[1]ಶ್ರೀ ಗಿರಿಜೇಶನೆ ಭಾಗೀರಥೀಶನೆ | ಭೋಗಿಭೂಷಣ ಭಾಳನೇತ್ರ |
ಆಗಮಕೊಡೆಯನೆ ಮೂಜಗವ ರಕ್ಷಿಪನೆ | ನಾಗಭೂಷಣನೆ ನಂದೀಶ || ೧ ||
ನೀಲವರ್ಣನ ಸುತನ ನೇತ್ರದಿ ಉರುಹಿದೆ | ಪಾಲಿಸಿದೆ ರತಿಗೆ ಮನಸಿಜನ |
ಕೊಲಿಸಿದೆ ಅಜಶಿರವ ಉಗುರಿಂದ ಕಪಾಲ | ಧರನೆ ಕೊಡು ಮತಿಯ || ೨ ||
ಬಿಟ್ಟಿಯ ಬತ್ತವನು ಕೊಟ್ಟಣಕೆ ಶರಣರಿಗೆ | ಒಕ್ಕಲು ಹೇ[ಳೆ] ಕಲ್ಯಾಣಕೆ |
ಅಚ್ಚು ಮೆಚ್ಚಿನ ಹೊರೆಯ ಮತ್ತೊಂದು ಬಳಸಿದ | ಕಪ್ಪಿನ ಮಲ್ಲ ಕೊಡಮತಿಯ || ೩ ||
ಕಾಶಿರಾಮೇಶ್ವರಕೆ ಈಸು ವೆಗ್ಗಳವಾದ | ತ್ರಾಸಿಲಿ ತೂಗಿ ನೋಡಿದರೆ |
ಲೇಸನು ಪಾಲಿಸು ನಡೆಸುವೆ ಕೃತಿಯನು | ಪರಮೇಶ ವಿರುಪಾಕ್ಷಲಿಂಗ || ೪ ||
ರತ್ನಾಜಿ ರಾಮನ ನೆಪ್ಪನು ಕಾಣದೆ | ಚಕ್ರಪಾಲಕರ ಕೇಳಿದಳು |
ಒಪ್ಪಗಳ ಲಾಲಿಸಿ ತೊತ್ತು ಸಂಗಿಯು ಪೇಳ್ವ | ಬಿತ್ತರದ ನಾಮಗಳನಿಟ್ಟು || ೫ ||
ಸಂಗಾಯಿ ಬಿಡಿಸೆನ್ನ ಅಂಗಜನ ತಾಪವ | ತಂದು ತೋರಿದೆ ನಯನಕ್ಕೆ |
ಕುಂಬಾಂಢ ಮಂತ್ರಿಯ ಮಗಳ ಮನ್ಮಥಸುತನ | ಒಂದುಗೂಡಳೆ ಉಷೆ[ಯೊ]ಲಿದು || ೬ ||
ಚಿತ್ರಲೇಖೆಯು ಹಿಂದೆ ಮೊದಲು ತರ್ಕಕೆ ತೋರಿ | ಮತ್ತೆ ಅಗಣಿತ ರೂಪಗಳ |
ಲೆಕ್ಕವಿಲ್ಲದೆ ತೋರೆ ಒಪ್ಪಿ ಇರಲು ಕಡೆಗೆ | ಚಿ[ತ್ತ]ಪ್ರಿಯನ ತೋರೇಳೆ || ೭ ||
ಕೇಳಮ್ಮ ನಯನಕ್ಕೆ ಪ್ರೀತಿದೋರುವ ವಿಟರ | ತಾಯೆ ಪೇಳುವೆನು ಕಡೆಗವನ |
ರಾಯ ರಾಮಗೆ ಮಿಕ್ಕ ಕುಮಾರ ದೊರೆಗಳು ಉಂಟು | ವೀರ ಮನ್ನೆಯರು ಮೋಹನರು || ೮ ||
ಎದ್ದ ಸತ್ತಿಗೆ ಮೇಲೆ ವಜ್ರದ ಕಳಸವು | ರುದ್ರನ ಭಾವ ಮುಂಗೋಪ |
ಗದ್ದಲಿಸಿ ಕರುವಾಡ ಎದ್ದು ಹಾರುವನಮ್ಮ | [ಮಂ]ದಲೋಚನ ಸಂಗಿಯಾರೆ || ೯ ||
ರತ್ನಾಜಿ ಲಾಲಿಸು ಪೃಥ್ವಿಗೆ ಹೆಸರಾದ | ಗುತ್ತಿಯ ನಾಡನಾಳುವನು |
ಕಸ್ತುರಿಯ ಚಾಮಯ್ಯ ಕಮಲದಳ ನಯನೇ | ಶಕ್ತಿಲಿ ಸರಿಯಿಲ್ಲ ಜಗದಿ || ೧೦ ||
ನೀಲಸತ್ತಿಗೆ ಜಲ್ಲಿಗಳು ಅಪರಂಜಿ | ಕಾಲನಾರ್ಭಟದಿ ನಿಂದಿಹನು |
ಪ್ರಿಯದೊಳಿರುವುದೆನ್ನ ಮನಸು ಮಮಕಾರ ಪುಟ್ಟಿ | ಯಾವ ರಾಯನೆ ಸಂಗಾಯಿ || ೧೧ ||
ಭಾವೆ ಕೇಳೆಲೆ ಬಾಲೆ ಮಾನದ ರತ್ನಿ ಜಾಣೆ | ಹೆಡಿ ನಾಗರದಂತೆ ಮೊಳದುದ್ದ ಚುಂಗ |
ಸಾದು ತಿಲಕ ಕಾದು ವೈರಿಯ ಕಡಿವಂಥ | ಮಾದಿಗ ಹಂಪ ಕೇಳಮ್ಮ || ೧೨ ||
ಚೊಕ್ಕ ವರ್ಣದ ಸತ್ತಿಗೆ ಇಕ್ಕಿದ ಸರ ಗುಚ್ಛೆ | ಚಿಕ್ಕ ಮನ್ನೆಯನಾರೆ ಸಂಗಿ |
ಸಕ್ಕರೆ ಚೆಂದುಟಿ [ಉ]ಕ್ಕುವ ಜವ್ವನೆ | ಗಂಗಪಾಟಿಯ ಗಂಗರಾಜ || ೧೩ ||
ಸಾಲುವಣ್ಣಿಗೆ ಮೇಲೆ ನೀಲದ ಸತ್ತಿಗೆ | ಲೋಲ ಮನ್ನೆಯನಾರೆ ಸಂಗಿ |
ಪಾಲುಕುರಿಕೆಯ ಹನುಮರಾಜನು ಎಂದು | ಲೋಲಜಮುಖಿಗೆ ಹೇಳಿದಳು || ೧೪ ||
ತುರಗವನೇರುತ್ತ ಕರದಲ್ಲಿ ಬಿಲ್ಲನು | ಮರೆಯದ ಮನ್ನೆಯನಾರೆ ಸಂಗಿ |
ಧರೆಯೊಳು ತೊರಗಲ್ಲ ಲಿಂಗರಾಜನುಯೆಂದು | ಸರಸಿಜಮುಖಿಗೆ ಹೇಳಿದಳು || ೧೫ ||
ಕಮಲದ ಸತ್ತಿಗೆ ಮೀರಿದ ತುರಗವು | ಕಮಲಸಖನೊಲು ಮೆರೆವಾರಿವ |
ಕೊಮಾರಮಡುವಿನ ಕಾಟನಾಯಕನೆಂದು | ಭ್ರಮರಕುಂತಳೆಗೆ ಹೇಳಿದಳು || ೧೬ ||
ಕನಕದ ಸತ್ತಿಗೆ ನೆಳಲೊಳಗೊಪ್ಪುವ | ಘನತರದ ಸತ್ತಿಗೆನಾರೆ ಸಂಗಿ |
ವನಿತೆ ಕೇಳವನು ಆಡುವ ಕಾಟಣ್ಣ | ಜನಪತಿ ವೀರ ವಿಕ್ರಮನು || ೧೭ ||
ಗಂಟೆಯು ಕೊರಳಲ್ಲಿ ಎಂಟು ದಿಕ್ಕಿನ ಮೇಲೆ | ನೂರೆಂಟು ಬಾರೇರಿ ತುರಗವನು |
ಗುಂಟನೂರ ರಾಜಯ್ಯನು ಅವ | ಮಟ್ಟಿ ಕಾಲ ರತ್ನಿ ಕೇಳು || ೧೮ ||
ಬಣ್ಣದ ಸತ್ತಿಗೆ ಗೋಣಿತುಂಬಿದ ಮುತ್ತು | ಜಾಣನಾಯಕನಾರೆ ಸಂಗಿ |
ಪ್ರಾಣದೊಳಾಸೆ ಮಾಡುವನಲ್ಲ | ಗಾಣಿಗ ಚೆನ್ನ ಕಾಣಮ್ಮ || ೧೯ ||
ಪಟ್ಟೆ ಸತ್ತಿಗೆ ಮೇಲೆ ಮುತ್ತಿನ ಕಳಸವು | ಎತ್ತಣ ನಾಡ ಮನ್ನೆಯನೆ |
ಅರಸು ನೇಮಿಯ ಗಂಡ ಚೆನ್ನಿಗ ರಾಮನ | ರಸಿಕ ಮೈದುನ ಮಲ್ಲನಮ್ಮ || ೨೦ ||
ಹಸಿರ ಸತ್ತಿಗೆ ಮೇಲೆ ಹೊಸ ಹೊನ್ನ ಕಳಸವು | ದೇಸಿಗೆ ಮನ್ನೆಯನಾರೆ ಸಂಗಿ |
ದೆಸೆಗೆಡಿಸಿ ತುರುಕರ ಕಾದಿ ಕೊಲ್ಲುವನಿದ | ಹೆಸರಾದ ಬಾದುರಖಾನ || ೨೧ ||
ವಸವಂತ ಸತ್ತಿಗೆ ನೆಳಲೊಳಗೊಪ್ಪುವ | ಹಸನಾದ ಮನ್ನೆಯನಾರೆ ಸಂಗಿ |
ವಸುಧೆಯೊಳಗೆ ಯಾರು ಸರಿಯಿಲ್ಲ ಇವನಿಗೆ | ಮಾಚರ ಮಲ್ಲ ಕಾಣಮ್ಮ || ೨೨ ||
ಬೆಳ್ಳಿಯ ಸತ್ತಿಗೆ ನೆಳಲೊಳಗೊಪ್ಪುವ | ಒಳ್ಳೆಯ ಮನ್ನೆಯನಾರೆ ಸಂಗಿ |
ಡಿಳ್ಳಿಯಿಂದಲಿ ಬಂದ ಬಾದುರಖಾನನ | ಮಲ್ಲುಕಖಾನ ಕಾಣಮ್ಮ || ೨೩ ||
ಗುಂಪಿನ ಸತ್ತಿಗೆ ಹಬ್ಬಿದ ಸರಮಾಲೆ | ಗಬ್ಬನಾಯಕನಾರೆ ಸಂಗಿ |
ಹೆಬ್ಬುಲಿ ಗಜಸಿಂಹ ಜಾಡರ ಚೆನ್ನಣ್ಣ | ಸರ್ವದಳಕೆ ಸುರಿತಾಳ || ೨೪ ||
ಪಟ್ಟೆಸತ್ತಿಗೆ ನೆಳಲೊಳಗೆ ಒಪ್ಪುವ ಇವ | ಎತ್ತಣ ನಾಡ ಮನ್ನೆಯನೆ |
ಬಿಟ್ಟುರಂಜಿಯನಾಡನಾಳುವ ಈ | ರಾಯರ ಶೆಟ್ಟಿ ಕಾಣಮ್ಮ || ೨೫ ||
ಹೇಮದ ಸತ್ತಿಗೆ ನೆಳಲೊಳಗೊಪ್ಪುವ | ಹೇಮದಾಸೆಯನಾರೆ ಸಂಗಿ |
ಭೀಮನ ಸಮತೂಕ ಬಂಟನು ಇವನೀಗ | ಕೋಮಟಿಗರ ಮಲ್ಲನಮ್ಮ || ೨೬ ||
ಕೆಂಪಿನ ಸತ್ತಿಗೆ ಗುಂಪಿನ ಮನ್ನೆಯನು | ಇಂಪಾಗಿ ಬಹನಾರೆ ಸಂಗಿ |
ಕಂಪಿಲ ರಾಯನ ಮೋದಬಂಟನು | ದೊಣ್ಣೆಯ ಬಸವ ಕಾಣಮ್ಮ || ೨೭ ||
ಅನುವಾದ ತೇಜಿಯನೇರಿ ದುವ್ವಾಳಿಪ | ಚೆಲುವ ಚೆನ್ನಿಗನಾರೆ ಸಂಗಿ |
ಸನುಮಾನಿ ಹಾರುವ ಕುಲದೊಳಗಿವನು | ಚಿನಿವಾರ ರಾಮ ಕಾಣಮ್ಮ || ೨೮ ||
ಎದ್ದ ಸತ್ತಿಗೆ ಮೇಲೆ ಹದ್ದಿನ ಗರಿಯಿಕ್ಕಿ | ರೌದ್ರ ಮನ್ನೆಯನಾರೆ ಸಂಗಿ |
[ಗೆ]ದ್ದು ನೇಮಿಯ ದಂಡ ಕಾದು ಕೊಲ್ಲುವನಿವ | ಸಿದ್ಧರಾಜನ ಬಸವಯ್ಯ || ೨೯ ||
ದುಗುಲಿನ ಸತ್ತಿಗೆ ಅಗಲಸುರ ವಾಲೆ | ಸೊಗಸು ಮನ್ನೆಯನಾರೆ ಸಂಗಿ | ಸ
ಜಗದೊಳು ತುರುಕರ ಕಾದಿ ಕೊಲುವನಿದ | ಮುಗಲೂರ ಕಾಮ ಕಾಣಮ್ಮ || ೩೦ ||
ಕೊಳಲು ತಂಬಟೆ ಬೊಬ್ಬುಳಿಯಲ್ಲಿ ಬರುತಿಹ | ಇಳೆಗೆ ಮನ್ನೆಯನಾರೆ ಸಂಗಿ |
ಚೆಲುವಾಡಿಯ ಚಿಕ್ಕರಾಹುತನೆಂದಳು | ಲಲನೆ ರತ್ನಾಜಿಗೆ ಮುಖದಿ || ೩೧ ||
ಬೆಳ್ಳಿಯ ಸತ್ತಿಗೆ ನೆಳಲಡಿಯ ನಿಂದಿಹ ಒಳ್ಳೆ | ಮನ್ನೆಯ ನಾರೆ ಸಂಗಿ |
ವಸುಧೆಯೊಳಗೆ ಇವ ರಾಯದುರ್ಗದ ರಾಯ | ಗುರವೆ ಕೇಳಮ್ಮ ರತ್ನಾಜಿ || ೩೨ ||
ಹಕ್ಕರಿಕೆಯ ಮೇಲೆ ಇಕ್ಕಿದ ಸರಗುಬ್ಬಿ | ಚಿಕ್ಕ ಮನ್ನೆಯನಾರೆ ಸಂಗಿ |
ಲೆಕ್ಕವಿಲ್ಲದೆ ನೇಮಿಯ ದಂಡ ಕಡಿವಂಥ | ಅಕ್ಕಸಾಲೆಯ ಚಿಕ್ಕನಮ್ಮ || ೩೩ ||
ಅಂಚಿನ ಸತ್ತಿಗೆ ಮಿಂಚಿನ ಚೌಲವು | ಮಿಂಚಾಗಿ ಬಹನಾರೆ ಸಂಗಿ |
[ಹೊಂ]ಚಿದ ವೈರಿಯ ಮಿಂಚಾಗಿ ಕಡಿವಂಥ | ಕಂಚಗಾರರ ಕೆಂಚನಮ್ಮ || ೩೪ ||
ಕೂಡಿದೆಕ್ಕಟಿಗರ ಮೀಟಾದ ಸತ್ತಿಗೆ | ಘಾಟದಿ ಬಹನಾರೆ ಸಂಗಿ |
ಪಾಟಿಯಾದರೆ ನಿನ್ನ ಹಿರಿಯ ಕುಮಾರನು | ಕಾಟನಾಯಕನು ಕಾಣಮ್ಮ || ೩೫ ||
ಕಾಗಿನ ಸತ್ತಿಗೆ ತೂಗುವ ಚೌರವು | ಭೋಗದೊಳಿಹನಾರೆ ಸಂಗಿ |
ಸಾಗಿಸಿ ಸಮರದೊಳಗೆ ಹೊಗಲೇರುವ | ಬಿರಿದುಳ್ಳ ಗಿಂಡಿಯ ಸಂಗ || ೩೬ ||
ಕಾಗಿನ ಸತ್ತಿಗೆ ತೂಗುವ ಚೌರವು | ಭೋಗದೊಳಿಹನಾರೆ ಸಂಗಿ |
ಸಾಗಿಸಿ ಸಮರದೊಳಗೆ ಹೊಗಲೇರುವ | ಬಿರಿದುಳ್ಳ ಗಿಂಡಿಯ ಸಂಗ || ೩೬ ||
ಮುತ್ತಿನ ಚೌರಿಯ ಎರಡ ಢಾಳಿಸಿಕೊಂಬ | ಇವನೆತ್ತಣ ನಾಡಮನ್ನೆಯನೆ |
ಎತ್ತಿ ಬರುವ ಸುರಿತಾಳನ ಗಂಡನು | ಗುತ್ತಿಯ ನಾಡ ಗಂಗಣ್ಣ || ೩೭ ||
ಗೀರು ಗಂಧವು ಮೈಯಲ್ಲಿ ಚಿಮ್ಮುರಿ ಸುತ್ತಿ | ಧೀರ ಮನ್ನೆಯನಾರೆ ಸಂಗಿ |
ಜೀವವೊಂದಾದ ರಾಮನ ಗೆಣೆಗೆಕಾರ | ಜಂಗಮ ಬಸವ ಕಾಣಮ್ಮ || ೩೮ ||
ಭಸಿತವು ಪಣೆಯಲ್ಲಿ ಎಸೆವ ರುದ್ರಾಕ್ಷಿಯು | ವಿಷಕಂಠ ರೂಹನಾರೆ ಸಂಗಿ |
ವಸುಧೆಯೊಳಗೆ ನೇಮಿಯ ದಂಡ ಕಡಿವಂಥ | ಹೆಸರುಳ್ಳ ಸಿಂಗಿರಾಜಯ್ಯ || ೩೯ ||
ಬೆಕ್ಕಿಗೆ ಚೆನ್ನಾಟ ಇಲಿಗೆ ಕಷ್ಟಗ[ಳಂತೆ[ | ವ್ಯರ್ಥವಾದುದು ಎನ್ನ ಬದುಕು |
ತೊತ್ತು ಸಂಗಿ[ಯೆ] ಮೂಗ ಹತ್ತೆ ಕೊಯ್ಸುವೆ ಈಗ | ಸಿಕ್ಕಿದೆ [ನನ್ನ] ಕರದೊಳಗೆ || ೪೦ ||
ಹೋಗದೆ ಉಳಿವು[ದು] ಯಾವ ತೆರದೊಳು ಮೂಗು | ನಾಡ ಮಿಂಡರ ಬಯಸುವ[ಳೆ] |
ರೂಢಿಪರಲ್ಲವೆ ತೋರಿ[ದೆ]ನೆ ಗಾರ್ದಭನ | ಹಲ್ಲಾವಿದಳೆ ಕೇಳಮ್ಮ || ೪೧ ||
ಕತ್ತೆಗೆ ಕಡಿವಾಣ ಇಕ್ಕಿ ಜೀವನ ಮಾಡೆ | ಉತ್ತಮ ತೇಜಿ ಎನಿಸುವುದೆ |
ತೊತ್ತು ರೂಪಾಗಿರಲು ರಾಯ ಮುಟ್ಟಲು ಅವಳು | ಪ[ಟ್ಟ]ದ ರಾಣಿಯಾಗುವಳೆ || ೪೨ ||
ಕರಿಯ ಸತ್ತಿಗೆ ಮೇಲೆ ಒರಗಿದ ಶ್ರೀಗಂಧ | ಧುರಗಲಿ ಇವನಾರೆ ಸಂಗಿ |
ಕರಿಘಂಟೆಗಳ ಮೇಲೆ ಹೊಗಲೇರಿ ಕಡಿವಂಥ | ಬಾಗೂರ ನರಸ ಕಾಣಮ್ಮ || ೪೩ ||
ಕೋವಿನ ಸತ್ತಿಗೆ ನೆಳಲೊಳು ನಿಂದಿಹ | ರೂಪುಳ್ಳ ಮನ್ನೆಯನಾರೆ ಸಂಗಿ |
ಗೋಪತಿ ರಾಮಗೆ ಸೋವತಿದೋರುವ | ಗೋಪಿದೇವಿಯ ಕಂದನಮ್ಮ || ೪೪ ||
ಕಲಹವೆಂದರೆ ಮುಂದೆ ಉಲಿದು ಬೊಬ್ಬಿಡುವನು | ಬಲಗೈಯ ಧೀರನಾರೆ ಸಂಗಿ |
ಧರೆಯೊಳು ಜಗಳವೆಂದರೆ ಹಾ[ಯು]ವನಿವ | ಕರಿಯ ಸಂಗಣ್ಣ ಕಾಣಮ್ಮ || ೪೫ ||
ಇವರ ಸತ್ತಿಗೆ ನಿಂದುರಿಯಲೆ ಸಂಗಾಯಿ | ಇವರಗೊಡವೆ ನಮಗೇಕೆ |
ಇವರ ಸತ್ತಿಗೆ ಹಾಗಿರಲಮ್ಮ ಸಂಗಾಯಿ | ಚೆಲುವನ ತೋರೆ ರಾಮುಗನ || ೪೬ ||
ರಾಮನ ತೋರು ತೋರೆಂದರೆ ಸಂಗಾಯಿ | ನಾಡುಮನ್ನೆಯರ ತೋರಿದೆಯಾ |
ರೂಢಿಗಧಿಕ ಚೆನ್ನ ರಾಮನ ತೋರೆಂದು | ನಾರಿ ಸಂಗಿಯ ಕೂಡೆ ನುಡಿದೊ || ೪೭ ||
ನೀಲಸತ್ತಿಗೆ ನಡುವೆ ಚೌಲ ಡಾಳಿಸಿಕೊಂಬ | ಲೋಲ ಮನ್ನೆಯನಾರೆ ಸಂಗಿ |
ಭೂಲೋಕಕಧಿಕ ಬಲ್ಲಾಳನ ಗಂಡ | ಬಾಲ ರಾಮಯ್ಯ ಕಾಣಮ್ಮ || ೪೮ ||
ಎಡಬಲದೊಳಗೆಲ್ಲ ಹಿಡಿದ ಸತ್ತಿಗೆಗಳು | ನಡುವೆ ಬರುವನಾರು ಸಂಗಿ |
ಪೊಡವಿಯೊಳಗೆ ನಾಲ್ಕು ದಿಕ್ಕಿನ ರಾಯರ ಗಂಡ | ಕಡುಗಲಿ ಚೆನ್ನಿಗ ರಾಮ || ೪೯ ||
ರಾಮನೆಂಬುವ ಮಾತ ಕೇಳುತ್ತ ಮನದೊಳು | ಬಾಲೆ ಹರುಷವನು ತಾಳಿದಳು |
ಪ್ರೇಮದಿಂದಲಿ ಆಗ ತರಹರಿಸಲಾರದೆ | ಕಾಮ ಹುಟ್ಟಿತ್ತು ಮನದೊಳಗೆ || ೫೦ ||
ದೃಷ್ಟಿಸಿ ನೋಡಿ ರಾಮನ ಕಂಡು ಮನದೊಳು | ಹುಟ್ಟಿತು ತಾಪ ವೆಗ್ಗಳಿಸಿ |
ಕಟ್ಟಾಳು ರಾಮನ ಸಂಗವ ಹೊಕ್ಕು ಸವಿವೆವು | ದಿಟ್ಟೆಯಾಡಿದಳು ಸಂಗಿಯೊಡನೆ || ೫೧ ||
ಧರೆಯೊಳಗಾಡುವ ಬರಿಮಾತು ಮನ್ಮಥನ | ಉರುಹಿ ಕೊಂದುದು ಸಟೆಯಾಯ್ತು |
ಭರದಿಂದ ಬಂದನು ಸ್ತ್ರೀಯರ ದುರ್ಗವ | ಇರದೆ ಸುರೆಗಳ ಮಾಡುವರೆ || ೫೨ ||
ಬ್ರಹ್ಮನೆಂಬವ ಪಾಪಿ ಇಂತಪ್ಪ ಪುರುಷನ | ನಮ್ಮ ಗಂಡನ ಮಾಡದ್ಹೋದ |
ಕಮ್ಮಗೋಲನ ಬಾಧೆ ಘನವಾಗಿ ಸತಿಯ[ಳು] | ಹೆಮ್ಮೆಕಾತಿ[ಯು] ಜ್ಞಾಪಿಸುತ || ೫೩ ||
ನಿಶ್ಚಯವಹುದೆನೆ ಮುಚ್ಚದೆ ನಯನವನು | ಬೆಚ್ಚಿನೋಡಲು ಎರಳೆಯಂತೆ |
ಚಿತ್ತವುಕ್ಕಲು ಅವನು ತೆಕ್ಕೆಯೊಳು ಬರ[ಲಂ]ತೆ | ಆತ್ಮದ ಸ್ಮರಣೆ ಮರೆದಳು || ೫೪ ||
ಕಾಮನ ಬಾಣವು ಪೂರಸಿತ್ತು ರತ್ನಿಗೆ | ಗಾಯವಡೆದ ಮೃಗದಂತೆ |
ಮಾನಾಭಿಮಾನವ ತೊರೆದಳು ರತ್ನಾಜಿ | ಕಾಮನ ಬಾಧೆ ಘನವಾಗೆ || ೫೫ ||
ಕಾತರವೆಂಬುದು ಪಾಪಿ ಮನ್ಮಥ ಜಗವ | ಹಾಕದೆ ಹಗ್ಗ ಕೊಲ್ಲುವನು |
ಏಕಾಂತವಾದಂತೆ ಒಡೆದು ಕಾಮ ಕೇಳಿ | ಭೂಮಿಯೊಳೊರಗಿದಳು ರತ್ನಿ || ೫೬ ||
ಕಾಮಜರೂಪನು ಮಾಯದುಮ್ಮನು ಕೊಟ್ಟು | ಆಯತ ಮನವ ತಾಗಲೆಸೆಯೆ |
ಬಾಯ ತಾಂಬೂಲವು ಹುಡಿಯಾಗಿ ರತ್ನಾಜಿ | ತಾಯ ಕಾಣದ ಹುಲ್ಲೆಯಂತೆ || ೫೭ ||
ನಿಡುಮುಡಿ ಸಡಿಲಿರೆ ಕಡೆಗಣ್ಣು ಮುಚ್ಚಿತ್ತು | ಪಿಡಿದೆಲೆ ಕೈಯ್ಯಲ್ಲಿ ಬಾಡಿ |
ಹುಡಿಯಾಯ್ತು ತಾಂಬೂಲ ರಸ ಬಾಳು | ಬಿಡದೆ ಬಿದ್ದಳು ಬೆರಗಾಗಿ || ೫೮ ||
ಒಡತಿ ಬೀಳಲು ನೋಡಿ ಹಡಪದ ಸಂಗಿಯು | ಹೊಡೆಯಿತೆ ಬ್ರಹ್ಮ ರಾಕ್ಷಸನು |
ನುಡಿಸಿ ನೋಡುವ ಬನ್ನಿ ಕಳ್ಳ ರಂಡೆಯನೆಂದು | ಪಿಡಿದು [ತ]ಟ್ಟಲು ಬಾಯಿ [ಯಿ]ಲ್ಲ || ೫೯ ||
ಎಡಬಲದ ಗೌಡಿಯರು ಹೊಡೆದುಕೊಳ್ಳಲು ಬಾಯಿ | ಅಳಿದಳು ಅಮ್ಮ ರತ್ನಾಜಿ |
ಉಸುರು ಹೋ[ಗಿ]ದೆ ರತ್ನಿ ಅರಸು ಊರೊಳಗಿಲ್ಲ | ಮುರಿದು ಬೆರಳುಗಳ ಬೊಬ್ಬಿಡಲು || ೬೦ ||
ಅಳುವುದೇತಕೆ ನಿಲ್ಲಿ ಜನರು ಹೊರಗೆ | ಹಲವು ಮಿಂಡರ ಸೂಳೆ ಇವಳು |
ಅಲರಂಬ ರೂಪನ ತನುವ ದೃಷ್ಟಿಸಿ ನೋಡಿ | ಮಲಗಿಹಳು ಮೂರ್ಚೆ ತಾಪದಲಿ || ೬೧ ||
ಸಾಯಬಲ್ಲಳೆ ಸರ್ವದ್ರೋಹಿ ಪಾತಕ ಮೂಳಿ | ಗೊಲ್ಲಕುಲದ ಹೊಲೆರಂಡೆ |
ಮೋಹ ಮಗನೊಳಗಿಡಲು ಮಾರನ ಸರಳಂಬು | ಏರಿದಂದದಿ ಮಲಗಿಹಳು || ೬೨ ||
ಕಾಯವಿಲ್ಲದ ಕಾಮ ಕಾಡುವನೀ ಬಗೆಯ | ಭೂಮಿ ಮಧ್ಯದಿ ತಾನು ಇರಲು |
ಸ್ತ್ರೀ ಪುರುಷರೆಂಬವರ ಗೋವಿನ ತೆರಮಾಳ್ಪ | ತಾ ಕಂಡು ಹರ ಶಿಕ್ಷಿಸಿದ || ೬೩ ||
ರತ್ನಾಜಿ ಮೂ[ರ್ಛೆ]ಯ ಅರ್ಥ ಎಲ್ಲರು ಪೇಳಿ | ಮತ್ತಿಲ್ಲಿ ಬಂದು ರತ್ನಿಯ[ಳು] |
ಕಟ್ವಾಳು ರಾಮಗೆ ಇಟ್ವಾಳು ಮನವನು | ನೆಟ್ಟುಕೊಂಡುದು ಬಾರದಿರಲು || ೬೪ ||
ಮಾರುತನ ಸುಳಿವಾಗಿ ಬೆಮರೊಡೆದ ರತ್ನಿಗೆ | ತೀರಿತು ಮೂರ್ಚೆ ಕಿಂಚಿತವು |
ಸೂರ್ಯಗೆ ಅಡರಿದ ಗ್ರಹವಿಳಿದು ಬರುವಂತೆ | ತೀರಲು ನಯನವ ತೆರೆದು || ೬೫ ||
ಮೃದು ಬಾಲನಂದದಿ ತೊದಲುತ ನುಡಿದಳು | ಕುಣಿಯುತ ತುಟಿ ಬಾಯಿ ಹಲ್ಲು |
ಸುಖಸಾರ ಕೂಡಿದೆನು ಕಾಣ್ವಂತೆ ಎಲ್ಲರು | ಮತಿಗೆಟ್ಟು ನಾಚಿದಂತಿಹಳು || ೬೬ ||
ಏತಕ್ಕೆ ನಾಚಿಯೆ ಈ ರೀತಿಯ ಸುಡು ನಿನ್ನ | ಜಾತಿಯೊಳು ಗಾರ್ದಭನ ಕುಲವೆ |
ನೀ ಕಾದೆ ಸತಿ ಅರ್ಧಭೋಗಾನ್ವಯಗಳ | ಕಾತರ ಯಾಕೆ ಈ ಬಗೆಯ || ೬೭ ||
ಪುರುಷನುಳ್ಳವಳಿಗೆ ತರವೇನೆ ಇಂತಪ್ಪ | ಮಮಕಾರದ ಮೂರ್ಛೆ ತಾಪಗಳು |
ಅರಸು ಕೇಳಲು ನಿನ್ನ ಕೊರೆಸನೆ ಕಿವಿಮೂಗ | ತರಹರವಿರಬೇಕು ಮನದಿ || ೬೮ ||
ದೊರೆ ರಾಯ ಕಂಪಿಲಗೆ ಬೆದರಬಲ್ಲೆನೆ ಸಂಗಿ | ಇರಲಮ್ಮ ನಿನ್ನ ಎದೆಯೊಳಗೆ |
ಧರೆಯೊಳಗೀ ಕಾಯ ಸ್ಥಿರರಾಜ್ಯ ಪಡೆದಿಹುದೆ ಒಂದರ | ಗಳಿಗೆ ಕಾಮನ ಭೋಗ ಸಾಕು || ೬೯ ||
ಜಾಣಬಲ್ಲನೆ ತನ್ನ ವೀಣೆಯ ಸ್ವರವನು | ಗೋವ ಬಲ್ಲನೆ ಕುರಿ ಕಾಯ್ವ |
ಕೋಮಲಾಂಗಿಯ ಮದವ ಮುರಿಯಬಲ್ಲನೆ ರಾಯ | ಮುದಿಜೀವಿ ಬಲ್ಲನೆ ಒಣೆ ಮೋಹ || ೭೦ ||
ಬಾಲೆ ನಿನ್ನಯ ಬಸುರೊಳು ನಾ ಬಂದೇನು | ಹೇಳಬಾರದೆ ಒಂದು ಮಾತ |
ಮೋಸದಿಂದಲಿ ಆ ಸತಿಯರ ಹೊರಡಿಸಿ | ಸೂಸುತ ಕಣ್ಣೀರ ತೊಡೆದು || ೭೧ ||
ಗಾಸಿಯಾಗಿರುವ ರತ್ನಿಗೆ ಭಾಷೆಯ ಕೊಟ್ಟು | ಓಸರಿಸಿದಳು ನೀನೇಕೆ |
ಚಿಂತಿಸುವೆ ಲೋಕಮಂತ್ರವ ಬಲ್ಲೆ | ನಾ ಕರೆತರುವೆ ರಾಮುಗನ || ೭೨ ||
ಬೇಕಾದರು ಒಂದು ಗಳಿಗೆ ಸೈರಿಸು ತಾಯೆ | ನಾ ಕರೆತಹೆ ಅಂಜಬೇಡ |
ನಿಲ್ಲು ಸೈರಿಸು ನೀನು ತಲ್ಲಣಗೊಳಬೇಡ | ಬಲ್ಲೆನು ನಾನೊಂದು ಪರಿಯ || ೭೩ ||
ಕಲ್ಲು ಮನದ ರಾಮ ಬಲ್ಲಿದ ಬಗೆಯೇನು | ಒಳ್ಳೆಯ ಮಂತ್ರವ ಬಲ್ಲೆ |
ಎಲ್ಲಿಗಾದರು ಹೋಗಿ ನಾನೊಂದು ತಿಲಕವ | ಒಲ್ಲದವನ ಒಲಿಸುವುದು || ೭೪ ||
ಮಂತ್ರಿಸು ಗುರುವ[ವ]ನು ಕೊಟ್ಟು ಕಳುಹಿಸಿದರೆ | ಅವನತ್ತ ಹರುಷದಿ ತೆಕ್ಕೊಂಡು |
ಕಂತು ಸನ್ನಿಭ ಚೆನ್ನರಾಮ ಎನಗೊಲಿದರೆ | ಮಂತ್ರ ಒಳ್ಳೆಯದೆ ಸಂಗಾಯಿ || ೭೫ ||
ಉಂಗುರವನು ಕೊಟ್ಟು ಕಳುಹಿದರೇನೆಂಬನೊ | ಕಂಗಳ ಚೆಲುವ ಯೌವನವು |
ಶೃಂಗಾರ ಸುಗುಣೆ ನೀ ಕೊಡುಯೆಂದು ಕಳುಹಲು | ಪಿಂಗಾಣಿಯ ತರಿಸಿದಳು || ೭೬ ||
ಗಂಧ ಕಸ್ತುರಿ ಪುಣುಗು ಕದಂಬ ಮಾಡಲು ರತ್ನಿ | ತಂದಿಟ್ಟು ಹೊನ್ನ ತಟ್ಟೆಯಲಿ |
ಚಂದ್ರಗಮನೆ ತನ್ನ ಉಂಗುರ ಅದರೊಳು ಮಡಗಿ | ಕೊಂಡೊಯ್ಯೆ ಸಂಗಿ ನೀ ಬೇಗ || ೭೭ ||
ಪಟ್ಟೆ ವಸ್ತ್ರಗಳನು ಮುಚ್ಚಿದಳು ಸಂಗಿಯು | ತಟ್ಟನೆ ನಡೆಯೆ ಅವರೆಡೆಗೆ |
ತಂದಳು ರಾಮ ಚೆಂಡಾಡುವ ಬಯಲಿಗೆ | ಚಂದನ ಪರಿಮಳಗಳನು || ೭೮ ||
ಹಸ್ತಿನಿ ಚಿತ್ತಿನಿ ಶಂಖಿನಿ ಪದ್ಮಿನಿ | ಮೊತ್ತದ ನಾಲ್ಕು ಜಾತಿಗಳು |
ಚಿತ್ತಜರೂಪ ರಾಮಯ್ಯನ ಕಾಣುತ್ತ | ಎತ್ತಿ ಕರಂಗಳ ಮುಗಿದಳು || ೭೯ ||
ತಾಯಿ ಕಳುಹಿದ ಚಂದನ ಪರಿಮಳಗಳ | ನಾಯಕ ಮಕ್ಕಳಿಗಿತ್ತು |
ಆಯತದಿಂದಲಿ ಕೊಡುವೂತ ರಾಮಯ್ಯ | ಪ್ರಿಯದಿಂದಲಿ ಕರೆಸಿದನು || ೮೦ ||
ಬಾರಯ್ಯ ಧುರಧೀರ ಅಣ್ಣ ಕಾಟಣ್ಣನೆ | ಬಾರಯ್ಯ ಕೊಳ್ಳೊ ಗಂಧವನು |
ಈ ರೀತಿ ಹಂಚಿದರೆ ಮುಂಚೆ ವೀಳ್ಯವ ಕೊಂಬ | ಧುರಗಲಿ ಜಂಗಮ ಬಸವ || ೮೧ ||
ಎಡಬಲದೆಕ್ಕುಟಿಗರಿಗೆ ರಾಮಯ್ಯನು | ಬಿಡದೆ ಕೊಟ್ಟನು ಗಂಧವನು |
ಕಡುಗಲಿ ತಾನು ತಕ್ಕೊಳ್ಳುವ ಸಮಯದಿ | ತಡಕಿ ಕಂಡನು ಉಂಗುರವ || ೮೨ ||
ಕಂಡನು ಕಮಲಾಕ್ಷಿಯ ಉಂಗುರವನು | ಮಂಡೆಯ ಮೇಲಿಟ್ಟುಕೊಂಡ |
ಮಂಡಲದೊಳಗಿನ್ನು ಹೊಸಪರಿಯಾಯಿತ್ತು | ನೊಂದುಕೊಂಡನು ಮನದೊಳಗೆ || ೮೩ ||
ಹರಹರ ಏನು ಕಾರಣ ಬಂತು ಉಂಗುರ | ಹರಿಹರ ಗುರುವೆ ತಾ ಬಲ್ಲ |
ಹರಿಹರದೇವಿ ಆಡಿದ ಮಾತು ಬಂತಿಲ್ಲಿ | ಭರದಿ ತೋರಿತ್ತು ಸೂಚನೆಯ || ೮೪ ||
ಹಡಪದ ಸಂಗಿ ಉಂಗುರ ಬಂದ ಪರಿಯೇನೆ | ನಿಜವಾಗಿ ಪೇಳು ಎನ್ನೊಡನೆ |
ಕಂಡುದಿಲ್ಲವು ಸ್ವಾಮಿ ನಿಮ್ಮಾಣೆಯ[ಲ್ಲಿ] | ಪ್ರಚಂಡ ರಾಮಗೆ ಹೇಳಿದಳು || ೮೫ ||
ತಡೆಯದೆ ಗಂಧವ ಹದಮಾಡುವಾಗಲು | [ಸಡಿ]ಲಿ ಬಿದ್ದಿತು ಉಂಗುರವು |
ಮಡದಿ ರತ್ನಾಜಿ ಉಂಗುರವನು ತಾ ಕಂಡು | ನುಡಿದನು ರಾಮ ಇಂತೆಂದು || ೮೬ ||
ತಕ್ಕೊಂಡು ಹೋಗಿ ಚಿಕ್ಕಮ್ಮಗೆ ಕೊಡು ಎಂದು | ಉದ್ದಂಡ ರಾಮನು ಕೊಟ್ಟನಾಗ |
ತಕ್ಕೊಂಡು ಬಂದಳು ಹಡಪದ ಸಂಗಿಯು | ಬಂದು ರತ್ನಾಜಿಗೆ ಕೊಡಲು || ೮೭ ||
ಒಲ್ಲದೆ ಹೋದ ಉಂಗುರವನೆಂದೆನಲಾಗ | ತಲ್ಲಣಿಸುತ್ತ ಮನದೊಳಗೆ |
ಫುಲ್ಲಶರನಟ್ಟುಳಿಯನು ತಾಳಲಾರದೆ | ಎಲ್ಲ ದೇವರನು ನೆನೆದಳು || ೮೮ ||
ಕೊನೆ ಬೆರಳುಗುರ ಮೂಗಿನ ಮೇಲೆ ಇಟ್ಟಳು | ಮನಿಸಿಜರೂಪನ ಬಯಸಿ |
ಮನದೊಳಗಿನ್ನೊಂದು ಅನುವ ನಿಶ್ಚಯಿಸುತ | ನೆನೆದಳು ಕುಟಿಲ ದೇವತೆಯ || ೮೯ ||
ಹರಸಿಕೊಂಡಳು ಹರಿಹರನೆಂಬ ಲಿಂಗಕ್ಕೆ | ಹರಕೆಯ ಮಾಡಿ ಹೊನ್ನುಗಳ |
ಇರದೆ ಇಕ್ಕಿಸುವೆನು ನಾ ಹೊನ್ನ ಕಳಸವ | ತರಿಸಿಕೊಟ್ಟರೆ ಲೆಗ್ಗೆ ಚಂಡ || ೯೦ ||
ಹಗ್ಗದ ಹುರಿ ಬಾಯಿ ಬೀಗ ಬೆನ್ನಿನ ಸಿಡಿ | ಬಗ್ಗಿ ಹರೆಯ ಹೊ[ಯಿ]ಸುವೆನು |
ಹುಗ್ಗಿ ಕೂಳನು ಗಂಗಳದಿ ಹೊತ್ತು ನಡೆವೆನು | ನಮ್ಮಗಳ ಕುಲದೇವತೆಗೆ || ೯೧ ||
ಹರಿಹಬ್ಬ ಮಾಡುವೆ ನಾ[ಗುತ್ತಿ] ಅಮ್ಮಗೆ | ಹರಿದಲೆಗಳ ಹೊತ್ತು ನಡೆವೆ |
ಕುರಿದಲೆಗಳ ಕುಟ್ಟಿಸುವೆ ದುರ್ಗಿಯ ಮುಂದೆ | ಧುರಧೀರ ರಾಮ ಸಿಕ್ಕಿದರೆ || ೯೨ ||
ಹಿಡಿಹೊನ್ನ ಕಳಿಸುವೆ ನಾ[ಗುತ್ತಿ]ಯಮ್ಮಗೆ | ಹಿಡಿವೆನೊಪ್ಪತ್ತಿನೂಟವನು |
ತಡೆಯದೆ ನನಗೊಂದು ಶಿಶು ಜನಿಸಿದರೆ | ಬಿಡುವೆನು ಒಲಿದು ಜೋಗತಿಯ || ೯೩ ||
ಕಾಣಿಕೆಯಿಕ್ಕುವೆ ನಾ ಗುತ್ತಿಯಮ್ಮಗೆ | ಕೋಣವೈನೂರ ಹೊಯಿಸುವೆನು |
ಮಾಣಿಕದಾರತಿ ಎತ್ತುವೆ[ನ]ಮ್ಮ | ಕ್ಷೋಣಿಪ ರಾಮ ಸಿಕ್ಕಿದರೆ || ೯೪ ||
ಧರೆಯೊಳು ವರವುಳ್ಳ ತಿರುಮಲೆದೇವರೆ | ಕೊಟ್ಟರೆ ಲೆಗ್ಗೆಯ ಚಂಡ |
ಸುರತದೊಳಗೆ ಒಂದು ಶಿಶುವು ಜನಿಸಿದರೆ | ತಿರುಜೋಗಿಯ ಬಿಡಿಸುವೆನು || ೯೫ ||
ಗುಜ್ಜಾರಿ ಮಂಚವ ಮುನ್ನೂರು ಕಳುಹುವೆ | ಉಜ್ಜಯಿನಿ ಮಲ್ಲಪ್ಪ ನಿನಗೆ |
ಸರಸಿಜ ರಾಮನು ಇಟ್ಟ ಮುತ್ತಿನ ಚಂಡು ಹರುಷದಿ ಬರಲೆನ್ನ ಮನೆಗೆ || ೯೬ ||
ಊರ ಮುಂದಿರುವಂಥ ಮಾರಮ್ಮ ದೇವತೆಗೆ | ಹಾರುಗೋಳಿಯ ಬಿಡಿಸುವೆನು |
ಧೀರ ರಾಮಯ್ಯನು ಇಟ್ಟ ಮುತ್ತಿನ ಚೆಂಡು | ಬೇಗದಿ ಬರಲೆನ್ನ ಮನೆಗೆ || ೯೭ ||
ಅರುವತ್ತು ಚಿನ್ನದ ಕಂಬಿಯ ಕಳಹುವೆ | ಪರ್ವತ ಮಲ್ಲಯ್ಯ ನಿನಗೆ |
ಸರಸಿಜ ರಾಮನು ಇಟ್ಟ ಮುತ್ತಿನ ಚೆಂಡು | ಹರುಷದಿ ಬರಲೆಂದು ಮನೆಗೆ || ೯೮ ||
ಬೇಲೂರ ಚೆನ್ನಪ್ಪನ ಬೇಡಿಕೊಂಡಳು | ಲೋಲ ರಾಮನ ಚೆಂಡು ಬರಲಿ |
ವಾಲಗ ಪಾ[ತ್ರ] ಭೋಗಕ್ಕೆ ಐನೂರು | ಬಾಲಕಿಯರ ಕಳುಹುವೆನು || ೯೯ ||
ಅಕ್ಕರೆಯಿಂದಲಿ ಹರುವೆ ಲಕ್ಕಮ್ಮಗೆ ಹೊತ್ತು | ನಾ ನಡೆವೆ ದೀಪವನು |
ಅಕ್ಕನ ಮಗ ರಾಮ ಸಿಕ್ಕಿದ[ನಾ]ದರೆ | ನಿತ್ಯದಿಂದಲಿ ದೀಪವನು || ೧೦೦ ||
ಚಿನ್ನದ ಕದಪು ರನ್ನದ ಕುಂದಣವನು | ಮನ್ನೆಯ ಹನುಮಗಿಕ್ಕಿಸುವೆ |
ಚೆನ್ನಿಗ ರಾಮಯ್ಯನಿಟ್ಟ ಮುತ್ತಿನ ಚೆಂಡು | ಎನ್ನರಮನೆಗೆ ಬರಲು || ೧೦೧ ||
ಹಸ್ತಪಾದವ ತೊಳೆದು ಮತ್ತೊಮ್ಮೆ ದುಸ್ವಾಗಿ | ನೇತ್ರಲೋಚನನ ಭಜಿಸುವಳು |
ಸತ್ಯಮಾರ್ಗಗಳೆಲ್ಲ ಸುಟ್ಟವನ ತಲೆ ಕಾಮ | ಹತ್ತಿ ರಾಮನ ಬಯಸುವೆನು || ೧೦೨ ||
ಹರಸಿಕೊಂಬಳು ರತ್ನಿ ಹರಿಹರ ಲಿಂಗನ | ಅವರ ಜಟ್ಟಂಗಿ ರಾಮೇಶ್ವರಗೆ |
ದೊರೆ ರಾಮನಾಡುವ ಚೆಂಡೆನ್ನ ಮನೆಗೆ ಸೇರೆ | ಹೊರ ಪೌಳಿ ಹಜಾರ ಹೊಡೆವೆನು || ೧೦೩ ||
ಅರುವತ್ತು ಚಿನ್ನದ ಕಂಬಿಯನೆ ಕಳುಹುವೆ | ಪರ್ವತದ ಗಿರಿಯ ಮಲ್ಲನಿಗೆ |
ಭ್ರಮೆ ಬಿದ್ದ ಮನುಜನ ಬರಿಸಿಕೊಡಲು ನಿಮ್ಮ | ಗಿರಿಯ ಕಾಣುತ ಮಂಡೆಗೊಡುವೆ || ೧೦೪ ||
ಪಂಪಾಪತಿ ಹರನೆ ಹಂಪೆ ವಿರುಪಾಕ್ಷನೆ | ಕಂಪಿಲನ ಸುತನಾಡು ಚೆಂಡು |
ಅಂತ್ರಮಾರ್ಗದಿ ಬಂದು ಅರಮನೆಯ ಸೇರಲು ನಿಮಗೆ | ಶ್ಯಾಲೆ ತೇರುಗಳ ನಡೆಸುವೆನು || ೧೦೬ ||
ಸೋಮವಾರದುಪವಾಸ ಪ್ರಾಣಿರಲು ನಡೆಸುವೆ | ರಾಮಗಿರಿಯ ಸಿದ್ಧೇಶ್ವರಗೆ |
ರಾಮನ ಸುಖದೊಳು ಬಲನಾಗಲು ನಿಮಗೆ | ಕೋರನ್ನದ್ಹೈನ ಬಡಿಸುವೆ || ೧೦೭ ||
ಮೂಡಲಗಿರಿವಾಸ ನಾಡ ಕಾಣಿಕೆ ಕೊಂಬೆ | ರಾಮನ ತನಗೊಲಿಸಿಕೊಡಲು |
ಕೂಡಿದ ಫಲದೊಳು ತೋರಿದರೆ ಶಿಶುಬಾಲ | ವಾರದ ದಾಸಯ್ಯನ ಬಿಡುವೆ || ೧೦೮ ||
ಯಲ್ಲಮ್ಮ ಎಕನಾತಿ ಹುಲ್ಲ ಮನೆಯಳೆ ಕೆಂಚು | ಕಲ್ಲ ಮಾಳಿಗೆಯ ಕಟ್ಟಿಸುವೆ |
ಒಲ್ಲೆನೆಂಬುವ ರಾಮ ಒಲಿದು ಬಂದರೆ ನಿಮಗೆ | ಮತ್ತಲ್ಲಿ ಹೊರುವೆ ಹಡ್ಡಲಿಗೆ || ೧೦೯ ||
ಕುಂಭಿನಿಯಮ್ಮಗೆ ಕೊಡುವೆನು ಕುರಿಕೋಣ | ಹಿಡಿವನೊಪ್ಪತ್ತಿನೂಟಗಳ |
ನಡೆವೆನು ನಿಮ್ಮೆಡೆಗೆ ಬೇವಿನುಡುಗೆಯನುಟ್ಟು | ಸುಗುಣ ರಾಮನ ಕೂಡಿದರೆ || ೧೦೯ ||
ಹರ[ಣ]ದಿಂದಲಿ ಜನಿಸಿ ನಿರ್ವಾಣದಿ ನೆಲೆಗೊಂಡೆ | ಹಿರಿಯ ಕೆಂಜೆಡೆಯ ಭೈರವನೆ |
ಕರುಣಿಸು ರಾಮಗೆ ಮೊದಲಾದ ಬಾಲಗೆ | ಬಿಡುವೆನು ಜೋಗಿಯ ನಿನಗೆ || ೧೧೦ ||
ನಾಡದೇವರ ಮಾತು ಕಾಣಗೊಡುದು ಸಂಗಿ | ವಾಯುದೇವರು ಒಂದು ತೆರದಿ |
ಮಾಯದ ಗಾಳೆದ್ದು ಹಾರಿಸಿ ತಂದರೆ | ಭೀಮ ಹನುಮಗೆ ನಾಮ ಕೊಡುವೆ || ೧೧೧ ||
ಹರಕೆಯ ಕೊಡುವುದು ಸರಿ ಕಾಣೆ ರತ್ನಮ್ಮ | ಪುರುಷ ಕಂಪಿಲನು ಕೇಳಿದರೆ |
ಅದಕೇನು ಗತಿ ಪೇ[ಳ್ವೆ] ತಾನು ಕಾಣದ ಮುನ್ನ | ಧರಣಿದೈವಗಳ ಪ್ರಾರ್ಥನೆ[ಯೇ?] || ೧೧೨ ||
ಹಾದರವ ಬಲ್ಲಾಕೆ ಈ ಜಾಲನರಿಯಳೆ ಸಂಗಿ | ಓದಬಲ್ಲಾತ ಅರ್ಥವನು |
ಭೇದಗಾಣನೆ ಮುದಿಜೀವಿ ಕಂಪಿಲಗೊಮ್ಮೆ | ಅಹುದಾಗಿ ತೋರಿಸುವೆ ಹರಕೆಯನು || ೧೧೩ ||
ಒಡನೆ ಬರುವೆನು ಎಂದು ತಡೆಯಲು ದಿನ ಮೂರು | ಮನದಿ ಕಂಗೆಟ್ಟು ದೈವಗಳ |
ಕಡವೆ ಶಾರ್ದೂಲದೊಳು ಜಯಿಸಿ ಬಳೆ ಉಳಿಯಲು | ಧರಣಿ ದೈವದ ಬೇಡಿಕೊಂಡೆ || ೧೧೪ ||
ಮುದಿರಾಯನ ಮನಸು ಕರಗುವಂದದಿ ಪೇಳ್ವೆ | ಮರಳು ಆಗುವನು ನಿಜವೆಂದು
ಗರತಿಯೊಳ್ ಪತಿವ್ರತೆ ಪುರುಷಮೋಹಿನಿಯೆಂದು | ಇರ[ನೇ]ನ ಮೂಳ ನಾಯಾಗಿ || ೧೧೫ ||
ಕಳ್ಳ ಸತಿಯರ ಮಾತು ಕರ್ಣಕ್ಕೆ ಹಿತ ಕಾಣೆ | ಸುಳ್ಳಿನ ಮುಂ[ದೆ] ನಿಜ ತರವೇ |
ನಿಲ್ಲದು ಕಲಿಯೊಳು [ನನ್ನಿಯದೇನು] ರಲು | ಹಲ್ಲು ಹೋದವಗೆ ಹೆದರುವೆನೆ || ೧೧೬ ||
ಕಂಪಿಲನ ಮಾತೆನ್ನ ಅಂತರಂಗದಿ ಎಲ್ಲ | ಮುಂದೆ ಹಾರಿಸುವೆ ಮೇಘದಲಿ |
ಕಂತುಸನ್ನಿಭ ರಾಮ ಬಂದು ನೆರೆದರೆ ಸಾಕು ಮಂದಿ | ಕಾಂತನ ಮೂಲೆ ಹೊಗಿಸುವೆನು || ೧೧೭ ||
ಆಳಿದ ಕಂಪಿಲ[ನು]ಕಾಲವಶಕೆ ಸಂಗಿ | ಕೋವಿದ ಪುರುಷ ದೊರೆಯದೆ |
ಹಾಲ್ಹಣ್ಣು ಸವಿದ ಜಿಹ್ವೆಎ ಒಣಗೂಳು | ಸೇರುವುದೆ ಸಂಗೀ ನೀ ಪೇಳು || ೧೧೮ ||
ಲಾಯದೊಳಗಣ ತೇಜಿ ಪೋದಂತೆ ಮುದಿಯಾಗಿ | ಸಾಣಿಗೆ ಸಮರ್ಥನಿಲ್ಲದೆ |
ಏಳಲಾರದ ಪುರುಷ ನೀರೆಯ ಒಡಗೂಡೆ | ತೀರುವುದೆ ಕಾಮನ ಕಲೆಯು || ೧೧೯ ||
ಹಸ್ತಿನಿ ಜಾತಿಯ ರತ್ನಿ ತನ್ನಯ ಮನ | ಚಿತ್ತ ಹರಿ[ದಂ]ತೆ ಆಡುತಿರಲು |
ಮತ್ತಲ್ಲಿ ಶೃಂಗಾರ ತೋಟದೊಳಗೆ ಕುಳಿತು | ಕಂದ ರಾಮನ ನೆನೆ ನೆನೆದು || ೧೨೦ ||
ಶೃಂಗಾರ ತೋಟದೊಳು ರಂಭೆ ರತ್ನಿಯು ಕುಳಿತು | ಚೆನ್ನಿಗ ರಾಮನ ನೆನೆದು |
ಎಂದಿಗೆ ಮುಖ ಕಾಣ್ವೆ ಚಂದ್ರಗೆ ಪ್ರತಿಯಾದ | ಕಂದರ್ಪರೂಪ ಬರನೆನುತ || ೧೨೧ ||
ನೆರೆ ಪಾಪಿ ರತ್ನಾಜಿ ಈ ತೆರದೊಳು ಇರುವಾಗ | ಬಿರಿದಂಕರಾಡೆ ಲೆಗ್ಗೆಯನು |
ಒಲಿದು ಲಾಲಿಸಿ ಕೇಳಿ ಸುಗುಣ ಮೋಹನರೆಲ್ಲ | ಹೊಡೆದಾಡು ಲೆಗ್ಗೆ ಛಲ ಪದವ || ೧೨೨ ||
ಭೇರಿ ಕಹಳೆಯ ಸ್ವರವು ಭೂಮಿಯಾರ್ಭಟಿಸುವ | ಸಡಗರವ ಶಿವ ತಾನೆ ಬಲ್ಲ |
ಕಿಡಿಕಿಡಿ ಮಸುಗುತ ಛಲ ಪಂಥಗಳು ಪುಟ್ಟಿ | ಹೊಡೆದಾಡೆ ಹೀನ ಭಾಷೆಯಲಿ || ೧೨೩ ||
ರಾಯ ಕಾಟನ ಕಡೆಗೆ ಮೊನೆಗಾರ ಎಕ್ಕಟಿಗರು | ಭೇರುಂಡ ಪುಲಿ ಸಿಂಹದಂತೆ |
ಬಾಯ ಧರಣಿಗೆ ಭೂಮಿ ತಾನದುರುವಂದದಿ | ಹೂಡೇನು ಲೆಗ್ಗೆ ಚಂಡೆನುತ || ೧೨೪ ||
ಹಿಡಿಯಲು ಚಂಡಾಗ ನಿಡುಗಲ್ಲ ಗಂಗರಸ | ಹೊಡೆವೆನು ಲೆಗ್ಗೆ ಹೂಡೆನಲು |
ಇಡು ನಿನ್ನ ಪುಟಿಗಳನು ಹಿಡಿಯದಿದ್ದರೆ | ಇಡಿಸಣ್ಣ ಮೂಗಿಗೆ ಸುಣ್ಣ || ೧೨೫ ||
ಕಾಲನಾರ್ಭಟದೊಳು ನೋಡಿಸುತ ಗಂಗಯ್ಯ | ಭೂಮಿ ಜಜ್ಝರಿಪಂತೆ ಇಡಲು |
ಹೂಡಲು ಲೆಗ್ಗೆಯ ಹದ್ದಿನಂದದಿ ಚೆಂಡು | ಎರಗಲು ಗನನ ಮಾರ್ಗದಲಿ || ೧೨೬ ||
ರಾಯ ರಾಮನ ಮಂದಿ ನೋಡಿದರು ಬರುತಿರ್ಪ | ಭೋರೆಂದು ಬರಸಿಡಿಲ ತೆರದಿ |
ಓರ್ಯಾಗಲೆಲ್ಲರು ಎಡಗೈಯ ಹಂಪನು | ಬಾಗಿ[ಯೆ] ಪಿಡಿದನು ಚಂಡ || ೧೨೭ ||
ಗಂಗರಸು ನಡೆದನು ಗಾಳಿಪೂಜೆಗೆ ಮುನ್ನ | ಇನ್ನಾರು ಇಡುವ ತಕ್ಕೊಳ್ಳಿ |
ಎದ್ದು ಬಂದನು ಮದ್ದಾನೆ ಮಲೆನಾಡ | ಮುದ್ದು ಮಲ್ಲಯ್ಯ ಚೆಂಡ್ಹಿಡಿದ || ೧೨೮ ||
ಕಿಡಿಕಿಡಿ ಹಾರುತ ಹೊಡೆಯಲು ಮಲ್ಲಯ್ಯ | ನೆಗೆದು ಲೆಗ್ಗೆಯು ಪುಟಿದೇಳೆ |
ಬಿಡದಿರಿ ಚೆಂಡನು ಹಿಡಿಯೆನಲು ರಾಮಯ್ಯ | ನೆಗೆದಿಡುವ ಜಂಗಮ ಬಸವ || ೧೨೯ ||
ಸಾಗಿದ ಮಲ್ಲರಸು ಬೋನದ ಗಂಜಿಗೆ | ಯಾವನು ಬನ್ನಿ ಇನ್ನೊಬ್ಬ |
ಭೇರುಂಡನಂದದಿ ಬಂದು ಚಂಡನು ಪಿಡಿಯೆ | ಸೀರ್ಯದ ರಂಗನಾಯಕನು || ೧೩೦ ||
[1] + ಶಾರದಾಂಬಾಯ ನಮಃ (ಮೂ)
Leave A Comment