Loading Events

« All Events

  • This event has passed.

ಡಾ. ಪಿ.ಕೆ. ರಾಜಶೇಖರ

October 13, 2023

೧೩.೧೦.೧೯೪೬ ಜಾನಪದ ಸಂಶೋಧನೆ, ಗ್ರಂಥ ಸಂಪಾದನೆ, ವಿಮರ್ಶೆ – ವಿಶ್ಲೇಷಣೆಗಳ ಜೊತೆಗೆ ಜಾನಪದ ಗಾಯನದಲ್ಲಿ ತೊಡಗಿಸಿಕೊಂಡಿದ್ದು ಜಾನಪದ ಗಾಯಕ ರತ್ನ, ಜಾನಪದ ಜೋಗಿ ಮುಂತಾದ ಬಿರುದುಗಳಿಗೂ ಪಾತ್ರರಾಗಿರುವ ರಾಜಶೇಖರರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ. ತಂದೆ ಕೆಂಪೇಗೌಡರು ಜನಪದ ವೈದ್ಯರಾಗಿದ್ದಲ್ಲದೆ ಲಕ್ಷ್ಮೀಶನ ಜೈಮಿನಿ ಭಾರತ, ದೇವಿಮಹಾತ್ಮೆ ಮುಂತಾದ ಕೃತಿಗಳನ್ನು ಓದಿಕೊಂಡಿದ್ದರು. ತಾಯಿ ಪುಟ್ಟಮ್ಮ ಸಂಪ್ರದಾಯದ ಹಾಡುಗಳ ಹಾಡುಗಾರ್ತಿಯಾಗಿದ್ದರೆ ಅಜ್ಜಿ ಸಣ್ಣಮ್ಮ ಜಾನಪದ ತ್ರಿಪದಿಗಳನ್ನು ಹಾಡುತ್ತಿದ್ದರು. ಹೀಗೆ ಜನಪದ ಸಾಹಿತ್ಯವು ವಂಶ ಪಾರಂಪರ್ಯವಾಗಿ ರಕ್ತದಲ್ಲಿ ಹರಿದು ಬಂದಿದ್ದು ಎಳೆಯ ವಯಸ್ಸಿನಲ್ಲಿಯೇ ಜಾನಪದದಲ್ಲಿಯೇ ಆಸಕ್ತಿ ಬೆಳೆಯಲು ಕಾರಣವಾಯಿತು. ಪ್ರೌಢಶಾಲೆಯವರೆಗೆ ಪಿರಿಯಾಪಟ್ಟಣದಲ್ಲಿ ಪಿಯುಸಿಗೆ ಸೇರಿದ್ದು ಬೆಂಗಳೂರಿನ ವಿಜಯಾ ಕಾಲೇಜು, ಬಿ.ಎ. ಪದವಿ ಪಡೆದದ್ದು ಮೈಸೂರಿನ ಮಹಾರಾಜಾ ಕಾಲೇಜು. ಬಿ.ಎ. ಪದವಿ ಪಡೆದ ನಂತರ ಹಾಸನ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಉಪಾಧ್ಯಾರಾಗಿ ಕೆಲಕಾಲ. ಓದಿನ ಹಂಬಲದಿಂದ ಪುನ: ಮೈಸೂರಿಗೆ ಬಂದು ಸೇರಿದ್ದು ಎಂ.ಎ. ಪದವಿಗಾಗಿ. ನಂತರ ಸಿ,ಪಿ.ಕೆ. ಯವರ ಮಾರ್ಗದರ್ಶನದಲ್ಲಿ ‘ದಕ್ಷಿಣ ಕರ್ನಾಟಕದ ಜನಪದ ಪುರಾಣಗಳು’ ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪದವಿ. ಆನುವಂಶಿಕ ಗುಣದ ಜನಪದ ಸಂಸ್ಕೃತಿ, ಸಾಹಿತ್ಯದ ಪ್ರಭಾವದಿಂದ ಜಾನಪದ ಸಂಶೋಧನೆಯನ್ನು ಪದವಿಗಾಗಿ ಆಯ್ಕೆ ಮಾಡಿಕೊಳ್ಳದೆ ತಮ್ಮ ಜೀವನದ ಒಂದು ವಿಧಾನವಾಗಿ ಸ್ವೀಕರಿಸಿ ಸಾಧನೆ ಮಾಡಿದ್ದು ರಾಜಶೇಖರವರ ವಿಶಿಷ್ಟತೆಗಳಲ್ಲೊಂದು. ದಕ್ಷಿಣ ಕರ್ನಾಟಕದ ಜನಪದ ಪುರಾಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಿರತರಾದ ಪಿ.ಕೆ. ಯವರು ಜನಪದ ಕಾವ್ಯದಲ್ಲಿ ಹಾಡುಗಳಂತೆ ಮಹಾಕಾವ್ಯವೂ ಇರುವುದನ್ನು ಸಂಶೋಧಿಸಿ ಜನಪದ ಪ್ರಣಯ ಕಾವ್ಯ ‘ಬೆಟ್ಟದ ಚಾಮುಂಡಿ’ (೧೯೭೨) ಎಂಬ ಮಹಾಕಾವ್ಯವನ್ನು ಮೊದಲ ಬಾರಿಗೆ ಪ್ರಕಟಿಸಿದರು. ಮತ್ತೊಂದು ಇವರ ಮೇರು ಕೃತಿಯೆಂದರೆ ‘ಮಲೆಯ ಮಾದೇಶ್ವರ’ ಮಹಾಕಾವ್ಯ ಫಿನ್ಲೆಂಡಿನ ‘ಕಾಲೇವಾಲ’ ಕಾವ್ಯವೇ ಅತಿ ದೊಡ್ಡ ಕಾವ್ಯವೆಂದು ಪರಿಗಣಿಸಲ್ಪಟ್ಟಿದ್ದ ಸಂದರ್ಭದಲ್ಲಿ ಅದಕ್ಕಿಂತ ಮೂರು ಪಟ್ಟು ದೊಡ್ಡದಾದ ಮಹಾಕಾವ್ಯ ಮಾದೇಶ್ವರ ಮಹಾಕಾವ್ಯವನ್ನು ಸಂಪಾದಿಸಿ ಪ್ರಕಟಿಸಿ ಜಾನಪದ ಲೋಕದಲ್ಲಿ ದಾಖಲೆಯನ್ನೇ ನಿರ್ಮಿಸಿದರು. ಇದು ಒಂದು ಸಾವಿರದ ಎಪ್ಪತ್ತನಾಲ್ಕು ಪುಟಗಳ ಬೃಹತ್ ಕಾವ್ಯವಾಗಿದ್ದು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಇದುವರೆಗಿನ ಪ್ರಕಟಿತ ಜಾನಪದ ಕೃತಿಗಳಲ್ಲಿ ಆಚಾರ್ಯ ಕೃತಿ ಎನಿಸಿದೆ. ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು ೧೯೯೯ರ ವರೆವಿಗೂ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ೧೯೯೯ರಿಂದ ೨೦೦೬ರ ವರೆಗೆ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಲೆಯ ಮಾದೇಶ್ವರ ಮಹಾಕಾವ್ಯದ ನಂತರ ಇವರು ಸಂಪಾದಿಸಿದ ಇತರ ಮಹಾಕಾವ್ಯಗಳೆಂದರೆ ಜನಪದ ವೀರಕಾವ್ಯ, ಪಿರಿಯಾಪಟ್ಟಣದ ಕಾಳಗ, ಜನಪದ ರಾಮಾಯಣ, ಮಾಗಡಿ ಕೆಂಪೇಗೌಡ, ಜನಪದ ಬಸವ ಪುರಾಣ, ಕರಪಾಲ ಬಸವ ಪುರಾಣ, ಜನಪದ ಮಹಾಭಾರತ, ಪ್ರಾರ್ಥನ ಜೋಗಿಯ ಹಾಡು ಮುಂತಾದ ಜನಪದ ಮಹಾಕಾವ್ಯಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಸಾಂಸ್ಕೃತಿಕ ಮಹತ್ವವನ್ನು ಪಡೆದ ಕೃತಿ ಎಂದರೆ ಮೈಸೂರು ಅರಸರಿಗೂ ಪಿರಿಯಾಪಟ್ಟಣದ ಚಂಗಾಳ್ವದೊರೆ ವೀರರಾಜನಿಗೂ ನಡೆದ ಯುದ್ಧದ ವಿವರಗಳನ್ನೊಳಗೊಂಡ ಕೃತಿ ಪಿರಿಯಾ ಪಟ್ಟಣದ ಕಾಳಗ’ ವಾದರೆ, ವ್ಯಾಸ ಭಾರತಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ರೂಪಗೊಂಡಿರುವ ಮಹಾಕಾವ್ಯ ಜನಪದ ಮಹಾಭಾರತ, ಬೆಟ್ಟದ ಬೀಡು ಸಿದ್ಧಶೆಟ್ಟಿಯವರು ಹಾಡಿರುವ ಮಹತ್ ಕೃತಿ ಇದಾಗಿದ್ದು ೧೬೦ ಪರ್ವಗಳ ೪೩೦೦೦ ಪಾದಗಳ ಸುದೀರ್ಘ ಮಹಾಕಾವ್ಯವಾಗಿದೆ. ಜನಪದ ಸಾಹಿತ್ಯದಂತೆ ಜನಪದ ಗಣಿತ ವಿಜ್ಞಾನದಲ್ಲಿಯೂ ಆಸಕ್ತರಾಗಿದ್ದ ಪಿ.ಕೆ. ಯವರು ಪ್ರಕಟಿಸಿರುವ ಗಣಿತ ವಿಜ್ಞಾನ ಕೃತಿಗಳೆಂದರೆ ಆಯ್ದ ಜನಪದ ಲೆಕ್ಕಗಳು. ಜನಪದ ಗಣಿತ ಪ್ರಪಂಚ ಮತ್ತು ಜನಪದ ಚಮತ್ಕಾರ ಗಣಿತ ಪುಸ್ತಕಗಳು. ಜನಪದ ಚಮತ್ಕಾರ ಗಣಿತದಲ್ಲಿ ಅನಕ್ಷರಸ್ಥರಾದರೂ ಅವಿದ್ಯಾವಂತರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ವಿದ್ಯೆ ಬಾರದ ಹಳ್ಳಿಗರು ಕೊಡುವ ಲೆಕ್ಕಗಳಿಗೆ ವಿದ್ಯಾವಂತರೂ ಉತ್ತರಿಸಲು ಶ್ರಮಪಡಬೇಕಾಗುವಂತಹುದು. ಜನಪದ ಗಣಿತ ಪ್ರಪಂಚದಲ್ಲಿ ಉದ್ದ, ಅಗಲ, ಎತ್ತರ, ಗಾತ್ರ ಇವುಗಳನ್ನು ಅಳೆಯಲು ಜನಪದದಲ್ಲಿ ಉಪಯೋಗಿಸುವ ವಿಶೇಷ ಮಾನದಂಡದ ಪ್ರಸ್ತಾಪವಿದೆ. ಜನಪದ ಮಹಾಕಾವ್ಯ, ಜನಪದ ಗಣಿತ ವಿಜ್ಞಾನದಂತೆಯೇ ಇತರ ಆಸಕ್ತ ಜನಪದ ಪ್ರಕಾರಗಳೆಂದರೆ ಕಥೆಗಳು. ಜನಪದ ಗಾದೆಯ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ‘ಮಾತಿನರಗಿಣಿ’ ಕೃತಿಯಲ್ಲಿ ಹದಿನೈದು ಕಥೆಗಳನ್ನು ಸಂಪಾದಿಸಿದ್ದರೆ ‘ಪುರುಷನ ಪುಣ್ಯ ನಾರಿ ಭಾಗ್ಯ’ ಕಥಾಸಂಕಲನದಲ್ಲಿ ವಿಶಿಷ್ಟ ಜಾನಪದ ಕಥೆಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಜನಪದ ಗಾದೆಗಳಿಗೆ ಸಂಬಂಧಿಸಿದಂತೆ ಎರಡು ಕೃತಿಗಳನ್ನು ಸಂಪಾದಿಸಿ ಕೊಟ್ಟಿದ್ದು ಅವು ‘ಮುತ್ತಿನ ಕಣಜ’ ಹಾಗೂ ‘ಭೂಮಿ ತೂಕದ ಮಾತು’. ಮುತ್ತಿನ ಕಣಜದಲ್ಲಿ ಒಟ್ಟು ಸಾವಿರದ ಇನ್ಣೂರ ಮೂವತ್ತು ಗಾದೆಗಳಿದ್ದರ, ಭೂಮಿ ತೂಕದ ಮಾತು ಪುಸ್ತಕದಲ್ಲಿ ಸಾವಿರದ ಐನೂರು ಗಾದೆಗಳಿವೆ. ಭೂಮಿ ತೂಕದ ಮಾತುವಿನಲ್ಲಿ ಸಾಂಪ್ರದಾಯಿಕ ಮಡಿವಂತಿಕೆಯ ಕಾರಣದಿಂದ ಇದುವರೆವಿಗೂ ಸೇರ್ಪಡೆಯಾಗದ ಹಲವಾರು ಗಾದೆಗಳು ಸೇರ್ಪಡೆಯಾಗಿವೆ. ವಿನೋದ ಪ್ರಸಂಗಗಳನ್ನು ಒಳಗೊಂಡಿರುವ ಕೃತಿ ‘ಜಾನಪದ ಜೋಕುಗಳು’. ಇದರಲ್ಲಿ ಪ್ರಾಸ ಪದ್ಯಗಳು, ಗೀತೆಗಳು, ಸಂಭಾಷಣೆಗಳು, ಗಾದೆ, ಒಗಟು, ಬೈಗಳ ಎಲ್ಲ ಹಾಸ್ಯ ಪ್ರಸಂಗಗಳೂ ದಾಖಲೆಗೊಂಡಿವೆ. ಜೊತೊಗೆ ಮಕ್ಕಳಿಗಾಗಿ ಅಪೂರ್ವರತ್ನ, ಒಳ್ಳೆಯ ಮಾತಿಗೆ ಕಣ್ಣೀರ ಬಹುಮಾನ, ಚಿನ್ನದ ತುಪ್ಪಳು, ತಿಳಿದು ಮಾಡಿದ್ದು, ತಿಳಿಯದೆ ಮಾಡಿದ್ದು, ದುಡಿದವನ ದುಡ್ಡಿನ ಬೆಲೆ, ನಾನು ಸುಳ್ಳು ಹೇಳುವುದಿಲ್ಲ ಮುಂತಾದವುಗಳು. ‘ನಾನಲ್ಲ ನಾನು’ (ಕವನ ಸಂಕಲನ), ‘ಪದ ವಿವರಣ ಕೋಶ’, ‘ಪದ ಸಂಪದ’ (ಸಂಕೀರ್ಣ ಕೃತಿಗಳು) ಇತರ ಕೃತಿಗಳು. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಪಿ.ಕೆ. ಯವರಿಗೆ ಮಲೆಯ ಮಾದೇಶ್ವರ ಮಹಾಕಾವ್ಯಕ್ಕೆ ೧೯೭೩ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಿರಿಯಾ ಪಟ್ಟಣದ ಕಾಳಗ ಕೃತಿಗೆ ೧೯೯೦ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ. ೧೯೯೮ರಲ್ಲಿ ಜಾನಪದ ತಜ್ಞ ಪ್ರಶಸ್ತಿ, ೨೦೦೫ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೮ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ರಜತೋತ್ಸವ ಪ್ರಶಸ್ತಿ, ೨೦೧೦ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ.

Details

Date:
October 13, 2023
Event Category: