ನಿತ್ಯ ಈ ಬಗೆಯೊಳು ಪ್ರಳಾಪಿಸುವಳ ಕಳ್ಳೆ | ಮತ್ಯಾಕೆ ಎಂದು ನೀ ಕೇಳು |
ಮೆಚ್ಚಿಕೊಂಡಿರುವಳು ಮಂತ್ರಿಯ ಮಗನನು | ಸಿಕ್ಕದೆ ಸಮಯವೆಂದೆನುತ || ೧೨೧ ||
ರಾಯ ವಿಜಯೇಂದ್ರ ತಾನೊಂದು ದಿನದೊಳು | ಹೋದನು ಬೇಂಟೆ ಸಂಭ್ರಮದಿ |
ಕೂಡಲು ಕುಮುದಿನಿಗೆ……………………… | ಹೊಳಲೊಳು ಗೃಹ ತಾ ಹೊಕ್ಕ || ೧೨೨ ||
ರಾಯನು ಜಯಸೇನ ಹಜಾರದೊಳಗೆ ಕುಳಿತು | ವಾಲಗಗೊಡುವ ಸಂಭ್ರಮದಿ
ಸೇರದೆ ಸಖಿವೊಬ್ಬ ದಾಸಿಯು ಪರಿತಂದು | ಕುಮಾರನ ಕರ್ಣಕ್ಕೆ ಉಸಿರೆ || ೧೨೩ ||
ಕೇಳಲು ಬಹು ಕರ್ಮ ಭವಗೆ ಬರದಂತೆ | ನಿರ್ಣಯ ಮಾಡಿಸುವೆ ಇರ್ವರನು
ಮೂರಾರು ಬಾಗಿಲ ದಾಂಟಿ ಬರಲು ಕರ್ಮ | ಜ್ಞಾನ ಕೂಡಲು ಪುತ್ರನಿಗೆ || ೧೨೪ ||
ಹಸು ಹಾಲು ಕೊಡುತಿಹುದು ಶಿಶು ಕೃಪೆಬಡುವುದು | ಮುಸುಡಿ ಮೂಳಿಗೆ ಯಾಕೆ ಕರ್ಮ |
ಹೆಸರನ್ನ ಜಯಸೇನ ಹೊರಸಲ್ಲ ಕರ್ಮವನು | ಅಸದಳವವರಿಗೆ ತರುವೆ || ೧೨೫ ||
ಕಂಡ ಗೌಡೆರು ಬಂದು ಮುಂದಕ್ಕೆ ಕುಮುದಿನಿಗೆ ಪೇಳೆ | ಕಂಡಿರ್ದ ಅಲ್ಲಿ ಯಮಪುರವ |
ಕಂಡಯ್ಯ ಇರಿಕೊಂಡ ಬಂದ ಕುಮಾರನು ದಯ | ಬಂದು ಮರಳಿದನು ಹಿಂದಕ್ಕೆ || ೧೨೬ ||
ಕೆಟ್ಟೆ ಬೆಂದೆನು ಎಂದು ಕುಟ್ಟಿಕೊಳ್ಳುತ ಎದೆಯ | ಇಟ್ಟುಕೊಂಬೆನು ಕೊರಳಾಗುರುಳ |
ಸೃಷ್ಟಿಪಾಲಕ ಬಂದ ಹೊಕ್ಕು ಗಳಿಗೆಯನ್ನು | ಸುಟ್ಟರು ಎಣ್ಣೆ ಸೀಗೆಯಲಿ || ೧೨೭ ||
ಅಳಿಯಬ್ಯಾಡೆಲೆ ನಿನ್ನ ಉಸುರೋದ ಬಳಿಯಲ್ಲಿ | ಕೊಡುವೆ ಪ್ರಾಣವ ಎನಲು ಮಂತ್ರಿ |
ಹಗೆಯಿಟ್ಟು ದೊರೆಮಗನ ಹಲವು ತಂತ್ರವ ಮಾಡಿ | ಯಮನ ಪಟ್ಟಣಕೆ ಸಾಗಿಸುವೆ || ೧೨೮ ||
ಬಡವನ ಹಗೆಯೊಳು ನರರಿಗೆ ಉಳುವೇನೊ | ಹೆದರಬ್ಯಾಡೆಂದು ಎದೆ ಧೈರ್ಯ |
ದೊರೆ ಬರುವೆ ಸಮಯಕೆ ಗರಗಾಳಿ ಪಿ[ಡಿ]ದಂತೆ | ಹೊರಳಿದರೆ ಮಗನ ಕೊಲ್ಲುವನು || ೧೨೯ ||
ವಿಜಯೇಂದ್ರರಾಯ ಬೇಂಟೆ ತೀರಿ ಊರಿಗೆ ಬರಲು | ಭೇರಿ ಕಹಳೆ ರಭಸದಲಿ |
ರಾಣಿಗೆ ಸರಿದೋರೊ ಗಾನವುಗಳೆಂದು | ಓಡಾಡುತಿರಲು ರಾಯನೆಡೆಗೆ || ೧೩೦ ||
ಇರವೇನು ಪಾಪಿಷ್ಠೆ ಎನುತ ನದರುಗೆಡುತಲಿ ರಾಯ | ಒದಗಿ ಬರಲು ಅರಮನೆಗೆ |
ರಮಣನ ಕಾಣುತ್ತ ಹೊರಳುತಿರಲು ರಂಡೆ | ಅಳಿದಂತ ಸ್ವರವ ತಪ್ಪಿದಳು || ೧೩೧ ||
ಕೃತಕವೆಂದರಿಯದೆ ಮತಿಗೇಡಿ ರಾಯನು | ಅತಿ ಅಳಿದಳೆಂದು ಮುಖವಡಿಯ |
ಅತಿದುಃಖಗೊಳುವಾಗ ಬಂದನು ಮಂತ್ರೀಶ | ಸನ್ಮತ ಪೇಳುವ ರಾಯನಿಗೆ || ೧೩೨ ||
ನಾಯಳಿಯೆ ಶೋಕವ ಮಾಡಸಲ್ಲದು ರಾಯ | ಬಾರಳೆ ಬೇಕೆನಲು ಹೆಣ್ಣು |
ಏ ನನ್ನ ಇಂತಪ್ಪ ಪ್ರಾಣಪದಕವು ಹೋಗೆ | ನಾ ಬೇರೆ ಉಳಿಯೇನು ಇಲ್ಲಿ || ೧೩೩ ||
ಬೇಡಯ್ಯ ಚಂದ್ರ ಪೋಗಿಲ್ಲ ಪರಮಾತ್ಮ | ಮಾಡೇನು ಮದ್ದು ಮಂತ್ರವನು |
ಕೇಳಿದಾ ಮಂತ್ರಿಯು ಕುಮುದಿನಿ ಕೇಳು | ಬೇಡಿದೊಸ್ತವ ತರಿಸಿ ಕೊಡುವೆ || ೧೩೪ ||
ಎದ್ದಳು ರಣಮಾರಿ ದುರ್ಗಿಯಂದದಿ ಕುಳಿತು | ದೊಡ್ಡ ನಯನಗಳನು ತೆರೆದು |
ದೇವೇಂದ್ರ ಲೋಕದ ಪಾರಿಜಾತವ ಹೂವು | ಇತ್ತರೆ ಹೋಗುವೆ ಸಂದುದು ಗಹವು || ೧೩೫ ||
ಅಳಿದಳೆನುತಲಿ ರಾಯ ಅಳುತಿರ್ದ ನೀ ಬೇಗ | ತರಿಯಯ್ಯ ಪಾರಿಜಾತವನು |
ಸುರಲೋಕದ ಹೂವನು ತಂದವಗೆ ನಾನಾಳ್ವ | ಧರಣಿಯೊಳರ್ಧವ ಕೊಡುವೆ || ೧೩೬ ||
ಸುರಲೋಕ ಕಾಂಬರೆ ನಮಗೆ ಸಾಗದು ಎಂದು | ಪರಿವಾರವೆಲ್ಲ ಕರಮುಗಿಯೆ |
ಮರಳಿ ಪೇಳಿದ ಮಂತ್ರಿ ಮಗ ಹೊರತು ಮಿಕ್ಕವರು | ತರುವದಕೆ ಮೇಘವಾಹನವೆ || ೧೩೭ ||
ರಾಯನು ಕರೆಸಿದ ಕುಮಾರನ ಬೇಗದಿ | ಬೇಡುವುದು ಪಾರಿಜಾತವನು |
ತಾಯಿತಂದೆಯ ಪ್ರಾಣ ಕಾಯಬೇಕೆಂದರೆ | ಹೋಗಬೇಕೆಂದನಾ ಪಿತನು || ೧೩೮ ||
ಜನನಿಯ ಅನುವಿಂಗೆ ತನುವ [ನೀಯದ] ಮಗ | ನಿರ್ದು ಫಲವೇನೋ ಭೂಪ |
ಕರಮುಗಿದು ತರುವೆನು ದಿನವೇಳರೊಳಗಾಗಿ | ನಡೆಯಲು ಜಯಸೇನರಾಯ || ೧೩೯ ||
ತಿಳಿದೇನೊ ಕರಬಲ ಮಾಡಿದ ಬುದ್ಧಿಯ ರಾಯ | ತರಳೆ ಮಾಡಿದ ಕಾಲಗತಿಯ |
ನರಲೋಕ ಯಾವಲ್ಲಿ ಸುರಲೋಕ ಕಂಡವರು | ಮರಳುವರೆ ಮರ್ತ್ಯವ ಜನರು || ೧೪೦ ||
ಪಾರಿಜಾತದ ದೇವೇಂದ್ರಲೋಕದಿ ತರಲು | ಕೋಟಿ ರಾಕ್ಷಸರು ಆ ವನಕೆ |
ಹೊಲವನು ಹೋಗುವ ಮೇಲ್ಗೆಯ ಲಾಲಿಸು ಭೂಪ | ಕುಮಾರಗೆ ಬರುವ ಸಂಪದವ || ೧೪೧ ||
ರಾಯನು ಜಯಸೇನ ಏರಿದ ವಾಹನವ | ವಾಯುಗಮನದಿ ಬರುತಿರಲು |
ದಾರಿಯೊಳು ಮತ್ತೊಂದು ಮಂದಾಕಿನಿ ಪಟ್ಟಣವುಂಟು | ಹಾಳಾಗಿ ಸುವರ್ಣಮಯವು || ೧೪೨ ||
ಲಯವಾದ ಕತೆ ಬೇರೆ ಮುನಿದು ಶಾಪದಿ ಒಬ್ಬ | ದನುಜನು ಜನಿಸಿ ಆ ಪುರವ |
ನರರನು ಸಂಹರಿಸಿ ಮದಸೂದರಾಯನ | ತನುಜೆಯ ಒಳಕೊಂಡಿಹನು || ೧೪೩ ||
ಪುರವನು ಕಾಣುತ ಶಿರತೂಗಿ ಕುವರನು | ಹರವಿಹುದು ಹೊನ್ನ ಬೆಳ್ಳಿಗಳು |
ನರರ್ಯಾಕೆ ವರ್ಜಿತವು ಪರಿಯ ನೋಡುವೆನೆಂದು | ಒಳಹೋಗಲು ಸ್ತ್ರೀಯು ಶೋಕದಲಿ || ೧೪೪ ||
ಕರುವಾಡದೊಳು ನಾರಿ ಸ್ವರದಿ ಕೋಗಿಲೆಯಂತೆ | ಹರನಿಗೆ ಮೊರೆಯಿಡುತಿರಲು |
ಪುರದ ಲಕ್ಷ್ಮಿಯು ಈಕೆ ಮರುಳು ಪಿಡಿಯೆ ಇಂದು | ಶಿರದೂಗಿ ನೋಡೆ ಗೃಹದೊಳಗೆ || ೧೪೫ ||
ಮದನಮೋಹಿನಿ ಕಂಡು ಬಿದಿಗೆ ಚಂದ್ರನ ಪೋಲ್ವ | ಜಯಸೇನರಾಯ ಕುವರನ |
ಮರೆದಳು ಶೋಕವ ಕಿ[ಟಿ]ಗೆ ಒತ್ತಿಗೆ ಬಂದು | ತರಳೆ ನೋಡಿದಳು ನಯನದಲಿ || ೧೪೬ ||
ಹರಿಬ್ರಹ್ಮ ಹರನೋ ಈತ ಉರಿಗಣ್ಣನೊಳ್ಳಿದ | ತರಳ ಬಂದನೊ ಮನಸಿಜನೊ |
ನೆರೆ ನಾಚಿದಂತೆ ನೋಡುವ ನಾರಿಯ ಕಂಡು | ನುಡಿಸಿದ ಜಯಸೇನರಾಯ || ೧೪೭ ||
ದುಃಖ ಯಾತಕೆ ಮಾಳ್ಪೆ ನೀ ವೃತ್ತಾಂತವಡೆ ಎನಗೆ | ಹೊತ್ತು ಹೋಯಿತು ಮುಂದೆ ಪಯಣ |
ಪಕ್ಷಿವಾಹನನಾತ್ಮ ಎತ್ತಿಕೊಂಡರು ಬೆಳಗು | ಮುಟ್ಟಿಕೊ ತುಸು ಮಾತ್ರ ಪೇಳ್ವೆ || ೧೪೮ ||
ಮಧುಸೂಧನ ರಾಯನ ತನುಜೆಯು ನಾನು | ಮದನಮೋಹಿನಿಯೆಂದು ಪೆಸರು |
ದನುಜನ ಕಾಲಿಂದ ಲಯವಾಗಿ ಈ ಪುರವು | ಎನಗಾಗಿ ಕಾಯ್ದುಕೊಂಡಿಹನು || ೧೪೯ ||
ರಕ್ಕಸನ ಕೈಯೊಳಗೆ ಸಿಕ್ಕುವಳಾ ವ್ರತಭಂಗ | ಕೆಟ್ಟುದು ಎನುತ ತೋರುವುದು |
ಸೃಷ್ಟಿ ಪಾಲಕ ಕೇಳೊ ಶ್ರೀ ಗೌರಿಯೊಪ್ಪಿದಳೆಂದು | ಗೊತ್ತು ಮಾಡಿದೆ ಆರು ವರುಷ || ೧೫೦ ||
ಉಪಚಾರದಿಂದವನ ಆತ್ಮ ನೆಲೆಗಳ ಕೇಳೆ | ಪಿತ ಹೇಳಿದ ವಾಕ್ಯ ಕೈಗೂಡೆ |
ಹತ ಮಾಳ್ಪೆ ದನುಜನ ಇಂದರು ದಿವಸಕೆ ಬರುವೆ | ಕಡೆಹಾಯಲೆನ್ನಾಸೆ ಬೇಡ || ೧೫೧ ||
ಗೆಲಬಹುದು ಕುಂತಿಯ ಹಿರಿಯ ಬಾಲನ ಪೋಲ್ವ | ಧರ್ಮಜನೆ ಎನ್ನ ಪುಣ್ಯದಲಿ |
ಗೆಲುಶ್ರಯವ ನಯನದಿ ಜಲ ತುಂಬಿ ಕಳುಹಲು | ಹೋಗೆನುತಾ ಅವಳು || ೧೫೨ ||
ಒಂದೆರಡು ಪಯಣಕೆ ಬಂದನು ಜಯಸೇನ ದೇ | ವೇಂದ್ರನ [ವ]ನದ ಆಶ್ರಮಕೆ |
ಕಂಡ ಭಾಸ್ಕರರಾಯ ಹೆಂಗಳರಸೆರ ಕೂಡಿ | ಬಂದ ಜಲಕ್ರೀಡೆಯಾಡಲ್ಕೆ || ೧೫೩ ||
ಕಾದಿರಲು ಆ ಸಮಯ ತನಗಾಗಬಲ್ಲದೆ | ಎಂದು ಹೋಗಿ ಎರಗಲು ಸಾಷ್ಟಾಂಗ |
ರಾಯ ಭಾಸ್ಕರ ಕಂಡು ಹೇಳಯ್ಯ ನೀ ಬಂದ | ಕಾರ್ಯ ಸ್ಥಿತಿಗಳನು ಪೇಳೆನಲು || ೧೫೪ ||
ಪಾರಿಜಾತವು ಹೂವು ತಾಯಿ ತಂದೆಗೆ ಬೇಕಾಗೆ | ನಿಮ್ಮ ಪಾದದರುಶನಕೆ ನಾ ಬಂದೆ |
ಗಹಗಹಿಸಿ ನಗುತಲಿ ಪಾರಿಜಾತದ ಹೂವ | ಸಾಗುವ ಪರಿ ಹೇಗೆ ನಿನಗೆ || ೧೫೫ ||
ಮರುಳ ಪುತ್ರನೆ ಕೇಳು ನಿನ್ನ ಬಿಡುವರೆ ದೈತ್ಯರು | ಪರಿಮಳ ಸೂಸೆ ಜೀವನವು |
ಧರಯೊಳಗೊಯ್ದುಂಟೆ ಶರೀರಕ್ಕೆ ಮುನಿದಿನ್ನು | ಕಳುಹಿರ ಬಗೆಬೇಡ ಹೋಗು || ೧೫೬ ||
ಹೋಗೆನಲು ಜಯಸೇನರಾಯ ಕಿರಿಮುಖವಾಗೆ | ಶ್ರೀಯುತಿರ್ದ…..ನಮಸ್ಕರಿಸಿ |
ಪ್ರಾಣಕಾಂತನೆ ನಿಮಗೆ ಘನಬಹುದೆ ನಿಮಗಿನ್ನು | ಜಯಪಾಲನ ಬರಿದೆ ಕಳುಹಿದರೆ || ೧೫೭ ||
ಯಾವಾಕ್ಷತು ಕರೆ ಮುನ್ನ ಕುಮಾರನ ಕಳುಹಿದರೆ | ನೀವಿಂತು ಇವನ ಸಾಗಿಸಲು |
ಪೇಳಿದ ಬಾಯೊಳು ಧೂಳು ಬೀಳದ ಸ್ವಾಮಿ | ಪಾದಕ್ಕೆ ಕೀರ್ತಿಯು ಬಹುದು || ೧೫೮ ||
ಸತಿಯರ ಮಾತಿಗೆ ಅತಿಮೆಚ್ಚಿ ಭಾಸ್ಕರನು | ತರಿಸಿದ ಪಾರಿಜಾತವನು |
ಭರಣಿಯೊಳಗೆ ತುಂಬಿ ಬಾಯ ತೆಗೆಯಲು ಬೇಡ | ಪುರವ ಸೇರುವ ಪರಿಯಂತ್ರ || ೧೫೯ ||
ಆಂ ಬುದ್ಧಿಯೆನ್ನುತ್ತ ಅಡ್ಡಬಿದ್ದನು ಜಯಸೇನ | ಇದ್ದನು ತನ್ನ ಪಥವಿಡಿದು |
ಮೋಡ ದನುಜಗೆ ಮುನ್ನ ಮದನ ಕಾಮಿನಿ ಮಾಳ್ಪ | ಸ್ವರ್ಗದುಪಚರಗಳ ಕೇಳೆ || ೧೬೦ ||
ಒತ್ತುವ ಎಣ್ಣೆಯ ಎರೆವಳು ನೀರನು | ಕಸ್ತುರಿ ಪುಣಗು ಪೂಸುವಳು |
ಉತ್ತಮ ಭೂಷಣವ ಹೊದಿಸಿ ವೀಳ್ಯವ ಕೊಡಲು | ಚಿತ್ತದಿ ದನುಜ ಹಿಗ್ಗಿದನು || ೧೬೧ ||
ಕಂಡರೆ ಸೇರದ ಕಾಮಿಗೆ ಕರೆಗೂಡಿ ಹಂಬಲಾಯಿತು ದನುಜನಿಗೆ |
ರಂಭೇ ನೋಡಲು ಎನ್ನ ವುತ ನೀರಿ ಬಂತೀಗ | ಒಂದುಗೂಡದೆ ಮೂರರೊಳಗೆ || ೧೬೨ ||
ಹಗೆ ಬಾಳ ದನುಜರು ಮರಣಕಂಡರೆ ಮುಂದೆ | ತೆರ ನೀನು ನಾ ಬಾಳುವುದಕೆ |
ಜೀವರತ್ನದ ನೆಲೆಯ ಇರುವ ಸ್ಥಲವನು ಪೇಳೆ | ಇರುವೆನು ಯೋಕಾವದಲ್ಲಿ || ೧೬೩ ||
ನಿಜವಹುದು ಎನುತಲಿ ಸರಿಗೂಡಿ ದನುಜನ | ಪರದೊಳು ನೀನಾಡಬೇಡ |
ಕರು ಮಾಡ ಮಧ್ಯದ ಕಳಸದೊಳಿರುವುದು | ತಾ ಮಲಗೆ ಗುರುತು ಇರುವುದು || ೧೬೪ ||
ಮದನಮೋಹಿನಿಯೊಳು ನೆಲೆದೋರಿ ದನುಜನು | ನಡೆಯಲು ತನ್ನ ಹಾರಕ್ಕೆ |
ಈ ಕೇತಿ ರೂಪನ ಜಯಸೇನ ಬರಲು ಪೇಳೆ | ಜೀವರತ್ನದ ಕಳಸದೊಳಗೆ || ೧೬೫ ||
ಅನಿತದಿ ಸೂರ್ಯನು ಕಡಲಿನ ಸ್ಥಾನಕೆ ನಡೆಯೆ | ದನುಜ ಸೇರಲು ಮನೆಯ |
ತನು ನಿದ್ರೆ ಮಾಳ್ಪಾಗ ಕಳಸ ತುಂಡಿಗೆ ಹೊಡೆದು | ತೆಗೆದನು ಜೀವರತ್ನವನು || ೧೬೬ ||
ಮರಣವಾಗಲು ದೈತ್ಯ ಕರಕೊಂಡು ನಾರಿಯನು | ನಡೆಯಲು ತಮ್ಮ ಪಟ್ಟಣಕೆ |
ಹಡೆದ ತಂದೆಗೆ ಹೂವ ತಂದಿತ್ತು ಸ್ತ್ರೀಯನು ತೋರಿ | ಇರುತಿರಲು ಮದಿವಾಗಿ ಸುಖದಿ || ೧೬೭ ||
ಕೇಳಯ್ಯ ಕಂಪಿಲಕುಮಾರನ ಸಾಹಸವ | ಮಾಡಿದ ಕುಹಕ ಕುಮುದಿನಿಯ |
ಹೇಳೆ ತನ್ನಯ ಪ್ರಧಾನಿಯೊಡನೆ ಮತ್ತೆ | ನೀಗಿಕೊಂಬೆನು ಪ್ರಾಣವನು || ೧೬೮ ||
ದೇವೇಂದ್ರಲೋಕದ ಪಾರಿಜಾತವ ತಂದು | ಲಾವಣ್ಯ ಲಲಿತಾಂಗಿ ಸಹಿತ |
ಮೇಲನಗೆ ಉಳಿವುಂಟೆ ಜೀವಬಿಡುವೆನೆನಲು | ತಿಳಿದವಗೆ ಜೋಡಿಸುವೆ ನಾನೊಂದ || ೧೬೯ ||
ಹಿಂದಳ ಪರಿಯಾಗಿ ಮುಂದೆ ವೇಷವ ಮಾಡಿ | ಸಂದವರ ಸುರಧೇನು ಬೀಡು |
ದಿಂಡುರುಳು ಹೊರಳಲು ವಿಜೇಂದ್ರನು ಕಣುಗೆಟ್ಟು | ಮುಂದೇನು ಬೇಕೆನುತ ಪೇಳೆ || ೧೭೦ ||
ಯಮನಲ್ಲಿ ಇರುತಿರ್ದ ಸರುಧೇನು ತಂದರೆ | ಉಳಿವುದು ಎನ್ನಯ ಪ್ರಾಣ |
ಕರೆಸಿದ ಜಯಸೇನರಾಯಗೆ ಪೇಳಲು | ತುರವೆನು ಮೂರು ದಿನದೊಳಗೆ || ೧೭೧ ||
ಮದನಮೋಹಿನಿಯೊಡನೆ ಹದನವೆಲ್ಲವ ಪೇಳೆ | ಹಡೆದ ತಂದೆಯು ಹಗೆ ನಿನಗೆ |
ಹೊಗೆ ಕೊಂಡವ ಮಾಡಿ ಜನಜಾತ್ರೆ ಕಾಂಬಂತೆ | ಮಡಿಯಲು ಜಯಸೇನ ಹೋಗೆ || ೧೭೨ ||
ಹರಜನರು ಪುರಜನರು ದೊರೆ ಪುತ್ರನಳಿದನೆಂದು | ಅಳಲುತ ತಮ್ಮ ಮನದೊಳಗೆ |
ಬರೆಯಲು ಲೇಖನವ ಮದನಮೋಹಿನಿ | ತಂದೇನಂದಾ ಕುಮುದಿನಿಯ || ೧೭೩ ||
ಎರಡೆಂಬ ದಿವಸದಿ ದಿವರಾತ್ರಿಯೊಳಗೆ ಬಂದು | ಮಲುಹಣಿ ಮಾಂಸಗಳ ಕೋಡಿ |
ಮದನಮೋಹಿನಿಯಾಗ ಜೀವರತ್ನವನಿಡಲು | ಹೊರಡಲು ಜಯಸೇನರಾಯ || ೧೭೪ ||
ಸುರಧೇನು ಕರಕಿತ್ತು ಬರೆದ ಲೇಖನವ | ಕೊಡು ನಿಮ್ಮ ಪಿತನಿಗೆ ಎನಲು |
ಸಡಗರದೊಳು ಬಂದು ಕುಮಾರನು ಕೊಡವಾಗ | ಬೆರಗಾದರಾಗ ಸಭೆಯೊಳಗೆ || ೧೭೫ ||
ಓದಲು ಲೇಖನವ ಮಾವ ಅತ್ತೆಯ ಹೆಸರು | ನಾವು ಕ್ಷೇಮದಲಿರುತಿಹೆವು |
ನಾನು ಕಳುಹಿದೆನು ಕುಮಾರರೊಡನೆನ್ನಲು | ಮಂತ್ರಿಯು ಕುಮುದಿನಿಯು ಸಹಿತ || ೧೭೬ |
ದಿನ ಮೂರರೊಳಗಾಗಿ ಕಳುಹಲು ಹಿಂದಕ್ಕೆ | ಕಳುಹಯ್ಯ ವಿಜಯರಾಜೇಂದ್ರ |
ಸೊಸೆಯು ಮಂತ್ರಿಯ ನೋಡಿ ಬಹುಕಾಲ ತುಂಬಿತು | ಇಂತಿದು ನಿಮಗೆ ಶರಣಾರ್ಥಿ || ೧೭೭ ||
ಕೇಳುತ ಕುಮುದಿನಿ ಹೋಗಿ ಬರುವೆನು ಬೇಗ | ಜೋಡಿಗೆ ಮಂತ್ರಿ ಇರುತಿಹನೆ |
ರಾಯ ವಿಜಯೇಂದ್ರನು ತನುಜ ಬಾ ಎನುತಲಿ | ಬೇಡೆನಲು ಕುಮಾರನ ಪಿತನು || ೧೭೮ ||
ಅಷ್ಟರಲಿ ಬಂದವರು ಸತ್ಯ ಹೋಗುವ ಮಾತು | ಉತ್ತರವ ಕೊಡುವ ಹೀಗೆನುತ |
ಮತ್ತೊಮ್ಮೆ ಕರೆದೊಯ್ಯಲೆ ಬಿಟ್ಟುಕೋ ಆ ಮಾತ | ಹೊಕ್ಕು ಬರಲು ಇವರು ಹೋಗಿ || ೧೭೯ ||
ಕೆಂಡಕೊಂಡವ ಮಾಡಿ ಮುಂದೆ ಕುಮುದಿನಿ ಮಂತ್ರಿ | ಮಿಂದುಟ್ಟು ಮಡಿಯೊಳು ಹೊಗಲು |
ಕಂಡರು ಯಮಲೋಕ ಕತ್ತೆಸೂಳೆಯು ಕೆಟ್ಟು | ಚೆಂದವ ನೋಡೊ ಕಂಪಿಲನೆ || ೧೮೦ ||
ನಾರಿಯರ ಮನ ಚಿತ್ತ ಹೀಂಗೆ ಇರುವುದು ಸ್ವಾಮಿ | ರಾಮನೊಳಗೆ ಆಗಲರಿದು |
ಹೀಗಲ್ಲ ಎಲೆ ಮಂತ್ರಿ [ನಾಡ] ಮಾತು ಸುಡಲಿ | ಹೋಗಿ ನೋಡವಳ ಕುಚಕಾಯ || ೧೮೧ ||
ಕೋಣನ ಮುಂದೊಮ್ಮೆ ವೀಣೆ ಸ್ವರ[ವ]ನು ಮಾಡೆ | ಪೇಳೆಂದ ಗಾದೆ ಆ ಕ್ಷಣಕೆ |
ಓದಿದ ಗಿಳಿ ತನ್ನ ಅಮೇದ್ಯವ ತಿನುವಂತೆ | ಆಡಿ ಮಂತ್ರಿಯು ಮನದೊಳಗೆ || ೧೮೨ ||
ಇನ್ನೇನು ಪೇಳಯ್ಯ ನಿನ್ನ ಆತ್ಮದ ಭಾವ | ಎನ್ನ ಮಾತುಗಳು ಕಿವಿ ಹೊಗದು |
ಕಳ್ಳೆಯರ ನಡೆವಳಿಯ ಕ[ಥೆ] ಮೂಲದಿ ಪೇಳೆ | ನಿನ್ನ ಬುದ್ಧಿಗಳು ಮರೆದಿಲ್ಲ || ೧೮೩ ||
ಭೇದವ ತಿಳಿಯದೆ ಆಡುವೆ ಎಲೆ ಮಂತ್ರಿ | ಹೋಗುವ ಒಳಮನೆತನ |
ನೋಡವಳ ಇರತಿಯ ಪ್ರವೀಣನಲ್ಲವೆಯೆಂದು | ಜೋಡಿನೊಳವರು ಐತರಲು || ೧೮೪ ||
ಬಾರೆನ್ನ ಬೈಚಪ್ಪ ಸೋದರ ಬಳಗವೆ | ಸೇರುವೆ ಸ್ವರ್ಗದ ಪದವ |
ನೀನೆಲ್ಲ ಇದ್ದು ನಾ ಸಾಯಲ್ಕೆ ತೆರಬಂತು | ಹೋಗಿನ್ನು ಪತಿವ್ರತ ಭಾವ || ೧೮೫ ||
ನೋಡಯ್ಯ ಮಂತ್ರಿ ಅಣ್ಣಾಜಿಯವಲ್ಲವೆ ನೀನು | ಮಾಡಿರುವ ಕುಚದ ಗಾಯವನು |
ಈಡೆ ರಾಮಗೆ ನಾನು ಇಲಿಯು ಬೆಕ್ಕಿಗೆ ಸಿಕ್ಕಿ | ನೋಡೋರು ಫಲವಿತ್ತ ನಿಮ್ಮ || ೧೮೬ ||
ನರ ಮನುಜ ಎನುತಿರ್ದೆ ಕರ ಚೆಲ್ವ ಭಾವಿರಲು | ಅರಿಯದೆ ನಾ ಮರುಳರಂಡಿ |
ತೆಗೆದಪ್ಪಿ ತಬ್ಬಲು ಹುದುಗಿ ಹಲ್ಲಿಯ ತೆರದಿ | ಮರನಾದೆ ಸ್ಮರಣೆಯ ಮರೆದು || ೧೮೭ ||
ತೋರಲೆ ಎಲೆ ಮಂತ್ರಿ ಸೀರೆ ಸೆರಗನು ತೆಗದು | ಸಾಲದು ನಿನಗೆ ನಿಜಕರವು |
ಆಗಲೊ ಈಗಲೊ ಕಳಲೇರಿ ಬರುತಿದೆ ಜೀವ | ಮೋರೆ ನೋಡದೆ ಅಳಿಯಲೇನೊ || ೧೮೮ ||
ಕಂಡದು ಇದು ತಾಯಿ ಕಳವಿನ ಠೌಳಿಯ | ಪುಸಿಯೆಂಬರೆ ಶಿಶು ಬಾಲ ಮೊದಲು |
ಮುಂದೇನು ಅವನಿಗೆ ಮಾಡೊ ಆಜ್ಞೆಯ ಪೇಳಿ | ಗಂಡ ಹೆಂಡಿರು ಸರಿಗೂಡಿ || ೧೮೯ ||
ದೃಷ್ಟ ಕಂಡೆಯೊ ಮಂತ್ರಿ ಬೆಪ್ಪು ಮಾಡಿದೆ ಎನ್ನ | ಮುಕ್ಕು ಮೂಳಗಳ ಕಥೆ ಹೇಳಿ |
ತಪ್ಪೇನೊ ಇದು ಮಂತ್ರಿ ಅಪರಾಧ ಆಜ್ಞೆಯ ಮಾಡಿ | ಹುಚ್ಚು ಜಾಣ ಕೈಲಿ ಕೇಳ್ವೆ || ೧೯೦ ||
ತಪ್ಪಿ ನಡೆಯಲು ಮಂತ್ರಿ ಪೃಥ್ವಿಯೊಳಪರಾಧ | ಒಪ್ಪೀತೆ ಈ ಕರ್ಮ ನಿನಗೆ |
ಹೆತ್ತ ತಂದೆಯ ಸತಿಯ ತಕ್ಕೈಸಿದ ಮೂಳನ | ಕುಟ್ಟಿ ಹಾಕಯ್ಯ ತಲೆಯನು || ೧೯೧ ||
ಚೆಂದವಾಯಿತು ಎಂದು ಚದುರ ಮಂತ್ರಿಯು ತನ್ನ | ಮಂಡೆಯ ತೂಗಿ ಮನದೊಳಗೆ |
ಹಿಂದಿವನಾ ಗುರು ಮುನಿಯು ಬಂದು ಹೇಳಿದ ಮಾತು | ಕಂಡಿರಿತಾಯಿತು ಲಿಖಿತವನು || ೧೯೨ ||
ಮಗನ ಕೊಲ್ಲಲು ತಾಯಿ ಮಾತೆಲ್ಲಿ ನಡೆವುದು | ಅಡಗೂದೆ ಶಶಿ ಸೂರ್ಯರುಳ್ಳನಕ |
ಕಡೆಗೆ ತಿಳಿವುದು ಬುದ್ಧಿ ಗಗನ ಮುಟ್ಟಲಿ ದುಃಖ | ಅಳಿದವನು ಬೇರೆ ತಿರುಗುವನೇ || ೧೯೩ ||
ಕಂದ ಬೇಡವೊ ಮಂತ್ರಿ ನಿಂದೆಗಳ ಹೊರಬಹುದೆ | ಹಿಂದಣಾಗಮವ ಕೇಳಿಲ್ಲವೆ |
ಒಂದು ಯೋಗ್ಯದ ತುರಗ ಬಂದು ಸೇರಲು ಪಾರ್ಥ | ಕೊಂದು ಕಳೆವ ನೃಪರೆಲ್ಲ || ೧೯೪ ||
ಕುದುರೆಯ ಪಣೆಯೊಳು ಬರೆದ ಲೇಖನಗಳ | ನಡೆಯೋನೆ ಕದನ ಕಾಳಗಕೆ |
ಪೊಡವಿಗೆ ಗುರುತಾದ [ಚಂಪಕ]ಪುರಕಾಗಿ | ನಡದೂದು ಆ ಅಶ್ವ || ೧೯೫ ||
[ಚಂಪಕ]ಪುರದ ಭೂಕಾಂತ ಹಂಸಧ್ವಜನು | ಇಂತು ವರ್ಣಿಪರು ಸಾಹಸವ |
ಸಂತಾನ ಈರ್ವರು ಭೂಕಾಂತ ಕೇಳಿವನೆಂಬ | ಬಳಿಕವರು ಅಶ್ವನ ನಡೆಯೇ || ೧೯೬ ||
ಬರೆದ ಲೇಖನ ಓದಿ ತುರಗವ ಕಟ್ಟಿಸಲು | ಹೊರಗಿಳಿಯೆ ಪಾರ್ಥವ ಬಲವು |
ಹೊಡೆಯಲು ರಣಭೇರಿ ದನುಜೇಂದ್ರ ಹಂಸಧ್ವಜವು | ಬಿಡಲಿನ್ನು ಹೊರಪಾಳ್ಯ ದಂಡ || ೧೯೭ ||
ಸಾರಲು ಪುರದೊಳು ರಣಭೂಪನಿಂದಿಳಿದ | ಮರಳಿ ಕಾದ ಕೆಲದಲಿ ನೂಕಿಸುವೆ |
ಶ್ರೋಣಿತಕುಳಿಯದೆ ವೀರ ಎಕ್ಕಟಿಗರು | ಕಾದಲವರ ಭೂಮಿಯಲಿ || ೧೯೮ ||
ಕಂಡನು ಸುಧನ್ವ ಪೊರಮಡುವ ಸಮಯದಲಿ ಅಂಗನೆ ತಡೆದು ನಿಲ್ಲಿಸಲು |
ಮುಂದೆಮಗೆ ಋತು ಸಮಯ ಕಂಡವರಾರು ಅಪಜಯವ | ಕಂಡಿಲ್ಲ ಫಲಸಾರ ತನಗೆ || ೧೯೯ ||
ತರಳೆ ನೀ ಪೇಳುವುದು ಚೆಲುವ ಮಾತುಗಳಹುದು | ತನಗಿದು ಸಮಯ ಕಾಲಲ್ಲಿ |
ಹೊರಗ್ಹೋಗಿ ಪಿತನಿಹನು ಹಿಂದುಳಿದವರ ಕೆಲದಲಿ | ಮುಳುಗಿತೇನೆನುತ ಸಾರಿಹನು || ೨೦೦ ||
ಕಾಂತನೆ ಕಾತರದ ಪ್ರಿಯವ ಸ್ತ್ರೀಯರ ಭ್ರಮೆಯ | ನಿಸ್ಕರಿಸಿ ಹೋಗಲು ಕಾರ್ಯ |
ನೀಕಾರ ಬಂದಪುದೆ ಅನೇಕ ತೆರದೊಳು ಪೇಳೆ | ಆಕೆ ಭೋಗದಿ ಸಂಗ್ರಹಿಸಿ || ೨೦೧ ||
ರಣಭೂಮಿಯನು ಕೇಳಿ ಹಂಸಧ್ವಜನು ತನ್ನ | ಉಳಿದಿಲ್ಲವೆನುತ ನಗರದಲಿ |
ನುಡಿದನು ಅಲ್ಲೊರ್ವ ಸುಧನ್ವಯ ಇಲ್ಲೆನಲು | ಪಿಡಿತನ್ನಿರೆನಲು ಆರ್ಭಟಿಸಿ || ೨೦೨ ||
ಯಮನ ದೂತನ ತೆರದಿ ಚರರಾಗ ಪರಿತಂದು | ಪಿಡಿದು ಹೆಡಗೂಡಿನೊಳು ತರಲು |
ಸಿಡಿಲಂತೆ ನೃಪನು ಏನೆಲವೊ ಎನ್ನಾಜ್ಞೆ | ತೃಣವಾಯ್ತೊ ಎನುತ ಕನಲಿ || ೨೦೩ ||
ಕೇಳಲು ತನ್ನಯ ಪ್ರಧಾನಿಕರನೆಲ್ಲ | ಮಾಡುವೆ ಆಜ್ಞೆ ಉಸುರೆನಲು |
ಮಗನುಳಿಯೆ ಮಡಗುವುದು ಬಡವರ ಹಾಕಿಸಲು | ಮೃಡ ಮೆಚ್ಚನದಕೆ ನಿಮ್ಮೆಸಲು || ೨೦೪ ||
ಖೂಳನ ಮಾತನು ಕಾದ ಎಣ್ಣೆಗೆ ಇವನ | ಹೋಗಿ ನೂಕೆನಲು ಆ ದನುಜ |
ಕಾಯ್ವ ತೈಲದಿ ಕಂಡು ಚರರು ಹಾಕಲು ಹರಿಯು | ಕಾಯ್ದನು ಕೇಳೊ ಬೈಚಪ್ಪ || ೨೦೫ ||
ಮಗ ಮಾಡಿದ ಹಾದರವ ಮಡಗಿ ಮತ್ತೊಬ್ಬನು | ಬಡವ ಮಾಡಲು ಕೊಲ್ಲಬೇಕೊ |
ಗಿರಿಜೆ ರಮಣನು ಮೆಚ್ಚ ಹೊಡೆ ಮಂತ್ರಿ ತಲೆಯೆಂದು | ನುಡಿಯಲು ಭೂಪ ವಾಕ್ಯದಲಿ || ೨೦೬ ||
ಸತ್ಯವಾಡಲು ನಾನು ಕತ್ತೆ ಬುದ್ಧಿಗೆ ನಡೆವ | ಲಿಖಿತದ ಫಲವೆಂದ ಮಂತ್ರಿ |
ಅಪರಾಧವಿರ್ದಡೆ ಅಳಿವ ರಾಮನು ಧರ್ಮ | ಪಥವಿರಲು ಸುಧನ್ವನಂತುಳಿವ || ೨೦೮ ||
ಕೊಂದ ಮಗನನೆಂದು ನೊಂದುಕೊಳ್ಳವಿ ಕಡೆಗೆ | ಇಂದಿನ ಸಿಟ್ಟು ನಾಳಿರದು |
ಕಂದ ನಿನ್ನಯ ಬಸುರ ಪುಟ್ಟಲಿಲ್ಲವೊ ಅಭಯ | ನಂಬಿಕೆ ಕೊಳ್ಳೊ ಬಲದ ಹಸ್ತ || ೨೦೯ ||
ತಲೆಯನು ಹೊಡೆಯೆಂದು ವೀಳ್ಯ ಅಪ್ಪಣೆಯಿತ್ತು | ತಿರುಹಿದ ಕಪಿಯಂತೆ ಮುಖವ |
ಅಳಿಯನು ಎಂದೆನುತ ತಜುಬಿಜಿಯ ಮಾಡಲು | ನಿನ್ನ ತೆಗಸುವೆ ಹಡಿಯ ಶೂಲದಲಿ || ೨೧೦ || ಇ
ಆಡುವ ಕಡಕಿಡಲೆ ನೋಡಿದ ಮಂತ್ರಿಯು | ಏರಿತು ತಲೆ ಮದವು ಇವಗೆ |
ತಾವರೆ ಸಖ ಭಾನು ಕಳೆಗುಂದಿದ ತೆರದಿ | ಪ್ರಧಾನಿ ಬಂದನು ತನ್ನ ಮನೆಗೆ || ೨೧೧ ||
ಬರುವಂಥ ಸಮಯದಿ ಮನದೊಳು ಗ್ರಹಿಸಿದ | ಹಲವು ಯುಕ್ತಿಯ ತಂತ್ರವನು |
ಇಡಬೇಕು ಮತ್ತೊಂದು ನೆಲಮಾಳಿಗೆಯೊಳು ಮಡಗಿ | ಕುರುಹಾಗೆ ಕಳ್ಳ ರಾಮನೊಯಿವಾ || ೨೧೨ ||
ಪುತ್ರ ರಾಮನು ಮತ್ತೆ ಸತ್ತನೆಂಬುವ ಸುದ್ಧಿ | ಹುಟ್ಟದೆ ಡಿಳ್ಳಿ ಪಟ್ಟಣದಿ |
ಮುತ್ತನೆ ದಂಡನು ಸುರಿತಾಳ ಬರಲು ಇಲ್ಲಿ | ಅಟ್ಟುವರುಂಟೆ ಜಗಳದಲಿ || ೨೧೩ ||
ಪಟ್ಟಣ ಸಲುವನ ಮಡಗಿರಲು ಕಾರ್ಯಗಳುಂಟು | ಮುತ್ತದೆ ತನಗುಳಿಯೆ ಪುರವು |
ಸೃಷ್ಟಿಗೆ ಅಳಿದಂತೆ ತಂದು ತಲೆಯನು ತೋರಿ | ಹುಟ್ಟಿದನೆನಿಸಿ ತೋರುವೆನು || ೨೧೪ || ಇ
ಅನಿತರೊಳಗೆ ಸೂರ್ಯ ನಡೆಯಲು ಋಣಸಾರ | ಕಡಲ ಸ್ನಾನವನು ಮಾಡುವರೆ |
ಚದುರ ಮಂತ್ರಿಯು ತನ್ನ ಮನೆಯೊಳಗಿರುತಿರೆ | ಕಳವಳಿಸುತ ಮನದೊಳಗೆ || ೨೧೫ ||
ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷ ಲಿಂಗ |
ತರಳ ರಾಮನ ಮಡಗಿ ಕಳ್ಳ ರಾಮನ ತರುವ | ಹೊಳವಿಗೆ ಹದಿಮೂರು [> ಹದಿನಾಲ್ಕು] ಸಂಧಿ || ೨೧೬ ||[1]
[1] + ಅಂತು ಸಂಧಿ ೧೩[>೧೪]ಕ್ಕೆ ಪದನು ೨೯೬೪ಕ್ಕೆ ಮಂಗಳ ಮಹಾಶ್ರೀ ಶ್ರೀ ಶ್ರೀ.(ಮೂ)
Leave A Comment