ಅದೆ ಬಂದ ಕುಮಾರ ಮಲ್ಲ ಎನುತ ದಂಡು
ಬೆದರಿ ತಮ್ಮೊಳು ಕಡಿದಾಡಿ
ಮದದಾನೆ ಕುದುರೆ ಕಾಲೊಳು ತುಳಿದು ಮಂದಿ
ಮಡದವು ತೊಂಭತ್ತು ಸಾಸಿರವು ||೪೫||
ಬೆರಗಾದನು ನರಸಿಂಹ ಸಾಹಸಕೆಲ್ಲ
ಗರುವ ಈ ಕುಮಾರ ಮಲ್ಲ
ಕುರುಹನು ನಾನರಿಯೆ ಅವನ ತೋರೆನುತಲಿ
ನರಸಿಂಹ ಬಂದು ನೋಡಿದರೆ ||೪೬||
ದಿಕ್ಕಿನೊಳಗೆ ಗೊಲ್ಲ ಸಿರುಮ
ಸಿಕ್ಕಿದುದಿನ್ನೆಳ್ಳನಿತಿಲ್ಲ ಬಿರಿದೆಂದು ರಾಯ
ಅಕ್ಕರಿಂದಲಿ [ನುಡಿದನು] ||೪೭||
ಆನೆ ಕುದುರೆ ಮಂದಿ ಆಶ್ಚರ್ಯವನೆ ಕಂಡು
ಏನು ಗಳಿಸಿ ಫಲವೇನು?
ಭಾನುಚಂದ್ರರುಳ್ಳನಕ ಕೀರ್ತಿಯ
ತಾನು ರಾಜ್ಯದಲ್ಲಿ ಪಡೆದ ||೪೮||
. . . . . . .ಮಲ್ಲಭೂಪ ಗಾಯ ಸೊಕ್ಕಿನಲ್ಲಿ
ಖೋ ಎಂದು ಕೂಗಿ ಬೊಬ್ಬಿರಿದು
ಆ ವೇಳ್ಯೆಯದಿ ಪ್ರಧಾನನು ಹಿಡಿ
ದಾಯುಧಗಳು ಬಿದ್ದಿರಲು ||೪೯||
ಕತ್ತಿ ಕ . . . . . . .ಕಿ ಜಮದಾಡೆಯು
ಅತ್ತಿತ್ತ ಬಂದು ಬಿದ್ದಿರಲು
ಮೊತ್ತದಿ ಬೇಗ ತೆಕ್ಕೊಂಡು ಮಲ್ಲಣ್ಣನು
ಮತ್ತೆ ಪ್ರಧಾನರೊಡಗೂಡಿ ||೫೦||
ಸಾವಿಗೆ ಸಂಗಡವಾದಿರಿ ನೀವಿಬ್ಬರು
ಅಹ ಕಲ್ಲರಸ ಲಿಂಗರಸ
ನಾವು ಹೋಗುವವೇಳಿ ಸಿರುಮ ದಾರಿಯ ನೋಳ್ವ
ಆವಾಗ ಬಹರೆಂದೆನುತ ||೫೧||
ಒತ್ತರದ ಗಾಯವ ಕಂಡು ಮಲ್ಲಣ್ಣ
ಎತ್ತಿಕೊಂಡನು ಮಂತ್ರಿಗಳ
ಮತ್ತೆ ಕೊಂಡಕೆ ಹೊಂದಿ ಖೋ ಎಂದು ಕೂಗುತ
ಮೃತ್ಯುಂಜಯ ಜಯ ಎನುತ ||೫೨||
ತಂದೆ ತಾಯಿ ಅಣ್ಣ ತಮ್ಮ ಬಂಧುಗಳಿರ
ಅಂದು ನಿಮಗೆ ಕೊಟ್ಟಪ್ಪಣೆಗೆ
ಇಂದು ಕಲ್ಲರಸ ಲಿಂಗರಸ ನಾನು ಸಹವಾಗಿ
ಬಂದೆವೆನುತ ಧುಮುಕಿದನು ||೫೩||
ಕೊಂಡಕೆ ಬೀಳುವ ಕೊಮಾರ ಮಲ್ಲಣ್ಣನ
ಕೆಂಡಗಣ್ಣನು ಪಿಡಿದೆತ್ತಿ
ಗಂಡುಗಳರಸನೆ ಬಾಳು ಬಾಳೆಂದು
ಮಂಡೆಯ ಪಿಡಿದಲುಗಿದನು ||೫೪||
ನೆರದು ೫[1][ಬಾನೊಳು]೫ ನಾರದ ಬ್ರಹ್ಮರುಷಿಗಳು
ಗರುಡ ತುಂಬುರ ಗಣಕುಲವು
ಸಿರುಮನ ಮಗ ಮಲ್ಲನ ಸಾಹಸಕೆ ಮೆಚ್ಚಿ
ಸುರಿದರು ಹೂವಿನ ಮಳೆಯ ||೫೫||
ಆ ವೇಳೆಯದಿ ಈಶ್ವರ ಪಾರ್ವತಿಯ ಕರಸಿ
ಯೋಚಿಸಿದನು ಪ್ರಮಥಗಣರೊಡನೆ
ದೇಶಕಗ್ಗಳೆಯಾಗಬೇಕಂದು ಗೊಲ್ಲಗೆ
ಸೂಸಿ ಹೂವಿನ ಮಳೆಗರೆಸಿ ||೫೬||
ನಿಮ್ಮ ವೀರಶೈವಕೆ ನಾ ಮೆಚ್ಚಿದೆ
ಗಮ್ಮನೆ ವರವ ಬೇಡೆನಲು
ತಮ್ಮ ತಾಯಿ ಸತಿ ಸುತರುಗಳನು
ನಿಮ್ಮ ಪಾದಕೆ ಕೊಂಡೊಯ್ಯೋದೆ ||೫೭||
ಹಿರಿಯ ಸೋಮಣ್ಣನು ಹಾರುವ ಕಲ್ಲರಸ
ಕಿರಿಯ ವೀರಣ್ಣ ಲಿಂಗರಸ
ಧುರಧೀರ ಕಾಚನು ಹೆಮ್ಮಕ್ಕಳು ಸಹ
ಹರಗಿರಿಗೊಯ್ಯಬೇಕೆಂದ ||೫೮||
ಕೆಂಡಗಣ್ಣನ ಪಾದಕೆರಗಿ
ಪುಂಡರೀಕಾಕ್ಷನಮಿತ ಜಯ ಜಯ ಎಂದು
ದಿಂಡುಗೆಡದು ಹೊರಳಿದರು ||೫೯||
ಮಂಡೆಯ ಪಿಡಿದೆತ್ತಿ ಮಲ್ಲಭೂಪನು ತನ್ನ
ಮಂಡೆಯೊಳಿಹ ಗಂಗೆಯನು
ಕೊಂಡದೊಳಗೆ ತಳಿಯದ ಮುನ್ನ ಸಿರುಮಣ್ಣ
ದಿಂಡುಗೆಡದು ಹೊರಳಿದನು ||೬೦||
ಅಂದು ರಕ್ಕಸಿ ಸೌಂದರ್ಯನ ಮಾರ್ಬಲವ
ತಿಂದವರುಳಿದು ಬಂದಂತೆ
ಇಂದು ಕೊಂಡಕೆ ಬಿದ್ದವರೊಬ್ಬ[ರು]ಳಿಯದೆ
ಬಂದು ಪಾದಕೆರಗಿದರು ||೬೧||
ಸಿರುಮಣ್ಣ ನಾಯ್ಕನವರ ಸತಿಸುತರೆಲ್ಲರ
ಪುರಕೊಯ್ವೆನೆಂದ ಈಶ್ವರನು
ಭರದಿಂದ ಪುಷ್ಪಕ ತರಿಸಿ ಸಿರುಮ ನಿನ್ನ
ವರ ಕುವರರು ಸಹಿತ ತೆರಳೆಂದ ||೬೨||
ಎಂದ ಮಾತನು ಕೇಳುವ ಸಿರುಮ ತನ್ನ
ಬಂಧು ಬಳಗ ಸಹವಾಗಿ
ಕಂದ ಮಲ್ಲ ಕಾಚ ಸೋಮಣ್ಣ ವೀರಣ್ಣ ಸಹ
ಬಂದು ಪುಷ್ಪಕವನೇರಿದರು ||೬೩||
ಉಘೆ ಉಘೆ ಎನುತ ಪುಷ್ಪ[ಕ] ಆಕಾಶಕೆ
ನೆಗೆದು ಧೂಪದ ಹೊಗೆಯಿಂದ
ಗಗನಕೆ ಜಿಗಿದು ಕೈಲಾಸವ ಹೊಕ್ಕರು
ಅಘಹರನ ಮನೆಗಾಗಿ ||೬೪||
ಬೂದಿಹಾಳ ಸಿರುಮಣ್ಣ ಬರುತಹನೆಂದು
ಇದಿರ ಬಂದರು ರಾಯರುಗಳು
ಮೇದಿನಿಪತಿ ಚೋಳ [ಚೇ]ರುಮ ಗುಂಡಬ್ರಹ್ಮ
ಕ್ರೋಧಿ ಚಿಕ್ಕಯ್ಯ ರಾಮಯ್ಯ ||೬೫||
ವೀರಶೈವದಿ ಮಡಿದ ರಾಯರುಗಳು
ಭೋರನೆ ಬಂದು ಸಿರುಮನ
ಹಾಯ್ದು ತರ್ಕ್ಕೈಸಿ ಕೈಲಾಗುಗಳಿಗೆಗೊಟ್ಟು
ಮಾದೇವನೆಡೆಗೈದಿದರು ||೬೬||
ಬಂದ ಸಿರುಮನಿಗೆ ಗಂಧವೀಳ್ಯವನಿತ್ತು
ಇಂದು ನಿನ್ನಯ ಭಕ್ತಿದೃಢಕೆ
ಒಂದಾರು ಭುಜವಾಗಿ ಮೆಚ್ಚಿದೆನೆಂದು ಶಿವ
ನಂದು ಶರಣರಿಗೆ ತೋರಿದರು ||೬೭||
ನೋಡಯ್ಯ ವೀರೇಶ ನೋಡಯ್ಯ ಭೃಂಗೀಶ
ನೋಡು ಷಣ್ಮುಖ ಗಜಮುಖನೆ
ನೋಡಯ್ಯ ನಂದೀಶ ನೋಡಯ್ಯ ಗುಹಗಣ
ನೋಡಿ ಸಿರುಮನ ಸಾಹಸವ ||೬೮||
ಎಂದು ಕೊಂಡಾಡಿ ಸಿರುಮನ ಸುತರು ಸಹ
ಚೆಂದದಿ ನಮ್ಮ ಬಾಗಿಲಲಿ
ಕುಂದದೆ ಸಾಯುಜ್ಯ ಪದವಿಯಾಗಿರಲೆಂದು
ನಿಂದಭಯವನಿತ್ತನಾಗ ||೬೯||
ಇತ್ತ ನರಸಿಂಹರಾಯ ಈಶ್ವರಿನಾಯಕ
ಹತ್ತಿ ನೋಡಲು ಅರಮನೆಯ
ಚಿತ್ರದ ಗೋಡೆಲ್ಲ ಕೆತ್ತಿ ಸುಟ್ಟಿರಲಾಗಿ
ಪೃಥ್ವಿಪತಿಯು ಬೆರಗಾದ ||೭೦||
ಮುತ್ತು ಮಾಣಿಕ ವಜ್ರ ವೈಢೂರ್ಯವ
ಅರ್ತಿಯ ಲಾಯದ ಕುದುರೆ
ಮೊತ್ತದ ಭಂಡಾರ ಬೊಕ್ಕಸಗಳನೆಲ್ಲ
ಹೊತ್ತಿ ಹೋದುದ ಕಂಡನಾಗ ||೭೧||
ಬೇಗದಿ ನರಸಿಂಹರಾಯ ಸಿರುಮೇಂದ್ರನ
ಅರಮನೆಯನು ಹೊಕ್ಕು ನೋಡಿ
ಇರುವೆ ಕಾಲಷ್ಟು ವಚ್ಛೆವಿಲ್ಲವು ಎಂದು
ಬೆರಗಾಗಿ ನರಸಿಂಹ ನುಡಿದ ||೭೨||
ಇವನೀಗ ವಿಕ್ರಮನೃಪ ಸಿರುಮೇಂದ್ರನು
ಇವನಿಗೆ ಸಲುವದು ಬಿರಿದು
ಇವನು ಹೆಣಗಿ ಕಪ್ಪವ ಕೊಡದಿಹುದೆಂದು
ವಿವರಿಸಿದನು ದೊರೆಗಳಿಗೆ ||೭೩||
ಇವನು ಪೂರ್ವದಲಿ ಈಶ್ವರ ನಿಜಭಕ್ತನು
ಇವಗೆ ಸಲುವುದು ಸಾಯುಜ್ಯ[ಭು]ವನವರಿಯೆ ಕೈವಲ್ಯವಾಯ್ತೆಂದು
ಅವನೀಶ ನಮೋ ನಮೋ ಎಂದ ||೭೪||
ಎಂದಿಗೆ ಮುಂದರಿಯದೆ ಈಶಭಕ್ತನ ನೋಯಿಸಿದೆ
ಎಂದಿಗೆ ಕಳೆವೆನೀ ಭವವ [ಎ]ಂದು
ಈಶ್ವರಿನಾಯ್ಕಗೆ ನರಸಿಂಹನು
ನೊಂದು ಮನದಿ ಮರುಗಿದನು ||೭೫||
ಈಶಭಕ್ತನ ವೀರಶ್ಐವದಿ ಮಡುಹಿದೆ
ಇನ್ನೇನು ಸುಖದ ಪಾತಕನೊ
ಕಾಶಿಕೇತಾರ ಕು[ರು]ಕ್ಷೇತ್ರದಲಿ ನಮ್ಮ
ದೋಷವ ಪರಿಹರಿಸುವೆನು ||೭೬||
ಇವನೀಗ ಈಶ್ವರನ ಪೂಜೆ ಮಾಡಿದ ಭಕ್ತ
ಇವನೀಗ ವೀರಶೈವದವನು
ಇವನಿಗೆ ಸಲುವುದು ಕೈವಲ್ಯಪದವಿಯು
ಭುವ[ನೇ]ಶ ತಾ ಮರುಗಿದನು ||೭೭||
ಮೇದಿನಿಪತಿಗಾಗ ಈಶ್ವರನಾಯಕನೆಂದ
ಆದಿಲಿಂಗವ ನಿರ್ಮಿಸಿಯೆ
ಗೋದಾನ ಕನ್ಯಾದಾನ ಭೂದಾನಗಳಿಂದಲಿ
ಸಾಧಿಸಿಕೊಂಬ ಮುಕ್ತಿಯನು ||೭೮||
ಹರುಷದಲಾ ಮಾತ ಕೇಳುತ ನರಸಿಂಹ
ಕರಸಿದ ಕಾಮಾಟದವರ
ಭರದಿಂದ ಕೊಂಡವ ಹೂಣಿಸದರ ಮೇಲೆ
ಗಿರಿ ಗೋಪುರ ಕಟ್ಟಿಸಿದನು ||೭೯||
ಆ ಗೋಪುರದೊಳು ಆದಿಲಿಂಗವನಿಟ್ಟು
ನಾಗಭೂಷಣ ಜಯ ಎನುತ
ಬೇಗ ಠಾಣ್ಯಕೆ ರುದ್ರರಾಜನೆಂಬನಿಟ್ಟು
ಸಾಗಿದ ವಿಜಯನಗರಕೆ ||೮೦||
ಕಾಳೆ ಹೆಗ್ಯಾಳೆ ಡೊಳ್ಳು ಮೃತಾಪವು
ಸೂಳೈಸಲು ಭೇರಿಗಳು
ಪಾಳೆಯವನು ಬಿಟ್ಟಲ್ಲಿ ಬಿಡದೆ ಬಂದ
ಸಾಳುವ ನರಸಿಂಗರಾಯ ||೮೧||
ಬಂದು ಪಂಪಾಲಿಂಗಗೊಂದನೆಯನು ಮಾಡಿ
ಚಂದ್ರಶೇಖರ ಗತಿ ಎನುತ
ಕುಂದದೆ ನರಸಿಂಹ ವಿಜಯನಗರದೊಳು
ನಿಂದಲ್ಲಿ ಸಂಧಿ ಪೂರಾಯ ||೮೨||
ಈ ಸಿರುಮನ ಸಾಂಗತ್ಯವ ಕೇಳು ವಿಧಿ
ನಾಶವಹುದು ಭವ ಹಿಂಗುವದು
ಬೇಸರದೆ ಓದಿ ಪಠಿಸಿದರೆ ಪಾಪ
ನಾಶವಹುದು ನಿಮುಷದಲಿ ||೮೩||
ವೃತ್ತ|| ಕ್ಷಿತಿಯೊಳು ಕೇಳುವ ಶರಣಜನರ ಸಂತೋಷ
ಕೃತಿಯಿದು ಬೂದಿಹಾಳ ಸಿರುಮ ಕಾದಿದ ದಿವ್ಯಪ್ರಕಾಶ
ಸ್ತುತಿಸಿದ ಶಿವಲೀಲೆ ವೀರನ ಮಗ ಮಲ್ಲೇಶ ಅತಿ
ಹಿತದಿ ಜಗಜೀವಿತರ ಸಲಹುವ ಅಸಗೋಡ ಶಂಭುಮಲ್ಲೇಶ೬[2] ||೮೪||
ಶ್ರೀ ಶ್ರೀ ಶ್ರೀ
Leave A Comment