Categories
ಭೂಮಿ ವಿಜ್ಞಾನ

ಭೂಮಿಯ ಅಂತರಾಳ

ನೀವು ಯುಧಿಷ್ಠಿರನ ಹೆಸರನ್ನು ಕೇಳಿದ್ದೀರಲ್ಲವೆ? ಪಂಚಪಾಂಡವರಲ್ಲಿ ಅವನು ಹಿರಿಯ. ದ್ವೈತವನದಲ್ಲಿ ಪಾಂಡವರೆಲ್ಲ ಅರಣ್ಯವಾಸ ಮಾಡುತ್ತಿದ್ದ ಸಮಯ. ಒಮ್ಮೆ ಯುಧಿಷ್ಠಿರ ಬೇಟೆಯಾಡಿ ಬಾಯಾರಿ ಬಳಲಿದ. ಹತ್ತಿರದಲ್ಲೇ ಸರೋವರ ಕಂಡಿತು. ಸರಿ, ನೀರು ಕುಡಿಯಲೆಂದು ಸರೋವರಕ್ಕೆ ಬಂದ. ಆಶ್ಚರ್ಯ! ತಮ್ಮಂದಿರೆಲ್ಲ ದಡದ ಮೇಲೆ ನಿರ್ಜೀವವಾಗಿ ಬಿದ್ದಿದ್ದಾರೆ. ಅಷ್ಟರಲ್ಲೇ ಅಶರೀರ ವಾಣಿಯೊಂದು ಮೊಳಗಿತು. ತಾನು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಅನಂತರ ನೀರು ಕುಡಿಯಬೇಕೆಂದು ಕಟ್ಟಪ್ಪಣೆ ಮಾಡಿತು. ಯುಧಿಷ್ಠಿರ ಸಮ್ಮತಿಸಿದ. ‘ಭೂಮಿಗಿಂತ ದೊಡ್ಡವಸ್ತು ಯಾವುದು? ಆಕಾಶಕ್ಕಿಂತ ಎತ್ತರವಾದದ್ದು ಯಾವುದು?’ – ಅಶರೀರಿ ಯಕ್ಷನ ಪ್ರಶ್ನೆಗೆ ಯುಧಿಷ್ಠಿರ ಏನು ಉತ್ತರಿಸಿದ ಗೊತ್ತೆ? ‘ಭೂಮಿಗಿಂತ ತಾಯಿ ದೊಡ್ಡವಳು, ಆಕಾಶಕ್ಕಿಂತ ತಂದೆ ಎತ್ತರದವನು’ ಎಂದು.

ತಾಯಿಯ ಶರೀರ ನಮ್ಮ ಭೂಮಿಗಿಂತಲೂ ಗಾತ್ರದಲ್ಲಿ ದೊಡ್ಡದು ಎಂದು ಈ ಮಾತಿನ ಅರ್ಥವಲ್ಲ. ತಾಯಿ ತನ್ನ ಪ್ರೀತಿ ವಾತ್ಸಲ್ಯಗಳಿಂದ ಮಕ್ಕಳನ್ನು ಬೆಳೆಸುವುದರಿಂದಲೇ ಯುಧಿಷ್ಠಿರ ತಾಯಿಯನ್ನು ಭೂಮಿಗಿಂತ ದೊಡ್ಡವಳು ಎಂದ. ನಮ್ಮ ಬೆಳೆ ಭೂಮಿಯಿಂದ ಬರಬೇಕು. ನಮ್ಮ ದಿನನಿತ್ಯದ ಪಾತ್ರೆ ಪದಾರ್ಥಗಳಿಗೆ, ಕೈಗಾರಿಕೆಗಳಿಗೆ ಬೇಕಾದ ಖನಿಜ ದೊರೆಯುವುದೇ ನಮ್ಮ ಭೂಮಿಯಿಂದ. ಅಂದಮೇಲೆ ಭೂಮಿ ನಮಗೆ ತಾಯಿಯ ಸಮಾನವಲ್ಲವೆ?

ಭೂಮಿಯನ್ನು ವಸುಂಧರೆ, ವಸುಧೆ, ಧರಿತ್ರಿ, ಧರೆ, ಪೃಥ್ವಿ, ಇಳೆ ಎಂಬ ಹತ್ತಾರು ಹೆಸರುಗಳಿಂದ ನಾವು ಕರೆಯುತ್ತೇವೆ. ಮತ್ಯ್ ಲೋಕವೆಂಬುದು ಭೂಮಿಗೆ ನೀಡಿರುವ ಇನ್ನೊಂದು ಹೆಸರು.

ಭೂಮಿಯ ಮೇಲೆ ನಾವಷ್ಟೇ ವಾಸಿಸುತ್ತಿಲ್ಲ. ನಮ್ಮಂತೆ ಇಲ್ಲಿ ಕೋಟಿ ಕೋಟಿ ಪ್ರಾಣಿಗಳಿವೆ, ಪಕ್ಷಿಗಳಿವೆ, ವಿಧವಿಧವಾದ ಜೀವ ಜಂತುಗಳಿವೆ. ಕಣ್ಣಿಗೆ ಕಾಣದ ಗಾಳಿ ಅತ್ತಿಂದಿತ್ತ ಬೀಸುತ್ತಿದೆ. ಕಣ್ಣಿಗೆ ಹಬ್ಬವುಂಟುಮಾಡುವ ನದಿ, ತೊರೆಗಳು ಹರಿಯುತ್ತಿವೆ. ಕಣಿವೆ-ಕಂದರ, ಹಳ್ಳ ತಿಟ್ಟು-ಒಂದೇ ಎರಡೇ ಭೂಮಿಯ ಮೇಲಿರುವ ಸ್ವರೂಪಗಳು? ನಾವು ಇವೆಲ್ಲವನ್ನೂ ನಮ್ಮ ಬದುಕಿಗೆ ಬಳಸಿಕೊಂಡಿದ್ದೇವೆ. ಭೂಮಿಯಿಂದ ನಮಗಾಗುತ್ತಿರುವ ಉಪಕಾರ ಅಷ್ಟಿಷ್ಟಲ್ಲ. ಅದನ್ನು ಪಟ್ಟಿ ಮಾಡುವುದಂತೂ ಸಾಧ್ಯವೇ ಇಲ್ಲ. ಇದರಿಂದಾಗಿಯೇ ‘ಭೂಮಾತೆ’ ಎಂದು ಭೂಮಿಯನ್ನು ಮನುಷ್ಯ ಕೃತಜ್ಞತೆಯಿಂದ ಕರೆದಿದ್ದಾನೆ.

ನಮಗಾದರೆ ಭೂಮಿ ನೆಲೆ ನೀಡಿದೆ. ಆದರೆ ಭೂಮಿಗೆ ಆಸರೆಯೇ ಇಲ್ಲ. ಅದು ನಿಶ್ಚಲವಾಗಿರದೆ ಸೂರ್ಯನ ಸುತ್ತ ಸುತ್ತುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಮ್ಮ ಭೂಮಿಯೊಂದೇ ಸುತ್ತುತ್ತಿಲ್ಲ. ಇದರ ಜೊತೆಗೆ ಎಂಟು ಗ್ರಹಗಳು ಸೂರ್ಯನ ಸುತ್ತ ತಾವು ಹುಟ್ಟಿದಂದಿನಿಂದ ಪ್ರದಕ್ಷಿಣೆ ಹಾಕುತ್ತಲೇ ಇವೆ. ಇದರಿಂದಾಗಿಯೇ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರಾನಸ್‌, ನೆಪ್ಚೂನ್‌, ಪ್ಲೂಟೋ ಗ್ರಹಗಳನ್ನು ಸೌರವ್ಯೂಹದ ಸದಸ್ಯರೆನ್ನುವುದು. ಸೂರ್ಯ ಈ ಗ್ರಹಗಳಿಗೆಲ್ಲ ಒಡೆಯ; ಮನೆಯಲ್ಲಿ ತಂದೆ ಇದ್ದಂತೆ. ಈ ಗ್ರಹಗಳೆಲ್ಲವೂ ಸೂರ್ಯನಿಂದ ನಿಶ್ಚಿತವಾದ ದೂರದಲ್ಲಿ ತಮ್ಮದೇ ಆದ ಪಥದಲ್ಲಿ ಬುಗುರಿಯಂತೆ ಗಿರಿಕಿ ಹೊಡೆಯುತ್ತ ಪ್ರದಕ್ಷಿಣೆ ಹಾಕುತ್ತಿರುವುದು ಬಲು ಮೋಜಿನದು. ಒಂದು ಗ್ರಹವಿದ್ದಂತೆ ಮತ್ತೊಂದಿಲ್ಲ. ಒಂದೊಂದು ಗ್ರಹದ ಗಾತ್ರವೂ ಬೇರೆ ಬೇರೆ, ಸೂರ್ಯನ ಸುತ್ತ ಪರಿಭ್ರಮಿಸಲು ಅವು ತೆಗೆದುಕೊಳ್ಳುವ ಸಮಯವೇ ಬೇರೆ ಬೇರೆ. ಸೂರ್ಯನಂತೆ ಇವು ತಾವೇ ತಾವಾಗಿ ಪ್ರಕಾಶಿಸುವುದಿಲ್ಲ, ಶಕ್ತಿಯನ್ನು ಸೂಸವುದಿಲ್ಲ. ಇದರಿಂದಾಗಿಯೇ ಭೂಮಿಯೂ ಸೇರಿದಂತೆ ಇವೆಲ್ಲವನ್ನೂ ಗ್ರಹಗಳೆನ್ನುವುದು.

ನಮ್ಮ ಜೀವನಕ್ಕೆ ಬೇಕಾದ ಸಮಸ್ತವನ್ನೂ ೧೪೯ ದಶಲಕ್ಷ ಚದರ ಕಿ.ಮೀ ನೆಲ ತನ್ನ ಉದರದಲ್ಲಿ ಅಡಗಿಸಿಕೊಂಡಿದೆ. ಅಷ್ಟೊಂದು ವಿಶಾಲವಾದ ಭೂಮಿ ನಮ್ಮದು.

ತನ್ನ ಅಕ್ಷದ ಮೇಲೆ ೨೪ ಗಂಟೆಗಳಿಗೊಮ್ಮೆ ಸುತ್ತುವ ನಮ್ಮ ಭೂಮಿಯ ಸುತ್ತಳತೆ ತೆಗೆದುಕೊಳ್ಳಲು ೪೦,೦೭೭ ಕಿಲೋ ಮೀಟರು ಉದ್ದದ ಪಟ್ಟಿಯೇ ಬೇಕು. ಕಿತ್ತಿಲೆ ಹಣ್ಣಿನಂತಿರುವ ಭೂಮಿಗೆ ಇಂತಹ ದೊಡ್ಡ ಹೊಟ್ಟೆ ಇದೆ. ನಮ್ಮ ಭೂಮಿಯ ಮುಕ್ಕಾಲು ಪಾಲನ್ನು ಸಾಗರಗಳೇ ಆಕ್ರಮಿಸಿ ೩೬೧ ದಶಲಕ್ಷ ಚದರ ಕಿಲೋ ಮೀಟರುಗಳಷ್ಟು ವ್ಯಾಪಿಸಿವೆ. ನೋಡಿದಷ್ಟೂ ಜಲರಾಶಿ , ಹೆಬ್ಬಲೆಗಳ ನರ್ತನ; ಆಕಾಶಕ್ಕೂ ಸಾಗರಕ್ಕೂ ವ್ಯತ್ಯಾಸವೇ ಇಲ್ಲವೆಂಬಂತೆ ದಿಗಂತ.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಸೌರವ್ಯೂಹ

ಭೂಮಿಯ ಉತ್ತರ ಮತ್ತು ದಕ್ಷಿಣದ ತುದಿಗಳು ಧ್ರುವಗಳು. ಇವೆರಡನ್ನೂ ಸರಳರೇಖೆ ಎಳೆದು ಸಂಧಿಸಬಹುದು. ಆ ಸರಳರೇಖೆಯೆ ಭೂಮಿಯ ಅಕ್ಷ. ಬುಗುರಿಯಂತೆ ಭೂಮಿಯೂ ತನ್ನ ಅಕ್ಷವನ್ನು ಕೇಂದ್ರವಾಗಿರಿಸಿಕೊಂಡು ಗಿರಿಕಿ ಹೊಡೆಯುತ್ತಿದೆ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಭೂಮಿ ಗೋಳಾಕಾರವಾಗಿದ್ದರೂ ಇದರ ದಕ್ಷಿಣ ಮತ್ತು ಉತ್ತರ ಧ್ರುವಗಳು ಚಪ್ಪಟೆಯಾಗಿವೆ. ಉತ್ತರದಲ್ಲಿ ಧ್ರುವ ಸಾಗರವಿದೆ. ಇದನ್ನು ೭೫೦,೦೦೦ ಚದರ ಕಿಲೋಮೀಟರು ಮಂಜು ಗಡ್ಡೆ ಆಕ್ರಮಿಸಿದೆ. ಕೆಲವು ಕಡೆಯಂತೂ ಮಂಜುಗಡ್ಡೆ ೨,೦೦೦ ಮೀಟರು ಮಂದವಾಗಿದೆ. ಇದಕ್ಕಿಂತಲೂ ಮಂದ ದಕ್ಷಿಣ ಧ್ರುವ ಪ್ರದೇಶದ ಮಂಜುಗಡ್ಡೆಯ ರಾಶಿ. ಸುಮಾರು ೧,೩೦,೦೦,೦೦೦ ಚದರ ಕಿಲೋ ಮೀಟರು ಪ್ರದೇಶವನ್ನು ಮಂಜು ಮುತ್ತಿಬಿಟ್ಟಿದೆ. ಅದು ಕೆಲವು ಕಡೆ ೩,೦೦೦ ಮೀಟರು ಮಂದವಿರುವುದೂ ಉಂಟು. ಈಗ ಊಹಿಸಿ, ಭೂಮಿಯ ಧ್ರುವಗಳ ಮೇಲೆ ಬಿದ್ದಿರುವ ಭಾರವನ್ನಲು. ಈ ಅಪಾರ ಭಾರವನ್ನು ಸಹಿಸಲಾಗದೆ ಭೂಮಿ ಈ ಭಾಗಗಳಲ್ಲಿ ಚಪ್ಪಟೆಯಾಗಿರುವುದು ಎಂಥ ವಿಚಿತ್ರ. ಅಲ್ಲಿ ಈ ಮಂಜುಗಡ್ಡೆ ಕರಗಲೂ ಬಿಡದಂತಹ ಶೈತ್ಯ. ಉಷ್ಣ ೦ ಡಿಗ್ರಿ ಸೆಂ.ಗಿಂತ ಮೇಲೇರುವುದು ಅಪರೂಪ.

ಭೂಮಿ ನಾವಂದುಕೊಂಡಂತೆ ಬುಗುರಿಯ ತರಹ ನೆಟ್ಟಗೆ ಗಿರಿಕಿ ಹೊಡೆಯುತ್ತಿಲ್ಲ. ಬದಲಾಗಿ ೨೩ ೧/೨ ಡಿಗ್ರಿಯಷ್ಟು ಇದರ ಅಕ್ಷ ವಾಲಿದೆ. ನಮಗಂತೂ ಈ ಅಕ್ಷ ವಾಲಿರುವುದು ವರವೆಂದೇ ಹೇಳಬೇಕು. ಏಕೆ ಗೊತ್ತೇ? ಒಂದು ವೇಳೆ ಭೂಮಿಯ ಅಕ್ಷ ವಾಲಿರದಿದ್ದರೆ ಸದಾ ಬೇಸಿಗೆಯ ಸುಡುಬಿಸಿಲು ಅಥವಾ ತೀವ್ರ ಚಳಿ ನಮ್ಮನ್ನು ಆಹುತಿ ತೆಗೆದುಕೊಳ್ಳುತ್ತಿದ್ದವು  (ಚಿತ್ರ ೨). ನಮಗೆ ಚಳಿಕಾಲ, ಬೇಸಿಗೆ ಕಾಲ ಬರುವುದು ಏಕೆ, ಈಗ ಹೇಳಿ?

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಸೂರ್ಯನನ್ನು ಪರಿಭ್ರಮಿಸುವ ಓರೆಗೊಂಡ ಅಕ್ಷದಿಂದಾಗಿ ಉಂಟಾಗುವ ಋತುಮಾನಗಳು; ೧) ಸೂರ್ಯ, ೨) ಕರ್ಕಾಟಕ ಸಂಕ್ರಾಂತಿ, ೩) ತುಲಾ ಸಂಕ್ರಾಂತಿ, ೪) ಮಕರ ಸಂಕ್ರಾಂತಿ

ಈ ಭೂಮಿ ನಮ್ಮ ಬದುಕಿಗೆ ಬೇಕಾಗುವ ಎಲ್ಲವನ್ನೂ ನೀಡಿ ನಮ್ಮನ್ನು ಸಾಕುತ್ತಿದೆ. ಉಸಿರಾಡಲು ಬೇಕಾದ ಮುಖ್ಯ ಅನಿಲ ಆಮ್ಲಜನಕ, ನಮ್ಮ ಸುತ್ತಲಿನ ವಾತಾವರಣದಲ್ಲಿ ಆಮ್ಲಜನಕ ಶೆ. ೨೧ ರಷ್ಟಿದೆ. ಉಳಿದ ಮುಕ್ಕಾಲು ಭಾಗತ ಸಾರಜನಕದಿಂದ ತುಂಬಿದೆ. ವಾಯುವಿನಲ್ಲಿ ಇವೆರಡೂ ಬೆರೆತಿವೆ. ಇದರ ಜೊತೆಗೆ ಇಂಗಾಲದ ಡೈ ಆಕ್ಸೈಡ್‌ ಅನಿಲವೂ ಇದೆ. ಆಮ್ಲಜನಕವನ್ನು ಸೇವಿಸಿ ಇಂಗಾಲದ ಡೈ ಆಕ್ಸೈಡನ್ನು ಹೊರಬಿಡುವುದು ಸಕಲ ಪ್ರಾಣಿಗಳ ಜೀವನ ಲಕ್ಷಣ. ವಾತಾವರಣದಲ್ಲಿ ಕೇವಲ ಕಾಲು ಭಾಗದಷ್ಟಿರುವ ಆಮ್ಲಜನಕ ತೀರಿ ಹೋಗುವುದೇ ಎಂಬ ಸಂದೇಹವೆ? ಅಗತ್ಯವಿಲ್ಲ; ನಿಸರ್ಗದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಪ್ರತ್ಯೇಕ ವ್ಯವಸ್ಥೆಯನ್ನೇ ಪ್ರಕೃತಿ ಇದಕ್ಕಾಗಿ ಮಾಡಿ ನಾವೆಲ್ಲ ಬದುಕಿ-ಬಾಳಲು ಅವಕಾಶ ಕಲ್ಪಿಸಿಕೊಟ್ಟಿದೆ. ನಮ್ಮ ಸುತ್ತಲಿನ ಸಸ್ಯಸಮೂಹ ವಾತಾವರಣದ ಇಂಗಾಲದ ಡೈಆಕ್ಸೈಡ್‌ನ್ನು ತಮ್ಮ ಆಹಾರದ ಉತ್ಪಾದನೆಗೆ ಬಳಸಿಕೊಳ್ಳುತ್ತವೆ. ಆಮ್ಲಜನಕ ಮತ್ತು ಜಲಜನಕದಿಂದ ಕೂಡಿದ ಸಂಯುಕ್ತವೇ ನೀರು. ಸಸ್ಯಗಳು ನೀರನ್ನು ವಿಭಜಿಸಿ ಆಮ್ಲಜನಕವನ್ನು ಉತ್ಪಾದಿಸಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಈ ಕ್ರಿಯೆ ಸಸ್ಯಗಳ ಜೀವನ ಪರ್ಯಂತ ಸಾಗುತ್ತಲೇ ಇರುತ್ತದೆ. ಹೀಗಾಗಿ ಆಮ್ಲಜನಕ ವಾತಾವರಣದಲ್ಲಿ ಹೆಚ್ಚುತ್ತ ಹೋಗುತ್ತದೆ. ಇವೆಲ್ಲಕ್ಕೂ ಸೂರ್ಯನ ನಿರ್ದಿಷ್ಟ ಪ್ರಮಾಣದ ಬೆಳಕು ಬೇಕು. ಇದರಿಂದಾಗಿಯೇ ಸಸ್ಯಗಳ ಈ ಕ್ರಿಯೆಯನ್ನು ದ್ಯುತಿಸಂಶ್ಲೇಷಣಕ್ರಿಯೆ ಎನ್ನುವುದು. ನಮ್ಮ ಸುತ್ತಲಿನ ಈ ವಾತಾವರಣವನ್ನು ನಾವು ವಾಯುಗೋಳವೆಂದು ಕರೆಯುತ್ತೇವೆ.

ಭೂಮಿಯಿಂದ ೮೦ ಕಿಲೋಮೀಟರು ಎತ್ತರಕ್ಕೆ ಏರಿದರೆ ಸಾಕು; ಅಲ್ಲಿ ಆಮ್ಲಜನಕ, ಇಂಗಾಲದ ಡೈ ಆಕ್ಸೈಡುಗಳ ಪ್ರಮಾಣ ಕಡಿಮೆಯಾಗುತ್ತದೆ. ಇದಕ್ಕೆ ಬದಲು ಹೀಲಿಯಂ ಎಂಬ ಅನಿಲ ಇಲ್ಲಿ ಕಾಣಿಸಿಕೊಳ್ಳುತ್ತದೆ. ಸೂರ್ಯನ ತುಂಬ ತುಂಬಿಕೊಂಡಿರುವುದು ಇದೇ ಅನಿಲ! ವಾಯುಗೋಳದಿಂದ ಮತ್ತೊಂದು ಮಹದುಪಕಾರ ನಮಗಾಗುತ್ತಿದೆ. ಭೂಮಿಯಿಂದ ಐವತ್ತು ಕಿಲೋಮೀಟರು ಎತ್ತರದಲ್ಲಿ ಭಾರವಾದ ಆಮ್ಲಜನಕದ ಪದರವಿದೆ. ಇದನ್ನು ಓಜೋನ್‌ ವಲಯವೆಂದು ಕರೆಯುತಾರೆ. ಇದರ ವಿಶಿಷ್ಟ ಗುಣವೇನು ಗೊತ್ತೆ? ನಮ್ಮ ಭೂಮಿಗೆ ಹೊರಗೋಳದಿಂದ ಅತಿನೀಲ ಕಿರಣಗಳೆಂಬ ಬಹು ಅಪಾಯಕಾರಿ ಕಿರಣಗಳು ಬರಲು ಹವಣಿಸುತ್ತಿವೆ. ಈ ಓಜೋನ್‌ ವಲಯ ಅವುಗಳನ್ನು ತಡೆಹಿಡಿದು ನಮಗೆ ಆಗಬಹುದಾಗಿದ್ದ ಅಪಾಯವನ್ನು ತಪ್ಪಿಸುತ್ತಿದೆ. ನೋಡಿ, ಹೇಗಿದೆ ನಿಸರ್ಗದ ಮೋಡಿ!

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ವಾತಾವರಣ ಸ್ತರಗಳು

ನಮಗೆ ಆವಶ್ಯಕವಿರುವ ಮುಕ್ಕಾಲು ಪಾಲು ಅನಿಲಗಳೆಲ್ಲವೂ ಭೂಮಿಯಿಂದ ಹನ್ನೊಂದು ಕಿಲೋಮೀಟರು ಎತ್ತರದ ಆವರಣದಲ್ಲೇ ದೊರೆಯುತ್ತದೆ. ವಿಮಾನ ಹಾರಾಡುವ ಎತ್ತರವಿದೆಯಲ್ಲ, ಅಷ್ಟರೊಳಗಿರುವ ಅನಿಲಗಳೇ ಸಾಕು ನಮ್ಮ ಜೀವಕೋಟಿಗೆ. ಭೂಮಿಯನ್ನು ಆವರಿಸಿರುವ ವಾತಾವರಣವನ್ನು ತೂಗಿದರೆ ಎಷ್ಟಾಗಬಹುದು. ಅಂದಾಜು ಮಾಡುವಿರಾ? ೫,೦೦೦,೦೦೦,೦೦೦,೦೦೦,೦೦೦,’ ಟನ್ನುಗಳಷ್ಟು. ಒಂದು ಘನ ಅಡಿಯಲ್ಲಿರುವ ಗಾಳಿಯ ತೂಕವೇ ಒಂದೂಕಾಲು ಔನ್ಸಿಗಿಂತಲೂ ಹೆಚ್ಚು. ಭೂಮಿಯಿಂದ ಮೇಲೇರಿದಂತೆ ವಾತಾವರಣದ ಒತ್ತಡವೂ ಕಡಿಮೆಯಾಗುತ್ತದೆ. ಇದನ್ನೆಲ್ಲಾ ಗಮನಿಸಿದರೆ ಭೂಮಿ ಬೇರೆ ಬೇರೆ ಸಂಯೋಜನೆ ಇರುವ, ಬೇರೆ ಬೇರೆ ಲಕ್ಷಣಗಳಿರುವ ಗೋಳಗಳನ್ನು ಹೊಂದಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ.

ಭೂಮಿಯ ಮುಕ್ಕಾಲು ಭಾಗವನ್ನು ಸಾಗರಗಳು ಆಕ್ರಮಿಸಿವೆ. ಈ ನೀರಿನ ರಾಶಿ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತದೆ. ಇದೇ ಜಲಗೋಳ, ನಮಗೆ ಉಸಿರಾಡಲು ವಾಯು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ಬದುಕಿಗೆ ನೀರು. ಸೂರ್ಯನ ಶಾಖಕ್ಕೆ ಸಾಗರದ ನೀರು ಆವಿಯಾಗಿ ಬಾಷ್ಪಗೊಂಡು ಮುಗಿಲನ್ನು ಏರುತ್ತದೆ. ದಟ್ಟವಾಗಿ ಸಂಗ್ರಹವಾಗಿ ಮೋಡವಾಗಿ ವರ್ಷಧಾರೆ ಸುರಿಸಿ ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಭೂಮಿಯ ಮೇಲಿರುವ ಬೆಟ್ಟ, ಗುಡ್ಡ, ಪರ್ವತ ಇವುಗಳನ್ನೆಲ್ಲ ಕಡಿದು ನೆಲಸಮ ಮಾಡಿದರೆ ಇಡೀ ಭೂಮಿಯ ಮೇಲೆ ಒಂದೂವರೆ ಕಿಲೋಮೀಟರು ನೀರು ನಿಂತು ನಮ್ಮ ಭೂಗೋಳವನ್ನೇ ಮರೆ ಮಾಡಬಲ್ಲದು – ಅಷ್ಟಿದೆ ನಮ್ಮ ಸುತ್ತಲ ಜಲರಾಶಿ. ಅಟ್ಲಾಂಟಿಕ್‌, ಪೆಸಿಫಿಕ್‌, ಹಿಂದೂ ಮಹಾಸಾಗರಗಳಲ್ಲಿ ಶೇಖರಣೆಯಾಗಿರುವ ನೀರಿನ ಪ್ರಮಾಣವೇ ೧೨,೫೦೦,೦೦,೦೦೦ ಘನ ಕಿಲೋಮೀಟರುಗಳಷ್ಟಿದೆ ಎಂದ ಮೇಲೆ ನಿಸರ್ಗದ ಈ ಸೃಷ್ಟಿಯ ಬೃಹತ್ತನ್ನು ಮಹತ್ತನ್ನು ನೀವೇ ಊಹಿಸಬಲ್ಲಿರಿ.

ಭೂಮಿಯ ಹೊರ ಆವರಣದಲ್ಲಿ ವಾಯುಗೋಳ, ಜಲಗೋಳವಿದ್ದಂತೆ ನಮ್ಮ ದೃಷ್ಟಿಗೆ ತಾಕುವ ಮತ್ತೊಂದು ಗೋಳವಿದೆ. ಅದೇ ಜೀವಗೋಳ, ಜೀವಗೋಳದ ತುಂಬ ಬರಿ ಜೀವಗಳೇ. ನಾವು ನಮ್ಮ ಸುತ್ತಮುತ್ತ ಇರುವ ಪ್ರಾಣಿ ಪಕ್ಷಿ, ಕೀಟ, ಜಂತುಗಳು, ಸಸ್ಯಗಳು ಇವೆಲ್ಲ ಇರುವುದು ಜೀವಗೋಳದಲ್ಲಿ. ಆದರೆ ಜೀವಗೋಳದ ಉದ್ದ ಅಗಲ ಎತ್ತರವನ್ನು ಅಳೆಯುವುದು ತುಂಬ ಕಷ್ಟ. ಭೂಮಿಯ ಬಹು ಭಾಗಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಜೀವಿಗಳು ಹರಡಿವೆ. ಜೀವಿಗಳು ಜಲಗೋಳವನ್ನು ಬಿಟ್ಟಿಲ್ಲ. ಮನುಷ್ಯರನ್ನೇ ತೆಗೆದುಕೊಳ್ಳಿ. ಅತ್ಯಂತ ಸುಡುವ ಮರಳಗಾಡಿನಲ್ಲೂ ಇದ್ದಾನೆ; ಅಂತೆಯೇ ಸೈಬೀರಿಯಾದಂತ ಅತಿಶೀತಲ ಪ್ರದೇಶದಲ್ಲೂ ವಾಸಿಸುತ್ತಿದ್ದಾನೆ. ಪ್ರಪಂಚದ ಸಮಸ್ತ ಜೀವಿಗಳನ್ನೂ ಒಟ್ಟುಗೂಡಿಸಿ ಭೂಮಿಯ ಮೇಲೆ ಹರಡಿದರೆ ಹೇಗೆ ಕಾಣಬಹುದು ಊಹಿಸುವಿರಾ? ದೊಡ್ಡ ಬ್ರೆಡ್‌ ತುಣಕಿನ ಮೇಲೆ ತೆಳವಾಗಿ ಸವರಿದ ಬೆಣ್ಣೆಯಷ್ಟು ಕಂಡರೆ ಹೆಚ್ಚು! ಪ್ರಪಂಚದ ಎಲ್ಲಜನರನ್ನೂ ಒಂದು ಘನಕಿಲೋಮೀಟರು ಪೆಟ್ಟಿಗೆಯಲ್ಲಿ ಸಲೀಸಾಗಿ ತುರುಕಿಬಿಡಬಹುದು.

ವಾತಾವರಣದಲ್ಲಿ ಎಲ್ಲಿಯವರೆಗೆ ಗಾಳಿ ಇದೆ? ಆಮ್ಲಜನಕ ಎಷ್ಟು ಎತ್ತರದವರೆಗೆ ಲಭಿಸುತ್ತದೆ? ಎಂಬ ಅಂಶಗಳನ್ನೆಲ್ಲಾ ನಾವಾಗಲೇ ಬಲೂನುಗಳನ್ನು ಹಾರಿಸಿ ಅಥವಾ ಉಪಗ್ರಹಗಳನ್ನು ಉಢಾಯಿಸಿ ಆ ಮೂಲಕ ಅರಿತಿದ್ದೇವೆ. ಇನ್ನು ಅದ್ಭುತಗಳನ್ನೆಲ್ಲಾ ತನ್ನ ಉದರದಲ್ಲಿ ಮರೆಮಾಡಿಕೊಂಡಿರುವ ಸಾಗರಗಳ ಇಡೀ ಚರಿತ್ರೆಯನ್ನು ನಾವು ಬಲ್ಲೆವು. ಮೊದಮೊದಲೂ ಸಾಗರದ ಆಳವೆಷ್ಟು ಎಂಬುದನ್ನು ಬಾವಿಗೆ ಹಗ್ಗ ಬಿಟ್ಟು ನೋಡಿದಂತೆ ನೋಡುವ ಪರಿಪಾಠ ನಮ್ಮಲ್ಲಿತ್ತು. ಈಗ ಹೊಸ ತಂತ್ರ ವಿಧಾನಗಳು ಬಳಕೆಗೆ ಬಂದು ನಮ್ಮ ಶ್ರಮವನ್ನು ಕಡಿಮೆ ಮಾಡಿವೆ. ಅಲ್ಲದೆ ಯಾವುದೇ ಸಮಸ್ಯೆಗಳಿಗೆ ನಿಖರವಾದ ಪರಿಹಾರವನ್ನು ನೂತನ ತಂತ್ರಜ್ಞಾನ ನಮಗೆ ತಂದುಕೊಟ್ಟಿದೆ. ಶಬ್ದತರಂಗಗಳ ಸ್ವಭಾವ ಬಲು ಕುತೂಹಲಕಾರಿ. ಇವುಗಳು ಹಾದುಹೋಗುವ ದಾರಿಯಲ್ಲಿ ಅಡೆತಡೆ ಬಂದರೆ ಸಾಕಲು ಪುಟಿದು ಮರಳಿ ಬಂದುಬಿಡುತ್ತವೆ. ಅಷ್ಟೇಕೆ, ನೀವು ಯಾವುದಾದರೂ ಗುಹೆಗಳಿಗೆ ಹೋಗಿ ಅಲ್ಲಿ ಕೂಗು ಹಾಕಿದರೆ ಒಂದೇ ಕ್ಷಣದಲ್ಲಿ ನಿಮ್ಮ ಧ್ವನಿ ನಿಮಗೇ ಮರಳಿ ಕೇಳಿಸುತ್ತದೆ. ಇದನ್ನೇ ಪ್ರತಿಧ್ವನಿ ಎನ್ನುವುದು. ಇವೇ ಶಬ್ದತರಂಗಗಳನ್ನು ಸಾಗರದ ನೀರಿನಲ್ಲಿ ಹಾಯಿಸಿದರೆ ಅವು ಸಾಗರ ತಳವನ್ನು ತಲುಪುತ್ತಿದ್ದಂತೆಯೇ ಪುಟಿದು ಮರುಳುತ್ತವೆ. ಇದಕ್ಕೆ ತಗಲುವ ಸಮಯವೆಷ್ಟು ಎಂಬುದನ್ನು ಲೆಕ್ಕ ಹಾಕಿದರೆ ಸಾಗರತಳದ ಸ್ವಭಾವದ ಜೊತೆಗೆ ಆಳವೂಫ ಗೊತ್ತಾಗಿಬಿಡುತ್ತದೆ.

ಭೂಮಿಯ ಮೇಲೆ ಹಾಗೂ ಸಮೀಪದಲ್ಲಿರುವ ಪ್ರಕೃತಿಯನ್ನು ನಮ್ಮ ಹಿರಿಯರು ಬಹುಹಿಂದಿನಿಂದಲೂ ಅರಿಯಲು ಪ್ರಯತ್ನಿಸಿದ್ದಾರೆ. ಭೂಮಿಯ ಒಳಗೇನಿದೆ? ಇದು ಹಿಂದಿನವರನ್ನೇ ಅಲ್ಲದೆ ಇಂದಿಗೂ ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಭೂಮಿಯ ಒಳಗೆ ಹೀಗಿದೆ ಎಂದು ವಿವರಿಸುವವರು ಯಾರೂ ಇಲ್ಲ. ನೇರವಾಗಿ ನೋಡಲು ಕಂಡರೆ ತಾನೆ ಅಲ್ಲಿ ಏನಿದೆ ಎಂದು ವಿವರಿಸಲು ಸಾಧ್ಯ? ಭೂಮಿಯ ಅಂತರಾಳ ಗೋಚರಿಸುವಂತಿದ್ದರೆ ಅದೆಷ್ಟು ಚೆನ್ನ. ಅದರ ಛಾಯ ಚಿತ್ರ ತೆಗೆದುಬಿಡುಬಹುದಾಗಿತ್ತು. ಅಮೂಲ್ಯ ರತ್ನ ಖನಿಜಗಳಿರುವ ಜಾಗವನ್ನು ಗುರ್ತಿಸಿ ಅವುಗಳನ್ನೆಲ್ಲಾ ಮಡಿಲಿನಲ್ಲಿ ತುಂಬಿಕೊಂಡು ಬರಬಹುದಾಗಿತ್ತು. ನಾವೆಣಿಸಿದಷ್ಟು ಸುಲಭವಾಗಿ ಭೂಮಿ ತನ್ನ ಅಂತರಂಗದ ಸ್ವರೂಪವನ್ನು ಬಹಿರಂಗಪಡಿಸುವುದಿಲ್ಲ. ಶೋಧನೆಯನ್ನು ಮಾಡಿಯೆತೀರಬೇಕು.

ವಿಜ್ಞಾನಿಗಳು ಊಹಿಸಿರುವ ಪಾತಾಳಲೋಕ ಎಂತಹುದಿರಬಹುದು?… ಅಲ್ಲಿ ಸರ್ಪಗಳಿವೆಯೋ ಅಥವಾ ಮನುಷ್ಯರಿದ್ದಾರೋ ಇಲ್ಲವೇ ಜೀವಗಳೇ ಇಲ್ಲವೋ ಎಂಬ ಹಲವು ಕುತೂಹಲ ನಿಮ್ಮನ್ನು ಕಾಡುತ್ತಿದೆಯಲ್ಲವೆ? ಪಾತಾಳಕ್ಕೆ ನೇರವಾಗಿ ಏಣಿಯನ್ನು ಹಾಕಿ ಇಳಿಯಲಂತೂ ಸಾಧ್ಯವಿಲ್ಲ. ಮೆಟ್ಟಲನ್ನಂತೂ ಯಾರೂ ಹಾಕಿಲ್ಲ. ಹಾಗಾದರೆ ಪಾತಾಳವನ್ನು ನೋಡುವುದು ಹೇಗೆ? ಪಾತಾಳಕ್ಕೆ ಹೋಗುವ ಮುನ್ನ ಭೂಮಿಯ ಒಳಭಾಗ ಹೇಗಿದೆ, ಅದರ ಸ್ವರೂಪವೇನು? ಒಳಗೆ ಹೋಗಲು ದಾರಿ ಇದೆಯೇ ಎಂಬುದನ್ನು ಮೊದಲು ಯೋಚಿಸಬೇಕು ತಾನೆ?

ನಮ್ಮ ಕೋಲಾರದ ಚಿನ್ನದ ಗಣಿ ಮತ್ತು ದಕ್ಷಿಣ ಆಫ್ರಿಕಾದ ರ್ಯಾಂಡ್‌ ಎಂಬಲ್ಲಿರುವ ಚಿನ್ನದ ಗಣಿಗಳೇ ಪ್ರಪಂಚದಲ್ಲೆಲ್ಲಾ ಆಳವಾದ ಗಣಿಗಳೆನ್ನಿಸಿವೆ. ಇವುಗಳ ಆಳ ೩.,೦೦೦ ಮೀಟರಿಗೂ ಮಿಗಿಲು. ಅಮೇರಿಕೆಯ ವಿಜ್ಞಾನಿಗಳು ಪಶ್ಚಿಮ ಟೆಕ್ಸಾಸ್‌ ಭಾಗದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ದೊರೆಯಬಹುದೆಂಬ ಭರವಸೆಯೊಂದಿಗೆ ಸತತವಾಗಿ ಎರಡು ವರ್ಷ ಇಪ್ಪತ್ತು ದಿನಗಳ ಕಾಲ ಕೆಲಸ ಮಾಡಿ ೭೭೨೪ ಮೀ. ಆಳದ ಬಾವಿಯೊಂದನ್ನು ತೋಡಿದರು. ಕೋಲಾರದ ಚಿನ್ನದ ಗಣಿಯೊಳಗೆ ಇಳಿದು ಮತ್ತೆ ನೀವು ಮೇಲಕ್ಕೆ ಬರುವ ಹೊತ್ತಿಗೆ ಬೆವರಿರುತ್ತೀರಿ. ಏಕೆ ಗೊತ್ತೆ? ಈ ಆಳದಲ್ಲಿ ಭೂಮಿಯ ಶಾಖ  ೬೦ ಡಿಗ್ರಿ ಸೆಂಟಿ ಗ್ರೇಡಿನಷ್ಟಿರುತ್ತದೆ. ಇದರಿಂದಾಗಿಯೇ ಗಣಿ ಕೆಲಸಗಾರರಿಗೆ ಮೇಲಿನಿಂದ ಹವೆಯನ್ನು ದೂಡಿ ಉಸಿರಾಡಲು ಅವಕಾಶ ಮಾಡಿಕೊಡುವುದು. ಇಲ್ಲದಿದ್ದರೆ ಗಾಳಿ, ಬೆಳಕು ಅಲ್ಲಿ ನುಸುಳುವುದೇ ಇಲ್ಲ. ದಕ್ಷಿಣ ಆಫ್ರಿಕದ ವಜ್ರದ ಗಣಿಗಳಲ್ಲಿ ೫೦ ಲಕ್ಷ ಡಾಲರ್ ವೆಚ್ಚದ ಗಾಳಿದೂಡವ ಯಂತ್ರಗಳನ್ನೇ ಸ್ಥಾಪಿಸಿದ್ದಾರೆ.

ಭೂಮಿಯ ಆಳಕ್ಕೆ ಹೋಗಲು ಯಾವುದೇ ರೀತಿಯ ಉಪಕರಣಗಳಿಗೂ ಸಾಧ್ಯವಿಲ್ಲ. ಆಕಾಶದಂತೆ ಅವಕಾಶವಿದ್ದರೆ ಭೂಮಿಯ ಅಂತರಾಳದ ಪರಿಸ್ಥಿತಿಯನ್ನೂ ಧಾರಾಳವಾಗಿ ತಿಳಿದುಕೊಳ್ಳಬಹುದಾಗಿತ್ತು. ಆದರೆ ವಸ್ತುಸ್ಥಿತಿ ಹೀಗಿಲ್ಲ. ನಮ್ಮ ಕಾಲಡಿಯಲ್ಲಿಯೇ ಇರುವ ಭೂಮಿಯ ಅಂತರಂಗ ನಮಗೆ ಅಪರಿಚಿತ.  ಇದನ್ನರಿಯಲು ಯಾವುದಾದರೊಂದು ತಂತ್ರ ತೀರ ಅವಶ್ಯಕ.

ಕ್ರಿ.ಶ. ೧೯೭೮ರ ಸೆಪ್ಟೆಂಬರ್ ಹದಿನಾರನೆ ದಿನಾಂಕ ಸಂಜೆ ಐದು ಗಂಟೆ ಮೂವತ್ತೈದು ನಿಮಿಷದಲ್ಲಿ ಭೂಮಿ ಇದ್ದಕ್ಕಿದ್ದಂತೆ ನಡುಗಿತು. ಹೀಗಾದದ್ದು ನಮಗೆ ಪಶ್ಚಿಮ ದಿಕ್ಕಿನಲ್ಲಿರುವ ಇರಾನ್‌ ದೇಶದಲ್ಲಿ. ಈ ದೇಶದ ಪ್ರಮುಖ ಪಟ್ಟಣ ತಬ್ಬಾಸ್‌. ಇಲ್ಲಿನ ಜನಸಂಖ್ಯೆ ೧೭,೦೦೦ ಇದರಲ್ಲಿ ೬,೦೦೦ ಜನರ ಮೇಲೆ ಕಟ್ಟಡಗಳು ಕುಸಿದು ಅವರನ್ನು ಹೂತುಬಿಟ್ಟವು. ಈ ಪಟ್ಟಣದ ಸುತ್ತಮುತ್ತ ಇದ್ದ ನಲವತ್ತು ಹಳ್ಳಿಗಳು ನಾಶವಾಗಿ ಅಲ್ಲಿನ ಜನ ಮನೆ ಮಠ ಆಸ್ತಿಗಳನ್ನು ಕಳೆದುಕೊಂಡರು. ಕ್ಷಣಮಾತ್ರದಲ್ಲಿ ಸತ್ತವರ ಸಂಖ್ಯೆ ೨೫,೦೦೦ಕ್ಕೆ ಏರಿತು. ಭೂಮಿ ಮುನಿದರೆ ಆಗಬಹುದಾದ ಅನಾಹುತ ಇಂಥದು. ವರ್ಷವೊಂದಕ್ಕೆ ಸರಾಸರಿ ಹತ್ತುಲಕ್ಷ ಭೂಕಂಪನಗಳು ಸಂಭವಿಸುತ್ತವೆ. ಇಂದಿಗೂ ಕೂಡ, ಅಷ್ಟೇಕೆ ನೀವು ಈ ಪ್ರಸಂಗ ಓದಿದಿ ೨೪ ಗಂಟೆಗಳಲ್ಲಿ ಪ್ರಪಂಚಾದ್ಯಂತ ೨,೮೦೦ ಭೂಕಂಪನಗಳು ಭೂಮಿಯನ್ನು ಅಲುಗಿಸಿರುತ್ತವೆ. ಭೂಕಂಪನಕ್ಕೂ ಭೂಮಿಯ ಅಂತರಾಳಕ್ಕೂ ಯಾವ ಸಂಬಂಧ? ಈ ಸಂಬಂಧವನ್ನು ಅರಿಯುವ ಮೊದಲು ಭೂಕಂಪನವೆಂದರೇನು ಎಂದು ತಿಳಿಯಲು ಯತ್ನಿಸೋಣ.

ನಿಮ್ಮ ಮನೆ ರೈಲುಹಾದಿಯ ಬಳಿಯೇ ಇದೆಯೆನ್ನಿ. ರೈಲು ಹಾದು ಹೋಗುವ ಆ ಒಂದು ಕ್ಷಣದಲ್ಲಿ ನಿಮ್ಮ ಮನೆ ಲಘುವಾಗಿ ನಡುಗುವುದನ್ನು ನೀವು ಗಮನಿಸಿರುವಿರಿ. ಇದು ರೈಲಿನ ಭಾರ, ಅದರ ಚಲನೆಯಿಂದ ಉಂಟಾದ ಆಘಾತದ ಪರಿಣಾಮ. ಕಲ್ಲು ಗಣಿಗಳಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಕೀಳಲು ಡೈನಮೈಟ್‌ ಎಂಬ ಸ್ಫೋಟಕ ವಸ್ತುವನ್ನು ಹೊತ್ತಿಸಿ ಬಂಡೆಗಳನ್ನು ಸ್ಫೋಟಿಸುವುದನ್ನು ನೀವು ನೋಡಿರಬಹುದು. ಆಗಲೂ ಹೀಗೆಯೇ ಭಯಂಕರ ಶಬ್ದದ ಜೊತೆಗೆ ಸುತ್ತಲಿನ ನೆಲ ಅದುರುತ್ತದೆ. ಭೂಮಿಯ ಇಂಥ ದೊಡ್ಡ ಪ್ರಮಾಣದ ನಡುಕ ಅಥವಾ ಅದುರುವಿಕೆಯನ್ನೇ ನಾವು ಭೂಕಂಪನವೆನ್ನುವುದು.

ವಾಸ್ತವವಾಗಿ ಅಘಾತದಿಂದ ಏನಾಗುತ್ತದೆ ಗೊತ್ತೆ? ಶಕ್ತಿಯು ತರಂಗಗಳ ಮೂಲಕ ಸುತ್ತ ಪ್ರವಹಿಸಲು ಪ್ರಾರಂಭಿಸುತ್ತದೆ. ಕೊಳದ ನೀರಿಗೆ ಕಲ್ಲೊಂದನ್ನು ಎಸೆದಾಗ ನೀವು ಕಾಣವುದೇನು? ವೃತ್ತಾಕಾರವಾಗಿ ಚಲಿಸುವ ಅಲೆ ಒಂದರೊಡನೆ ಒಂದು ಜೋಡಿಸಿದೆಯೇನೋ ಎಂಬಂತೆ ಹಿಗ್ಗುತ್ತಾ ದಡ ಸೇರುವುದು. ಭೂಮಿ ಕಂಪಿಸಿದಾಗಲೂ ಹೀಗೆಯೇ ತರಂಗಗಳು ಭೂಮಿಯ ಬಹು ಭಾಗವನ್ನು ಬೇರೆ ಬೇರೆ ವೇಗದಲ್ಲಿ ಬೇರೆ ಬೇರೆ ರೂಪದಲ್ಲಿ ಆವರಿಸುತ್ತವೆ. ಇವುಗಳನ್ನು ಭೂಮಿಯಲ್ಲಿ ನೆಟ್ಟ ಯಂತ್ರದಿಂದ ದಾಖಲೆ ಮಾಡಿಕೊಳ್ಳಬಹುದು. ಅಂತಹ ಯಂತ್ರವನ್ನೇ ಭೂಕಂಪನ ಮಾಪಕವೆನ್ನುವುದು. ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ಗೌರಿಬಿದನೂರಿನಲ್ಲಿ ಭೂಕಂಪನಮಾಪಕ ಕೇಂದ್ರವೊಂದಿದೆ.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಭೂಕಂಪನದ ಉಗಮ

ನಿಮ್ಮ ಮೇಲೆ ಪುರಿಮೂಟೆಯನ್ನು ಹೊರಿಸಿದರೆ ಶ್ರಮವಿಲ್ಲದೆ ಹೊತ್ತು ನಡೆಯುತ್ತೀರಿ. ಪುರಿಮೂಟೆಯ ಬದಲು ಮರಳಿನ ಮೂಟೆ ಇಟ್ಟರೆ ನೀವು ಕುಸಿದು ಬೀಳುತ್ತೀರಿ. ಭೂಮಿಯ ಒಳಭಾಗದಲ್ಲಿರುವ ಶಿಲೆಗಳೂ ಹೀಗೆಯೇ! ಮೇಲಿನ ಶಿಲೆಗಳ ಒತ್ತಡಕ್ಕೆ ಸಿಕ್ಕಿ ಆಳದಲ್ಲಿರುವ ಶಿಲೆಗಳು ಬಿರುಕು ಬಿಡುತ್ತವೆ. ಅಷ್ಟೇ ಸಾಲದೆಂಬಂತೆ ಬಿರುಕು ಬಿಟ್ಟ ಭಾಗ ಸರಿದುಬಿಡುತ್ತದೆ. ಈ ಸರಿತವೇ ಸಾಕು, ಭೂಮಿಯನ್ನೇ ನಡುಗಿಸಲು ನೂರಾರು ಕಿಲೋಮೀಟರುಗಳ ಆಳದಲ್ಲಿ ಇಂದಿಗೂ ಶಿಲೆಗಳ ಅವಸ್ಥೆಯೇ ಇದು. ಇಂತಹ ಅಘಾತದಿಂದ ಪ್ರಚಂಡ ಶಕ್ತಿ, ತರಂಗಗಳ ಮೂಲಕ ಪ್ರವಹಿಸಿ ತರುವ ಸಾವು ನೋವು, ಆಸ್ತಿಪಾಸ್ತಿಗಳ ನಷ್ಟ ಅಷ್ಟಿಷ್ಟಲ್ಲ. ಅನೇಕ ಆಳವಾದ ಗಣಿಗಳಲ್ಲಿ ಶಿಲೆಗಳು ಸ್ಫೋಟಿಸಲು ಮೇಲಿನ ಶಿಲೆಗಳ ಒತ್ತಡವೇ ಕಾರಣ.

ಒಮ್ಮೆ ದೊಡ್ಡ ಭೂಕಂಪನ ಸಂಭವಿಸಿದರೆ ಅದರಿಂದ ಬಿಡುಗಡೆಯಾಗುವ ಶಕ್ತಿ ಆಶ್ಚರ್ಯಕರವಾದುದು. ೨೦,೦೦೦ ಟನ್ನುಗಳಷ್ಟು ಪರಮಾಣು ಬಾಂಬನ್ನು ಸ್ಫೋಟಿಸಿದರೆ ಉಂಟಾಗುವ ಶಕ್ತಿ ಪ್ರಮಾಣ ಕೇವಲ ಒಂದೇ ಒಂದು ಭೂಕಂಪನದಿಂದ ಬಿಡುಗಡೆಯಾಗುವ ಶಕ್ತಿಗೆ ಸಮ ಎಂದರೆ ಆಶ್ಚರ್ಯವಲ್ಲವೆ? ಸ್ಯಾನ್‌ಫ್ರಾನ್ಸಿಸ್ಕೋವಿನಲ್ಲಿ ೧೯೦೬ ರಲ್ಲಿ ಸಂಭವಿಸಿದ ಭೂಕಂಪನ ಇದಕ್ಕಿಂತಲೂ ೫೦,೦೦೦ ಪಟ್ಟು ಅಧಿಕ ಶಕ್ತಿಯನ್ನು ಬಿಡುಗಡೆ ಮಾಡಿತು.

ಕೊಳದಲ್ಲಿ ಎದ್ದ ಅಲೆಗಳು ವೃತ್ತಾಕಾರವಾಗಿ ಹಿಗ್ಗಿ ದಡ ಸೇರುವಾಗ ಅಲೆಗಳ ಸ್ವರೂಪ ನಮಗೆ ಗೋಚರವಾಗುತ್ತದೆಯೇ ವಿನಾ ಅಲೆಗಳನ್ನು ದೂಡುವ ಶಕ್ತಿ ನೀರಿನಲ್ಲಿ ಕೊಳದ ತಳದತ್ತ ಲಂಬವಾಗಿ ಸಾಗುವುದು ಕಣ್ಣಿಗೆ ಕಾಣುವುದೇ ಇಲ್ಲ. ಭೂಕಂಪನಗಳಿಂದ ಉಂಟಾದ ತರಂಗಗಳ ಸ್ವಭಾವವೂ ಹೀಗೆಯೇ. ಭೂಮಿಯ ಎಲ್ಲ ಭಾಗದಲ್ಲೂ ವಿವಿಧ ವೇಗದ, ವಿವಿಧ ಸ್ವರೂಪದ ತರಂಗಗಳು ನುಸುಳುತ್ತವೆ. ಇವುಗಳ ಕೊಂಚ ಭಾಗ ಪ್ರತಿಫಲಿಸಿ ಭೂಮಿಯ ಒಳಗೆ ನೆಟ್ಟ ಭೂಕಂಪನ ಮಾಪಕದಲ್ಲಿ ದಾಖಲೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಭೂಕಂಪನ ಭೂಮಿಯ ಒಂದು ನಿರ್ದಿಷ್ಟ ಕೇಂದ್ರದಿಂದ ತರಂಗಗಳನ್ನು ಕಳಿಸುವುದರ ಮೂಲಕ ಪ್ರಾರಂಭವಾಗುತ್ತದೆ. ಮೊದಲು ಉತ್ಪತ್ತಿಯಾಗುವ ತರಂಗಗಳನ್ನು ‘ಪಿ’ ತರಂಗಗಳೆನ್ನುತ್ತಾರೆ. ಇವು ನಮಗೆ ಪರಿಚಯವಿರುವ ಶಬ್ದತರಂಗಗಳಂತೆಯೇ ಉದ್ದುದ್ದವಾಗಿ ಕಂಪಿಸಿ ಪ್ರವಹಿಸಲು ಪ್ರಾರಂಭಿಸುತ್ತವೆ. ಒಂದು ಸೆಕೆಂಡಿಗೆ ಆರರಿಂದ ಎಂಟೂವರೆ ಕಿಲೋಮೀಟರುಗಳ ದೂರ ಇವು ಪ್ರವಹಿಸಬಲ್ಲವು. ಇವುಗಳು ಹಾಯುವ ದಾರಿಯಲ್ಲಿ ಕಲ್ಲಿರಲಿ, ನೀರಿರಲಿ ಅಥವಾ ಅನಿಲವೇ ಇರಲಿ ಅದನ್ನು ಲಕ್ಷಿಸದೇ ಸಲೀಸಾಗಿ ಹಾದುಹೋಗಿ ಮೊದಲು ಭೂಮಿಯ ಹೊರಮೈಯನ್ನು ತಲುಪುತ್ತವೆ. ಇವುಗಳನ್ನು ಬೆನ್ನಟ್ಟಿ ಬರುವ ತರಂಗಗಳನ್ನು ‘ಎಸ್‌’ ತರಂಗಗಳೆಂದು ಗುರ್ತಿಸಿದ್ದಾರೆ. ಇವು ‘ಪಿ’ ತರಂಗಗಳಂತೆ ಉದ್ದುದ್ದವಾಗಿ ಕಂಪಿಸುವುದರ ಬದಲು ತಾವು ಹಾಯುವ ದಾರಿಯಲ್ಲಿ ಅಡ್ಡಡ್ಡವಾಗಿ ಕಂಪಿಸಿ ಪ್ರವಹಿಸುತ್ತವೆ. ಇವು ಕೇವಲ ಶಿಲೆಗಳಂತಹ ಘನವಸ್ತುಗಳ ಮೂಲಕ ಪ್ರವಹಿಸಿಬಲ್ಲವೇ ವಿನಾ ನೀರಿನಂಥ ಮಧ್ಯವರ್ತಿಗಳ ಮೂಲಕ ಹಾಯಲಾರವು. ‘ಪಿ’ ತರಂಗಗಳಿಗಿಂತ ನಿಧಾನ. ಸೆಕೆಂಡಿಗೆ ನಾಲ್ಕು ಕಿಲೋಮೀಟರುಗಳಷ್ಟು ಮಾತ್ರ ಇವುಗಳ ವೇಗ. ಇವೆರಡು ರೀತಿಯ ತರಂಗಗಳಲ್ಲದೆ ಮತ್ತೊಂದು ರೀತಿಯ ತರಂಗಗಳೂ ಭೂಕಂಪನದಿಂದ ಉಂಟಾಗುತ್ತವೆ. ಇವುಗಳನ್ನು ‘ಎಲ್‌’ ತರಂಗಗಳೆಂದು ಕರೆಯುತ್ತಾರೆ. ಕೊನೆಯಲ್ಲಿ ಭೂಮಿಯನ್ನು ತಲುಪುವು ಈ ತರಂಗಗಳು ಬಹು ಅಪಾಯಕಾರಿ. ‘ಪಿ’ ತರಂಗಗಳಂತೆ ಉದ್ದವಾಗಿ ಹಾಯುವುದಿಲ್ಲ. ಬದಲು ಭೂಮಿಗೆ ಸಮತಲವಾಗಿ ಹಾದು ಹಾದಿಯಲ್ಲಿರುವ ಕಟ್ಟಡ ಅಣೆಕಟ್ಟು ಏನೇ ಇರಲಿ ಸೆಕೆಂಡಿನೊಳಗಾಗಿ ಉರುಳಿಸಿ ಮಿಂಚಿನಂತೆ ಕಣ್ಮರೆಯಾಗುತ್ತವೆ.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಭೂಕಂಪನ ಮಾಪಕ

ಪ್ಯೂಜಿಯಾಮ, ವೆಸೂವಿಯಸ್‌ ಎಂಬ ಹೆಸರುಗಳು ಬಹುಜನರಿಗೆ ಹೊಸದಲ್ಲ. ಇವು ಜಪಾನ್‌ ಹಾಗೂ ಇಟಲಿ ದೇಶದ ಜ್ವಾಲಾಮುಖಿಗಳ ಹೆಸರು. ನೋಡಲು ಇವು ಬೆಟ್ಟಗಳು. ನೂರಾರು ಮೀಟರು ಎತ್ತರಕ್ಕೂ ಏರಿವೆ. ಅಕ್ಕಪಕ್ಕ ತುಂಬ ಇಳಿಜಾರು. ಬೆಟ್ಟದ ತುದಿಯಲ್ಲಿ ಸುಮಾರು ನೂರಾರು ಮೀಟರು ಕೆಲವೊಮ್ಮೆ ಸಾವಿರಾರು ಮೀಟರು ಅಗಲದ ಬಾಯಿ. ಸದಾ ಕುದಿಯುತ್ತಿರುವ ಶಿಲಾರಸ, ಆಗಾಗ ಬೂದಿ ತುಂಬಿದ ಧೂಳು, ಇದ್ದಕ್ಕಿದ್ದಂತೆ ಬೆಂಕಿ, ನೋಡು ನೋಡುತ್ತಿದ್ದಂತೆ ಹೊಗೆ, ಜೊತೆಗೆ ಕಲ್ಲಿನ ಮಳೆ ಸುರಿಸುವ ಜ್ವಾಲಾಮುಖಿಗಳನ್ನು ನೋಡಿದಾಗ ಭೂಮಿಯ ಒಳಭಾಗದಲ್ಲಿ ಕಲ್ಲೂ ಕರಗಿರುವುದು ಕಂಡುಬರುತ್ತದೆ. ಭೂಕಂಪನಗಳಂತೆಯೇ ಈ ಜ್ವಾಲಾಮುಖಿಗಳೂ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ. ಸಾವಿರಾರು ಜನರನ್ನು ಬಲಿತೆಗೆದುಕೊಂಡಿವೆ. ಕಳೆದ ೫೦೦ ವರ್ಷಗಳಿಂದ ಜ್ವಾಲಾಮುಖಿಗಳು ಶಿಲಾರಸದ ಪ್ರವಾಹವನ್ನೇ ಹರಿಸಿ ೨೦೦,೦೦೦ ಜನರನ್ನು ಕಬಳಿಸಿವೆ. ಅದರಲ್ಲೂ ಇಟಲಿಯ ವೆಸೂವಿಯಸ್‌ ಎಂಬ ಜ್ವಾಲಾಮುಖಿ ಕ್ರಿ.ಶ. ೭೯ ರಲ್ಲಿ ಅಂದರೆ ಈಗ್ಗೆ ೧೯೨೦ ವರ್ಷಗಳ ಹಿಂದೆ, ಆಗಸ್ಟ್‌ ೨೪ ರಂದು ಉಗ್ರರೂಪ ತಾಳಿ ಪಕ್ಕದಲ್ಲಿದ್ದ ಪಾಂಪೆ ನಗರದ ಸೈನಿಕರು, ಮನೆಮಂದಿಯನ್ನು ಉಸಿರುಕಟ್ಟಿಸಿ ಸಾವಿಗೀಡಾಗಿಸಿದ ಪ್ರಸಂಗ ಇಂದಿಗೂ ಧಾರುಣ ಕಥೆಯಾಗಿ ಉಳಿದಿದೆ. ಲಾವಾರಸದ ಪ್ರವಾಹ, ವಿಷಾನಿಲಗಳ ಉಗುಳುವಿಕೆಯಿಂದ ೧೮,೦೦೦ ಜನ ಅಂದೇ ಅಸುನೀಗಿದರು. ಇಡೀ ಪಾಂಪೆನಗರ ಸ್ಮಶಾನವಾಗಿ ಪರಿಣಮಿಸಿತು.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಜ್ವಾಲಾಮುಖಿ

ಕ್ರಕಟೋವ ಎಂಬುದು ಜಾವ ಮತ್ತು ಸುಮಾತ್ರಗಳ ನಡುವಿನ ಒಂದು ದ್ವೀಪ. ಒಮ್ಮೆ ಇಲ್ಲಿ ಜ್ವಾಲಾಮುಖಿ ಕೆರಳಿ ಸ್ಫೋಟಿಸಿದಾಗ ಆದ ಶಬ್ದ ೫,೦೦೦ ಕಿ.ಮೀ. ವರೆಗೆ ಕೇಳಿಸಿತು. ಇದರಿಂದ ಉತ್ಪತ್ತಿಯಾದ ತರಂಗಗಳು ಭೂಮಿಯನ್ನು ಅನೇಕ ಬಾರಿ ಪ್ರದಕ್ಷಿಣೆ ಹಾಕಿದವು. ಜ್ವಾಲಾಮುಖಿಯುಂದುಂಟಾದ ಆವಿ, ದೂಳು ೩,೦೦೦ ಕಿ.ಮೀ. ಎತ್ತರದವರೆಗೆ ಚಿಮ್ಮಿ ೨೫೦ ಕಿ.ಮೀ. ಸುತ್ತಣ ಪ್ರದೇಶ ಕತ್ತಲೆಯಲ್ಲಿ ಮುಸುಕಿತು. ಅಷ್ಟೇ ಅಲ್ಲದೆ ನಿರಂತರವಾಗಿ ಮೂರು ವರ್ಷಗಳ ಕಾಲ ವಾಯುವಿನಲ್ಲಿ ದೂಳಿನ ಕಣಗಳು ತೇಲಾಡುತ್ತಿದ್ದವು.

ಜ್ವಾಲಾಮುಖಿಗಳ ಕಾರ್ಯ ಚಟುವಟಿಕೆಯಿಂದ ಭೂಮಿಯ ಒಳಗೆ ಏನಿದೆ, ಭೂಮಿಯ ಆಳ ಹೇಗಿದೆ ಎಂಬುದು ನೇರವಾಗಿ ಪರಿಚಯವಾದಂತೆ ಭೂಕಂಪನ ತರಂಗಗಳಿಂದ ಭೂಮಿಯು ಎಷ್ಟು ಆಳದವರೆಗೆ ಶಿಲೆಗಳನ್ನು ಹೊಂದಿದೆ, ಅವುಗಳ  ಸಂಯೋಜನೆ ಏನು, ಅತ್ಯಂತ ಆಳವಾದ ಭಾಗವೆಂದರೆ ಎಷ್ಟು, ಅದರ ಸ್ಥಿತಿ ಹೇಗಿದೆ ಎಂಬ ಅಂಶಗಳು ಬೆಳಕಿಗೆ ಬರುತ್ತವೆ.

ನಾವು ವಾಸಿಸುತ್ತಿರುವ ಭೂಗೋಳ ಕಲ್ಲು ಮಣ್ಣಿನಿಂದ ತುಂಬಿದೆ. ಬಾವಿ ತೋಡುವಾಗ ನಾವು ಕಾಣುವುದು ಶಿಲೆಗಳನ್ನು ತಾನೆ? ನಮ್ಮ ಸುತ್ತಮುತ್ತಲ ಬೆಟ್ಟಗುಡ್ಡಗಳೇ ಈ ಮಾತಿಗೆ ಸಾಕ್ಷಿ. ಮಳೆ, ಗಾಳಿ, ಬಿಸಿಲಿನ ಹೊಡೆತ, ಪ್ರಾಣಿಗಳ ಕೆರೆತ ಇವುಗಳಿಗೆ ಒಳಗಾಗಿ ಕಲ್ಲು ಕೂಡ ಸವೆಯುತ್ತದೆ. ಇಂತಹ ಸವೆದ ಕಲ್ಲೇ ನಮ್ಮ ಕಣ್ಣಿಗೆ ಕಾಣುತ್ತಿರುವ ಮಣ್ಣು. ಭೂಮಿಯ ಈ ಗೋಳವನ್ನು ಶಿಲಾಗೋಳವೆಂದೇ ಕರೆಯುತ್ತಾರೆ.

ಭೂಮಿ ಮತ್ತು ಭೂಮಿಯ ವಾತಾವರಣದಲ್ಲಿರುವ ಶೇ. ೯೭ ಭಾಗ ನೀರು ಸಮುದ್ರದಲ್ಲಿಯೇ ಇದೆ. ಎತ್ತ ನೋಡಿದರೂ ಜಲರಾಶಿ. ಬರೀ ಉಪ್ಪುಮಯ. ಕುಡಿಯಲೂ ಯೋಗ್ಯವಲ್ಲ; ವ್ಯವಸಾಯಕ್ಕಂತೂ ಈ ಉಪ್ಪುನೀರು ಒಂದಿಷ್ಟೂ ಉಪಯೋಗವಿಲ್ಲ. ಅದಕ್ಕಾಗಿಯೇ ಬಾವಿ ತೋಡಿ ಭೂಮಿಯೊಳಗಿನ ನೀರನ್ನು ಬಳಸಿಕೊಳ್ಳಬೇಕು. ಮಳೆಯಾದಾಗ ನೆಲದ ಮೇಲೆ ನೀರೆಲ್ಲ ಹಳ್ಳ ಅಥವಾ ನದಿಯಾಗಿ ಹರಿಯುವುದಿಲ್ಲ. ಇಳಕಲು ಭೂಮಿಯಾಗಿದ್ದರೆ ಬಿದ್ದ ನೀರಿನ ಒಂದು ಭಾಗ ಭೂಮಿಯೊಳಗೆ ಇಳಿಯುತ್ತದೆ. ಒಂದುಭಾಗ ಬಾಷ್ಪವಾಗಿ ಮತ್ತೆ ವಾತಾವರಣವನ್ನು ಸೇರುತ್ತದೆ. ಯಾವ ಭೂಮಿಯ ಆಳವಾದ ಭಾಗದಲ್ಲಿ ಶಿಲೆಗಳು ರಂಧ್ರ, ಛಿದ್ರಗಳಿಂದ ಕೂಡಿದ್ದರೆ ಆ ಭಾಗದಲ್ಲಿ ನೆಲದ ಮೇಲಿಂದ ನೀರು ಒಳಗೆ ಬಸಿಯಲು ಸುಲಭ. ಹೀಗೆ ನೆಲದಾಳದಲ್ಲಿ ಶೇಖರವಾದ ನೀರೇ ಅಂತರ್ಜಲ. ಅಂತರ್ಜಲದ ಮಟ್ಟ ಬೇಸಿಗೆಯಲ್ಲಿ ಭೂಮಿಯ ಆಳಕ್ಕಿಳಿದರೆ ಮಳೆಗಾಲದಲ್ಲಿ ಮೇಲೇರುತ್ತದೆ. ಚಿಲುಮೆಗಳು ಉಂಟಾಗುವುದೇ ಈ ಅಂತರ್ಜಲ ಮಟ್ಟವನ್ನು ಭೂಮಿ ಎಲ್ಲಿ ಛೇದಿಸುತ್ತದೋ ಅಲ್ಲಿ.

ಕಬ್ಬಿಣ, ಮ್ಯಾಂಗನೀಸು, ಅಲ್ಯುಮಿನಿಯಂ, ಕ್ರೋಮಿಯಂ ಮುಂತಾದ ಲೋಹಗಳು ನಮ್ಮ ಉಪಯೋಗಕ್ಕೆ ಬೇಕು. ಈ ಎಲ್ಲ ಲೋಹಕ್ಕೂ ಭೂಮಿಯೇ ಮೂಲ. ಇವು ಅದುರು ರೂಪದಲ್ಲಿ ದೊರೆಯುತ್ತದೆ. ಇವುಗಳಲ್ಲಿ ಕೆಲವು ಅದುರು ಭೂಮಿಯ ಮೇಲೆ ಕಾಣಿಸಿಕೊಂಡರೆ ಮತ್ತೆ ಕೆಲವು ಭೂಮಿಯ ಆಳದಲ್ಲಿ ಅಡಗಿರುತ್ತವೆ. ಪಶ್ಚಿಮಘಟ್ಟದ ಕುದುರೆ ಮುಖದಲ್ಲಿ ಕಬ್ಬಿಣ ಬೆಟ್ಟದೋಪಾದಿಯಲ್ಲಿ ಗೋಚರಿಸಿದರೆ ಕೋಲಾರದಲ್ಲಿ ಚಿನ್ನಕ್ಕಾಗಿ ಗಣಿಯನ್ನೇ ತೋಡಬೇಕಾಯಿತು.

ಖನಿಜದ ಪ್ರಮಾಣ ಗಣಿಯಾಳದಲ್ಲಿ ದೊರೆಯುವುದು ಕಡಿಮೆಯಾಯಿತೆಂದರೆ ಗಣಿ ಕಾರ್ಯಾಚರಣೆಯನ್ನು ನಿಲ್ಲಿಸಿಬಿಡುತ್ತೇವೆ. ಇದರಂತೆ ನೀರಿಗಾಗಿ ಬಾವಿ ತೋಡುತ್ತೇವೆ. ಸಾಕಷ್ಟು ಪ್ರಮಾಣದ ನೀರು ದೊರೆಯುತ್ತಿದ್ದಂತೆ ತೋಡುವುದನ್ನು ನಿಲ್ಲಿಸಿಬಿಡುತ್ತೇವೆ. ಇದರಿಂದಾಗಿ ಭೂಮಿಯ ಅಷ್ಟರ ಆಳದ ಪರಿಚಯವಾಗುತ್ತದೆಯೇ ವಿನಾ ಮುಂದೇನಿದೆ ಎಂಬುದು ನಮಗೆ ತಿಳಿಯುವುದಿಲ್ಲ.

ನಮ್ಮ ಭಾರತದ ಉತ್ತರದ ತುದಿಯತ್ತ ಟಿಬೆಟ್ಟು ಪ್ರಸ್ಥಭೂಮಿ ಇದೆ. ಇಲ್ಲಿ ಕರಾಕುರಂ ಎಂಬ ಬೆಟ್ಟ ಸರಣಿ ಹೂ ಮಾಲೆಯ ತರಹ ಕಾಣಿಸುತ್ತದೆ. ವಾಸ್ತವವಾಗಿ ಹಿಂದೂಕುಶ್‌ ಪರ್ವತದ ಭಾಗಗಳೇ ಕರಾಕುರಂ ಬೆಟ್ಟಗಳು. ಇಲ್ಲಿ ನೀವು ಭೂಮಿಯ ೭೫ ಕಿ.ಮೀ. ಆಳದವರೆಗೆ ತೋಡಿದರೂ ಬರೀ ಶಿಲೆಗಳೇ; ಮತ್ತೇನೂ ದೊರೆಯುವುದಿಲ್ಲ. ಇಂತಹ ಪರ್ವತಗಳಡಿ ಶಿಲಾಗೋಳ ಅಷ್ಟು ದಪ್ಪವಾಗಿರುತ್ತವೆ. ಎಲ್ಲ ಕಡೆಯೂ ಶಿಲೆಯು ಇಷ್ಟೊಂದು ಮಂದವಾಗಿರುವುದಿಲ್ಲ. ಸಾಗರ ತಳದ ಬಳಿ ಈ ಶಿಲೆಗಳ ಮಂದವೆಷ್ಟು ಗೊತ್ತೆ? ಹೆಚ್ಚೆಂದರೆ ನೀರೂ ಸೇರಿ ಹನ್ನೆರಡು ಕಿ.ಮೀ. ಗಳಾಗಬಹುದು ಅಷ್ಟೆ. ಭೂಮಿಯ ಮೇಲಿಂದ ಕೃತಕವಾಗಿ ಸ್ಫೋಟಿಸಿ ಕಂಪನಗಳ ತರಂಗಗಳನ್ನು ಭೂಮಿಯೊಳಗೆ ಕಳಿಸಿದರೆ ಅವು ಮೊದಲು ಹತ್ತು ಹನ್ನೆರಡು ಕಿಲೋಮೀಟರುಗಳವರೆಗೆ ಸೆಕೆಂಡಿಗೆ ೬ ಕಿ.ಮೀ. ವೇಗದಲ್ಲಿ ಪ್ರವಹಿಸುತ್ತವೆ. ಈ ವೇಗವಿರುವುದು. ‘ಪಿ’ ತರಂಗಗಳಿಗೆ ಮಾತ್ರ. ಅನಂತರ ‘ಪಿ’ ತರಂಗಗಳ ವೇಗ ಇದ್ದಕ್ಕಿದ್ದಂತೆ ೮ ಕಿ.ಮೀ ಗಳಿಗೆ ಹೆಚ್ಚುತ್ತದೆ. ‘ಎಸ್‌’ ತರಂಗಗಳೂ ಸಹ ಹೀಗೆಯೇ ಮೊದಲು ೩ ಕಿ.ಮೀ ವೇಗದಲ್ಲಿ ಪ್ರವಹಿಸಿ ದಿಢೀರೆಂದು ೩ ೩/೪ ಕಿ.ಮೀ ನಷ್ಟು ವೇಗವಾಗಿ ಪ್ರವಹಿಸಲು ಪ್ರಾರಂಭಿಸುತ್ತವೆ. ಏನಿದರ ಗುಟ್ಟು? ಮೊದಲ ಹತ್ತನ್ನೆರಡು ಕಿ.ಮಿ. ಆಳದ ಶಿಲೆಗಳ ಸಾಂದ್ರತೆ ತುಂಬಾ ಕಡಿಮೆ ಹೆಚ್ಚೆಂದರೆ ಒಂದು ಘನ ಸೆಂಟಿಮೀಟರ್ ಗೆ ೨. ೭ಗ್ರಾಂ ತೂಗಬಹುದು, ಅಷ್ಟೇ. ಇದಕ್ಕಿಂತ ಆಳದಲ್ಲಿರುವ ಶಿಲೆಗಳು ಲಾವಾರಸ ಗಟ್ಟಿಯಾದ ಮೇಲೆ ಕಲ್ಲಾಗುವುದಿಲ್ಲವೇ ಅಂಥ ಶಿಲೆಗಳಿಂದ ಕೂಡಿದೆ. ಇಂತಹ ಶಿಲೆಗಳ ಮಂದವೇ ೨೦ ಕಿ.ಮೀ.ಗಳಿಗೂ ಹೆಚ್ಚು. ಮೇಲ್ಮೈನಲ್ಲಿರುವ ಶಿಲೆಗಳಿಗಿಂತ ಇವು ಹೆಚ್ಚು ಸಾಂದ್ರತೆ ಹೊಂದಿವೆ. ಇದರಿಂದಾಗಿಯೇ ಭೂಕಂಪನ ತರಂಗಗಳ ವೇಗ ಇಲ್ಲಿ ಹೆಚ್ಚುವುದು. ಈ ಎರಡು ವರ್ಗದ ಶಿಲೆಗಳಿರುವ ಭೂಮಿಯ ಹೊರ ಭಾಗವನ್ನು ಶಿಲಾಗೋಳವೆಂದು ಕರೆಯುತ್ತೇವೆ. ನಮ್ಮ ಯಾವೊಂದು ಗಣಿಗಳೂ ಶಿಲಾಗೋಳದ ತಳವನ್ನೇ ಮುಟ್ಟಿಲ್ಲ ಎಂದ ಮೇಲೆ ಪಾತಾಳವನ್ನು ನೋಡಲು ಸಾಧ್ಯವೆ?

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಭೂಮಿಯ ಹೊರಪದರದಲ್ಲಿರುವ ಧಾತುಗಳು

ಭೂಮಿಯ ತ್ರಿಜ್ಯ ೬,೪೦೦ ಕಿ.ಮೀ. ಇದಕ್ಕೆ ಹೋಲಿಸಿದಾಗ ಶಿಲಾಗೋಳ ಹೇಗೆ ಕಾಣುತ್ತದೆ ಗೊತ್ತೆ? ಸೇಬು ಹಣ್ಣಿನ ಸಿಪ್ಪೆಯಂತೆ. ಭೂಮಿಯ ಈ ಶಿಲಾಗೋಳ ಮರಗಳಿಗೆ ತೊಗಟೆ ಇದ್ದಂಥೆ. ಮೊಟ್ಟೆಯ ಮೇಲಿನ ಬಿಳಿ ಚಿಪ್ಪಿದ್ದಂತೆ. ಅಲ್ಲಿ ಸೂರ್ಯನ ಬೆಳಕು ಸುಳಿಯಲಾರದು. ನಾವು ಭೂಮಿಯಿಂದ ಪಡೆಯುತ್ತಿರುವ ಬೆಳ್ಳಿ, ಬಂಗಾರ, ಕಬ್ಬಿಣ, ತಾಮ್ರ, ಅಲ್ಯುಮಿನಿಯಂ, ರತ್ನಖನಿಜಗಳು, ವಜ್ರ, ವೈಢೂರ್ಯಗಳು ಎಲ್ಲಾ ಈ ಶಿಲಾಗೋಳದ ಕೊಡುಗೆ. ಇದರಿಂದಾಗಿಯೇ ಹಿರಿಯರು ಭೂಮಿಯನ್ನು ‘ಬಹುರತ್ನಾ ವಸುಂಧರಾ’ ಎಂದು ಕರೆದಿರುವುದು.

ಯುಗೋಸ್ಲೋವಿಯಾದ ಆಂಡ್ರಿಜ ಮೊಹೊರೋವಿಕ್‌ ಎಂಬ ಪ್ರಸಿದ್ಧ ವಿಜ್ಞಾನಿ ಭೂಮಿಯ ಅಂತರಾಳ ಅಳೆಯುವವರಿಗೆ ಕೆಲವು ತಂತ್ರಗಳನ್ನು ತಿಳಿಸಿದ್ದಾನೆ. ಭೂಮಿಗಿರುವ ಭೌತ ಗುಣಗಳನ್ನು ಅಭ್ಯಾಸ ಮಾಡುವುದೆಂದರೆ ಅವನಿಗೆ ವಿಶೇಷ ಆಸಕ್ತಿ. ಒಮ್ಮೆ ಅಧ್ಯಯನ ಮಾಡುತ್ತಿರುವಾಗ ಭೂಕಂಪನ ತರಂಗಗಳು ಭೂಮಿಯ ಮೇಲ್ಮೈಯಿಂದ ೧೦ ರಿಂದ ೩೫ ಕಿ.ಮೀ. ಆಳದಲ್ಲಿ ಇದ್ದಕ್ಕಿದ್ದಂತೆ ಹೆಚ್ಚು ವೇಗದಲ್ಲಿ ಪ್ರವಹಿಸುವುದು ಅವನ ಗಮನಕ್ಕೆ ಬಂದಿತು. ಹೊರಭಾಗದಲ್ಲಿ ಸೆಕೆಂಡಿಗೆ ಸುಮಾರು ಆರು ಕಿ.ಮೀ. ವೇಗದಲ್ಲಿ ಪ್ರವಹಿಸುತ್ತಿದ್ದ ‘ಪಿ’ ತರಂಗಗಳು ಆ ಆಳದಲ್ಲಿ ದಿಢೀರೆಂದು ಎಂಟು ಕಿ.ಮೀ. ನಷ್ಟು ವೇಗದಲ್ಲಿ ಪ್ರವಹಿಸಲು ಯಾವುದೋ ಪ್ರಬಲ ಕಾರಣವಿರಬೇಕೆಂದು ಅವನು ಊಹಿಸಿದ. ಇದು ಭೂಮಿಯ ಹೊರಚಿಪ್ಪಿನ ತಳ ಎಂಬ ತೀರ್ಮಾನಕ್ಕೆ ಬಂದ. ಭೂಮಿಯ ಈ ಭಾಗವನ್ನು ಅಂದಿನಿಂದ ಮೊಹೋರೋವಿಕ್‌ನ ಹೆಸರನ್ನು ಆಧರಿಸಿ ಮೊಹೋರೋವಿಕ್‌ ಅಸಂಗತ ವಲಯ ಎಂದೇ ಕರೆದಿದ್ದಾರೆ. ಆದರೆ ಇದು ಬರೀ ಊಹೆಯಾಯಿತು.

ಭೂಮಿಯ ಒಳಗೇನಿದೆ ಎಂಬುದನ್ನು ಖುದ್ದಾಗಿ ತಿಳಿಯಲು ಅಮೆರಿಕಾದ ಸಂಘವೊಂದರ ಸದಸ್ಯರು ೧೯೫೨ರ ಸುಮಾರಿನಲ್ಲಿ ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಿದರು. ಮೊಹೋನ ಹೆಸರಿನಲ್ಲಿ ಒಂದು ದೊಡ್ಡ ಯೋಜನೆ ತಯಾರಿಸಿ ಭೂಮಿಯ ಹೊರಚಿಪ್ಪನ್ನು ತಳ ಸಿಗುವವರೆಗೂ ಬೈರಿಗೆ ಹಾಕಿ ಕೊರೆಯಬೇಕು. ಇದೇ ‘ಮೊಹೋಲ್‌ ಯೋಜನೆ’. ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಮೊಹೋಲ್‌ ಯೋಜನೆಯ ಕಾರ್ಯಕ್ರಮವನ್ನು ಕೈಗೊಳ್ಳುವ ಹೊಣೆಹೊತ್ತಿತ್ತು. ಭೂಮಿಯ ಹೊರಚಿಪ್ಪನ್ನು ಕೊರೆಯುವ ಮೊದಲ ಹಂತದ ಕೆಲಸ ೧೯೬೦ ರಲ್ಲಿ ಪ್ರಾರಂಭವಾಯಿತು. ಮೆಕ್ಸಿಕೋ ತೀರದ ಗುಡಾಲೂನ್‌ ದ್ವೀಪದ ಬಳಿ ಬೈರಿಗೆ ಹಾಕಲೂ ತೀರ್ಮಾನಿಸಲಾಯಿತು. ಇಲ್ಲಿ ಸಾಗರ ೩೬೫೭ ಮೀಟರು ಆಳವಾಗಿದೆ. ತೇಲುವ ಹಡಗಿನಿಂದ ಬೈರಿಗೆ ಸಲಕರಣೆಗಳನ್ನು ಇಳಿಯಬಿಟ್ಟು ೧೮೩ ಮೀ. ಆಳದಲ್ಲಿ ರಂಧ್ರಗಳನ್ನು ಕೊರೆದು ಆ ಆಳದ ಕಲ್ಲಿನ ಮಾದರಿಗಳನ್ನು ಪಡೆದರು. ಈ ಕಲ್ಲಿನಿಂದ ೧೫ರಿಂದ ೨೦ ದಶಲಕ್ಷ ವರ್ಷಗಳ ಹಿಂದೆ ಸಾಗರ ತಳದಲ್ಲಿ ವಾಸವಾಗಿದ್ದ ಸಾಗರ ಜೀವಿಗಳ ಅವಶೇಷಗಳು ಕಂಡುಬಂದವು. ಇನ್ನೂ ಆಳದಲ್ಲಿ ಬಸಾಲ್ಟ್‌ ಎಂಬ ಅಗ್ನಿ ಶಿಲೆಗಳು ಇದ್ದುದು ಸ್ಷಷ್ಟವಾಯಿತು.

೧೯೬೨ರಲ್ಲಿ ಪ್ಯೂರೆರಿಕೋ ಎಂಬಲ್ಲಿ ೩೦೫ ಮೀ. ಆಳದ ಕಲ್ಲಿನ ಮಾದರಿ ಪಡೆಯುವಾಗ ಸಾಗರ ತಳದ ಆಳವಾದ ಭಾಗದಲ್ಲಿ ಸರ್ಪೆಂಟೀನ್‌ ಎಂಬ ಅತ್ಯಂತ ಕ್ಷಾರ ಶಿಲೆಯಿರುವುದು ಪತ್ತೆಯಾಯಿತು. ಕ್ರೋಮಿಯಂ ಲೋಹದ ಅದುರಾದ ಕ್ರೋಮೈಟ್‌ ದೊರೆಯುವುದು ಈ ಶಿಲೆಯಲ್ಲಿಯೇ. ಇದರಿಂದ ಉತ್ಸಾಹ ತಳೆದ ವಿಜ್ಞಾನಿಗಳು ಮುಂದೆ ಸಾಗರವನ್ನು ಕೊರೆದು ಮೊಹೋಲ್‌ ಜಾಗದವರೆಗೆ ತಲಪಲು ನಿಶ್ಚಯಿಸಿ ಇದಕ್ಕಾಗಿ ಹವಾಯಿ ದ್ವೀಪದ ‘ಮೌಯಿ’ ಎಂಬ ಜಾಗವನ್ನು ಆಯ್ಕೆ ಮಾಡಿದರು. ಇಲ್ಲಿ ಬಿರುಗಾಳಿಯ ಭಯವಿರಲಿಲ್ಲ.

ಬೈರಿಗೆ ಹಾಕಿ ನೆಲ ಕೊರೆಯಲು ಸಾಗರವನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಒಂದು ಕಾರಣವಿದೆ. ಸಾಗರದಲ್ಲಿ ನೀರಿರುವುದರಿಂದ ಸಾಗರದ ತಳ ಸಿಗುವವರೆಗೆ ಕೊರೆಯುವ ಶ್ರಮದ ಅಗತ್ಯವಿಲ್ಲ. ಸುಮ್ಮನೆ ಬೈರಿಗೆ ಕೊಳವೆಯನ್ನು ಇಳಿಯಬಿಡಬಹುದು. ಕಾಲ, ಹಣ, ಶ್ರಮ ಇದರಿಂದ ಪೋಲಾಗದೆ ಸುಲಭವಾಗಿ ಕೆಲಸ ಸಾಧಿಸಿದಂತಾಗುತ್ತದೆ ಎಂಬ ಯೋಜನೆಯಿಂದಾಗಿ ಸಾಗರವನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಫುಟ್‌ಬಾಲ್‌ ಆಟದ ಮೈದಾನದಷ್ಟು ವಿಸ್ತಾರವಾದ (೨೮೦ ಅಡಿ ಉದ್ದ, ೨೨೫ ಅಡಿ, ಅಗಲ) ನೆಲೆಯೊಂದನ್ನು ಈ ಕೆಲಸಕ್ಕಾಗಿಯೇ ರೂಪಿಸಲಾಯಿತು. ಮೂರು ವರ್ಷ ನಿರಂತರವಾಗಿ ಸಾಗರದ ತಳದಿಂದ ೫೧೮೧ ಮೀಟರು ಆಳ ಕೊರೆದು ಮೊಹೋಲ್‌ ವಲಯವನ್ನು ತಲುಪಬೇಕೆಂಬ ಯೋಜನೆ ಸಿದ್ಧವಾಯಿತು. ಮೊದಲಿನಂತೆ ತೇಲುವ ಹಡಗೊಂದರಿಂದಲೇ ಈ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಈ ಅಗಾಧವಾದ ಭಾಗವನ್ನು ಕೊರೆಯುವಾಗ ಹೆಬ್ಬೆಲೆಗಳು ಉಂಟು ಮಾಡುವ ನೀರಿನ ಕುಲುಕಾಟದಿಂದ ಹಡಗು ಕದಲುವ ಸಾಧ್ಯತೆ ಇತ್ತು. ಸಾಗರ ತಳದಲ್ಲಿ ನೆಲ ಕೊರೆಯುವ ಕಾರ್ಯವು ನಾವು ತಿಳಿದಂತೆ ಸುಲಭದ್ದಲ್ಲ. ವಿಮಾನದಲ್ಲಿ ಕುಳಿತು ಅಲ್ಲಿಂದ ಬೈರಿಗೆ ಹಾಕಿ ನೆಲ ಕೊರೆಯುವುದು ಎಷ್ಟು ಕಷ್ಟವೋ ಅಷ್ಟೇ ಸಾಗರ ತಳವನ್ನು ನೀರಿನ ಮೇಲಿರುವ ಯಾವುದೇ ನೆಲೆಯೊಂದರಿಂದ ಕೊರೆಯುವುದು. ತುಂಬ ಉದ್ದುದ್ದವಾದ ಬೈರಿಗೆ ಕೊಳವೆಗಳು ಬೇಕಾಗುತ್ತವೆ. ನೀರಿನ ಒತ್ತಡ ಸದಾ ಕೊಳವೆಗಳ ಮೇಲೆ ಬಿದ್ದಿರುತ್ತವೆ. ಕಲ್ಲಿನ ಮಾದರಿಯನ್ನು ಅಷ್ಟು ಆಳದಿಂದ ಜೋಪಾನವಾಗಿ ಹಾಳಾಗದಂತೆ ತೆಗೆಯುವುದು ಮತ್ತೂ ಕಷ್ಟ. ಹೀಗಾಗಿ ಮೊಹೋರೋವಿಕ್‌ ವಲಯ ತಲುಪುವುದು ಕಾರ್ಯರೂಪಕ್ಕೆ ಬರಲೇ ಇಲ್ಲ. ಆದರೂ ಭೂಕಂಪನ ತರಂಗಗಳು ಪರೋಕ್ಷವಾಗಿ ನಮಗೆ ಭೂ ಒಳಭಾಗದ ಸ್ಥಿತಿ ಹೀಗಿದೆ ಎಂಬುದನ್ನು ತಿಳಿಸಿಕೊಡುತ್ತವೆ.

ಭೂಮಿಯ ೭೫ ಕಿ.ಮೀ. ಆಳದ ಮುಂದೆ ಮತ್ತೇನಿದೆ? ಅಲ್ಲಿಂದ ಸುಮರು ೧೭೫ ಕಿ.ಮೀ. ಆಳದವರೆಗೆ ಭೂಕಂಪನ ತರಂಗಗಳು ಇದ್ದಕ್ಕಿದಂತೆ ನಿಧಾನವಾಗಿ ಪ್ರವಹಿಸಲು ಪ್ರಾರಂಭಿಸುತ್ತವೆ. ಇಲ್ಲಿ ಏನಾದರೂ ಅಡತಡೆಗಳಿರಬಹುದೆ? ವಾಸ್ತವವಾಗಿ ಇಲ್ಲಿ ಶಿಲೆಗಳೇ ಇಲ್ಲ ಎಂದರೆ ನೀವು ನಂಬುವಿರಾ? ಹೌದು, ಇಲ್ಲಿ ಶಿಲೆ ಎಲ್ಲವೂ ಕರಗಿ ಶಿಲಾಪಾಕವಾಗಿದೆ. ಸಕ್ಕರೆ ಪಾಕದಂತೆ ಮೃದು; ಕಡಿಮೆ ಒತ್ತಡ ಇದ್ದ ಕಡೆಗೆ ಹರಿದೇಬಿಡುತ್ತದೆ. ಅಂದಮೇಲೆ ನಾವೆಲ್ಲಾ ಪಾಕದ ಮೇಲೆ ನಿಂತಿದ್ದೇವೆ ಎಂದಾಯಿತು. ಭೂಮಿಯ ಒಡಲಲ್ಲಿ ನೂರು ಕಿಲೋಮೀಟರಿಗೂ ಹೆಚ್ಚಿನ ಮಂದದ ಪಾಕವಿದೆ. ಭೂಮಿಯ ಹೊಟ್ಟೆಯೇ ಒಂದು ದೊಡ್ಡ ಕಡಾಯಿಯಂತೆ. ಶಿಲೆಯೆಲ್ಲಾ ಪಾಕವಾಗಲು ಅಷ್ಟೊಂದು ಶಾಖವೆಲ್ಲಿಂದ ಬಂತು? ಯಾರಾದರೂ ಪಾತಾಳ ಲೋಕದಿಂದ ಭೂಮಿಗೆ ಬೆಂಕಿಯಿಟ್ಟಿರಬಹುದೆ? ಇಲ್ಲ … ಅದೂ ಸಾಧ್ಯವಿಲ್ಲ. ಭೂಮಿಯೇ ಒಂದು ಕುಲುಮೆ. ಅದು ತನ್ನ ಹೊಟ್ಟೆಗೆ ತಾನೇ ಬೆಂಕಿ ಹಾಕಿಕೊಂಡು ಕೋಟ್ಯಂತರ ವರ್ಷಗಳಿಂದ ತೊಳಲಾಡುತ್ತಿದೆ. ಇದಕ್ಕೆ ತಾಪ ಹೆಚ್ಚಿದಾಗ ಭೂಮಿಯ ಶಿಲಾಗೋಳದಲ್ಲಿ ಎಲ್ಲೇ ಜಾಗವಿರಲಿ. ಸಂದಿಗೋಂದಿಗಳಲ್ಲಿ ನುಗ್ಗಿ ಚೀರಾಡಿ, ಕೆರಳಿ ಜ್ವಾಲಾಮುಖಿಯ ರೂಪದಲ್ಲಿ ಶಿಲಾರಸವನ್ನು ಉಗುಳುತ್ತದೆ. ಇಲ್ಲಿ ಭೂಮಿಯ ಒಡಲ ತಾಪ ೧,೦೦೦ ಡಿಗ್ರಿ ಸೆಂಟಿಗ್ರೇಡಿಗಿಂತ ಹೆಚ್ಚು. ಕಲ್ಲೂ ಪಾಕದಂತೆ ಕರಗಿ ಹರಿಯುತ್ತದೆ. ಈ ಭಾಗವನ್ನೇ ನಾವು ಅಸ್ತೆನೋಗೋಳ ಎನ್ನುವುದು. 

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಭೂಮಿಯ ಅಂತರಾಳ

ರೇಡಿಯಂ ಎಂಬುದು ಒಂದು ಧಾತು. ಇದರ ಸ್ವಭಾವ ತೀರ ವಿಚಿತ್ರವಾದದ್ದು. ಸದಾ ಕಿರಣಗಳನ್ನು ಸ್ಫುರಿಸಿ, ಶಕ್ತಿಯನ್ನು ವ್ಯಯ ಮಾಡಿಕೊಂಡು ಕೊನೆಗೆ ಕರಕಿನಂತಾಗಿ ಬಿಡುತ್ತದೆ. ಇದು ಸ್ಫುರಿಸುವ ಕಣ ಮತ್ತು ಕಿರಣವನ್ನೇ ನಾವು ಆಲ್ಫ, ಬೀಟ, ಗಾಮ, ಎನ್ನುವುದು ಕೇವಲ ಕಣ, ಕಿರಣಗಳನ್ನು ಸೂಸಿ ಈ ಖನಿಜ ತೆಪ್ಪಗಿರುವುದಿಲ್ಲ; ಜೊತೆಗೆ ಅಪಾರವಾದ ಶಾಖವನ್ನು ಬಿಡುಗಡೆ ಮಾಡುತ್ತದೆ. ಭೂಮಿಯ ಶಿಲಾಗೋಳದಡಿ ಈ ಖನಿಜ ಸಂಗ್ರಹ ಹೆಚ್ಚು. ಭೂಮಿಯ ಅಪರಿಮಿತ ಶಾಖಕ್ಕೆ ಈ ವಿಕಿರಣಶೀಲ ಖನಿಜಗಳೇ ಕಾರಣ. ಶಿಲೆಗಳಂತೂ ಈ ಖನಿಜಗಳು ಬಿಡುಗಡೆ ಮಾಡುವ ಶಾಖವನ್ನು ತಾಳಲಾರದೆ ಕರಗಿಯೇ ಬಿಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಭಾರತದ ಉತ್ತರ ದಿಕ್ಕಿನಲ್ಲಿ ಪೂರ್ವ ಪಶ್ಚಿಮವಾಗಿ ಹೆಬ್ಬಾವಿಂತೆ ಮಲಗಿರುವ ಹಿಮಾಲಯ ಪರ್ವತದ ಉದ್ದವೇ ೨೫೦೦ ಕಿ.ಮೀ. ೮೮೪೮ ಮೀಟರು ಎತ್ತರವಿರುವ ಈ ಪರ್ವತ ಸ್ತೋಮದ ಅದ್ಭುತಕ್ಕೆ ಬೆರಗಾಗದವರು ಯಾರು? ಅಪಲೇಶಿಯನ್‌ ಪರ್ವತವು ಅಲಬಾಮಾದಿಂದ ನ್ಯೂಪೌಂಡ್‌ಲ್ಯಾಂಡ್ಸ್‌ವರೆಗೆ ಹಿಮಾಲಯದಷ್ಟೇ ಉದ್ದಕ್ಕೂ ಹಬ್ಬಿದೆ. ದಕ್ಷಿಣ ಆಫ್ರಿಕದ ಅಟ್ಲಾಸ್‌, ದಕ್ಷಿಣ ಅಮೇರಿಕಾದ ಆಂಡಿಸ್‌ ಮೊದಲಾದ ಪರ್ವತಗಳನ್ನೆಲ್ಲ ನೋಡಿದಾಗ ಈ ಬೃಹತ್‌ ಶಿಲಾರಾಶಿಯನ್ನು ಭೂಮಿ ಹೇಗೆ ಹೊತ್ತಿದೆ. ಭಾರಕ್ಕೆ ಜಗ್ಗಿ ಕುಸಿಯುವುದಿಲ್ಲವೆ. ಈ ಪರ್ವತ ಮಾಲೆಗಳು ಹುಟ್ಟಿದ್ದಾದರೂ ಹೇಗೆ ಎಂಬ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ.

ಭೂಮಿಯ ಶಿಲಾಗೋಳದ ತಳಭಾಗ ಪ್ಲಾಸ್ಟಿಕ್‌ ಸ್ವರೂಪದ ಅಸ್ತೇನೋಗೋಳ ಎಂಬುದನ್ನು ನೀವು ಅರಿತಿರುವಿರಿ. ಅಂದಮೇಲೆ ನಾವು, ನಮ್ಮ ಸುತ್ತಮುತ್ತಲ ಪರ್ವತ ಬೆಟ್ಟಗುಡ್ಡ, ನದಿ, ಕಂದರ ಎಲ್ಲವೂ ಈ ಬಳಕುವ ಶಿಲಾಪಾಕದ ಮೇಲೆ ತೇಲುತ್ತಿದ್ದೇವೆಯೆ? ಹೌದು. ತೇಲುತ್ತಿದ್ದೇವೆ. ಇದು ಹೇಗೆ ಸಾಧ್ಯ?

ಅಸ್ತೆನೋಗೋಳದ ಕಥೆ ಇದಾದರೆ ಇದರಡಿಯ ೨೭೨೫ ಕಿ.ಮೀ. ಮಂದದ ಭೂಮಿಯ ಸ್ವರೂಪವೇ ಬೇರೆ. ಇವೆಲ್ಲವನ್ನೂ ಮತ್ತೆ ಭಾರವಾದ ಶಿಲೆಗಳೇ ಆಕ್ರಮಿಸಿ ಭೂಕಂಪನ ತರಂಗಗಳನ್ನು ಸುಲಭವಾಗಿ ಹಾಯಲು ಬಿಡುತ್ತವೆ. ಭೂಮಿಯ ಶಿಲಾಗೋಳದ ಹೊರಭಾಗದಲ್ಲಿಯೇ ನಾನಾ ವಾಸಿಸುತ್ತಿರುವುದು. ಇದು ನದಿ, ಗಾಳಿ ಮುಂತಾದವುಗಳ ದಾಳಿಗೆ ಸಿಕ್ಕಿ ಸವೆಯುತ್ತಿದೆ. ಸವೆದ ಶಿಲೆಗಳು ಚೂರುಗಳಾಗಿ ನದಿಗಳಿಂದ ಸಾಗಿಸಲ್ಪಟ್ಟು ಕೊನೆಗೆ ಸಾಗರವನ್ನು ಸೇರುತ್ತವೆ. ಹಿಮಾಲಯದಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಸೇರುವ ನದಿ ‘ಗಂಗಾ’. ಇದು ಹರಿಯುವ ಪಾತ್ರದುದ್ದಕ್ಕೂ ಕಲ್ಲು, ಮಣ್ಣು, ಮರಳ ರಾಶಿಯನ್ನು ಸಾಗಿಸುತ್ತದೆ. ಸಾಗಿಸಿದ ಈ ರಾಶಿ ಬಂಗಾಳಕೊಲ್ಲಿಯ ಮುಖಜ ಭೂಮಿಯಿಂದ ಸಾಗರದೊಳಕ್ಕೆ ೩೦೦೦ ಕಿ.ಮೀ. ವರೆಗೂ ವ್ಯಾಪಿಸಿದೆ. ಇವುಗಳ ಮಂದವೇ ೨ ಕಿ.ಮೀ. ಗಿಂತ ಹೆಚ್ಚು. ಹೀಗಾದರೆ ಭೂಮಿಯು ಸವೆದು ತೆಳುವಾಗಿಬಿಡಬಹುದೇ ಎಂಬ ಶಂಕೆ ಉದ್ಭವಿಸುತ್ತದೆ. ಆದರೆ ತಳದ ಪಾಕ ರೂಪದ ಶಿಲಾರಸ ಪ್ರತಿಬಾರಿಯೂ ಮೇಲಕ್ಕೆ ನುಗ್ಗಿ ಅಲ್ಲಿ ಆರಿ ಈ ಶಿಲಾಗೋಳಕ್ಕೆ ಕೆನೆ ಅಂಟಿದಂತೆ ಅಂಟಿ ಇದರ ದಪ್ಪ ಹಾಳಾಗದಂತೆ ನೋಡಿಕೊಳ್ಳುತ್ತದೆ. ಈ ಕ್ರಿಯೆ ಕೋಟ್ಯಂತರ ವರ್ಷಗಳಲಿಂದ ಸಾಗಿಬಂದಿದೆ.  ಹೀಗಾಗಿ ಭೂಮಿ ಸವೆದರೂ ನಾವು ಹೆದರುವ ಅವಶ್ಯಕತೆಯೇ ಇಲ್ಲ. ಅಸ್ತೆನೋಗೋಳವೂ ಸೇರಿದಂತೆ ಶಿಲಾಗೋಳದ ತಳಭಾಗದಲ್ಲಿರುವ ೨೯೦೦ ಕಿ.ಮೀ. ಭೂಮಿಯ ಆಳವಾಗ ಭಾಗವನ್ನು, ಕವಚ [/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][ಮ್ಯಾಂಟಲ್‌] ಎಂದೇ ಕರೆಯುವುದು.

ಭೂಮಿಯ ೨೯೦೦ ಕಿ.ಮೀ. ಆಳದಿಂದ ಮುಂದೆ ಏನಿರಬಹುದು? ಭೂಮಿಯ ತಿರುಳು ಈ ಆಳದಿಂದ ಪ್ರಾರಂಭಿಸುತ್ತದೆ. ಇಲ್ಲಿ ಒತ್ತಡ ೩.೬ ದಶಲಕ್ಷ ಅಟ್ಮಾಸ್ಪಿಯರ್ ಗಳು; ಶಾಖದ ಪ್ರಮಾಣ ೪೦೦೦-೬೦೦೦ ಡಿಗ್ರಿ ಸೆಂಟಿಗ್ರೇಡುಗಳು. ಇಂತಹ ಅಸಾಧಾರಣ ಶಾಖವನ್ನು ಯಾವ ಶಿಲೆಗಳು ತಾನೆ ತಾಳಬಲ್ಲವು? ಅಷ್ಟೇ ಅಲ್ಲ, ಈ ಗೋಳದ ಸಾಂದ್ರತೆ ಒಂದು ಘನಸೆಂಟಿಮೀಟರಿಗೆ ೧೯ ಗ್ರಾಂ ಗಳಷ್ಟು. ಹಾಗಾದರೆ ಇಲ್ಲಿರುವ ವಸ್ತು ಯಾವುದು? ಕಬ್ಬಿಣ ಮತ್ತು ನಿಕ್ಕಲ್‌ ರಸವೇ ಕಾದುಕಾದು ಗಟ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರಿಂದಾಗಿಯೇ ಭೂಕಂಪನ ತರಂಗಗಳು ಸೆಕೆಂಡಿಗೆ ೧೧.೫ ಕಿ.ಮೀ.ಗಳ ವೇಗದಲ್ಲಿ ಇಲ್ಲಿ ಧಾವಿಸುವುದು. ಎಲ್ಲಿಯವರೆಗೆ ಭೂಮಿಯ ತಿರುಳಿದೆ ಎಂಬುದನ್ನು ತಿಳಿಯಬೇಕಾದರೆ ನೀವು ಭೂಮಿಯ ಒಳಗೆ ೬೩೭೦ ಕಿ.ಮೀ. ವರೆಗೆ ಇಳಿಯಬೇಕಾಗುತ್ತದೆ. ಅಲ್ಲಿಯವರೆಗೂ ಈ ತಿರುಳು ವ್ಯಾಪಿಸಿದೆ. ಈ ತಿರುಳಿನ ತ್ರಿಜ್ಯವೇ ೩೪೭೦ ಕಿ.ಮೀ. ಇದೆ. ಈಗ ನೀವೇ ಊಹಿಸಬಹುದು, ಈ ಅಪಾರ ಲೋಹರಾಶಿಯನ್ನು, ಅದು ವ್ಯಾಪಿಸಿರುವ ಜಾಗವನ್ನು.

ಭೂಮಿ ಹೊರನೋಟಕ್ಕೆ ಶಿಲೆಯ ಮುದ್ದೆಯಂತೆ ಕಾಣುತ್ತದೆ. ಆದರೆ ಒಳಗೆ ಹೋದಂತೆ ಈರುಳ್ಳಿಯಲ್ಲಿರುವಂತೆ ಪದರ ಪದರಗಳು ಹೆಣೆದಂತೆ ಕಂಡುಬರುತ್ತದೆ. ಈರುಳ್ಳಿ ಬೇರೆ ಬೇರೆ ಪದರಗಳಿಂದ ಕೂಡಿದ್ದರೂ ಪದರಗಳ ಸಂಯೋಜನೆ ಮಾತ್ರ ಒಂದೆ. ಆದರೆ ಭೂಮಿಯ ವಿಚಾರ ಹಾಗಲ್ಲ. ಒಂದೊಂದು ಪದರದ ದಪ್ಪವೇ ಬೇರೆ; ಸಂಯೋಜನೆಯಲ್ಲೂ ಸಹ ವ್ಯತ್ಯಾಸ ತೋರಿಸುತ್ತದೆ. ನಾವು ನಿಂತಿರುವ ನೆಲದಡಿ ಹಗುರವಾದ ಗ್ರಾನೈಟ್‌ ಶಿಲೆಯ ಸಂಯೋಜನೆಯ ಶಿಲೆಗಳಿದ್ದರೆ ಸಾಗರ ತಳವನ್ನು ರೂಪಿಸಿರುವುದು ಭಾರವಾದ ಬಸಾಲ್ಟ್‌ ಎಂಬ ಜ್ವಾಲಮುಖಿ ಸೂಸುವ ಶಿಲಾಸಂಯೋಜನೆಯ ಶಿಲೆಗಳು.

ಭೂಹೊರಚಿಪ್ಪು, ಸಾಗರದ ಹೊರಚಿಪ್ಪು ಹಾಗೂ ಭೂಮಿಯ ಮಧ್ಯ ಭಾಗದ ಗೋಳದಲ್ಲಿ ರಾಸಾಯನಿಕ ಸಂಯುಕ್ತಗಳು ಬೇರೆ ಬೇರೆ ಪ್ರಮಾಣದಲ್ಲಿದೆ. ಉದಾಹರಣೆಗೆ, ಸಿಲಿಕಾ ಸಂಯುಕ್ತ ಭೂಹೊರಚಿಪ್ಪಿನಲ್ಲಿ ಶೆ. ೬೦ ಭಾಗ ಕಂಡುಬಂದರೆ ಸಾಗರ ತಳದ ಶಿಲೆಗಳಲ್ಲಿ ಇದರ ಪ್ರಮಾಣ ೪೯.೮ ಭಾಗ ಮಾತ್ರ. ಭೂಮಿಯ ಕೇಂದ್ರ ಭಾಗಕ್ಕೆ ಹೋದಂತೆ ಇದರ ಪ್ರಮಾಣ ಇನ್ನೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಕಬ್ಬಿಣದ ಆಕ್ಸೈಡು, ಮೆಗ್ನೀಸಿಯಂ ಆಕ್ಸೈಡು ಹೆಚ್ಚುತ್ತ ಹೋಗುತ್ತದೆ. ಉಳಿದ ರಾಸಾಯನಿಕ ಸಂಯುಕ್ತಗಳ ಪ್ರಮಾಣವೂ ಹೀಗೆಯೇ ಬೇರೆ ಬೇರೆ ಗೋಳಗಳಲ್ಲಿ ವ್ಯತ್ಯಾಸ ಹೊಂದಿರುತ್ತದೆ.

ಒಮ್ಮೊಮ್ಮೆ ಆಕಾಶದಲ್ಲಿ ಕಿಡಿಕಾರಿ ಭೂಮಿಯತ್ತ ತೂರಿ ಬರುವ ಆಕಾಶಕಾಯಗಳನ್ನು ನೀವು ನೋಡಿರಬಹುದು. ಇವುಗಳನ್ನೇ ಉಲ್ಕಾಪಿಂಡಗಳು ಎನ್ನುವುದು. ಈ ಆಕಾಶಕಾಯಗಳು ತಾವು ಸುತ್ತುತ್ತಿರುವಾಗ ಭೂಮಿಯ ಗುರುತ್ವಾಕರ್ಷಣೆಯ ಆವರಣಕ್ಕೆ ಪ್ರವೇಶಿಸುತ್ತಲೇ ಭೂಮಿ ಅವುಗಳನ್ನು ಸೆಳೆದುಬಿಡುತ್ತದೆ. ಗಾಳಿಯೊಂದಿಗೆ ಘರ್ಷಿಸಿದಾಗ ಉಲ್ಕೆಗಳು ಉರಿದು ಪ್ರಜ್ವಲಿಸುತ್ತವೆ. ಈ ಸೆಳೆತಕ್ಕೆ ಕಾರಣ ನಮ್ಮ ಭೂಮಿಯ ಗುರುತ್ವಾಕರ್ಷಣೆ.

ಈ ಉಲ್ಕಾಪಿಂಡಗಳಲ್ಲಿ ಕೆಲವು ಸಿಲಿಕ ಎಂಬ ಧಾತುವನ್ನಷ್ಟೆ ಹೊಂದಿರುತ್ತವೆ. ಬೆಣಚುಕಲ್ಲನ್ನು ಒಂದರೊಡನೊಂದು ತಿಕ್ಕಿದರೆ ಆ ತಿಕ್ಕಾಟದ ಬಲದಿಂದಾಗಿ ಅದರಲ್ಲಿ ಬೆಂಕಿ ಕಾಣಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಈ ಬೆಣಚುಕಲ್ಲು ಕೂಡ ಸಿಲಿಕ ಹಾಗೂ ಆಮ್ಲಜನಕದಿಂದಾದ ಸಂಯುಕ್ತ ವಸ್ತು. ಇನ್ನೂ ಕೆಲವು ಉಲ್ಕಾಪಿಂಡಗಳು ಕಬ್ಬಿಣಾಂಶದಿಂದ ಕೂಡಿರುತ್ತವೆ. ಮತ್ತೆ ಕೆಲವು ನಿಕ್ಕಲ್‌ಲೋಹದಿಂದ ರೂಪಿತವಾಗಿರುತ್ತವೆ.

ಹಾಗಾದರೆ ಭೂಮಿಗೂ ಉಲ್ಕಾಪಿಂಡಗಳಿಗೂ ಸಂಬಂಧವಿದೆಯೆ? ಹೌದು. ಸಂಬಂಧವಿದೆ.

ಭೂಮಿ ಹೇಗೆ ಹುಟ್ಟಿತು? ಭೂವಿಜ್ಞಾನಿಗಳು ಹೇಳುವಂತೆ, ಅದೊಂದು ಸ್ವಾರಸ್ಯ ಕಥೆಯಂತಿದೆ.

“ಮೊದಲು ಇಡೀ ವಿಶ್ವವನ್ನು ಆವರಿಸಿದಂತೆ ಅನಿಲರೂಪದ ಮಹಾ ಮೋಡವೊಂದಿತ್ತು. ಇದರ ಹೆಸರು ‘ನೆಬ್ಯುಲ’ ನೆಬ್ಯುಲದ ಮಧ್ಯ ಭಾಗ ಭಾರದಿಂದ ಕುಸಿಯಿತು. ಮಧ್ಯಭಾಗ ಕುಸಿಯುತ್ತಲೇ ಮಹಾಮೋಡದ ಇತರ ಭಾಗ ಚೂರು ಚೂರಾಗಿ ಸಿಡಿಯಿತು. ಸಿಡಿದ ಒಂದೊಂದು ಮೋಡದ ಭಾಗವೂ ಒಬ್ಬೊಬ್ಬ ಸೂರ್ಯನಿಗೆ ಜನ್ಮ ನೀಡಿ ಉಳಿದ ಭಾಗ ಸೂರ್ಯನ ಸುತ್ತ ಸುತ್ತುವ ಗ್ರಹವಾಗಿ ಮಾರ್ಪಟ್ಟಿತು. ಈ ಹೊತ್ತಿಗೆ ಅನಿಲದ ಮಹಾಕಾಯ ಬರಿ ಅನಿಲವಾಗಿ ಉಳಿಯಲಿಲ್ಲ. ನಿಧಾನವಾಗಿ ಆರಲು ಪ್ರಾರಂಭಿಸಿತು. ಸೂರ್ಯನ ಸುತ್ತ ಮೋಡ ಗ್ರಹವಾಗಿ ಪರಿವರ್ತಿಸುವ ಮೊದಲೇ ಗಿರಕಿ ಹೊಡೆಯುತ್ತಿತ್ತು. ಅದೇ ಬಲ ಇಂದಿಗೂ ಇದೆ. ಇದರಿಂದಾಗಿಯೇ ಗ್ರಹಗಳು ಈಗಲೂ ಸ್ವತಃ ತಾವೇ ಗಿರಿಕಿ ಹೊಡೆದು ನಕ್ಷತ್ರದ ಸುತ್ತ ಸುತ್ತುತ್ತಿರುವುದು.  ನಮ್ಮ ಭೂಮಿ ಕೂಡ ಹೀಗೆಯೇ ಗ್ರಹವಾಗಿ ಸೂರ್ಯನ ಸುತ್ತ ವರ್ಷಕ್ಕೊಂದು ಭಾರಿ ಪ್ರದಕ್ಷಿಣೆ ಹಾಕುವುದಲ್ಲದೆ ಸ್ವತಃ ತನ್ನ ಅಕ್ಷದ ಮೇಲೆ ೨೪ ಗಂಟೆಗಳಿಗೊಮ್ಮೆ ಪರಿಭ್ರಮಿಸುತ್ತವೆ. ಗ್ರಹರೂಪವಾಗಿ ಪರಿವರ್ತಿಸುವ ಮೊದಲು ಏನಾಯಿತು ಗೊತ್ತೆ? ಈ ಮಹಾ ಮೋಡ ಬರಿ ಅನಿಲವೆಮದು ಭಾವಿಸಬೇಡಿ. ಅದರಲ್ಲಿ ನಮಗೆ ಈವರೆಗೆ ತಿಳಿದಿರುವ ಎಲ್ಲ ಮೂಲಧಾತುಗಳೂ ಅಡಗಿದ್ದವು. ಧಾತುಗಳು ತಮ್ಮ ಭಾರದಿಂದಾಗಿ ಬಿಸಿರೂಪದಲ್ಲಿದ್ದ ಗ್ರಹದ ತಳಪದರವನ್ನು ಸೇರಲು ಪ್ರಾರಂಭಿಸಿದವು. ನಿಕ್ಕಲ್‌ ಕಬ್ಬಿಣದ ಅಂಶಗಳು ಭೂಮಿಯ ಒಳಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ದೊರೆಯುವುದಕ್ಕೆ ಇದೇ ಕಾರಣ. ಸಿಲಿಕದಂತಹ ಹಗುರ ಧಾತುಗಳು ಒಳಗೆ ಇಳಿಯದೆ ಗ್ರಹದ ಮೇಲ್ಭಾಗದಲ್ಲಿದ್ದು ಕವಚದಂತೆ ಹೆಪ್ಪುಗಟ್ಟಿದವು. ಈ ವೇಳೆಗೆ ಗ್ರಹಗಳು ಘನ ರೂಪಕ್ಕೆ ಬಂದವು. ನಮ್ಮ ಭೂಮಿ ಬೆಳೆದುಬಂದದ್ದೇ ಹೀಗೆ.”

ಭೂಮಿಗೆ ತೂರಿಬರುವ ಉಲ್ಕಾಪಿಂಡಗಳೂ ಸಹ ಇಂಥ ನೆಬ್ಯುಲದ ಸಿಡಿತದಿಂದ ಉಂಟಾದ ಆಕಾಶಕಾಯಗಳು ಎಂದಮೇಲೆ ಭೂಮಿಗೂ ಉಲ್ಕಾಪಿಂಡಗಳಿಗೂ ನೆಬ್ಯುಲ ತಾನೆ ಮೂಲ? ಉಲ್ಕಾಪಿಂಡಗಳು ನಿಕ್ಕಲ್‌, ಕಬ್ಬಿಣವನ್ನು ಹೊಂದಿರುವುದೆಂದು ವಿಜ್ಞಾನಿಗಳು ಅಧ್ಯಯನ ಮಾಡಿ ತಿಳಿಸಿದ್ದಾರೆ. ಈ ಆಧಾರದ ಮೇಲೆ ಭೂಮಿಯ ತಿರುಳಿನಲ್ಲಿ ನಿಕ್ಕಲ್, ಕಬ್ಬಿಣ ರಸರೂಪದಲ್ಲಿ ಇದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಭೂಮಿ ಒಂದು ದೊಡ್ಡ ಆಯಸ್ಕಾಂತದಂತೆ ವರ್ತಿಸುವುದಕ್ಕೆ ಕಾರಣ ಇದರ ಅಂತರಾಳದಲ್ಲಿರುವ ಕಬ್ಬಿಣ ಹಾಗೂ ನಿಕ್ಕಲ್‌ ಎನ್ನುತ್ತಾರೆ ವಿಜ್ಞಾನಿಗಳು.

ನಮ್ಮ ಕಣ್ಣಿಗೆ ಕಾಣುತ್ತಿರುವ ಬೆಟ್ಟಗುಡ್ಡ, ಕಣಿವೆ ಕಂದರ ನದಿ ತೊರೆ ಒಂದೊಂದು ಭೂಮಿಯ ಮೇಲೆ ಕಾಣಿಸಿಕೊಳ್ಳಲು ಬೇರೆ ಬೇರೆ ಘಟನೆಗಳೇ ಭೂಮಿ ಹುಟ್ಟಿದ ಮೇಲೆ ನಡೆದಿವೆ. ಪ್ರಕೃತಿಯಲ್ಲಿ ಯಾವುದೂ ಇದ್ದಕ್ಕಿದ್ದಂತೆ ಉದ್ಭವಿಸುವುದಿಲ್ಲ.

ಈಗ ಭೂಮಿಯ ಅಂತರಾಳ ಕಲ್ಪನೆಯ ಕಥೆಯಲ್ಲ. ನಮಗೆ ಭೂಮಿಯ ಆಳದಲ್ಲಿ ಬಗ್ಗಿನೋಡಲು ಸಾಧ್ಯವಿಲ್ಲ ನಿಜ, ಆದರೆ ಭೂಮಿಯ ಅಂತರಾಳದಲ್ಲಿ ಆಗುತ್ತಿರುವ ಬದಲಾವಣೆಗಳು, ಪ್ರಕ್ರಿಯೆಗಳನ್ನು ಭೂಕಂಪನಗಳು, ಜ್ವಾಲಾಮುಖಿಗಳು ಸ್ಪಷ್ಟವಾಗಿ ಭೂಮಿಯ ಮೇಲೆ ತಿಳಸಿಕೊಡುತ್ತವೆ.

ನಮ್ಮಿಂದ ಮೂರು ಲಕ್ಷ ಕಿ.ಮೀ. ದೂರದಲ್ಲಿರುವ ಉಪಗ್ರಹ ಚಂದ್ರನ ಮೇಲೆ ಮಾನವ ಕಾಲಿಡುತ್ತಾನೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಅಮೇರಿಕದ ನೈಲ್‌ ಆರ್ಮ್‌ಸ್ಟ್ರಾಂಗ್‌ ತನ್ನ ತಂಡದೊಡನೆ ಚಂದ್ರಯಾನ ಮಾಡಿ ಚಂದ್ರನ ಮೇಲೆ ಮೊದಲ ಹೆಜ್ಜೆಯನ್ನಿಟ್ಟು  ದೊಡ್ಡ ಸಾಧನೆಯನ್ನೇ ಮಾಡಿದ. ಈಗ ನಾವು ನಿಂತಿರುವ ನೆಲದಡಿ ಏನೇನಿದೆ ಎಂಬ ರಹಸ್ಯ ಒಂದೊಂದೇ ಬೆಳಕಿಗೆ ಬರುತ್ತಿದೆ. ಮನುಷ್ಯ ಮನಸ್ಸು ಮಾಡಿದರೆ ಯಾವುದು ತಾನೆ ಕಷ್ಟ? ತನಗೆ ನಿಲುಕುವ ಎಲ್ಲ ಕೆಲಸವನ್ನೂ ಮಾಡುವಷ್ಟು ಬುದ್ಧಿಯನ್ನು ಪ್ರಕೃತಿ ನೀಡಿದೆ. ಮುಂದೆ ಒಂದು ದಿನ ಭೂಮಿಯ ಅಂತರಾಳವನ್ನು ಇಣುಕಿ ನೋಡಿ ವರದಿ ಮಾಡಬಲ್ಲ ಉಪಕರಣ ಅಥವಾ ತಂತ್ರವನ್ನು ನೀವೇ ತಯಾರು ಮಾಡಿ, ಆರ್ಮ್‌ಸ್ಟ್ರಾಂಗ್‌ ಚಂದ್ರ ಸ್ಪರ್ಶ ಮಾಡಿದಂತೆ, ನೀವೂ ಭೂಮಿಯ ಅಂತರಾಳವನ್ನು ನೋಡುವವರಲ್ಲಿ ಮೊದಲಿಗರಾಗಬಹುದು.[/fusion_builder_column][/fusion_builder_row][/fusion_builder_container]