ಇಲ್ಲಿ ನಾವು ಒಂದು ವಿಚಾರ ಪುನರಪಿ ನೆನಪು ಮಾಡಿಕೊಳ್ಳುವುದಿದೆ ದ್ರಾವಿಡ ಪ್ರಬಂಧಗಳ ಪ್ರಚಾರಕ್ಕೆ ಕಂಕಣಬದ್ಧರಾದ – ಮೂಲ ಕಾರಣರಾದ ನಾಥಮುನಿತಾನೆ ಆಚಾರ್ಯ ಪರಂಪರೆಯ ಮೊದಲಿಗರು ! ತಮಿಳುನಾಡಿನ ಪ್ರಖ್ಯಾತ ಚಿದಂಬರಂ ತಾಲ್ಲೂಕಿನ ವೀರನಾರಾಯಣಪುರದಲ್ಲಿ ಅವತರಿಸಿದ ನಾಥಮುನಿಗಳ ಆದ್ಯಜ್ಞಾನದಿಂದ, ವಿಶಿಷ್ಟಾದ್ವೈತ ಮತ್ತೆ ಪ್ರಚಾರಕ್ಕೆ ಬಂದದ್ದು!
ನಮ್ಮ ಆಳ್ವಾರ್ ಸೊಗಸು – ಸೊಗಡು – ದೇಸಿಯ ಪೆಂಪು, ಧರ್ಮ – ಕರ್ಮ – ಕ್ರಿಯಾ – ಭಕ್ತಿಯೋಗಗಳ ಅಭಿವ್ಯಕ್ತಿಯನ್ನು ನಾಥ ಮುನಿವರ್ಯರೇ ಒಂದೆಡೆ “ಶಠಕೋಪವಾಙ್ಮಯಂ, ಸಹಸ್ರ ಶಾಖೋಪನಿಷತ್ಸಮಾಗಮಂ, ನಮಾಮ್ಮಹಂ ದ್ರಾವಿಡ ವೇದ ಸಾಗರಮ್” ಎಂದಿದ್ದಾರೆ!
“ನಮ್ಮಾಳ್ವಾರರ ಪ್ರಬಂಧಗಳ ವಾಙ್ಮಯವೆಂದರೆ, ಸಾವಿರ ಉಪನಿಷತ್ ಶಾಖೆಗಳ ಸಮಾಗಮವಿದ್ದಂತೆ, ಇಂತಹ ದ್ರಾವಿಡ ವೇದ ಸಾಗರವನ್ನು ನಾನು ನಮಸ್ಕರಿಸುತ್ತೇನೆ”.
ನಾಥಮುನಿಗಳ ಮಗ – ತಂದೆಗೆ ತಕ್ಕ ಸಾತ್ವಿಕ ಮಗ – ಈಶ್ವರ ಮುನಿಗಳು, “ಅರುಮರೈಹಳ್ ಅಂದಾದಿಶೆಯ್ದಾನ್…. ಶಠಕೋಪನ್“ ಎಂದು ನಮ್ಮಳ್ವಾರರನ್ನು ಸ್ತುತಿಸಿದರೆ, ಮುಂದೆ ಕ್ರಿ.ಶ. ೧೨ – ೧೩ ಅಂತರದಲ್ಲಿ ಮೂಡಿಬಂದ ರಾಮಾನುಜರ ಮಾನಸಪುತ್ರರಾದ ಪರಾಶರಭಟ್ಟರು, “ತಮಿಳು ಮರೈಗಳ್ ಅಯಿರಮಂ“ ಎಂಬುದಾಗಿ ನಮ್ಮಾಳ್ವಾರರ ‘ತಿರುವಾಯ್ಮೊಳಿ‘ ಯನ್ನು ಕೊಂಡಾಡಿದ್ದಾರೆ.
‘ತಿರುವರಂಗತ್ತ ಮುದನಾರ್‘ ಎಂಬುವ ಸಂತ – ಭಕ್ತ (ಶ್ರೀರಂಗದ ಅಮೃತ ಸ್ವರೂಪಿ ಎಂದು ಕರೆಯುತ್ತಿದ್ದರಂತೆ) ‘ನಮ್ಮಾಳ್ವಾರರ ದಿವ್ಯ ಪ್ರಬಂಧಗಳು, ತಮಿಳು ವೇದಗಳು’ ಎಂಬುದಾಗಿ ಸ್ತುತಿಸುತ್ತಾರೆ.
ಇಷ್ಟು ತಿಳಿಸಿದುದೂ ಕೇವಲ ವೈಭವೀಕರಣಕ್ಕಲ್ಲ ; ನಮ್ಮಾಳ್ವಾರ್ ಅಂತಹ ಯೋಗಿ – ಕವಿ – ವೈಷ್ಣವ ಸಂತರೆಂದು ಸ್ಪಷ್ಟ ಪಡಿಸಲೋಸುಗ! ಬಹುತೇಖ ಆಳ್ವಾರರು, ನಮ್ಮಾಳ್ವಾರರ ಹಿರಿತನ – ಹಿರಿಮೆಯ ಅರಿವು – ಇದನ್ನೇ ಪ್ರಶಂಸಿಸುವುದು! ಸಂಪ್ರದಾಯ ಪ್ರಕಾರ, ತಿರುವಾಯ್ಮೋಳಿಯು ಸಾಮವೇದದ ಉಪನಿಷದ್ಭಾಗ!
ಮುಂದಿನ ವರುಷಗಳಲ್ಲಿ (ಬಹುಬೇಗ ನಮ್ಮಾಳ್ವಾರರು ತನ್ನ ಮೃಣ್ಮಯ ಶರೀರ ವಿಸರ್ಜಿಸಿದ ನಂತರ) ತಮ್ಮ ಗುರು ಬದುಕಿದ್ದಾಗಲೇ ಅವರ ವಿಗ್ರಹವೊಂದನ್ನು ಸ್ಥಾಪಿಸಿ, ಮಧುರಕವಿಗಳು ಉತ್ಸವಾದಿಗಳನ್ನು ನಡೆಸಿದರು. ಹಾಗೆಯೇ ನಮ್ಮಾಳ್ವಾರರ ಇನ್ನೊಂದು ಲೋಹದ ಮೂರ್ತಿಯನ್ನು ಮಾಡಿಸಿ ಅದನ್ನು ತನ್ನ ಸೋಗಿಲಲ್ಲಿರಿಸಿಕೊಂಡು ನಾಡುನಾಡೆಲ್ಲ ಪರ್ಯಟನೆ ಮಾಡಿದರು – ಗುರುವಿನ ದಿವ್ಯ ಪ್ರಬಂಧ ಪರಿಚಯಿಸಿದರು, ಕಣ್ಣಿನುಣ್ಸಿರುತ್ತಾಂಬು ಪ್ರಬಂಧವನ್ನು ಭಕ್ತಿಯಿಂದ ಹಾಡಿದರು.
ಮಧುರ ಕವಿಯಾಳ್ವಾರರ ನಂತರ ಬಂದ ಕಲಿಯನ್ (ಧೀರ!) ತಿರುಮಂಗೈ, ತನ್ನ ಕಳ್ಳತನ ಬಿಟ್ಟು, ವೈಷ್ಣವ ಭಕ್ತನಾದದ್ದು ಮಾತ್ರ ಅಲ್ಲ. ಶ್ರೀರಂಗದಲ್ಲಿ ನಮ್ಮಾಳ್ವಾರರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ತಿರುವಾಯ್ಮೊಳಿಯ ಪಾರಾಯಣವನ್ನು ಮಾಡಿಸುವ ರೂಢಿ ತಂದರು.
ನಾಥ ಮುನಿಗಳು ತಮ್ಮ ಪೂರ್ವಾಚಾರ್ಯರ ದಿವ್ಯಪ್ರಬಂಧಗಳನ್ನು ದೇವಾಲಯಗಳಲ್ಲಿ ಹಾಡಿಸುವ ಮುಖ್ಯ ಸ್ಥಾನ ಏರ್ಪಡಿಸಿದ್ದು ಅಲ್ಲದೆ, ದ್ರಾವಿಡ ಪ್ರಬಂಧ ಪ್ರವರ್ತಕರೂ ಆದರು! ವೇದಗಳಿಗೆ ಸಮಾನವಾದ ಸ್ಥಾನವಿತ್ತರು, ವಿಶೇಷ ಪಾರಾಯಣಗಳನ್ನು ಆರಂಭಿಸಿ ತನ್ಮೂಲಕ ಇಂದಿಗೂ ತಮಿಳು ನಾಡಿನಲ್ಲಿ ಎಲ್ಲ ಸಾಮಾನ್ಯನೂ ಪ್ರಬಂಧ ಹಾಡುವಷ್ಟು ಅವರಲ್ಲಿ ಬೇರೂರಿದೆ ಎಂದರೆ, ಉತ್ಪ್ರೇಕ್ಷೆಯಲ್ಲ ! ನಾಡು – ನುಡಿ ಅಭಿಮಾನ ಅದು! ಭಕ್ತಿ ಪರಂಫರೆ ಎಲ್ಲವನ್ನು ಆಗಮಾಡಿಸುವುದೆಂಬ ವಿಶ್ವಾಸದದು!
ಕ್ರಿ.ಶ. ೧೨೪೨ ಕಾಂಚೀಪುರದ ಒಂದು ಶಾಸನ, ಕಾಂಚೀಪುರದಲ್ಲಿ ಐವತ್ತೆಂಟು ಅಧ್ಯಾಪಕ ಗೋಷ್ಠಿಯವರಿದ್ದರು ಹಾಗು ತಿರುವಾಯ್ಮೋಳಿ ಪಾರಾಯಣವು ಇರುತ್ತಿತ್ತು ಎಂದ ನುಡಿದಿದೆ! ಇದರ ಜತೆಗೆ ಆಳ್ವಾರರಿಗೇ “ತನಿಯನ್” (ಬಿಡಿಬಿಡಿ ಸ್ಮರಣ ಪದ್ಯ) ಹಾಡುವದೂ ರೂಢಿಗೆ ಬಂದಿತು.
ಕುಲಶೇಖರ ಆಳ್ವಾರರ “ಪೆರುಮಾಳ್ತಿರುಮೋಳಿ“ (ದೇವರ ಶ್ರೀ ವಚನ) ಪ್ರಬಂಧವನ್ನು ಪಾರಾಯಣ ಮಾಡುವಾಗ, ಹೇಳುವ “ತನಿಯನ್“, ತಮಿಳಿನಲ್ಲಿ “ಮಣಕ್ಕಾಲ್ ನಂಬಿ“ ಎಂಬುವ ಮಹನೀಯರು ರಚಿಸಿದ್ದಾರೆ.
ಯಾಮುನಾಚಾರ್ಯರಂತೂ ತಮ್ಮ “ಸ್ತೋತ್ರರತ್ನ”ದಲ್ಲಿ ನಮ್ಮಾಳ್ವಾರರನ್ನು ಸ್ಮರಿಸುತ್ತ “ಮಾತಾ ಪಿತಾಯುವತನಯ ಸ್ತ್ವನಯಾ ವಿಭೂತಿಃ“ ಎಂದು ಸ್ತುತಿಸಿದ್ದಾರೆ. ಮುಂದೆ, ಯಾಮುನಾಚಾರ್ಯರು’ – ಆಳವಂದಾರ್’ ಎಂದು ಹೆಸರಾದವರು, ಎಂದರೆ, ನಮ್ಮನ್ನಾಳ ಬಂದವರು ಎಂದರ್ಥ! ಆಳ್ವಾರ್ರ್ವರ ಕುರಿತ ಏಕವಿಷಯಕ ಪ್ರಬಂಧವಿದಾದ್ದರಿಂದ ಯಾಮುನರ – ನಾಥಮುನಿಗಳ ರಾಮಾನುಜರ ಕೇವಲ ಪ್ರಸ್ತಾಪವನ್ನು ಮಾಡಿದೆಯಷ್ಟೇ! ಮುಂದೆ, ಅವರ ಅಭೀಷ್ಟಗಳಲ್ಲಿ ನಮ್ಮಾಳ್ವಾರ್ರವರ ಪ್ರಬಂಧಕ್ಕೆ ವ್ಯಾಖ್ಯಾನಗೈದು ಪ್ರಚಾರ ಮಾಡುವುದೂ ಒಂದಾಗಿತ್ತೆಂಬುದು ಗಮನಾರ್ಹವಾದ ಅಂಶ.
ಈ ತೆರನಾಗಿ ವೈಷ್ಣವನಿಷ್ಠಸಂತರಾದ ಆಳ್ವಾರರು ಮೂಲಸ್ರೋತ್ರ ವಿಶಿಷ್ಟಾಧ್ವೈತಕ್ಕೆ (ರಾಮಾನುಜದರ್ಶನಕ್ಕೇ) ಪ್ರಾಧಾನ್ಯ ನೀಡಿದ್ದು.
ನಾಲಾಯಿರ ದಿವ್ಯ ಪ್ರಬಂಧಕ್ಕೆ ಅಧ್ಯಯನ ರೂಪವಾದ ಅನೇಕ ವಿಮರ್ಶೆ, ಹಾರ್ದವಾದ ವ್ಯಾಖ್ಯಾನ ಬಹುಮುಖವಾಗಿ ಮೂಡಿಬಂದಿವೆ.
ನಂಜೀಯರ್ ಎಂಬುವರ ವ್ಯಾಖ್ಯಾನ ವ್ಯಾಖ್ಯಾನಚಕ್ರವರ್ತಿ ಪೆರಿಯವಾಚ್ಚಾನ್ಪಿಳ್ಳ್ಯ ಅವರ ವಿಸ್ತಾರವಾದ ವ್ಯಾಖ್ಯಾನ, ವಡಕ್ಕುತಿರುವೀಧಿ ಪಿಳ್ಳ್ಯೆ – ಈಡು ವ್ಯಾಖ್ಯಾನ.
ರಂಗರಾಮಾನುಜಮುನಿ, ಪೆರಿಯಪರಕಾಲ ಸ್ವಾಮಿ ಮೊದಲಾದ ಹಿರಿಯರು ಸ್ವಾರಸ್ಯವಾಗಿ ವ್ಯಾಖ್ಯಾನಿಸಿದ್ದಾರೆ.
ಈಗಲೂ ಈ ಸಂಸ್ಕೃತಿ ಮುಂದುವರಿದಿದೆ : ದೇವಾಯತನಗಳಲ್ಲಿ ಆಳ್ವಾರರ ಜಯಂತಿ/ತಿರುನಕ್ಷತ್ರ ಆಚರಿಸುವಾಗ ಪ್ರಬಂಧ ಪಾರಾಯಣವಿರುತ್ತದೆ.
ಮದುವೆಯ ಸಂದರ್ಭ – ಆಂಡಾಳ್ದೇವಿ ಹಾಡಿರುವ “ವಾರಣಮಾಯಿರಮ್“ (ವಾರಣ ಎಂದರೆ ಆನೆ, ಸಾವಿರ ಆನೆಗಳ ಮೆರವಣಿಗೆಯಲ್ಲಿ ಶ್ರೀರಂಗನಾಥನು ಬಂದು, ತನ್ನನ್ನು ಪಾಣಿಗ್ರಹಣಗೈದನೆಂದು ಆಂಡಾಳ್ ಹಾಡಿದ್ದಾಳ್!) ಪಠಿಸುವುದುಂಟು.
ಯಾರಾದರು (ಶ್ರೀ ವೈಷ್ಣವರು ವಿಶೇಷತ 🙂 ಕಾಣದೂರಿಗೆ ನಡೆದಾಗ್ಗೆ, ಹದಿಮೂರನೆ ದಿವಸ – ವೇದಪಾರಾಯಣದೊಂದಿಗೆ ಪ್ರಬಂಧಪಾರಾಯಣವೂ ನಡೆದು, “ಶಾತ್ತು ಮುರೈ“ (ಪ್ರಬಂಧ ಮುಡಿಸುವದು – ಹೂವಿನ ರೂಪದಲ್ಲಿ ದೇವರಿಗೆ!)
“ಭಗವದ್ವಿಷಯಂ” ಎಂದೇ ಈ ವಾ ಯವು ಪ್ರಸಿದ್ಧ.
ಇದಕ್ಕೆಲ್ಲ ಪ್ರಮುಖ ಕಾರಣ, ನಾಡನುಡಿಯಲ್ಲಿ ಮೂಡಿ ಬಂದಿರುವ ಈ ಗೀತೆಗಳು ಸಾಮಾನ್ಯನಿಂದ ಪಂಡಿತರ ತನಕ ಮನಸ್ಸನ್ನು ಆಳುತ್ತಾವೆ, ಎಂಬುದು! ಅಗಸ್ತ್ಯಮಹಾಋಷಿ ತಮಿಳಿಗೆ ಒಂದು ರೂಪನೀಡಿ, ವ್ಯಾಕರಣ ನೀಡಿದಾರೆಂಬುವುದು ಬೆಂಬಲಿಸುವ ಅಂಶ.
ದಿವ್ಯ ಪ್ರಬಂಧಗಳು – ಒಂದು ಕಿರು ಅವಲೋಕಕನ
ಆಳ್ವಾರರು ನೆಲೆಗೊಂಡಿರುವುದೇ ಅವರ ಚಿರಂತನವಾದ ಪ್ರಬಂಧ ಹಾಡಿರುವುದರಿಂದ ಹತ್ತು ಮಂದಿ ಆಳ್ವಾರ್ರ ಭಕ್ತರ ಹೆಸರುಗಳನ್ನು ಮೊದಲ್ಲೇ ತಿಳಿಸಿದ್ದೇವೆ. ಆಂಡಾಳ್ (Ankal)ತನ್ನ “ತಿರುಪ್ಪಾವೈ“, “ನಾಯ್ಚ್ಚಿಯಾರ್ ತಿರುಮೊಳಿಯ ಮೂಲಕ ಆಳ್ವಾರ್ ಶ್ರೇಣಿ ಅಲಂಕರಿಸಿದಂತೆ, ಮಧುರ ಕವಿ ಆಳ್ವಾರರು ತನ್ನ ಗುರು ತಿರುಹೂರುನಂಬಿ – ನಮ್ಮಾಳ್ವಾರ್ರರನ್ನು ಸ್ತುತಿಸಿರುವ “ಕಣ್ಣಿನುಣ್ ಶಿರುತ್ತಾಂಬು“ ವಿಂದ ಆಳ್ವಾರ್ ಪಟ್ಟ ಅಲಂಕರಿಸಿದ್ದಾರೆ, ಹೀಗಾಗಿ ಒಟ್ಟು ಹನ್ನೆರಡು ಮಮದಿ ಆಳ್ವಾರ್ರರನ್ನು ನಾವು ಗಮನಿಸುತ್ತೇವೆ, ನಮಿಸುತ್ತೇವೆ :
ಪೊಯ್ಹೈ ಮುನಿ ಪೂದತ್ತಾರ್ ಪೇಯಾಶ್ವಾರ್
ತಣ್ ಪೊರುನಲ್ವರುಮ್ ಕುರುಕೇರ್ಶ ವಿಟ್ಟುಶಿತ್ತನ್
ತುಯ್ಯ ಕುಲಶೇಖರನ್ ನಮ್ ಪಾಣನಾದನ್
ತೊಂಡಿರಪ್ಪೊಡಿ ಮಳಿಶೈ ವಂದಶೋದಿ
ವೈಯಂ ಎಲಾಂ ಮರೈವಿಳಂಗ ವಾಳ್ ವೇಲೆಂದುಂ
ಮಂಗೈಯರ್ ಕೋನ್ ಎನ್ರಿವರ್ ಕಳ್ಮಹಳ್ನ್ದು ಪಾಡುಂ
ಶೆಯ್ಯ ತಮಿಮ್ ಮಾಲೆಹಳ್ ನಾಮ್ ತೆಳಿಯವೋದಿ
ತೆಳಿಯಾದ್ ಮರೈ ನಿಲಂಗಳ್ ತೆರಿಹಿನ್ನೋಮೇ |
ಮೊದಲಮೂವರು ಆಳ್ವಾರರುಗಳು : ಪೊಯಹೈ (ಪೊಯ್ಗೈ) ಆಶ್ವಾರ್, ಪೊದತ್ತಾಳ್ವಾರ್, ಪೇಯಾಳ್ವಾರ್ – ಈ ಮೂವರು ಭಕ್ತರ ಜೀವನವು ಒಟ್ಟಿಗೆ ಒಂದೇ ಘಟನೆಯಲ್ಲಿ ನಡೆದಿದೆ. ಐತಿಹ್ಯದ ಪ್ರಕಾರ, ಪೊಯ್ ಹೈ ಆಳ್ವಾರು – ಕಾಂಚೀಪುರದ (ವರದರಾಜದೇವಾಲಯ ಬಹುಶಃ ಇದ್ದಾತು!) ಸರೋವರದ ಕಮಲದ ಹೂಪರಾಗದಲ್ಲಿ, ಮೂಡಿ, ಬ್ರಹ್ಮಜ್ಞಾನದಿಂದ ಆತ್ಮಸದ್ಬಾವ ಹೊಂದುವವರು – ಪೂದತ್ತಾಳ್ವಾರ್ (ತಮಿಳಲ್ಲಿ – ಕನ್ನಡದಲ್ಲಿ ಇವರನ್ನು “ಭೂತನಾಥ”ನೆಂದು ಕರೆಯುತ್ತಾರೆ. ಪೂರ್ದ – ಭೂತ ಎಂದರ್ಥ) ಮಾಧವೀ ಲತಾ ಕುಸಮದಲ್ಲಿ, ಹಾಗೂ ಪೇಯಾಳ್ವಾರ್ರ ಮದರಾಸಿನ ತಿರುವಲ್ಲಿ ಕೇಣಿ ಸನಿಹದ ಸರಸ್ಸಿನ ಕೆಂಪುತಾವರೆ ಹೂವಲ್ಲಿ (ಇಂದಿನಚೆನ್ನೈ) ಜನಿಸಿದರಂತೆ! (ಭಗವಂತನಿಗಾಗಿ ಹಂಬಲಿಸಿ ಉನ್ಮಾದಿಯಾದ ಮರುಳು – ಪೇಯ್)
ಪೂರ್ವ ಸಂಸ್ಕಾರವಿದ್ದೀತು ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವ ತನಕ ಇವರು ಸದಾ ದೈವ ಚಿಂತನೆ – ಜ್ಞಾನ – ಭಕ್ತಿ ತಾನಾಗಿಯೇ ಮಾಡಿ ನೆಲೆಗೊಂಡ ವೈರಾಗ್ಯದಿಂದ ಇರುವರಾಗಿ – ಒಂದೊಂದು ಗ್ರಾಮದಲ್ಲಿ ಒಂದೊಂದು ರಾತ್ರಿ ಇರುತ್ತ – ಸದಾ ಸಂಚರಿಸುತ್ತ ಕಾಲ ವ್ಯಯಿಸುತ್ತಿದ್ದರು.
ಪೊಯ್ಹೈ ಆಳ್ವಾರರು ಒಮ್ಮೆ “ತಿರುಕ್ಕೊಯಿಲೂರ್” (ಶ್ರೇಷ್ಠ ದೇವಾಲಯ ಇರುವುದು) ಎಂಬ ಸ್ಥಳಕ್ಕೆ ಬಂದು, ರಾತ್ರಿ, ಒಂದು ಮನೆಯ ಜಗಲಿಯ ಮೇಲೆ ವಿಶ್ರಮಿಸಿದ್ದರು. ಜೋರಾಗಿ ಮಳೆ ಆರಂಭ ಆಯಿತು! ದಟ್ಟ ಕತ್ತಲ ಮಬ್ಬು. ಅಲ್ಲದೇ ಮಳೆಯಲ್ಲಿ ತೊಯ್ದು ಬಂದ ಪೂದತ್ತರು, “ಇಲ್ಲಿರಬಹುದೆ?” ಎಂದರು. ಪೊಯ್ಹೈ ನುಡಿದರು: “ಒಬ್ಬರು ಮಲಗುವಷ್ಟು ಸ್ಥಳ, ಇಬ್ಬರು ಕುಳ್ಳಿರಬಹುದು, ಬನ್ನಿ.” ಸ್ವಲ್ಪ ಸಮಯಕ್ಕೇ, ಮಳೆಯಲ್ಲಿ ತೊಯ್ದ ಪೇಯಾಳ್ವಾರ್ರ ಬಂದರು, ಆಸರೆ ಕೋರಿದರು. ನಡುಗುತ್ತಿದ್ದಾರೆ ಮಳೆಯಿಂದಾಗಿ!
“ಬನ್ನಿ ಬನ್ನಿ, ಮೂವರು ನಿಲ್ಲುವಷ್ಟು ಸ್ಥಳವಾದೀತು” ಎಂದರು ಪೊಯ್ಹೈ! ಮೂವರು ನಿಂತಿದ್ದಾರೆ, ಅವರವರ ಮನಸ್ಸಿನಲ್ಲಿ ಮಳೆ – ಪ್ರಕೃತಿ – ಕತ್ತಲ – ಮಳೆಯಿಂದಾಗಿ, ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದು. “ನೀವು ಯಾರು?” ಎಂದರೆ, ‘ಒಬ್ಬರು ಹೇಳಿದ್ದು’ ‘ನಾನು ಭಾಗವತಶೇಷನು!” ಇನ್ನೊಬ್ಬರೆಂದರು: “ನಾನು ವಾಸುದೇವನ ದಾಸನೇ!” ಮಗುದೊಬ್ಬರು ನುಡಿದರು: “ನಾನು ಕೋಸಲೇಂದ್ರನ ದಾಸನು” ಇವರ ಮಾತು ಹೀಗೆ ಒಂದು ತೆರನಾಗಿ ಅರ್ಥಗರ್ಭಿತವಾದದ್ದು: ನಡೆದಿದೆ, ಮೂವರ ನಡುನಡುವೆ, ಇಕ್ಕಟ್ಟಿನಲ್ಲಿಯೆ, ನಾಲ್ಕನೆಯ ವ್ಯಕ್ತಿಯ ಅನುಭವ ಇವರನ್ನು ಎಲ್ಲೆಡೆಯಿಂದ ಒತ್ತರಿಸುವ ಅನುಭವ! ಮೂವರೂ ಯೋಗದೃಷ್ಟಿಯಿಂದ, ಮಾನಸಿಕ ಸಂವೇದನೆಯಿಂದಲೇ ಅರಿತರು, “ಈ ನಾಲ್ಕನೆಯವ ಪರಮಾತ್ಮನೇ ದಿಟ!” ಎಂತಹ ನಿಕಟವಾದ ಸುಸ್ಪರ್ಶವದು! ಇದರಿಂದ ಸ್ಫೂರ್ತಿಗೊಂಡು ಹೊರಹೊಮ್ಮಿದ್ದು “ಪ್ರಬಂಧ “ಪಾಶುರಗಳು!
“ತಿರುವಂದಾದಿ‘ ೧,೨,೩ ಮುದಲ್ ತಿರುವಂದಾದಿ
ಛಂದದಲ್ಲಿ ಮೂವರೊ ಆಳ್ವಾರ್ರರುಗಳು ತಾವು ಇರುಂಡಾಂ ತಿರುವಂದಾದಿ
ಪಡುವ ಭಗವದನುಭವವನ್ನು ಅಭಿವ್ಯಕ್ತಿ ಮೂನ್ರಾಂತಿರುವಂದಾದಿ
ಸಿದರು – ಹಾಡಿದರು ಮೈಮರೆತು! ಎಂಬುವುವು ಆ ಪಾಶುರಗಳು!
ತಿರುವಂದಾದಿ – ಛಂದದಲ್ಲಿ, ಮುನ್ನೂರು ಪದ್ಯಗಳು ಮೂವರು ಆಳ್ವಾರ್ರರೂ ಹಾಡಿದ್ದು! ಈ ಪಾಶುರದಲ್ಲಿ ಕೊನೆಯ ಸಾಲಿನ ಅಂತಿಮ ಪದ ಉಳಿದ ಪಾಶುರದ ಮೊದಲಲ್ಲೇ ಪುನರುಚ್ಚಾರವಾಗುತ್ತದೆ ಇದೇ ಛಂದೋವಿಶೇಷ.
ಅಂತ್ಯ – ಆದಿ – ಅಂದಾದಿ – ಶ್ರೇಷ್ಠ – ಅಂದರೆ, ತಿರುವಂದಾದಿ, ಸಾಮಾನ್ಯವಾಗಿ, ತಮಿಳು ಪ್ರಬಂಧಗಳನೇಕ ಈ ಛಂದದಲ್ಲಿ ರಚಿತವಾಗಿದೆ. ಜಾನಪದ ಛಂದೋಪ್ರಕಾರವಿದು.
i ಪೊಯ್ ಹೈ ಆಳ್ವಾರರು ಇಂತು ಹಾಡಿದರು:
“ವೈಯಮ್ ತಹಳಿಯಾವಾರ್ ಕಡಲೇನೆಯ್ಯಾಹ
ವೆಯ್ಯಕದಿರೋನ್ ವಿಳಕ್ಕಾಹ – ಶೆಯ್ಯ
ಕುಡರಾಳಿಯಾನ್ ಅಡಿಕ್ಕೆ ಶೂಟ್ಟಿನ್ನೇನ್ ಶೂಲ್ಮಾಲೈ
ಇಡರಾಮಿನೀಗುಹವೇ ಎನ್ರು (ಮುದಲ್ತಿರುವಂದಾದಿ)”
“ನೆಲವೇ ಹಣತೆಯಾಗಿ ಹರಹಿದ ಕಡಲು ನೆಯ್ಯಾಗಿ (ನೆಯ್=ತುಪ್ಪ)
ಬಿಸುಗದಿರ ಸೂರ್ಯನೇ ಸೊಡರ ಕುಡಿಯಾಗಿರಲು
ಎಡರ ಕಡಲಾದ ಸಂಸಾರ ಅಳಿಯಲಿ ಎಂದು
ಸೊಡರಂಥ ಚಕ್ರವನು ಹಿಡಿದವನ ಕೆನ್ನಡಿಗೆ
ನುಡಿಮಾಲೆಯಿದನು ತೊಡಿಸಿದೆನು”
ಭೂಮಿಯೇ (ಬೆಳಗುವ) ಹಣತೆ, ತುಂಬಿದ ಸಮುದ್ರವೇ ತುಪ್ಪ,
ಪ್ರಕಾಶಿಸುವ ಸೂರ್ಯನೇ ಬೆಳಕಾಗಿರಲು, ಉಜ್ವಲ ಸುದರ್ಶನ ಕೈಲಿ
ಹಿಡಿದಿರುವ ಸ್ವಾಮಿ ಸಿರಿಪದಗಳಿಗೆ ನುಡಿಮಾಲೆಯನ್ನು ಅರ್ಪಿಸಿರುವೆ.
ii ಮಗ್ಗುಲಲ್ಲೇ ಇದ್ದ ಪೂದತ್ತಾಳ್ವರರು ಹಾಡಿದರು:
“ಅನ್ಬೇ ತಹಳಿಯಾ ಆರ್ವಮೇ ನೆಯ್ಯಾಹ
ಇನ್ಬರುಹುಶಿಂದೈ ಇರುತಿರಿಯಾ, ನನ್ಬರುಹಿ
ಜ್ಞಾನಚ್ಚುಡರ್ ವಿಳಕ್ಕೇತ್ತಿನೇನ್ ನಾರಣರ್ಕ್
ಜ್ಞಾನತ್ತಮಿಳ್ ಪುರಿಂದ ನಾನ್” (ತಮಿಳು ಮೂಲ)
(ಇರಂಡಾಂ ತಿರುವಂದಾದಿ)
ಕನ್ನಡ: ಭಕ್ತಿಯೇ ಹಣತೆ ಮನದಾಸೆಯೇ ನೆಯ್ಯಾಗಿ
ಆನಂದ ಅರುಗಿ ಭಾವವೇ ವರ್ತಿಯಾಗಿರಲು
ಬೆಳಗಿ ಹಚ್ಚಿದೆನು ಅರಿವ ಸೊಡರ, ಆತುಮವುಕರಗಿ
ತಿಳಿವೀವ ತಮಿಳರಿತ ನಾನು ನಾರಾಯಣಗೆ
ಸಾರ: ಪರಭಕ್ತಿಯೇ (ಬೆಳಗುವ) ಹಣತೆ, ಅವನನ್ನು (ನಾರಣನ್ನು) ಪಡೆಯುವ ಅಭಿನಿವೇಶವೇ ತುಪ್ಪ, ಆನಂದದಿಂದ ಕರಗಿ ಹೋದ ಚಿಂತೆಯೇ ಹಣತೆಗೆ ಇಡುವಂಥ ಬತ್ತಿ, ಜ್ಞಾನವುಂಟು ಮಾಡುವ ಆತ್ಮಕರಗಿ ಹೋಗಲು ‘ಪರಭಕ್ತಿ’ ಎನ್ನುವ ಈ ಜ್ಞಾನದ ಸೊಡರನ್ನು – ಜ್ಯೋತಿಯನ್ನು – ತಮಿಳರಿತ ನಾನು ನಾರಣನಿಗೆಂದು ಹಚ್ಚಿದ್ದೇನೆ.” ಪೂದತ್ತಾಳ್ವಾರರ ಸನಿಹವೇ ನಿಂತಿದ್ದ ಪೇಯಾಳಾರರು
ದೈವೋನ್ಮಾದದಿಂದಲೇ ಪ್ರಬಂಧ ಹಾಡಿದರು:
“ತಿರುಕ್ಕಂಡೇನ್ ಪೊನ್ಮೇನಿಕಂಡೇನ್ ತಿಹಳುಮ್
ಅರುಕ್ಕನ್ ಆನಿನಿರಮುಂ ಕಂಡೇನ್ – ಶೆರುಕ್ಕಿಳರುಮ್
ಪೊನ್ನಾಳಿ ಕಂಡೇನ್ ಪುರಿಶಂಗಂ, ಕೈ ಕಂಡೇನ್
ಎನ್ನಾಳ್ವಣ್ಣನ್ ಪಾಲ್ ಇನ್ರು……….”
ಸಿರಿಯನ್ನು ಕಂಡೆ, ಹೊನ್ನೊಡಲ ಕಂಡೆ,
ತೊಳಗಿ ಬೆಳಗುವ ರವಿಯ ತೆರದ ಚೆಲುಹೊಗರ ಕಂಡೆ,
ರಣದೆ ಹೊಳೆಹೊಳೆವ ಹೊನ್ನಸುದರ್ಶನ, ಮುರಿಶಂಖ,
ಕಡಲಬಣ್ಣದ ಎನ್ನ ಹರಿಯಲ್ಲಿ ಕಂಡೆ !
ಸಾರಾಂಶ : ನನ್ನ ಸ್ವಾಮಿಯು, ಕಡಲಿನ ಬಣ್ಣದವರ, ಆತನಲ್ಲಿ ಶ್ರೀದೇವಿಯನ್ನು ಕಂಡೆನು, ಬೆಳಗುವ ಸ್ವರ್ಣಶರೀರನ ಕಂಡೆನು, ಬೆಳಗುವ ರವಿತೆರನೆದೇದೀಪ್ಯ ಮಾನರೂಪವನು ಕಂಡೆನು
ಯುದ್ಧದಲ್ಲಿ ವರ್ಧಿಸುವ ಸುಂದರ ಸುದರ್ಶನ ಚಕ್ರ ಕಂಡೆನು,
ಶ್ರೀಪಾಂಚಜನ್ಯ (ಶಂಖ) ಧರಿಸಿರುವ ದಿವ್ಯ ಹಸ್ತವನು ಕಂಡೆನಾ……….
ಪೊಯ್ಹೈ ಆಳ್ವಾರ್ರರು, ಭಗವಂತನು, ಉಭಯ ವಿಭೂತಿ ಯೊಡಗೂಡಿದವನೆಂಬುದಾಗಿ
ಅನುಸಂಧಾನ ಮಾಡಿದರು, ಜ್ಞಾನವನ್ನು ತಿಳಿಯ ಹೇಳಿದರು.
ಪೂದತ್ತಾಳ್ವಾರರು, ಆ ಉಭಯ ವಿಭೂತಿಯುಕ್ತನೇ ನಾರಾಯಣನೆಂದರು
‘ಜ್ಞಾನ ವಿಪಾಕವಾದ ಭಕ್ತಿಯ ಬಗ್ಗೆ ತಿಳಿಸಿದರು.
ಪೇಯಾಳ್ವಾರರಾದರೋ – ಪರತತ್ವವನ್ನು ಹೇಳುವ ‘ನಾರಾಯಣ’ ಶಬ್ದದೊಡನೆ “ಶ್ರೀ” ಶಬ್ದವನ್ನು ಸೇರಿಸಿಕೊಳ್ಳಬೇಕೆಂದು ತಿಳಿಸಿದರು.
ಮೊದಲ ಮೂವರು ಆಳ್ವಾರರ ದರ್ಶನ – ಕವಿತೆಯ ಶಿಲ್ಪ – ಬಂಧ – ತಾನಾಗಿಯೇ ಒರತೆಯಂತೆ ಸ್ಫುರಿಸಿ ಬಂದುದೆನ್ನಿಸುತ್ತದೆ!
ಮೂವರು ಆಳ್ವಾರ್ರರಿಗೂ | “ತುಲಾಯಾಂ ಶ್ರವಣೇಜಾತಂ ಕಾಂಚ್ಯಾಂಕಾಂಚನ ವಾರಿಜಾತ್ | |
ಧ್ಯಾನಶ್ಲೋಕಗಳಿವೆ ಹಾಗೂ | ದ್ವಾಪರೇ ಪಾಮಚಜನ್ಯಾಶಂ ಸರೋಯೋಗಿನಲ ಆಶ್ರಯೇ” (ಪೊಯ್ಹೈ) |
ಇದನ್ನು ಪಠಿಸಿದನಂತರ, | (ಸಿದ್ದಾರ್ಥಿ ಸಂವತ್ಸರ, ತುಲಾಮಾಸ, ಶ್ರವಣ ನಕ್ಷತ್ರ) |
ಮುಂದುವರಿಸುವುದು ಸಂಪ್ರದಾಯ ತುಲಾ ಧನಿಷ್ಠಾ ಸಂಭೂತಮ್ ಭೂತಂ ಕಲ್ಲೋಲಮಾಲನಃ |
ಪೂದತ್ತಾಳ್ವಾರ್ iii) ತೀರೇ ಪುಲ್ಲೋತ್ಪಲ್ಲೇ ಮಲ್ಲಾಪುರ್ಯಾಮಿಡೇ ಗಣಾಂಶಜಂ | (ತುಲಾಮಾಸ, ಧನಿಷ್ಠಾ ನಕ್ಷತ್ರ – ಮಹಾಬಲಿಪುರ, ತಿರುವಲ್ಲಿಕ್ಕೇಣಿ ಸರಸ್ಸಿನಲ್ಲಿ ಜನನ)
iii. ತುಲಾ ಶತಭಿಷಗ್ಜಾತಂ ಮಯೂರಪುರಿಕ್ಕೆರವಾಕ್ |
ಮಹಾನ್ತಮ್ ಮಹಾದಾಖ್ಯಾತಮ್ ವಂದೇಶ್ರೀನಂದಾಕಾಂಶಜಮ್ ||
(ಪೇಯ್ – ಹುಚ್ಚ, ಮರುಳ, ದೈವೋನ್ಮಾದಿ ಎಂದರ್ಥ (ಪೇಯಾಳ್ವಾರ್) ಈಗಲೂ ನಮ್ಮಲ್ಲಿ “ಮರುಳಸಿದ್ಧ”, ಎಂಬುವ ಹೆಸರು ಪ್ರಚಲಿತವಿದೆ. ಹುಚ್ಚಯ್ಯ ಎಂದೂ ಹೆಸರಿವೆ. |
ಅನುಭಾವಿಸಂತರು – ತಮ್ಮ ಅವಧೂತಾವಸ್ಥೆಯಲ್ಲಿ ಸದಾ ದೇವೋನ್ಮಾದಿಯಾಗಿರುತ್ತಾರೆ. ಹರಿದಾಸರು ಹಾಡುವುದಿದೆ.” ರಂಗ ನಿನ್ನ ಕೊಂಡಾಡುವ ಮಂಗಳಾತ್ಮಕರ ಸಂಗಸುಖವಿತ್ತು ಕಾಯೋ ಕರುಣಾಸಾಗರ ||
ಮೂಕಬಧಿರರಂತಿಪ್ಪರೊ ನೋಳ್ವ ಜನಕೆ |
ಕಾಕುಯುಕುತಿಗಳನವರು ತಾರರೋ ಮನಕೆ ||
ಎಂಬುದರ ಸಾರ ಗಮನೀಯ.
ತಿಳುಮಳಿಶ್ವೆಆಳ್ವಾರ್
“ಭಕ್ತಿಸಾರ” ರೆಂದೂ ಇವರಿಗೆ ಇನ್ನೊಂದು ಹೆಸರಿದೆ. ದ್ರಾವಿಡ ದೇಶದ ‘ತಿರುಮಳಿಶ್ವೆ’ ಹೆಸರಿನ ಗ್ರಾಮದಲ್ಲಿ ಜನಿಸಿದುದರಿಂದ “ತಿರುಮಳಿಶೈ ಆಳ್ವಾರ್ | ಎಂದೇ ಪ್ರಸಿದ್ಧರಾದರು!
ತಂದೆ, ಒಬ್ಬ ಭಾರ್ಗವ ಋಷಿ, ತಾಯಿ, ಕನಕಾಂಗಿ ಎಂಬುವ ಅಪ್ಸರೆ, ಋಷಿಯಿಂದ ಶಿಶುವನ್ನು ಹಡೆದಳು, ಒಂದು ಲತಾಕುಂಜದ ಸನಿಹ ತೊರೆದು ಹಾರಿದಳು !
ಮಗುವಿನ ರೋಧನವನ್ನು ಆಲಿಸಿದ – ಬೆತ್ತದ ಬಳ್ಳಿಯನ್ನು ಕತ್ತರಿಸುತ್ತಿದ್ದ ತಿರುವೆಳ್ಳಾಲರ್ ಎಂಬುವ ಬಿಲ್ಲ – ಬೇಡ. ಸಲಕ್ಷಣದೊಡಗೂಡಿದ್ದ ಶಿಶು! ಮಗುವನ್ನೆತ್ತಿಕೊಂಡು ಮನೆಗೆ ಬಂದವನೇ ತನ್ನ ಮಡದಿಯ ಮಡಿಲಿಗೆ ಹಾಕಿದ. ತಿರುಮಳಿಶೈ ಬೆಳೆದ, ದೊಡ್ಡವನಾದ! ಅಪಾರಭಕ್ತಿ ಮೈವೆತ್ತಾತ – ಶ್ರೀಹರಿಯಲ್ಲಿ ಗುರುಹಿರಿಯರಲ್ಲಿ ನಮ್ರ. ಶಿಕ್ಷಣವೂ ಸ್ವಲ್ಪ ದೊರೆತಿತ್ತೇನೊ (ಪ್ರಬುಧಗಳ ಚೌಕಟ್ಟು ಗಮನಿಸಿದಾಗ, ತಿಳಿಯಬರುತ್ತದೆ!) ಬೇಡರಕಸುಬು, ಬೇಟೆ ಒಲ್ಲನಾತ! ಪ್ರಾಣಿವಧೆ, ಅವನಿಗಾಗದು.
ತಿರುಮಳಿಶೈ ತನ್ನ ಒಲವಿನ ಶ್ರೀ ಮನ್ನಾರಾಯಣನ ದಿವ್ಯ ಮಂಗಲ ವಿಗ್ರಹದ ಸೌಂದರ್ಯಾತಿಶಯವನ್ನು ಅನುಭವಿಸುತ್ತ, ಹಾಡಿರುವ ಎರಡು ದಿವ್ಯ ಪ್ರಬಂಧಗಳು, “ನಾನ್ಮುಗನ್ ತಿರುವಂದಾದಿ (೯೬ ಪದ್ಯ) ಹಾಗೂ ತಿರುಚ್ಚಂದವಿರುತ್ತಮ್ (೧೨೦)
“ಶ್ರೀಯಃ ಪತಿಯಾದ ಶ್ರೀ ಮನ್ನಾರಾಯಣನೇ ಪರತತ್ವ” ಎಂದು ಸಮರ್ಥಿಸುತ್ತ ಭಗವಂತ – ಶ್ರೀದೇವಿಯರ ನಿತ್ಯ ಸಂಬಂಧದ ಸೊಗಡಿನ ನಿರೂಪಣೆಯಿದೆ. ಈ ಪ್ರಬಂಧದಲ್ಲಿ.
“ನಾನು ದ್ವಿಜರಲ್ಲಿ ಜನಿಸಲಿಲ್ಲವಯ್ಯ | ನಾಲ್ಕು ವೇದಗಳ ನಾನರಿಯೆ.”
ಇಂದ್ರಿಯ ನಿಗ್ರಹ, ಸಂಯಮ, ನಾನರಿಯೆ : ನನಗೆ ತಿಳಿದಿರುವುದೊಂದೆ :
ಶ್ರೀ ಹರಿಯ ದಿವ್ಯ ಪಾದಗಳು
ನಿನ್ನ ಹೊನ್ನಡಿಗಳಿಲ್ಲದೆಯೆ, ನನ್ನಗಿನ್ನೇನು ದಿಕ್ಕು!”
“ವೇರೊರುವರ್
ಇಲ್ಲಾ ಮೈ ನಿನ್ರಧೈಎರ್ಮ್ಮಾನ್ವೆ ಎಪ್ಟೊರುಳ್ಕುಮ್
ಶೊಲ್ಲಾನೈ ಚೊನ್ನೇನ್ ತೊಹುತ್ತು ……….. (ನಾ.ತಿ.೪)
ಈ ಲೋಕದಲ್ಲಿ ಸರ್ವಶಬ್ದ ವಾಚ್ಯನೂ, ಸರ್ವಂತರ್ಯಾಮಿಯೂ,
ಸಮಾಭ್ಯರಥಿಕ ರಹಿತನೂ
ಆದಾತ ಶ್ರೀಮನ್ನಾರಾಯಣ ಒಬ್ಬನೇ! ಆತನೇ ಪರತತ್ವ.
ಇಂದೋನಾಳೆಯೋ ಇಲ್ಲ ಇನ್ನು ಮುಂದೆಯೋ ನಿನ್ನ ಕೃಪೆಗೆ ನಾನ
ಪಾತ್ರನಾಗುವುದು ದಿಟ. ಓ ನಾರಾಯಣ! ನೀನಿಲ್ಲದೆ ನಾನಿಲ್ಲಲ. ಹಾಗೆಯೇ ನೀನೂ ನಾನಿಲ್ಲದೇ ಇಲ್ಲ, ಕಂಡೆಯಾ! (ಎನಗು ಆಣೆ, ರಂಗ ನಿನಗು ಆಣೆ ಎಂಬ ಪುರಂದರರ ಕೀರ್ತನೆಯಂತೆ)
ತಿರುಮಳಿಶೈ ಪ್ರಮುಖತಃ ತತ್ವಚಿಂತಕೆ, ಭಕ್ತಿಭಾವ ಕವಿ!
ತಿರುಚ್ಛಂದವಿರುತ್ತಂ: ೧೨೦ ಪಾಶುರಗಳ ಪ್ರಬಂಧ.
ಈ ಸಾಲ್ಗಳಲ್ಲಿ ಪದಾರ್ಥಗಳ ಸಂಖ್ಯೆಯನ್ನು ಆಳ್ವಾರರು ನಿರೂಪಿಸುತ್ತಾರೆ!
(ತಿರು + ಛಂದ – ವಿರುತ್ತಂ – ಶ್ರೇಷ್ಠಛಂದೋ ವೃತ್ತ)
ಇಲ್ಲಿ ಏಕದೇವೋಪಾಸನೆ, ನಿಷ್ಠೆ ಹಾಗೂ ಕ್ಷುದ್ರ ದೇವತೆಗಳ ನಿರಾಕರಣ
ನೋಟಕ್ಕೆ ಮಾತ್ರ ಸೊಗಸಾಗಿರುವ ಕ್ರೂರಿದೇವತೆಗಳನ್ನೇಕೆ ಪೂಜಿಸುವಿರಿ!
ಕಿವಿಗಳಾಲಿಸಲು ಸಹಿಸಲಾಗದ ಕಟ್ಟುಕತೆಗಳನ್ನು ಕೇಳುವುದೇಕೆ!
ಬೇಡಿ ಬೇಡಿದರೂ ವರವೀಯಲಾರದ ದೇವೋಪದೇವನ ತೆಗಳಿಇವರು!
ವರವಿತ್ತರೂ ಕೂಡ, ನಿಮ್ಮ ಹಿತಕಾಯಲಾರದ, ಬದುಕಿಸಲಾರದ ಈ ದೇವತೆಗಳು ಕೆಲವು ವರಗಳನ್ನೀಯುವಂಥವರು, ಅಷ್ಟೇ !
ಈ ಅನೇಕ ಕ್ಷುದ್ರ ದೇವೋಪದೇವತೆಗಳ ಪೂಜೆ ಬಿಟ್ಟುಬಿಟ್ಟು
ಜಗದೇಕನಾಥನಾದ ನನ್ನ ನಾರಣನನ್ನು ನಮಿಸಿ, ಶರಣಾಗತಿ ಮಾಡಿರಿ,
ಈ ಸಂಸಾರ ಬಂಧನಗಳಿಂದ ವಿಮುಕ್ತರಾಗಿರಿ!”
ಈ ಆಳ್ವಾರರ ಪ್ರಬಂಧಗಳು ಸೇವಾ ಕಾಲಕ್ಕೆ ಮುದನೀಡುತ್ತವೆ.
ತೊಂಡರಡಿಪ್ಪೊಡಿ
ಆಳ್ವಾರ್ (ಭಕ್ತಾಂಪ್ರಿರೇಣು)
ದೈವದಲ್ಲಿ ನಂಬಿಕೆ, ಭಕ್ತಿಯುಳ್ಳವರು ಈ ಆಳ್ವಾರರು.
“ತೊಂಡನೂರು” – ಕೆರೆತೊಂಡನೂರು – ಅದೀಗ ಜನರ ಬಾಯಲ್ಲಿ “ಕೆರೆ ತೊಣ್ಣೂರಾಗಿದೆ” (ಮೇಲುಕೋಟೆ ಸನಿಹ, ಪಾಂಡವಪುರ – ಮಂಡ್ಯಜಿಲ್ಲೆ – ಕರ್ನಾಟಕಕ್ಕೂ ಸಮೀಪ ಇರುವ ಸಣ್ಣ ಊರು. ಆಚಾರ್ಯ ರಾಮಾನುಜರು, ತಮಿಳು ನಾಡಿಂದ ಕನ್ನಡ ನಾಡಿಗೆ ಬಮದಾಗ, ತೊಂಡನೂರಿನಲ್ಲಿ ಕೆಲವು ವರ್ಷ ಇದ್ದರು. “ನಂಬಿನಾರಾಯಣ” ಸಾನ್ನಿಧ್ಯ, ವೇಣುಗೋಪಾಲ, (ಆಚಾರ್ಯರ ವಿಶಿಷ್ಟ ಭಂಗಿಯ ಮೂರ್ತಿ), ಕಟ್ಟಿದರು ದೇವಾಲಯಗಳನ್ನ ಅಂದಿನ ಹೊಯ್ಸಳ ಅರಸು ಜೈನಧರ್ಮೀಯರು, ಬಿಟ್ಟಿದೇವ ವಿಷ್ಣುವರ್ಧನನಾಗಿ ವೈಷ್ಣವದೀಕ್ಷೆ ಸ್ವೀಕರಿಸಿದ ನಂತರ!
ತೊಂಡರಡಿ – ಎಂದರೆ, ಭಕ್ತರ ಪಾದ: ಪ್ಪೊಡಿ – ಮಡಿ – ಪಾದದೂಳಿ ರೇಣು, ಹೀಗಾಗಿ ತಮಿಳಿನ “ತೊಂಡರಡಿಪ್ಪೊಡಿ” ಸಂಸ್ಕೃತೀಕರಣವಾಗಿ “ಭಕ್ತಾಂಘ್ರಿರೇಣು” ಎಂಬುದಾಗಿ ಈತ ಕರೆಯಲ್ಪಡುತ್ತಿದ್ದಾರೆ.
ತಮಿಳುನಾಡಿನ ಚೋಳಮಂಡಲಕ್ಕೆ ಸೇರಿದ “ಮಂಡಂಗುಡಿ“ ಎಂಬ ಊರು ಆಳ್ವಾರರ ಹುಟ್ಟಿದೂರು. ತಂದೆ, ತಾಯಿ, “ವಿಪ್ರನಾರಾಯಣ” ನೆಂದು ಮಗನಿಗೆ ಹೆಸರಿಟ್ಟರು.
ವೇದಶಾಸ್ತ್ರ ಅಧ್ಯಯನ ಸಂಗಡವೇ ಎಂಟನೆಯ ವಯಸ್ಸಿಗೇ ಉಪನಯನ, ಔಪಾಸನೆ, ವೈರಾಗ್ಯ ಮನೋಧರ್ಮ – ಸಾತ್ವಿಕ ಸ್ವಭಾವ, ಅತಿಶಯ ಪಾಂಡಿತ್ಯ, ಶ್ರೀರಂಗಕ್ಷೇತ್ರಕ್ಕೆ ಬಂದರು – ಶ್ರೀ ರಂಗನಾಥ ಸ್ವಾಮಿಗೆ ತುಲಸೀ ಪತ್ರೆಗಳು, ಹೂಗಳು – ಇದನ್ನು ಅರ್ಪಿಸುವ ಕೈಂಕರ್ಯವನ್ನು – ನಡೆಸಿಕೊಂಡು ಮುಂದವರೆಸಿದರು.
ಆ ಊರಿನ ಗಣಿಕಾಸ್ತ್ರೀ ದೇವದೇವಿ – ಬಹಳ ಸುಂದರಿ! ವಿಪ್ರನಾರಾಯಣರ ಬೆಳೆಸಿದ್ದ ಹೂದೋಟಕ್ಕೆ ಬಂದರು, ದೇವರ ಪೂಜೆಗೆಂದು ಹೂಕೊಯ್ದುಕೊಂಡು ಹೋಗುವಳು. ಜತೆಗೇ ಆಕೆಯ ತಂಗಿಯೂ ಬರುತ್ತಿದ್ದಳು.
ಒಂದು ದಿನ, ತೋಟವೆಲ್ಲ ತಿರುಗಾಡಿ ಆಯಾಸಗೊಂಡ ದೇವದೇವಿ, ಅವಳ ತಂಗಿ, ಮರವೊಂದರ ನೆಳಲಿನಲ್ಲಿ ಕುಳಿತು ವಿನೋದದ ಮಾತಾಡುತ್ತಿದ್ದರು. ವಿಪ್ರನಾರಾಯಣ, ದೇವರ ಸ್ತೋತ್ರಗಳನ್ನು ಹೇಳಿಕೊಳ್ಳುತ್ತ ತನ್ನ ಮನೆಯಿಂದ ಹೊರಬಂದ, ಹೂ ಗಿಡಗಳಿಗೆ ಪಾತೆ ಮಾಡತೊಡಗಿದ. ಒಳ್ಳೆಪ್ರಾಯ, ತೇಜಸ್ವಿ ಬ್ರಾಹ್ಮಣ.
ದೇವದೇವಿಗೆ ಆತನನ್ನುನೋಡ ನೋಡುತ್ತ ಅನುರಾಗ ಮೂಡಿತು. ಹೃದಯಮನಸ್ಸು ಸ್ಪಂದಿಸಿದವು – ಆದರೆ, ವಿಪ್ರನಾರಾಯಣ, ಇವರತ್ತ ದೃಷ್ಟಿ ಹಾಯಿಸಲಿಲ್ಲ, “ಕಣ್ಣೆತ್ತಿಯೂ ನೊಡಲಿಲ್ಲ!
ತನ್ನ ದೇಹ ಸೌಂದರ್ಯ ರಾಶಿಗೆ ಕಣ್ಣು ಹಾಯಿಸದ, ಚೆಲುವಿಗೆ ಮರುಳಾಗದ ಗಂಡಿವನಾರು? ಎಂಥ ಉದಾಸೀನ! ಇವನ ಸಹವಾಸ ಮಾಡಲೇಬೇಕು, ಎಂದುಕೊಂಡ, ದೇವದೇವಿ, ತನ್ನ ತಂಗಿಯನ್ನು ಜತೆಗೆ ಬಾ ಎಂದು ಕರೆದಳು. ತಂಗಿ ಅಕ್ಕನ ಮಾತಿಗೆ ಪುಷ್ಟಿ ನೀಡಲಿಲ್ಲ. ಹಂಗಿಸುತ್ತ, “ಸುಮ್ಮನಿರು ಅಕ್ಕಾ”, ಎಂದೇ ಹೇಳಿಬಿಟ್ಟಳು!
ತಂಗಿಯ ಮಾತಿಗೆ ಒಪ್ಪದ ದೇವದೇವಿಯು ಲಗುಬಗೆಯಿಂದ ಬಂದು, ನವಿಲಿನಂತೆ ನಲಿಯುತ್ತ, ವಿಪ್ರನಾರಾಯಣನ ಕಾಲುಗಳಿಗೆ ಮಣಿದಳು, “ಮಗಳೇ! ನೀನಾರು? ಇಲ್ಲಿಗೆ ಬರುವ ಕಾರಣ! “ನಿನಗೆ ನನ್ನಿಂದ ಏನಾಗಬೇಕು!
ದೇವದೇವಿ: “ನಾನು ಈ ಊರಿನ ವೇಶ್ಯೆ. ವೇಶ್ಯಾ ಜೀವನವು ಬೇಸರಾಗಿದೆ. ನನ್ನನ್ನು ತಿದ್ದಿಕೊಂಡು, ಉತ್ತಮವಾದ ಬದುಕನ್ನು ಬದುಕಬೇಕು. ನಿಮ್ಮಂಥಯೋಗಿಗಳಾಸೆರೆ ನನಗೆ ಸಾರ್ಥಕತೆ ಉಂಟು ಮಾಡೀತು. ದಯಮಾಡಿ ನನ್ನನ್ನು ಉದ್ಧರಿಸಿರಿ. ನೀವು ನಡೆಸುತ್ತಿರುವ ಶ್ರೀ ರಂಗನಾಥನ ಕೈಂಕರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳಿರಿ. ಹೂದೋಟ ಸಹಾಯಕಳಾಗಿ ಇಲ್ಲಿರುವೆ”
ಮುಗ್ಧ ವಿಪ್ರನಾರಾಯಣ ಆಗಲೆಂದ, ದೇವದೇವಿ, ಆರುತಿಂಗಳ ಪರ್ಯಂತ, ಹೂದೋಟ ಕಾರ್ಯದಲ್ಲಿ ದುಡಿದಳು ! ಜನರ ಮೆಚ್ಚುಗೆ ಕೂಡ ಪಡೆದಳು!
ಒಂದು ದಿನ, ತೋಟದಲ್ಲಿ ಕೆಲಸ ಮಾಡುತ್ತಿದ್ದಾಳೆ, ಮೋಡಬಾನಲ್ಲಿ ಕವಿದು, ಜೋರಾದ ಮಳೆ ಚೆಚ್ಚಿತು! ಮಳೆಯಲ್ಲಿಯೇ ತೋಯುತ್ತಿದ್ದ ಹೆಣ್ಣನ್ನ ಕಂಡು ಅನುಕಂಪ ತೋರಿದ ವಿಪ್ರನಾರಾಯಣ, ‘ಗುಡಿಸಲೊಳಗೆ ಬಂದು, ಮಳೆ ನಿಂತ ನಂತರ ಕೆಲಸದಲ್ಲಿ ತೊಡಗು” ಎಂದ!
Leave A Comment