ದುಂದುಮೆ ಎಂದೆಂದು ಪಾಡಿರಿ ಜನರೆ
ದುಂದುಮೆ ಬಸವತನ ಹಬ್ಬ ದುಂದುಮೆ
ದುಂದುಮೆ ನಿರ್ದುಮೆ ಸಾಲಗನ್ನಿರೆ
ದುಂದುಮೆ ಕೇಳ್ರಿ ದುಂದುಮೆ ॥
ಶ್ರೀಗುರುವೆ ನಿತ್ಯ ನಿರ್ಮಳ ನಿಜಾವರಣ ಶಿವ
ಯೋಗಿಜನ ಹೃದಯ ಮಂದಿರನೆ ಸಕ
ಲಾಗಮ ಮುಕ್ತಿಯ ಕೊಡುವ ಸುಂದರನೆ ಶಿವ
ಯೋಗ ಧಾರುಣ ಸುಧಾಕರನೆ
ಬೇಗದಿನ್ನುಲಿಯ ಚೆಂದಯ್ಯನಾ ಸ್ತುತಿಗೆ ದಯ
ವಾಗೆಮಗೆ ಕರುಣಸಾಗರನೆ ॥
ಕಲ್ಯಾಣ ನಗರದೊಳಗೆಲ್ಲ ಪ್ರಮಥಾವಳಿಯೊಳು
ಉಲ್ಲಾಸದಿಂದ ಮೆರೆದಿಹನು ಮೆದಿ
ಹುಲ್ಲ ನುಲಿ ಹೊಸೆದು ಮಾರುವನು ಹಾಗ
ದಲ್ಲಿ ಚರತತಿಗೆ ನೀಡುವನು
ಮಲ್ಲ ಶರಹರನ ಧ್ಯಾನದೊಳು ತದ್ಗತನಾಗಿ
ಅಲ್ಲಮನ ಬರವ ಬಯಸುವನು ॥
ಲಿಂಗಾಂಗ ಸಮರಸದೊಳಂಗಮನಭಾವದಲಿ ಸ
ರ್ವಾಂಗಮಯ ಲಿಂಗಿ ತಾನಾಗಿ ಈತ
ರಂಗ ಭೋಗವನೆಲ್ಲ ನೀಗಿ ತಾನು
ಮಂಗಳಾತ್ಮಕ ಮಹಿಮನಾಗಿ
ಲಿಂಗಾರ್ಚನೆಯ ಬಾಹ್ಯದಲ್ಲಿರಿಸಿ ಜಂಗಮ
ಹಿಂಗದರ್ಚಿಸುವ ನಿಜವಾಗಿ ॥
ಹರನು ತಾನರಿದು ಈ ತೆರನ ಪ್ರಮಥರ ಮುಂದೆ
ಭರದಿಂದೆ ನೋಡಬೇಕೆಂದು ತಾನು
ಶರಣ ಸೇವೆಯ ಮಾಡಲೆಂದು ಇರದೆ
ಶರಣ ಮೆದಿ ಕೊಯ್ಯುತಿರಲಂದು
ಉರದ ಲಿಂಗವು ಸಡಿಲಿ ಕೆರಿಯೊಳಗೆ ಬೀಳೆ
ಶರಣ ನಡೆಯಲು ಲಿಂಗ ಬಂದು ॥
ಯಾಕೆ ನುಲಿಯ ಚೆಂದಯ್ಯಕೆ ದೃಢಭಕ್ತನೆ
ಯಾಕೆನ್ನನಗಲಿ ಹೋಗುವರೆ ಗುರುವಿ
ನೈಕ್ಯದುಪದೇಶ ಮೀರುವರೆ ನಿಮಗೆ
ಏಕಾತ್ಮರುಗಳು ಮೆಚ್ಚುವರೆ
ಬೇಕೆಂದು ಜಲದೊಳಗೆ ಬಡಲಿಂಗವ ಬಿಟ್ಟು
ಧಿಕ್ಕರಿಸಿ ನೀನು ಹೋಗುವರೆ ॥
ತೆರಹಿಲ್ಲದಿಹ ಘನವು ಶರಧಿಯೊಳು ಮುಳುಗಲ್ಕೆ
ಬರಿದೆ ಬಣ್ಣಿಸಲ್ಯಾತಕಯ್ಯ ನಾನು
ಇರದೆ ಪೂಜಿಸಲಾರೆನಯ್ಯ ಇನ್ನು
ವರವ ಬೇಡುವರ ಕೂಡಯ್ಯ
ಚರವರತೃಪ್ತಿಗೆ ತಡೆವುದೆಂದು ಭರದಿಂದೆ
ಹೊರೆ ಹೊತ್ತು ನಡೆದ ಚೆಂದಯ್ಯ ॥
ಇಂದುಧರ ಹೆದರಿ ಮೊದಲಂದಗಳನಡಗಿಸುತ
ಮುಂದೆ ಪುರುಷಾಕಾರವಾಗಿ ಬಿಡದೆ
ಚೆಂದಯ್ಯನ ಸೆರಗ್ಹಿಡದ ಹೋಗಿ ಆತ
ಮುಂದಕ್ಕೆ ನಡೆದ ಶಿರಬಾಗಿ
ಇಂದು ಪ್ರಭುರಾಯನಾಣೆ ಎನಗಾವ ಗತಿ
ಹೊಂದಿಸಿ ಹೋಗೊ ನಿಜವಾಗಿ ॥
ಯಾಕ ಮಡಿವಿಲಿ ಬಿದ್ದಿ ಯಾಕ ಬೆನ್ನಿಲಿ ಬಂದಿ
ಯಾಕ ಕಾಡಿದಿ ದೇವಯೆಂದ ಎನ್ನ
ಧಿಕ್ಕರಿಸಿ ಹೋಗುವದು ಚೆಂದ ಇಬ್ಬ
ರೇಕಾಕಿಯಾಗಿ ತರ್ಕೈಸುವದೆಂದ
ಆ ಕರುಣದಿಂ ಮಡಿವಾಳ ಮಾಚಿತಂದೆ ಬರೆ
ತಾ ಕಂಡು ಹರ ಮುಂದೆ ನಿಂದ ॥
ಕಡಲಜನ ಧರಿಸಿದೆನ್ನೊಡನೆ ಸಮರಸವಾದ
ಮಡಿವಾಳ ತಂದೆ ಕೇಳ್ ಮಾತ ಈತ
ದೃಢಭಕ್ತ ಚೆಂದಯ್ಯನೀತ ಲಿಂಗ
ಸಡಲಿದರೆ ತಗಿಯ ಪ್ರಖ್ಯಾತ
ಬಿಡದರ್ಚಿಸುವ ಘನಬಿಟ್ಟು ನಡೆವುದು ನೀತೆ
ಒಡನೆ ಕೇಳಿನ್ನು ಬಲ್ಲಾತ ॥
ಮೃಡನು ಪೇಳ್ವುದ ಕೇಳಿ ಮುಗುಳನಗೆಯನೆ ನಕ್ಕು
ಮಡಿವಾಳ ಸ್ವಾಮಿ ತಾ ಬಂದ ಶರಣ
ರಡಿಗೆ ಸಾಷ್ಟಾಂಗ ಶರಣೆಂದ ಬಿಡದೆ
ದೃಢಭಕ್ತಿಯಲಿ ಬಂದು ನಿಂದ
ಅಡಿಯಿಡಲ್ ಬಾರದಾಕ್ಷಣ ಲಿಂಗವನಗಲಿ
ನಡೆವುದೆಂತೆನಗೆ ತಿಳುಪೆಂದ ॥
ಲಿಂಗಮಧ್ಯದಿ ಜಗವು ಜಗವೆಲ್ಲ ಲಿಂಗಮಯ
ಹೀಂಗಿರುವುದೆಂತೆನ್ನಿರಯ್ಯ ಪ್ರಾಣ
ಲಿಂಗವೇಕಾತ್ಮವೆಂದರಿಯ ಈತ
ಭಂಗಿಸಿದನೊಂದು ಪರಿಯ
ಜಂಗಮಾರ್ಚನೆಗೆ ತತ್ಪ್ರಾಣವಾಗಿರೆ ಲಿಂಗ
ವಂಗವಾಗಿರುವದೇನಾಶ್ಚರ್ಯ ॥
ಶರಣರಿಗೆ ಪ್ರತಿ ಉತ್ತರವೆ ನಾಯಕ ನರಕ
ಇರದೆ ನಾನಂಜುತಿಹೆನಯ್ಯ ನಿಮ್ಮ
ಕರದೀಶನಲ್ಲವೆ ಜೀಯ ಆವ
ಪರಿಯಾದಡೇನು ಹಿಡಿಕೈಯ
ಚರರೂಪವಾದಡೊಲ್ಲೆನು ನಾನು ಪರಶಿವನು
ಪರಮ ಗಾವುದಿಯಾದೆನಯ್ಯ ॥
ಮಿಡಿವಡೆದ ಬೆರಳುಗಳು ಬಿಡಿಬಿಟ್ಟ ತೊಡೆತೋಳು
ನಡು ಡೊಂಕ ಬಂಕುಣಿಯ ಕಾಲು ಹಲ್ಲು
ಕಡು ದೊಡ್ಡ ಮೀಸೆ ತುಟಿ ಜೋಲು ತೋಳು
ನಿಡಿದಾದವೊಡಲು ಹಿರಿಕೇಲು
ಉಡುಗೆ ಅರ್ಧವನುಟ್ಟು ನಡುವಿಗರ್ಧವ ಸುತ್ತಿ
ಉಡುಪದರು ಗಾವುದಿಗೆ ಮೇಲು ॥
ಶರಣಲಿಂಗವನೊಂದು ಮಾಡಿ ಮಾಚಯ್ಯಗಳು
ಭರದಿಂದ ತಾವತ್ತ ಪೋಗೆ ತಮ್ಮ
ಶರಣ ನುಲಿಹೊಸೆದು ಮಾರಿ ತಾ ಬೇಗ
ಅರಮನೆಗೆ ನಡೆತಂದರಾಗ
ಹರನು ಸಣ್ಣದೊಡ್ಡ ಸಪ್ಹುರಿಯ ಗಂಟಿಕ್ಕಿ
ಭರದಿಂದ ನುಲಿ ಹೊಸೆದನಾಗ ॥
ಕಲ್ಯಾಣಕೇರಿಯೊಳಗೆಲ್ಲ ಜನರಿಗೆ ತೋರಿ
ಒಲ್ಲೆನೆಂಬುತ ಕೂಡಲು ತಿರಿಗಿ ನುಲಿಯ
ನಲ್ಲಲ್ಲಿ ತೋರಿ ಮನ ಮರುಗಿ ಬಸವ
ನಲ್ಲಿಗೈತಂದು ಮನ ಸೊರಗಿ
ನಿಲ್ಲದೆ ನುಲಿ ಕೊಳ್ಳಿರೆಂದು ಮುಂದಿಡಲು
ನಿಲ್ಲು ದಾರೆಂದು ಮನ ಕರಗಿ ॥
ಏನು ಹೇಳಲಿ ವೃಷಭ ಮೇಲು ದೇಶದೊಳೊಂದು
ಕಾನನದ ಪಳ್ಳಿ ಶಿವಪೂರ ಗೌಡ
ಏನಿಮಯ್ಯನ ಹುಡುಗ ಪೋರ ಕರಣಿ
ಕನು ತಲೆಯಿಲ್ಲದವನು ಅವಿಚಾರ
ಏನೆಂಬೆವೂರ ಆಚಿಲೆನ್ನ ಹೆತ್ತವರ
ಮೌನದ್ಹುಲಿ ತಿಂತು ಗಂಭೀರ ॥
ಅಮ್ಮವ್ವೆ ಎಂಬಾಕಿ ಆಕ್ಷಣದಿ ಕರೆದೊಯ್ದು
ಸಮ್ಮತದಿ ಸಲಹಿದಳು ಎನ್ನ ಹೇರೂರ
ಬೊಮ್ಮನೆಂದ್ಹೆಸರಿಡಲು ಎನ್ನ ಹೆರ ಜನರು
ಒಮ್ಮನದಲಾಡಿಸಲು ಎನ್ನ
ತಮ್ಮ ತಮ್ಮನೆಗೆ ಕರೆದೊಯ್ದು ಅನ್ನವನಿಕ್ಕೆ
ದಮ್ಮಾಯ್ತು ಹೊಟ್ಟಿಗುಣರಣ್ಣಾ ॥
ಮದುವೆಗೋಸ್ಕರವಾಗಿ ಸದ್ಭಕ್ತ ಚಂದಯ್ಯನ
ಸದನಕ್ಕೆ ಆಳಾದೆನಲ್ಲಾ ಸತ್ತ
ರುದಕ ನೀಡನು ಮುದುಕ ಹೊಲ್ಲ ಎನಗೆ
ಹೊದಿಯಲಿಕ್ಕೆ ಅರಿವಿ ಮುನ್ನಿಲ್ಲ
ಮೆದಿಯ ಕೊಯ್ಯುತ್ತಿರಲು ಮಡುವಿನೊಳು ನೂಕಿ
ದನು ಮದನಾರಿ ಕೇಳ್ ಭಕ್ತ ಸೊಲ್ಲ ॥
ಶರಣರಾಳಾಗಲ್ಕೆ ಪರಿಭವಂಗಳು ತಪ್ಪಿ
ಇರದೆ ನಿಜಮುಕ್ತಿ ನಿನಗಹುದು ನೀನು
ಶರಣ ಸೇವೆಯನಗಲದಿಹುದು ನಿತ್ಯ
ಹುರಿಮಾಡಿ ನುಲಿಯ ತಂದಿಹುದು
ಇರದೆ ಹಾಗವನೈದು ಶರಣರಿಗೆ ಕೊಟ್ಟು ನ
ಮ್ಮರಮನೆಯೊಳುಂಡು ಸುಖಿಯಹುದು ॥
ಎಂದು ಸನ್ಮತ ಮಾಡಿ ಬಸವರಾಜೇಂದ್ರ ತಾ
ಮುಂದೆ ಸಾಸಿರ ಹೊನ್ನ ಕೊಟ್ಟು ನುಲಿಯ
ಚಂದದಿಂದರಮನೆಯೊಳಿಟ್ಟು ಹರನು
ಬಂದು ಬಲು ಸಂತೋಷಬಟ್ಟು
ಚೆಂದಯ್ಯ ಶಿವಧ್ಯಾನದೊಳಗೆ ಇರುತಿರಲಾಗ
ಮುಂದೆ ಸುರುಹಿದ ಗಂಟು ಬಿಚ್ಚಿಟ್ಟು ॥
ಹೊನ್ನು ಕಾಣುತ ಶರಣ ಗನ್ನಘಾತಕ ಮಾಡಿ
ಕನ್ನವಿಕ್ಕಿದನೆಂದು ತಿಳಿದು ಎಲವೊ
ಇವನೆಲ್ಲಿ ತಂದೆ ಮನೆಯಳಿದು ಬಸವ
ತನ್ನ ಭವನಕೆ ಕೊಟ್ಟನೊಲಿದು
ಇನ್ನು ಸಾಕಯ್ಯ ಇವ ಕೊಟ್ಟು ನುಲಿ ತಾಯೆಂದು
ಮುನ್ನ ಕಳುಹಿದ ಕೋಪ ಬಲಿದು ॥
ಬಸವ ಕೇಡು ಬಂತು ನುಲಿಯ ತಾರೈಯೆಂದು
ಅಸಮಾಕ್ಷ ಬಂದು ತಾ ನಿಂದ ಚೆನ್ನ
ಬಸವೇಶ ಪ್ರಮಥಗಣ ವೃಂದ ಸಹಿತ
ಅಸಮ ಭಕ್ತನ ಮನೆಗೆ ಬಂದ
ಜಸವೆತ್ತ ಜಂಗಮಪ್ರಾಣಿ ಸದ್ಗುಣಶ್ರೇಣಿ
ವಸುಧಿಪಾಲಿಪನೆ ಸಲಹೆಂದ ॥
ಬಸವೇಶ ಪ್ರಮಥಗಣ ನಿಕರದೊಳು ಅನುಭಾವ
ಅಸಮಗುರು ಚೆಂದಯ್ಯನೆಂದ ಆತ
ಗುಸುರಲಳವಲ್ಲ ನಾವೆಂದು ಚೆನ್ನ
ಬಸವೇಶ ಬಲ್ಲ ಇದನೆಂದು
ಕುಶಲನಿಧಿಕೇಳಿ ಅವರಂದಮಂ ದೃಷ್ಟಮಂ
ವಸುಧಿಪಾಲಿಪನೆ ಸಲಹೆಂದ ॥
ನೆರೆದ ಜನಸಂದೋಹಕ್ಕೆರಗಿ ಬಿನ್ನೈಸುತಲಿ ಪರಿ
ಪರಿಯ ಪ್ರಮಥತತಿಗೂಡಿ ಪ್ರಭುವಿ
ಗಿರದೆ ಪಾದಾರ್ಚನೆಯ ಮಾಡಿ ಗಣಕೆ
ಪರಮಾನ್ನ ಭಕ್ಷ್ಯವನು ನೀಡಿ
ಚರಣೋದಕದಿ ನುಲಿಯ ಸುವರ್ಣವನು ಮಾಡಿ
ಚರಕೆ ಕೊಡಲು ಜನರು ಕೊಂಡಾಡಿ ॥
ದಶಭುಜವು ಪಂಚಮುಖಿ ಮಿಸುಪ ಕಿಡಿಗಣ್ಣಿನಿಂದ
ಅಸಮ ಪ್ರಭು ತನ್ನ ನಿಜದೋರಿ ಸುರಿವ
ಕುಸುಮದ ಮಳೆ ಸೂಳೈಪ ಭೇರಿ ರವದಿ
ಎಸೆವ ಸಾಂಬವನೊಯ್ದ ಸಾರಿ
ಜಸವೆತ್ತ ಕರ್ಪುರೇಶನ ಕರುಣದಿಂ ಚೆನ್ನ
ಬಸವ ಸಾರಿದನು ನಲವೇರಿ ॥
* * *
Leave A Comment