ರಾಗ ಸುರುಟಿ ಏಕತಾಳ
ಆಡಿದರ್ನಾಟ್ಯವನೂ | ಶ್ರುತಿಗತಿ | ಗೂಡುತ ಗಾನವನೂ || ಪಲ್ಲವಿ ||
ಆಡುತ ಪಾಡುತ ನೋಡುತ ನಲಿಯುತ | ಹಾಡಿದರಾಮಧುಮಾಸದ ವರ್ಣನೆ || ಅ ಪ
ಮಂದಮಾರುತವನದೀ | ಬೀಸುವಾ | ನಂದದ ಸಂಭ್ರಮದೀ |
ಚಂದದ ಚಿಗುರುಗ | ಳಿಂದಕೆಂಪೇರಿದ | ಸುಂದರ ಸುಮನಸ | ವೃಂದವು ಮೆರೆವುದು ||೮೩||
ಘಮಘಮಿಸುತ ವನದೀ | ಜಾಜಿಯ | ಸುಮರಸಸೇವನದೀ |
ಭ್ರಮರಂಗಳು ಝೇಂಕರಿಪಾನಂದವ | ಕಮಲಾನನೆಯರು ಪೊಗಳುತ ವಿಭವದಿ ||೮೪||
ಕಲಹಂಸಗಳ್ಶುಕವೂ | ಹಾಡುವ | ಕಿಲಕಿಲ ಧ್ವನಿಕರವೂ |
ಮಲಯಮಾರುತರಥವೇರುತಸಂಗಡ | ಗಿಳಿದೇರನ ಕರೆತಂದಿಹನೆನುತಲಿ ||೮೫||
ಇಂತೀಪರಿಯೊಳಗೇ | ವರ್ಣಿಸಿ | ಸಂತಸಕೊಡೆಸಭೆಗೇ |
ಮಂತ್ರವಿಮೋಹಿತ | ನಂತೆಯೆ ಭೂಮೀ | ಕಾಂತನು ಮನದಾನಂದದೊಳಿರುತಿರೆ ||೮೬||
ವಾರ್ಧಕ
ಇರುತಿರ್ದನಿತ್ತ ಘಂಟಾಕಂಠ ಋಷಿಯೆಂದು |
ಪರಮದ್ವೈತಾರಣ್ಯದೊಳಗೆ ತಪಗೈಯ್ಯುತಂ |
ತರಣಿಗರ್ಘ್ಯವನೀಯಲೆಂದು ಸುರಗಂಗೆಗಂ ವರಶಿಷ್ಯನನುದಿನದೊಳೂ ||
ಕರೆದೊಂದು ಅಂಜನವನಕ್ಷಿಗಿಡುತವನಕಂ |
ಧರದಲ್ಲಿ ಹಾರವೊಂದನು ತೊಡಿಸಿ ಪರಸಲ್ಕೆ |
ತರುತಲಿರ್ದನು ಜಲವನರುಣನುದಯಕೆಮುನ್ನ ಚರಿಸಿ ಮನವೇಗದಿಂದ ||೮೭||
ರಾಗ ಕಾಂಭೋಜಿ ಝಂಪೆತಾಳ
ನಿತ್ಯನಂದದಿ ತಾಪಸೋತ್ತಮನು ಉಲ್ಕಲಗೆ | ಇತ್ತ ಅಂಜನ ಹಾರಧರಿಸೀ ||
ಭಕ್ತಿಯಿಂ ನಭದೊಳಗೆ ಬರುತಿರಲು ಸಂಗೀತ | ನೃತ್ಯಧ್ವನಿ ಕಿವಿಗೆ ಕೇಳಿಸಿತೂ ||೮೮||
ಮನವತ್ತ ಸೆಳೆಯಲ್ಕೆ | ತನುಸಹಿತ ಉಲ್ಕಲನು | ಜನಪನೆಡೆಗತಿವೇಗದಿಂದ ||
ಮಿನುಗುತಿಹ ಕಾಂಚನದ ಗೋಪುರ ವರಾಂಗಣವ | ಘನತೆಯಿಂದೊಳಪೊಕ್ಕನಾಗ ||೮೯||
ಬಂದಲ್ಲಿ ಅರಮನೆಯ ಬಂಧುರದ ಚಿತ್ರವನು | ಮುಂದಿರ್ಪ ವಜ್ರಸ್ತಂಭವನೂ |
ಇಂದ್ರ ಶಿಖಿವರುಣ ಅಳಕಾಧಿಪನ ಗೃಹದಂತೆ | ಸುಂದರವಾಗಿಹುದ ನೋಡಿ ||೯೦||
ವಾರ್ಧಕ
ಆ ಋಷಿಯ ಶಿಷ್ಯ ನೇತ್ರಾಂಜನದ ಬಲದಿಂದ |
ದ್ವಾರವೆಲ್ಲವ ದಾಂಟಲಾರು ತಡೆಗಟ್ಟದಿರೆ |
ಸಾರಿ ನವರತ್ನದಿಂ ಕೆತ್ತಿರುವ ಕಂಬತೊಲೆಬೋದಿಗೆಯ ರಚನೆಗಳಲೀ ||
ತಾರೆಗಳ ಮಿಗಿಲೆನಿಪ ಬೊಂಬಾಳದೀವಿಗೆಯೊ |
ಳ್ತೋರುತಿಹ ದಿವ್ಯಶಯ್ಯಾಗಾರಕಡಿಯಿಡಲ್ |
ಧಾರುಣಿಪ ತಾ ನಿತ್ಯ ಪವಡಿಸುವ ವರ ವಜ್ರಪರಿಯಂಕಮಂ ಕಂಡನೂ ||೯೧||
ಭಾಮಿನಿ
ಭರದೊಳಾ ಋಷಿಶಿಷ್ಯ ತಲ್ಪದಿ |
ಹರುಷದಿಂ ಮಂಡಿಸಲಿಕಾ ದಶ |
ಶಿರನನುಜ ಮಡಿದಂದಿನಿಂದಲಿ ದುಃಖಿಸುತ್ತಿರುವಾ ||
ತರುಣಿ ನಿದ್ರಾಂಗನೆಯು ಬೀರಲು |
ಪರಿಪರಿಯ ಗಾಢಾನುರಾಗವ |
ಪರವಶದಿ ಪವಡಿಸಲು ನಿದ್ರಾಂಗನೆಯ ಕೇಳಿಯಲೀ ||೯೨||
ರಾಗ ಭೈರವಿ ರೂಪಕತಾಳ
ಬಂದನಾಗ ವೀರಾವತೀಶ ಬೇಗ || ಪಲ್ಲವಿ ||
ಬಂದನಾನರ್ತಕರಿಗುಡುಗೊರೆ | ತಂದು ನೀಡಲು ಹರುಷಗೊಳೆ ಸಚಿ |
ವೇಂದ್ರಸಭ್ಯರನ್ನೆಲ್ಲ ಕಳುಹುತ | ಮಂದಿರದೊಳೈದುತ್ತ ಸಂಧ್ಯಾ |
ವಂದನಾರೋಗಣೆಯ ಗೈದಾ | ನಂದದಿಂ ತಾಂಬೂಲ ಸವಿಯುತ |
ಹೊಂದೆ ಶಯನಾಲಯಕೆ ನಿದ್ರೆಯ | ದಂದುಗಕೆ ತರಹರಿಸಿ ಭೂಪನು || ಬಂದನಾಗ ||೯೩||
ರಾಗ ಕೇತಾರಗೌಳ ಅಷ್ಟತಾಳ
ಜನಪಾಲ ತನ್ನಯ ಶಯನದೊಳೊರಗಿದ | ಮುನಿಶಿಷ್ಯನನು ಕಾಣುತ್ತಾ ||
ಘನತರ ಚೋದ್ಯವ ತಾಳುತ್ತಲೆಂದನು | ಅನುಮಾನಗೊಳ್ಳುತಾಗ ||೯೪||
ಹರನುರಿಗಣ್ಣಿನ ಉರುಬೆಯ ಸಹಿಸದೆ | ಶಿರದೊಳಗಿಹ ಶಶಿಯೂ ||
ವರಶೈತ್ಯತಲ್ಪದಿ ಪವಡಿಸಿ ಶ್ರಮಪರಿ | ಹರಿಸಲೋಸುಗ ಬಂದನೋ ||೯೫||
ಸುರಪನು ದುರುಳರ ಬಾಧೆಗೆ ಬೆದರುತ್ತ | ಧರಣಿಗೆ ತಾನಿಳಿದೂ ||
ಅರಿಗಳಿಲ್ಲಿವಗೆಂದು ಮರೆಯನು ಸಾರ್ದನೊ | ಉರುತರ ಕ್ಲೇಶದಿಂದ ||೯೬||
ಶ್ವಾಸವ ನೋಡಲಾ ಶೇಷನು ಧನದಭಿ | ಲಾಷೆಗೆ ಒಳಗಾಗುತ್ತಾ |
ಈ ಸುಖತಲ್ಪದಿ ಪವಡಿಸಿದರೆ ವಿಷ | ಭಾಸವ ನಾಕಾಣೆನೂ ||೯೭||
ಹದನವಿದೇನೆಂದು ತಿಳಿವೆ ತಾನೆನುತಲಿ | ವಿಧವಿಧದಿಂದಾತನಾ |
ಚದುರಿಸಲಾಕ್ಷಣ ಕುಳಿತನು ಋಷಿಶಿಷ್ಯ | ಅದುಭುತವಾಯ್ತೆನುತ ||೯೮||
ಆರು ನೀನೆನ್ನಯ ತಲ್ಪದೊಳೊರಗಲು | ವಾರಣವಾಹನನೂ |
ಸೇರಲು ಪಥವಿಲ್ಲದಂತೆ ಕಾದಿರುವಂಥ | ಶೂರರ ವಂಚಿಸುತಾ ||೯೯||
ರಾಗ ಸಾಂಗತ್ಯ ರೂಪಕತಾಳ
ಪೊಡವಿಪಕೇಳ್ಕಡು ಬಡವನು ನಾನೆನ್ನ | ದೃಢಗುರು ಘಂಟಾಕಂಠಮರೂ |
ಜಡಜಮಿತ್ರನಿಗರ್ಘ್ಯ ಕೊಡೆಗಂಗೆ ತಹುದೆಂದು | ಬಿಡದಟ್ಟುವರು ದಿನದಿನದಿ ||೧೦೦||
ಮುನಿದತ್ತವಾದ ದೃಶ್ಯಾಂಜನ ಹಾರವ | ತನುವಿಗೆ ಧರಿಸುತಾಗಸದಿ |
ಜನರಿಗೆ ತೋರದಂತೈದಿ ಗಂಗೆಯನು ನಾ | ದಿನಕೊಂದು ಬಾರಿ ತಹೆನನಲೂ ||೧೦೧||
ಎಂದಿನಂತಿಂದು ಬರಲಂದುಗೆ ಗೆಜ್ಜೆಗ | ಳ್ಮಂದವಾಗಿರುವ ಸುಸ್ವರವೂ ||
ಸಂಧಿಸಿತೈಯನ್ನ ಶೃತಿಗಳು ಮನ ಸೋತು | ಬಂದುದಿಲ್ಲಿಗೆ ತನುಸಹಿತಾ ||೧೦೨||
ನೋಡುತೈದಲು ತಡೆ ಮಾಡದಿಹುದರಿಂದ | ನೋಡಿದೆ ನೀ ತಲ್ಪವನ್ನು |
ಮಾಡಬಾರದ ಕೃತ್ಯ ಗೈದೆನಾ ಕರುಣಿ ಕಾ | ಪಾಡಬೇಕೆನುತೆರಗಿದನು ||೧೦೩||
ಭಾಮಿನಿ
ಕೇಳುತಾನುಡಿ ನೃಪನು ನುಡಿದನು |
ತಾಳು ತಾಳೈ ಅಂಜದಿರು ಸರಿ |
ವೇಳೆಯಲಿ ಜಾಹ್ನವಿಯನೊಪ್ಪಿಸದಿರಲು ಮುನಿವರನೂ ||
ತಾಳಿ ಕೋಪವನೀವ ಶಾಪವ |
ಪಾಲಿಸುವರಾರಿಹರು ನಿನ್ನನು |
ಲೀಲೆಯಲಿ ನೀಪಡೆದು ಗುರುವಿನ ಸೇವೆಮಾಡೆಂದಾ ||೧೦೪||
ರಾಗ ಮಾರವಿ ಅಷ್ಟತಾಳ
ಪೋಪೆನೈ ಭೂಪ ಪೋಪೆನೈ || ಪಲ್ಲವಿ ||
ಪೋಪೆನೈ ಭೂಮಿನೀನೆನ್ನೊಳು ಹಿತದೀ |
ಈಪರಿಯರುಹಿದ ನುಡಿ ಸತ್ಯ ಭರದೀ || ಅ ಪ ||
ಅರಸನು ಪವಡಿಸೆ ಮುನಿಶಿಷ್ಯನಾಗ |
ಸುರಗಂಗೆ ತಡಿಗಾಗಿ ತೆರಳಿದ ಬೇಗ |
ಶರಧಿಯೊಳ್ಮಜ್ಜನಗೈದು ಶ್ರದ್ಧೆಯೊಳು |
ಪರಮ ಪಾವನೆಯನ್ನು ತುಂಬಿ ಕುಂಭದೊಳು ||೧೦೫||
ಕಂದ
ಇಂತೀಪರಿಯೊಳಗುಲ್ಕಲ |
ತಾಂ ತವಕದಿ ತನ್ನ ಶಿರದೊಳಾಜಲಘಟಮಂ |
ಆಂತೈದಲ್ ಋಷಿಯೆಡೆಗಂ |
ಅಂತಕಪಿತನೇರಿದನುದಯಾಚಲ ಶಿರವಂ ||೧೦೬||
ರಾಗ ಕೇತಾರಗೌಳ ಝಂಪೆತಾಳ
ಅರುಣನುದಯಾತ್ಪೂರ್ವದೀ | ಜಲವತಂ | ದಿರಿಸದಿರೆ ಮುನಿತಾಪದೀ ||
ತರಣಿಗರ್ಘ್ಯದ ಕಾಲವೂ | ಮೀರಿತೆಂ | ದುರೆ ನೊಂದು ಬರೆಕೋಪವೂ ||೧೦೭||
ಅನಿತರೊಳು ಶಿಷ್ಯನೈದಿ | ಜಲವಿರಿಸಿ | ಮುನಿಗೆರಗೆ ತಾ ವಿನಯದೀ ||
ದಿನಪಗರ್ಘ್ಯವನೀಯುತಾ | ಋಷಿವರ್ಯ | ಘನ ಶಿಷ್ಯನನು ನುಡಿಸುತಾ ||೧೦೮||
ಎಲವೊ ಮೂಢನೆ ಜಲವನೂ | ಕಾಲಗಳ | ಕಳೆದು ತಂದಾ ಪರಿಯನೂ ||
ತಿಳುಹು ನೀನೀಗ ಜವದೀ | ಪೇಳದಿರೆ | ಸಲೆ ಶಾಪವೀವೆ ಕ್ಷಣದೀ ||೧೦೯||
ರಾಗ ಸುರುಟಿ ಏಕತಾಳ
ಲಾಲಿಸು ನುಡಿಗಳನೇ | ಎನ್ನನ್ನು | ಪಾಲಿಸೊ ಗುಣಯುತನೇ || ಪಲ್ಲವಿ ||
ಲೀಲೆಯೊಳಭ್ರದಿ ತೆರಳಲು ನಿಶಿಯೊಳು |
ಕೇಳಿಸಿತೈ ನಟಿಯರ ಸಂಗೀತವು ||೧೧೦||
ಮನ ಪೋಗಿಹ ಎಡೆಗೇ | ಯೆನ್ನಯ | ತನುವಾ ಅರಮನೆಗೇ |
ಕ್ಷಣದೊಳಗಿಳಿಯಲು | ಜನಪನ ತಲ್ಪವು |
ಮಿನುಗುತಲಿರೆ ಕಂಡೆನು ನಾನದರಲಿ ||೧೧೧||
ಹರುಷದಿ ಪವಡಿಸಲೂ | ನಿದ್ರೆಯು | ಸರಸದಿ ತಾ ಬರಲೂ |
ಧರಣಿಪ ಬೃಹದ್ರಥ ಬಂದೆನ್ನನು ಬಹು |
ಪರಿಯಿಂದೆಬ್ಬಿಸಿ ಮನ್ನಿಸಿ ಕಳುಹಿದ ||೧೧೨||
ನುಡಿಯಲಿಕಸದಳವೂ | ಸುರರಿಗೆ | ಒಡೆಯನ ಸಂಪದವೂ ||
ಪೊಡವಿಪತಿಯ ವಶವಾದುದೊ ನೋಡಲು |
ಕಡಲಜೆ ಕಾಲ್ಗಳು ಮುರಿದು ಬಿದ್ದಿಹಳೋ ||೧೧೩||
ಇನಿತೆಂದುದ ಕೇಳಿ | ಹರುಷವ | ಮನದೊಳು ಮುನಿ ತಾಳಿ |
ಜನಪನ ರಾಜ್ಯವ ನೋಡಬೇಕೆನುತಲಿ |
ಘನಹಾರವನಳವಡಿಸಿದ ಗಳದಲಿ ||೧೧೪||
ಭಾಮಿನಿ
ಅಂದು ಮುನಿಪನು ಹರುಷದೊಳು ಧರ |
ಣೀಂದ್ರನಲ್ಲಿಗೆ ಪೋಪ ತ್ವರಿತದಿ |
ಚಂದದಿಂದಾಕಾಶ ಪಥದೊಳು ಪೋಗಿ ಅರಮನೆಯ ||
ಮುಂದೆ ನಿಲೆ ಸೌವೀರಪತಿ ತಾ |
ನಂದವಾಗಿಹ ಸಭೆಯೊಳೊಪ್ಪಿರೆ |
ಬಂದು ತಿಳುಹಿದ ಚಾರ ಋಷಿಯಾಗಮನ ನೃಪತಿಯೊಳು ||೧೧೫||
ರಾಗ ಸಾಂಗತ್ಯ ರೂಪಕತಾಳ
ವಸುಧೆ ಪಾಲಕನಾಗ | ಋಷಿಯನ್ನು ಕರೆತಂದು | ಪೊಸತಾದಾಸನವನೇರಿಸುತ |
ಎಸೆವ ಪಾದಗಳ ಸನ್ನುತಿ ಗೈದು ಪೂಜಿಸಿ | ಅಸಮಾನ ಯತಿಗೆಂದನು ||೧೧೬||
ವರ ಯತಿಗಳೆ ನಿಮ್ಮ | ದರುಶನದಿಂದಲಿ | ಹರಿವುದೀ ನರನ ಕಿಲ್ಬಿಷವೂ ||
ಬರಲೂ ಕಾರಣವೆನ್ನೊ | ಳಿರುತಿರ್ಪ ಕಾರ್ಯವ | ಅರುಹಬೇಕೆನುತ ವಂದಿಸಲೂ ||೧೧೭||
ವರ ಚಕ್ರವರ್ತಿ ನೀ | ನಿರುವ ವೈಭವನೋಳ್ಪಾ | ತುರದಿ ಧಾವಿಸಿ ಬಂದೆನೀಗಾ ||
ಹರುಷವೆ ನಿನ್ನಯ ಸಚಿವರ್ಗೆ ಪ್ರಜೆಗಳ್ಗೆ | ಪರಿವಾರಗಳಿಗೆ ಪೇಳ್ಮುದದಿ ||೧೧೮||
ರಾಗ ಕಾಪಿ ಅಷ್ಟತಾಳ
ಕೇಳೈಯ್ಯ ಮುನಿಪ ವಿಖ್ಯಾತ | ರಾಷ್ಟ್ರ | ದೇಳಿಗೆಯಿರವಿನ ವೃತ್ತಾಂತ ||
ಶ್ರೀಲಕ್ಷ್ಮಿವರನ ಕಟಾಕ್ಷದಿ ಸರ್ವರು | ಲೀಲೆಯಿಂದಿರುತಿರ್ಪರೀಗೆನ್ನ ದೇಶದಿ ||೧೧೯||
ಮಂತ್ರಿಗಳುಭಯರಾಗಿಹರೂ | ಕಾರ್ಯ | ತಂತ್ರಿಗಳೆನಿಸಿ ಕೊಂಡಿಹರೂ ||
ಸಂತಸದಿಂ ನಿಮ್ಮ ಕರುಣಾಕಟಾಕ್ಷದಿ | ಇಂತು ಸದ್ಧರ್ಮದಿ ರಾಜ್ಯವಾಳುವೆನೆಂದು ||೧೨೦||
ಎನಲು ಕೇಳುತ ಮುನಿವರ್ಯನೂ | ತನ್ನ | ಮನದೊಳು ಯೋಚಿಸುತೆಂದನು |
ಜನಪಗೆ ತನ್ನೊಳಗಿರುತೀರ್ಪ ಕರವಾಲ | ಘನ ಮುಕ್ತಹಾರವ ನೀವೆ ತಾನೆನುತಲಿ ||೧೨೧||
ಭಾಮಿನಿ
ಅರಸ ನಿನಗೊಲಿದೀವೆ ಕೊಳ್ಳೈ |
ಹರನ ಕರವಾಲವನು ಕೇಳೈ |
ಧರಿಸು ಈ ಮುಕ್ತಾಕಲಾಪವಗಳದಿ ಸಂತಸದಿ ||
ಧರೆಯೊಳಿರುತಿಹ ದುಷ್ಟರನು ನೀ |
ತರಿದು ಕೀರ್ತಿಯ ಗಳಿಸಿ ಅಂತ್ಯದಿ |
ಹರಿಯ ಸಾಯುಜ್ಯವನೆ ಪಡೆಯೆನುತಿತ್ತ ಪರಸುತಲೀ ||೧೨೨||
ಧರಣಿಪಾಲಕ ಕೇಳು ಎನಗಿದ |
ಹರನು ಇತ್ತಿಹ ಕಂಠಮಾಲೆಯ |
ಧರಿಸಿದರೆ ಪೋಗುವುದು ತನುಮನ ಧಾವಿಸಿದ ಎಡೆಗೆ ||
ಸುರನರೋರಗ ದಿತಿಜ ಮೊದಲಾ |
ಗಿರುವರೊಳಗಪಜಯಗಳೆಂದಿಗು |
ಬರದು ಕರವಾಲವನು ಧರಿಸಿದ ಮಾನವೇಶ್ವರಗೇ ||೧೨೩||
ರಾಗ ಕೇತಾರಗೌಳ ಝಂಪೆತಾಳ
ಮುನಿಯಿತ್ತವಸ್ತುಗಳಿಗೇ | ತನುವುಬ್ಬಿ | ಜನಪ ಸಂತೋಷದೊಳಗೇ |
ವಿನಯದಿಂದಪಾಲ್ಹಣ್ಣನೂ | ತರಿಸಿತ್ತು | ಮಣಿದು ಮಮತೆಯೊಳ್ನಿಂದನೂ ||೧೨೪||
ಹರುಷದಿಂ ಕೈಕೊಳ್ಳುತಾ | ಋಷಿವರ್ಯ | ಧರಣಿಪಾಲನ ಪರಸುತಾ ||
ತೆರಳಿದನು ಸಂತಸದಲೀ | ವನಕಾಗ | ಹರಿಯ ನುತಿಸುತ ಭರದಲಿ ||೧೨೫||
ಧರೆಯೊಳಗೆ ಬೃಹದ್ರಥನನೂ | ಪೋಲುತಿಹ | ಧೊರೆಯಿಲ್ಲವೆಂಬುದನ್ನೂ ||
ಸುರನರೋರಗರರಿಯಲೂ | ಮುಂಗಥೆಯ | ನೊರೆವೆ ಕೇಳ್ನಿಮಗೀಗಲೂ ||೧೨೬||
ರಾಗ ಕೇತಾರಗೌಳ ಅಷ್ಟತಾಳ
ಇತ್ತ ವೀರಾವತಿಯೊಳು ವೀರಸೇನನು | ಪೃಥ್ವೀಶಕುವಲಯನೂ |
ನಿತ್ಯದೊಳುದಯಾಸ್ತಮಯ ಪರಿಯೊಳು ಕರ | ವೆತ್ತಿ ಕಾದುತ್ತಿರಲೂ ||೧೨೭||
ವಸುಧೆಪಾಲಕ ಬೃಹದ್ರಥನು ಒಡ್ಡೋಲಗ | ವೆಸಗಿರೆ ಬಂದೆರಗೀ |
ದೆಸೆದೆಸೆ ಗೈದಿರ್ವ ಪ್ರತಿಹಾರಿನುಡಿದನು | ಪೊಸವಾರ್ತೆ ಇಹುದೆನ್ನುತ್ತ ||೧೨೮||
ಒಡೆಯನೆ ಲಾಲಿಸು ನುಡಿಗಳ ಕಿವಿಗೊಟ್ಟು | ಪೊಡವಿಯ ತಿರುಗುತಲೀ |
ಒಡನೆ ಕಾಶ್ಮೀರ ಕಾಂಭೋಜದ ವಾರ್ತೆಯ | ಸಡಗರದಿಂ ತಿಳಿದೂ ||೧೨೯||
ಸಾರಿ ವೀರಾವತಿಯೊಳಗಲ್ಲಿ ಗೈದ ಶೃಂ | ಗಾರವನೀಕ್ಷಿಸುತಾ ||
ಊರೊಳಲ್ಲಲ್ಲಿ ವಿಚಾರಿಸೆ ಪ್ರಜೆಗಳ್ಗೆ | ಭೂರಿಕಷ್ಟಗಳು ಕೇಳೈ ||೧೩೦||
ನಿಶಿಯೊಳು ಬ್ರಹ್ಮರಾಕ್ಷಸಿ ಬಂದು ತಿನುವಳಾ | ವಸುಧೆಯೊಳೋರ್ವರನೂ ||
ಅಸಮಸಾಹಸಿಗಳಾಗಿರುವರಾ ದುರುಳೆಯ | ವಶದ ಭೊಜನಕೆಂಬರೂ ||೧೩೧||
ಧುರಪರಾಕ್ರಮಿ ಸತ್ವವುಳ್ಳಭೂಪಾಲರು | ದುರುಳೆಯ ಮಥಿಸುತಲೀ ||
ತರಳೆ ಕಲಾವತಿಗರಸನಾಗಲಿ ಎಂದು | ಬರೆಸಿಹ ಕುವಲಯನೂ ||೧೩೨||
ಈ ರೀತಿಯಾದ ಪತ್ರವನೋಡಿ ಕಾಶ್ಮೀರ | ವೀರಸೇನಾಖ್ಯನೈದಿ |
ಧಾರುಣಿಪತಿಯೊಳುರೋಷದಿ ಕಾದುವ | ನಾರಿಯ ಕೊಂಡೊಯ್ಯಲೂ ||೧೩೩||
ಭಾಮಿನಿ
ಶಿರವತೂಗುತಲೆಂದ ಪೊಡವಿಪ |
ನರರೆ ಬಂದನೆ ವೀರಸೇನನು |
ಪರಿಪರಿಯ ದುಃಖವನು ಕೊಡುವನೆ ಸಾಧು ಕುವಲಯಗೇ ||
ಭರದಿ ನಾ ಪೋಗುವೆನು ರಕ್ಕಸಿ |
ಕೊರಳರಿದು ನಿರ್ನಾಮಗೈಯ್ಯುತ |
ತರುಣಿಯನು ಪಣದಂತೆ ವರಿಸುವೆನೆನುತ ಕರ ಜಡಿದಾ ||೧೩೪||
ರಾಗ ಮಾರವಿ ಅಷ್ಟತಾಳ
ಹೀರಾಮಾತ್ಯನೆ ಲಾಲಿಸೈಯ್ಯಾ | ನಮ್ಮ | ಧಾರುಣಿಗಳ ನೋಡಿ ಕೊಂಡಿಹುದೈಯ್ಯಾ ||
ವೀರಾವತೀಪುರಿಗೀಗ | ಚಂದ್ರ | ತಾರನ ಕೂಡುತ್ತ ಪೋಪೆನು ಬೇಗ ||೧೩೫||
ಕರೆಸು ಚಾರಕರಟ್ಟಿ ನೆಂಟರ | ಚಿತ್ರ | ವಿರಚೀಪ ಶಿಲ್ಪಿವರೇಣ್ಯರ |
ತ್ವರಿತದಿ ಹೊಯಿಸು ಡಂಗುರಗಳ | ಮತ್ತೆ | ಪುರದ ಕಾವಲಿಗಿಡು ಜನಗಳ ||೧೩೬||
ವಾರ್ಧಕ
ಮಂತ್ರಿ ಪೇಳಿದ ಬಂಧು ದಿಬ್ಬಣವೆ ಮೊದಲಾಗಿ |
ದಂತಿರಥವಾಜಿಗಳ ಅತಿರಥರ ಬಲಯುತರ |
ಹೊಂತಕಾರಿಗಳೆನಿಪ ಸಾಮಂತರೈತಂದ ವೃತ್ತವನು ನೃಪತಿಯೊಡನೆ ||
ಇಂತುಪಡೆ ಸಂಧಿಸಿದ ಪರಿ ಕೇಳಿ ನೃಪವರ್ಯ |
ಸಂತಸದಿ ಪುರವ ಪೊರಮಡಲಿಕಾ ಸಮಯದಲಿ |
ಎಂತು ಬಣ್ಣಿಪೆ ಗೀತ ವಾದ್ಯಾದಿ ಮಾಗಧರು ನಿಂತು ಪೊಗಳುವ ಪರಿಯನೂ ||೧೩೭||
ನಾರಿಯರ ಕಲಶ ಕನ್ನಡಿಗಳಿಂ ರಥಗಳಿಂ |
ಭೂರಿಮಾರ್ಬಲಗಳಿಂ ಬಂಧುಸಂದಣಿಗಳಿಂ |
ಸೇರಿದರು ಪಯಣ ನಾಲ್ಕಾರರಿಂ ಶೂರರಾ ವೀರಾವತೀ ನಗರಕೆ ||
ಆರಾಮಮಂ ಕಂಡು ಬೀಡಿಕೆಯ ಬಿಡಲು ಮೇಣ್ |
ಧಾರುಣಿಪ ಚಿಂತಿಸುತ ಮೌನದಿಂದಿರೆ ಚಂದ್ರ |
ತಾರ ತಾಂ ಕೇಳಲ್ಕೆ ಮುನಿಸಿದೇತರದೆಂದು ನುಡಿದನವನೀಶನವಗೇ ||೧೩೮||
ರಾಗ ಸುರುಟಿ ಏಕತಾಳ
ಲಾಲಿಸು ಸಚಿವೇಂದ್ರಾ | ವ್ಯಸನವ | ಪೇಳುವೆ ಗುಣಸಾಂದ್ರಾ || ಪಲ್ಲವಿ ||
ಬಾಲೆ ಕಲಾವತಿ ರೂಪುಲಾವಣ್ಯವ |
ವೋಲೈಸುವರುಸು | ಶೀಲೆ ಎಂದೆನುತಲಿ || ಲಾಲಿಸು ||೧೩೯||
ತರುಣಿಯ ನೀಕ್ಷಿಸದೇ | ಮನದೊಳು | ಹರುಷವು ಪುಟ್ಟುವುದೇ ||
ತರವಲ್ಲವು ಯೌವ್ವನ ಲಕ್ಷಣಗಳ | ಪರಿಕಿಸಿ ಕಾರ್ಯವ ವಿರಚಿಪೆ ಕಡೆಯೊಳು ||೧೪೦||
ಮುನಿಯೆನಗಿತ್ತಿರುವಾ | ಪಾವನ | ಘನಮೌಕ್ತಿಕ ಸರವಾ ||
ತನುವಿನೊಳ್ಧರಿಸುತ ಪೋಗಿ ನಾನಾಕೆಯ | ಗುಣಲಾವಣ್ಯವನೀಕ್ಷಿಸಿ ಬರುವೆನು ||೧೪೧||
ಭಾಮಿನಿ
ವರ ಸಚಿವನಿಂಗುಸುರಿ ಭೂಮಿಪ |
ಧರಿಸಿ ಮುಕ್ತಾಹಾರವನು ಖೇ |
ಚರದೊಳೈದುತಲಿರಲಿಕಿತ್ತಲು ಪೇಳ್ವೆ ಮುಂಗಥೆಯಾ ||
ಧರಣಿಪತಿ ಕುವಲಯನ ಮೋಹದ |
ತರಳೆಯಾದ ಕಲಾವತಿಯು ಸಖಿ |
ಯರನೆ ಕೂಡುತ ವನವಿಹಾರಕೆ ಪೊರಟು ಬಂದಿರಲೂ ||೧೪೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅನಿತರೊಳಗಭ್ರದಲಿ ಗಮಿಸುವ | ಜನಪನಕ್ಷಿಗೆ ಕುವಲಯಾಖ್ಯನ |
ತನುಜೆ ವಿದ್ಯುತ್ಕಾಂತಿಯಂದದಿ | ಮಿನುಗುತಿರಲೂ ||೧೪೩||
ಪರಿಕಿಸುತಲಾ ಕ್ಷಣದಿ ಕೆಳಗಿಳಿ | ದರಸ ಮನದೊಳು ಶಂಕಿಸುತ್ತಲಿ |
ಅರರೆ ವನದೇವತೆಯೊ ಆರಿವ | ಳರಿಯೆನೆನುತಾ ||೧೪೪||
ಭಾಮಿನಿ
ಸರಸಿಜೋದ್ಭವೆ ಧರೆಯೊಳಗೆ ಶ್ರೀ |
ಹರಿಸುತನ ಸತಿ ಚಂದ್ರಶೇಖರ |
ನರಸಿ ಕಮಲಾಸನನ ಮೋಹದ ರಾಣಿ ಎಂದೆನುತಾ ||
ಮೆರೆದಪರು ಈರೆರಡು ಸತಿಯರು |
ಬರಿದೆ ಚೆಲುವೆಯರೆಂಬ ಪೆಸರಿಲಿ |
ಪರಮ ಸುಂದರಿಯಿವಳ ಚಲ್ವಿಕೆಗವರು ಸರಿಯಹರೇ ||೧೪೫||
ವಾರ್ಧಕ
ಹರಿಣಾಂಕನಾನನವು ಹರಿಪೆಡೆಯ ತೆರ ಜಡೆಯು |
ಹರಿಜದಳದಂತಕ್ಷಿ ಹರಿಯಂತೆ ನಡು ದಿಟ್ಟಿ |
ಹರಿಣಿಯಾ ತೆರನಂತೆ ಹರಿವಾಲುಕವ ಪಿಡಿದು ಹರಿತರಲಿಕಾಗ ಮುಂದೇ ||
ಹರಿವರೂಥಾಧಿಪತಿ ಗಮನೆಯನ್ನೀಕ್ಷಿಸುತ |
ಹರಿಸಿದಂ ನೃಪ ಮನವನಾಕೆಯೋಳ್ ಮೋಹದಿಂ |
ಹರಿಯಣುಗ ಕಂಡು ಪೂಬಾಣಮಂ ಹೊಡೆಯಲ್ಕೆ ಹರಿಯೆಂದು ಮೂರ್ಛೆಗೊಳಲೂ ||೧೪೬||
ರಾಗ ಸಾಂಗತ್ಯ ರೂಪಕತಾಳ
ಹರುಷದೊಳ್ಬರುತಿಹ | ತರುಣಿಯು ಜನಪನ | ಪರಿಕಿಸಿ ಚಿತ್ತ ಚಂಚಲದಿ ||
ಹರಹರ ಇವನ್ಯಾರು | ಸ್ಮರನೊ ಮೇಣ್ಸುರಪನ | ತರಳನು ಧರೆಗಿಳಿದಿಹನೋ ||೧೪೭||
ಪರಿಕಿಸುವನಿತರೊಳ್ | ತರಹರಿಪುದು ಮನ | ಹರಿಯಣುಗನ ಬಾಧೆಯೊಳಗೇ ||
ವರ ಮನೋಹರನನ್ನು | ಅರಸನ ಮಾಡಿಕೊಂ | ಡರಿಯುವೆನಾ ಪುಷ್ಪಶರವಾ ||೧೪೮||
ಎಂದು ಯೋಚಿಸುತಾಗ | ತಂದೆಯ ಪಣವನಾ | ನಿಂದು ತಪ್ಪಿದರಿಹಪರದೀ ||
ಚಂದ್ರ ಸೂರ್ಯರು ಇಹ ತನಕಪಕೀರ್ತಿಯು | ಮುಂದೆನ್ನ ಭುವನದಿ ಬಿಡದು ||೧೪೯||
ಭಾಮಿನಿ
ಪಿತನರಕ್ಷಣೆಯೊಳಗೆ ಬಾಲ್ಯವ |
ಗತಿಸಿ ಕೌಮಾರದೊಳು ತಮ್ಮಯ |
ಪತಿಯ ವಾಕ್ಯಗಳಂತೆ ಚರಿಸುತ ಸುತರಕಾಲದೊಳು ||
ವ್ಯಥೆಗೊಳುತ ವಾರ್ಧಕ್ಯ ಕಾಲದಿ |
ಸುತನರಸಿ ಕೈಕೆಳಗೆ ಅಕಟಾ |
ಸತಿಯ ಜನ್ಮವೆ ಸಾಕು ಹರಹರಬೇಡ ಸರ್ವಥವೂ ||೧೫೦||
ರಾಗ ಕಾಪಿ ಅಷ್ಟತಾಳ
ಮಾರನ ಕೂರ್ಗಣೆಹತಿಯೂ | ಮಿತಿ |
ಮೀರಿತೆನ್ನಯಗೃಹ ಸೇರುವ ಪರಿಯೂ ||
ತೋರದು ಕಂಗೆಟ್ಟು ಕತ್ತಲೆಯಾಯ್ತೆಂದು |
ವಾರಿಜಲೋಚನೆ ಸಾರೆ ನಾಲ್ಕಡಿಗಳ ||೧೫೧||
ಕಂದ
ಧರಣಿಪ ಚೇತರಿಸುತ್ತತಿ |
ಭರದಿಂದೀಕ್ಷಿಸೆ ನಾಲ್ದೆಸೆಗಾಗಳ್ ಮನವಂ ||
ಸೆರೆಪಿಡಿದೊಯ್ವಬಲೆಯನಾ |
ದರದಿಂ ಕರೆಯುತೆ ವಿಚಾರಿಸುವೆನೀಕೆಯನುಂ ||೧೫೨||
Leave A Comment