ಗುರಿಯಾವುದೆಂದೆಲ್ಲ ಕೇಳುವರು ಎನ್ನ!
ಅರಿಯರೇ ಗುರಿಯು ಸರ್ವಕೆ ನೀನೆ ಎಂದು?
ಗುರಿಯು ನೀನೆಂದೆನಲು ನಾಚುವೆನು ಜನನಿ:
ಗುರಿಯು ನೀನೆನಲೆನ್ನ ಮರುಳನೆಂಬುವರು!
ತಿರೆಯ ಸಿರಿಸುತರೆದುರು ತಲೆವಾಗಿ ನಿಂತು
ಮನದಿ ನಿನ್ನನು ನೆನೆವೆ ನಮ್ರಭಾವದೊಳು!
ವಾದಿಸುವರೆನ್ನೊಡನೆ ಜೀವನವ ನಡಸೆ
ಮೇದಿನಿಯ ಸಿರಿಯೊಲ್ಮೆಯಿರಲೆ ಬೇಕೆಂದು;
ವಾದಗಳನಾಲಿಸುವೆ ನಸುನಗೆಯ ತಡೆದು,
ಹೇ ದೇವಿ, ನಿನ್ನ ಕೃಪೆಯಿಹುದೆಂದು ತಿಳಿದು!
ಬಲ್ಲರೇ ಅವರೆನ್ನ ಹೃದಯದೊಳಗಿಹುದು
ಸಲ್ಲಲಿತದಾನಂದ ಸಾಗರವು ಎಂದು!
ಜಗದ ಸಿರಿಸುತರೆನ್ನ ಜಡನೆಂದರೇನು?
ಅಗಲದಿರು ಎಲೆ ತಾಯೆ ಮನದಿಂದ ನೀನು!
-೧೯೨೬
Leave A Comment