೧
ತಾಳವಿಲ್ಲದಲೆ ಬೇತಾಳನಂದದಿ ಕುಣಿತ
ಕಾಳ ನತರ್ಕನ ಕಾಲ್ಕೆಳಗೆ ತೊತ್ತುಳಿಗೊಂಡು
ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿಗಿದಿರಾಗಿ ಬಂದು ನಿಂದು
ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು
ಬೀಳುಗಳ ಬದಿಬದಿಗೆ ಬೀಳುಗಳ ಬಾಳುಗಳು
ಕಾಳ ರಕ್ಕಸನ ಕಡೆಕೂಳು – ಬಾಳಕವಾದ ನಾಡ ನಡುಮನೆಯ ಕಂಡೆ.
೨
ಕನಸೆನಲೊ, ಕಾಡು ಪಾಲಾದ ಭೂಪಾಲಕನ
ಮನಸೆನಲೊ, ಮೋಡದೊಳು ಮೂಡಿ ಮುಸುಳುವ ಚಿತ್ರ –
ವೆನಲೋ, ಕಂಪಡಗಿ ಪೆಂಪುಡುಗಿ ಬಣ್ಣವು ಕೆಟ್ಟ ನಿರ್ಮಾಲ್ಯ ಮಾಲೆಯೆನಲೊ?
ನೆನಸಿ ಕೃತಕರ್ಮ ಪಶ್ಚಾತ್ತಾಪದಿಂದ ಬೆಂದು
ಜನಿಸಿ ಸುಜ್ಞಾನ, “ಉದ್ಧಾರ ಮಾಡಿರಿ” ಎಂದು
ಮನಸಿನಿಂದೆರಗಿರುವನೆನಲೊ – ಪಾತಕಿ ಬಂದು ಪಾವನನ ಚರಣಗಳಿಗೆ.
೩
ಬಿದ್ದ ರಾಜ್ಯವಿದಲ್ಲ ಉದ್ಬುದ್ಧವಾಗಿದ್ದು
ಎದ್ದ ರಾಜ್ಯದ ಮೊಳಕೆಯಿದು, ಇದರ ಬಳಿಯಲ್ಲಿ
ಇದ್ದು ಸಂಜೀವನದ ಜಪಿಸುವಂತಹ ಯೋಗಿ ಕೊಂಪೆ ಹಂಪೆಯು ಇದಲ್ಲ.
ಬುದ್ದಿಯೆಣಿಸಿತು, ಅಂತರಂಗದಧಿನಾಯಕನು
ಸುದ್ದಿಯನು ಸೂರುವೊಲು ಬುದ್ದಿಯನು ಮೀರುವೊಲು
ಎದ್ದು ಹೇಳಿದನೊ ತಾ ಕನಕನೊಡೆಯನು ಪೇಳ್ದ ಶುದ್ಧ ಮುಂಡಿಗೆಯಿದೆಂದು.
೪
ಕರ್ಮಯೋಗಿಯ ಬಳಿಗೆ ಯೋಗೀಶ್ವರನು ನಿಂದು
ಕರ್ಮದ ಅಕರ್ಮದೊಳ ಮರ್ಮಮಂ ತಿಳಿಸಿ ಸದ್ –
ಧರ್ಮಮಂ ಸತತ ನಡೆಸಿದರೆ, ಧ್ರುವವಿಜಯವೆಂದಂದು ತೋರಿಸಿದ ತೆರದಿ.
ಧರ್ಮ – ಕರ್ಮದ ಪುರಾತನ ಪುರಗಳಿವು ಪೂರ್ವ
ಧರ್ಮ ಬಲದಿಂದೇರಿ ಕರ್ಮಬಲದಿಂದಿಳಿದು
ಮರ್ಮದೊಳು ನೆಡುವಂತೆ ಸಪ್ರಯೋಗಿಕಮಾಗಿ ಕಲಿಸುವವು ತತ್ವೆವೆಂದು.
ಅಂಬಿಕಾತನಯದತ್ತ
—-
ಆಕರ: ಅಂಬಿಕಾತನಯದತ್ತರ ಸಮಗ್ರಕಾವ್ಯ, ಬೇಂದ್ರೆ ಜೀವನ ಮಹಾಕಾವ್ಯ, ಔದುಂಬರ ಗಾಥೆ, ದಶರ್ನ, ಸಂಪುಟ ೨, ಸಂಪಾದಕರು : ವಾಮನ ಬೇಂದ್ರೆ, ವರಕವಿ ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳ್ಳಿ ೫೮೦ ೦೩೦.
Leave A Comment