ರಾಗ ಮಧ್ಯಮಾವತಿ ಏಕತಾಳ
ಲಾಲಿಸಿ ಕೇಳು ಮುರಾರಿ ಮುಕುಂದ | ಲೀಲೆಯಿಂದಿರುಳ್ಕಂಡ ಸ್ವಪ್ನದಾನಂದ || ಲಾಲಿಸಿ || ಪ ||
ದೇವ ನಿಮ್ಮಡಿಗಳ ಕಂಡೆನು ಶಿವ ಮಹಾ | ದೇವನ ಸನ್ನಿಧಿಗೆ ಪೋಗಿರಲಾಗಿ |
ಆ ವಿಭುವಿನಪ್ಪಣೆಯಿಂದ ಸರಸಿಯೊಳು ಗಾಂ | ಡೀವಧನುವ ಪಿಡಿದು ಕಲಿತೆ ವಿದ್ಯೆಯನು ||೧೦೦||
ಈಶನೆಡೆಗೆ ಬರಲೆನಗಾಗ ಮಂತ್ರೋಪ | ದೇಶವಾದುದು ಸರಳ ಬಿಡುತೊಡುವಂತೆ ||
ಶ್ರೀ ಸದಾಶಿವನನುಗ್ರಹದಲಿ ಪೂರ್ಣವಾಗಿ | ಪಾಶುಪತವು ವಶವರ್ತಿಯಾದುದನು || ೧೦೨ ||
ಎನಲಾ ಮಾತಿಗೆ ನಸುನಗುತಲಚ್ಯುತನೆಂದ | ಘನ ಜಯಕಾರ್ಯಕಾಗಿ ಹರನೊಲವಾಯ್ತು |
ನಿನಗಿನ್ನು ಸರಿಯಾರು ವೈರಿ ಸೈಂಧವನನ್ನು | ರಣದಿ ಸಂಹರಿಸುವ ವ್ಯಾಪಾರವೆಂದನು ||೧೦೩||
ಭಾಮಿನಿ
ಅರಸ ಕೇಳ್ ಬಳಿಕಾ ಯುಧಿಷ್ಠಿರ |
ಧರಣಿಪತಿನೇಮದಲಿ ನೆರೆದುದು |
ಕರಿ ತುರಗ ರಥ ಸಹಿತ ಸೈನಿಕವಪರಿಮಿತವಾಗಿ ||
ಮೊರೆವ ನಾನಾ ವಾದ್ಯ ಘೋಷದಿ |
ಧುರಕೆ ಸನ್ನಹವಾಗುತಿರಲಾ |
ಶರದ ಪಂಡಿತ ಬಲಿದನಿತ್ತಲು ಪದ್ಮವ್ಯೂಹವನು || ೧೦೪ ||
ದ್ವಿಪದಿ
ಅಖಿಳ ಗಜ ರಥ ಹಯದ ಸಾಲುಗಳ ನಿಲಿಸಿ |
ವಿಕಟ ಶಕಟವ್ಯೂಹ ದುರ್ಗವನು ಬಲಿಸಿ || ೧೦೫ ||
ಅದರೊತ್ತಿನಲಿ ಮಕರವ್ಯೂಹವನು ಮಾಡಿ |
ಅದಕೆ ದುಶ್ಯಾಸನಾದಿಗಳನೊಡಗೂಡಿ || ೧೦೬ ||
ಬಳಿಕ ಯೋಜನವೈದನುಜತೆಗಳವಡಿಸಿ |
ಹೊಳೆವ ಚಕ್ರವ್ಯೂಹಕೋಟೆಯನು ಬಲಿಸಿ || ೧೦೭ ||
ಕಾಂಭೋಜ ಭೂಪ ಮೊದಲಾದ ರಥಿಕರನು |
ಇಂಬುಗೊಳಿಸಿದನುಪಕಿರೀಟಪತಿಗಳನು || ೧೦೮ |
ತುರಗವೈವತ್ತಾರು ಕೋಟಿಗಳ ನಿಲಿಸಿ |
ಕರಿಘಟೆಗಳೆಂಟು ಲಕ್ಷವನದಕೆ ಬೆರಸಿ || ೧೦೯ ||
ಸುರುಚಿರ ವರೂಥವೈವತ್ತು ಸಾವಿರವ |
ಭರದಿ ಕಾಲಾಳು ನಿಲಿಸಿದನಪರಿಮಿತವ || ೧೧೦ ||
ನಿಯುತಾಯು ಮೊದಲಾದ ನೃಪರ ಕಾಹಿನಲಿ |
ಜಯಕೆ ಹಂಸವ್ಯೂಹ ಬಲಿದನುಗ್ರದಲಿ || ೧೧೧ ||
ಅರ್ಬುದ ಹಯೇಭ ಸುರಥಾವಳಿಯ ಕೂಡಿ |
ಗರ್ಭವ್ಯೂಹವ ಬಲಿದನತಿರಥರಗೂಡಿ || ೧೧೨ ||
ಹತ್ತು ಸಾವಿರ ಮಂಡಲೇಶ್ವರರ ಬರಿಸಿ |
ಮತ್ತದಕೆ ಸಮಸಪ್ತಕರ ಸೈನ್ಯವೆರಸಿ || ೧೧೩ ||
ಚಪಲ ಗಜರಥವೆಂಟುಕೋಟಿ ಬಲದಿಂದ |
ವಿಪುಲ ಪದ್ಮವ್ಯೂಹವೆಸಗೆ ನಲವಿಂದ || ೧೧೪ ||
ಬಿತ್ತರದ ಸೂಚಿವ್ಯೂಹವ ವಿರಚಿಸಿದನು |
ಸುತ್ತವಲಯದೊಳಗತಿರಥರ ನಿಲಿಸಿದನು || ೧೧೫ ||
ವಾರ್ಧಕ
ಸೋಮದತ್ತ ಸುದಂತನು ದಾರನಶ್ವತ್ಥಾಮ |
ಕ್ಷೇಮಧೂರ್ತಿಕ ಶಲ್ಯ ಭೂರಿಶ್ರವಾರ್ಕಸುತ |
ಭೀಮವಿಕ್ರಮ ದೀರ್ಘಬಾಹು ವೃಷಸೇನ ಕೃಪ ಮುಖ್ಯರಾದತಿರಥರನು ||
ಆ ಮಹಾ ಪದ್ಮಸೂಚಿವ್ಯೂಹವಲಯದೊಳ್ |
ತಾ ಮುದದಿ ನಿಲಿಸಿ ತನ್ಮಧ್ಯದೊಳ್ ಕಲಿ ಸಿಂಧು |
ಭೂಮಿಪತಿಯಂ ಕಾಯ್ದುಕೊಂಡಿರ್ದರೇನೆಂಬೆ ಹರನಿಗರಿದೆನೆ ದುರ್ಗವು || ೧೧೬ ||
ಭಾಮಿನಿ
ಭೋರಿಡಲು ಬಹು ವಾದ್ಯತತಿ ಧುರ |
ಧೀರ ದ್ರೋಣನು ಶಕಟವ್ಯೂಹದ |
ದ್ವಾರದಲಿ ಮಿಗೆ ಬಂದು ನಿಂದನು ಬಲವನೀಕ್ಷಿಸುತ ||
ಚಾರಕರನಟ್ಟಿದನು ಯಮನ ಕು |
ಮಾರನಿದ್ದಲ್ಲಿಗೆ ಮಹಾರಣ |
ಶೂರರೆದ್ದರು ಕೇಳುತಾಕ್ಷಣ ಧರ್ಮಜಾದಿಗಳು || ೧೧೭ ||
ರಾಗ ಅಹೇರಿ ಝಂಪೆತಾಳ
ರಣಕೆ ಸನ್ನಹವಾದರೆಲ್ಲ | ಭೀಮ | ತ್ರಿಣಯಸಖ ಪಾರ್ಥ ಮೊದಲಾದ ಮಹರಥರು || ರಣಕೆ || ಪ ||
ಅರಸನೆಡವಂಕದಲಿ ದ್ರುಪದ ಧೃಷ್ಟದ್ಯುಮ್ನ |
ಧರಣಿಪ ವಿರಾಟ ಕುಂತೀಭೋಜ ನಕುಲ ಸಂ |
ಗರವಿಜಯ ಸಾತ್ಯಕಿ ಘಟೋತ್ಕಚ ಮಹಾಯವನ |
ರಿರಲು ಬಲವಂಕದೊಳ್ ನೃಪನ | ಮುಂದ |
ಕುರವಣಿಸಿದರು ಫಲುಗುಣಾಚ್ಯುತಾದಿಗಳು || ರಣಕೆ || ೧೧೮ ||
ಖಂಡೆಯ ಧನುರ್ಭಾಣ ಚಕ್ರ ಶಕ್ತಿಯು ಪಾಶ |
ಭಿಂಡಿವಾಳ ಕೃಪಾಣ ಕುಂತ ತೋಮರಗಳು |
ದ್ದಂಡ ಶಲ್ಲೆಹ ಪರಶು ವಜ್ರ ಮುದ್ಗರಗಳಂ |
ಚಂಡ ಭುಜಬಲರಾಂತರಾಗ | ರಣವ |
ಕಂಡು ನಡೆದರು ಬಹಳ ಪಟುಭಟರು ಬೇಗ || ರಣಕೆ || ೧೧೯ ||
ಭೇರಿ ಪಟಹ ಮೃದಂಗ ರಣಕಹಳೆ ಕೊಂಬು ಡಮಾಮಿ |
ಭೋರಿಡುವ ನಾನಾ ಸುವಾದ್ಯರಭಸದಲಿ ರಣ |
ಶೂರರೇಳ್ವಬ್ಬರಕೆ ನಡುಗಿತಾ ಕುರು ಸೇನೆ |
ಧಾರಿಣಿಪ ನುಡಿದನಚ್ಯುತಗೆ | ಪದವ |
ನಾರಾಧಿಸುತ ನಿಂತು ಪರಮ ಪಾವನಗೆ || ರಣಕೆ || ೧೨೦ ||
ರಾಗ ಭೈರವಿ ಝಂಪೆತಾಳ
ತರಳನಿವ ಮುಂದುಗಾಣದೆ ಪೇಳ್ದ ನುಡಿಯನ್ನು |
ನೆರೆ ನಡೆಸಿ ರಕ್ಷಿಸುವ ಭಾರ ನಿಮಗೈಸೆ || ೧೨೧ ||
ಹಗೆಯ ಕೊಲ್ಲದಡಗ್ನಿ ಹೊಗುವ ಮತ್ತಾ ಪಾರ್ಥ |
ಬಗೆಯೊಳಯ್ವರ ಜೀವಕಧಿಪತಿಯೆ ನೀನು || ೧೨೨ ||
ಎಂದು ಕರುಣಾಳುಗಳ ದೇವನೊಳು ಬೇಡಿಕೊಳ |
ಲಂದು ಧರ್ಮಜಗಭಯವಿತ್ತನಸುರಾರಿ || ೧೨೩ ||
ಭಾಮಿನಿ
ಪೊಡವಿಪತಿ ಕೇಳ್ ಮನದ ಚಿಂತೆಯ |
ಬಿಡು ಜಯದ್ರಥಖೂಳನನು ತಲೆ |
ಗಡಿದು ಕೆಡಹುವ ಕಾಲದೆಸೆಯಲಿ ಷಡುರಥರ ಗೆಲಿದು ||
ಕೊಡಹುವನು ರಿಪುಬಲವನೆನಲಾ |
ಕಡಲಶಯನನ ಪದಕೆ ವಂದಿಸಿ |
ಮೃಡನ ಶರವನು ಜಪಿಸಿದನು ನರನಧಿಕ ಭಕ್ತಿಯಲಿ || ೧೨೪ ||
ರಾಗ ಸಾಂಗತ್ಯ ರೂಪಕತಾಳ
ಮಣಿಮಯ ರಥವನು ಬಲವಂದು ಮೇಲಿರ್ಪ | ಹನುಮಂತನನು ಕಂಡು ನಮಿಸಿ ||
ತ್ರಿಣಯಮಿತ್ರನ ಪಾದರಜವ ಶಿರದೊಳಾಂತು | ಧನುಶರಕೆರಗಿ ಕೈಗೊಂಡ || ೧೨೫ ||
ಕವಚವನುರೆ ತೊಟ್ಟು ಬಾಹುರಕ್ಷೆಯನಾಂತು | ತವಕದಿ ಧರ್ಮಜಗೆರಗಿ ||
ದಿವಿಜವ್ರಜಕೆ ಕಯ್ಯ ಮುಗಿದು ರಥವನೇರಿ | ಬವರಕೆ ನಡೆದನಾ ಪಾರ್ಥ || ೧೨೬ ||
ದೇವದುಂದುಭಿ ಮೊಳಗಿದುವಾಗ ನರನ ಗಾಂ | ಡೀವಧನುವಿನ ಝೇಂಕೃತಿಗೆ ||
ಆ ವೈರಿಮೋಹರ ತಲ್ಲಣಗೊಳುವಂತೆ | ದೇವೇಂದ್ರಸುತ ನಡೆತಂದ || ೧೨೭ ||
ರಾಗ ಶಂಕರಾಭರಣ ಮಟ್ಟೆತಾಳ
ನರನು ಬರುವ ಭರವ ಕಾಣುತರಸನನುಜನು |
ಕೆರಳಿ ಬೇಗ ಧನುವ ಕೊಂಡು ಧುರಕೆ ನಡೆದನು ||
ಸರಳ ಮಳೆಯ ಕರೆವುತಿರಲು ಕಂಡು ಪಾರ್ಥನು |
ಉರಿಯನುಗುಳುತಾಗ ಘೋರ ಶರವ ಕೊಂಡನು || ೧೨೮ ||
ಧುರದೊಳಿವನ ಕೊಂದರಣ್ಣ ಭೀಮಸೇನನ |
ಹಿರಿದು ಭಾಷೆ ಕೆಡುವುದೆನುತಲಿಂದ್ರನಂದನ ||
ಎರಡು ಶರದಿ ತೇರುಚಾಪಗಳನು ಖಂಡಿಸಿ |
ಉರವ ಡೋರುಗಡೆದನಾಗ ಧುರದಿ ಹೊರಳಿಸಿ || ೧೨೯ ||
ಭಾಮಿನಿ
ಅರಸ ಕೇಳ್ ದುಶ್ಯಾಸನನ ಭೀ |
ಕರಿಸಿ ಮುಂದೊತ್ತುತಲೆ ಕಂಡನು |
ಗುರುವನಾ ಘನತರದ ಶಕಟವ್ಯೂಹದ್ವಾರದಲಿ ||
ತೆರಹುಗೊಡನಿವನೆಂದು ನರನ |
ಬ್ಬರಿಸಿ ರಥವನು ನೂಕಿದರೆ ಹೂಂ |
ಕರಿಸಿ ತಡೆವುತ ದ್ರೋಣನಾ ಫಲುಗುಣನಿಗಿಂತೆಂದ || ೧೩೦ ||
ರಾಗ ದೇಶಿ ಅಷ್ಟತಾಳ
ಎಲವೊ ಪಾರ್ಥನೆ ಕೇಳು ನಿನಗೆ ದೈವ |
ಬಲವು ಸಂಘಟಿಸಿದೆಯೆನುತ ಮನ | ದೊಳಗೆ ಗರ್ವಿಸದಿರು ಕಣಾ || ೧೩೧ ||
ನಾಳೆ ಸೈಂಧವನೃಪನ ಸಂಗರದೊಳು |
ಸೀಳುವೆನು ದಿಟವೆನುತ ನುಡಿದು | ಬ್ಬಾಳುತನವನು ತೋರಿಸು || ೧೩೨ ||
ಆಳು ಕೂಡಿದೆ ಚೂಣಿಯೊಳಿದರೊಳೊಂ |
ದಾಳ ಗೆಲಿದರೆ ಗೆಲವು ನಿನ್ನದು | ಸೋಲು ತನಗಿಂದೆನುತಲಿ || ೧೩೩ ||
ಎನುತಲೆಚ್ಚನು ಬಾಣಸಂತತಿಯನ್ನು |
ಘನತರದಿ ಕಿಡಿಯಿಡುತ ಪಾರ್ಥನ | ತನುವಿನಗ್ರದಿ ತಳಿದವು || ೧೩೪ ||
ಗುರುವಿನಸ್ತ್ರಸಮೂಹವ ಸವರುತ್ತ |
ಮರಳಿ ಕಾಣಿಕೆ ಮಾಡಿ ಪೇಳ್ದನು | ಸುರಪಸುತನತಿ ವಿನಯದಿ || ೧೩೫ ||
ಅಂಬಿಗಿಂಬನು ಕೊಡುವೆ ನೀವ್ ಗುರುಗಳು |
ಡೊಂಬಿಯೇತಕೆ ಬರಿದೆ ಸೈಂಧವ | ನೆಂಬ ಖೂಳನ ತೋರಿಸಿ || ೧೩೬ ||
ಮರುಳೆ ಕೇಳೆಮ್ಮ ಗೆಲಿದ ಮೇಲಾತನ |
ಶಿರದ ಗೊಡವೆಯೆನುತ್ತ ಗಾಂಡಿವ | ತಿರುವ ಕಡಿದನು ದ್ರೋಣನು || ೧೩೭ ||
ಭಾಮಿನಿ
ನರನು ಮಂತ್ರಾಸ್ತ್ರಗಳ ತೊಡುತಿರ |
ಲರಿವುತಚ್ಯುತ ಕೆರಳಿದನು ಫಡ |
ಮರುಳೆ ಗುರುವನು ಗೆಲುವರುಂಟೇ ಬೇಡು ಪದಕೆರಗಿ ||
ಧುರವ ಜಯಿಸುವೆಯೆನಲು ಧನು ಶರ |
ವಿರಿಸಿ ರಥದಿಂದಿಳಿದು ಬೇಗದಿ |
ಶಿರವ ಚಾಚುತಲಾ ಧನಂಜಯ ನುಡಿದ ದ್ರೋಣನೊಳು || ೧೩೮ ||
ರಾಗ ಕೇದಾರಗೌಳ ಅಷ್ಟತಾಳ
ತಿಳಿಯಲೆಮ್ಮೈವರ ಜೀವನ ನಿಮ್ಮಿಂದ | ಲುಳಿಯಬೇಕತಿ ದಯದಿ |
ಸಲಹಿಕೊಂಡರು ಲೇಸು ಕೊಂದರು ಲೇಸೆಂದು | ಫಲುಗುಣನರುಹಿದನು || ೧೩೯ ||
ತರಳತನದೊಳಿಪ್ಪಾಗೆಮ್ಮಯ ಬೊಪ್ಪನು | ತೆರಳಿದ ಸುರಪುರಕೆ |
ಹಿರಿದು ಬದುಕಿದೆವು ನಿಮ್ಮಿಂದ ಭೀಷ್ಮರಿಂ | ದರುಹುವುದೇನು ಮತ್ತೆ || ೧೪೦ ||
ಘಾಸಿಯಾದೆವು ಜೂಜಿನಿಂದಲಾರಣ್ಯನಿ | ವಾಸವ ಮಾಡಿದೆವು ||
ಭಾಷೆಯಿದೊಂದನು ಕಾಯಬೇಕೆನುತಲೆ | ವಾಸವಸುತ ಪೇಳ್ದನು || ೧೪೧ ||
ನೀವು ಹೂಣಿಗರಾಗಿ ರಿಪುವ ಕಾಯ್ದಿರ್ದಡೆ | ನಾವು ನಿಲ್ಲೆವು ಧುರಕೆ ||
ಈವುದಭಯವೆನೆ ನಗುತಲಾ ದ್ರೋಣನು | ದೇವೇಂದ್ರಸುತಗೆಂದನು || ೧೪೨ ||
ಕಂದನಶ್ವತ್ಥಾಮ ಹುಸಿ ನೀನೆ ಮೋಹದ | ಕಂದನೆನಗೆ ದಿಟವು |
ಇಂದು ಮುನಿವುದುಂಟೆ ಗೆಲು ಹೋಗು ಭಾಷೆಯು | ಸಂದುದೆನುತ ಬಿಟ್ಟನು || ೧೪೩ ||
ಭಾಮಿನಿ
ಸವ್ಯಸಾಚಿಯು ಗುರುಬಲವನಪ |
ಸವ್ಯದಲಿ ವಂಚಿಸುತ ನಡೆತರ |
ಲವ್ವಳಿಸುತತಿರಥರು ತಡೆದರು ಮಕರವ್ಯೂಹದಲಿ ||
ಅವ್ಯಯನ ಬಲವಿರಲು ಬಲ್ಲನೆ |
ದಿವ್ಯಶರಗೊಂಡಹಿತ ಬಲವನು |
ಹವ್ಯವಾಹನನಂತೆ ಸವರಿದನೇನ ಬಣ್ಣಿಪೆನು || ೧೪೪ ||
ರಾಗ ಕಾಂಭೋಜಿ ಝಂಪೆತಾಳ
ತೇರು ಟೆಕ್ಕೆಯ ರಥದ ಸಾರಥಿಯ ಸವರಿ ರಣ | ಶೂರರ ಧನುರ್ಬಾಣಗಳನು |
ಓರಂತೆ ಕಡಿದು ಕೆಡಹಿದ ವೈರಿಮೋಹರವ | ಸೂರೆಗೊಂಡನು ಧನಂಜಯನು || ೧೪೫ ||
ಇದೆ ನರನ ಸಿಂಹಗರ್ಜನೆ ಬಿಲ್ಲ ಠೇಂಕಾರ | ವಿದೆಪಾರ್ಥ ಬಂದನೆಂದೆನುತ ||
ಕದನಕಲಿಗಳು ಕೈದುಗಳನು ಬಿಸುಟೋಡಿದರು | ರುಧಿರಮಯವಾಯ್ತು ಸಂಗರವು || ೧೪೬ ||
ತುರಗ ಬಳಲಲು ಕಂಡು ಧರೆಗೆ ಬಾಣವ ಹೊಡೆದು | ತ್ವರಿತದಿ ಸರೋವರವ ರಚಿಸಿ ||
ಹರಿಧನಂಜಯರಲ್ಲಿ ಮೆರೆಯಲಿತ್ತಲು ಭೀಮ | ಗೊರೆದನಾ ಧರ್ಮನಂದನನು || ೧೪೭ ||
ಹರಿಯ ಶಂಖಧ್ವನಿಯ ಕಾಣೆನೇನಾದನೋ | ನರನು ಸಂಗರದೊಳಿಂದಿನಲಿ ||
ಪರಿಕಿಸೆನುತಟ್ಟಿದರೆ ಭೀಮಸೇನನ ರಥವ | ನುರವಣಿಸಿ ತಡೆದನಾ ದ್ರೋಣ || ೧೪೮ ||
ರಾಗ ಶಂಕರಾಭರಣ ಮಟ್ಟೆತಾಳ
ಎಲವೊ ಭೀಮ ಗಮನವೆಲ್ಲಿ | ನಿಲು ಸಮರ್ಥನಹುದು ಪಾರ್ಥ |
ನಳುಕಿದಂತೆ ಪೋಗುತಿಹೆಯೊ | ಬಲುಹ ತೋರ್ಪೆಯೊ || ೧೪೯ ||
ನಿಲುಗಡೆಯನು ಸೂಚಿಸೆಂದ | ಡುಲಿದು ದ್ರೋಣಗೆಂದನವನು |
ತಿಳಿಯೆ ಪಾರ್ಥ ಹುಡುಗನೈಸೆ | ಬಳಿಕ ನಿಮ್ಮೊಳೂ || ೧೫೦ ||
ಧುರದಿ ತ್ರಾಹಿಯೆಂಬುದುಂಟೆ | ಗುರುಗಳಿದನು ನೋಡಿರೆನುತ |
ಮುರಿದು ಹೊಕ್ಕನತಿರಥರ ನು | ಗ್ಗನರಿದು ನಿಮಿಷದಿ || ೧೫೧ ||
ಮರುತಸುತನ ಭರವ ಕಂಡು | ಕೆರಳಿ ದ್ರೋಣನಧಿಕ ಮಂತ್ರ |
ಶರವನೆಚ್ಚಡನಿಲಜಾತ | ತರಿವುತೆಂದನು || || ೧೫೨ ||
ಆತನಸ್ತ್ರಚಯಕೆ ಭುಜ ಬ | ಲಾತಿಶಯನು ದಂಡೆಯೊಡ್ಡಿ |
ಸೂತನನ್ನು ಕೆಡಹಿ ಹಯವ | ಘಾತಿಸಿದನು || ೧೫೩ ||
ಗುರುಗಳೆಮಗೆ ನೀವು ನಮ್ಮ | ಗರುಡಿಯೊಳಗೆ ಆಡುವಾಗ |
ಮರೆತ ವಂದನೆಯನು ಕೊಂಬು | ದಿರದೆ ಸಮರದಿ || ೧೫೪ ||
ಶರದಿ ಕಾದಲಿವನ ಕೂಡೆ | ಹರನಿಗರಿದೆನುತ್ತ ಭೀಮ |
ನುರಿಯನುಗುಳುತಾಗ ಗದೆಯ | ತಿರುಹುತೆಂದನು || ೧೫೫ ||
ಆತುಕೊಳ್ಳಿ ವಂದನೆಯನು | ಪ್ರೀತಿಯಿಂದಲೆನುತ ನಿಜವ |
ರೂಥ ಚೂರ್ಣ ಗೆಯ್ದು ಹೊಕ್ಕ | ವಾತ ಸಂಭವ || ೧೫೬ ||
ವಾರ್ಧಕ
ಮರುತಜನ ಗದೆಯ ಹೊಯ್ಲಿಗೆ ನಿಲ್ಲಲಾರದಾ |
ಗುರುವೈದಲಿತ್ತ ಶರಜವ್ಯೂಹ ದುರ್ಗಮಂ |
ಮುರಿದು ಮಕರವ್ಯೂಹಕಡಹಾಯ್ದು ಕೆಡಹಿದಂ ಶತಕೋಟಿಸೈನಿಕವನು ||
ಉರುಬಿದಂ ಮುಂದೆ ಚಕ್ರವ್ಯೂಹದಳವಿಯೊಳ್ |
ತರುಬುವತಿರಥರನಪ್ಪಳಿಸಿದಂ ಭೀಮನ |
ಬ್ಬರಕೆ ನಿಲ್ಲದೆ ಬಹಳ ನುಗ್ಗಾಯ್ತು ಕುರುಸೇನೆಯದ್ಭುತವನೇನೆಂಬೆನು || ೧೫೭ ||
ಝಡಿದು ಹಂಸವ್ಯೂಹಮಂ ಮುರಿದು ಸುಭಟರಂ |
ಕೆಡಹಿದಂ ಮುಂದೆ ಗರ್ಭವ್ಯೂಹ ವಲಯದೊಳ್ |
ತಡೆವ ಕರಿಘಟೆ ರಥ ತುರಂಗ ಕಾಲಾಳ್ಗಳಂ ಕೆಡಹುತೊಂದೇಕ್ಷಣದಲಿ ||
ಅರಸಿ ಮುಂದೊತ್ತಿ ಪದ್ಮವ್ಯೂಹ ಬಾಗಿಲೊಳ್ |
ಮಡುಹಿದಂ ಕೌರವಾನುಜರನುಳಿದವರ ಜವ |
ಗೆಡಿಸಿ ಭೀಮಂ ಮೆರೆದನಹಿತ ಬಲದೊಳ್ ವಿಪಿನದಾವಾಗ್ನಿರೂಪನಾಗಿ || ೧೫೮ ||
ಸೂರೆಗೊಂಡಬುಜ ಸೂಚಿವ್ಯೂಹಮಂ ಮುರಿದು
ವೈರಿ ಸೈಂಧವಪಡೆಯ ಕೆಣಕಿ ಹೊಯ್ದಾಡಿದಂ |
ಕೌರವ ದ್ರೋಣನಶ್ವತ್ಥಾಮ ಮುಖ್ಯ ಷಡುರಥರೊಡನೆ ಸಂಗರದೊಳು |
ವೀರ ಸಾತ್ಯಕಿಯೊಂದು ಕಡೆಯೊಳ್ ಮಹಾರಥರ |
ನೋರಂತೆ ಕೆಡಹಿ ಭೂರಿಶ್ರವಾದಿಗಳ ಸಂ |
ಹಾರವಂ ಮಾಡಿ ಮೆರೆದಂ ಹರಿಯನುಗ್ರಹದಿ ಪಾರ್ಥನಡಹಾಯ್ದ ಮುಂದೆ || ೧೫೯ ||
ಭಾಮಿನಿ
ಪೊಡವಿಪತಿ ಜನಮೇಜಯನೆ ಕೇ |
ಳೊಡೆಯ ಕೃಷ್ಣನು ತನ್ನ ಭಕ್ತನು |
ನುಡಿದ ಭಾಷೆಯ ಸಲಿಸಬೇಕೆಂದಾ ಸುದರ್ಶನವ ||
ಹಿಡಿಯೆ ರವಿ ಮಂಡಲಕೆ ದಿನಮಣಿ |
ನಡೆದನೆಂದಾ ಪಾರ್ಥ ರಥವನು |
ತಡೆಯದಿಳಿದಚ್ಯುತಗೆ ಬಿನ್ನಹ ಮಾಡಿದನು ಬಳಿಕ || ೧೬೦ ||
ರಾಗ ಆನಂದ ಭೈರವಿ ಏಕತಾಳ
ವಾರಿಜನೇತ್ರ ಕೇಳಯ್ಯ | ವೈರಿ ಸೈಂಧವನ ಛಾಯ |
ತೋರದು | ಯುದ್ಧ | ತೀರದು || ೧೬೧ ||
ರವಿಯಸ್ತಮಾನವಾದನು | ತವಕದಿಂದಗ್ನಿಕುಂಡವನು |
ಮಾಡುವೆ | ತನುವೀ | ಡಾಡುವೆ || ೧೬೨ ||
ಇಂತೆಂಬ ಪಾರ್ಥನ ಬಗೆಯ | ಕಂತುಪಿತ ಕಾಣುತೆಳೆನಗೆಯ |
ಸೂಸಿದ | ಮಾಯ | ಬೀಸಿದ || ೧೬೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ರಾಯ ಕೇಳೈ ರಣದಿ ನರ ನಾ | ರಾಯಣರು ಮಾತಾಡುತಿರೆ ಕುರು |
ರಾಯ ಹಿಗ್ಗಿದನುಳಿದ ಸೈಂಧವ | ರಾಯನೆನುತ || ೧೬೪ ||
ಒದರಿದವು ಬಹು ವಾದ್ಯಗಳು ನೆಲ | ನದುರಲಾ ರಿಪುಸೇನೆ ಪಾರ್ಥನ |
ತುದಿಯ ಕಾಲವ ಕಾಂಬೆವೆನುತಲೆ | ಒದಗಿ ನಿಲಲು || ೧೬೫ ||
ನಿಲುಕಿ ನೋಡಿದನೆಲ್ಲಿ ತೋರಾ | ಫಲುಗುಣನನೆನಗೆನುತ ಸೈಂಧವ |
ನುಲಿಯೆ ಹರಿ ಕಂಡಾಗ ಪಾರ್ಥಗೆ | ತಿಳಿಯುತೆಂದ || ೧೬೬ ||
ತಡವ ಮಾಡದಿರೆಲವೊ ಫಲುಗುಣ | ತೊಡು ಮಹಾ ಶರವನ್ನು ವೈರಿಯ |
ಕೆಡಹು ಬೇಗದೊಳೆನಲು ಹರಿಯೊಳು | ನುಡಿದ ನರನು || ೧೬೭ ||
ದೇವ ರವಿಯಸ್ತಮಿಸಿದನು ನೀ | ನಾವುದುಚಿತವ ಕಂಡೆಯೆನೆ ನಿನ |
ಗಾವ ಭಯ ಬೇಡೆಂದನಾ ರಾ | ಜೀವನಾಭ || ೧೬೮ ||
ಗಾಢದಲಿ ಸೈಂಧವನ ಕೊಲು ಮಾ | ತಾಡಿ ಫಲವಿಲ್ಲೆನಲು ಚಾಪಕೆ |
ಪೂಡಿದನು ಪಾಶುಪತಶರವನು | ನೋಡಿ ನರನು || ೧೬೯ ||
ವಾರ್ಧಕ
ತೆಗೆಯೆ ಜಗ ಕಂಪಿಸಿತು ತೀವ್ರದಿಂ ತಾರೆಗಳ |
ನೊಗಳಿಸಿತು ನಭ ಮಹಾಜಲಧಿ ಮೊದಲಾದ ರತು |
ನಗಳನೋಕರಿಸಿತು ಕುಲಾಚಲಗಳೊಲೆದವೆಡ ಬಲದಿ ನಿಮಿಷಾರ್ಧದೊಳಗೆ ||
ದಿಗಿಭತತಿ ನಡನಡುಗೆ ವಾಸುಕಿ ಫಣಾಳಿಗಳ |
ನುಗಿಯೆ ದಳ್ಳುರಿ ಕಾರಿತೇನೆಂಬೆ ಪ್ರಳಯವೆನೆ |
ವಿಗಡ ಪಾರ್ಥಗೆ ಬೆಸಸು ಬೆಸಸೆನ್ನುತಿರ್ದುದಾ ಪಾಶುಪತವಾ ಸಮಯದಿ || ೧೭೦ ||
ರಾಗ ಮಾರವಿ ಏಕತಾಳ
ನರನತಿ ವೇಗದಿ ಪಾಶುಪತವ ಕಿವಿ | ವರೆಗುಗುದರಿಭಟನ |
ಶಿರವನೆಚ್ಚಡೆ ಕೊಂಡೊಯ್ದುದು ಗಗನಾಂ | ತರಕೆ ಕ್ಷಣಾರ್ಧದೊಳು || ೧೭೧ ||
ಹಾರುವ ರಕ್ತದ ಧಾರೆಯೊಳ್ ತೊಯ್ದುದು | ಕೌರವಬಲವಂದು |
ಗಾರುಗೊಂಡುದು ಘನ ಶೌರ್ಯದಿ ಶಕ್ರಕು | ಮಾರನು ಕಂಡೆಂದ || ೧೭೨ ||
ಬೀಳುಬೀಳಭಿಮನ್ಯುವಿನೊಧೆ ನಿನ್ನನು | ಬಾಳಲೀವುದೆಯೆನಲು ||
ಕೇಳುತ ಹರಿ ನುಡಿದನು ತೊಡು ತೊಡು ಪ್ರತಿ | ಕೋಲನು ಶಿರದೆಡೆಗೆ || ೧೭೩ ||
ನೆರೆ ತಂದೆಯ ಶಾಪವು ಇವ ನಾಸ್ಯವ | ಧರೆಗಿಳುಹಿದ ಭಟನ ||
ಶಿರ ಸಾಸಿರ ಹೋಳಾಗಲೆನುತ ತಪ | ಸಿರುವ ದುರಾತುಮನು || ೧೭೪ ||
ವೃದ್ಧಕ್ಷತ್ರಿಯನಾತನ ಕೈಯೊಳು | ಹೊದ್ದುವಂತೆಸಗೆನಲು ||
ರುದ್ರನ ಘೋರ ಶರಕೆ ಬೆಸಸಿದನವ | ನಿದ್ದೆಡೆಗಮಿಸೆನುತ || ೧೭೫ ||
ತುಡುಕಿ ಕೊರಳ ಕೊಂಡೊಯ್ದುದು ನಭದಲಿ | ಗಿಡುಗನು ಹಾಯ್ವಂತೆ |
ಬಿಡುತಿರಲರ್ಘ್ಯವನಾಗಲೆ ಕೈಯಲಿ | ಕೆಡಹಿತು ಶಿರವನ್ನು || ೧೭೬ ||
ಅರ್ಘ್ಯಜಲವು ಕೆಂಪಾದುದ ನೋಡಿ ವೈ | ರಾಗ್ಯದಿ ಧರೆಗಿಡಲು |
ಶೀಘ್ರದಿ ಶಿರ ಸಾಸಿರ ಹೋಳಾಯಿತು | ಉಗ್ರಶಾಪದೊಳವಗೆ || ೧೭೭ ||
ವಾರ್ಧಕ
ಸಂಗರಂ ಮೆರೆವುದಾವುದರಿಂದವನಿಯೊಳ್ ಕು |
ಲಾಂಗನೆಯರಿಂಗಧಿಕ ಭಾಗ್ಯಮೇನೆಂದರಿದು |
ಕಂಗೊಳಿಸಲೆರಡು ಪೆಸರಂ ಬರೆದು ಮೊದಲು ಪಙ್ಕ್ತಯ ಮುನ್ನಿನಕ್ಷರವನು ||
ಸಂಗಡಿಸಲೆರಡನೆಯ ಪಙ್ಕ್ತಯಭಿಧಾನದಿಂ |
ಕಂಗೊಳಿಸುತಿರ್ಪ ನೃಪನಂ ಮುರಿದನೆಂದಮರ |
ಪುಂಗವ ಕದಂಬದೊಳಗಚ್ಯುತನ ಮೈದುನನ ಶೌರ್ಯಮಂ ಪೊಗಳುತಿರಲು || ೧೭೮ ||
ರಾಗ ಸಾಂಗತ್ಯ ರೂಪಕತಾಳ
ರಾಯ ಕೇಳಿನ್ನೇನನೆಂಬೆನು ಶ್ರೀಕೃಷ್ಣ | ರಾಯನ ಮಂತ್ರಶಕ್ತಿಯನು |
ರಾಯ ಕೌರವನಹಂಕಾರವು ಜರಿದುದು | ಪಾಯವನರಿವರಾರೆಂದ || ೧೭೯ ||
ತರಣಿಗೆ ಮರೆಯ ಮಾಡಿದ ಚಕ್ರವನು ಬೇಗ | ಕರೆದಾಗ ಭಾನುಮಂಡಲವ |
ನರನಿಗೆ ತೋರಲಾಗರಿಸೇನೆ ಸೂರ್ಯನ | ಜರೆಯಲೂಣೆಯವು ಬಂದಪುದೆ || ೧೮೦ ||
ದೈವಬಲವೆ ಮಹಾಬಲವಯ್ಯ ಶಿವ ಶಿವ | ದೈವ ಪೌರುಷಕೆಣೆಯುಂಟೆ ||
ದೈವಹೀನರ ಕೈಗೆ ಪರಶು ಪಾಷಾಣವು | ದೈವಾಧೀನದಿ ಜಗವಿಹುದು || ೧೮೧ ||
ಎಂದು ದ್ರೋಣಾದಿನಾಯಕರು ಮಾತಾಡುತ್ತ | ಲಂದು ಪಾಳಯಸಹ ತೆರಳೆ ||
ಬಂದನಾ ಫಲುಗುಣನಚ್ಯುತನೊಡನೆ ಸಾ | ನಂದದಿ ಧರ್ಮಜನೆಡೆಗೆ || ೧೮೨ ||
ಭಾಮಿನಿ
ಜನಪ ಜನಮೇಜಯನೆ ಕೇಳೈ |
ಚಿನುಮಯಾರ್ಜುನರಯ್ತರಲು ಕಂ |
ಡಿನಜಸುತನಿದಿರಾಗಿ ಸತ್ಕಾರದಲಿ ಪೊಡವಟ್ಟು ||
ವನಜನಾಭನ ಪದವನಪ್ಪುತ |
ಘನತರದ ಭಕ್ತಿಯಲಿ ಪೇಳ್ದನು |
ಜನಪರೊಳಗಿನ್ನೇಸು ಧನ್ಯನೊಧರ್ಮನಂದನನು || ೧೮೩ ||
ಜಲಜನಾಭನೆ ನಿನ್ನ ಮಹಿಮೆಯ | ನೆಲೆಯ ಬಲ್ಲವರಾರು ತ್ರಿಜಗದಿ |
ಸಲಹಿಕೊಂಡೈ ನಮ್ಮ ಬಿಡದೀ ಬಂದ ವಿಗ್ರಹದಿ ||
ಹಲವು ಪೇಳುವುದೇನೆನಲು ಹರಿ | ಯಲಘುಭಾಷಾ ಕಲ್ಪವೃಕ್ಷವು |
ಫಲವು ಬಂತೆಂದೆಲ್ಲರುರೆ ಸೇರಿದರು ಬೀಡಿಗೆಯ || ೧೮೪ ||
ರಾಗ ಢವಳಾರ ತ್ರಿವುಡೆತಾಳ
ಸರಸಿಜಲೋಚನ ಭವವಿಮೋಚನ | ಸರಸಿಜಭವಭವನುತಿಪಾತ್ರ |
ವರ ಸಾರ್ವಭೌಮ ಗುಣಧಾಮ | ಗುಣಧಾಮನೆ ಬಾ ಬಾರೆನುತಲಿ |
ತರುಣಿಯರಾರತಿಯ ಬೆಳಗಿರಿ || ಶೋಭಾನೆ || ೧೮೫ ||
ಯಮರಾಜನ ಸುಕುಮಾರಕನಿಗೆ | ಕ್ಷಮೆದಮೆಯಲಿ ಧರ್ಮದಿ ನಡೆವವಗೆ |
ಕುಮತಿವರ್ಜಿತಗೆ ಸುಮಾನಸಗೆ | ಸುಮಾನಸಗಾ ಧರ್ಮರಾಯನಿಗೆ |
ವಿಮಲೆಯರಾರತಿಯ ಬೆಳಗಿರೆ || ಶೋಭಾನೆ || ೧೮೬ ||
ಸುಗದೋರ್ದಂಡಗೆ ಚಂಡಗೆ | ಹಗೆಯರ ಸದೆ ಬಡೆವ ಉದ್ದಂಡಗೆ |
ಝಗಝಗಿಪ ಭೀಮ ಸುಗುಣಗೆ | ಸುಗುಣಗೆ ಶ್ರೀಕೃಷ್ಣಾದ್ವೈತಗೆ |
ಮುಗುದೆಯರಾರತಿಯ ಬೆಳಗಿರೆ || ಶೋಭಾನೆ || ೧೮೭ ||
ಗಾಂಡೀವಧಾರಗೆ ಧೀರಗೆ | ಚಂಡವಿಕ್ರಮನಿರುಪಮಗೆ |
ಭಂಡ ಸೈಂಧವನಗೆಲಿದವಗೆ | ಗೆಲಿದಾ ಧುರಧೀರಗೆ ಪಾರ್ಥಗೆ |
ಕುಂಡಲದಾರತಿಯ ಬೆಳಗಿರೆ || ಶೋಭಾನೆ || ೧೮೮ ||
ಭೂಪನ ಮೋಹದ ಸೋದರನಿಗೆ | ವ್ಯಾಪಿಸಿ ಮಾದ್ರಿಗೆ ಜನಿಸಿದ ಸುಕ |
ಲಾಪ ನಕುಲಾಂಕಗೆ ಸಹದೇವಗೆ | ಸಹದೇವಗೆ ಜಯ ಜಯವೆನುತಲಿ |
ದ್ರೌಪದಿಯರಾರತಿಯ ಬೆಳಗಿರಿ || ಶೋಭಾನೆ || ೧೮೯ ||
ಭಾಮಿನಿ
ಅರಸ ಕೇಳಿಂತುತ್ಸವದಿ ಮುರ |
ಹರನ ಸಭೆಯಲಿ ಪಾಂಡುಪುತ್ರರು |
ಮೆರೆದರವರಿನ್ನೇನು ಧನ್ಯರೊ ಮೂರು ಲೋಕದಲಿ ||
ಗುರುಕುಲೋತ್ತಮ ಮಧ್ವಪತಿ ಶ್ರೀ |
ವರದ ಕೃಷ್ಣನ ಕರುಣಕವಚವ |
ಧರಿಸಿದವರಿಗದೇನು ದೊಡ್ಡಿತೊ ಭೂಪ ಕೇಳೆಂದ || ೧೯೦ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಿಯೆನಖಿಳ ಪುರಾಣಶಾಸ್ತ್ರದ | ನೆರವಿಯನು ಶರಪುರದ ಗಣಪತಿ |
ವರನಿರೂಪದಿ ವರ್ಣಿಸಿದೆನಿದ | ನರಿವ ತೆರದಿ || ೧೯೧ ||
ಕೇಳಿ ತಪ್ಪಿರೆ ತಿದ್ದುವುದು ಗುಣ | ಶೀಲ ಕವಿಗಳು ಜಗದಿ ಸರ್ವ ಜ |
ನಾಳಿ ಕೇಳಿಯೆ ಮೆರೆಸುವುದು ಹರಿ | ಲೀಲೆಗಳನು || ೧೯೨ ||
ಇದು ಸಮಸ್ತಾಘೌಘಪರಿಹರ | ವಿದುಕಣಾ ಇಹಪರಕೆ ಶುಭಕರ |
ವಿದು ಮುಕುಂದನ ಪರಮಲೀಲಾ | ಸುಧೆಯು ಜಗಕೆ || ೧೯೩ ||
ಮಧ್ವ ಮುನಿಯ ವರಪ್ರಸಾದದ | ಸಿದ್ಧಿಯಲಿ ವಿರಚಿಸಿಹೆ ಕೃತಿಯನು |
ಹೊದ್ದದಿದರೊಳು ಕಲ್ಮಷವು ಹರಿ | ಸಿದ್ಧಮಂತ್ರ || ೧೯೪ ||
ಭಕ್ತಿಯಲಿ ಬರೆದೋದಿ ಕೇಳ್ವರ | ಭಕ್ತಜನರ ಮನೋರಥಂಗಳ |
ಶಕ್ತನಹ ಶರಪುರದ ಗಣಪತಿ | ಯಿತ್ತು ಪೊರೆವ || ೧೯೫ ||
ರಾಗ ಮುಖಾರಿ ಝಂಪೆತಾಳ
ಜಯ ಮಂಗಳಂ | ನಿತ್ಯ | ಶುಭಮಂಗಳಂ || ಪಲ್ಲವಿ ||
ಮಂಗಳಂ ಮತಿಭಾಗ್ಯದಾಯಕ ವಿನಾಯಕಗೆ |
ಮಂಗಳಂ ಸಿದ್ಧಚಾರಣಸೇವ್ಯಗೆ ||
ಮಂಗಳಂ ಶರಪುರದ ಶ್ರೀಮಹಾಗಣಪತಿಗೆ |
ಮಂಗಳಂ ಶರಭಲಿಂಗೇಶ್ವರನಿಗೆ || ಜಯ ಮಂಗಳಂ || ೧೯೬ ||
ಉದಧಿಲಂಘಿಸಿದವಗೆ ಮಹವಜ್ರಕಾಯನಿಗೆ |
ಸದಮಲದಿ ಜನಕಜೆಗೆ ವಂದಿಸಿದಗೆ |
ಅಧಮ ರಾವಣನ ಲಂಕೆಯ ಪಿತನ ಸಖಗಿತ್ತ |
ಕದನಕಲಿಗಳ ದೇವ ಹನುಮಂತಗೆ || ಜಯ ಮಂಗಳಂ || ೧೯೭ ||
ಶರದಿಂದುಭಾಸಿನಿಗೆ ಶರಣಜನಪೋಷಿಣಿಗೆ |
ಮಿರುಪ ಭೃಂಗಾಳಕಿಗೆ ಗುಣಪೂರ್ಣೆಗೆ |
ಸರಸಿಜಾಸನನ ಪಟ್ಟದರಾಣಿ ಶಾರದೆಗೆ
ಶರದವಾಹನ ಮುಖ್ಯ ಸುರನಮಿತೆಗೆ || ಜಯ ಮಂಗಳಂ || ೧೯೮ ||
ಪಶ್ಚಿಮಾಂಬುಧಿಯ ತಡಿಯಲಿ ಬಂದು ಮಾರುತಿಗೆ |
ನಿಶ್ಚಯವ ತೋರಿ ಪೂಜೆಯ ಕೊಂಬಗೆ |
ಆಶ್ಚರ್ಯಮಹಿಮನಿಗೆ ಆನಂದಭರಿತನಿಗೆ |
ಸಚ್ಚರಿತ ಮಧ್ವಪತಿ ಶ್ರೀಕೃಷ್ಣಗೆ || ಜಯ ಮಂಗಳಂ | ನಿತ್ಯ | ಶುಭಮಂಗಳಂ || ೧೯೯ ||
ಭಾಮಿನಿ
ಶ್ರೀಗಜಾನನ ಸಕಲ ಯೋಗ ಸು |
ಭಾಗ ಫಲದಾಯಕ ವಿನಾಯಕ |
ನಾಗವಾಹನ ಮುಖ್ಯ ಸುರತತಿವಂದ್ಯ ಗುಣಸಾಂದ್ರ ||
ಭಾಗವತ ಪರಿಪಾಲ ಬಹು ನಿಗ |
ಮಾಗಮಾರ್ಚಿತ ನೀನೊಲಿದು ದಯ |
ವಾಗೆನಗೆ ಶರಪುರದ ಗಣನಾಯಕ ನಿರಾಕಾರ || ೨೦೦ ||
ಯಕ್ಷಗಾನ ಸೈಂಧವನ ವಧೆ ಮುಗಿದುದು
Leave A Comment