೧
ಕುಲದ ಹೆಮ್ಮೆ, ನೆಲದ ಹೆಮ್ಮೆ,
ಎಲ್ಲ ಮಾಯೆ;
ಬರಿಯ ತಿರುಳುಗೆಟ್ಟ ನೆರಳು,
ಟೊಳ್ಳು ಛಾಯೆ.
ಬಿದಿಯ ಸರಳಿಗಿರದು ಸರಳು!
ಕರಗಲರಿದು ಜವನ ಕರುಳು!
ಮುಡಿಯ ನೆತ್ತಿ,
ಹಿಡಿದ ಕತ್ತಿ
ಪುಡಿಯೊಳೆಲ್ಲ ಕಡೆಯೊಳುರುಳಿ
ಮಣ್ಣು ತಿಂದು ಪೋಪವು;
ಹೊಲದ ಕತ್ತಿ ಬನದ ಕೊಡಲಿ
ಯೊಡನೆ ಒಂದೆಯಾಪವು!
೨
ಕತ್ತಿ ಹಿಡಿದು ಕೆಲರು ಗೆಲ್ಲ
ಬಹುದು ರಣದಲಿ;
ಮೆರೆಯಬಹುದು ಸಿರಿಯನೆಲ್ಲ
ಕೊಂದ ಕಣದಲಿ.
ಆದರೇನು? ನರವು ಹರಿದು
ಬೀಳರೇನು ಸೊಕ್ಕು ಮುರಿದು?
ಇಂದು ನಾಳೆ,
ಬಹುದು ವೇಳೆ:
ಸುಮ್ಮನಹರು ಮಾತು ಸತ್ತು
ರಣದ ಕೀಳುಬದಿಯಲಿ;
ಬೀರರೆಲ್ಲ ಸವಿಯ ತುತ್ತು
ಜವಗೆ ತುತ್ತತುದಿಯಲಿ!
೩
ಹಣೆಯ ಮೇಲೆ ಜಸದ ಮಾಲೆ
ಬಾಡದಿರುವುದೆ?
ಹಿರಿಯ ಗೆಯ್ಮೆ ಗೈದ ಮೈಮೆ
ಬೀಳದಿರುವುದೆ?
ಗೆದ್ದು ಬಿದ್ದ ಬೀರರೆಲ್ಲಿ?
ನೋಡು, ಜವನ ದಾಡೆಯಲ್ಲಿ!
ಎಲ್ಲ ಕಡೆಗೆ
ಮಸಣದೆಡೆಗೆ!
ನಾವು ಗೈದ ಸೈಪದೊಂದೆ
ಕಟ್ಟಕಡೆಯೊಳುಳಿವುದು!
ಪುಡಿಯೊಳಿಳಿದು ಹೋದಮೇಲೆ
ಮೊಳೆತು ತಳಿತು ನಲಿವುದು!*
* ಜೆ.ಶರ್ಲಿ ಕವಿಯ “Death the Leveller” ಎಂಬುದರ ಅನುವಾದ.
Leave A Comment