ರಾಗ ನಾಟಿ ರೂಪಕತಾಳ
ಜಯ ಜಯ ಮಾತಂಗಾನನ | ಜಯ ಜಯ ತ್ರಿಜಗತ್ಪಾವನ |
ಜಯ ಜಯ ಮೂಷಿಕವಾಹನ | ಜಯ ವಿಘ್ನವಿಹರಣ ||
ಜಯ ಜಯ ಕರುಣಾಪೂರಣ | ಜಯ ಜಯ ದುರಿತನಿವಾರಣ |
ಜಯ ಜಯ ದೀನೋದ್ಧಾರಣ | ಜಯ ನಾಗಾಭರಣ || ಜಯ ಜಯ ಜಯ ಜಯತು || ೧ ||
ಬಾಲಾರ್ಕಾಮಿತ ಭಾಸುರ | ಬಾಲಶಶಾಂಕಕಲಾಧರ |
ಶೈಲಜೆಯಣುಗ ಕೃಪಾಕರ | ಸಾಲಂಕೃತ ಶೂರ |
ಪಾಲಿತಸರ್ವಚರಾಚರ | ಲಾಲಿತಗಗನಶುಭಾಕರ |
ವ್ಯಾಳೇಂದ್ರಾಸನ ಪ್ರಿಯಕರ | ಫಾಲಾಂಬಕಕುವರ | ಜಯ ಜಯ ಜಯ ಜಯತು || ೨ ||
ಹರಿಗಂಧಾಗರುಲೇಪಿತ | ನಿರುಪಮಚರಿತ ಗುಣಾನ್ವಿತ |
ಸುರುಚಿರಮಣಿಗಣಭೂಷಿತ | ಮರಕತಮಣಿಖಚಿತ |
ಪರಶುಪಾಶಾಂಕುಶಕರಧೃತ | ದುರಿತಾವಳಿ ವಿಚ್ಛೇದಿತ |
ಸರಳ ಸದಾ ಮೃದುಭಾಷಿತ | ಸ್ಮರಿಸುವೆನನವರತ || ಜಯ ಜಯ ಜಯ ಜಯತು || ೩ ||
ವಾರ್ಧಕ
ಸಚ್ಚಿದಾನಂದನಂ ಸಕಲಗುಣವೃಂದನಂ |
ಸ್ವಚ್ಚಂದರೂಪನಂ ಸ್ಮರಭಸ್ಮ ಲೇಪನಂ |
ಸಚ್ಚರಿತಸಾರನಂ ಸರ್ವಶೃಂಗಾರನಂ ಶರ್ವನಂ ಸರ್ವೇಶನಂ ||
ಅಚ್ಯುತಪ್ರೀಯನಂ ಅತಿಧವಳಕಾಯನಂ |
ದುಶ್ಚರಿತದೂರನಂ ದುರಿತಸಂಹಾರನಂ |
ನಿಶ್ಯಂಕ ನಿಪುಣನಂ ನಿರ್ದ್ವಂದ್ವಮಚಲನಂ ನೆನೆದೊರೆವೆನೀ ಕೃತಿಯನು || ೪ ||
ವನಚರೋತ್ತುಂಗನಂ ವನಧರನಿಭಾಂಗನಂ |
ವನಕಿಳಿದನೀತನಂ ವನದಿ ನಗ ಪೊತ್ತನಂ |
ವನಭೂಮಿಚೋರನಂ ವಧಿಸಿದಾಕಾರನಂ ಸಾರನಂ ಶೃಂಗಾರನಂ ||
ವನಮೃಗಾಧ್ಯಕ್ಷನಂ ವಟು ದೈತ್ಯಶಿಕ್ಷನಂ |
ಜನನಿಯೊಳ್ ಮುನಿದನಂ ವನವಾಸಕಯ್ದನಂ |
ವನಧಿ ಮನೆ ಗೆಯ್ದನಂ ವರ ಬುದ್ಧ ಕಲ್ಕ್ಯನಂ ಬಲಗೊಂಬೆ ದಶರೂಪನಂ || ೫ ||
ವನಚಾರಿಯಾದವನ ಹೆಮ್ಮಗನ ಸೋದರನ |
ತನಯನಂ ಬಗಿದವನ ಬಾಗಿಲಂ ಕಾಯ್ದವನ |
ಮನೆಯನುಂ ನೆಗಹಿದನ ಸುತನ ಗೆಲಿದವನಗ್ರಜನ ಪೆಗಲೊಳಾಂತು ಕುಣಿವ ||
ಘನಮಹಿಮನಯ್ಯನ ಕುಮಾರಕನ ಸೋದರನ |
ವನ ರಥದ ಸಾರಥಿಯ ಸೋದರಿಯ ಸಂಭವನ |
ತನುಜನನು ಚುಚ್ಚಿದನ ಕುಲದಂತಕನ ಪಿತಾಮಹ ಬ್ರಹ್ಮ ಶರಣು ಶರಣು || ೬ ||
ಭಾಮಿನಿ
ಶಾರದಾಂಬೆಗೆ ಶಂಕರಿಗೆ ವರ |
ಮಾರಮಾತೆಗೆ ಹಿಮಕರೆಗೆ ಸರ |
ಸೀರುಹಾಪ್ತಗೆ ಮುಖ್ಯ ದಿಕ್ಪಾಲರಿಗೆ ಋಷಿಗಳಿಗೆ ||
ಚಾರು ಕವಿ ವಾಲ್ಮೀಕಿಯಂಘ್ರಿಗೆ |
ಸಾರಿ ಕರಗಳ ಮುಗಿದು ವಂದಿಸಿ |
ವೀರ ಷಣ್ಮುಖಗೆರಗಿ ಪೇಳುವೆನೀ ಪ್ರಬಂಧವನು || ೭ ||
ದ್ವಿಪದಿ
ಶ್ರೀರಾಮಚರಣಾಬ್ಜಯುಗಭೃಂಗಕೆರಗಿ |
ನಾರದಾದಿ ಮುನೀಂದ್ರರಡಿಗೆ ತಲೆವಾಗಿ || ೮ ||
ಭಾರತಪುರಾಣದೊಳಗಂದು ಧರ್ಮಜನು |
ವೀರ ಶಲ್ಯನಗೆಲಿದ ಬಳಿಕ ಫಲುಗುಣನು || ೯ ||
ಸಮಸಪ್ತಕಾದಿ ದಾನವರನೆಲ್ಲರನು |
ಸಮರದೊಳು ಗೆಲಿದಾ ಕರಂಡಕಾದ್ಯರನು || ೧೦ ||
ಬಳಿಕ ಭೀಮನು ಕೌರವನನು ಸಂಹರಿಸಿ |
ಇಳೆಯಾಧಿಪತ್ಯವನು ಧರ್ಮಜಗೆ ರಚಿಸಿ || ೧೧ ||
ಹರಿಯ ಕಾರುಣ್ಯದಲಿ ಮೆರೆದ ಸಂಗತಿಯ |
ಒರೆವೆನೈ ಯಕ್ಷಗಾನದಲಿ ಸತ್ಕಥೆಯ || ೧೨ ||
ತಪ್ಪು ಸಾವಿರವಿರಲು ತಿದ್ದಿ ಬಲ್ಲವರು |
ಒಪ್ಪುಗೊಂಡಿದ ಮೆರೆಸಬೇಕು ಸಜ್ಜನರು || ೧೩ ||
ಯತಿ ಗಣ ಪ್ರಾಸ ವಿಷಮಾಕ್ಷರಗಳರಿಯೆ |
ಅತಿ ದೋಷಗಳ ಕ್ಷಮಿಸಬೇಕು ಶ್ರೀಹರಿಯೆ || ೧೪ ||
ನ್ಯೂನಾತಿರಿಕ್ತ ಬರಲದನೆಲ್ಲ ಮರೆದು |
ಸಾನುರಾಗದಿ ಪಂಚಲಿಂಗ ರಕ್ಷಿಪುದು || ೧೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂದುಕುಲ ಜನಮೇಜಯಗೆ ನಲ | ವಿಂದ ವೈಶಂಪಾಯ ಮುನಿಪತಿ |
ಚಂದದಿಂ ಭಾರತದ ಕಥನವ | ನಂದು ಮುದದಿ || ೧೬ ||
ವಿಸ್ತರಿಸುತಿರಲೊಂದು ದಿನ ಬಲು | ಭಕ್ತಿಯಲಿ ಋಷಿಯಂಘ್ರಿಗೆರಗುತ |
ಪೃಥ್ವಿಪಾಲಕನೆಂದನಾ ಮುನಿ | ಪೋತ್ತಮನೊಳು || ೧೭ ||
ಯತಿಕುಲಾಗ್ರಣಿ ಕೇಳು ಧರ್ಮಜ | ನತಿರಥರೊಳಗ್ಗಳೆಯ ಶಲ್ಯನ |
ಮಥಿಸಿದಂದವದೆಂತು ನರ ಶ್ರೀ | ಪತಿಯ ದಯದಿ || ೧೮ ||
ದುರುಳ ಸಮಸಪ್ತಕರ ಮಿಗೆ ಸಂ | ಹರಿಸಿ ದೈತ್ಯ ಕರಂಡಕಾದ್ಯರ |
ಧುರದಿ ಹನುಮನು ಗೆಲಿದ ಕಾರಣ | ದಿರವದೆಂತು || ೧೯ ||
ದುರುಳ ಕೌರವನೃಪನ ರಣದಲಿ | ಮರುತಜನು ಸಂಹರಿಸಿ ಯಮಜಗೆ |
ಧರೆಯ ಪಟ್ಟವ ರಚಿಸಿದಂದವ | ನೊರೆವುದಾರ್ಯ || ೨೦ ||
ಎನುತ ಚರಣದಿ ಮಣಿದ ಭೂಪನ | ವಿನಯದಿಂ ಪಿಡಿದೆತ್ತಿ ಮುನಿಪತಿ |
ವನಧಿಶಯನನ ಪಾದಕಮಲವ | ನೆನೆದುಸಿರ್ದ || ೨೧ ||
ವಾರ್ಧಕ
ಶರಧಿವಸನೇಶ ಜನಮೇಜಯ ನರೇಂದ್ರ ಗುಣ |
ಶರಧಿಸಮ ಗಂಭೀರ ಲಾಲಿಸೈ ಶಶಿವಂಶ |
ಶರಧಿ ಪೂರ್ಣಶಶಾಂಕ ಕೇಳಾದಡೊರೆವೆನವಧರಿಸೇಕಚಿತ್ತದಿಂದ ||
ಹರಿಯೊಲುಮೆಯಿಂದಲಾ ಹರಿಸೂನು ಸಂಗರದಿ |
ಹರಿಯಣುಗನಂ ಕೊಲಲು ಹರಿಸುತಂ ಕೇಳ್ದಾಗ |
ಹರಿಪುತ್ರನಳಿದ ವ್ಯಥೆ ಹರಿದು ಮನದೊಳಗೆ ಶ್ರೀಹರಿಯ ಧ್ಯಾನಿಸುತಿರ್ದನು || ೨೨ ||
ಇರಲಿತ್ತ ವಿಗತಾಕ್ಷನೃಪತಿಗಾ ಸಂಜಯಂ |
ಒರೆಯಲೀ ಹದನಮಂ ಕೇಳ್ದು ಚಿಂತಾಗ್ನಿಯೊಳು |
ಮರುಗಿ ಮೂರ್ಛಿತನಾದ ಧೃತರಾಷ್ಟ್ರನಂ ಬಳಿಕ ಪಿಡಿದೆತ್ತಿ ತವಕದಿಂದ ||
ಒರೆದನೈ ನೀ ಮೊದಲು ಬಿತ್ತಿದ ವಿಷದ್ರುಮಾಂ |
ಕುರಿಸಿ ಫಲವಾಯಿತದನುಣ್ಣಬೇಕಲ್ಲದೀ |
ಪರಿಯೊಳಳಲಿದರಹುದೆ ಪರಿಹಾರವೆನುತಲತಿ ಧೈರ್ಯಮಂ ಪೇಳ್ದನವಗೆ || ೨೩ ||
ಕುರುರಾಯ ಬಳಿಕಿತ್ತ ಕಲಿ ಕರ್ಣನಳಿದುದಂ |
ಪರಿಕಿಸುತ ಮೂರ್ಛೆಯಂ ತಾಳಿ ಬಿದ್ದಿರಲಾಗ |
ಗುರುಸೂನು ಕೃತವರ್ಮ ಕೃಪರಂದು ಸಂತವಿಸಿ ಧೈರ್ಯಗಳನೊರೆದು ನೃಪಗೆ |
ವರ ಮಾದ್ರಿಪತಿಯ ದಳದರಸುತನಕೊಡಬಡಿಸಿ |
ತರತರದ ನಿಸ್ಸಾಳ ವಾದ್ಯದಬ್ಬರದಿಂದ |
ವರಮಹಾಸೇನಾಧಿಪತ್ಯಮಂ ಪರುಠವಿಸುತನುವಾದರಿತ್ತ ರಣಕೆ || ೨೪ ||
ಭಾಮಿನಿ
ಈಸು ಪರಿ ವಾರ್ತೆಗಳನಾ ಧರ |
ಣೀಶ ಧರ್ಮಜನರಿತು ಬಂದಾ |
ವಾಸುದೇವನ ಚರಣಕೆರಗುತ ವಿನಯಪರನಾಗಿ ||
ಕೇಶವಾಚ್ಯುತ ಪದ್ಮನಾಭ ಸು |
ರೇಶ ಪೂಜಿತ ಮದನಜನಕಬು |
ಜಾಸನಾರ್ಚಿತ ಶರಣೆನುತ್ತಿಂತೆಂದನವನೀಶ || ೨೫ ||
ರಾಗ ಮಧುಮಾಧವಿ ಏಕತಾಳ
ದೇವಾಧಿದೇವ ಚಿತ್ತವಿಸು ಬಿನ್ನಪವ | ಭಾವಜಜನಕನೆ ಶರಣಸಂಜೀವ |
ಮಾವ ಶಲ್ಯಗೆ ಸೇನೆಯಧಿಪತಿತ್ವವನು | ಠೀವಿಯಿಂ ರಚಿಸಿದನಂತೆ ಕೌರವನು || ೨೬ ||
ನಾವಿನ್ನು ಮಾಡುವ ಯತ್ನಗಳೇನು | ಜೀವನದೊಡೆಯ ನೀ ಬಲ್ಲೆ ಕಾರ್ಯವನು |
ತೀವಿದ ಸಂಗರವೆಸಗುವ ಬಗೆಯ | ಸಾವಧಾನದಿ ಪೇಳ್ದು ಸಲಹಬೇಕಯ್ಯ || ೨೭ ||
ಎಂದು ಧರ್ಮಜನು ಶ್ರೀಹರಿಪಾದಕಂದು | ವಂದಿಸಿ ಪೇಳಲು ಕಲಿ ಭೀಮ ಬಂದು ||
ಇಂದೆನ್ನ ಕಳುಹು ಯುದ್ಧಕೆ ಸಾಕಿದೆಂದು | ಬಂದೆಲ್ಲ ಭಟರು ಗರ್ಜಿಸಿದರು ನಿಂದು || ೨೮ ||
ಭಾಮಿನಿ
ಆ ಸಮೀರಜ ಸುರಪಸೂನು ಮ |
ಹಾ ಸುಭಟರೆಲ್ಲವರು ಮಿಗೆ ಮಾ |
ದ್ರೀಸುತರು ನಾ ಮುನ್ನ ತಾ ಮುನ್ನೆನುತ ಗರ್ಜಿಸಲು ||
ವಾಸುದೇವನು ನಗುತ ನಿಮ್ಮಯ |
ವಾಸಿ ಕೊಳ್ಳದು ಶಲ್ಯಭೂಪನ |
ಗಾಸಿ ಮಾಳ್ಪರೆ ಧರ್ಮಸುತ ಹೊರತಿಲ್ಲ ಭಟರೆಂದ || ೨೯ ||
ರಾಗ ಭೈರವಿ ತ್ರಿವುಡೆತಾಳ
ಮುರಹರನು ಬಳಿಕಿತ್ತಲೀ ತೆರ | ನರುಹುತಿರುತಿರಲತ್ತ ಮಾದ್ರೇ |
ಶ್ವರನು ರಣಕಯ್ತರುವ ವಿಭವವ | ಪರಿಕಿಸುವೆನೆಂದೆನುತ ಬೇಗದಿ |
ತರಣಿಯುದಯಾಚಲದ ಶಿಖರದಿ | ಮೆರೆಯಲಂದತಿ ರಭಸದಲಿ ಮುಂ |
ಬರಿದು ಧರೆ ಬಿರಿವಂದದಲಿ ಬಲ | ವೆರಸಿ ಶಲ್ಯನೃಪಾಲ ಭರದಲಿ ||
ಬಂದನಾಗ | ಸಮರಕೆ | ನಿಂದನಾಗ || ೩೦ ||
ಹತ್ತು ಸಾವಿರದೇಳುನೂರರು | ವತ್ತು ಗಜ ಮಿಗಿಲೆರಡು ನೂರರು |
ವತ್ತು ಲಕ್ಷ ತುರಂಗಗಳು ಸಹ | ಪತ್ತಿ ಮೂರ್ಕೋಟಿಯನು ನೃಪ ಕೈ |
ವರ್ತಿಸಿದ ಸಮಸಪ್ತಕರು ಗುರು | ಪುತ್ರ ಮೊದಲಾದಖಿಳ ಸುಭಟರ |
ಮೊತ್ತದೊಗ್ಗಿನಲಂದು ರಥವೇ | ರುತ್ತಧಿಕ ರೋಷದಲಿ ಸಮರಕೆ || ಬಂದನಾಗ || ೩೧ ||
ಇದಿರಲೌಕಿತು ಗಾಳಿ ಪಟ್ಟದ | ಮದ ಗಜಾವಳಿ ಮುಗ್ಗಿತಾ ಧ್ವಜ |
ವುದುರಿದುದು ದಳಪತಿಯ ನಿಮಿಷದಿ | ಬಿದಿರಿದುದು ಕೆಂಧೂಳುತಾರಕೆ | ಯುದುರಿತಭ್ರದೊಳಿಂತು ದುಶ್ಯಕು | ನದ
ಪರೀಕ್ಷೆಯ ಗಣಿಸದಯ್ದಿದ |
ರಧಟುತನದಲಿ ಕದನಕೆನುತಲಿ | ಮದಮುಖರು ಗರ್ಜಿಸುತ ಭರದಲಿ || ಬಂದನಾಗ || ೩೨ ||
ಭಾಮಿನಿ
ಇಳೆಯಧೀಶ್ವರ ಲಾಲಿಸೀ ಪರಿ |
ಯೊಳಗೆ ಮಾದ್ರಾಧೀಶ ತನ್ನಯ |
ದಳ ಸಹಿತ ನಡೆತಂದು ಮಣಿಹಾರಕನ ಕರೆದೆಂದ ||
ನಿಲದೆ ಹೋಗಾ ಧರ್ಮಜನ ಕೊಳು |
ಗುಳಕೆ ಬರಹೇಳೆನಲು ನಡೆದಾ |
ನಳಿನಸಖಸುತನಣುಗನೊಡನಿಂತೆಂದನತಿ ಭರದಿ || ೩೩ ||
ರಾಗ ಮುಖಾರಿ ಏಕತಾಳ
ಕೇಳು ಕೇಳಯ್ಯ ಧರ್ಮರಾಯ | ಸಂಗರಕೆ ಬೇ | ಗೇಳು ನೋಡಿಂದಿನ ಹೊಸ ಪರಿಯ |
ಕಾಲನಂದದೊಳಿಹ | ನಾಲಿಸು ಶಲ್ಯನು | ಮೇಲೆಮ್ಮಯದಳ | ಕಾಳಿದನಾದನು |
ಕಾಳಗಕೆನುತಲೆ | ಮೇಳಯಿಸುತ ಬಹ | ನೇಳೇಳೀ ಕ್ಷಣ | ಪೇಳಲಿನ್ನೇನು || ೩೪ ||
ತಮ್ಮಂದಿರೆಲ್ಲರ ನೀ ಕೂಡಿ | ಉಳಿದಿರ್ದ ಸೈನ್ಯ | ವೊಮ್ಮುಖ ಮಾಡಿ ಜೋಡುಗೂಡಿ ||
ಹಮ್ಮುಗೆಯುಳ್ಳರೆ | ನೆಮ್ಮಿ ಧುರವನಿದು | ಸುಮ್ಮನೆ ಪೋಗದು | ನಮ್ಮರಸನ ಬಗೆ |
ಸಮ್ಮತ ಬೇಡಿಕೊ | ನಿಮ್ಮಯ ಕೃಷ್ಣನ | ನುಮ್ಮಳಿಸದೇ ನೀ | ಘಮ್ಮನೆ ಹೊರಡು || ೩೫ ||
ಸತ್ತ್ವಾತಿಶಯದ ನಿನ್ನ ಪಡೆಯ | ಸಂಗರದಿ ನು | ಗ್ಗೊತ್ತಿ ನಿಮ್ಮಯ ಜಯಸಿರಿಯ ||
ಅತ್ತಲೆಳದು ಕುರು | ಪೃಥ್ವಿಪತಿಗೆ ಕೈ | ವರ್ತಿಪೆನೆಂದಾ | ಮತ್ತಾ ಶಲ್ಯನು |
ಚಿತ್ತದೊಳಗೆ ಖತಿ | ವೆತ್ತು ಬಂದಿರುವನು | ಹೊತ್ತುಗಳೆಯದೇ | ಳಿತ್ತ ಸಂಗರಕೆ || ೩೬ ||
ಭಾಮಿನಿ
ಚರರ ನುಡಿಯನು ಕೇಳ್ದು ಧರ್ಮಜ |
ನರುಹಿದನು ಬಹರೀ ಕ್ಷಣದೊಳೆಂ |
ದರುಹು ನಿಮ್ಮೊಡೆಯಂಗೆ ಲಯಕಾಮಿನಿಯ ಪರಿಣಯಕೆ ||
ಪರುಠವಿಸಿ ಸನ್ನಾಹಗಳನನು |
ಕರಿಸಿಕೊಂಡಿರಹೇಳು ಹೋಗೆಂ |
ದರಸನವನನು ಕಳುಹುತತ್ತಲು ಸಮರಕನುವಾದ || ೩೭ ||
ರಾಗ ಆಹೇರಿ ಝಂಪೆತಾಳ
ಕೊಳುಗುಳಕೆ ಬರುತಿರ್ದ ಭರದಿ | ಚತುರಂಗ |
ಬಲವೆರಸಿ ಧರ್ಮಜನು ಸಕಲ ಸಂಭ್ರಮದಿ || ಪ ||
ಮುಂದೆ ಪಾಠಕರು ಪೊಗಳುತ ಬರಲು ಬಳಿಕದರ |
ಹಿಂದೆ ಬಿಲ್ಲಾಳುಗಳು ಬರಲವರು ಸಹವಾಗಿ |
ಮಂದಿ ಕುದುರೆ ಸಮೂಹ ಗಜಘಟೆಗಳೊಗ್ಗಿನಲಿ |
ಸಂದಣಿಯ ರಾಯದಳ ಸಹಿತ | ಅಧಿಕತರ |
ಚಂದದಿಂಮಣಿ ರಥನಿಕಾಯದೊಳಗಿರುತ || ೩೮ ||
ಧುರದಿ ಸಹದೇವ ಶಕುನಿಯ ಸೈನ್ಯಮಂಬೆರಸ |
ಲರಸ ದಳಪತಿಯೊಡನೆ ವರ ಸಾತ್ಯಕಿಯ ರಥವ |
ಗುರುಸೂನು ತಡೆಯೆ ಮುಂದುರವಣಿಸಿ ಗೌತಮಿಯ |
ಭರದಿಂದ ನಕುಲಾಂಕ ತಡೆದು | ಸಂಗರದಿ |
ಬೆರಸಿ ಕೋಪಾಗ್ನಿಯೊಳು ಹೊಯ್ದಾಡಿ ಜಡಿದು || ೩೯ ||
ಕಂಡು ದಳಪತಿ ಕಾಲರುದ್ರನಂದದಿ ರೋಷ |
ಗೊಂಡು ಫಡ ಧರ್ಮಸುತ ನಿಲ್ಲೆನುತ ಬಳಿಕವು |
ದ್ದಂಡ ಸತ್ತ್ವದಿ ಸರಳಮಳೆಗರೆದು ಮುಸುಕಿದನು |
ದಂಡಧರ ಸುಕುಮಾರನ | ಸೈನ್ಯವನು |
ಗಂಡುಗಲಿ ಧರಿಸಿ ಕಡುರೋಷಪಾವಕನ || ೪೦ ||
ರಾಗ ಶಂಕರಾಭರಣ ಮಟ್ಟೆತಾಳ
ಅರಸ ಕೇಳು ದಂಡಧರನ | ವರ ಕುಮಾರನಖಿಳ ಸೈನ್ಯ |
ವಿರದೆ ವೈರಿದಳಗಳನ್ನು | ಬೆರಸಿ ಹೊಕ್ಕುದು ||
ಅರರೆ ಕವಿಯೆನುತ್ತಲಿವರು | ಭರದಿ ನಿಂತರಿಂತು ಬಾಣ |
ಪರಶು ತೋಮರಂಗಳಿಂದ | ತರುಬುತಿರ್ದರು || ೪೧ ||
ಹರಿಯ ಹಯದಿ ಗಜವ ಗಜದಿ | ವರ ವರೂಥಗಳನು ರಥದಿ |
ಮುರಿದು ರಾವುತರನು ರಾವ್ತ | ರಿರದೆ ಹೊಯ್ದರು |
ಧುರದಿ ರೋಷವೆತ್ತು ಶಲ್ಯ | ಧರಣಿಪಾಲನೊಡನೆ ಯಮಜ |
ಶರವ ತೂಗುತೆಂದನವನ | ಪರಿಕಿಸುತ್ತಲಿ || ೪೨ ||
ರಾಗ ದೇಶಿ ಅಷ್ಟತಾಳ
ನಿಲ್ಲು ನಿಲ್ಲೆಲೊ ಫಡ ಫಡ ಮಾದ್ರೇಶ |
ಬಲ್ಲೆ ನಿನ್ನಯ | ಖುಲ್ಲತನಗಳ | ನಿಲ್ಲಿಸುವೆನೀ ಕ್ಷಣದಲಿ || ೪೩ ||
ನಮ್ಮ ಬಂಧುತ್ವದವನಾಗಿ ನೀನಿಂದು |
ದುರ್ಮದಗಳಿಂ | ದೆಮ್ಮರಿಯ ಸೇ | ರ್ದುಂ ಮದತ್ವದಿ ಬಂದೆಯ || ೪೪ ||
ಗಳಿಗೆ ಸೈರಿಸಿ ನೋಡಿಂದಿನಲಿ ನಿನ್ನ |
ಬಲಿಯ ಕೊಡುವೆನು | ಭೂತನಿಕರಕೆ | ತೊಲಗದಿದಿರಾಗೆಂದನು || ೪೫ ||
ವಾರ್ಧಕ
ವಸುಧೀಶ ಕೇಳಿಂತು ಕಿನಿಸಿಂದ ಮುನಿಸಿಂದ |
ಲಸಮ ಸಾಹಸಸತ್ತ್ವದೊಲವಿಂದ ಗೆಲವಿಂದ |
ವಸುಮತೀಪತಿ ಯಮಜ ಭರದಿಂದ ಕರದಿಂದ ಧುರದೊಳಸ್ತ್ರಂಗಳಿಂದ ||
ಮುಸುಕಿದಂ ಮಾದ್ರೇಶನಂಗಮಂ ಭಂಗಮಂ |
ಕುಸುಕಿದಂ ಸಾರಥಿ ವರೂಥಮಂ ಯೂಥಮಂ |
ದೆಸೆಗೆಡಿಸಿ ಬಿಡದೆ ರಿಪುಸೈನ್ಯಮಂ ದೈನ್ಯಮಂ ಬರಿಸಿದಂ ಸಂಗರದೊಳು || ೪೬ ||
ಕಂದ
ಇಂತಸ್ತ್ರದ ವರ್ಷಗಳಂ |
ಕುಂತೀಸುತ ಕರೆದು ಗಜರಿ ಗರ್ಜಿಸಲಾಗಳ್ ||
ತಾಂ ತಳುವದೆ ಮಾದ್ರೇಶಂ |
ಪಂಥದೊಳದ ಸವರುತೆಚ್ಚು ಧರ್ಮಜಗೆಂದಂ || ೪೭ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ಎಲೆ ಧರ್ಮಜಾತನೆ ಕೇಳಿಂದು | ಪಗೆ | ಗಳ ಕೂಡಿ ಬಂದಿಹೆ ನಾನೆಂದು |
ಬಲುಮೆಯ ಮಾತೇಕಾಡುವೆ | ನಿನ್ನ | ಬಲುಹನೀ ಕ್ಷಣದೊಳೀಡಾಡುವೆ || ೪೮ ||
ಧರಣಿಪಾಲರ ನೀತಿಗುಣದಿಂದ | ಕೌರ | ವರ ರಾಯ ಕರೆತಂದನದರಿಂದ |
ಧುರಕೆ ಬೆಂಬಲವಾತಗಾದೆನು | ಯೆಂದು | ಕೆರಳಿ ಕೆಂಗರಿಗೋಲ ಕರೆದನು || ೪೯ ||
ಎಚ್ಚ ಕೋಲಾ ರಣರಂಗದಿ | ಬಂದು | ಚುಚ್ಚಿ ಭೂವರನ ಸರ್ವಾಂಗದಿ ||
ಬಿಚ್ಚಿ ತೊಟ್ಟಿರುವ ಸೀಸಕವನ್ನು | ಎದೆ | ಗುಚ್ಚಿ ಸೂಸಿತು ರಕ್ತಜಲವನ್ನು || ೪೭ ||
ಅನಿತರೊಳ್ ಮಾದ್ರಿಕುಮಾರರು | ಬಂದು | ಧನುವಿಗಸ್ತ್ರವ ಪೂಡುತೆಂದರು ||
ಜನನಿಯಗ್ರಜನಾಗಿ ನೀನಿಂದು | ನಮ್ಮ | ಕೆಣಕಿದೆ ಪಗೆಯೊಡನಯ್ತಂದು || ೪೮ ||
ಕಾಯದಾಸೆಯ ಬಿಡು ಸಾಕಿನ್ನು | ನಿನ | ಗಾಯುಷ್ಯಕವಧಿ ಬಂದಿಹುದಿನ್ನು ||
ಸಾಯದಿರೆಮ್ಮಗ್ರಜನೊಳೆಂದು | ಬಲು | ಸಾಯಕಗಳನೆಚ್ಚರವರಂದು || ೪೯ ||
ವಾರ್ಧಕ
ಅರಸ ಕೇಳ್ ಮಾದ್ರಿಸಂಜಾತರಿಂತೆನಲವರ |
ಶರವರ್ಷಮಂ ತರಿದು ಧಿಕ್ಕರಿಸಿ ತರುಬಿದಂ |
ಧುರದಿ ಮಾದ್ರೇಶನರಿಸೇನೆಯೊಳು ಬೀದಿವರಿದತಿರಥ ಮಹಾರಥರನು ||
ಸರಳ ಮಳೆಗರೆದು ಮುಂದುರವಣಿಸಲಿತ್ತಲುಂ |
ಉರಿಗಣ್ಣನಂತೆ ರೋಷಿತನಾಗಿ ಫಲುಗುಣಂ |
ಗುರುಜ ಗೌತಮಿ ಸುಶರ್ಮಾದಿಗಳ ನೆರವಿಯಂ ಪೊಕ್ಕು ಕೋಲ್ಮಳೆಗರೆದನು || ೫೦ ||
ರಾಗ ಶಂಕರಾಭರಣ ಮಟ್ಟೆತಾಳ
ಎರಡು ಬಲ ವಿರೋಧದಿಂದ ಕದನಮಧ್ಯದಿ |
ತುರಗ ಗಜ ವರೂಥಗಳನು ಸವರಿ ತ್ವರಿತದಿ ||
ಉರಿಯನುಗುಳುತಾಗ ಪಾರ್ಥನಿದಿರು ರೋಷದಿ |
ಗುರು ಕುಮಾರನಂದು ಪೇಳ್ದನಧಿಕ ರೌದ್ರದಿ || ೫೧ ||
ಎಲೆ ಕಿರೀಟಿ ಸೂತಸುತನ ಗೆಲಿದೆನೆನುತಲಿ |
ನಲವಿನಿಂದ ಪಿತ್ತವೇರಿ ಕುಣಿವೆ ಮನದಲಿ ||
ಇಳೆಯು ಸಿಕ್ಕಿತೆಂದು ಹಿಗ್ಗಬೇಡ ಸುಮ್ಮನೆ |
ಹಳುವವನ್ನು ಹೊಗಿಸದಿರೆನು ನಿನ್ನ ಘಮ್ಮನೆ || ೫೨ ||
ಹಳುವದಲ್ಲಿ ಸೇರಿ ತಳಿರ ಗುಡಿಯೊಳಿರ್ಪುದು |
ಮುಳುಗಿ ನೀರ ಜಪ ತಪಂಗಳನ್ನೆ ಮಾಳ್ಪುದು ||
ಇಳೆಯ ಸುರರ ಧರ್ಮವೆನ್ನೊಳಾಡಲೇತಕೊ |
ಉಳಿಯಗೊಡೆನು ನಿನ್ನ ಮನದಿ ಗ್ರಹಿಸಿ ನೋಡಿಕೊ || ೫೩ ||
ತಿಳಿದು ಬಲ್ಲೆ ಹಿಂದೆ ನಾನು ದ್ಯೂತಮುಖದಲಿ |
ಇಳೆಯ ತೆತ್ತು ವನವ ಸಾರ್ದ ಪರಿಯನೆನ್ನಲಿ ||
ಗಳಹ ಬೇಡ ನಿನ್ನನೀಗಲೀ ರಣಾಗ್ರದಿ |
ಬಲಿಯ ಕೊಡುವೆ ಭೂತಗಣಕೆ ನೋಡು ಶೀಘ್ರದಿ || ೫೪ ||
ಎನುತಲಗಣಿತಾಸ್ತ್ರವೆಸೆಯೆ ಕಂಡು ಪಾರ್ಥನು |
ಕ್ಷಣದೊಳದರ ತರಿದು ಗುರುಜನೊಡನೆ ಪೇಳ್ದನು ||
ಬಣಗೆ ಬಗುಳಬೇಡ ಪಶುವಿಗಾಗಿ ಪೂರ್ವದಿ |
ಕೆಣಕಿ ನೊಂದುದನ್ನು ಮರೆತು ನುಡಿವೆ ಗರ್ವದಿ || ೫೫ ||
ಎನಲು ನೂರು ಬಾಣದಿಂದ ನರನನೆಚ್ಚನು |
ಕನಲಿ ಪ್ರತಿ ಶರೌಘದಿಂದ ಕಡಿದು ಪಾರ್ಥನು ||
ಧನುವನೊದರಿಸುತ್ತ ಮೂರು ಸರಳನೆಸೆದನು |
ಮನದಿ ನೊಂದು ಗುರುಕುಮಾರ ಕೆಲಕೆ ಸಾರ್ದನು || ೫೬ ||
ರಾಗ ಮಾರವಿ ಏಕತಾಳ
ಧರಣಿಪ ಕೇಳೀ | ತೆರದಿಂ ಪಾರ್ಥನು | ಗುರುಸುತನಂಗವ |
ಶರದಲಿ ಕೀಲಿಸಿ | ಕರಿ ರಥ ಪದಚರ | ತುರಗವ ನುಗ್ಗರಿ |
ದೊರೆಸುತ ರಣದಲಿ | ಪರಿಶೋಭಿಸಿದ | ನೇನನೆಂಬೆ || ೫೭ ||
ಹತ್ತು ಕೃಪಗೆ ತೊಂ | ಭತ್ತು ಶಲ್ಯಗೆ ಮೂ | ವತ್ತು ಸುಶರ್ಮಗೈ |
ವತ್ತು ಶಕುನಿಗೆಂ | ಭತ್ತು ಮಹಾಸ್ತ್ರವ | ನಿತ್ತು ಬಿದ್ದಿಹ ದಳ |
ಪತ್ತಿ ಸಮೂಹವ | ತೊತ್ತ ಳದುಳಿದ | ನೇನನೆಂಬೆ || ೫೮ ||
ಕೆರಳ್ದನು ಸೌಬಲ | ಹೊರಳ್ದನು ಕೃಪ ನೆಲ | ಕುರುಳ್ದನು ರಥದಿಂ |
ಪೊರಳ್ದ ಸುಶರ್ಮಕ | ನೊರಲ್ದವು ಗಜಘಟೆ | ನರಳ್ದುದು ಹಯಗಳು |
ಮರುಳ್ದುದು ರಥಬಲ | ವುರುಳ್ದುದು ರಣದಿ | ಏನನೆಂಬೆ || ೫೯ ||
ಚಟುಳ ಪರಾಕ್ರಮಿ | ಪಟುತರ ಕೋಪದೊ | ಳಟಿಕಟಿಸುತ ಧೂ |
ರ್ಜಟಿಯಂದದೊಳಾ | ರ್ಭಟಿಸುತ ಶಲ್ಯನು | ಕುಟಿಲತನದೊಳರಿ |
ಕಟಕದಿ ಯಮಜನ | ನಟಕಿಸುತೆಂದನೇನನೆಂಬೆ || ೬೦ ||
ರಾಗ ಭೈರವಿ ಏಕತಾಳ
ಎಲೆ ಕಾಲಾತ್ಮಜ ಕೇಳು | ಈ | ನೆಲ ನಿನಗಾಹುದು ತಾಳು |
ತಳುವದೆ ಕೊಡಿಸುವೆನೆನುತಾ | ಕೋಲ್ | ಮಳೆಗರೆದನು ಗರ್ಜಿಸುತ || ೬೧ ||
ಅನುವರದಲಿ ಸೂತಜನ | ಹಯ | ವನು ನಡೆಸುತಲಿರ್ದವನ ||
ಘನ ಪೌರುಷವೇನೆಂದು | ಬಹ | ಕಣೆಗಳ ಕಡಿದಿಡಲಂದು || ೬೨ ||
ಚತುರಾನನ ಮಾಧವರು | ಸಾ | ರಥಿತನವನು ಗೆಯ್ದಿಹರು |
ಅತಿಶಯವೆನ್ನೊಳಗಲ್ಲ | ಛೀ | ಮತಿಹೀನನೆ ಬಿಡುಸೊಲ್ಲ || ೬೩ ||
ಕುಲಧರ್ಮಗಳನು ಮೀರಿ | ಕುರು | ಕುಲಜನ ಕೂಳಿಗೆ ಸೇರಿ ||
ಗಳಹುವ ಮೂಢನು ನೀನೋ | ಪೇ | ಳೆಲೊ ಮತ್ತಿದರೊಳಗಾನೋ || ೬೪ ||
ಎನಲತಿ ರೋಷದಿ ಶಲ್ಯ | ನಿ | ನ್ನನು ರಣದಲಿ ನಿರ್ಮಾಲ್ಯ |
ವನು ಮಾಡದೆ ಬಿಡೆನೆಂದು | ಎಸೆ | ದನು ಘನ ಶಕ್ತಿಯೊಳಂದು || ೬೫ ||
ಭಾಮಿನಿ
ಕ್ಷಿತಿಜ ಕೇಳ್ ವಾತಾಶನನು ಹರಿ |
ರಥನುರುಬೆಗೆದೆ ಬಿರಿವವೋಲ್ ದಳ |
ಪತಿಯ ಶಕ್ತಿಯ ಹತಿಗೆ ಧರ್ಮಜನೊರಗೆ ಮೂರ್ಛೆಯಲಿ ||
ಖತಿಯೊಳಾ ಕಲಿಭೀಮ ಮಾದ್ರಾ |
ಪತಿಯ ಸಮ್ಮುಖಕಾಗಿ ನಡೆತಂ |
ದತಿರಥನನಡಹಾಯ್ವುತೆಂದನು ಸಿಂಹನಾದದಲಿ || ೬೬ ||
ರಾಗ ಮಾರವಿ ಏಕತಾಳ
ಫಡ ಫಡ ಭಂಡ ನೃಪಾಧಮ ನಿಲು ಮುಂ | ದಡಿಯಿಡದಿರು ನಿನ್ನ ||
ಪಡೆಪತಿಯೆನ್ನುವ ಗರುವವ ನಿಲಿಸುವೆ | ಕೊಡು ಬವರವ ಮುನ್ನ || ೬೭ ||
ಎನುತಿಟ್ಟಣಿಸುತ ಭಾರಿ ಗದೆಯೊಳಂ | ದಣಕಿಸಿ ಶಲ್ಯನನು |
ಮಣಿರಥವನು ಪುಡಿಗೆಯ್ಯಲು ಪ್ರತಿರಥ | ವನು ಸಾರ್ದುಸಿರಿದನು || ೬೮ ||
ಭಳಿರೆ ಸಮೀರ ಕುಮಾರಕ ರಣ ಕೈ | ಚಳಕದಿ ಬಲ್ಲಿದನು ||
ಕೊಳುಗುಳದೊಳಗೆ ಸಮರ್ಥನೆನುತ ಕೋಲ್ | ಮಳೆಯನು ಸುರಿಸಿದನು || ೬೯ ||
ಆ ಸಮಯದಿ ಯಮಸುತನೆಚ್ಚರ್ತತಿ | ರೋಷದಿ ಹುಂಕರಿಸಿ ||
ಬಾ ಸಮ್ಮುಖಕೆನುತೆಚ್ಚನು ಶಲ್ಯನ | ದೂಷಿಸಿ ಭೀಕರಿಸಿ || ೭೦ ||
ಎಚ್ಚ ಮಹಾಸ್ತ್ರವು ಮಾದ್ರಾಧಿಪನುರ | ಕುಚ್ಚಲು ರಣದೊಳಗೆ |
ಎಚ್ಚರಿಕೆಯ ತೊರೆದೊರಗಲು ಸೇನೆಯು | ಬೆಚ್ಚಿತು ಕ್ಷಣದೊಳಗೆ || ೭೧ ||
Leave A Comment