ಆದಯ್ಯ
ದುಂದುಮೆಯೆಂದೆಂದು ಪಾಡಿರಿ ಜಾಣ
ದುಂದುಮೆ ಬಸವಂತನಹಬ್ಬ ॥
ಶಿವ ಶಿವ ಗಣನಾಥನಂದನಂದನ ತನು
ಭವಹರ ನಿರ್ಜರೊಂದಿತ ಚರಣ ಗೌರೀ
ಧವಧವಲಾಂಗವರ್ಜಿತ ಮರಣ ಚಂದ್ರ
ರವಿವಹ್ನಿನೇತ್ರ ಪೂರಿತ ಕರುಣ ಸರ್ವ
ಭುವನ ಜನರ ರತಿ ಮರಿಯಾದೆ ಪಾಲಿಪ
ಭವನೆ ನಂಬಿದೆ ನಿನ್ನ ಒಲಿದೆನ್ನ ಸಲಹು ॥
ಈಶ ಮಾಹೇಶ ಗೌರೀಶ ಗಜಾಂತಕ
ನಾಶ ಮುಕ್ತೀಶ ಮಲ್ಲೇಶ್ವರನೆ ಪುರ
ನಾಶ ಭೂತೇಶ ಸರ್ವೇಶ್ವರನೆ ಯಮ
ನಾಶ ಗಿರೀಶ ಮದೀಶ್ವರನೆ ಜಗ
ದೀಶ ಗಂಗಾಂಬೆಯ ತೋಷ ಭೂಷ ಅಘ
ನಾಶ ರಹಿತ ಆಶ ಸಲಹು ಸೋಮೇಶ ॥
ಆದಿಗಣೇಶನು ಹರನ ನಿರೂಪದಿ
ಮೇದಿನೀಸ್ಥಲದೊಳಗುದ್ಭವಿಸಿ ಪರ
ವಾದಿ ಜಿನ್ನರನೆಲ್ಲ ಸಂಹರಿಸಿ ಸೌ
ರಾಷ್ಟ್ರ ಸೋಮೇಶನ ಸ್ಥಿರಗೊಳಿಸಿ ಮತ್ತೆ
ಈ ಧರೆಯೊಳು ತೋರಿ ಮೆರೆಸಿದಾದಯ್ಯನ
ಮೋದದಿಂದಾತನ ಕಥೆಯ ನಿರ್ವಿಪೆನು ॥
ಕರ್ತುಶಂಕರ ಸಿಂಹಪೀಠವಡರಿ ಮತ್ತೆ
ಮೋರ್ತಮಾಡಿರೆ ಸುತ್ತ ಎಡಬಲದಿ ಲಕ್ಷ್ಮಿ
ಕರ್ತರು ಅಜರಿರ್ಪ ತರತರದಿ ಭೃಂಗಿ
ನರ್ತನ ಗಾನವೆತ್ತುತ ಸ್ವರದಿ ಗಣ
ದರ್ತಿಲೆ ಸಂತೋಷದಿಂದಿರ್ಪ ಸಮಯದಿ
ತುರ್ತದಿಂ ನಾರದ ಮರ್ತ್ಯದಿಂದಿಳಿದ ॥
ಆ ಕ್ಷಣ ಬಂದು ನಿರೀಕ್ಷಿಸಿ ಇಂದು ಭಾ
ಳಾಕ್ಷ ಸುಮುಕ್ಷವಾಹನ ಜಯತು ನಿರ
ಪೇಕ್ಷ ನಿರ್ಲಕ್ಷ ನಿರ್ಮಳ ಜಯತು ಭಕ್ತಾ
ಪೇಕ್ಷ ಮುಮುಕ್ಷದಾಯಕ ಜಯತು ಲೋಕ
ರಕ್ಷಕ ಪಾಲಕ ಪಕ್ಷಿವಾಹನ ನುತ
ದಕ್ಷ ಸಮ್ಮಖಶಿಕ್ಷ ಜಯಯೆಂದ ಮುನಿಪ ॥
ತಪ್ತನಾಗುತ ಶಿವ ಮುನಿಸ್ತುತಿಗೆ ವಾಣೀ
ವಪ್ತರುಳನೆ ಬಂದ ಕಾರ್ಯವೇನು ಪೇಳ್ವೆ
ಸಪ್ತಸಾಗರವನು ದಾಂಟಿದೆನು ದ್ವಿತಿ
ಸಪ್ತಲೋಕವನೆಲ್ಲ ಚರಿಸಿದೆನು ದೇವ
ಸಪ್ತದ್ವೀಪಾಂತರ ಸುತ್ತಿ ಬರಲು ಎಂಟು
ಸಪ್ತದೇಶದೊಳೊಂದು ಕಂಡೆ ಕೌತುಕವ ॥
ಬಲ್ಲಿದ ಪುಲಿಗೆರೆಯಲ್ಲಿ ನಿಮ್ಮಯ ಸುದ್ದಿ
ಎಲ್ಲೆಲ್ಲಿ ನೋಡೆ ಎಳ್ಳಿನಿತಿಲ್ಲವು ಕುನ್ನಿ
ಖುಲ್ಲ ಜಿನ್ನವು ಹಚ್ಚಿಕೊಂಡಿಹವು ಪೇಳೆ
ನಲ್ಲಿ ಶ್ರ ಗುರುಲಿಂಗಜಂಗಮವು ಪೇಳ್ವೆ
ನಲ್ಲಮಭಕ್ತರು ಎಲೆಮರೆ ಕಾಯಂತೆ
ಅಲ್ಲಡಗಿಹರಿಭಪುರದೊಳಗೇ ॥
ಚಿನುಮಯ ಕೇಳ್ನಿಮ್ಮ ಮತವನುದ್ಧರಿಸುವ
ದೆನಲಾದಿಗಣಪನ ನಿಟ್ಟಿಸುತ ನಮ್ಮ
ಘನ ಶಿವಮತವನು ಹೆಚ್ಚಿಸುತ ಪೇಳಿ
ದನು ಪೋಗಿ ಜಿನ್ನನ ಶಿಕ್ಷಿಸುತ ಬಾಯೆಂ
ದೆನಲಾಗ ಹರಹರ ಧರೆಯೊಳು ನರನಾಗಿ
ಜನಿಸಲು ನಾ ನಿಮ್ಮ ಚರಣಗಾಂಬುವೆನೆ ॥
ಒಳಹೊರಗಿರುವೆನು ಇದಕೇಕೆ ಸಂಶಯ
ಇಳೆಗಿಳಿಯೆಂದು ಅಪ್ಪಣೆಯೀವುತ ಪೋಗಿ
ಗಳಿಲನೆ ಸೌರಾಷ್ಟ್ರದಲಿ ಪುಟ್ಟುತ ನಮ್ಮ
ಚಲದಂಕನಾದಯ್ಯನೆಂದೆಂಬುತ ಘನ
ಮಲಹರ ಭಕ್ತನು ಜಿತಪಾಪ ಮುಕ್ತನು
ನಲವಿಂದೆ ಧರೆಯೊಳಗಿರ್ಪ ಸಂತೋಷದಿ ॥
ಅವನಿಯೊಳ್ ಶಿವಭಕ್ತರುದರದಿ ಜನಿಸುತ
ತ್ರಿವಿಧ ಲಿಂಗದ ಕಲೆನೆಲೆ ತಿಳಿದು ಪಂಚ
ತ್ರಿವಿಧ ಮದದ ಮೂಲಗಳನಳಿದು ಆಗ
ತ್ರಿವಿಧ ಗುಣಂಗಳ ನೆರೆ ಕಳೆದು ಮತ್ತೆ
ತ್ರಿವಿಧ ಮಲಂಗಳ ಸುಟ್ಟು ಬ್ರಹ್ಮವ ಕಂಡು
ತವೆ ಗುರುಕರುಣದಿಂದಿರ್ಪನಾದಯ್ಯ ॥
ಪೃಥ್ವಿಯೊಳೀತನು ಎಸಗು ವ್ಯವಹಾರವ
ಬಿತ್ತರಿಸುವೆನೀಗ ಭೂಮಿಯೊಳು ಘನ
ರತ್ನನೀಲವು ಪಚ್ಚಪವಳಗಳು ಸಲೆ
ಮುತ್ತುಗಳೊಜ್ರವೈಡೂರ್ಯಗಳು ಕಾಯಿ
ಪತ್ರಿ ಲಾವಂಗವ ಲೆಕ್ಕವಿಲ್ಲದೆ ತಾನು
ಎತ್ತುಗಳ್ವೋಡಿಸಿದನಾಗ ದಕ್ಷಿಣದೇಶಕೆ ॥
ಬಂದು ಶ್ರೀ ಪುಲಿಗೆರಿ ಪುರವಳಯದಾಗ
ನಿಂದು ಬೀಡಿಕೆಯನು ಇಳುಹಿಸಿದ ಸ್ನಾನ
ಇಂದುಧರನ ಪೂಜೆ ತೀರಿಸಿದ ಪುರ
ವಿಂದು ನೋಡುವೆನೆಂದು ನೇಮಿಸಿದ ಭರ
ದಿಂದ ಸಿಂಗರವಾಗಿ ತಾ ಹೊರಟನು
ನಂದದಿ ಸೂರ್ಯಚಂದ್ರರ ಬೀದಿಯೊಳಗೆ ॥
ಅನಿತರೊಳೀ ಶಿವಪ್ರೇಮಿ ಬರುತಿರ್ಪ
ನನು ನೋಡಲೆನುತಲಿ ಪೇಳೆ ಅಂದು
ಇನನಸ್ತನಾದ ಪಶ್ಚಿಮ ಚಲಕೆ ಪದ್ಮ
ನನೆಯಾಗೆ ತಮ ಮುಸುಕಿತು ಜಗಕೆ ತಾರೆ
ಮಿನುಗುತ ಗಗನದೋಳಲ್ಲಲ್ಲೆ ಮೂಡಲು
ವಿನಯದಿಂ ನೈದಿಲೆ ನಲಿದವಾಕ್ಷಣದಿ ॥
ಹರಭಕ್ತನಿವನ ಸಂದರುಶನಕೆಂದಾಗ
ತ್ವರಿತದಿ ಬಂದು ಪೂರ್ವದಿಸೆದಿ ಹಿಮ
ಕಿರಣ ಪ್ರಜ್ವಲಿಸುತ ಸಮ್ಮುದದಿ ಆಗ
ಸರಸಚಕೋರಗಳ್ ಸಂತೋಷದಿ ಮುಂದೆ
ಬರುತಿರಲಾದಯ್ಯ ಕಳಸ ಕನ್ನಡಿ ತೋರ್ಪ
ಕರುಮಾಡಗಳ ನೋಡುತೈತರಲಾಗ ॥
ಎಲ್ಲೆಲ್ಲಿ ನೋಡಲು ಅಲ್ಲಿ ಜಿನ್ನಾಲಯ
ವೆಲ್ಲ ಜಿನ್ನರು ತುಂಬಿ ಪುರವೆಲ್ಲವು ಮತ್ತಿ
ನ್ನೆಲ್ಲೆಲ್ಲಿ ಶಿವನಿಳಯಗಳಿಲ್ಲವು ಇದ
ರಲ್ಲೆ ಹರನ ಭಕ್ತರಿರ ಸಲ್ಲವು ಮನ
ದಲ್ಲಿ ಬಾಳತಿ ನೊಂದು ಮಲ್ಲಿಕಾರ್ಜುನ ಉಮೆ
ವಲ್ಲಭ ಹರಹರಯೆಂದು ಮರುಗಿದನು ॥
ಮುಂದಡಿಯಿಡುತ ನಿಟ್ಟಿಸಿ ಎಡಬಲದೊಳು
ಮಂದಿರ ಮೇಲುಮಂಟಪಗಳನು ನಯ
ದಿಂದ ತೋರ್ಪ ಶೃಂಗಾರವನು ಗಜ
ಮಂದಗಮನೆಯರ ವೃಂದವನು ಭರ
ದಿಂದ ಕಂದರ್ಪನ ಮಾರ್ಬಲವೊಂದಾಗಿ
ಬಂದತ್ತ ನಯನಕೆ ರಂಜಿಸುತಿಹುದು ॥
ತಂಗಾಳಿ ತೀಡಿ ತಿಂಗಳ ಮೂಡಿ ಮನಸಿಜ
ಸಿಂಗಾಡಿವಿಡಿದನು ಕೋಪದಲಿ ತಾಳ
ದಂಗಾನೆ ಉಡುಪನನು ಬೈವುತಲಿ ರಾಹು
ನುಂಗಿಬಿಟ್ಟನು ಪಾಪಿಯೆಂಬುತಲಿ ಅವ
ನಂಗುಳವ ಸುಟ್ಟುಳುಪಿದ ಶಿವನೋರ್ವಳು
ಭೃಂಗವೇಣಿಯಳು ತಾಪದಿ ಬಳಲುವಳು ॥
ಇಂದುಮುಖದಿ ಬೆಮರ್ದುಂಬಿ ನಾಸಿಕದೊಳು
ಮಂದಮಾರುತ ತೀಡೆ ಬಹುಭರದಿ ಗಂಧ
ಚಂದನ ತಲೆಗೂಡಿ ತನ್ನುರದಿ ಕಂಚು
ಕಿಂದು ಬಿಚ್ಚಿರೆ ಜಾರಿದಂಬರದಿ ಅರ
ವಿಂದ ಬಾಣನ ಸಮರಂಗ ತೀರಿಸಿ ಶ್ರಮ
ದಿಂದಲಿ ಮಂದಾನಿಲನ ಬಯಸುವಳು ॥
ಕುಟಿಲಕುಂತಳೆ ತೀಡಿ ಕಟಿಗೆ ನಿರಿಗೆ ಬಿಗಿ
ದುಟಗೊಂಬುತವಳತಿ ಶೀಘ್ರದಲಿ ದ್ವಯ
ಪಟುತರ ಕುಚಗಂಧ ಕೊಡಹುತಲಿ ತನ್ನ
ತುಟಿಯ ಪಿಡಿದು ಜಗ್ಗಿ ನೋಡುತಲಿ ನಾರಿ
ವಿಟನುರೆ ಬೈದು ಚಿಟಕ ಮುರಿವುತಲಿ ಸಂ
ಗಟದಿಂದ ತನ್ನ ಸದನಕೈದುತಿರಲು ॥
ಅರವಿಂದಮುಖಿಯೆ ಬಾ ಅರುಣ ಚಂದುಟಿಯೆ ಬಾ
ಗುರುಕುಚ ತಳಿರಡಿ ಸುಗುಣೆ ಬಾರೆ ಚಲ್ವ
ಕರಿನಡೆ ಹರಿಮಧ್ಯೆ ಜಾಣೆ ಬಾರೆ ಚಲ್ವ
ಮರಿದುಂಬಿಗುರುಳೆ ಪ್ರವೀಣೆ ಬಾರೆ ನಿನ್ನ
ಸರಿಯ ನಾರಿಯರುಂಟೆ ಭುವನದೊಳೆಂದೋರ್ವ
ತರುಣಿಯ ಮುನಿಸು ಸಂಬಿಸುತಿರ್ದನವನು ॥
ಬಲ್ಲೆನು ನಾ ನಿನ್ನ ಬಣ್ಣದ ಮಾತುಗ
ಳೆಲ್ಲ ಸಕ್ಕರೆದುಟಿ ಸವಿಯುವದು ಕುಚ
ದಲ್ಲಿ ನಖದ ರೇಖೆಯೂರುವದು ದ್ವಯ
ಗಲ್ಲವ ಪಿಡಿದು ಮುದ್ದಾಡುವದು ಅವ
ಳಲ್ಲೆ ಮನಸನಿಟ್ಟು ಇಲ್ಲೆ ಬಹುರಂಗದ
ಸೊಲ್ಲಿಲೆ ಸಾಕುಸಾಕೆಂದಳು ಮುನಿದು ॥
ಚಿಕ್ಕಂದು ಮೊದಲಾಗಿ ಇವಗೆ ಮೆಚ್ಚಿಕೊಂಡು
ಸಿಕ್ಕರೆ ಬಿಡು ನೀ ತಿರಸ್ಕರಿಸಿ ಬಹು
ರೊಕ್ಕವನೀವನ ನೀನೊಲಿಸಿ ಈಗ
ದಕ್ಕಿಸಿಕೋ ದ್ರವ್ಯ ಸತ್ಕರಿಸಿ ಪ್ರಾಯ
ಮಿಕ್ಕಿದ ಬಳಿಕಿನ್ನು ಗಳಿಸಿಯೆ ಮುಂದಿನ್ನು
ಮಕ್ಕಳಿಗೆ ಬುದ್ಧಿ ಹೇಳುವಳ್ಮುದಿಕಿ ॥
ನಾರಿ ನಿನ್ನಯನದಿ ಕೆಂಪೇನೆ ಮೂಗಿನೋಳ್
ಮೇರೆ ಮೀರುತ ಗಾಳಿ ತೀಡ್ವುದೇನೆ ನಿನ್ನ
ತೋರ ಕುಚವು ಬಿದಿಗಿ ಚಂದ್ರನೇನೆ ಫಣಿ
ಸಾರಕುಂತಳೆ ತುಟಿಯಸಿತವೇನೆ ಯತಿ
ಸಾರೆನ್ನೇಕಾಂತದಿ ನೆರೆದು ಬಂದುದು ದಿಟ
ಭೂರಿಕೋಪದಿ ನೀರೆ ಒದೆದಳಾಳಿಯನು ॥
ಇಂತಪ್ಪ ವೈಭವವಂತಕಾಂತಕ ಭಕ್ತ
ಸಂತಸದಿ ನೋಡುತೈತರುತಾ ತೋರ್ಪ
ಮುಂತೊಂದು ಮಂಟಪ ರಂಜಿಸಿತು ತಾ ಭೂಮಿ
ಕಾಂತನ ಸುತೆ ಪದ್ಮವತಿ ಕಾಣುತಾ ಮದ
ದಂತಿಗಮನೆಯಳ ಕಾಂತಿ ವರ್ಣಿಸುವಡೆ
ಅಂತಪ್ಪ ಬ್ರಹ್ಮಗಸಾಧ್ಯವಾಗಿಹುದು ॥
ಅಳಿಗಿಳಿ ಕಳಹಂಸ ತಳಿರುನಳಿನ ಸುಳಿ
ಕಳಸಕನ್ನಡಿ ಸಲೆ ಕುಂತಳವು ನುಡಿ
ಗಳು ಕಾಮಿನಿಯ ಚಲ್ವಪದಯುಗವು ವರ
ಕಳೆಮುಖ ನಾಭಿ ಕುಚದ್ವಯವು ನೆರೆ
ಹೊಳೆವ ಕದಪಿನಿಂದ ಕೆಳದಿಯರೊಪ್ಪಿರ್ದ
ಎಳೆ ಚಂದ್ರಧರಭಕ್ತ ಕಂಡನಾ ಕ್ಷಣದಿ ॥
ದ್ವಿತಿಸುತನುದರದಿ ಖತಿಯಿಂದೆ ಬಿಗಿದು ಶ್ರೀ
ಪತಿ ತನ್ನ ಅವತಾರ ಇಡಲಿಕೆಂದು ವಸು
ಮತಿಯೊಳಗೆ ತಾವಿಲ್ಲವೆಂದು ಸ್ವರ್ಣ
ಲತದೇಹಿ ಇವಳಲ್ಲಿ ಇಟ್ಟನೆಂದು ಮಂದ
ಗತಿ ಅತಿಜ್ಞಾನ ಸೂಮತಿ ಭೂಪಸುತೆ ಪದ್ಮ
ವತಿ ಸಣ್ಣನಡುವು ಈ ತೆರದಿ ಶೋಭಿಸಿತು ॥
ವರ ಪದ್ಮವತಿಯಳ ಪರಮ ಸುಲಕ್ಷಣ
ಪರಕಿಸಲಾರೆ ಈ ಧರೆಯೊಳಗೆ ಮತ್ತೆ
ಹರಭಕ್ತ ಭ್ರಾಂತದ ಮನದೊಳಗೆ ಸ್ಮರ
ಸರಳು ನಡಲು ಗಾಯ ಉರದೊಳಗೆ ಮನ
ಕರಗಿ ಅವಳ ಮುಖವೀಕ್ಷಿಸುತಿರಲಾಗ
ತರುಣಿಯಾಳಿವನ ಸಮ್ಮುಖವ ನೋಡಿದಳು ॥
ಚದುರೆ ಕಾಂತನ ಕಂಡು ನದರಿಕ್ಕಿ ಆ ಸಖಿ
ಬೆದರಿದೆರಳೆಯಂತೆ ಕಂಪಿಸುತ ಆಗ
ಮದನಮೋಹದ ಕಲೆನೆಲೆಗುಬ್ಬುತ ಬಹು
ಹದ ಮೀರಿ ತಾಪ ರೋಮಗಳೇಳುತ ತನ
ಗೊದಗಿದ ವಿರಹಭ್ರಾಂತಿಗಳಿಂದ ತನ್ನಯ
ಸದನದೊಳಗೆ ನಿಂತು ಪೊಗಳುತಲಿಹಳು ॥
ಹರನುರಿಗಣ್ಣಿಂದ ಮಡಿದ ಮನ್ಮಥನೆಂಬ
ಬರಿಯ ವಚನ ತನ್ನ ರತಿಯಳನು ಬಿಟ್ಟು
ಧರೆಯೊಳಗಿರ್ಪಂಥ ಸತಿಯರನು ಸುಖ
ಸುರತಗೊಂಬುವೆನೆಂದು ಮನ್ಮಥನು ಬಂದ
ಪರಿಯಿಂದಲ್ಲದೆ ಬೇರೆ ಹೊರತಿಲ್ಲವೆಂಬುತ
ಸರಸಿಜನೇತ್ರೆ ಈ ಪರಿಯೊಳಾಡಿದಳು ॥
ಉರ್ವಿಯೊಳೀತನು ಒಲಿಯಬೇಕಾದರೆ
ಪೂರ್ವದ ಪುಣ್ಯವಿಲ್ಲದೆ ಸಿಗನು ಇವ
ನೋರ್ವನೆ ಸಾಕು ಸೌಭಾಗ್ಯವೇನು ಅಳೆ
ಉರ್ವಿಸನ್ನಿಭ ಕಾಂತ ಪೇಳಲೇನು ಈಗ
ಸರ್ವಪಾಲಿಗೆ ಬಿಟ್ಟು ಬಾರದೆ ಕರತಾರೆಂ
ದೊರ್ವಳ ಕಳುಹಿದಳವನ ಸನ್ನಿಧಿಗೆ ॥
ಬಂದು ಆದಯ್ಯನಿಗೊಂದಿಸಿ ಕರತಂದು
ಚಂದದಿಂದೀರ್ವರ ಹೊಂದಿರಿಸಿ ಅಷ್ಟ
ಗಂಧದ್ರವ್ಯಗಳನೆಲ್ಲ ತಂದಿರಿಸಿ ನಾರಿ
ಸುಂದರ ದೇಹದೊಳನುಲೇಪಿಸಿ ಮಕ
ರಂದ ಸೂಸುವ ಪೂಮಾಲೆಗಳ್ಮುಡಿವುತ
ಕಂದರ್ಪ ಆಹವಕನುವಾದರಾಕ್ಷಣದಿ ॥
ಒಬ್ಬರೊಬ್ಬರ ಮುಖವ ಒಬ್ಬರೊಬ್ಬರು ನೋಡಿ
ಒಬ್ಬರೊಬ್ಬರು ತೆಕ್ಕಿಯೊಳಗವಚಿ ಬೇಗ
ಒಬ್ಬರೊಬ್ಬರಿಗೆ ಆತುರವು ಹೆಚ್ಚಿ ಆಗ
ಒಬ್ಬರೊಬ್ಬರು ತಾಂ ಚಂದುಟಿಯ ಕಚ್ಚಿ ಹೀಂಗ
ಕಬ್ಬುವಿಲ್ಲನ ಕೇಳಿಯಬ್ಬರ ತೀರಿಸಿ
ಅಬ್ಜಲೋಚನೆ ಶ್ರಮದಿಂದೊರಗಿದಳು ॥
ಇವಳಿಗೆ ಇಷ್ಟಲಿಂಗವು ಉಂಟೊಯಿಲ್ಲವೊ
ವಿವರಿಸಿ ನೋಳ್ಪೆನೆಂದ್ಯೋಚಿಸಿದ ಆಗ
ಯುವತಿಯ ಎದೆಮುಟ್ಟಿ ಈಕ್ಷಿಸಿದ ಇಷ್ಟ
ತವೆ ಲಿಂಗವಿಲ್ಲೆಂದು ಮನ ಹೇಸಿದ ಎದ್ದು
ಭವಿಯಿವಳ ಸಂಗ ಭವಕಾದೆನಯ್ಯಯ್ಯ
ಶಿವಶಿವಯೆಂಬುತ ನಡೆದ ಬೀಡಿಕೆಗೆ ॥
ಮಚ್ಚಗಂಗಳೆಗಾಗ ಎಚ್ಚರವಾಗುತ
ಸ್ವಚ್ಛ ಪರ್ಯಂಕದೊಳಿಲ್ಲವಾತ ಕೂನ
ಹಚ್ಚದೆ ಪೋದನು ಎನ್ನೊಳೀತ ಇಂಥ
ನೆಚ್ಚಿದ ಕಾಂತೆಯೊತ್ತ ಘಾತ ಮಾಡಿ
ಮೆಚ್ಚಿಸಿ ಅಗಲಿ ತಾ ಪೋಗುವರೆ ವಿರಹದ
ಕಿಚ್ಚಿಗೆ ಗುರಿಮಾಡಿ ಇಟ್ಟನೆಲ್ಲಕ್ಕೆ ॥
ಹಾಯೆನ್ನ ವಲ್ಲಭ ಹಾಯೆನ್ನ ಕಾಂತನೆ
ಹಾಯೆನ್ನ ಮನದ ಭಾಗ್ಯದ ಸಿರಿಯೆ ಹಾ
ಹಾಯೆನ್ನ ಜೀವದ ಸಕ್ಕರೆಯೆ ಹಾ
ಹಾಯೆನ್ನ ಒಲಿಸಬಲ್ಲಂಥ ದೊರೆಯೆ ಹಾ
ಹಾಯೆಂದು ಹಂಬಲಿಸುತ ಹಳಹಳಿಸುತ
ತೋಯಜಗಂಧಿ ತಾ ಬಿದ್ದುರುಳಿದಳು ॥
ಏ ಕಾಂತನಿಲ್ಲದೆ ಈ ಕಾಯ ಉಳಿಯದು
ಏಕಾಂತ ತಾಪಕೆ ಮಾಡಲೇನು ಅಯ್ಯ
ಈ ಕಷ್ಟ ಪೂರ್ವದ ಬರಹವೇನು ಉರ
ಲೀ ಕೊರಳಿಗೆ ಮಾಲೆ ಹಾಕಲೇನು ಈಕೆ
ಶೋಕವ ಸಂಬಿಸಬೇಕೆಂದು ಬಂದು ದಿ
ವಾಕರ ಮೂಡಿದ ಪೂರ್ವಪರ್ವತಕೆ ॥
ತಾವರೆ ನಗಲು ತಾರೆಗಳೆಲ್ಲಪೋಗಲು
ಕಾವಳ ಬಿಟ್ಟೋಡೆ ಕುಮುದಗಳು ದುಗು
ಡಾವಿಲಾಸದಿ ಚಕ್ರವಾಕಗಳು ನಲಿ
ದಾವಾಗ ಖಗ ಮೃಗ ಭೃಂಗಗಳು ಭಾವೆ
ಭಾವಜರೂಪನ ಬಯಸಿ ಕಾಂಬುವೆನೆಂದು
ಕೋವಿನ ಕಾಂತನ ಬಳಿಗೆ ಸಾಗಿದಳು ॥
ಆ ತರುಣಿಯೇಳು ಸಂತಾಪದಿ ಬಳಲುತ
ಆತನ ಪಾದದಿ ಹಣೆಯನಿಟ್ಟು ಇದು
ನೀತಿಯೆ ನಿನಗೆ ನಾ ಮನಸುಗೊಟ್ಟು ಅತಿ
ಸೋತು ಬಂದವಳ ಕೂಡ್ಯಾತಕಿಷ್ಟು ಎನ್ನ
ದಾತ ಮನ್ಮಥ ಪ್ರಖ್ಯಾತ ಭೂಮಿಯೊಳಿರ್ಪು
ದ್ಯಾತರದಯ್ಯಯ್ಯಾಘಾತಕವಿಧಿಯೆ ॥
ನಿನ್ನ ನಂಬಿದ್ದೆನು ಗನ್ನ ಘಾತಕ ಮಾಡಿ
ಇನ್ನಗಲುವರೆ ಎನ್ನೊಳನ್ಯೆ ಹೇಳು ಕಾಂತ
ಭಿನ್ನ ಭೇದಗಳೆನಗಿಲ್ಲ ಕೇಳು ಉಂಡ
ಅನ್ನವು ವಿಷವಾಯಿತಿನ್ನು ಏಳು ಗುಣ
ರನ್ನ ಮೋಹನ್ನ ಸಂಪನ್ನನೆನುತಲಾಗ
ಕನ್ನೆ ಶಿರೋಮಣಿ ಕಳವಳಿಸಿದಳು ॥
ಕುವಲಯ ನೇತ್ರೆ ಕೇಳ್ ಭವಿ ಸಂಗಡ ನುಡಿ
ಭವಿಯ ಸಂಗಡ ಕೂಟ ಪವಡಿಸವು ಮತ್ತೆ
ಭವಿಯ ಸಂಗಡ ಬಟ್ಟೆ ಗಮನಿಸವು ಮೇಣ್
ಭವಿಯ ಸಂಗಡದಿ ಸಂಭೋಗಿಸವು ಮುಂದೆ
ರವರವ ನರ್ಕವು ತಪ್ಪದು ಭವಿ ನೀನು
ಶಿವಭಕ್ತಜನ ನಮಗುಚಿತವಲ್ಲೆಂದ ॥
ಕಮಲಜ ಗಂಧಿ ಕೇಳ್ ಕಾರಣವೇನಿದು
ಗಮನಿಸಿ ಬಿಟ್ಟು ಹಲವು ಭ್ರಾಂತಿಯ ಈಗ
ಮಮಕಾಂತನೆಂಬುದ ಬಿಡು ಚಿಂತಿಯ ನಾವು
ಗಮಕಾದಿ ಪೋಪೆವೆಂಬುವ ಗ್ರಂಥಿಯ ಉಂಟು
ನಮಗೀಗ ದಿವಸ ಸಂದಿದವೆಂಬ ವಾಕ್ಯವ
ರಮಣಿ ಶಿರೋಮಣಿ ಕೇಳಿದಳಾಗ ॥
ಏಕಾಂತ ಎನಗೆ ಬೇಕಿತ್ತು ನಿನ್ನೊಳು ಪ್ರಾಣ
ನಾ ಕೊಡುವೆನು ಸಟೆಯಲ್ಲ ಕೇಳು ಎನ
ಗೆ ಕಟ್ಟು ಲಿಂಗವ ಹೃದಯದೊಳು ಇಬ್ಬ
ರೇಕಾಗಿ ಇರುವದು ಭೂಮಿಯೊಳು ಎಲೆ
ಭೂಕಾಂತಸುತೆ ನಿಮ್ಮ ಕುಲಜರು ಕೂಡ್ವರೆ
ಏಕಾಂತೆ ಶಿವಭಕ್ತಿ ಸುಲಬಲ್ಲ ಕೇಳು ॥
ವದನದ ಕುರಡಿಕುಠಾರ ಕೀಡಿಯೆಂದು ಬಿ
ಡದೆ ತನ್ನಂತೊಡಗೂಡಿದರೆ ತ ನ್ನ ಪ
ಡೆದ ಭೂಮಿಯನದ ಬಯಸುವರೇನ ನ್ನ ಪ
ಡೆದವರ್ಹಂಗಿಲ್ಲ ಕೂಡಿದರೆ ನೀ ನು ಹಿ
ಡಿದುದ ಹಿಡಿವೆನು ಹೊರತಿಲ್ಲ ನಿನ್ನೊಳು
ಮೃಡ ಮೂರ್ತಿಯಾದಿಷ್ಟಲಿಂಗವ ಧರಿಸು ॥
ಮಂದಗಮನೆಗಾಗಿ ಪರಮ ಶ್ರೀ ಗುರು ಹಸ್ತ
ದಿಂದಲಿ ಇಷ್ಟಲಿಂಗವ ಧರಿಸಿ ನಯ
ದಿಂದಲಿ ಬೇರೆ ಮಂದಿರ ರಚಿಸಿ ನಿತ್ಯಾ
ನಂದದಿ ಚರತೀರ್ಥವನು ಸಲಿಸಿ ಸುಖ
ದಿಂದ ಈರ್ವರ ಮನವೊಂದು ಬೆಚ್ಚಂತೆ
ಚಂದದಿ ಪುರದೊಳಗಿರಲು ಕೇಳಿತ್ತ ॥
ವರ ಪುಲಿಗೇರಿಯೊಳ್ಮೆರೆವ ಜಿನ್ನರ ಗುರು
ಬರಲಾಗ ಬಹು ಬಾಳ ಸಂಭ್ರಮದಿ ಭೇರಿ
ಬುರುಗು ನಗಾರಿ ವಾದ್ಯದ ರವದಿ ರಾಜ
ನರಮನೆಯೊಳು ಬಂದು ವೈಭವದಿ ಬೇಗ
ಪರಮಾನ್ನ ಪಾಯಸ ಪಂಚಾಮೃತ ಸಹ
ಹರುಷದಿಂ ಭೋಜನಕನುವಾದರಾಗ ॥
ಚಂದದಿ ಭೋಜನ ಗೈವುತಿರಲು ಜಿನ್ನ
ವೃಂದಕೆ ಸಾಲದೆ ಬರಲನ್ನವು ಮಗ
ಳಿಂದ ಮಾಡಿದ ಮೀಸಲಡಿಗೆಯನು ಇನ್ನು
ತಂದು ನೀಡುವೆನೆಂದು ಬಲು ದುಡುಕಿ
ಲಿಂದಲಿ ಮಗಳ ಮನೆಯ ಪೊಕ್ಕು ಭೂವರ ಭರ
ದಿಂದಲಿ ಒಯ್ಯಲು ಕಡುಕೋಪಿಸಿದಳು ॥
ಅನಿತರೋಳಾದಯ್ಯ ಚರಮೂರ್ತಿಗಳ ಕೂಡಿ
ಮನೆಗಾಗಿ ಬರೆ ತನ್ನ ವನಿತೆಯಳು ಕರ
ವನು ಮುಗಿದಾಗ ತಾ ಹೇಳಿದಳು ಮನೆ
ಸುನಿ ಬಂದು ಹೊಕ್ಕಿತು ಈಗ ಕೇಳು ಕೆಟ್ಟ
ಬಿನಗುಮಾನವರಿವರಿರಸಲ್ಲದೈ ಸ್ವಾಮಿ
ಎನುತಲಿ ವನಜಾಕ್ಷಿ ಇನಿಯಗೆ ಪೇಳೆ ॥
ಆ ಮಾತು ಕೇಳುತ ರೋಮಾಂಚವುಬ್ಬುತ
ನಾ ಮತ್ತೆ ಜಿನ್ನನಿಕರವನು ಕಿತ್ತು
ಗ್ರಾಮದೊಳಿವನೆಲ್ಲ ಒಡೆಸುವನು ಈಗ
ಸೋಮನಾಥನ ತಂದು ನಿಲಿಸುವೆನು ಅಯ್ಯ
ಈ ಮಾತು ಬಿಟ್ಟೆನಾದರೆ ಯಮಲೋಕದ
ಆ ಮಹಾಪಾತಕ ಬರಲಿ ನನಗೆಂದ ॥
ಇಂದೆಂಟು ದಿನದೊಳು ಇಂದುಧರನ ಕರೆ
ತಂದು ಉಂಬುವೆನೆಂದು ಶಪಥವನು ಮಾಡಿ
ಮಿಂದು ಮಡಿಯನುಟ್ಟು ಮೂರ್ತಿಯನು ಪೂಜೆ
ಚಂದದಿಂದರ್ಚಿಸಿ ಬೇಗವನು ಕಂದು
ಕಂಧರ ಕಾಮಾರಿ ಹರಹರಯೆನುತ
ಮಂದಿರ ಪೊರಮಡಲಾ ವನಿತೆಯಳು ॥
ಬಣಗು ಜಿನ್ನನ ಕಿತ್ತು ತ್ರಿಣಯನ ನಿಲಿಸುವ
ದಣಿಯಾಗಲೆಂದು ಸೇಸೆಯನಿಟ್ಟಳು ರತ್ನ
ಮಣಿಮಯದಾರತಿಯೆತ್ತಿದಳು ಗುಹ
ಗಣಪರ ಜನಕನ ಸ್ತುತಿಸಿದಳು ಒಂದು
ಕ್ಷಣಮಾತ್ರ ಆಲಸ್ಯ ಬೇಡೆಂದು ಸತಿಶಿರೋ
ಮಣಿ ತನ್ನ ಇನಿಯನ್ನ ಕಳುಹಿದಳಾಗ ॥
ಶ್ರೀ ಪುತ್ರಗರ್ವವಿಲೋಪರಹಿತ ಪಾಪ
ತಾಪತ್ರಹರ ಜಯ ಜಯಯೆನುತ ಅಹ
ಗೋಪಸುತನೆ ಕಮಲಾಕ್ಷೆನುತ ಗಿರಿ
ಜಾಪತಿ ಷಣ್ಮುಖ ಗಣಪಪಿತ ಇಂದು
ಕೋಪಾಗ್ನಿನೇತ್ರ ನೀ ಗತಿಯೆಂದು ಪೊರಮಟ್ಟು
ತಾ ಪಥದೊಳಗಿಂತು ಸ್ತುತಿಸುತ ನಡೆದ ॥
ತೊಡೆಗಳದುರಿ ಬೆರಳೊಡೆದಾಗ ರಕ್ತ ಜೋ
ರಿಡುತಲಿ ಬಹು ಶ್ರಮದಿಂ ಸಾಗುತ ದೇವ
ಕಡುಕಷ್ಟದಿಂ ನೀನೆ ಗತಿಯೆನುತ ಬಾಳ
ನಡೆಗೆಟ್ಟೆರಡು ಮೊಣಕಾಲೂರುತ ಅಡಿ
ಗಡಿಗೊಮ್ಮೆ ಮೃಡನೆ ಮೃತ್ಯುಂಜಯ ಹರನೆಂದು
ದೃಢದಿಂದೆ ಪೊಡವಿಯೊಳ್ನಡೆದನಾದಯ್ಯ ॥
ಹೇಳಲಿನ್ನೇನು ನಾ ಬಾಳ ಶ್ರಮದಿ ಮೊಣ
ಕಾಲೊಡೆದು ರಕ್ತ ಸುರಿಯುತಲಿ ನೋವು
ತಾಳಲಾರದೆ ದೇಹ ಕೆಡೆವುತಲಿ ಶಂಭು
ಭಾಳಾಕ್ಷನೆಂದು ತಾನುರುಳುತಲಿ ಹೀಂಗ
ಏಳು ದಿವಸ ಹಗಲಿರುಳು ಪೋಗಲು ಚಂದ್ರ
ಮೌಳಿಯ ಕುರುಹನು ಕಾಣದೆಯಿರಲು ॥
ಘೋರ ಬಿಡುತಲಿ ಕಾಂತಾರದೊಳಗೆ ಮನೋ
ಹಾರ ನೀ ಒಲಿಯೆಂಬೊ ಸಮಯದಲಿ ಮದ
ನಾರಿ ಬಂದನು ವೃದ್ಧಚರ ರೂಪಿಲಿ ಎಲೊ
ದಾರು ಎಲ್ಲಿಗೆ ಪೋಪೆ ಶ್ರಮದಿಂದಲಿ ಗಿರಿ
ಜಾರಮಣನ ಕರೆತಹುದು ನಮಗೊಂದು
ಕಾರಣವುಂಟೆಂದೆ ಗಮಕಾದಿ ಪೋಪೆ ॥
ಅಂಬುವ ನುಡಿಗೇಳಿ ಕುಂಭಿನಿಯೊಳು ಮಹಾ
ಶಂಭು ತಾ ನಿನಗೆಲ್ಲಿ ಸಿಲ್ಕುವನೊ ನಿನ್ನ
ಡಿಂಬವ ಕೆಡಹಿ ನೀ ಬರುವದೇನೊ ನನ್ನ
ಅಂಬಕದಿಂ ನೋಡಿ ಮರುಗಿದೇನೊ ತಣ್ಣ
ನಂಬಲಿಯೆನ್ನಲ್ಲೆ ಉಂಟೀಗ ಮನುಜನೆ
ಉಂಬುಣ ಹೋಗೆಂದ ವೃಷಭವಾಹನನು ॥
ಏತರ ಮಾತಿದು ಮಾಡಿದ ಶಪಥಕ್ಕೆ
ನೀ ತೆವ ಆತನ ಚರಣದಲಿ ಪ್ರಾಣ
ಘಾತವಾದರೆ ಮುಕ್ತಿ ಸ್ವರ್ಗದಲಿ ಸೋಮ
ನಾಥನ ಬಿಡೆ ನಾನು ತಾರದಲಿ ಉಂಬು
ವಾತುರ ಎನಗಿಲ್ಲ ಬಿಡು ಪಥಯೆಂಬುತ
ಭೂತೇಶ ಭವನಾಶನೆಂದುರುಳಿದನು ॥
ಮರಳಿ ನೋಡಲು ಚರ ಮಾಯವಾಗಿರಲಾಗ
ಹರನೆಂದರಿದು ಅಕಟೇನಾಯಿತು ದ್ರವ್ಯ
ಕುರುಡ ಎಡಹಿದಂತೆನಗಾಯಿತು ಭಾಗ್ಯ
ಕರ ಬಡವಗೆ ಸಿಕ್ಕು ಬಯಲಾಯಿತು ಎಂಬ
ತೆರನ ತೋರಿದೆಯಯ್ಯ ಮುನಿದ್ಯಾ ಎನ್ನೊಡನೆಂದು
ಪರಿಪರಿ ಶೋಕದಿ ಮರುಗಿದ ಶರಣ ॥
ಕಡು ಪರದೇಶಿಯ ಹಿಡಿದು ಕಾಂತಾರದಿ
ಬಿಡುವೆ ಶಿವ ನಿಮ್ಮ ಪದಗಳಿಗೆ ಮನ
ಸಿಡದೆ ನಾ ಪೊರೆದೆನೆಂದು ಈಗ ತೋರಿ
ಅಡಗಿ ಪೋದೆಯಾ ಎನ್ನ ದೃಗಗಳಿಗೆ ದುಃಖ
ನುಡಿಗೇಳಿ ಮೃಡ ತನ್ನ ನಿಜರೂಪದಲಿ ಬಂದು
ಬಿಡುಬಿಡು ಶೋಕವೆಂದ್ಹಿಡಿದು ರಂಬಿಸಿದ ॥
ಬಳಲಿದೆ ಬಾರೆಂದು ಸೆಳೆದಪ್ಪಲಾದಯ್ಯ
ಒಳಿತು ಮಾಡಿದೆ ಮುನ್ನ ಕೈಲಾಸದಿ ವಾಕ್ಯ
ಒಳಹೊರಗಿರುವೆನೆಂಬುತ ತೋರಿದಿ ಮುಂದೆ
ಸುಳಿದಾಡಕಾಗುದೆ ನಿರ್ದಯದಿ ಎಲೊ
ತಿಳಿದೆನು ನಾ ನಿನ್ನ ಮನದ ಸಂಕಲ್ಪವ
ಚಲದಂತೆ ಮಾಳ್ಪೆ ನೀ ನಡೆಯೆಂದ ಹರನು ॥
ಏಳು ದಿವಸ ಹೀಂಗ ಬಾಳ ಶ್ರಮದಿ ಬಂದೆ
ನಾಳೆಗೆ ನಿಲಿಸುವೆ ಶಪಥವನು ಪಂಥ
ಬೀಳಾಗಿ ಬರುವದು ಕೊರತೆಯೇನು ಮುಂದೆ
ಹೇಳಯ್ಯ ಬರುವಂಥ ಗುರುತವನು ಪುರ
ದೋಳಿರು ಅಂಧಕ ಹೆಳವನಿಗೆ ಕಣ್ಣು
ಕಾಲುಗಳ್ಬಂದುದೆ ಕುರುಹು ನೋಡೆಂದ ॥
ಹೀಗೆಂಬು ವಚನವ ಕೇಳಿದಾಕ್ಷಣ ಶಿರ
ಬಾಗಿ ಶಂಕರ ನಮೊ ನಮೊಯೆನುತ ಅನು
ರಾಗದಿ ತೊಡೆಯ ಮೇಲ್ಪವಡಿಸುತ ಇಂಥ
ನಾಗಭೂಷಣ ಬಂದ ಸೋಮನಾಥ ನೀವು
ಬೇಗೇಳಿರೆಂದು ಜನರನು ಎಚ್ಚರಿಸುವೋಲ್
ಕೂಗಿತು ಕುಕ್ಕುಟ ಪುರದ ಮಧ್ಯದಲಿ ॥
ಹರನ ಮಹತ್ವವನರಿವುದಿನ್ನಾರಿಗೇ
ತೆರಯಲು ಮುಸುಕ ಕಂಡನು ಪುರವ ತನ್ನ
ಅರಮನೆಯೊಳು ಬರಲಾ ಬರವ ಕಂಡು
ತರುಣಿಯಳು ನಮಿಸೆಯೆತ್ತುತ ಶಿರವ ಪುರ
ಹರನ ತಂದಂಥ ವೃತ್ತಾಂತವನುಸುರಿದ
ಅರಸಿಯೊಳೊಡನೆ ತಾನತಿ ಹರುಷದಲಿ ॥
ಮಲತ್ರಯ ಗೆಲಿದನು ಒಲಿಸಿದುದು ದಿಟ
ನೆಲದೊಳಗೀ ಸುದ್ದಿ ಬಾರಲೆಂದು ಶಚಿ
ಲಲನೆಯಿವಂಥ ಡಂಗುರವುಯೆಂದು ಪೂರ್ವ
ಚಲದಿ ದಿವಾಕರ ಮೂಡಿನಿಂದು ಕಣ್ಗೆ
ಚಲುವಾಗಿ ತೋರಲು ಕೇಳಿತ್ತ ಪುಲಿಗೇರಿ
ಯಲಿ ಜಿನ್ನಪೂಜಕರತಿ ತವಕದಲಿ ॥
ವಾರಣದ ಮೇಲೆ ವಾರಿ ಪುಷ್ಪಾದಿಗ
ಳ್ಹೇರಿ ಬಂದರು ತೋರಬಸ್ತಿಯೊಳು ಘನ
ದ್ವಾರ ಮುಚ್ಚಿರೆ ಅರೆಕದದೊಳು ಬಲು
ಘೋರಬಡಲು ಎಲ್ಲಿ ಬರದಾಗಳು ಪುಲಿ
ಗೇರಿಯನಾಳ್ವ ಪರೇಶನ ಬಳಿಗ್ಹೋಗಿ
ಸಾರಿದರಾಗ ಕೌತುಕದ ಸುದ್ದಿಯನು ॥
ಆಡಿದ ಮಾತನು ಕೇಳಿ ಪರೇಶನು
ಕೂಡಿಸಿ ಚತುರಂಗ ಮಾರ್ಬಲಲಿ ಬಂದು
ನೋಡಿದ ಜಿನ್ನನ ಬಾಗಿಲಲಿ ಮುಂದೆ
ತೋಡು ಮಾಡುವದೇನುಯೆಂಬುತಲಿ ಆಗ
ಜೋಡು ಆನೆಗಳ್ಹಚ್ಚಿ ನೂಕಲೆಲ್ಲೆಲ್ಲಿ
ಕೇಡಾಗದಿರೆ ಭೂಪನಚ್ಚರಿಯ ತಾಳ್ದ ॥
ಬೆರಳ ಮೂಗಿನಲಿಟ್ಟು ಸಿರವನಲ್ಲಾಡಿಸುತ
ಬೆರಗಾಗಿ ಭೂವರನಾಡಿದನು ಎಲೋ
ಹರಭಕ್ತನಾದಯ್ಯ ಪೋಗಿರ್ದನು ಹೋಗಿ
ಅರಿದು ಬನ್ನಿರಿಯೆಂದು ಮನುಷ್ಯರನು ಆಗ
ತ್ವರಿತಾದಿ ಕಳುಹಲು ಚರರಾಗ ಬಂದು ಆ
ತರುಣಿ ಶಿರೋಮಣಿಯಳ ಕೇಳುತಿಹರು ॥
ಏ ದೇವಿ ನಿನ್ನಯ ಮೋಹದ ವಲ್ಲಭನು
ಆದಯ್ಯ ಬಂದ ಹದನವ ಪೇಳು ನಕ್ಕು
ಮೋದದಿ ಮಾತುಗಳಾಡಿದಳು ಕಾಂತ
ಹೋದಾತ ಬಾರದೆ ನಿಂತ ಕೇಳು ಅಂದ
ಆ ದೂತರ ಮಾತ ಕೇಳಿದಾಕ್ಷಣ ಬಂದು
ಮೇದಿನಿಪತಿಗಾಗ ಪೇಳಿದರೊಲಿದು ॥
ಬಾರದೆ ಈ ಪರಿ ತೊರೆದು ವಿಪರೀತ
ಸಾರೆಂದನಾದಯ್ಯ ಅರಮನೆಗೆ ಪರಿ
ವಾರ ಸಹಿತ ಬಂದು ನೋಡುತಾಗೆ ಮೃದು
ವಾರಣ ವಚನದಿ ನುಡಿಸಲಾಗೆ ಎದ್ದು
ಆ ರಾಜನೊಡನೆ ಬರಲು ಮುಂದೆ ಹರ ಪೇಳ್ದ
ಕೇರಿಯೋಳ್ಕಂಡನು ಹೆಳವರಂಧಕರ ॥
ಒಡೆಯ ಬಂದುದು ಸತ್ಯವೆಂದರಿಯುತಲವ
ರೊಡಗೂಡಿ ಅಲ್ಲೆ ದೃಢದಿ ಬರಲು ಬಹು
ಜಡಿದು ಕಾವಟ ಬಂಧನದಿರಲು ಹಸ್ತ
ಇಡಲಾಗ ದ್ವಾರ ತೆರದು ನೋಡಲು ಜಿನ್ನ
ಒಡೆದು ಬಿದ್ದಿರೆ ಬೆನ್ನೊಳಡಿಯಿಟ್ಟು ಮೃಡನಿರೆ
ಪೊಡವಿಪ ಸಹ ನಡುನಡುಗಿದರೆಲ್ಲ ॥
ಆ ಪುಲಿಗೇರಿಯೊಳ್ಸಾಸಿರದೇಳ್ನೂರು
ಆ ಪರಜಿನ್ನವನೆಲ್ಲ ವೀಕ್ಷಿಸುತೆ ಸಹ ಜಿನ್ನ
ಲೋಪಾಗಿ ಶಿರಬಾಗಿ ಬಿದ್ದಿರಲು ಲಿಂಗ
ಸ್ಥಾಪನೆ ಸುಸ್ಥಿರವಾಗಿರಲು ತ್ರಾಹಿ
ಶ್ರೀಪರಮಾತ್ಮ ನಿನ್ನಯ ಸರಿಯೆಂಬುವರ್
ಪಾಪಿಗಳೈ ಹಹಯೆಂದನಾ ರಾಯ ॥
ಮನದೊಳು ಮರ್ದನವಾಗುತ ರಾಜನು
ಚಿನುಮಯಾತ್ಮಕ ಲಿಂಗ ದೇಹದಲಿ ಧರಿ
ಸೆನುತಲಿಟ್ಟನು ಭಕ್ತಿಭಾವದಲಿ ಪಾದ
ವನಜವ ಪಿಡಿಯಲು ಕರಣದಲಿ ಪುರ
ಜನ ಸಹ ರಾಯನೆಲ್ಲರ ಗುರುಕರದಿಂದ
ಮನೋಹರವಾದಿಷ್ಟಲಿಂಗವ ಧರಿಸಿ ॥
ಧರೆಯೊಳು ಮರೆಯದೆ ಶಿವಮತ ಘನವೆಂದು
ಮೆರೆಸಿದ ಮತ್ತೆ ವೆಗ್ಗಳಿಸಿದನು ಭೂಮಿ
ಗರಿದೆಂಬ ಮಹಿಮೆಯ ತೋರಿದನು ಅಲ್ಲಿಂ
ದಿರದೆ ಕೈಲಾಸವ ಸಾರಿದನು ಮಾರ
ಹರಗೆ ವಂದಿಸಲಾಗ ಕರುಣದಿಂ ತಕ್ಕೈಸಿ
ಹರುಷದಿಂ ತನ್ನಲ್ಲಿ ಇರಿಸಿದ ಶಿವನು ॥
ಆದಯ್ಯನ ಪುಣ್ಯಚರಿತೆಯ ಭಕ್ತಿ
ಯಿಂದೋದಿ ಬರೆದು ನೆರೆ ಪಠಿಸಿದರೆ ಜನ
ರಾದವರೊಲಿದಿದ ಕೇಳಿದರೆ ಮುಕ್ತಿ
ಸಾಧಿಸುವದು ದಿಟ ಭಜಿಸಿದರೆ ಮತ್ತೆ
ಈ ಧರೆಯೊಳು ಕಾಮನಾಟದ ಪದಗಳ
ಸಾಧುಸಜ್ಜನರು ಸಾರಸದಿಂದ ಕೇಳಿ ॥
ಮಿತ್ರನ ಪುತ್ರ ಸಪಾತ್ರ ಹರತ್ರಯ
ನೇತ್ರ ಪರಮಗೋತ್ರ ಮಂದಿರವ ಶತ
ಪತ್ರಜಸ್ತೋತ್ರ ಅಮೃತಕರವ ಪುಣ್ಯ
ಕ್ಷೇತ್ರ ಶ್ರೀಕುಂದಗೋಳದಲಿರುವ ಗುರು
ಪುತ್ರನಡಿಭೃಂಗ ಸುಪುತ್ರ ಬಸವಲಿಂಗ
ಧಾತ್ರಿಯೊಳೊರೆದ ಚರಿತ್ರೆಯ ಕೇಳಿ ॥
* * *
Leave A Comment