ಸಕ್ಕರೆ ನಾಡಿನವರಾದ ತಂಬೂರಿ ಜವರಯ್ಯ ಅವರು ತಮ್ಮ ಜೀವನ ಸಂಗಾತಿ ಬೋರಮ್ಮ ಅವರೊಡಗೂಡಿ ಏಕತಾರಿಯಲ್ಲಿ ಲಯಬದ್ಧವಾಗಿ ತತ್ವಗಳನ್ನು ಸತ್ವಶಾಲಿಯಾಗಿ ಹಾಡುತ್ತಾ ಬಂದವರು.
ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿದರೂ ತಮ್ಮ ಸ್ಮರಣ ಶಕ್ತಿಯಿಂದ ಜೀವನ ಸಂದೇಶಗಳನ್ನು ಸಾರುವ ತತ್ವಪದಗಳ ಬಹುದೊಡ್ಡ ಭಂಡಾರವೇ ಆಗಿರುವ ತಂಬೂರಿ ಜವರಯ್ಯನವರು ಕಳೆದ ಐದು ದಶಕಗಳಿಂದಲೂ ತತ್ವಪದ ಗಾಯನಕ್ಕೆ ತಮ್ಮನ್ನು ತೊಡಗಿಸಿಕೊಂಡವರು.
ಶಿಶುನಾಳ ಷರೀಫ, ನಾಗಲಿಂಗಯೋಗಿ, ಕೈವಾರ ನಾರೇಯಣಪ್ಪ ಕಡಕೋಳ ಮಡಿವಾಳಪ್ಪ ಶಿವಯೋಗಿಗಳ ತತ್ವಪದಗಳನ್ನು ಹಾಡುವ ತಂಬೂರಿ ಜವರಯ್ಯ ಅವರು ಜನರ ನಡುವೆಯೇ ಬದುಕುತ್ತ ತಮ್ಮ ಗಾಯನದ ಮೂಲಕ ಜನರ ಬದುಕನ್ನು ಹಸನುಗೊಳಿಸುತ್ತಿದ್ದಾರೆ.