Categories
e-ದಿನ

ಜನವರಿ-14

ದಿನಾಚರಣೆ
ಭಾರತದಲ್ಲಿ ಮಕರ ಸಂಕ್ರಾಂತಿ, ಮಾಘಿ, ಮಾಘೇ, ಪೊಂಗಲ್, ಉತ್ತರಾಯಣ ಹೀಗೆ ವಿವಿಧ ರೀತಿಯ ಸಂಭ್ರಮ
ಭಾರತದ ಎಲ್ಲ ಭಾಗಗಳಲ್ಲೂ ಸುಗ್ಗಿ ಸಂಭ್ರಮ ಅಥವಾ ಹೊಲಗದ್ದೆಗಳಲ್ಲಿ ಬೆಳಯ ಕಟಾವು ಸಂಭ್ರಮ, ಪರಿಸರಕ್ಕೆ ಕೃತಜ್ಞತೆ, ವಿವಿಧ ರೀತಿಯ ಸಂಸ್ಕೃತಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವಗಳನ್ನು ಹೊಸೆದುಕೊಂಡಿರುವ ವಿಶಿಷ್ಟ ಆಚರಣೆ ಸಂಕ್ರಾಂತಿ. ಒಂದು ದಿನದಿಂದ ಮೂರು ನಾಲ್ಕು ದಿನಗಳವರೆಗೆ ಈ ಹಬ್ಬ ವಿಧ ವಿಧಗಳಲ್ಲಿ ಹಲವು ಹೆಸರುಗಳಲ್ಲಿ ನಡೆಯುತ್ತವೆ.
ಅಸ್ಸಾಂನಲ್ಲಿ ಮಾಘ್ ಬಿಹು;
ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಮಾಘಿ;
ಭಾರತದ ಹಲವು ಕಡೆಗಳಲ್ಲಿ ಮಕರ ಸಂಕ್ರಾಂತಿ;
ಭೋಗೀ ಹಬ್ಬ;
ಎಳ್ಳು ಬೆಲ್ಲ ಹಬ್ಬ;
ನೇಪಾಳದಲ್ಲಿ ಮಾಘೇ ಸಂಕ್ರಾಂತಿ;ತಮಿಳು ನಾಡಿನಲ್ಲಿ ಥೈ ಪೊಂಗಲ್ ಹಬ್ಬ;
ಸುಗ್ಗೀ ಹಬ್ಬ
ಉತ್ತರಖಾಂಡ್, ಗುಜರಾತ್ ಮತ್ತು ರಾಜಾಸ್ಥಾನದಲ್ಲಿ ಉತ್ತರಾಯಣ
ಇತ್ಯಾದಿ, ಇತ್ಯಾದಿ,

ಪ್ರಮುಖಘಟನಾವಳಿಗಳು:


1761:
ಮರಾಠಾ ಸೇನೆಯು ಪಾಣಿಪತ್ತಿನಲ್ಲಿ ಅಹಮದ್ ಶಹಾ ದುರಾನಿಯ ಸೇನೆ ಆಕ್ರಮಣದಲ್ಲಿ ಸೋಲುಂಡಿತು.   ‘ಮೂರನೇ ಪಾಣಿಪತ್ ಯುದ್ಧ’ ಎಂದು ಹೆಸರಾಗಿರುವ ಈ ಯುದ್ಧದಿಂದ ಉಂಟಾದ ಅರಾಜಕತೆ ಭವಿಷ್ಯದಲ್ಲಿ ಬ್ರಿಟಿಷರ ಆಡಳಿತಕ್ಕೆ ಎಡೆ ಮಾಡಿಕೊಟ್ಟಿತು.

1784: ಅಮೇರಿಕದ ಕಾಂಗ್ರೆಸ್ಸು ಗ್ರೇಟ್ ಬ್ರಿಟನ್ ಜೊತೆಗಿನ ಟ್ರೀಟಿ ‘ಆಫ್ ಪ್ಯಾರಿಸ್’ ಅನ್ನು ಅಂಗೀಕರಿಸಿತು.

1863: ಮರದ ತೊಗಟೆಯನ್ನು ಉಪಯೋಗಿಸಿ ತಯಾರಿಸಲಾದ ಕಾಗದದಲ್ಲಿ  ‘ದಿ ಬೋಸ್ಟನ್ ವೀಕ್ಲಿ ಜರ್ನಲ್’ ಮುದ್ರಣಗೊಂಡಿತು.  ಅಮೇರಿಕಾದ ಸುದ್ಧಿಪತ್ರಿಕೆಯೊಂದು ಇಂತಹ ಕಾಗದದಲ್ಲಿ  ಮುದ್ರಣಗೊಂಡದ್ದು ಇದೇ ಮೊದಲು.

1943: ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು, ವಿಮಾನದಲ್ಲಿ ಪಯಣಿಸಿದ ಪ್ರಥಮ ಹಾಲಿ ಅಧ್ಯಕ್ಷರು ಎಂದೆನಿಸಿದರು. ವಿಶ್ವಮಹಾಯುದ್ಧದ ಕುರಿತಾಗಿ ವಿನ್ಸ್ಟನ್ ಚರ್ಚಿಲ್ ಅವರೊಂದಿಗೆ ಸಮಾಲೋಚಿಸುವುದಕ್ಕಾಗಿ ಅವರು  ಮಿಯಾಮಿಯಿಂದ ಮೊರಾಕ್ಕೋಗೆ ವಿಮಾನದಲ್ಲಿ ಪಯಣಿಸಿದರು.

1950: ಸೋವಿಯತ್ ರಷ್ಯಾವು ತಯಾರಿಸಿದ ಮಿಗ್-17 ಯುದ್ಧ ವಿಮಾನದ ಪ್ರಥಮ ಪ್ರತಿಕೃತಿಯ ವಿಮಾನವು ತನ್ನ ಹಾರಾಟವನ್ನು ನಡೆಸಿತು.

1954: ದಿ ಹಡ್ಸನ್ ಮೋಟಾರ್ ಕಂಪೆನಿಯು, ನಾಶ್ ಕೆಲ್ವಿನೇಟರ್ ಸಂಸ್ಥೆಯೊಂದಿಗೆ ವಿಲೀನಗೊಂಡು ‘ಅಮೇರಿಕನ್ ಮೋಟಾರ್ಸ್ ಸಂಸ್ಥೆ’ ರೂಪುಗೊಂಡಿತು.

1969: ಮದ್ರಾಸ್ ರಾಜ್ಯಕ್ಕೆ ಅಧಿಕೃತವಾಗಿ ತಮಿಳುನಾಡು ಎಂದು ಮರುನಾಮಕರಣ ಮಾಡಲಾಯಿತು.

1973: ಅಮೆರಿಕದ ಪ್ರಸಿದ್ಧ ಗಾಯಕ ಮತ್ತು ನಟರಾದ  ಎಲ್ವಿಸ್ ಪ್ರೆಸ್ಲಿ ಅವರ ‘ಅಲ್ ಓಹಾ ಫ್ರಮ್ ಹವಾಯ್’ ಕಾರ್ಯಕ್ರಮ, ದೂರದರ್ಶನದಲ್ಲಿ ಕಲಾವಿದರೊಬ್ಬರು ನಡೆಸಿಕೊಟ್ಟ, ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಮನರಂಜನಾ  ಕಾರ್ಯಕ್ರಮ ಎಂದೆನಿಸಿತು.

2009: ಹಿರಿಯ ವಿದ್ವಾಂಸ ಡಾ.ಎಲ್.ಬಸವರಾಜು ಅವರಿಗೆ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಗೌರವವನ್ನು  ಪ್ರದಾನ ಮಾಡಲಾಯಿತು.

2007: ವಿಶ್ವದ ಬೃಹತ್ ಪರಿಹಾರ ಸಂಸ್ಥೆಗಳಾದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸಂಸ್ಥೆಗಳು,  ಹಿಂದೆ ತಮ್ಮ ಲಾಂಛನದಲ್ಲಿ ಬಳಸುತ್ತಿದ್ದ ಅರ್ಧ ಚಂದ್ರದ ಚಿತ್ರದ  ಜೊತೆಗೆ ಬಿಳಿಯ ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಹರಳಿನ (ಕ್ರಿಸ್ಟಲ್) ಚಿತ್ರವಿರುವ ನೂತನ ಲಾಂಛನವನ್ನು  ಬಳಕೆಗೆ ತಂದವು.

2007: ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯ ಜ್ಞಾನ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

2007: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಕೋನಕುಪ್ಪಕಟ್ಟಿಲ್ ಗೋಪಿನಾಥನ್ ಬಾಲಕೃಷ್ಣನ್ ಅಧಿಕಾರ ಸ್ವೀಕರಿಸಿದರು.

2013: ಭಾರತದಲ್ಲಿ ಹಾಕಿ ಇಂಡಿಯ ಲೀಗ್ ಎಂಬ ವೃತ್ತಿ ನಿರತ ಸಂಸ್ಥೆ ಸ್ಥಾಪನೆಗೊಂಡಿತು

ಪ್ರಮುಖಜನನ/ಮರಣ:

ಕ್ರಿಸ್ತ ಪೂರ್ವ 83: ರೋಮನ್ ಚಕ್ರಾಧಿಪತ್ಯದಲ್ಲಿ ಸೇನಾಧಿಕಾರಿ ಮತ್ತು ರಾಜಕಾರಣಿಯಾಗಿದ್ದ  ಮಾರ್ಕ್ ಆಂತೋನಿ ಜನನ

1507: ಇಟಲಿಯ ಪುನರುತ್ಥಾನದ ಅಂತಿಮ ಕಾಲಘಟ್ಟದ ಅವಧಿಯ ( late-Renaissance or Mannerist period) ಪ್ರಮುಖ ಕಲಾವಿದ ಲುಕಾ ಲೋಂಗಿ ಜನಿಸಿದರು.  ರಾವೆನ್ನಾ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಅವರು ಧಾರ್ಮಿಕ ಮತ್ತು ವ್ಯಕ್ತಿ ಚಿತ್ರಗಳನ್ನು ಬಿಡಿಸುವುದರಲ್ಲಿ ಪ್ರಸಿದ್ಧರಾಗಿದ್ದರು.

1551: ಚರಿತ್ರಕಾರ ಅಬುಲ್ ಫಝಲ್ ಇಬನ್ ಮುಬಾರಕ್ ಜನಿಸಿದರು. ಈತ ಮೊಘಲ್ ಚಕ್ರವರ್ತಿ ಅಕ್ಬರ್ ಆಸ್ಥಾನಿಕರಾಗಿದ್ದು  ಅಕ್ಬರ್ ಸಾಮ್ರಾಜ್ಯದ ಸಮಸ್ತ ಚರಿತ್ರೆಯನ್ನೂ ಮೂರು ಸಂಪುಟಗಳಲ್ಲಿ ರಚಿಸಿದರು.    ಮೊದಲ ಎರಡು ಸಂಪುಟಗಳು ‘ಅಕ್ಬರನಾಮಾ’ ಎಂಬ ಹೆಸರಿನಲ್ಲೂ ಮೂರನೆಯದು  ‘ಐನ್-ಎ-ಅಕ್ಬರಿ’ ಎಂಬ ಹೆಸರಿನಲ್ಲೂ ಮೂಡಿಬಂತು.  ಇವರು  ಬೈಬಲ್ಲಿನ ಪರ್ಷಿಯನ್ ಅನುವಾದವನ್ನೂ ಮಾಡಿದ್ದರು.   ಡೆಕ್ಕನ್ ಯುದ್ಧದಲ್ಲಿ ಮೊಘಲ್ ಸೈನ್ಯದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಆ  ರಣರಂಗದಿಂದ ಹಿಂದಿರುಗುವ ಸಂದರ್ಭದಲ್ಲಿ     ಮುಘಲ್ ರಾಜಕುಮಾರ ಸಲೀಂ (ಜಹಾಂಗೀರ್) ಹೂಡಿದ  ಸಂಚಿನಿಂದ ಕೊಲೆಗೀಡಾದರು.

1683: ಜರ್ಮನಿಯಲ್ಲಿ ವಾದ್ಯಗಳನ್ನು ನಿರ್ಮಾಣ ಮಾಡುವುದರಲ್ಲಿ ಪ್ರಸಿದ್ಧ ನಾಗಿದ್ದಗಾಟ್ ಫ್ರೀಡ್ ಸಿಲ್ಬರ್ ಮ್ಯಾನ್ ಜನಿಸಿದರು. ಕೈ ಬೆರಳುಗಳಿಂದ ನುಡಿಸುವ ವಾದ್ಯಗಳಾದ ಹಾರ್ಪ್ಸಿ ಕಾರ್ಡ್ಸ್, ಕ್ಲೆವಿ ಕಾರ್ಡ್ಸ್, ಆರ್ಗನ್ಸ್, ಫೋರ್ಟೆ ಪಿಯಾನೋಸ್ ಮುಂತಾದ ವಾದ್ಯಗಳನ್ನು ತಯಾರಿಸುವುದರದಲ್ಲಿ ಅವರಿಗೆ ಪ್ರಸಿದ್ಧಿ ಇತ್ತು.

1836: ಚಿತ್ರಕಾರ ಹೆನ್ರಿ ಫಂಟಿನ್ –ಲಾಟೋರ್ ಜನಿಸಿದರು.  ಅವರು ಪುಷ್ಪಗಳನ್ನು ಚಿತ್ರಿಸುವುದರಲ್ಲಿ ಹಾಗೂ ಕಲಾವಿದರ ಗುಂಪುಗಳನ್ನು ಚಿತ್ರಿಸುವುದರಲ್ಲಿ ಪ್ರಸಿದ್ಧಿ ಪಡೆದಿದ್ದರು.

1841: ಇಮ್ಪ್ರೇಸೆಶನಿಸ್ಟ್ ಪರಂಪರೆಯ  ಕಲೆಗಾರರ ಪೈಕಿ ಮಹತ್ವದ ಕಲಾವಿದೆ ಎನಿಸಿದ್ದ  ಬರ್ತೆ ಮೊರಿಸಾಟ್ ಫ್ರಾನ್ಸಿನ ಚೆರ್ ಪ್ರಾಂತ್ಯದ ಬರ್ಗೆಸ್ ಎಂಬಲ್ಲಿ ಜನಿಸಿದರು.

1845: ಭಾರತದ 34ನೇ ಗೌರ್ನರ್ ಜನರಲ್ ಆಗಿದ್ದ ಹೆನ್ರಿ ಪೆಟ್ಟಿ ಫಿಟ್ಜ ಮಾರಿಸ್ ಲಂಡನ್ನಿನಲ್ಲಿ ಜನಿಸಿದರು.

1856: ಆಸ್ಟ್ರೇಲಿಯಾದ ಪತ್ರಕರ್ತ, ಪ್ರಕಾಶಕ ಹಾಗೂ ‘ದಿ ಬುಲೆಟಿನ್’ ಪತ್ರಿಕೆಯ ಸಂಸ್ಥಾಪಕರಲ್ಲಿ ಒಬ್ಬರಾದ ಜೆ.ಎಫ್. ಆರ್ಚಿಬಾಲ್ಡ್ ಅವರು ವಿಕ್ಟೋರಿಯಾ ಬಳಿಯ ಗೀಲಾಂಗ್ ವೆಸ್ಟ್ ಪ್ರಾಂತ್ಯದಲ್ಲಿ ಜನಿಸಿದರು.  ಅವರು ಕಲಾ ಪ್ರಪಂಚದಲ್ಲಿ ಆರ್ಕಿಬಾಲ್ಡ್ ಪ್ರಶಸ್ತಿಯನ್ನೂ ಸ್ಥಾಪಿಸಿದ್ದಾರೆ.

1875: ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್-ಗಬೋನಿಸ್ ಭೌತ್ಶಾಸ್ತ್ರಜ್ಞ ಆಲ್ಬರ್ಟ್ ಸ್ವೀಟ್ಜರ್ ಅಂದು  ಜರ್ಮನಿಯ ಭಾಗವಾಗಿದ್ದು ಮುಂದೆ ಫ್ರಾನ್ಸಿಗೆ ಸೇರಿದ  ಕೆಯಸರ್ಬರ್ಗ್ ಎಂಬಲ್ಲಿ ಜನಿಸಿದರು.  ಅವರಿಗೆ ‘ರೆವೆರೆನ್ಸ್ ಆಫ್ ಲೈಫ್’ ಎಂಬ ತತ್ವಜ್ಞಾನ ಪ್ರತಿಪಾದನೆಗಾಗಿ 1952ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.  ಈ ಹಣದಿಂದ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡರು. ಅದರಲ್ಲಿ ಅವರು ಪಶ್ಚಿಮ ಮಧ್ಯ ಆಫ್ರಿಕಾದ ಗಬಾನ್ ದೇಶದ ಲಮ್ಬರೆನ್ ಎಂಬಲ್ಲಿ ಸ್ಥಾಪಿಸಿದ ಆಸ್ಪತ್ರೆ ಪ್ರಮುಖದ್ದಾಗಿದೆ.

1915: ಕರ್ನಾಟಕ ಶಾಸ್ತ್ರೀಯ ಸಂಗೀತ, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ಸಂಗೀತ ಸಂಯೋಜಕ, ನಿರ್ದೇಶಕ  ಗಾಯಕ ಹೊನ್ನಪ್ಪ ಭಾಗವತರ್ ಅವರು, ಬೆಂಗಳೂರಿನ ನೆಲಮಂಗಲದ ಬಳಿಯ ಚೌಡಸಂದ್ರದಲ್ಲಿ ಜನಿಸಿದರು. ಈ ಎಲ್ಲಾ ರಂಗಗಳಲ್ಲೂ   ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಅವರ ಕೀರ್ತಿ ಹಬ್ಬಿತ್ತು.  ಅವರ ಮಹಾ ಕವಿ ಕಾಳಿದಾಸ 1955ರಲ್ಲಿ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರ 1959ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದವು.  ಅಕ್ಟೋಬರ್ 2, 1992ರಂದು ನಿಧನರಾದ ಇವರಿಗೆ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ವವ ಪ್ರಶಸ್ತಿಗಳು ಸಂದಿದ್ದವು.

1892: ಭಾರತೀಯ ಕ್ರಿಕೆಟಿನ ‘ಹಿರಿಯಜ್ಜ’ (ಗ್ರ್ಯಾಂಡ್ ಓಲ್ಡ್ ಮ್ಯಾನ್) ಎಂದೇ ಖ್ಯಾತರಾದ ಪ್ರೊಫೆಸರ್ ದಿನಕರ್ ಬಲವಂತ್ ದೇವಧರ್ ಪುಣೆಯಲ್ಲಿ ಜನಿಸಿದರು.  ಪ್ರಥಮ ವಿಶ್ವಮಹಾಯುದ್ಧಕ್ಕೆ ಮುಂಚಿತವಾಗಿ ಹಾಗೂ ಎರಡನೇ ಮಹಾಯುದ್ಧದ ನಂತರ ಹೀಗೆ ಸುದೀರ್ಘ ಕಾಲ ಪ್ರಥಮ ದರ್ಜೆ   ಕ್ರಿಕೆಟ್ ಕ್ರೀಡೆಯಾಡಿದ ಅಪರೂಪದ ಆಟಗಾರರಿವರು.  ಮುಂಬೈ ರಣಜಿ ತಂಡದ ನಾಯಕರಾಗಿದ್ದ ಇವರು ಬಿರುಸಿನ ಬ್ಯಾಟಿಂಗ್ ಮತ್ತು ಲೆಗ್ ಬ್ರೇಕ್ ಬೌಲಿಂಗಿಗೆ ಹೆಸರಾಗಿದ್ದರು.  ಇವರ ಹೆಸರಿನಲ್ಲಿ ಭಾರತದ ವಿವಿಧ ಪ್ರಾಂತೀಯ ತಂಡಗಳ ನಡುವೆ ಏಕದಿನದ ಪಂದ್ಯಗಳು 1973ರಿಂದ ನಡೆಯುತ್ತಿವೆ.  ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಗೌರವ ಸಂದಿದ್ದ ಇವರು 1993ರಲ್ಲಿ ತಮ್ಮ 101ನೇ ವಯಸ್ಸಿನಲ್ಲಿ ನಿಧನರಾದರು.

1921: ಕನ್ನಡದ ಕೆಚ್ಚೆದೆಯ ಹೋರಾಟಗಾರ, ನ್ಯಾಯವಾದಿ, ಪತ್ರಕರ್ತ, ಪತ್ರಿಕೋದ್ಯಮಿ, ಸಾಹಿತಿ,  ಚಿಂತಕ, ರಾಜಕಾರಣಿ, ಆಡಳಿತಗಾರ ಮುಂತಾದ ಹಲವಾರು ರೀತಿಯಲ್ಲಿ ಕ್ರಿಯಾಶೀಲರಾದ ಡಾ. ಪುಟ್ಟಪ್ಪ ಸಿದ್ಧಲಿಂಗಗೌಡ ಪಾಟೀಲರು  ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು.  ವಕೀಲರಾಗಿ, ಪತ್ರಕರ್ತರಾಗಿ ಕನ್ನಡ ಮತ್ತು ಇಂಗ್ಲಿಷ್ ಬಾಷೆಗಳಲ್ಲಿ ಕೆಲಸ ಮಾಡಿ, ಪ್ರಸಿದ್ಧ ‘ಪ್ರಪಂಚ’ ಪತ್ರಿಕೆ ಹುಟ್ಟುಹಾಕಿದರು.  ಹಲವು ರೀತಿಯಲ್ಲಿ ಪ್ರಸಿದ್ಧ ಬರಹಗಳನ್ನು ಮಾಡಿ, ಕನ್ನಡಪರ ಚಳುವಳಿಗಳಲ್ಲಿ ಕ್ರಿಯಾಶೀಲರಾಗಿ,  ಸಂಸ್ಕೃತಿ ಚಿಂತನೆಗಳನ್ನು ಹಂಚುತ್ತಿರುವ ಅವರಿಗೆ  ನಾಡೋಜ ಗೌರವ, ನೃಪತುಂಗ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ, ರಾಜ್ಯೋತ್ಸವ ಪ್ರಶಸ್ತಿ  ಹೀಗೆ ಅನೇಕ ಗೌರವಗಳು  ಸಂದಿವೆ.

1920: ಕರ್ನಾಟಕ ಸಂಗೀತ ವಿದ್ವಾನ್‌ ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್‌ ಅವರು 1920  ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಜನಿಸಿದರು.  ವಿಶ್ವದೆಲ್ಲೆಡೆ ಸಂಗೀತ ಸೌರಭವನ್ನು ಬೀರಿ ಅನೇಕ ಶಿಷ್ಯರನ್ನು ತಯಾರು ಮಾಡಿರುವ ಅವರಿಗೆ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.   ಫೆಬ್ರುವರಿ 2014ರಂದು ಬೆಂಗಳೂರಿನಲ್ಲಿ ನಿಧನರಾದರು.

1977: ಅಂತರರಾಷ್ಟ್ರೀಯ ಕಾರು ರೇಸಿಂಗ್ ಪಟು ನಾರಾಯಣ್ ಕಾರ್ತಿಕೇಯನ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು.  ಫಾರ್ಮ್ಯುಲಾ ಥ್ರೀ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಂಡ ಪ್ರಥಮ ಭಾರತೀಯರೆಂಬ ಎಂಬ ಹೆಗ್ಗಳಿಕೆ ಇವರದು.

1742: ಪ್ರಖ್ಯಾತ ಖಗೋಳ ತಜ್ಞ ಹಾಗೂ ಗಣಿತ ತಜ್ಞರಾದ  ಎಡ್ಮಂಡ್ ಹ್ಯಾಲಿ ನಿಧನರಾದರು.  ಇವರು  ಅನ್ವೇಷಿಸಿದ  ಧೂಮಕೇತುವಿಗೆ ‘ಹ್ಯಾಲಿ ಕಾಮೆಟ್’ ಎಂದು ಇವರ ಹೆಸರನ್ನೇ ಇಡಲಾಗಿದೆ.

1962: ಮಹಾನ್ ಇಂಜಿನಿಯರ್, ವಿದ್ವಾಂಸ, ಮೈಸೂರು ಸಂಸ್ಥಾನದ ದಿವಾನ್, ಅನೇಕ ಕೈಗಾರಿಕೆಗಳು ಮತ್ತು  ಸಂಸ್ಥೆಗಳ  ಸ್ಥಾಪಕ, ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ  ಸರ್. ಎಂ. ವಿಶ್ವೇಶ್ವರಯ್ಯನವರು ತಮ್ಮ 102ನೇ ವಯಸ್ಸಿನಲ್ಲಿ ನಿಧನರಾದರು.  1920ರಲ್ಲಿ Reconstructing India, 1934ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದ್ದರು.  ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಚೇತನಗಳಿಗೆ ಮತ್ತೊಂದು ಹೆಸರಾದ ಸರ್ ಎಂ.ವಿ.  ಮೈಸೂರು ಸಂಸ್ಥಾನವಷ್ಟೇ ಅಲ್ಲದೆ, ಮುಂಬೈ ಸರ್ಕಾರ, ಹೈದರಾಬಾದ್ ಹಾಗೂ ಯಮನ್ ದೇಶದ ಏಡನ್ ಹೀಗೆ ಹೋದೆಡೆಯಲ್ಲೆಲ್ಲಾ ತಮ್ಮ ಶ್ರೇಷ್ಠ ಸಾಮರ್ಥ್ಯತೆಯನ್ನು ತೋರಿದರು.   ಬ್ರಿಟಿಷ್ ಸರ್ಕಾರದ ಸರ್ ಗೌರವ, ಭಾರತ ಸರ್ಕಾರದ ಭಾರತರತ್ನ ಗೌರವಗಳು ಅವರಿಗೆ ಸಂದಿದ್ದವು.

2007: ಅರ್ಜುನ ಪ್ರಶಸ್ತಿ ವಿಜೇತ ಅಂಗವಿಕಲ ಅಥ್ಲೀಟ್ 39ರ ಹರೆಯದ ಯಧುವೇಂದ್ರ ವಸಿಷ್ಠ  ಉತ್ತರ ಪ್ರದೇಶದ ಘಾಜಿಯಾಬಾದಿನಲ್ಲಿ ಹೃದಯಾಘಾತದಿಂದ ನಿಧನರಾದರು. 1998ರ ಬ್ಯಾಂಕಾಂಕ್ ಮತ್ತು 2002ರ ಬುಸಾನ ಏಷ್ಯನ್ ಕ್ರೀಡಾಕೂಟಗಳಲ್ಲಿ ಎಫ್-44 ವಿಭಾಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ವಸಿಷ್ಠ 2000ದಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು.