(ರಾಜಕುಮಾರಿ ಮಲಗಿ ನರಳುತ್ತಿದ್ದಾಳೆ. ಪಕ್ಕದಲ್ಲಿ ರಾಜ, ಮಂತ್ರಿ)
ರಾಜ : ಮೂರು ದಿನಗಳಿಂದ ರಾಜಕುಮಾರಿ ಹೀಗೇ ನರಳುತ್ತಿದ್ದಾಳೆ. ಇವಳ ಹೊಟ್ಟೆ ನೋವನ್ನ ವಾಸಿ ಮಾಡುವಂಥ ಒಬ್ಬ ವೈದ್ಯನೂ ಸಿಕ್ಕಲಿಲ್ಲವೆ ಮಂತ್ರಿಗಳೆ?
ಮಂತ್ರಿ : ಇಲ್ಲ ಪ್ರಭು; ಯಾರ ವೈದ್ಯವೂ ರಾಜಕುಮಾರಿಯ ಮೇಲೆ ಪರಿಣಾಮ ಬೀರುತ್ತಿಲ್ಲ. ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಪರ ರಾಜ್ಯಗಳಲ್ಲೂ ರಾಜಕುಮಾರಿಯ ಹೊಟ್ಟೆನೋವು ವಾಸಿಮಾಡುವ ವೈದ್ಯರಿಗೆ ಯೋಗ್ಯ ಬಹುಮಾನ ಕೊಡುವುದಾಗಿ ಡಂಗುರ ಸಾರಿಸಿದ್ದೇನೆ.
ರಾಜಕುಮಾರಿ : ಅಯ್ಯೋ ನೋವು, ಹೊಟ್ಟೆನೋವಪ್ಪಾ….
ರಾಜ : ಮಂತ್ರಿ, ಮಗಳು ಈ ಪರಿ ಸಂಕಟ ಪಡೋದನ್ನ ನೋಡಲಾರೆ. ಇವಳ ನೋವು ವಾಸಿ ಮಾಡಿದವರಿಗೆ ಅರ್ಧ ರಾಜ್ಯ ಕೊಡತೀನೀಂತ ಡಂಗುರ ಸಾರಿಸು.
ಮಂತ್ರಿ : ಅಪ್ಪಣೆ ಪ್ರಭು, (ಹೊರಡುವನು)
ರಾಜಕುಮಾರಿ : ಅಯ್ಯಯ್ಯೋ ನೋವು ತಡೀಲಾರೆ.
ರಾಜ : ಮಂತ್ರಿ ನಿಲ್ಲು. ಈ ನೋವು ವಾಸಿ ಮಾಡಿದವರಿಗೆ ಇಡೀ ರಾಜ್ಯ ಕೊಡತೀನಿ ಅಂತ ಡಂಗುರ ಸಾರು.
ಮಂತ್ರಿ : ಹಾಗೇ ಆಗಲಿ ಪ್ರಭು. (ಹೊರಡುವನು)
ರಾಜಕುಮಾರಿ : ಅಯ್ಯೋ ಅಪ್ಪಾ, ಸಾಯತೇನೆ, ನನಗೆ ವಿಷ ಕೊಡಿ.
ರಾಜ : ಅಯ್ಯಾ ಮಂತ್ರಿ ರಾಜ್ಯವನ್ನಲ್ಲದೆ ರಾಜಕುಮಾರೀನ್ನೂ ಮದುವೆ ಮಾಡಿಕೊಡ್ತೀನಿ ಅಂತ ಡಂಗುರ ಸಾರಯ್ಯಾ-
ಮಂತ್ರಿ : ಅಪ್ಪಣೆ ಪ್ರಭು.
(ಹೊರಡುವಷ್ಟರಲ್ಲಿ ಸೇವಕ ಬಂದು ನಮಸ್ಕರಿಸಿ ನಿಲ್ಲವನು)
ಸೇವಕ : ಪ್ರಭು ಬೆಪ್ತಕ್ಕಡಿ ಬೋಳೇಶಂಕರ ಬಂದವನೆ. ಅವನ ಹತ್ತಿರ ಮದ್ದಿದೆಯಂತೆ.
ಮಂತ್ರಿ : ಬೆಪ್ತಕ್ಕಡಿಗಳಿಗೆಲ್ಲಾ ಸಗ್ಗುವ ರೋಗ ಅಲ್ಲವಯ್ಯಾ ಇದು. ರಾಜಕುಮಾರಿಗೆ ಬಂದಿರೋದು, ರಾಜರೋಗ. ಅದ್ದರಿಂದ ರಾಜವೈದ್ಯರೇ ಬರಬೇಕು.
ರಾಜ : ಎಲ್ಲರನ್ನೂ ನೋಡಿದ್ದಾಯ್ತಲ್ಲ ಮಂತ್ರಿಗಳೇ.
ಮಂತ್ರಿ : ಪ್ರಭು ಬಹುಮಾನದ ಆಸೆಯಿಂದ ಹಾದಿಬೀದಿ ದಾಸಯ್ಯಗಳೆಲ್ಲ ವೈದ್ಯ ಮಾಡೋದಕ್ಕೆ ಬರ್ತಿದಾರೆ. ಅವರನ್ನ ತಡೆಯೋದೇ ಕಷ್ಟವಾಗಿದೆ.
ರಾಜಕುಮಾರಿ : ಬೆಪ್ತಕ್ಕಡಿ- ಅದು ಅವನ ಹೆಸರ? ವಿಶೇಷಣವ?
ಸೇವಕ : ಎರಡೂ ಹೌದು ರಾಜಕುಮಾರಿ.
ರಾಜ : ಯಾರು ನೋಡಿದರೂ ಪ್ರಯೋಜನ ಇಲ್ಲ ಅಂದಮೇಲೆ ಸಾಮಾನ್ಯ ಬೆಪ್ತಕ್ಕಡೀನೂ ನೋಡಲೇಳು. ಕರೆತಾರಯ್ಯ ಅವನ್ನ.
(ಸೇವಕ ಹೋಗಿ ಬೋಳೇಶಂಕರ ಹಾಗೂ ಕೋಡಂಗಿಯನ್ನ ಕರೆತರುವನು.)
ಬೋಳೇಶಂಕರ : ಪ್ರಭುಗಳಿಗೆ ನಮಸ್ಕಾರ. ತಾವು ನಂಬುಗೆ ಇಡೋದಾದರೆ ರಾಜಕುಮಾರಿಗೆ ನಾನು ಮುದ್ದು ಕೊಡಬಲ್ಲೆ.
ರಾಜ : ನಾಟಿ ವೈದ್ಯವೊ?
ಬೋಳೇಶಂಕರ : ಹೌದು ಪ್ರಭು.
ರಾಜ : ಅಪಾಯವೇನೂ ಇಲ್ಲ ತಾನೆ?
ಬೋಳೇಶಂಕರ : ಇದನ್ನ ಸೇವಿಸಿದವರು ಖಂಡಿತ ಸಾಯೋದಿಲ್ಲ.
ಮಂತ್ರಿ : ಎತ್ತಿಕೊಳ್ತಾನೇ ಸಾವು ಅಂತೀಯಲ್ಲಯ್ಯಾ, ನೀನೇನು ವೈದ್ಯನೋ, ಗೋರಿ ಅಗಿಯೋ ಕೆಲಸದವನೊ?
ಬೋಳೇಶಂಕರ : ಎರಡೂ ಅಲ್ಲ, ಸಾಮಾನ್ಯ ರೈತ ಸ್ವಾಮೀ.
ಮಂತ್ರಿ : ಇದ್ಯಾಕೋ ಸರಿಹೋಗಲಿಲ್ಲ ಪ್ರಭು, ರಾಜವೈದ್ಯರಿಗಾಗದ್ದು ರೈತನಿಂದ ವಾಸಿ ಆಗುತ್ತೆ ಅಂದರೆ…. ಬಹುಮಾನದ ಆಸೆಗಾಗಿ….
ಬೋಳೇಶಂಕರ : ಅದಕ್ಕೇ ನಂಬುಗೆ ಇಡೋದಾದರೆ ಅಂದೆ.
ರಾಜಕುಮಾರಿ : ಅಯ್ಯೋ ಅಪ್ಪಾ ನೋವಿನಿಂದಾ ಸಾಯತೇನೆ….
ರಾಜ : ಅದೇನು ವೈದ್ಯ ಮಾಡುತ್ತೀಯೋ ಮಾಡಿಬಿಡಯ್ಯಾ.
ಬೋಳೇಶಂಕರ : ರಾಜಕುಮಾರಿ ಈ ಬೇರನ್ನ ಬಾಯಲ್ಲಿಟ್ಟುಕೊಂಡು ಜಗಿದು ನುಂಗಬೇಕು, ಶಿವ ನಿಮಗೆ ಒಳ್ಳೇದನ್ಮಾಡುತ್ತಾನೆ..
(ರಾಜಕುಮಾರಿಯ ಹಾಸಿಗೆ ಕೆಳಗಿರೊ ಪಿಶಾಚಿ ” ಅಯ್ಯಯ್ಯೋ ಹಾಗನ್ನಬೇಡ, ದಯಮಾಡಿ” ಎಂದು ಹೇಳಿದ್ದನ್ನ ಕೇಳಿ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಕೂಡಲೇ ಕೋಡಂಗಿ “ಶಿವ ಶಿವ ಶಿವ” ಎಂದು ಕೂಗುತ್ತಾನೆ. ಪಿಶಾಚಿ ೩ ನಡುಗುತ್ತ ಹೊರಬರುತ್ತದೆ. ಮಂತ್ರಿ ಮತ್ತು ಸೇವಕ ಹೆದರಿ ಓಡುತ್ತಾರೆ. ರಾಜ ಮೂರ್ಛೆ ಬೀಳುತ್ತಾನೆ)
ಬೋಳೇಶಂಕರ : ಎಲಾ ಅನಿಷ್ಟವೇ ಮತ್ತೆ ಬಂದೆಯಾ?
ಪಿಶಾಚಿ ೩ : ನಾನಲ್ಲ ಮೊದಲು ನಿನಗೆ ಸಿಕ್ಕವನು ನನ್ನ ತಮ್ಮ. ನಾನು ನಿನ್ನಣ್ಣ ಸರದಾರ ಸೋಮಣ್ಣನ ಹತ್ತಿರ ಇದ್ದವನು.
ಬೋಳೇಶಂಕರ : ನೀನು ಯಾರಾದರೂ ಆಗಿರು, ನಿನ್ನ ತಮ್ಮಂದಿರಿಗಾದ ಗತಿಯೇ ನಿನಗೂ ಕಾದಿದೆ.
(ಹೊಡೆಯ ಹೋಗುವನು)
ಕೋಡಂಗಿ : ಇರು ಇರು ಮಿತ್ರಾ, ಇದೇನು ಲಾಭ ಕೊಡುತ್ತದೊ ನೋಡೋಣ ಇರು.
ಪಿಶಾಚಿ ೩ : ಅಯ್ಯಯ್ಯೋ ದಮ್ಮಯ್ಯಾ ನನ್ನನ್ನ ಬಿಟ್ಟುಬಿಡು. ಇನ್ನು ಮ್ಯಾಲೆಂದೂ ನಿನ್ನ ತಂಟೆಗೆ ಬರೋದಿಲ್ಲ. ಬೇಕಾದರೆ ನಿನಗೆ ಸಹಾಯ ಮಾಡತೀನಿ.
ಬೋಳೇಶಂಕರ : ಏನು ಮಾಡಬಲ್ಲೆ?
ಪಿಶಾಚಿ ೩ : ಸಿಪಾಯಿಗಳನ್ನು ಮಾಡಬಲ್ಲೆ.
ಬೋಳೇಶಂಕರ : ಅವರಿಂದೇನುಪಯೋಗ?
ಪಿಶಾಚಿ ೩ : ನೀನೇನು ಹೇಳಿದರೂ ಮಾಡುತ್ತಾರೆ.
ಬೋಳೇಶಂಕರ : ಅವರು ಹಾಡಬಲ್ಲರೊ?
ಕೋಡಂಗಿ : ಅವರು ಕುಣಿಯಬಲ್ಲರೊ?
ಪಿಶಾಚಿ ೩ : ನೀನು ಇಷ್ಟಪಟ್ಟರೆ ಹಾಡುತ್ತಾರೆ.
ಬೋಳೇಶಂಕರ : ಆಗಲೇಳು, ಸ್ವಲ್ಪಜನ ಸಿಪಾಯಿಗಳನ್ನು ಮಾಡಿ ತೋರಿಸು.
ಪಿಶಾಚಿ ೩ : ಹುಲ್ಲಿನ ಹೊರೆ ತಗೊಂಬಂದು ನೆಲದ ಮೇಲೆ ನಿಲ್ಲಿಸು.
ಬೋಳೇಶಂಕರ : ಇರು. ಕೋಡಂಗೀ ಕುದುರೆ ಲಾಯದಿಂದ ಒಂದು ಹೊರೆಹುಲ್ಲು ತಗಂಬಾ (ಕೋಡಂಗಿ ಓಡುವನು) ನಿಜ ಹೇಳು, ರಾಜಕುಮಾರೀನ್ನ ನೀನು ಯಾಕೆ ಹಿಡಿದೆ?
ಪಿಶಾಚಿ ೩ : ನೀನು ಇಲ್ಲಿಗೆ ಬರಲಿ ಅಂತ.
ಬೋಳೇಶಂಕರ : ನಿಮ್ಮನ್ನ ನನ್ನಲ್ಲಿಗೆ ಕಳಿಸಿದವರು ಯಾರು?
ಪಿಶಾಚಿ ೩ : ನಮ್ಮ ಯಜಮಾನ; ಸೈತಾನ ದೊರೆ.
(ಕೋಡಂಗಿ ಬರುವನು.)
ಬೋಳೇಶಂಕರ : ಈಗ ಮಾಡು.
ಪಿಶಾಚಿ ೩ : (ಹುಲ್ಲನ್ನ ನೆಲದ ಮೇಲೆ ನಿಲ್ಲಿಸಿ)
ಹಂಡೋಲ ಬಂಡೋಲ
ಚಿಗರಿ ಚಿಕಲಕ ಬಕಲಕ
ಸಾಲಕುದರಿ ಹನುಮಂತರಾಯಾ
ಹುಲ್ಲಿನೆಸಳು ಸಿಪಾಯಾಗ್ಲಿ
ಬಚ್ಚಾ ಬೋಲ್
ಬೋಲಾತಿ ಬೋಲ್ ಹ್ರಾಂ ಲಂಗೋಟಿಕೋಲ್
(ಈಗ ಒಂದೊಂದು ಹುಲ್ಲೆಸಲಿನಿಂದ ಒಬ್ಬೊಬ್ಬ ಜವಾನ ಬರುತ್ತಾನೆ.)
ಬೋಳೇಶಂಕರ : ಚೆನ್ನಾಗಿದೆ, ಆಟ ತುಂಬ ಚೆನ್ನಾಗಿದೆ. ಇದನ್ನು ತೋರಿಸಿದರೆ ಮಕ್ಕಳು, ಹುಡಿಗೇರು ತುಂಬ ಖುಷಿ ಪಡುತ್ತಾರೆ!
ಪಿಶಾಚಿ ೩ : ಈಗ ನಾನು ಹೋಗಲಾ?
ಬೋಳೇಶಂಕರ : ಇರಯ್ಯಾ. ಈ ಸಿಪಾಯಿಗಳನ್ನು ಮೊದಲಿನ ಹಾಗೇ ಹುಲ್ಲು ಮಾಡು. ಇಲ್ಲದಿದ್ದರೆ ಒಳ್ಳೇ ಹುಲ್ಲು ದಂಡವಾಗುತ್ತದೆ.
ಪಿಶಾಚಿ ೩ : ಮಂತ್ರವನ್ನು ತಿರುಗಾ ಮುರುಗಾ ಹೀಗೆ ಹೇಳಿ;
ಕಲಬಕ ಕಲಕಚಿ ರಿಗಚಿ ಲಂಡೋಲ್ ಕಿರಿ
ಸಾಲ ಕುದರಿ ಹನುಮಂತರಾಯಾ
ಎಲ್ಲಾ ಸಿಪಾಯಿ ಹುಲ್ಲಾಗ್ಲಿ ಬಚ್ಚಾಬೋಲ್
ಬೋಲಾತಿಬೋಲ್ ಹ್ರೀಂ ಲಂಗೋಟಿ ಕೋಲ್
(ಈಗ ಪುನಃ ಸಿಪಾಯಿಗಳೆಲ್ಲ ಹುಲ್ಲು ಹೊರೆಯಾಗುವರು)
ಪಿಶಾಚಿ ೩ : ನಾನಿನ್ನು ಹೋಗಲಾ?
ಕೋಡಂಗಿ : ಆಯ್ತು ಹೊರಡು ಶಿವ ಶಿವ ಶಿವ ಶಿವ ಭೋಂ ಭೋಂ ಶಂಕರ, ಬೋಳೇ ಶಂಕರ….
ಪಿಶಾಚಿ ೩ : ಅಯ್ಯಯ್ಯೋ ಆ ಹೆಸರೆತ್ತಬೇಡಿ. ಸಾಯತೀನಿ…. ಅಯ್ಯಯ್ಯೋ.
(ಪಿಶಾಚಿ ತಂತಾನೆ ಸುತ್ತಿ ಸುತ್ತಿ ಸಾಯುತ್ತದೆ)
Leave A Comment