ್ಪದಿ ಕಂಪಿಲ ನುಡಿಯೆ |
ಅಪ್ಪಾಜಿ ನೀನಾಡಿದರೇನಾಯಿತು
ತಪ್ಪದ ತಹೆನು ಬೊಲ್ಲನನು || ೮ ||
ಭೇರಿ ಮೃದಂಗ ಕೈತಾಳ ತಾಳೆಯ ಕೊಂಬು
ವೀರಜಡೆಯು ಢಮಾಮಿ |
ಭೂರಿ ವಾದ್ಯಗಳ ಗಡಣದಿ ರಾಮಯ್ಯನು
ಧೀರ ನಡೆದನರ್ತಿಯಿಂದ || ೯ ||
ರಾಮಯ್ಯ ಬರುವ ಸಂಭ್ರಮ ಕಂಡು ಹರಿಯಮ್ಮ
ಪ್ರೇಮದಿಂದಪ್ಪಿ ಮುಂಡಾರಿ |
ಕೋಮಲೆಯರು ಆರತಿಯನೆತ್ತಿದರು ನಿ
ಸ್ಸೀಮನು ರಾಮನಾಥನಿಗೆ || ೧೦ ||
ಮುಂದೆ ಪೇಳುವೆನು [ಓರುಗಲ್ಲ] ಪ್ರತಾಪನ
ಕಂದ ಎಪ್ಪತ್ತಿರಾಜನನು |
ಚೆಂದದಿ ಬೊಲ್ಲನ ತರುವಂಥ ಸುದ್ಧಿಗೆ
ಇಂದೊದಗಿದವು ಪ್ರಯಾಣಗಳು || ೧೧ ||
ಓರುಗಲ್ಲಿಗೆ ಪ್ರಯಾಣ ಸಾರಿ ರಾಮಯ್ಯನು
ಸಾರಿಸಿ ಮಾನ್ಯರಿಗೆಲ್ಲ |
ಧೀರರ ಬೇಗ ಬರಹೇಳೆಂದು ಚರರನು
ಭೊರನಟ್ಟಿದನು ಕರೆಯಲ್ಕೆ || ೧೨ ||
ಎಕ್ಕಟಿಗೆ ಸಿಂಗನು ಮೀನಿಗರ ಲಕ್ಕನು
ಚಿಕ್ಕ ತಮ್ಮುಗ ಗುಜ್ಜಲೋಬ |
ರಕ್ಕಸ ಮಾದನು ಕರುವೂರ ತಿಪ್ಪನು
ಬೊಕ್ಕ ಬೋಳುಗ ಓಬುಗನು || ೨೩ ||
ಕರೆಯಲಾ ಅರಸು ರಾಮನಾಥನ ಮಾನ್ಯರು
ನೆರೆದರು ದೊರೆಯ ಇದಿರಿನಲಿ |
ತರಹೇ[ಳಿ] ನೀಲನ್ನ ಬರಹೇಳೆಕ್ಕಟಿಗರ
ದೊರೆಯು ಹೇಳಿದ [ಮ]ರುಮಾತ || ೧೪ ||
ಎಪ್ಪತ್ತು [ಎರಡು] ಮನ್ನೆಯರು ಸಹವಾಗಿ
ಒಪ್ಪದಿಂದೂರ ಹೊರಗಣ |
ಮುಪ್ಪುರವೈರಿಯ ಗುಡಿಯ ಮುಂದಿಳಿದರು
ಒಪ್ಪುವ ರಾಮಯ್ಯ ಸಹಿತ || ೧೫ ||
ಕುಮ್ಮಟದಿಂದ ಹೊರಟುಬಂದರು ಬೇಗ
ಗಮ್ಮನೆ ಕಂಪಲಿಯ ಬಳಿಗೆ |
ಉಮ್ಮಯದಿಂದ ಸೋಮೇಶಗೆ ಶರಣೆಂದು
ಎಮ್ಮಿಗನೂರು ದಾಂಟಿದರು || ೧೬ ||
ಬರುತ ಕಂಡರು ಹೊ[ಸ] ಮಲೆಯ ದುರ್ಗವ
ಉರುತರ ದೊಡ್ಡ ಬಸವನ |
ಪುರ ಕುರುಗೋಡ ಪಯಣತಿಯೊಳು ರಾಮಯ್ಯ
ಭರದಿಂದ ತನ್ನ ಮನ್ನೆಯರ || ೧೭ ||
ಕರೆದು ವೀಳ್ಯವನಿತ್ತು ಹರುಷದಿ ರಾಮಯ್ಯ
ನೆರೆಗಲಿಗಳನು ಸಂತೈಸಿ |
ಪರಿವಾರವನೆಲ್ಲ ಇರದೆ ಬೋಳೈಸುತ
ಕರೆದು ವೀಳ್ಯಗಳ ತಾ ಕೊಡಿಸಿ || ೧೮ ||
ಧರೆಯು ಭೋರೆಂಬಂತೆ ದಾರಿ ಪ್ರಯಾಣವ
ಸಾರಿ ತೆರಳಿದನು ಆ ಕ್ಷಣಕೆ |
ಗುರುವೆ ಜಟ್ಟಂಗಿ ರಾಮೇಶನೆ ಗತಿಯೆಂದು
ಗರುವ ರಾಮಯ್ಯ ವಂದಿಸಿದ || ೧೯ ||
ಕುರುಗೊಡನುಳಿದು ಮುಂದಕೆ ದಾಂಟಿ ನಡೆದರು
ಕರ[ಡಿ]ಕಲ್ಲೂರ ಮುಂದಿಳಿದು |
ಹರಿವ ನದಿಯ ದಾಂಟಿ ಬಂದನು ರಾಮಯ್ಯ ನಿ
ಬ್ಬರದಲಿ ತಾನು ನಡೆದನು || ೨೦ ||
ತೆರಳಿ ಬಂದನು ರಾಮ ಯಾದವಗಿರಿಗಾಗಿ
ಮರಳಿ ಪಾಳ್ಯವ ತಾನಿಳಿದು |
ಇರದೆ ಮಜ್ಜನಮಾಡಿ ಉಂಡು ರಾಮಯ್ಯನು
ಹರುಷದಿ ಸುಖನಿದ್ರೆಗೈದ || ೨೧ ||
ನಿದ್ರೆಗೈದೆದ್ದು ರಾಮಯ್ಯ ಜಟ್ಟಂಗಿಯ
ರುದ್ರನ ನೆನೆದು ಮನದೊಳಗೆ |
ಕ್ಷುದ್ರರಾಯರ ಗಂಡ ತೆರಳಿ ಮುಂದಕೆ [ಬ]ರೆ
ಭದ್ರವನೇನ ಪೇಳುವೆನು || ೨೨ ||
ಅದವನ್ನಿಯ ದಾಂಟಿ ಅತ್ತ ಮುಂದಕೆ ನಡೆದ
ಮೇದಿನಿ ಅರಸರನೆಲ್ಲ |
ಸಾಧಿಸೇನೆಂಬ ಬಿರುದಿನ ಕಡೆಯವನಿಟ್ಟು
ಮೂದಲಿಸುತ ತಾ ನಡೆದ || ೨೩ ||
ಅಲ್ಲಿಂದ ಮುಂದಕ್ಕೆ ನಡೆದು ಬಂದನು ಬೇಗ
ರೊಳ್ಳೆಯ ಗೊನಗೊಂದಿಗಾಗ |
ಚೆಲ್ಲವರಿದು ನಡೆದರೆಲ್ಲರೊಂದಾಗಿ
ಕಲ್ಲೂರ ಮುಂದೆ ಇಳಿದರು || ೨೪ ||
ಮಜ್ಜನ ಭೋಜನಂಗಳ ಮಾಡಿ ರಾಮಯ್ಯ
ಗುಜ್ಜರಿ ಮಂಚದ ಮೇಲೆ |
ಸಜ್ಜನ ಜನದಿಂದ ನಿದ್ರಾಂಗನೆಯೊಳು
ಬೆಜ್ಜಾರಕೆಚ್ಚರಿಕೆಯಲಿ || ೨೫ ||
ಎದ್ದನು ಮುಂದಕ್ಕೆ ತುಂಗಭದ್ರೆಯ ದಾಂಟಿ
ಉದ್ಯಾವಾರಣ್ಯಕ್ಕೆ ಬಂದ |
ಸಿದ್ಧವಟ್ಟವ ದಾಂಟಿ ಬಂದಿಳಿದನು ಬೇಗ
ಉದ್ದಗಿರಿಯ ದುರ್ಗದಲಿ || ೨೬ ||
ಇಳಿದರು ಇನಿಗೊಂಡೆದ ಪಾಳ್ಯದ ಮುಂದೆ
ಗಳಿಲನೆ ಜಾಗುಜಾತೆನುತ |
ಭಳಿರೆ ಎನ್ನುತ ರಾಮ ಶರಣಪುರದ ಕೈಯ್ಯ
ಇಳಿದನು ಇಂದ್ರಕೀಲದಲಿ || ೨೭ ||
ಇಂದ್ರಕೀಲವ ದಾಂಟಿ ಮುಂದೆಕ್ಕೆ ನಡೆದನು
ಆಂದ್ರಪ್ರದೇಶ ಗಡಿಗಾಗಿ |
ಬಂದನು ಗಡಿಯ ದಾಂಟುತ ಲಾಳದೇಶಕ್ಕೆ
ಮುಂದುವರಿದು ರಾಮನಾಥ || ೨೮ ||
ಈ ಪರಿಯಲಿ ರಾಮನಾಥನು ಬರಲತ್ತ
ಭೂಪನೋರ್ಗಲ್ಲ ಅರಸಿನ |
ಚಾಪನ ಕುವರ ತಾನೆಪ್ಪತ್ತಿರಾಜನು ಲಕ್ಷ
ಹೊಂಗಳ ಕಟ್ಟಿಕೊಂಡು || ೨೯ ||
ಭೂಪತಿ ಮುಂಗುಲಿರಾಯನಲ್ಲಿಗೆ ಹೋಗಿ
ಮಾಪಾ ವಾಜಿಗಳು ಲಕ್ಷಗ[ಳ] |
ನಾ ಪರೀಕ್ಷಿಸಿ ತಾಹೆನೆನುತ ಎಪ್ಪತಿರಾಜ
ಕೂಪ ವಾರುವಗಳ ನೋಡೆ || ೩೦ ||
ಲಕ್ಷ ಕುದುರೆ ಲಾಯಗ[ಟ್ಟೆ] ಮುಂಗುಲಿರಾಯ
ದಿಕ್ಕನೆ ಈ ಬೊಲ್ಲನಿರುವ |
ಲೆಕ್ಕವಿಲ್ಲ[ದ] ತೇಜಿಯ ನೋಡಿ ಮನವನು
ಇಕ್ಕಿದ ಬೊಲ್ಲನ ಮೇಲೆ || ೩೧ ||
ಕೇಳಿದ ಎಪ್ಪತ್ತಿರಾಜ[ನು] ಬೊಲ್ಲನ
ಹೇಳೆಂದು ಮುಂದುಲಿಯೊಡನೆ |
ಪೇಳುವೆನಿದರ ವೃತ್ತಾಂತವ ನೀ ಕೇಳು
ಮೇಳವಿಸಿದ ಮನಸಿನಲಿ || ೩೨ ||
ಒಳ್ಳೆಯ ಶುಭಲಗ್ನದಲ್ಲಿ ಜನಿಸಿತು ಬೊಲ್ಲ
ಹೊಲ್ಲೆಯ ದಿನ ಶುದ್ಧ ಹಗಲೆ |
ಬಲ್ಲಿದ ಎಪ್ಪತ್ತಿರಾಜ ಲಕ್ಷವ ಕೊಟ್ಟು
ನಿಲ್ಲದೆ ತಂದೆ ಬೊಲ್ಲನನು || ೩೩ ||
ಬೊಲ್ಲನ ಏರಿದ ಎಪ್ಪತ್ತಿರಾಜ ಭೂ
ವಲ್ಲಭ ಪ್ರತಾಪ ದೊರೆಗೆ |
ಉಲ್ಲಾಸಮಂ ತೋರಿ ನೆಲಮಾಳಿಗೆಯೊಳಿಟ್ಟು
ಮೇಲೆ ಉಕ್ಕಿನ ಕಡಲೆಯನು || ೩೪ ||
ಇಂದ್ರಕೀಲವ ದಾಂಟಿ ಬಂದನು ರಾಮಯ್ಯ
ನಿಂದನು ರಹುದ್ರೇಕಪುರದಿ |
ಕಂದರ ಮಾಳ ಕರಾಳದೇಶವ ದಾಂಟಿ
ಬಂದಿಳಿದನು ಮಾದ್ರಿರಿಗೆ || ೩೫ ||
ಐವತ್ತು ಆರು ದೇಶವ ದಾಂಟಿ ರಾಮಯ್ಯ
ಒಯ್ಯನೆ ನಡೆದನರ್ತಿಯಲಿ |
ಒಯ್ಯನಿಳಿದು ರುದ್ರನಗಿರಿಯನು ದಾಂಟಿ
ಮೈಲಾರಪುರವ ದಾಂಟಿದನು || ೩೬ ||
ಎದ್ದನು ಅಲ್ಲಿಂದ ಧರ್ಮಾವತಿಯೆಂಬೂರ
ಹೊದ್ದಿ ಸಾರಿದನು ರಾಮಯ್ಯ |
ನಿರ್ಧಾರದಲಿ ಬಂದು ನಲ್ಲೂರಪುರವನು
ಉದ್ದುರಪುರ ಹೊಕ್ಕರೊಡನೆ || ೩೭ ||
ಶರಣರ ಮಠವನು ಸೇರಿದ ರಾಮಯ್ಯ
ಉರತರ ಹರಕೆಯನಾಂತು |
ಪುರದೋರುಗಲ್ಲ ಪ್ರತಾಪರುದ್ರನ ತೇಜಿ
ಭರದಿಂದಲೆನ್ನ ಸೇರಿದರೆ || ೩೮ ||
ದೊರೆ ರಾಮನಾಥನು ಗುಂಡಬ್ರಹ್ಮಯ್ಯಗೆ
ಉರುತರವಾದ ಶೂಲವನು |
ಸರಿಮಿಗಿಲಪ್ರತಿ ಹರುಷದಿ ಪೂಜೆಯ
ಧರೆಯೊಳಪ್ರತಿ ಮಾಡಿಸುವೆನು || ೩೯ ||
ಕಳುಹಲವರ ಕೈಯ್ಯ ಕಳುಹಿಸಿಕೊಂಡನು
[ತ]ಳುಹದೆ ರಾಮಯ್ಯ ಹೊರಟ |
ಘಳಿಲನೆ ಬೇಟೆವಿಡಿದು ಬಾಹನಿದಿರಿಗೆ
ಸುಳಿದನು ದೇವಿಶೆಟ್ಟಿಯ ಲಿಂಗ || ೪೦ ||
ದಾರಿಯೊಳಿದಿರು ತಾನಾಗಿ ಮಾತಾಡುತ
ಆರು ನೀನೆಂದ ಲಿಂಗಣ್ಣ |
ಧಾರುಣಿಯೊಳು ಹೊಸಮಲೆಯ ಕಂಪಿಲನ
ಕುಮಾರ ಚೆನ್ನಿಗ ರಾಮನೆನಲು || ೪೧ ||
ಏನು ಕಾರಣ ಬಂದೆ ಚೆನ್ನಿಗ ರಾಮಯ್ಯ
ಭಾನುಸಖನ ಮುಖದವನೆ |
ನಾನು ಕಂಪಿಲನೊಳು ಮುನಿದು ಬಂದೆನು ಎಂದು
ಮೌನದಿಂದವನೊಳು ನುಡಿದ || ೪೨ ||
ನೀನಾರು ನಿನ್ನ ಹೆಸರೇನು ನೀನಾವೂರು
ಊನ್ಯವಿಲ್ಲದೆ ಹೇಳೆನಗೆ |
ನಾನೋರುಗಲ್ಲ ಪಟ್ಟಣಸೆಟ್ಟಿ ಲಿಂಗಣ್ಣ
ಮಾನವಪತಿ ರಾಮ ಕೇಳು || ೪೩ ||
ತಂದೆ ಕಂಪಿಲನೊಳು ಪಂಥವನಾಡಿ ಬಂದೆನು
ಇಂದು ಬೊಲ್ಲನ ತಾಹೆನೆನುತ |
ಸಂದೇಹವ್ಯಾತಕೆ ರಾಮಯ್ಯ ನಾ ನಿನ್ನೊಳ
ಗೆಂದನು ದೇವಿಸೆಟ್ಟಿ ಲಿಂಗ || ೪೫ ||
ಬಂದು ರಾಮ ಓರ್ಗಲ್ಲದುರ್ಗದ ಮುಂದೆ
ನಿಂದಿರಿಸಿದ ನದಿಯ ತಡಿಯ |
ತಂದೆ ಕಂಪಿಲನೊಳು ಮುನಿದು ರಾಮಯ್ಯನು
ಬಂದನು ನಿಮ್ಮನೋಲೈಸಿ || ೪೬ ||
ಹಾಗೆಂದು ಪೇಳೆ ಪ್ರತಾಪರುದ್ರನು ಕೇಳಿ
ಬೇಗದಲವನ ಕರೆಸೆನಲು |
ಹಾಗೆಂದ ಮಾತನು ಕೇಳುತಲಿರ್ದಂತೆ
ಹೇಳಿದ ರಾಮಯ್ಯನೊಡನೆ || ೪೭ ||
ಹಸ್ತಿನಿ ಚಿತ್ತಿನಿ ಪದ್ಮಿನಿ ಶಂಕಿನಿ
ಮೊತ್ತದ ಸತಿಯರೊಗ್ಗಿನಲಿ |
ಮತ್ತು ಮಾಣಿಕ ದಿವ್ಯಾಭರಣ ಹೊನ್ನೋಲೆಯು
ಒತ್ತಿಲಿ ಎಸೆವ ಪೆಂಡೆಯವು || ೪೮ ||
ನೋಡಿ ರಾಮನ ರೂಪ ಹೆರೆ ಹಿಂಗಲಾರದೆ
ಕೂಡುವ ಪರಿಯು ಹ್ಯಾಗೆನುತ |
ಗೋಡೆಯ ಚಿತ್ರದ ಪರಿಯಂತೆ ನಿಂದರು
ಗಾಡಿಕಾತಿಯರು ಸಂಚಲದಿ || ೪೯ ||
ಎತ್ತಿ ಮಕ್ಕಳ ಕೆಳೆಯಾಕೆ ಬಿಟ್ಟರು
ಹತ್ತಿದ ವಿರಹ ತಾಪದಲಿ |
ನೆತ್ತಿಯ ಕೊಡಗಳು ಬಿಟ್ಟು ಕೈಮರೆದರು
ಚಿತ್ತದಿ ಭ್ರಮಿಸಿ ನಾರಿಯರು || ೫೦ ||
ಕಾಮನ ಕೆಳಗೆ ವೆಗ್ಗಳ ಪುಟ್ಟಿದನಿವ
ಭೂಮಿಯ ಚೆಲುವರ ಗಂಡ |
ಸಾಮಜಗಮನೆ ಪೆತ್ತವಳಾರೊ ಎನುತಲಿ
ಕೋಮಲೆಯರು ಕೊಂಡಾಡಿದರು || ೫೧ ||
ಮತ್ತೊಬ್ಬ ಸತಿಯು ರಾಮನ ಕಂಡು ಭ್ರಮಿಸಿಯೆ
ಚಿತ್ರದ ಬೊಂಬೆಯಂದದಲಿ |
ಚಿತ್ತವ ಕೈಸೆರೆವಿಡಿದನವನ ಕಂಡು ಮೂರ್ಚೆಯಾದಳು ತಾಪದಲಿ || ೫೨ ||
ಪಡೆದ ತಾಯಿಗಳು ಮಕ್ಕಳ ನೋಡುವಂದದಿ
[ಒ]ಡಹುಟ್ಟಿದವರು ತಮ್ಮಂದಿರನು |
ಕಡುಗಲಿ ರಾಮನ ಕಂಡು ಭ್ರಮಿಸಿಯೆ ಆಗ
ದೃಢವುಳ್ಳ ಪತಿವ್ರತೆ ಹೆಣ್ಣು || ೫೩ ||
ನೋಡಿ ಕಂಡನು ರಾಮ ವಿರಹದ ಹೆಣ್ಣು
ಆಡಿದ ತನ್ನೊಳು ತಾನು |
ರೂಢಿಗೀಶ್ವರ ಬಲ್ಲ ಹರಿಯಮ್ಮನಿವರೆಂದು
ಕೊಡೆ ಕಹಳೆಗಳ ಹಿಡಿಸಿದನು || ೫೪ ||
ಪರಿನಾರಿಯರ ಸೋದರನು ಚೆನ್ನಿಗರಾಮ
ಪರದಳ ರಣಭಯಂಕರ |
ಪರರಾಯದಲ್ಲಣನೆಂದು ನುಡಿಯ ಕೇಳಿ
ಬಿಡದೆತ್ತಿ ಹಲವು ಪರಿಯಲ್ಲಿ || ೫೫ ||
ಒಂದೊಂದು ಪರಿ ಚಂದ್ರಸಾಲೆ ಉಪ್ಪರಿಗೆಯ
ಚಂದವ ಲಿಂಗ ತೋರುವಲಿ |
ಮಂದಿ ಕುದುರೆ ಸಂದೋಹ ಸಂಭ್ರಮದಲ್ಲಿ
ಕಂದರ್ಪರೂಪ ನೋಡುತಲಿ || ೫೬ ||
ಇತ್ತರದಂಗಡಿಯುಪ್ಪರಿಗೆ ಸಾಲುಗಳಿಂದ
ಮೊತ್ತದ ಶೃಂಗಾರಗಳನು |
ಚಿತ್ರದ ಮಗಿಲು ಮಂದಿರಗಳ ನೋಡುವ
ಮತ್ತೆ ಬಂದರು ಅರಮನೆಗೆ || ೫೭ ||
ಹುಳಿಯೇರ ಬಾಗಿಲ ಹೊಕ್ಕನು ರಾಮಯ್ಯ
ಒಳೆಯಾಕ ನಡೆದನಾದಕ್ಷಣದಿ |
ಇಳಿದನು ಕುದುರೆಯ ಕನ್ನಡಿ ಮೋರೆಯ
ತಳುಹದೆ ನಡೆದನೋಲಗಕೆ || ೫೮ ||
ಧುರಗಲಿ ವೀರ ಪ್ರತಾಪರುದ್ರನೋಲಗ
ದಿರುವನು ಏನು ಬಣ್ಣಿಸುವೆ |
ಬಿರಿದುಳ್ಳ ಮನ್ನೆಯ ಮಕುಟವರ್ಧನರನು
ಅರಸು ರಾಮಯ್ಯ ನೋಡಿ ಕಂಡ || ೫೯ ||
ಎಡವಂಕ ಬಲವಂಕ ರಾಯರ ವಾಲಗ
ಕಡುಗಲಿ ರಾಜಕುವರರು |
ಧೃಡವುಳ್ಳ ಮಂತ್ರೀಶ ರಾಯ ರಾಹುತರೆಲ್ಲ
ಪೊಡವಿಪಾಲಕನೋಲಗದಿ || ೬೦ ||
ಮುತ್ತಿನ ಗದ್ದುಗೆಯಲಿ ರುದ್ರರಾಯನು
ಚಿತ್ತಜ ಕಳೆವೊಪ್ಪುತಿರಲು |
ಇಂತಪ್ಪ ವಾಲಗದೊಳಗೆ ಚೆನ್ನಿಗರಾಮ
ಅರ್ತಿಯಿಂದಲಿ ನಡೆತಂದ || ೬೧ ||
ತಾರಕಿಯೆಡೆಗೆ ಚಂದ್ರಮನು ಬಂದ ತೆರನಂತೆ
ತೆರನಂತೆ ಹಾರದೆಡೆಗೆ ಜೀವರತ್ನ |
ಓರುಗಲ್ಲರಸು ರುದ್ರರಾಯನೋಲಗದೊಳು
ಮಾರಸನ್ನಿಭ ರಾಮನೆಸೆದ || ೬೨ ||
ಕಟ್ಟಳಿಲ್ಲದ ಮನ್ನೆಯ ಮಂಡಳಿಕರು
ದಿಟ್ಟ ರಾಮನ ರೂಪ ನೋಡಿ |
ನೆಟ್ಟನೆ ಬೇರಗಾಗಿ ತಮತಮಗೆಲ್ಲರು
ಬೊಟ್ಟನೊಲಿದು ಕೊಂಡಾಡಿದರು || ೬೩ ||
ವಂದನೆಮಾಡಿ ರಾಮನು ರುದ್ರರಾಯಗೆ
ತಂದು ಕಾಣಿಕೆಯನಿಕ್ಕಿದನು |
ಚಂದ್ರನ ಕಳೆಯ ಕುಮಾರ ಕುಳ್ಳಿರು ಎಂದು
ಅಂದುರ ಆಯನು ಸಂತೋಷದಲಿ || ೬೪ ||
ನೋಡಿದ ರಾಯನ ಮಂದಿ ಕುದುರೆಯನು
ಮಾಡಿದ ಮನವ ಸಂತಸವ |
ಕೂಡಿದರೆಪ್ಪತ್ತಿರಾಜನ ರಾಮನಿಗೆ
ಬೇಡಿದ ಸೀಮೆಯ ಕೊಡುವೆ || ೬೫ ||
ಬುದ್ಧಿನಿತಿಲ್ಲವೊ ಕಂಪಿಲರಾಯಗೆ
ಮುದ್ರು ಮುಖದ ರಾಮನನು |
ಎದ್ದು ಮುನಿಸುಗುಟ್ಟಿ ಬರಲಿಬಹುದೆ ಎಂದು
ರುದ್ರ ಮಂತ್ರಿಯೊಳು ಪೇಳಿದನು || ೬೬ ||
ಇತ್ತನು ಕಂಠಮಾಲೆಯ ಉಡುಗೊರೆಯನು
ಅರ್ತಿಯಿಂದಲಿ ರಾಮನಿಗೆ |
ಉತ್ತುಮ ಪಡಿಬಿಡಾರವ ಕೊಡುವೆನುಯೆಂದು
ಮತ್ತೆ ಲಿಂಗಗೆ ಹೇಳಿದನು || ೬೭ ||
ಕಳುಹಿಸಿಕೊಂಡು ರಾಮಯ್ಯನಾಕ್ಷಣದಲ್ಲಿ
ಇಳಿದ ರುದ್ರನ ಚಾವಡಿಯ |
ನಳಿನನಾಭನೆ ಗತಿಯೆನುತಲಿ ರಾಮಯ್ಯ
ಕಳವಳಿಸುತ ನಡೆತಂದ || ೬೮ ||
ಆ ಸಮಯದಿ ಭಟ್ಟರು ಕೊಂಡಾಡಿದರು
ಸಾಸಿರ ಕಳೆಯ ರಾಮುಗನ |
ದೇಶದೊಳಗೆ ರಾಯರಗಂಢ ರಾಮನು
ಆಸೆಗೊಳ್ಳನು ಪರಸತಿಗೆ || ೬೯ ||
ಮಂಡಲದೊಳು ಜಟ್ಟಂಗಿರಾಮೇಶನ
ಪಿಂಡದ ನಿಜಸುತ ನಡೆದ |
ಹಿಂಡ ವೈರಿಯಗಂಡ ಸಿಂಹ ರಾಮಯ್ಯನು
ಕೊಂಡಾಡೆ ಮುಂದೆ ಪಾಠಕರು || ೭೦ ||
ಮುಂದಕ್ಕೆ ರಾಮನು ಅಡಿಯಿಟ್ಟು ನಡೆವಾಗ
ಮುಂದೆ ಬಿರಿದುಗಳ ಸಾರುತಲಿ ||
ಸಂದೆಹವಿಲ್ಲದೆ ಜೀವದಾಸೆ ಮಾಡುವ
[ಹಂ] ದೆ ರಾಯರಗಂಡ ರಾಮ || ೭೧ ||
ಮುಗಿಲ ಕೆಳಗೆ ಬಹು ತೋಳ ಬೀಸಿ ನಡೆವಂಥ
ಅಗಣಿತ ರಾಯರಗಂಡ |
ಜಗದಪ್ಪ ಮೊದಲಾದ ರಾಯರಗಂಡನೆಂದು
ಅಗಣಿತ ಕಹಳೆ ಸಾರಿದವು || ೭೨ ||
ಆಸೆಯ ಮಾಡಿ ದೇಶವನಾಳಬೇಕೆಂಬ
ಭಾಷೆ ಹೀನರಗಂಡ ರಾಮ |
ಕೂಸ ಹಾಸಿಗೆಯೊಳು ಮಲಗಿಸುವರ ಗಂಡ
ರಾಸಿ ಮಾಂಡಲಿಕರ ಗಂಡ || ೭೩ ||
ಕಳ್ಳತನದಿಂದ ಬಿರಿದ ಹೊಗಳಿಸಿಕೊಂಬ
ಅಳ್ಳೆದೆ ರಾಯರಗಂಡ |
ಡಿಳ್ಳಿಯ ಗಂಡ ಡಿಳ್ಳಿ ಸುರಿತಾಳನ ಮಿಂಡ
ಬಲ್ಲಿದ ನೇಮಿಯ ಗಂಡ || ೭೪ ||
ಎತ್ತಣ ಗಾಳಿ ಬೀಸಿದರತ್ತ ಮಲೆತಿಹ
ಮೊತ್ತದ ರಾಯರ ಗಂಡ |
ಸತ್ತಿಗೆ ನೆರಳಲ್ಲಿ ಬಹ ಮಾಂಡಲಿಕರ
ನೆತ್ತಿಯ ಶೂಲ ರಾಮಯ್ಯ || ೭೫ ||
ಕೊಟ್ಟ ಹಣವ ಗಂಡ ಕಟ್ಟಿಕೊಂಬರ ಗಂಡ
ಇಷ್ಟಲಿಂಗವು ಜಟ್ಟಿಂಗೇಶ || ೭೬ ||
ಮಣಿವ ರಾಯರಗಂಡ ಮಲೆವ ರಾಯರಗಂಡ
ರಣದಿ ಮಚ್ಚರಿಪರಗಂಡ |
ಢಣಢಣಿಸುವ ಗಂಟೆಗಳುಲಿಯಲು ಆಕ್ಷಣ
ಕಣಕಾಲಿನಲಿ ರಾಮಯಗೆ || ೭೭ ||
ನರಪತಿ [ಗಜ]ಪತಿ ಅಶ್ವಪತಿಗಳೆಂಬ
ಅರಸುಗಳಿಗೆ ಗಂಡನೆಂಬ |
ಬಿರಿದ ಪೊಗಳಲು ಭಟರು ರಾಮನಾಥನ
ಭರದಿ ಕೇಳಿದ ರುದ್ರರಾಯ || ೭೮ ||
ಬಿರಿದ ಕೇಳುತ ರುದ್ರ ಉರಿದೆದ್ದು ಕೋಪದಿ
ತರಹರಿಸದೆ ಮನದೊಳಗೆ |
ಹರುಷವಡಗಿ ಕಾಲರುದ್ರನಂತವನಾಗ
ಇರದೆ ಕೋಪವನು ತಾಳಿದನು || ೭೯ ||
ಕಡೆಗಣ್ಣು ಕಿಡಿಸೊಸೆ ಕುಡಿಮೀಸೆ ಕುಣಿದಾಡೆ
ಬಿಡದೆ ಗಂಟಿಕ್ಕಿ ಪುರ್ಬುಗಳು |
ಒಡನೆ ನುಡಿದನು ಮಂತ್ರಿಯ ಕೂಡೆ ರೋಷದಿ
ಕಡು ಬೇಗದೊಳು ಇಂತೆಂದ || ೮೦ ||
ಕಟ್ಟಾಣೆಲ್ಲದ ಬಿರಿದನು ರಾಮಯ್ಯ[ನ]
ಭಟ್ಟರು ಕೊಂಡಾಡಿದರು |
ಸೃಷ್ಟಿಪಾಲಕ ರಾಯ ಕೇಳಿ ಕೋಪವ ತಾಳಿ
ಮುಟ್ಟಿ ಮಂತ್ರಿಯೊಳಿಂತೆಂದ || ೮೧ ||
ನಮ್ಮ ಬಳಿಗೆ ರಾಮನೋಲೈಸಲು ಬಂದು
ಹಮ್ಮಿನ ಬಿರಿದನಿಕ್ಕಿದನೆ |
ಗಮ್ಮನೆ ಮಂಡಲಿಕರು ಗಜಬಜಿಸುತ್ತ
ಇಮ್ಮಡಿ ತಿಟ್ಟವಿಕ್ಕಿದರು || ೮೨ ||
ನಿಮ್ಮ ಸಮಾನದಿ ಕುಳಿತನಾದರೆ ಜಾತಿ
ಧರ್ಮವ ಬಿಡುವನೆ ಅವನು |
ನಿಮ್ಮ ಪಾದವನು ಕಾಣಿಸಿದಂದವು
ನಮ್ಮೆಲ್ಲರ ಗಂಡನೆಂದೆಂಬ || ೮೩ ||
ಘುಡಿಘುಡಿಸುತ ರುದ್ರಾರಾಯ ಕೋಪವ ತಾಳಿ
ಹಿಡಿತನ್ನಿ ಲಿಂಗನ ಬೇಗ |
ಒಡನೆ ಕಳುಹೆ ಕಂಚುಕಿಯರು ಬೇಗದಿ
ನಡೆದು ಬಂದರು ಲಿಂಗನೆಡೆಗೆ || ೮೪ ||
ಪರಿಪರಿ ಬಿಡಾರ ರಾಮಗೆ ಲಿಂಗಣ್ಣ
ಅರಿದೆನಿಸುತ ಮಾಡುತಿರಲು |
ಕರ ಬೇಗ ರಾಯ ನಿನ್ನನ್ನು ಬರಹೇಳಿದ
ಧುರಧೀರ ಲಿಂಗ ಬಾರೆನಲು || ೮೪ ||
ನಡೆದು ಬಂದನು ಲಿಂಗರಾಹುತ ವಹಿಲದಿ
ಒಡೆಯ ರುದ್ರನ ಕಂಡು ನಮಿಸೆ |
ಕಿಡಿಗೆದರುತ ರಾಯ ಕೋಪದಿ ಉರಿದೆದ್ದು
ಜಡಿದು ಗರ್ಜಿಸಿದ ಲಿಂಗನನು || ೮೬ ||
ಕೊಟ್ಟದ ಬೇಡನ ಕರೆತಂದೆ ಇಲ್ಲಿಗೆ
ಮುಟ್ಟಿ ಬಿರಿದನು ಹೊಗಳಿಸಿದೆ |
ಸೃಷ್ಟಿಯ ರಾಯರಗಂಡನು ತಾನಂತೆ
ಇಷ್ಟುವುಳ್ಳವ ಬರಬಹುದೆ || ೮೭ ||
ಬಂದನ್ಯಾತಕೆ ರಾಮನೋಲೈಸಲಿಲ್ಲಿಗೆ
ಗೊಂದಣ ಬಿರುದುಳ್ಳ ಬಂಟ |
ಹಿಂದಣ ಪಂಥವನೆಲ್ಲ ಬಿಟ್ಟಿರ ಹೇಳೊ ಇಲ್ಲ
ದಿರ್ದಡೆ ಹೋಗ ಹೇಳೊ || ೮೮ ||
ಬಲ್ಲಿದಗಲ್ಲದೆ ಬಿರಿದು ದೇವರೆ ಕೇಳು
ತಲ್ಲಣಿಸುವ ಹೇಡಿಗುಂಟೆ |
ನಿಲ್ಲದೆ ಗುತ್ತಿಯ ಜಗದಪ್ಪ ಮೊದಲಾದ
ಎಲ್ಲ ಮಾನ್ಯರ ಗೆದ್ದ ರಾಮ || ೮೯ ||
ಹಳೆಯಬೀಡಾಳುವ ಬಲ್ಲಾಳನ ಗೆಲಿದನು
ಚೆಲುವುಳ್ಳ ರಾಯ ಚಿತ್ತೈಸು |
ಛಲದಿಂದ ಹುಳಿಯೇರ ಮಾತಿಗೊಂಡನ ಗೆಲಿದ
ಬಲವುಳ್ಳ ನೇಮಿಯ ಮುರಿದ || ೯೦ ||
ಬಿರಿದ ಬಿಟ್ಟರೆ ರಾಮನಿರಲಿ ಕೇಳೊ ಲಿಂಗಾ
ಭರದಿಂದ ಪಂಥವಾಡಿದರೆ |
ಮುರಿವೆನು ತನ್ನಯ ಬಲುಹನೆಲ್ಲವನು ತಾ
ಸೆರೆಯಮನೆಯ ಕೂಡಿಸುವೆನು || ೯೧ ||
ದುಗುಡವ ತಾಳಿದ ದೇವಿಶೆಟ್ಟಿಯಲಿಂದ
ವಿಗಡ ರಾಮನ ಬಳಿಗೈದ |
ಅಗಣಿತ ಬಿರಿದ ಬಿಟ್ಟರೆ ಇರಹೇಳಿದ
ಸುಗುಣ ರಾಮಯ್ಯ ಚಿತ್ತೈಸು || ೯೨ ||
ಅಬ್ಬರಿಸುವ ರಾಮ ಕೋಪವ ತಾಳಿದ
ಉಬ್ಬಿ ಕಾಟಣ್ಣನಿಂತೆಂದ
ಕಂಪಿಲರಾಯನ ಸುತನು ರಾಮಯ್ಯನು
ಹಬ್ಬಿದ ಬಿರಿದ ಬಿಡುವನೆ || ೯೩ ||
ಕಟ್ಟಳಿಲ್ಲದ ದಂಡ ಕಡಿದು ಕುಪ್ಪೆಯನೊಟ್ಟಿ
ಸುಟ್ಟು ಬೊಟ್ಟಿಡುವೆ ಪಟ್ಟಣವ |
ಮುಟ್ಟಿ ಕಾದಲು ರುದ್ರರಾಯನ ಹಿಡಿವೆನು
ದಿಟ್ಟ ಲಿಂಗಣ್ಣ ಕೇಳ್ಬಿರಿದ || ೯೪ ||
ಭಂಡಾರ ಬೊಕ್ಕಸ ಹೆಂಡಿರು ಮಕ್ಕಳು
ತಂಡತಂಡದಿ ಪ್ರಯಾಣಮಾಡಿ |
ದಂಡೆತ್ತಿ ರುದ್ರರಾಯನು [ಬ]ರೆ ಕೊಡೆ ನಿನ್ನ
ಗಂಡಾಳು ಲಿಂಗ ಹೋಗೆಂದ || ೯೫ ||
ಬಂದು ಲಿಂಗಣ ದೇವಿಶೆಟ್ಟಿ [ಯರಿಗೆ] ಪೇಳೆ
ಅಂದು ರಾಯನ ಜಗಳವನು |
ಇಂದು ಇಲ್ಲಿದ್ದರೆ ಕೆಡುವೆವು ನಾವೆಲ್ಲ
ಸಂದೇಹ ಬೇಡವೇಳೆಂದ || ೯೬ ||
ಮುತ್ತು ಮಾಣಿಕ ನವರತ್ನ ಭಂಡಾರವ
ಮತ್ತೆ ಪೆಟ್ಟಿಗೆ ತುಂಬಿಸಿದನು |
ಉತ್ತಮ ಹೊನ್ನು ಹಣದ ಜಾಳಿಗೆಗಳ
ಇತ್ತನೆಕ್ಕಟಿಗರಿಗೆಲ್ಲ || ೯೭ ||
ಕಾಲು ಕುಪ್ಪಸವ ತೊಡಿಸಿ ಹೆಣ್ಣುಗಳಿಗೆಲ್ಲ
ಆಲಸ್ಯವಿಲ್ಲದೆ ಬೇಗ |
ಮೇಲು ಹಕ್ಕರಿಕೆಯ ಮುಸುಕನು ತೇಜಿಯ
ಸಾಲುಸಾಲಿನಲಿ ಶೃಂಗರಿಸಿ || ೯೮ ||
ತಡೆಯದೆ ಹೋಗಿ ಚಾವಡಿಗೆ ನಡೆದುಬಂದು
ಕರೆಸಿದ ತನ್ನ ರಾಹುತರ |
ಭರದಿ ಕಾಲಾಳು ಮೇಲಾಳುಗಳನು ಕರೆಸಿ || ೯೯ ||
ಸುಟ್ಟನು ಪಟ್ಟಾವಳಿಯ ಪೆಂಡಿಗಳನು
ಸುಟ್ಟನುಪ್ಪರಿಗೆ ಚಾವಡಿಯ |
ಸುಟ್ಟನು ಭತ್ತದ ಕಣಜ ಲಾಯಗಳನು
ಸುಟ್ಟು ಲಿಂಗನು ಹೊರಟನು || ೧೦೦ ||
ಅತ್ತ ಹೋಗಲು ಲಿಂಗ ಇತ್ತ ಮನ್ನೆಯರೆಲ್ಲ
ಒತ್ತಿ ಚಾಡಿಯನು ಹೇಳಿದರು |
ಚಿತ್ತೈಸಿ ಸ್ವಾಮಿ ರಾಮನ ಲಿಂಗ ಪೊಗಳಿದ
ಅತ್ಯಂತ ಸ್ವಾಮಿದ್ರೋಹಿಕೆಯ || ೧೦೧ ||
ಹೇಳಿದ ಚಾಡಿಯ ಕೇಳಿದ ರುದ್ರನು
ತಾಳಿದ ಕಡುಗೋಪವನು |
ಬೀಳುಕೊಟ್ಟನು ಮನೆಯ ಮುದ್ರಿಸೆದಾಗಲೆ
ಊಲಿಗದವರನು ಕಳುಹೆ || ೧೦೨ ||
ಹೆಡಕ ಹಿಡಿದು ನೂಕುನೂಕೆಂದು ಲಿಂಗನು
ಒಡೆಯ ರುದ್ರನು ನನಗಲ್ಲ |
ಸುಡುವೆ ಪಟ್ಟಣವನು ದಂಡೆತ್ತಿ ಬಂದರೆ
ಕಡಿವೆ ಮನ್ನೆಯರನೀಕ್ಷಣದಿ || ೧೦೩ ||
ಕಟ್ಟಿಗೆಕಾರರು ಹೇ[ಳೆ] ರಾಯನ ಕೊಡೆ
ದಿಟ್ಟ ಲಿಂಗಣ್ಣ ಕೋಪಿಸಿದ |
ಸೃಷ್ಟಿಪಾಲಕ ನೀನೊಡೆಯನು ಅಲ್ಲವೆಂದು
ಬಿಟ್ಟೋಡುತಾನೆ ಪಟ್ಟಣವ || ೧೦೪ ||
ಬೆರಸಿ ಚೂಣಿಯ ಹುಯ್ಯ[ಲ] ಮಾಡಿ ನಿಮುಷದಿ
ಕರ ಬೇಗ ಕಡಿದಾಡಿದರು |
ತುರುಗ ರುತಗ ಕೂಡಿ ಕೂಡಿದಾಡಿ ರಾಹುತರೆಲ್ಲ
ಇರಿದಾಡಿದರು ಹೊಳಕೆಯಲಿ || ೧೦೫ ||
ಕಂಡ ದೂರದಲಿಂದ ದೇವಿಶೆಟ್ಟಿಯಲಿಂಗ
ಹಿಂಡು ತುರಗ ರಾಹುತ |
ಗುಂಡಿಗೆ ಒಡೆದಂತೆ ಲವುಡಿಕೆ ಹೊಡೆಯೆನುತಲಿ
ಮುಂಡಗಳುರುಳೆ ಭೂಮಿಯಲಿ || ೧೦೬ ||
ಅಂಡಮಂಡೆಯ ರಾಸಿ ಕಂಡಗರುಳ ಸಂತೆ
ತಂಡತಂಡದಲಿ ಮುರಿದೋಡೆ ||
ಮಂಡಲಪತಿ ರುದ್ರರಾಯಗೆ ಪೇಳ್ದರು
ಕಂಡ ಗಜವನು ಕಳುಹಿದನು || ೧೦೭ ||
ದಿಕ್ಕಿದಿಕ್ಕಿನ ಬಾಗಿಲಲಿ ಹೊರಹೊಂಡರು
ಲೆಕ್ಕವಿಲ್ಲದೆ ಮಂದಿ ಕುದುರೆ |
ಕಕ್ಕಸದಲಿ ಮಂದಿ ಮಾನ್ಯರು ಕಡಿವಾಡಿ
ಒಕ್ಕಲಿಕ್ಕಿದರು ರಾಹುತರ || ೧೦೮ ||
ಮತ್ತೆ ರಾಮಯ ತನ್ನ ಪರಿವಾರವೆಲ್ಲಕೆ
ಮತ್ತೆ ಬೆಸನಯಿತ್ತು ಕಳುಹೆ |
ಕತ್ತಿ ಕಠಾರಿ ಮನ್ನೆಯರ ಮಾರ್ಬಲವೆಲ್ಲ
ಮುತ್ತಿತು ರುದ್ರನ ದಂಡ || ೧೦೯ ||
ಮುಂದಲೆ ಮುಂದಲೆ ಇರಿದಾಡಿ ಪರಿವಾರ
ಬಂದು ರಾಮನ ಪರಿವಾರ |
ಕುಂದದೆ ಕುದುರೆಯ ಕಡಿಕಡಿದು ಬೇಗದಿ
ಕಂಡದಲೊರಸಿ ಕತ್ತಿಗಳ || ೧೧೦ ||
ಚೆಲ್ಲಿತು ರುದ್ರನ ಬಲ ನಿಮುಷದೊಳಗೆ
ಭಲ್ಲೆವು ಚಕ್ರ ತೋಮರದಿ |
ಜಲ್ಲಿಸಿ ಕುದುರೆಯ ಪೌಜ ಹಾಕಿರಿದರು
ಬಲ್ಲಿದ ರಾಮನ ಭಟರು || ೧೧೧ ||
ಎಡಬಲದಲಿ ಕೆಲಕಡೆಯ [ಲೆ]ಲುಬೆಯಾಗಿ
ಜಡಿದು ರುದ್ರನ ದಂಡ ಕಡಿದು |
ಸಿಡಿಲು ಪರ್ವತಕೆ ಮುಸುಕುವಂತೆ ಮುಸುಕಿತು
ಕಡುಗಲಿ ರಾಮನ ಪೌಜ || ೧೧೨ ||
ಹೊಕ್ಕು ಕಾಲಾಳು ಮೇಲಾಳುಗಳೆಲ್ಲರ
ನಿಕ್ಕಡಿಯಾಗಿ ಕಡಿಯೆ ಬಾಣದಲಿ |
ಕಕ್ಕಸದಲಿ ಕಡಿದು ರಾಮನ ದಂಡ
ಒಕ್ಕಲಿಕ್ಕಲು ಹಿಮ್ಮೆಟ್ಟಿದರು || ೧೧೩ ||
ಹಿಮ್ಮೆಟ್ಟಿ ಬರುವ ಪೌಜನು ಕಂಡು ರಾಮಯ್ಯ
ಸುಮ್ಮಾನದಲಿ ನಸುನಗುತ |
ಹಮ್ಮು ಮುರಿ[ವೆ] ರುದ್ರರಾಯನ ದಂಡನು
ಒಮ್ಮೆಲಿಂಗಣ್ಣ ನೀ ನೋಡು || ೧೧೪ ||
ಎಡವಂಕ ಬಲವಂಕ[ಕೋ]ಡಿ ರಾಂಯ್ಯನು
ನಡೆದನು ಕೊಡೆ ವಹಿಲದಲಿ |
ನುಡಿದವು ಬಿರಿದಿನ ಕಹಳೆ ತಮ್ಮಟ ಭೇರಿ
ಪೊಡವಿರಾಯರ ಗಂಡನೆಂಬ || ೧೧೫ ||
ಬಲ ಒದಗಿತು ರುದ್ರನ ಮನ್ನೆಯರು ಬೇಗ
ಬಂದು ಜಗಳವನು ಮಾಡಿದರು |
ಕಾಟಣ್ಣ ದೇವಿಶೆಟ್ಟಿಯಲಿಂಗ ರಾಮಯ್ಯ
ಮೀಟುಳ್ಳ ಪರಿವಾರವೆಲ್ಲ || ೧೧೬ ||
ಕತ್ತರಿ ಬೋಳಯ್ಯ ಒತ್ತಿ ಮೆಟ್ಟಿ ಸೀಳಲು
ಮತ್ತೆ ತುರಗ ಕಡಿದಾಡಿ |
ರಕ್ತದ ಹಳ್ಳ ಕರಿಯೆ ಧರಣಿಯ ಮೇಲೆ
ಸುತ್ತಗರುಳು ಸುರಿಸುರಿಯೆ || ೧೧೭ ||
ದೆಸೆ ಬಾಯದೆರೆಯದೆನುತ ರುದ್ರನ ದಂಡು
ಬಿಸಿಯ ರಕ್ತವ ಸುರಿವುತಲಿ |
ಅಸಮಸಾಹಸ ರಾಮ ಬೆನ್ನಟ್ಟಿ ಬರುತಿರೆ
ಮುಸುಕಿಲಿ ಹಾಯೆ ಪಟ್ಟಣಕೆ || ೧೧೮ ||
ಕೇಳಿದ ದಂಡು ಮುರಿದ ಸುದ್ದಿಯ ರಾಯ
ತಾಳಿದ ಕಡುಗೋಪವನು |
ಕೋಳಹಳವ ಮಾಡಿ ಕಡಿವೆ ರಾಮನ ದಂಡ
ದಾಳಿ ಮಾಡುವೆ ಹೊಸಮಲೆಗೆ || ೧೧೯ ||
[ಇದ್ದೆ] ದೆಸೆಯ ಮಗುಟವರ್ಧನರ ನೋಡಿ ರಾಯ
ಗದ್ದುಗೆಯಿಂದೇಳುತಿರಲು |
ಬಿದ್ದು ಚರಣದಿ ಕೊಮಾರ ಎಪ್ಪತ್ತಿರಾಜ
ರುದ್ರ ಬೆಸನ ಪಾಲಿಸೆಂದ || ೧೨೦ ||
ಮನ್ನೆಯ ಮಂಡಲಿಕರು ಹೋಗಿ ರಾಮಗೆ
ಬೆನ್ನ ಕೊಟ್ಟರು ಕೇಳು ಕಂದ |
ನಿನ್ನ ಹವಣೇನು? ಸಮರಂಗ ಬಲ್ಲದೆ ರಾಯ
ಇನ್ನು ತೆಗದೇನು ಚಿತ್ತೈಸು || ೧೨೧ ||
ಪೊಡವಿಯೊಳಗೆ ಸುರಿತಾಳ ತಾ ಬಂದರೆ
ನಡೆಯಬೇಕಲ್ಲದೆ ಬೇಗ |
ಜ[ಡ]ದೇಹಿ ಮಾನ್ಯರ ಮೇಲೆ ಛಲವನಿತ್ತು
ಒಡನೆ ನೀ ಕಳುಹು ಕಾಳಗಕೆ || ೧೨೨ ||
ದಾಳಿಯ ಮಾಡಿ ರಾಮನ ಹಿಡಿಯಾಳ ಹಿಡಿವೆನು
ಜೋಡಿಸಿ ಕಡಿವೆ ಮನ್ನೆಯರ |
ಗೂಳೇವ ತೆಗೆಸುವ ಹೊಸಮಲೆದುರ್ಗವ
ಹೇಳ್ವರೆ ಹೆಸರ ಕೆಡಿಸುವೆನು || ೧೨೩ ||
ಎಪ್ಪತ್ತಿರಾಜನ ನುಡಿಗೇಳಿ ರುದ್ರನು
ಅಪ್ಪಿಕೊಂಡನು ಸಂತೋಷದಲಿ |
ಒಪ್ಪಿಸಿದನು ಮನ್ನೆಯ ಮಾಂಡಲಿಕರ
ಒಪ್ಪದಿ ಪ್ರಯಾಣ ಮಾಡಿದನು || ೧೨೪ ||
ಸರ್ಪಭೂಷಣ ಕಡಿದಾಡಿ ರಣದೊಳು
ಒಪ್ಪುವ ರಾಮನ ಹಿಡಿವೆ |
ಅಪ್ಪಣೆಯನು ಕೊಟ್ಟು ಕಳುಹಯ್ಯ ಬೇಗದಿ
ತಪ್ಪದೆ ತರಿಸು ಬೊಲ್ಲನನು || ೧೨೫ ||
ಬೊಲ್ಲನ ತರಹೇಳಿ ಮಲ್ಲಯ್ಯ ಸಾಣಿಯ
ನಲ್ಲಿ ರುದ್ರನು ಕಳುಹಿದನು |
ಬಂದ ಬೊಲ್ಲಗೆ ಗಂಧ ಪುಷ್ಪ ಪರಿಮಳವನು
ತಂದು ಒಪ್ಪಿಸಿ ನೈವೇದ್ಯಗಳ || ೧೨೬ ||
ಒಂದು ಖಂಡುಗ ರಾಶಿ ಉಕ್ಕಿನ ಕಡಲೆಯ
ತಂದು ಕಟ್ಟಿದರು ಕವಣವನು |
ಇಂದೇರಿಸಿದ ಕಂಪಿನ ಹೂವು ಗಂಧಕ್ಷತೆಯ
ನಂದು ಬೊಲ್ಲಗೆ ನೀರ್ಗುಡಿಸಿ || ೧೨೭ ||
ಹಕ್ಕರಿಕೆಯ ಜೋಡು ಹೊಕ್ಕುಳ ಗಂಟೆಯು
ಇಕ್ಕೆಲದಲ್ಲಿ ಬಿಲ್ಲುಗಳ |
ಇಕ್ಕಿದ ಕರ್ಕಸ ಅಂಬು ಸಿಂಗಾಡಿಯು
ಪಕ್ಕೆಲಿ ಬಿಗಿದ ರಂಚಿಕೆಯು || ೧೨೮ ||
ಇಕ್ಕಿದ ಕಡಿವಾಳ ಉಕ್ಕಿನ ಭಲ್ಲೆವು
ಕಕ್ಕಡ ವಂಕಿ ಕೈಯ್ಯಂಬು |
ಎಕ್ಕಲ ಕೋರೆಯು ರಕ್ಕಸ ಬೊಲ್ಲಗೆ
ಇಕ್ಕೆಲದಲಿ ಬಿರಿದುಗಳು || ೧೨೯ ||
ಬೊಲ್ಲನ ಶೃಂಗರಿಸಿ ಎಪ್ಪತ್ತಿರಾಜನು
ನಿಲ್ಲದೆಲ್ಲರ ಕರೆಸಿದನು |
ಸಲ್ಲೀಲೆಯಿಂದ ಮೈಜೋಡನಂಗಕೆ ತೊಟ್ಟು
ಬಲ್ಲೈಸಿದ ತಲೆ ಠೌಳಿ || ೧೩೦ ||
ವೀರಜಡೆಯ ಹೆಣೆಸಿದ ಎಪ್ಪತಿರಾಜ
ಧೀರ ಬಂದನು ಬೊಲ್ಲನೆಡೆಗೆ |
ಸಾರಿ ಅರ್ಚಿಸಿ ಧೂಪ ದೀಪ ನೈವೇದ್ಯವ
ವೀರವಿಕ್ರಮ ಗೆಲ್ಲೆನುತ || ೧೩೧ ||
ಹಚ್ಚ ಕೆಚ್ಚನೆ ಆರತಿಯೆ[ತ್ತಿ] ಬೊಲ್ಲಗೆ
ಮಚ್ಚರಿಸಿದ ವೈರಿ ಗೆಲ್ಲು |
ಪಚ್ಚೆಯ ಜೋಡು ಹಕ್ಕರಿಕೆ ಹಲ್ಲಣ ಗುಬ್ಬಿ
ಗಚ್ಚಿನ ಮುಖರಂಬವೆಸೆಯೆ || ೧೩೨ ||
ಹೆಚ್ಚಿನ ಬೊಲ್ಲಗೆ ಶರಣೆಂದು ಎಪ್ಪತಿರಾಜ
ಉತ್ಸಾಹದಲಿ ಏರಿದನು |
ಅಚ್ಚಾಳು ಕುದುರೆ ಐವತ್ತು ಸಾವಿರ ಸಹ
ನಿಶ್ಚೈಸಿದ ರಾಮನ ಮೇಲೆ || ೧೩೩ ||
ತುಡುಮು ತಂಬಟ ಭೇರಿ ಗಿಡಿಬಿಡಿ ನಿಸ್ಸಾಳ
ಬಿಡದೊದರುವ ಚಿನ್ನಗಹಳೆ |
ಒಡನೆ ಬುರುಗು ನೌಬತ್ತು ಅಬ್ಬರದಿಂದ
ನಡೆದನು ಪಡೆ ಬೆದರ್ವಂತೆ || ೧೩೪ ||
ಅರಿರಾಯದಲ್ಲಣಮರ್ದನ ಬಿರಿದನು
ಸಾರಿಸುತಲಿ ಧೀರ ನಡೆದ |
ಮರೆಯದಿರೆಪ್ಪತ್ತಿರಾಜ ಈ ಮಾತನು
ಬರಿಗೈವೆನು ನಿನ್ನ ಬಲವ || ೧೩೫ ||
ತೋರು ಸಾಹಸವ ಎನ್ನೊಳಗಿದಿರಾಗೆಂದು
ಮೀರಿ ಹೊಯ್ದನು ಖಡ್ಗದಲಿ |
ಬೆನ್ಹತ್ತಿ ಕಡಿವುತ ಬರುವರ ರಾಮಯ್ಯ
ಚೆನ್ನಾಗಿ ಕಣ್ಣಿಲಿ ಕಂಡ || ೧೩೬ ||
ಇನ್ನು ಜಗಳ [ಹೆ]ಚ್ಚಿತು ನೋಡಿ ನೀವೆಂದು
ಮಾನ್ಯರಿಗಪ್ಪಣೆ ಕೊಟ್ಟ |
ದೃಢದಲಿ ರಾಮಯ್ಯ ನಡೆದು ದುವ್ವಾಳಿಸಿ
ಜಡಿದನು ವಜ್ರದಾಯುಧವ || ೧೩೭ ||
ಏರಿ ಇಕ್ಕೆಲದಲಾಗುವ ಬೊಬ್ಬೆಯ ಕೇಳಿ
ತೋರಿದ ರಾಮ ಕೈಗುಣವ |
ಧಾರುಣಿಯೊಳು ಇದಿರಾದರ ಸೀಳುವ
ತೂರಿದ ಗಾಳಿಯ ಮಾಡಿ || ೧೩೮ ||
ವಾರುವನೇರಿಸಿ ಕರುಳ ತರಿದನಾಗ
ಸೇರಿಸಿದನು ಯಮಪುರಿಗೆ |
ತೋರಿದ ಸಾಹಸವೇರಿ ಬೊಲ್ಲನ ರಣ
ಭಾರಿಯ ಮುರಿಯಲೇರಿದನು || ೧೩೯ ||
ಹೊಕ್ಕನು ರಣವ ನಿರಾಕರಿಸಿ ಬಲವನು
ಒಕ್ಕಲಿಕ್ಕಿಯೆ ತುಳಿಸಿದನು |
ಸೊಕ್ಕಮುರಿದು ಪ್ರತಾಪರುದ್ರನ ದಂಡ
ಲೆಕ್ಕವಿಲ್ಲದೆ ತರಿದೊಟ್ಟಿ || ೧೪೦ ||
ರಕ್ಕಸ ನೀಲನ ಏರಿ ರಾಮಯ್ಯನು
ಇಕ್ಕಡಿ ಮಂಡಲಿಕರನು |
ಹೊಕ್ಕರೀ ಬಲವ ಮನ್ನೆಯರು ಸಂಹರಿಸುತ
ಮುಕ್ಕಿಸಿದರು ರಕ್ತವನು || ೧೪೧ ||
ಆದಡೀ ಗಾಯವ ನೋಡೆಂದು ಹೊಯ್ದನು
ಮೇದುನಿಪತಿಯು ರಾಮಯ್ಯ |
ಭೇದಿಸಿ ಮೈಜೋಡು ಕತ್ತರಿಸಿ ಬಲು
ನಾದದಿಂದ್ಹೊಯ್ದ ಖಡ್ಗದಲಿ || ೧೪೨ ||
ಜೋಡು ಕತ್ತರಿಸಲು ರೂಢೀಶ ಕೋಪದಿ
[ಓ]ಡಿದೆಪ್ಪತ್ತಿರಾಜನನ |
ನೋಡಿ ಅಂತರಿಸದೆ ಓಡಿ ನಿಂದವರೆಲ್ಲ
ಹೇಡಿಗೊಂಡಿಹ ವ್ಯಾಳ್ಯದೊಳಗೆ || ೧೪೩ ||
ಹಲವು ಬಗೆಯ ಸಾಹಸವ ತೋರಿದೆ ವೀರ
ಭಲರೆ ಭಾಪುರೆ ಜಗಜಟ್ಟಿ |
ಛಲದಂಕನಹುದೆಂದು ತಲೆಯ ಠೌಳಿಗೆ ಹೊಯ್ಯೆ
ಒಲಿದು ಬಿದ್ದನು ರಣದೊಳಗೆ || ೧೪೪ ||
ಬೀಳಲೊಡನೆ ಹಿಂಗಾಲು ಮುಂಗಾಲಿಂದ
ಏಳಲೀಸದೆ ಬಂದು ಬೆನ್ನ |
ಕಾಳಗದೊಳು ರಾಮನಾಥಗೆ ಬೊಲ್ಲನಂ
ದೇಳೀಗೆಯಲಿ ಬೆನ್ನನಿತ್ತು || ೧೪೫ ||
ಬೊಲ್ಲ ತನಗೆ ಸಾಧ್ಯವಾಗಲು ರಾಮಯ್ಯ
ನಿಲ್ಲದೆ ಕೋಟೆಯ ನೆಗೆಸಿ |
ಗಲ್ಲದ ಬಾರಲ್ಲಿ ಜಲ್ಲನೆ ಹರಿಯಲು
ಅಲ್ಲಿ ಮಾದಿಗ ಹಂಪ ತನ್ನ || ೧೪೬ ||
ಒಳದೊಡೆ ತೊಗಲ ತೆಗೆದು ಎದೆಬಾರನು
ಗೆಲವಿಂದಲದಕೆ ಹೊಂದಿಸಲು |
ಸಲಹುವೆ ನಿನ್ನ ಪ್ರಾಣಕೆ ಎನ್ನ ಜೀವವ
ನೊಲಿದೀವೆ ಹಂಪ ನೀ ಕೇಳೂ || ೧೪೭ ||
ಗೆಲಿದೂರ ಹೊರಟು ಚರರ ಕಳುಹಿದ ರಾಮ
ಒಲಿದು ಲಿಂಗನ ಕರೆಯೆನುತ ||
ನಲಿದೋಡಿ ಚರರಿತ್ತ ಭರದಿಂದ ಬಂದರು
ಉಲುಹನಾರಿಸುತ ಊರೊಳಗೆ || ೧೪೮ ||
ಧುರರೊರಗಿದ ಜಾಳಿ ಹರಿದು ಎಪ್ಪತಿರಾಜ
ಅರೆಗಣ್ಣ ತೆರೆದು ಎಚ್ಚತ್ತು || ೧೪೯ ||
ನೆರೆದಿರ್ದ ಮನ್ನೆಯರ ಕಳುಹಿದನು ತಾನು
ಅರಮನೆಗೈದಿದನಾಗ |
ಸಾರಿದವರ ಕಾಯ್ವ ಮೀರಿದವರ ಕೊಲ್ವ
ನೋರುಗಲ್ಲಿಗೆ ಕೋಳಾಹಳ || ೧೫೦ ||
ನರಪತಿ ವೀರಪ್ರತಾಪ[ನ] ಕೊಮಾರ ಹೊಕ್ಕನು
ಊರು ದುಗುಡದಲಿ |
ಹರುಷದಿಂದಲಿ ದೇವಿಶೆಟ್ಟಿಲಿಂಗನು ಆಗ
ಭರದಿಂದ ಊರ ಹೊರಟನು || ೧೫೧ ||
ವೀರಪ್ರತಾಪ[ನ] ದುಗುಡವ ಕಂಡು ರಾಮಯ್ಯ
ಭೇರಿಯ ಹೊಯ್ಸಿದನಾಗ |
ಊರ ಹೊರಗೆ ಇಹ ಪೌಜಿಗೆ ಇದಿರಾಘಿ
ಏರಿ ಮನ್ನೆಯರುಗಳೆಲ್ಲ || ೧೫೨ ||
ಸಾವಿರ ಕುದುರೇ[ಳು] ಸಾವಿರ ಕಾಲಾಳು
ಸಾವಿರ ಮನ್ನೆಯರ ತುರಗ |
ಭಾರಿಯ ನಿಗಳದ ಪರಿವಾರ ಕೂಡಿ[ತಾ]
ವೀರ ರಾಮನ ಇದಿರಿನಲಿ || ೧೫೩ ||
ಹುಯ್ಯಲ ಹಿಡಿದು ರಾಮನ ಹೋಗಲೀಸದೆ
ಕೈಯ್ಯ ಆಯುಧವ ಝಳಪಿಸುತ |
ಹೊಯ್ಯುಹೊಯ್ಯೆನುತ ಮೂದಲಿಸಿದ ಏರಿದರಾಗ
ಒಯ್ಯನೆ ವೀರ ಪರಿವಾರ || ೧೫೪ ||
ಎರಡು ಬಲವು ಕೂಡಿ ತಗರಂದದಿ ತಾಕ್ಯಾಡಿ
ದೊರೆದೊರೆಗಳ ನೇಮದಲಿ |
ತುರುಗಕೆ ತುರುಗವು ಕರಿಗಳಿಗೆ ಕರಿಗಳು
ಹರಿಗೆ ಹರಿಗೆ ಬಿಲ್ಲಿನವರು || ೧೫೫ ||
ವೀರ ರಾಮನು ಹೊಕ್ಕ ಸಾ[ರ]ದಿ ತನ್ನೊಡನೆ ಮು
ನ್ನೂರು ಕುದುರೆಯು ಎಪ್ಪತ್ತು |
ಭೋರನೆ ಇರಿದು ಸಾವಿರ ಶೂಲಗಳಲಿ
ಧೀರ ಪ್ರತಾಪನ ಇದಿರ || ೧೫೬ ||
ಶರಣರ ಸೂಲವು ಇರಿದು ನೂಕುತ [ಬರೆ]
ಮುರಿದೋಡಿ ತಮತಮಗಲ್ಲಿ |
ಪರಿವಾರ ಪುರಜನ ಬಂದೋಡಿ ಹೊಕ್ಕರು
ಪುರವೋರ್ಗಲ್ಲ ಪಟ್ಟಣವ || ೧೫೭ ||
ಹಿಂದುಮುಂದೆಲ್ಲ ರಾಮನ ಬಲ ಕೂಡಿತು
ಸಂದಣಿಸಿತು ಮನ್ನೆಯರ |
ಮುಂದುವರಿದು ರಾಮ ಊರು ಹೊಗಿಸಿ ತಾನು
ಹಿಂದಕ್ಕೆ ತಿರುಗಿದ ಬೇಗ || ೧೫೮ ||
ಧರ್ಮಗಾಳೆಯ ಹಿಡಿಸಿದ ರಾಮಯ್ಯನು
ನಿರ್ಮಳದೊಳು ಲಿಂಗನೊಡನೆ |
ಪೆರ್ಮೆಯೊಳೊಂದಾಗಿ ಮಾತುಗಳನಾಡುತ
ವರ್ಮವಿಲ್ಲದೆ ಮನದೊಳಗೆ || ೧೫೯ ||
ಓರುಗಲ್ಲನು ಹೊಕ್ಕರು ತಾವಾಗಲೆ
ವೀರ ರಾಮಯ್ಯ ನೆಲ್ಲೂರು |
ಸಾರಿ ವನವನು ಹೊಕ್ಕು ಶರಣರು ಇಹ
ದ್ವಾರವಾಟವನೊಳಪೊಕ್ಕ || ೧೬೦ ||
ಹೊಕ್ಕು ಶರಣರ ಅಡಿಗೆರಗಿದ ರಾಮಯ್ಯ
ಗಕ್ಕನೆ ಹೊರಟ ಬೇಗದಲಿ |
ಅಕ್ಕರಿಂದಲಿ ಬಹ ದಳವನು ಕಾಣುತ
ಹೊಕ್ಕು ಬಾಬಾಜಿ ನಿಲ್ಲೆನುತ || ೧೬೧ ||
ಬಿಡು ನಮ್ಮ ಎಪ್ಪತ್ತಿರಾಜ ಬೊಲ್ಲನನೆಂದು
ನುಡಿಯನು ಕೇಳಿ ರಾಮಯ್ಯ |
ಖಡ್ಗವನುಚ್ಚಿ ಕೋಪದಿ ಘಡಿಘುಡಿಸುತ
ಹೊಡೆದು ಬಾಬಾಜಿಯ ಬಲವ || ೧೬೨ ||
ಬೊಲ್ಲನ ಏರಿ ದುವ್ವಾಳಿಸಿ ರಾಮಯ್ಯ
ನಿಲ್ಲದೆ ಹೋಗುತಿರಲೊಡನೆ |
ಬಲ್ಲಿದ ಕೊಳ್ಳಿಯ ನಾಗಣ್ಣನೊಳಪೊಕ್ಕು
ಬಿಲ್ಲಿನ ಮಂದಿ ತಾ ಸಹಿತ || ೧೬೩ ||
ಗುಜ್ಜಲ ಓಬನು ಚಿಗತಮ್ಮ ಚಿನುಮಾದ
ಮಜಬಾಪುರೆ ರಾಮನೆಡೆಗೆ || ೧೬೪ ||
ಮುಂದಣ ಪೌಜಿಗೆ ಕೋಟಿಗರ ದ್ಯಾವನು
ಮಂದಿನ ನೋಡೆ ಹಾಯ್ಸಿಕೊಂಡು |
ಹಿಂದಕ್ಕೆ ಮರಳೆ ಪಾಪಯ್ಯನು ಮೂಗನು
ಅಂದು ಹಾಕಿದನು ಕುದುರೆಯನು || ೧೬೫ ||
ಕುದುರೆಯ ಹಾಕಲು ಒಡನೈದು ಮಂದಿಯು
ಕದುಬಿ ತಮ್ಮಯ ಮಂದಿ ಸಹಿತ |
ಒದಗಿತು ಬೂಟಕ ಬೊಮ್ಮನ ಮಂದಿಯು
ಚದರದೆ ರಾಮಯ್ಯನೊಡನೆ || ೧೬೬ ||
ಕಡಿದು ಕತ್ತರಿಸಿ ಖಂಡ್ರಿಸಿ ತುಂಡುಮಾಡಿದ
ವದನ ಒತ್ತರಿಸಿ ನಡೆ ಚಿನ್ನ |
ಸಿಡಿಲು ಹೊಡೆದಂತಾಗೆ ನಡುಗಿ ಹೋದರೆಲ್ಲ
ಅಡವಿ ಗಿಡಕೆ ಒಬ್ಬರಾಗಿ || ೧೬೭ ||
ಅತ್ತಲವರನಟ್ಟಿ ಇತ್ತಲೀ ರಾಮಯ್ಯ
ಒತ್ತಿ ನಡೆದನು ಮುಂದೆಸೆಯ || ೧೬೮ ||
ಮುತ್ತಿನಂದಣವೇರಿ ದೇವಿಸೆಟ್ಟಿಯ ಲಿಂಗ
ಹತ್ತಿ ವಾರುವನು ಹಾರಿಸುತ |
ಒತ್ತಿಲಿ ಮಾದಿಗ ಹಂಪ ಸಂಪಯ್ಯನು
ಸುತ್ತಲೈವರು ಮನ್ನೆಯರು || ೧೬೯ ||
ಚಿತ್ತಜ ಸಮರೂಪ ರಾಮಯ್ಯ ಅರ್ತಿಲಿ [ಬರೆ]
ಮೊತ್ತವ ಕಂಡು ಕಾಶ್ಮೀರ |
ಹೊತ್ತ ನ್ಯಾಜ್ಯವು ಹನ್ನೆರಡು ಸಾವಿರ ಮಂದಿ
ಮುತ್ತಿ ಮುಸುಕಿತು ಆ ಬಲವ || ೧೭೦ ||
ಬಿಡು ರುದ್ರರಾಯನ ಮಗನ ತೇಜಿ [ಯ] ಎಂದು
ತಡೆದನು ಕಾಶ್ಮೀರ [ಭೂ]ಪ |
ಜಡಿದು ಖಡ್ಗವನೆತ್ತಿ ಹೊಡೆದು ನೂಕಿತು ಬಲ
ಅಡೆಯೆದ್ದು ಮುರಿದು ಓಡಿದರು || ೧೭೧ ||
ಓಡದಿರೆಲ್ಲೊ ಹೇಡಿ ಮಾಡು ಹುಯ್ಯಲನೆಂದು
ನೋಡಿ ಭಲ್ಲೆಯದವರು ತಿವಿಯೆ |
ಮೂಡಿದ ಗಾಯವು ಪೌಜೆಲ್ಲ ಹೊರಬಿಚ್ಚಿ
ಓಡಿತು ಅಡವಿ ಪಾಲಾಗಿ || ೧೭೨ ||
ರೂಢಿಗೀಶ್ವರನ ಕೃಪೆಯುಂಟವನಿಗೆ
ನಾಡಾಡಿ ಮನ್ನೆಯವರೆಲ್ಲ |
ಜೋಡುಂಟೆ ಅವನಿಗೆ ಈ ನಾಡಿನೊಳಗೆಂದು
ಓಡಿಹೋದರು ತಮತಮಗೆ || ೧೭೩ ||
ಓಡಲತ್ತಲು ರಾಮ ಕೂಡಿ ಎಕ್ಕಟಿಗರು
ಬೀಡ ಬಿಟ್ಟರು ವಹಿಲದಲಿ |
ಅಲ್ಲಿಂದ ಮುಂದಕ್ಕೆ ನಡೆದು ಮೂಗಾವುದ
ಬಂದರು ಸಿದ್ಧವಟಕಾಗಿ || ೧೭೪ ||
ಕೆಂಧೂಳು ಮುಸುಕೆ ನಡೆದ ರಾಮನಾಥನು
ಕುಂದದೆ ಸಿದ್ಧವಟ್ಟದಲಿ |
ಇರುಳ ಕಳೆದು ನಿದ್ರೆಯೊಳೊರಗಿರ್ದು
ತೆರಳಿ ಮುಂದಕ್ಕೆ ನಡೆವಾಗ || ೧೭೫ ||
ರಟ್ಟಿನ ಹೊಳೆಯ ದಾಂಟಿಸಿ ಕಡಿದು ಬಂದು
ಬಿಟ್ಟನು ಬೆಳಗಿನೇಳ್ಯದಲಿ || ೧೭೬ ||
ಅಲ್ಲಿಂದ ತೆರಳಿ ಯಾದವಗಿರಿದುರ್ಗಕ್ಕೆ
ಬಲ್ಲಿದ ವೀರ ರಾಮಯ್ಯ |
ಬೊಲ್ಲನ ಏರಿ ದುವ್ವಾಳಿಸುತಲಿ ಬಂದು
ನಿಲ್ಲದೆ ಹೊಳೆಯ ದಂಡೆಯಲಿ || ೧೭೭ ||
ಅಡಿಗೆಯ ಮಾಡುಂಡು ಒಡನೆ ಎದ್ದನು ರಾಮ
ನಡೆದನು ಬೆಳ್ಳಬೆಳ[ತನ]ಕ |
ಅಡಗಿದ ಬೇಡರು ಅಡೆಯೆದ್ದು ಹೋದರು
ನಡೆದನು ಮುಂದಕ್ಕೆ ರಾಮ || ೧೭೮ ||
ಆದವನ್ನಿಗಾಗಿ ನಡೆದನು ರಾಮಯ್ಯ ವಿನೋ
ದದಿ ಹೊಳೆಯ ದಂಡೆಯಲಿ |
ಸಾಧಿಸಿ ಸ್ನಾನಪಾನವ ಮಾಡಿ ಉಂಡುಟ್ಟು
ಆ ದಿನಗಳೆದನು ಅಲ್ಲಿ || ೧೭೯ ||
ಅಲ್ಲಿಂದ ಮುಂದಕ್ಕೆ ಆದವನ್ನಿ [ಬಿಟ್ಟು]
ಬಲ್ಲಿದ ವೀರ ರಾಮಯ್ಯ |
ಬೊಲ್ಲನ ಏರಿ ದುವ್ವಾಳಿಸುತ ಬಂದನು
ಮೆಲ್ಲನೆ ಕುರುಗೋಡ ಬಳಿಗೆ || ೧೮೦ ||
ಮೂರು ದಿವಸ ತನಕ ನಿಲದಂಡ ನಿಲಿಸಿದ
ಚಾರುತನದ ವಾಣಿಯಲಿ |
ಭೂರಿಯ ಚರರುಗಳು ಇತ್ತ ಕಮ್ಮಟದೊಳು
ಮತ್ತೆ ಕಂಪಿಲನೊಳು ಉಸುರೆ || ೧೮೧ ||
ಕುರುಗೋಡ ಬಳಿಗೆ ಬಂದನು ರಾಮನಾಥನು
ದೊರೆಗಳ ದೇವ ಕೇಳೊಲಿದು |
ಧರೆಯೊಳಗುಳ್ಳ ರಾಯರು ನಿಮ್ಮ ಕಂದಗೆ
ಸರಿಯಾರೊ ಕಂಪಿಲರಾಯ || ೧೮೨ ||
ಓರುಗಲ್ಲವನ ಬೊಲ್ಲನ ತರಹೇಳಿದೆ
ವೀರ ರಾಮಯ್ಯಗವನಿದುರೆ |
ಹಾರಲೊದ್ದವನ ಎಪ್ಪತಿರಾಜನ ಗೆದ್ದು
ಸಾರಿ ತಂದನು ಕಂಪಿಲಿದಿರ || ೧೮೪ ||
ಓರುಗಲ್ಲವನ ಬೊಲ್ಲನ ತರಹೇಳಿದೆ
ವೀರ ರಾಮಯ್ಯಗವನಿದುರೆ |
ಹಾರಲೊದ್ದವನ ಎಪ್ಪತಿರಾಜನ ಗೆದ್ದು
ಸಾರಿ ತಂದನು ಬಿರಿದುಗಳ || ೧೮೩ ||
ಇತ್ತ ರಾಮಯ್ಯ ಪಾಳ್ಯವನಿಳಿದುದ ಕೇಳಿ
ಮತ್ತೆ ಬಂದನು ಕಂಪಿಲಿದಿರ || ೧೮೪ ||
ಕುರುಗೋಡ ಬಿಟ್ಟು ನಡೆಯ ಮುಂದಕಲ್ಲಿಂದ
ಹರುಷದಿಂದಲಿ ರಾಮನಾಥ |
ಇರದೆ ಕಂಪಿಲಿಯ ಸೋಮೇಶನೆಡೆಗೆ ಬಂದು
ಧುರಗಲಿ ರಾಮ ತಾನಿಳಿದ || ೧೮೫ ||
ಇಳಿದು ಸೋಮೇಶಗೆ ಥಳಥಳಿಸುವ ವಸ್ತ್ರ
ವಿಳಿವಿಡಿಸಿದನು ರಾಮಯ್ಯ |
ಭಾಳಲೋಚನ ಭವಪಾಪನಾಶನೆ ತ್ರಿ
ಶೂಲಧರನೆ ಜಯಜಯತು || ೧೮೬ ||
ಜಯ ಜಯ ಪಾಪನಾಶನೆ ಜಯ ಶಿರಕರಧರ
ಜಯತು ಜಯತು ಸೋಮೇಶ || ೧೮೭ ||
ಭೇರಿ ಮೃದಂಗ ತಪ್ಪಟೆ ಗಿಡಿಬಿಡಿ ಕೊಂಬು
ಭೋರು ಮೊರೆವ ನಾಗಸರವು |
ಭೋರೆಂಬ ವಾದ್ಯ ಘೀಳಿಡೆ ಬಂದ ಕಂಪಿಲ
ವೀರ ರಾಮಯ್ಯನಿದ್ದೆಡೆಗೆ || ೧೮೮ ||
ಬಂದ ಕಂಪಿಲರಾಯಗೊಂದಿಸಿ ರಾಮಯ್ಯ
ಬಂದು ಅಪ್ಪಿದನು ಭುಜತುಂಬ |
ಕಂದ ನೀ ಬಲ್ಲಿದನಹುದೊ ಬೊಲ್ಲನ [ತಾ]
ರೆಂದ ಮಾತಿಗೆ ಹೋಗಬಹುದೆ || ೧೮೯ ||
ಈತನಾರೆಂದು ಕೇಳಿದ ಭೂಪನಂದು
ಹೇಳಿದ ರಾಮನಾಥ |
ಕುಂದದೆ ಓರ್ಗಲ್ಲ ಪಟ್ಟಣಸೆಟ್ಟಿಯು
ದೇವಿಸೆಟ್ಟಿ ಲಿಂಗಣ್ಣ || ೧೯೦ ||
ಓರುಗಲ್ಲರಸಿನ ಬಲಕೆ ಬಲ್ಲಿದನಿವ
ಕಾರಮಿಂಚಾಗಿ ಹೊಳೆವನು |
ವೀರ ಮಾದಿಗ ಹಂಪ ಭಾರಿ ಎಕ್ಕಟಿಗ[ನು]
ಧಾರುಣಿಗಧಿಕ ಸಮರ್ಥ || ೧೯೧ ||
ಇವರಿರ್ವರಿಂದ ತಂದೆನು ಬೊಲ್ಲನ
ಬವರಕ್ಕೆ ನಿಶ್ಯಂಕರಹುದು |
ಭುವನದೊಳಿವರ ಸಾಮರ್ಥ್ಯಕ್ಕೆ ಇದಿರುಂಟೆ
ತ್ರಿವಿಧ ಲೋಕದೊಳು ಕಾಣೆನೆಂದ || ೧೯೨ ||
ಹೋದೆ ನೆಲ್ಲೂರಪುರದ ಗುಂಡಭ್ರಹ್ಮಯ್ಯಗೆ
ಅದಿ ಶರಣರ ಮಠಕೊಲಿದು |
ಭೇದವಿಲ್ಲದೆ ಮುಂದಕ್ಕಡಿಯಿಟ್ಟು ಹೋಗಲು
ಹಾದಿಲಿ ಕಂಡಿದಿರಾಗಿ || ೧೯೩ ||
ಆರು ನೀನಾವೂರು ಆರ ಮಗನು ಎಂದು
ಹಾರು ಮಾತಿಂದ ಕೇಳಿದರೆ |
ಧೀರ ಕಂಪಿಲನ ಕುಮಾರನೆಂದುಸುರಲು
ಭೋರನವನು ಎನ್ನನೆತ್ತಿ || ೧೯೪ ||
ಏನು ಕಾರಣ ಬಂದೆ ಚೆನ್ನಿಗ ರಾಮಯ್ಯ ಅ
ದೇನು ಹೇಳಾ ಎನ್ನೊಡನೆ |
ನಾನುಸುರಿದೆನು ಬೊಲ್ಲನ ತಾಹರೆ ಬಂದೆ
ಮಾನವೇಶ್ವರ ಕೇಳಿ ನುಡಿಯೆ || ೧೯೫ ||
ನಂಬಿ ಬೊಲ್ಲನ ಕೊಂಡುಬಂದೆವೀ ತೆರದಿಂದ
ಉನ್ನತ ಹರುಷದೊಳ್ ನಾವು || ೧೯೬ ||
ಬೊಲ್ಲನ ತರಿಸಿ ನೋಡಿದನಾಗ ಕಂಪಿಲ
ಉಲ್ಲಾಸದಿಂದ ಹರುಷದಲಿ |
ಬಲ್ಲಿದ ರಾಮಗೆ ತಕ್ಕಂಥ ವಾಜಿಯು
ಒಲಿದು ಕೊಟ್ಟನು ಜಟ್ಟಂಗೀಶ || ೧೯೭ ||
ದೇವಿಸೆಟ್ಟಿಯ ಲಿಂಗಣ್ಣಗೆ ರಾಮಯ್ಯ
ಭಾವದಿ ಉಡುಗೊರೆಗಳನು |
ಕೋವಿದ ರಾಮಗೆ ಗೆಲ್ಲಿಸಿ ಕರೆತಂದೆ
ಆವ ಜಲ್ಮದ ಗೆಣೆತನವೊ || ೧೯೮ ||
ಸೆಟ್ಟಿ ಲಿಂಗಣ್ಣಗೆ ಕೊಟ್ಟನು ನೀಲನ
ಪಟ್ಟುಪಟ್ಟಾವಳಿಗಳನು |
ಇಟ್ಟನು ಹುರುಮಂಜ ಒಂಟಿಗಳನು ಆಗ
ಕೊಟ್ಟನು ಪದಕ ಸರಪಳಿಯ || ೧೯೯ ||
ಮನ್ನೆಯ ಮಾದಿಗ ಹಂಪಗೆ ಕೊಟ್ಟನು
ಉನ್ನಂತ ದಟ್ಟಿ ಕಬಾಯಿ |
ಹೊನ್ನ ಬಳ್ಳದ ಹತ್ತೆಕಟ್ಟು ಸರಪಳಿಯನು
ಮನ್ನಿಸಿ ಕೊಟ್ಟನುಡುಗೊರೆಯ || ೨೦೦ ||
ಜಗಳವ ಗೆದ್ದು ಬೊಲ್ಲನ ತಂದು ಮುಂದಿಟ್ಟು
ಸೊಗಸಿಂದಲವರು ಕೈ ಮುಗಿಯೆ || ೨೦೧ ||
ಬಂದಿರ ನಿರ್ಮಳದೊಳಗೆ ನೀವೆಲ್ಲರು
ಇಂದೆಮ್ಮ ರಾಮಯ್ಯನೊಡನೆ |
ಸಂದೇಹವ್ಯಾತಕೆ ಗುಜಲೋಬ ಚಿನುಮಾದ
ಮುಂದಾದ ಸುದ್ದಿಯನುಸರೆ || ೨೦೨ ||
ಇಲ್ಲಿಂದ ಹೊರಟು ಹೋದೆವು ಒರ್ಗಲ್ಲಿಗೆ
ಎಲ್ಲ ಮನ್ನೆಯರನು ದಾಂಟಿ |
ಬಲ್ಲಿದ ಪ್ರತಾಪರುದ್ರ ತಾ ಕರೆಸಲು
ಅಲ್ಲಿಗೆ ಹೋದೆವೆಂದೈಸೆ || ೨೦೩ ||
ರಾಮ ಹೋಗಲು ಎದ್ದು ಕುಳಿತನು ಪ್ರತಾಪ
ತಾನು ಮಾಡಿದನು ಉಡುಗೊರೆಯ |
ನೂನವಿಲ್ಲದೆ ಬಿಡಿದಿಯ ಮನೆಯ ಕೊಡಿಸಿದ
ಆನಂದದಲಿ ಹೋಗಿರೆಂದ || ೨೦೪ ||
ಎದ್ದು ಬರುತ ರಾಮಯ್ಯನ ಬಿರಿದುಗಳ
ನಿರ್ಧರದಲಿ ಭಟರ್ಹೊಗಳೆ |
ಇದ್ದಂತೆ ಕೊಂಡಾಡಲು ಕದನ ಹುಟ್ಟಿತು
ಬಿದ್ದರು ನಮ್ಮ ಮೇಲವರು || ೨೦೫ ||
ಹೆಣಮಯ ರಣಮಯವಾಯಿತು ಊರೊಳು
ರಣಕೇರಿ ಬಂದ ಬೊಲ್ಲನನು |
ಸೆಣಸಲು ರಾಮಯ್ಯ ಕಡಿದೇರಿ ಕೊಂದನು
ಅಣಕವನೆಂತು ಪೇಳುವೆನು || ೨೦೬ ||
ಈ ಬಗೆಯಲ್ಲಿ ಕುದುರೆಯನೆತ್ತಿಕೊಂಡು
ಬೇಗ ಹೊರಟು ಬಂದೆವೆನುತ |
ಹೋಗಿ ಬಂದಂಥ ಸುದ್ದಿಯ ಕೇಳಿ ಕಂಪಿಲ
ಆಗ ಸಂತಸಗೊಂಡ ರಾಯ || ೨೦೭ ||
ಮಾನ್ಯರಿಗೆಲ್ಲ ಉಡುಗೊರೆಗಳ ಕೊಟ್ಟು
ಹೊನ್ನು ಹಣವ ಹಂಚಿ ಕೊಟ್ಟು |
ಉನ್ನಂತ ಹರುಷದಿ ಬಿರಿದು ಬಾವುಲಿ ಕೊಟ್ಟು
ಮನ್ನಿಸಿದನು ರಾಯನವರ || ೨೦೮ ||
ಮೂರು ಸಾವಿರ ಬಲ ಮುನ್ನೂರು ವಾಜಿಯು
ಸಾರಿ ರಾಮಯ್ಯನ ಕೊಡೆ |
ಭೇರಿಯ ಹೊಯ್ಯುತ ಬಂದು ಕೈಮುಗಿದರು
ಧಾರುಣಿಪತಿಯು ಕಂಪಿಲಗೆ || ೨೦೯ ||
ತೆರಳಿ ಅಲ್ಲಿಂದ ಮುಂದಕ್ಕೆ ಹೊಳೆಯ ದಾಂಟಿ
ಉರವಣಿಯಲಿ ಹೊಸಮಲೆಗೆ |
ಧುರಧೀರ ಬಾಹದ ಕಂಡು ಹರಿಯಲದೇವಿ
ಹರಿವಾಣದಾರತಿಯ ಪಿಡಿದು || ೨೧೦ ||
ವೀರ ರಾಮಯ್ಯಗಾರತಿಗಳ ತಂದಂಥ
ನಾರಿಯರುಗಳ ಶೃಂಗಾರವ |
ಆರು ಪೊಗಳುವರು ಧಾರುಣಿಯೊಳಗೊರ್ವ
ವಾರಿಜೋದ್ಭವಗಿಂದ್ರಗಳವೆ || ೨೧೧ ||
ಮನ್ನೆಯ ಮಾಂಡಲಿಕರು ಮಂತ್ರಿ ಬೈಚಪ್ಪ
ಅಣ್ಣ ಕಾಟಣ್ಣ ಸಹೋದರರು |
ಚೆನ್ನಾಗಿ ರಾಮಯ್ಯನ ಇದಿರುಗೊಂಡರು ಎಲ್ಲ
ಸನ್ಮತದಿಂದಲಾಕ್ಷಣದಿ || ೨೧೨ ||
ಬಂದ ರಾಮನ ತಬ್ಬಿ ನಿಂದು ಆರತಿ ಎತ್ತಿ
ಕಂದನ ಕೈವಿಡಿದುಕೊಂಡು || ೨೧೩ ||
ಕಳುಹಿದನಣ್ಣ ಕಾಟಣ್ಣನ ರಾಮಯ್ಯ
ಕಳುಹಿದ ಭಾವ ಸಂಗಮನ |
ಕಳುಹಿದ ಮಂತ್ರಿ ಬೈಚಪ್ಪನ ಬೇಗದಿ
ಕಳುಹಿದ ಮನ್ನೆಯರುಗಳ || ೨೧೪ ||
ತನ್ನೊಡನಿತ್ತ ಬಂದವರಿಗೆ ಮನೆಗಳ
ಉನ್ನಿಸಿದನು ರಾಮನಾಥ |
ಮನ್ನಿಸಿ ಕಳುಹಿದ ಮನ್ನೆಯರೆಲ್ಲರ
ಭಿನ್ನವಿಲ್ಲದೆ ಅರಮನೆಗೆ || ೨೧೫ ||
ಚಿನುಮಯ ರೂಪ ಜಟ್ಟಂಗಿರಾಮನೆ ಗತಿ
ಎನುತ ಹೊಕ್ಕನು ಅರಮನೆಯ || ೨೧೬ ||
ತನ್ನರಮನೆಯ ಹೊಕ್ಕನು ರಾಮನಾಥನು
ಪನ್ನಗಂಧರ ಗತಿಯೆನುತ |
ಭಿನ್ನವಿಲ್ಲದೆ ಭೋಜನ ಮಾಡಿ ರಾಮಯ್ಯ
ಮನ್ನಿಸಿ ಸತಿಯರೆಲ್ಲರನು || ೨೧೭ ||
ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳು ಬೊಲ್ಲನನು |
ಇರದೆ ಬೊಲ್ಲನ ತಂದು ಮೆರೆವ ಜಟ್ಟಂಗಿ
ವರದಿಂದ ನೀನಹುದೊ ಎಂದು || ೨೧೮ ||
ಇದು ಪರನಾರಿ ಸೋದರ ರಾಮನಾಥನ
ಪದಕೃತಿಯೊಳಗೊಂದು ಕಥೆಯ |
ಕದನವ ಗೆದ್ದು ಬೊಲ್ಲನ ತಂದ ರಾಮ
ಪದಗಳು ಪೂರಾಯ್ತು ಮುಂದೆ || ೨೧೯ ||
ಅಂತು ಸಂಧಿ ೮ಕ್ಕಂ ಪದನು ೭೨೮ಕ್ಕಂ ಮಂಗಳ ಮಹಾಶ್ರೀ
Leave A Comment