ದುಂದುಮೆ ಎಂದೆಂದು ಪಾಡಿರಿ ಜಾಣಾs
ದುಂದುಮೆ ಬಸವಂತನ ಹಬ್ಬ ॥
ಶ್ರೀಗುರು ನಿಮ್ಮಯ ಚರಣಾರವಿಂದ
ದಾಗರಕೇನುಸುರ್ವೆ ಖಾತ್ರಿಗಳನು ದಯ
ದೀಗ ಕೌತುಕ ಮಾತುಗಳನು ಅತಿ
ಪ್ರಾಸ ಬೀಳದ್ಹಾಂಗ ಪದಗಳನು ಮುಂದೆ
ಲೇಸಾಗಿ ಖಾತ್ರಿಯನು ಸಾಗಿಸುಯೆಂದು-
ಲ್ಹಾಸದಿಂದಲಿ ಎನ್ನ ಮಾತಿಗೆ ಮಂಗಳವ ॥
ಉರ್ವಿಯೊಳಗ ಶ್ರೇಷ್ಠವಾದ ವಿರಾಟನ
ಪರ್ವದ ಕಥನವ ಪೇಳುವೆನು ಕೇಳು
ಉರ್ವಿ ಜನರಿಗೆಲ್ಲ ಹೇಳುವೆನು ಎನ್ನ
ಗರ್ವವನೆಲ್ಲ ಸಂಹರಿಸುವೆನು ಮುಂದೆ
ತಂದೆಯ ಕರುಣದಿ ಮಾಡುವೆ ಪದವನು
ಚಂದದಿ ಗಣಪನೆ ಕೊಡು ಬೇಗ ಮತಿಯ ॥
ಕ್ಷತ್ರಿಯ ವಂಶದೊಳಿರ್ದ ಧರ್ಮರಾಜ
ಧಾತ್ರಿಯೊಳು ವನವಾಸ ಪೋಗುತಲಿ ದೊಡ್ಡ
ಕ್ಷೇತ್ರಗಳೆಲ್ಲವನರಸುತಲಿ ಅಂದು
ಧಾತ್ರಿಯೊಳಗೆ ತಾನು ತಿರುಗುತಲಿ ಮುಂದೆ
ಪಾರ್ಥ ನಕುಲ ಸಹದೇವ ಭೀಮರು ಮತ್ತೆ
ಗುರ್ತವನು ತಪ್ಪಿಸಿ ತಿರುಗುತಲಿಹರು ॥
ವನವಾಸ ತಿರುಗುತ ವನಿತೆ ದ್ರೌಪತಿಯನು
ವಿನಯದಿ ಬಾರೆಂದು ಕರೆವುತಲಿ ತಮ್ಮ
ಮನದೊಳು ಚಿಂತೆಯ ಮಾಡುತಲಿ ಅಕೊ
ಧರ್ಮರಾಜನ ಮುಂದೆ ಹೇಳುತಲಿ ಪಾರ್ಥ
ವರ್ಮವು ತಿಳಿಯದು ಉರ್ವಿಯ ಮೇಲಿನ್ನು
ಕರ್ಮವ ಕಳೆವುದು ಇಂದು ಧರ್ಮಜನು ॥
ವನವಾಸ ತಿರುಗುತ ವನಿತೆಯ ಕರಕೊಂಡು
ವಿನಯದಿ ಕಾನನದೊಳಗಿರಲು ದೊಡ್ಡ
ಘನವೃಕ್ಷ ಬನ್ನಿ ಮಹಾಕಾಳಿರಲು ತಾವಾ
ಗ ನಾಲ್ವರು ತಿರುಗುತಲ್ಲಿಗೆ ಬರಲು ಮುಂದೆ
ವಿನಯದಿ ತಮ್ಮ ಕರೊದೊಳು ಇದ್ದಂಥ
ಘನ ಸರಳುಗಳನು ಇಟ್ಟರು ಬೇಗದಲಿ ॥
ಇಟ್ಟು ಕೈದುಗಳನು ಮುಟ್ಟಿ ಶರಣು ಮಾಡಿ
ಕೊಟ್ಟೀರಿ ಯಾರಿಗೆ ಎಂದೆನುತ ಬಹು
ನಿಷ್ಠೆಯಲಿ ಬನ್ನಿ ಮಾತಾಡಿಸುತ ತಾಯಿ
ಇಟ್ಟೇವು ಕೈದುಗಳ ಬೇಗೆನುತ ನಮ್ಮ
ಹುಟ್ಟಿದ ವನವೇ ಸಾಕ್ಷಿಯೆಲೆ ದೇವಿ
ಘಟ್ಯಾಗಿ ಕಾಯವ್ವ ಬನ್ನಿ ಮಹಾಕಾಳಿ ॥
ವನವಾಸದೊಳು ಒಂದು ವರ್ಷ ಅಜ್ಞಾತ
ವನು ಕಳೆಯಲಿ ಬೇಕು ಸತ್ಯಕಾಗಿ ನಾಮ
ರೂಪ ಮಾಜಿಕೊಂಡು ಸುಮ್ಮನಾಗಿ ಧರ್ಮ
ರಾಜನು ತಾನೀಗ ಶ್ರೇಷ್ಠನಾಗಿ ಎಲ್ಲ
ಅನುಜರು ತಮ್ಮ ರೂಪ ಬದಲಿಸಿಕೊಂಡು
ಮೌನದಿ ವಿರಾಟನಗರಕೈದಿದರು 7॥
ಬಂದು ವಿರಾಟನ ಸದರಿನೊಳಗೆ ತಾವು
ಚಂದದಿ ನಿಂತುಕೊಂಡ್ಹೇಳುತಲಿ ನಮ
ಗೊಂದೊಂದು ಚಾಕರಿ ಬೇಕೆನುತಲಿ ನೀವೆ
ತಂದೆಯು ಎಂದು ಕೊಂಡಾಡುತಲಿ ಯಮ
ನಂದನ ಪೇಳಲು ಅಂದು ವಿರಾಟನು
ಚಂದವಾಯಿತೆಂದು ಮುಂದಕ್ಕೆ ಕರೆದ ॥
ಮುಂದಕ್ಕೆ ಬಂದು ಶರಣುಮಾಡಿ ನಾಲ್ವರು
ಹಿಂದಕ್ಕೆ ಸರಿವಂಥ ಸಮಯದಲಿ ದ್ರೌಪದಿ
ಕಂಡು ವಿರಾಟನ ಮನಸಿನಲಿ ಚಂದ್ರ
ಮುಖಿಯಳ ಮುಖನೋಡಿ ಚಿಂತಿಯಲಿ ತನ್ನ
ಮಂದಗಮನೆಯಳ ಕರೆದು ಹೇಳಿದನಾಗ
ನಂದಿನಿಯಳ ಕರಕೊಂಡು ಹೋಗೆಂದ ॥
ದ್ರೌಪತಿಯನು ತನ್ನ ಸತಿಯ ಬಳಿಯಿಟ್ಟು
ಬೇಕಾದ ಕೆಲಸವ ಹೇಳೆನುತ ತಂಗಿ
ಒಳೆಯಕ್ಕ ಬಾರೆಂದು ಕರೆದೊಯ್ಯುತ ದಿನ
ಊಟಕ್ಕೆ ಮಾಡು ನಮಗೆಂದೆನುತ ಇಂದು
ಬಾಳುಳ್ಳ ಮಗಳಿಗೆ ಬಡತನ ಬಂದಿದೆ
ಬಾರವ್ವ ಭಾಮಿನಿಯೆಂದು ಕರೆದಳು ॥
ಬಂದೆನಕ್ಕ ಎಂದು ಸಂದೇಹವಿಲ್ಲದೆ
ಚಂದದಿ ಒಳಯಕ್ಕೆ ಹೋದಳಾಗ ಅಕ್ಕ
ಇಂದೇನು ಕೆಲಸವು ಹೇಳಿರೀಗ ಇಂದು
ಎಂದಾಗ ಮನಿಯೊಳು ಕೇಳುತಾಗ ಮನ
ನೊಂದು ಹೃದಯ ಕಳೆಗುಂದಿ ದ್ರೌಪದಿ ತಾನು
ಚಂದದಿ ಅನ್ನವ ಮಾಡುತ್ತಲಿಹಳು ॥
ಧರ್ಮರಾಜನು ಪಾರ್ಥ ನಕುಲ ಸಹದೇವರು
ನಿರ್ಮಲದಿಂದಲ್ಲಿ ಇರುತಿರಲು ಭೀಮ
ತಾ ಮಡಿಹೊತ್ತು ನೀರ ತರುತಿರಲು ತಮ್ಮ
ರೂಪವ ತಿಳಿಯದೆ ಇರುತಿರಲು ಮುಂದೆ
ಆಗುವ ಕಥೆಯನು ಹೇಳುವೆ ಕೇಳಿರಿ
ಭೋಗವಂತರು ಬೇಗ ಮನಸಿಗೆ ತಂದು ॥
ವನವಾಸ ತೀರೋದು ಸನಿಯಕ್ಕ ಬಂದಿತು
ಮನೆಯೊಳಗ ಇದ್ದಂಥ ಕೀಚಕನು ತಾನು
ಒಂದಿನ ದ್ರೌಪದಿಯ ಕಂಡಾನು ಆಗ
ಮನ ಮರುಳುಗೊಂಡು ನಿಂತಿಹನು ಇವ
ಳೆಲ್ಲಿಯವಳು ಎಂದು ಅಕ್ಕನ ಕೇಳಲು
ಎಲ್ಲಾನು ತಮ್ಮಗೆ ಹೇಳುತಲಿಹಳು ॥
ಬಾಲೇರ ಕೂಡಿ ಈ ನಾರಿ ಬಂದಳೊ ಈಕಿ-
ದಾರು ನಾನರಿಯೆನು ಕೇಳೊ ತಮ್ಮ ಬಲು
ವಯ್ಯರ ಮಾಡುತಾಳೆ ಕೇಳಿರಮ್ಮ ಬಹು
ಭಾರಿ ಕಾಣಸ್ತಾಳೆ ನೋಡಿರಮ್ಮ ಇಂದು
ನಾರೇರ ಸಮೂಹದಿ ಸೂಚು ಬಡಿದು ಮತ್ತೆ
ವಾರಿಗೆ ನಿಂತಳು ಕೀಚಕನಕ್ಕ ॥
ಭ್ರಾಂತಿ ಹತ್ತಿ ಆಗ ನಿಂತು ಮಾಡಾಡುತ
ಕಾಂತೆ ನೀ ಯಾರವ್ವ ಎಂದೆನುತ ಬಲು
ಚಿಂತೀಲಿ ತಾನು ಮಾತಾಡಿಸುತ ಕಾಮ
ತಂತ್ರಕ್ಕೆ ದೇಹದ್ಹತ್ತರ ಹೋಗುತ ಕೀಚ
ಕಂತು ತಾ ನಿಂತನು ಕಾಂತೆಯಮುಖ ನೋಡಿ
ಭ್ರಾಂತನಾಗಿ ತಾನು ಬಿಟ್ಟಾನ ಬಾಯ ॥
ನಳಿತೋಳುತಳ ಕಂಡು ಕಳವಳಗೊಳ್ಳುತ
ಇಳಿದನು ಚಿಂತಿಲೆ ಭೂಮಿಗಿಂದ ಭಾಳ
ಹಲ್ಲು ಬೆನ್ನು ಬಾಯಿ ತೆಗೆದು ಮುಗಿಲಿಗಿಂದ ಇಂಥ
ಹೆಣ್ಣನು ಕಣ್ಣಿಲೆ ಕಾಣೆನೆಂದ ಮುಂದೆ
ಇನ್ನೇನು ಉಳಿಯೆನು ಈಕಿ ರೂಪವ ನೋಡಿ
ಕನ್ನೆಯ ವಶಮಾಡಿಕೊಡಿಂದು ನನಕ್ಕ ॥
ತೋಳ್ತೊಡಿ ಬಾಳೆಯ ದಿಂಡಿನಂಥವಳ
ಕಾಲ್ಬೆರಳುಗಳ್ ಸಣ್ಣಾಗಿ ಕಾಣಿಸುತ ಕುಚ
ಬಟ್ಟುದರ ಇಂಪಾಗಿ ತೋರಿಸುತ ವಾರಿ
ನೋಟದಿಂದ ನೋಡುತ ಪೋಗುತ ಇಂಥ
ನಾರಿಯು ಕೈ ವಶವಾಗದಿದ್ದರೆ ಎನ್ನ
ಶರಿರ ವ್ಯರ್ಥವೆಂದು ನುಡಿದ ಕೀಚಕನು ॥
ಮಧುರ ಕೋಕಿಲವೆಣ್ಣು ಸ್ವರವೆತ್ತಿ ನುಡಿದರೆ
ಕಿವಿಯೊಳು ಹಾರಿಯು ಹಾಕಿದಂತೆ ಎನಗೆ
ಸಿಡಿಲು ಹೊಡೆದು ಜೀವ ಝಲ್ಲೆಂದಂತೆ ಘುಡಿ
ಘುಡಿಸುವ ಹುಲ್ಲೆಯ ಆರ್ಭಾಟದಂತೆ ಇಂದು
ಮಡದಿಯ ಕಂಡು ನಾ ಬಿಡಲಾರೆನೆಂಬುತ
ಗಡಗುಟ್ಟಿ ಹೊರಳುತ ನೆರಳುತಲಿಹನು ॥
ಕನ್ನಡಿ ಕದಪಿನ ಮುಖವನು ಕಾಣುತ
ತಾನು ಎಚ್ಚರದಪ್ಪಿ ನಿಂತಿಹನು ಮತ್ತೆ
ಇನ್ನೇನು ಗತಿಯೆಂದು ಆಡಿದನು ಬೇಗ
ತನ್ನ ಅಕ್ಕನ ಕರೆದ್ಹೇಳಿದನು ಇಂಥ
ಚನ್ನೆಯ ವಶಮಾಡಿ ಕೊಟ್ಟರೆ ಎನ್ನಯ
ಪುಣ್ಯಕ್ಕೆಣೆಯುಂಟೆ ಮೂರು ಲೋಕದಲಿ ॥
ಒಬ್ಬ ದೂತನ ವಾರಿಯೊಳು ನಿಂತು ತನ್ನಯ
ಹುಬ್ಬಿಗೆ ಕೈಹಚ್ಚಿ ನೋಡಿದನು ಇಂಥ
ಹೆಣ್ಣಿನ ಸಮನಿಲ್ಲ ನೋಡೆಂದನು ಬಣ್ಣ
ನಿಂಬಿಯ ಹಣ್ಣು ಕಾಣೆಂದನು ಇಂಥ
ಹೆಣ್ಣಿನ ರೂಪವ ಕಂಡು ಸೈರಿಸಲಾರೆ
ಇನ್ನೇನು ಗತಿಯೆಂದು ಅಂದ ಕೀಚಕನು ॥
ಬಡನಡು ಬಳಕುವ ಹೆಣ್ಣಿನ ನಡಿಗೆಯು
ನಡೆದರೆ ಮದ್ದಾನೆಯಂದದಲಿ ಬಲು
ನುಡಿವಳು ಸ್ವರ ಕೋಕಿಲೆಯಂದದಲಿ ತಾನು
ಕಡೆಗಣ್ಣ ನೋಟದಿ ನೋಡುತಲಿಹಳು ಇಂಥ
ಸುಂದರಿ ಸುಗುಣಿ ಇಂದಾಗದಿರೆ ಎನಗೆ
ಇನ್ನೆಂದಿಗೆ ಆಗೋದು ಎಂದ ಕೀಚಕನು ॥
ಸ್ಮರನ ತಾಪವು ಹೆಚ್ಚಿ ಮರುಗುತಲಾಕ್ಷಣ
ಕರೆದನು ಬಾರೆ ನೀ ಬಾರೆನುತ ಬಾಯಿ
ದೆರೆದನು ಹೇಳು ಹೇಳೆಂದೆನುತ ಕೈಯ
ಮುಗಿವೆನು ನೀರೆ ನೀ ಪೇಳೆನುತ ನಿನ್ನ
ನಗೆಗೆ ನಾ ಮರುಳಾದೆ ಲಗುಬಗೆಯಿಂದಲಿ
ಬಗೆಯ ನಿನ್ನದು ಹೇಳು ಎಂದ ಕೀಚಕನು ॥
ಎನ್ನ ಬಗೆಯ ಭಾವ ಇನ್ನೇನು ನೀ ಕಂಡೆ
ಬಿನ್ನಾಣ ಮಾತನಾಡುದು ಸಲ್ಲವೊ ಪರ
ಹೆಣ್ಣಿಗೆ ಮರುಳಾಗುದುಚಿತಲ್ಲವೊ ನಿನ್ನ
ಕಣ್ಣು ಕೀಳಿಸುವೆನು ಪೋಗೆಲವೊ ಎಂದು
ಘರ್ಜಿಸಿ ನುಡಿಯಲು ಮಡದಿ ದ್ರೌಪದಿ ತಾನು
ಸರ್ಜಿಸಿ ಹಿಂದಕ್ಕೆ ಸರಿದ ಕೀಚಕನು ॥
ಸರಿದು ಹಿಂದಕೆ ನಿಂತು ಸರಸದಿ ಮಾತಾಡು
ತಿರೆ ಹೆಣ್ಣೆ ನೀನಿಗ ಏಳೆನುತ ನಿನ್ನ
ನಾಳ್ವರ ಹೆಸರು ಹೇಳೆಂದೆನುತ ಬಂದು
ಕೂಳಿಗೆ ಸೇರೀರಿ ಎಂದೆನುತ ಇಂಥ
ಖೂಳ ಕೀಚಕ ನುಡಿವಂಥ ನುಡಿಯ ಕೇಳಿ
ಘೋಳಿಟ್ಟು ಮನದಲ್ಲಿ ಚಿಂತೆ ಮಾಡಿದಳು ॥
ಬಡವರಿಗೆ ಹೊತ್ತು ಬಂದ ವ್ಯಾಳ್ಳೇದಲ್ಲಿ
ಕಿಡಿಗೇಡಿ ಮಾತನಾಡೋದು ಸಲ್ಲವೊ ನಿನ್ನ
ತುಡುಗ ಬೆರಸುವದು ಇದು ಸಲ್ಲವೊ ನೀನು
ಕಿಡಿಗೇಡಿತನ ಮಾಡುದುಚಿತಲ್ಲವೊ ಎಂದು
ಮಡದಿ ದ್ರೌಪದಿ ತಾನು ನುಡಿಯಲಾಕ್ಷಣ
ಗಡಬಡಿಸುತ ಕಾಡುತಲ್ಲಿರ್ದ ಕೀಚಕನು ॥
ಬಡತನ ಬಂದರೆ ದುಡುಕು ಮಾಡುದು ಸಲ್ಲ
ಕೊಡುವೆನು ವಸ್ತವಡವಿಯೆನುತ ಕೈಯೊ
ಳಿಡುವೆನು ವಂಕಿ ಹರಡಿಯೆನುತ ಎನ್ನ
ಮಡದಿ ನೀನಾಗು ಇಂದಿಗೆ ಎನುತ ಮತ್ತೆ
ತುಡುಗು ಬುದ್ಧಿಯಲಿಂದ ಬಿಡದೆ ಕಾಡುತಲಿಹನು
ಕಡುಚೆಲ್ವ ದ್ರೌಪದಿಯನು ಕಂಡು ಖಳನು ॥
ದುಡುಕು ಮಾಡೂದು ಸಲ್ಲದೆಂದು ದ್ರೌಪದಿ ತಾನು
ಕಡುಸಿಟ್ಟಿನಿಂದಲಿ ನುಡಿಯುತಲಿ ನಿನ್ನ
ವಡವಿ ವಸ್ತುಗಳೆಲ್ಲ ತೋರುತಲಿ ಮತ್ತೆ
ತುಡುಗ ಬುದ್ಧಿಯು ಸಲ್ಲದೆಂಬುತಲಿ ಹೀಂಗೆ
ದುಡುಕೂದು ತರವಲ್ಲ ಕಡಿಸಿ ಹಾಕುವೆ ನಿನ್ನ
ಕೊಡಸೂದೆ ಯಮನಿಗೆ ಇಡಸಲ್ಲ ನಿನ್ನ ॥
ಸಿಟ್ಟು ಮಾಡಲಿ ಬೇಡ ನಿನ್ನ ಮನಸಿನೊಳು
ಘಟ್ಯಾಗಿ ಎನಗೆ ನಂಬಿಗೆಯ ಕೊಟ್ಟು ನಿನ್ನ
ಹೊಟ್ಟೆಯ ಒಳಗಿನ ಸಿಟ್ಟು ಬಿಟ್ಟು ರತಿ
ಯಿಟ್ಟು ಎನಗೆ ಮಾತು ಪೂರ್ಣಕೊಟ್ಟು ಮನ
ಸಿಟ್ಟು ಎನ್ನಯ ಮಾತು ಕೇಳೆಂದು ಕೀಚಕ
ಗಟ್ಯಾಗಿ ದ್ರೌಪದಿಯ ಕಾಡಿದ ಖಳನು ॥
ಭ್ರಷ್ಟ ಮಾತುಗಳಿಂದ ಫಲವಿಲ್ಲವೆಂಬುತ
ಕೆಟ್ಟಿ ನೀ ಬೇಡವೊ ಸುಮ್ಮನ್ಹೋಗು ರಟ್ಟಿ
ಕಟ್ಟಿಸಿಕೊಂಡಿಯೊ ಸಲ್ಲ ಹೋಗು ಹಲ್ಲು
ಕುಟ್ಟಿಸಿ ಹೊಯ್ಸುವೆ ಅಲ್ಲ ಹೋಗು ಎಂದು
ಸಿಟ್ಟಿಲಿ ದ್ರೌಪದಿ ನುಡಿವುತ್ತಿರಲು ಮತ್ತೆ
ಕೆಟ್ಟ ಕೀಚಕ ಆಡಿದಂಥ ಮಾತುಗಳ ॥
ಉಟ್ಟೆನೆಂದರೆ ನಿನ್ನ ಮನಕೆ ಬೇಕಾದಂಥ
ಪಟ್ಟಾವಳಿಯ ಸೀರಿ ಹಿಡಿಯೆನುತ ಮುತ್ತ
ಪಟ್ಟಿನ ಸರವನು ಹಾಕೆನುತ ಕರ್ಣ
ಕಿಟ್ಟುಕೊ ಬುಗುಡಿ ಬಾವಲಿ ಎನುತ ರತಿ
ಯಿಟ್ಟು ನಾ ಹೇಳುವೆ ಸಿಟ್ಟು ಮಾಡಲಿ ಬೇಡ
ಕಟ್ಟಾಣಿ ಮುತ್ತಿನ ಮುದ್ದು ಹೆಣ್ಣೆ ॥
ಪರಹೆಣ್ಣು ಕಂಡರೆ ಸರಸ ಮಾಡುದು ಸಲ್ಲ
ಗುರಿಯಾದಿ ಯಮನಿಗೆ ಬೇಡೆಲವೊ ನಿನ್ನ
ಶರಿರವ ಸೀಳ್ಯಾರು ಕೇಳೆಲವೊ ಕಾಮ
ಗುರಿಗೆ ನೀ ಈಡಾಗಬೇಡೆಲವೊ ತಿಳಿ
ದರಿದು ಕೇಳೆಲೊ ನಿನ್ನ ಸರಸ ಮಾಡುದು ಸಲ್ಲ
ಪರದೇಶಿ ಛೀ ಎಂದು ನುಡಿದಳು ಖಳಗೆ ॥
ಪರದೇಶಿ ಅಂಬುದು ತರವಲ್ಲ ನೀ ಬಾಲೆ
ಅರಸು ವಿರಾಟನ ಸತಿಯು ಕಾಣೆ ನಮ್ಮ
ಹಿರಿಯಕ್ಕ ನಿನಗೆ ಹೇಳುವೆನು ಜಾಣೆ ಭಾಗ್ಯ
ವಂತನು ಕೇಳೆ ಪನ್ನಂಗವೇಣಿ ನಿನ್ನ
ಸರಸರೂಪಕೆ ನಾನು ಮರುಳಗೊಂಡೆನು ನಾರಿ
ಕರುಣಿಟ್ಟು ಎನ್ನ ನೀ ನೋಡೆ ವೈಯಾರಿ ॥
ವೈಯಾರಿ ಎಂಬುವದು ತರವಲ್ಲ ನಿನಗೀಗ
ಜಾರ ಹೆಣ್ಣುಗಳಲ್ಲ ಕೇಳೊ ಜಾಣಾ ನಗೆ
ಯಾಡುವಳು ಅಲ್ಲ ಬೇಡೋ ಕಾಣಾ ಮುಂದ
ಕ್ಕಾಗಿ ಸಾಗಿ ಹೋಗೊ ಅಪ್ರವೀಣಾ ನಿನ್ನ
ಬಗೆಯನು ತಿಳಿದೆನು ಶ್ವಾನ ನೀ ಹೋಗೆಂದು
ಮುಖವ ತಗ್ಗಿಸಿ ಮಾತನಾಡಿದಳು ನಾರಿ ॥
ಮುಖವ ತಗ್ಗಿಸಿ ಮಾತನಾಡುವವಳ ಕಂಡು
ಪಿಕಸ್ವರವಾಣಿ ನೀ ಕೇಳೆಂದನು ಚಕ
ಚಕನೆ ಎನಗೆ ಮಾತು ಕೊಡು ಎಂದನು ನಿನ್ನ
ಮುಖನೋಡಿ ನಾ ಮರುಳಾಗಿದ್ದೆನು ಮುಂದೆ
ಅಂತಃಕರಣವಿಟ್ಟು ಸಂತೋಷ ಮಾಡೆಂದು
ನಿಂತು ಮಾತು ಹೇಳುತ್ತಿರ್ದನು ಖಳನು ॥
ಖಳನ ಮಾತನು ಕೇಳಿ ಕಾಮಿನಿ ಕುಲಮಣಿ
ಬಳಬಳ ಬಳಲುತ ಮನಸಿನಲ್ಲಿ ನೀರ
ಸುರಿಸ್ಯಾಳು ತನ್ನಯ ಕಣ್ಣಿನಲ್ಲಿ ಎನ್ನ
ಫಣಿಯೊಳು ಬರೆದಿಹ ಬ್ರಹ್ಮನಲ್ಲಿ ಆಗ
ಬೆದರು ಹುಟ್ಟಲಿಯೆಂದು ಸುದತಿ ಶಾಪವ ಕೊಟ್ಟು
ಮನದಲಿ ಮರುಗಿ ಸುಯ್ಗರೆದಳಾ ಬಾಲೆ ॥
ಹಿಂದೆ ನಾ ಮಾಡಿದ ಪಾಪದ ಫಲದಿಂದೆ
ಮುಂದೆ ಇಂಥ ಘಾತ ಬಂದಿತೆಂದು ಎನ್ನ
ತಂದೆತಾಯಿ ಇದಕ್ಕಾಗಿ ಹಡೆದರೆಂದು ಒಮ್ಮೆ
ಅಣ್ಣ ಮುಕ್ಕುಂದನು ಮುನಿದನೆಂದು ತಾನು
ಮಂದಗಮನೆಯಳು ನೊಂದು ಹೃದಯ ಕಳೆ
ಗುಂದಿ ಚಿಂತಿಸುವಾಗ ನಿಂತಾಳ ನಾರಿ ॥
ಚಿಂತಿ ಮಾಡುವದು ಸಲ್ಲದೆಂದು ನಾ ಹೇಳಿದರೆ
ಯಾತಕ್ಕೆ ಕರುಣವು ಬರಲೊಲ್ಲದು ನಿನಗೆ
ಭ್ರಾಂತಿ ಹತ್ತಿ ಮನಸು ತಾ ನಿಲ್ಲದು ಮಾರನ
ತಂತ್ರವು ಯಾರಿಗೆ ನಿಲುಕುವದು ಇಂಥ
ಕಾಂತೆ ನೀನು ಪ್ರಾಯವಂತೆ ಎನಗೆ ಮನ
ಸಂತೋಷ ಮಾಡೆಂದು ಸೆರಗನು ಹಿಡಿದ ॥
ಸೆರಗ್ಹಿಡಿದಾಕ್ಷಣ ಮರಮರನೆ ಮರುಗುತ
ಕರೆದಳು ಅಣ್ಣ ಕೃಷ್ಣನೆ ಎನುತ ಬಾಯಿ
ದೆರೆದಳು ಮನದಿ ಯೋಚನೆಗೈವುತ ನಾಲ್ವ
ರರಿಯದೆ ಆದಿತು ಎನಗೆ ಘಾತ ಇಂದು
ಕರಗಿ ಕೊರಗಿ ತಾನು ಸೊರಗಿ ಮರುಗಿ ಮತ್ತೆ
ಹರಣದ್ಹಂಗನು ಬಿಟ್ಟು ಹೊರಳ್ಯಾಳೆ ನಾರಿ ॥
ಹೊರಳ್ಯಾಳು ಭೂಮಿಯೊಳ್ಮರುಗ್ಯಾಳು ಮನಸಿನೊಳ್
ಹರಹರ ಅನುಚಿತವಾಯಿತೆಂದು ಬಾಯಿ
ದೆರದಾಳು ಮುಗಿಲಿಗೆ ಕಾಂತೆ ಅಂದು ಬೆರ
ಳೆಡ ಮುರಿದೇಳುತ ಅಳುತ ನಿಂದು ಅಯ್ಯ
ಸುಡು ಹೆಣ್ಣು ಜನ್ಮವ ಸಾಕಯ್ಯ ಅಣ್ಣನೆ
ಬಿಡಿಸಯ್ಯ ಎನ್ನ ಮನದ ಖತಿಯನ್ನು ॥
ಮುದ್ದುಮುಖದ ಬಾಲಿ ಬಿದ್ದಳು ಭೂಮಿಯೊಳ್
ಶುದ್ಧದೇಹವು ಕುಂದುತಲ್ಲಿ ತನ್ನ
ಮುದ್ದು ಮುಖವು ಬಾಡಿ ಬಳಲುತಲ್ಲಿ ಎದಿ
ಗುದ್ದಿ ಹಣೆಗೆ ಕೈಯನೂರುತಲ್ಲಿ ಮುಂದೆ
ನೊಂದಾಳು ಕಂದ್ಯಾಳು ಕಾಮಿನಿ ಕುಲಮಣಿ
ಇಂದು ಅಣ್ಣನೆ ದಯಮಾಡೆಂದಳಾಗ ॥
ಗೋಪಿಯನಾಥನೇ ಗೋಕುಲದರಸನೇ
ಪಾಪಿ ಕೀಚಕ ತಾನು ಕಾಡುವನು ಇಂಥ
ಪಾಪವ ಕಾಣುತ ನೋಡುವೆನು ಧರ್ಮ
ಭೂಪಗೆ ಸುದ್ದಿಯ ಹೇಳಿರೇನು ಎಂದು
ತಾಪ ಚಿಂತೆ ಹೆಚ್ಚಿ ಈ ಪರಿಯಿಂದಲಿ
ಪಾಪರಹಿತ ದ್ರೌಪದಿ ಮರುಗಿದಳು ॥
ಮಂದಗಮನೆಯಳು ನೊಂದಳು ಕಣ್ಣೀರ
ತಂದಳು ತನ್ನಯ ದುಃಖದಿಂದ ವಿಧಿ
ಬೆನ್ಹತ್ತಿ ಕಾಡುವದು ಹಗೆಯಿಂದ ಮನ
ನೊಂದಳು ದ್ರೌಪದಿ ಚಿಂತಿಲಿಂದ ಸುಖ
ವಿನ್ನಿಲ್ಲವೆಂಬುದು ಎನ್ನ ಮನಕೆ ಬಂತು
ಇನ್ಯಾಕೆ ಈ ಜನ್ಮ ಇಡಲಾರೆ ನಾನು ॥
ಸುಡು ಸುಡು ಹೆಣ್ಣಿನ ಜನ್ಮವು ಕಷ್ಟವೆಂ
ದೊಡಲೊಳು ಉರಿಬಿದ್ದು ಹೊರಳುತಲಿ ತನ್ನ
ಎಡೆಯ ಬಾಯಿಯ ಬಡಿಬಡಿವುತಲಿ ಸರಿಯ
ಮಡದೇರ ಮುಂದೆಲ್ಲ ಹೇಳುತಲಿ ಎನ್ನ
ದುಡುಕು ಮಾಡುತಲಿಹನು ತುಡುಗು ಬುದ್ಧಿಗಳಿಂದ
ಹಿಡಿಯಲಾಕ್ಷಣ ಭೂಮಿಗುರುಳ್ಯಾಳು ನಾರಿ ॥
ಮರುಳುವ ನೆರಳುವ ಧ್ವನಿಯ ಕೇಳುತಾಗ
ಅರಸು ವಿರಾಟನ ಸತಿಯು ಬೇಗ ತನ್ನ
ತಮ್ಮ ಕೀಚಕನನ್ನು ಕರೆದಳಾಗ ಇದು
ಇನ್ನೇನು ಗದ್ದಲವೆಂಬುತಾಗ ಕೇಳಿ
ತನ್ನ ಅಕ್ಕನ ಮುಂದೆ ಹೇಳಿ ಸುದ್ದಿಯ ರಂಭೆ
ದ್ರೌಪದಿಯನು ಕೂಡಿಸಬೇಕೆಂದನಾಗ ॥
ಇವತ್ತು ಒಂದಿನ ತಡೆದರೆ ಆಕೆಯ
ಭಾವ ತಿಳಿದು ಕರೆ ತರುವೆನೆಂದು ತಮ್ಮ
ನೀ ಮರುಳಾಗುದುಚಿತವಲ್ಲೆಂದು ಸುಮ್ಮ
ನೇಳೇಳು ಊಟಕ್ಕೆ ಹೋಗು ಎಂದು ತಾನು
ಹೇಳಿದಾಕ್ಷಣ ಕಾಮಿನಿ ಕುಲಮಣಿ ಕೇಳ
ದ್ರೌಪತಿ ನಿನಗ್ಹೇಳುವೆ ಮಾತನೊಂದ ॥
ಬಂದಳು ದ್ರೌಪದಿ ಸಂದೇಹವಿಲ್ಲದೆ
ಚಂದಾಗಿ ಕರೆದು ಕುಳ್ಳಿರಿಸಿಕೊಂಡು ಎನ್ನ
ಸಂದೇಹವೊಂದನೆ ನಡಿಸಿಕೊಂಡು ಎನ್ನ
ತಮ್ಮ ಕೀಚಕ ನಿನ್ನ ಪುಣ್ಯ ಕಂಡು ರತಿ
ಯನ್ನಿಟ್ಟ ಅಬಲೆಯೆನ್ನ ಮಾತನು ಮೀರದೆ
ಚನ್ನಾಗಿ ನಡಿಸಿಕೊಡೆಂದು ಹೇಳಿದಳು ॥
ಬಡವರ ಕೂಡಿರ್ದು ಬಾಲೆ ನೀ ಬಲು ಕಷ್ಟ
ಬಿಡುವದ್ಯಾತಕೆ ನೀನು ಹೇಳೆನುತ ಎನ್ನ
ಒಡಹುಟ್ಟಿದವನೊಳು ಇರು ಎನುತ ನಿನ್ನ
ಬಡತನ ಹರಿವುದು ಕೇಳೆನುತ ಹೀಂಗ
ಮಡದಿ ದ್ರೌಪದಿಗೆ ತಾ ಕಡು ಮೋಹದಿಂದಲಿ
ಒಡೆಯ ವಿರಾಟನ ಸತಿಯು ಹೇಳಿದಳು ॥
ಕೇಳಿದಾಕ್ಷಣ ನಾರಿ ಬಹಳ ದುಃಖದಿಂದ
ಕಾಳೋರಗವೇಣಿ ಚಿಂತಿಸುತ ಕೃಷ್ಣ
ವ್ಯಾಳೆ ಎಂಥದು ತಂದೆ ತಮಗೆನುತ ನಮ್ಮ
ಬಾಳುಳ್ಳವರಿಗ್ಹೊತ್ತು ಬಂತೆನುತ ಆಗ
ಮೋರೆ ತಗ್ಗಿಸಿಕೊಂಡು ವನಿತೆ ದ್ರೌಪದಿ ತನ್ನ
ದಾರಿ ಹಿಡಿದು ಧರ್ಮರಾಜನ ಬಳಿಗೆ ॥
ರಾಜರಾಜರಿಗೆಲ್ಲ ಶ್ರೇಷ್ಠವಾದ ಧರ್ಮ
ರಾಜ ಭೂಪನ ಬಳಿಗೆ ಬಂದಳಾಗ ಖಳನು
ಕಾಡಿದಂಥ ಸುದ್ದಿ ಹೇಳ್ದಳಾಗ ಎನ್ನ
ಮಾನಕ್ಕೆ ಕೊರತೆಯು ಬಂತೆಂದಳಾಗ ಹೀಂಗ
ಮಾನಿನಿ ಹೇಳ್ದ ಮಾತಿಗೆ ಧರ್ಮರಾಜನು
ತಾ ಒತ್ತಿ ಹೇಳಿದಂಥ ಮಾತನು ಕೇಳಿ ॥
ಅನ್ನ ಕೊಡುವ ದಾತರಾಜ್ಞೆಯ ಮೀರಲು
ಇನ್ನು ಎಮಗೆ ಶಿವ ಮೆಚ್ಚುವನೆ ಸಂ
ಪನ್ನೆ ಎನ್ನಯ ಮಾತು ಕೇಳು ನೀನೆ ಇದಕೆ
ಅನ್ಯ ಉತ್ರವ ಕೊಡಲ್ಯಾಂಗ ನಾನೆ ಎಂದು
ಸುಮ್ಮನೆ ಧರ್ಮರಾಜನು ಕೇಳುತ್ತಿರಲಾಗ
ಘಮ್ಮನೆ ತಿರುಗ್ಯಾಳು ಪಾರ್ಥನ ಬಳಿಗೆ ॥
ಬಂದಳು ದ್ರೌಪದಿ ಮುಖಬಾಡಿ ಪಾರ್ಥನಿ
ಗೆಂದಳು ತನ್ನಯ ಚಿಂತಿಲಿಂದ ಇಂದು
ಇದಕೇನು ಗತಿ ನಾನು ಮಾಡಲೆಂದ ಹೊತ್ತು
ತಂದಾನೆ ಶಿವ ನನಗಿಂಥಾದ್ದೆಂದು ಪಾರ್ಥ
ಅಂದ ನುಡಿಯ ಕೇಳಿ ದ್ರೌಪದಿ ದುಗುಡದಿ
ಬಂದಳು ನಕುಲ ಸಹದೇವರ ಬಳಿಗೆ ॥
ಮುಖಬಾಡಿ ನಕುಲ ಸಹದೇವರಿಗೆ ಅಂದು
ಅಕಟಕಟೆನಗೇನು ಗತಿ ಎಂದಳು ನಾರಿ
ಮುಖವ ತಗ್ಗಿಸಿ ನಿಂತು ಹೇಳಿದಳು ತನ್ನ
ದುಃಖದಿ ಕಣ್ಣೀರ ಸುರಿಸಿದಳು ಮತ್ತೆ
ಸಖಿ ಕುಲಮಣಿ ನಾವು ಕಿರಿಯರು ನೀನಿದಕೆ
ಧರ್ಮಪಾರ್ಥರ ಬಳಿಗ ಹೋಗೆನ್ನಲಾಗ ॥
ಹೀಗೆಂದು ನುಡಿಯನು ಕೇಳುತಲಾಕ್ಷಣ
ಕೋಗಿಲಸ್ವರದಿಂದ ಅಳುತಲಾಗ ಮತ್ತೆ
ಬೇಗ ಬಂದಳು ಭೀಮನ್ಹುಡುಕುತಲಾಗ ದಯ
ವಾಗು ನೀ ಎನಗೆಂದು ನುಡಿದಳಾಗ ಇಂಥ
ಶೋಕ ಮಾಡುದ ಕಂಡು ಯಾಕೆಂದು ಭೀಮನು
ಆಕೆಯ ಮುಖವನ್ನು ಹಿಡಿದು ಕೇಳಿದನು ॥
ಹೇಳು ಹೇಳು ನಾರಿ ಬಹಳ ದುಃಖದಿಂದ
ತಾಳಲಾರದೆ ಎನ್ನ ಒದರಿದ್ಯಾಕೆ ಹಳ
ಹಾಳಿಯಾಗದೆ ನಿನ್ನ ಮನಸು ಯಾಕೆ ನಾನು
ಹೇಳುವೆ ಇದಕೆ ಸುಳ್ಳಲ್ಲ ಜೋಕೆ ಎಂದು
ಕೇಳಲು ಆ ಕ್ಷಣ ಖೂಳ ಕೀಚಕ ತಾನು
ಬಾಳ ಕಾಡಿದ ಬಗೆಯನೆಲ್ಲ ಹೇಳಿದಳು ॥
ಕೇಳಿದಾಕ್ಷಣ ಭೀಮ ಬಹಳ ಸಿಟ್ಟಿನಿಂದ
ಖೂಳ ಕೀಚಕನನ್ನು ಹೊಡೆವೆ ಜಾಣೆ ಇದಕೆ
ಚಿಂತೆಮಾಡುದು ಸಲ್ಲ ಸುಪ್ರವೀಣೆ ನಾನು
ಬಿಟ್ಟರೆ ಧರ್ಮನ ಪಾದದಾಣೆ ಎಂದು
ಇಟ್ಟುಕೊಂಡನು ತಾನು ಗಟ್ಟಾಗಿ ಶಪಥವ
ಥಟ್ಟನೆ ಹೇಳು ವಿರಾಟನ ಸತಿಗೆ ॥
ಕೇಳು ಕಾಮಿನಿ ನೀನು ಬಹಳ ಚಿಂತಿಸಬೇಡ
ನಾಳೆ ನಾ ನಿನ್ನ ವೇಷವ ಧರಿಸಿ ಇಂಥ
ಖೂಳ ಕೀಚಕನನ್ನು ಸಂಹರಿಸಿ ಚಿಂತಿ
ಹರಿಸಿ ಬಿಡುವೆನೇಳ ಎನ್ನರಸಿ ಅವಗೆ
ಸರಸದಿ ಬರುವೆನೆಂದ್ಹರುಷದಿ ಹೇಳೆಂದು
ಅರಸಿ ದ್ರೌಪದಿಗಾಗ ಹೇಳಿ ಕಳುಹಿದನು ॥
ಹೇಳುವೆ ಬಗೆಯನು ಸರಸದಿ ನಾರಿ ನೀ
ಕೇಳೆಂದು ಭೀಮನು ನುಡಿದನಾಗ ಹೋಗಿ
ಹೇಳು ವಿರಾಟನ ಸತಿಗೆ ಬೇಗ ನಿಮ್ಮ
ಕೀಚಕನಿಗೆ ಹೇಳು ಬರ್ಪೆನೀಗ ಇಂದು
ನಾ ಹೋಗಿ ಗರಡಿಯ ಶಾಲೆಯೊಳಿರುವೆನು
ನೀ ಮಾತ್ರ ಕಳುಹೆಂದು ಹೇಳಿ ಬಾರೆಂದ ॥
ಹೇಳಿ ಬಂದಳು ನಾರಿ ಬಹಳ ಸಂತೋಷದಿ
ನಾಳೆ ನಾ ಸಂಜೆಗೆ ಬರುವೆನೆಂದು ಬೇಗ
ಭೂಪ ಕೀಚಕನಿಗೆ ಬರಹೇಳೆಂದು ಅಕ್ಕ
ಮರೆಯಬ್ಯಾಡವ್ವ ಈ ಮಾತನೆಂದು ಹೇಳಿ
ತಿರುಗಿದಳಾಕ್ಷಣ ತ್ವರಿತದಿ ದ್ರೌಪದಿ
ಭರದಿಂದ ಬಂದಳು ಭೀಮನಿದ್ದೆಡೆಗೆ ॥
ಹೇಳಿ ಬಂದೆನು ನಾನು ನಾಳೆ ಬರುವೆನೆಂದು
ಧೂಳ ಸಂಜಿಲಿ ಗರಡಿಶಾಲೆಯೊಳು ನಿಮ್ಮ
ತಮ್ಮ ಕೀಚಕನಿಗೆ ಬೇಗ ಹೇಳು ಗುಲ್ಲು
ಮಾಡದೆ ಈಕ್ಷಣ ಹೋಗೆಂದಳು ಎಂದು
ಹೇಳಿ ಬಂದಳು ತಾನು ಬಹಳ ಸಂತೋಷದಿ
ಕೇಳಿರಿ ನೀವೆಲ್ಲ ಭೀಮನ ಬಗೆಯ ॥
ಭೀಮಸೇನನು ಆಗ ಕೇಳಿರಿ ತಾಳಿದ
ಕಾಮಿನೀರೂಪವ ಕಪಟದಲ್ಲಿ ತಾನು
ಪ್ರೇಮದಿ ಹೊಂಟನು ಗರಡಿಯಲ್ಲಿ ಖೂಳ
ಕೀಚಕ ಹೊತ್ತನು ನೋಡುತಲ್ಲಿ ಸೂರ್ಯ
ಅಸ್ತವಾದ ಮೇಲೆ ಮಸ್ತಿಕೋಣನ್ಹಂಗ
ಸಿಸ್ತೀಲಿ ಕೀಚಕ ಗರಡಿಗೆ ಬಂದ ॥
ಬಂದಾಕ್ಷಣದಿ ಬಹಳ ಭ್ರಾಂತಿಯಿಂದ ಸಖಿ
ಗೆಂದನು ಕಾಮಿನಿ ಕಾಡುವರೆ ಇಷ್ಟು
ಹೇಳ್ದರೆ ಹುಡುಗಾಟ ಮಾಡುವರೆ ಇಂದು
ಎನ್ನೊಳು ಕೈವಶವಾಗುವರೆ ತಾನು
ಹಮ್ಮಿಲೆ ಮಾತಾಡುತಿರಲಾಗ ಭೀಮನು
ಸುಮ್ಮನೆ ಮಂಚದ ಮೇಲೆ ಕುಳಿತಿಹನು ॥
ಹರಡಿ ಕಂಕಣಕೈಯ ಹಿಡಿದೆಳೆದು ಅವನು
ಮಡದೀ ನೀ ಬಾರೆಂದು ಕರೆಯುತಲಿ ಕುಚ
ಪಿಡಿಯಲಿಚ್ಛಿಸಿದನು ಪ್ರೀತಿಯಲಿ ಚುಂಬ
ನವ ಕೊಡು ಎಂಬ ಸಮಯದಲಿ ದುಡುಕಿ
ದುಡುಕುವ ಸಮಯದಿ ತಡಿರೆಂದು ಹೇಳಲು
ಮಡದಿ ಸೈರಿಸಲಾರೆ ವಿರಹತಾಪವನು ॥
ಚೆಂದುಟಿಯಳೆ ನಿನ್ನ ಚುಂಬನ ಕೊಡುಯೆಂದು
ಮುಂಬಾಗಿ ಸೆರಗನು ಹಿಡಿದೆಳೆದು ಎದೆ
ಗಿಂಬಾಗಿ ತೆಕ್ಕಿಯೊಳಗೆ ಎಳೆದು ನಗೆ
ಯಿಂದಲಿ ಸೀರೆಯ ತಾ ಸೆಳೆದು ಮತ್ತೆ
ಚೆನ್ನಾಗಿ ಭೋಗಕೆ ಎಳೆಯುತಿರಲು ಆಗ
ಇನ್ನೇಕೆ ಅನುಮಾನ ಎಂದನು ಭೀಮ ॥
ಚೆನ್ನಾಗಿ ನಿಮ್ಮಕ್ಕಗ್ಹೇಳಿ ಬಂದಿಯಿಲ್ಲೊ
ಕುನ್ನಿ ಎನ್ನ ಕೈಯೊಳು ಸಿಕ್ಕಿದೆಲ್ಲೊ ನಿನ್ನ
ಸೀಳಿ ಹಲ್ಲು ಮುರಿಗುಟ್ಟೆನಲ್ಲೊ ಮೇಲೆ
ಯಮಪಟ್ಣಕ ನಿನ್ನ ಅಟ್ಟೆನಲ್ಲೊ ಎಂದು
ಬಿರಿನುಡಿಯಿಂದಲಬ್ಬರಿಸೆ ಭೀಮಸೇನನು
ಮರಿ ಆಡಿನ್ಹಾಂಗ ತಾ ನಿಂತನು ಖಳನು ॥
ಗಾರುಡಿಸಿ ಗೆದ್ದು ಪೋಗು ನೀ ನಮ್ಮೊಳು
ಶೂರತನವನಿಂದು ನೋಡುವೆನು ರಣ
ಧೀರನಹುದೆಂದು ನಾ ಆಡುವೆನು ಮಹಾ
ಶೂರನೆಂದು ನಾ ಕೇಳಿದೆನು ಎನ್ನೊಳ್
ಪೂರ ಶೌರ್ಯವನೀಗ ತೋರೆಂದು ಭೀಮನು
ಖೂಳ ಕೀಚಕನಿಗೆ ಕೇಳುತಲಿರ್ದ ॥
ಬೆದರಿ ಬೆಂಡಾಗಿ ಚೇತನಗುಂದಿ ಕೀಚಕ
ಒದರಿದ ತನ್ನಯ ಬಳಗವನು ಈಗ
ಖೂಳನ ಕೈಯೊಳು ಸಿಕ್ಕಿದೆನು ಬೇಗ
ಯಾರರೆ ಬಂದೆನ್ನ ಉಳಿವಿರೇನು ಇಂದು
ಪೂರ ಘಾತವಾದಿತೆಂದು ಕೀಚಕ ತಾನು
ಬೋರ್ಯಾಡಿ ಕಣ್ಣೀರು ತಂದನು ಆಗ ॥
ಕಣ್ಣೀರು ತರುವಂಥ ಕೆಲಸವ ಮಾಡಿದಿ
ಇನ್ಹ್ಯಾಂಗ ಬಿಟ್ಟೀತು ಎಂದ ಭೀಮ ನಿನ್ನ
ಸೀಳಿ ಒಗೆವೆ ನಿನಗೀಗಿಲ್ಲೊ ಕ್ಷೇಮ ಯಮ
ದಾಳಿ ನಿನಗೆ ತಂದಿತೆಂದ ಪ್ರೇಮ ಈಗ
ಬಾಳುಳ್ಳ ಹೆಣ್ಣನು ಕಾಡಿದ ತಪ್ಪಿಗೆ
ಓಡಿ ಬಂದಿತು ನಿನ್ನ ಜೀವಕೆ ಮೂಲ ॥
ಭೀಮನ ಕೈಯೊಳು ನಿನ್ನ ಪ್ರಾಣವಿತ್ತೆಂದು
ಪ್ರೇಮದಿಂದ್ಯಾರ್ಯಾರು ಹೇಳಲಿಲ್ಲೆ ನಿಮ್ಮ
ಅಕ್ಕ ಪಂಚಾಂಗವ ಕೇಳಲಿಲ್ಲೆ ವ್ಯರ್ಥ
ಸಾಯಾಕ ಬಂದೆಲ್ಲೊ ಹುಚ್ಚಮಲ್ಲೆ ಎಂದು
ಬಾರೆಂದು ಮುಂದಕೆ ಕರೆಯಲು ಭೀಮನು
ವಾರಿಗೆ ಹಿಂದಕ್ಕೆ ಸರಿದನು ಖಳನು ॥
ಸರಿದು ಹಿಂದಕೆ ನಿಂತು ತಿರಿಗ್ಹೋಗು ಸಮಯದಿ
ತ್ವರಿತದಿ ಭೀಮಗೆ ಸಿಟ್ಟು ಬಂದು ಖಳನ
ಎರಡು ಕಾಲ್ಗಳ ಬೇಗ ಹಿಡಿದು ನಿಂದು ನೆಲ
ಕ್ಕೊಗೆದು ಸೀಳಿ ಬಿಟ್ಟ ಕ್ರೋಧದಿಂದ ಹೀಗೆ
ಸತ್ತನು ಕೀಚಕ ಎಲ್ಲಿಗೆ ಕಥೆಯನು
ಉತ್ತಮರು ತಿಳಿದು ಕೇಳ್ವುದು ಜನರು ॥
ವಸುಧೆಗೆ ಒಪ್ಪುವ ಎಸೆವ ನವಲಗುಂದ
ಪುರದೊಳಗಿರುತಿಹ ಮೂರ್ತಿಗಳ ಪಂಚ
ಗೃಹದ ಹಿರಿಮಠದ ಕರ್ತೃಗಳ ಪಟ್ಟ
ದೇವರ ಚರಮೂರ್ತಿ ಸ್ವಾಮಿಗಳ ಅವರ
ವರಪುತ್ರನಾದಂಥ ತರುಳ ಬಸವಲಿಂಗನು
ಹರುಷದಿ ಪೇಳ್ದನು ಸರಸದೀ ಕಥೆಯ ॥
* * *
Leave A Comment