ಭಾಮಿನಿ (ಅರ್ಧ)
ಚಂಡವಿಕ್ರಮ ನುಡಿದ ನುಡಿಯನು |
ಪುಂಡರಿಕಲೋಚನೆಯು ಕೇಳುತ |
ಕೊಂಡವನು ರಚಿಸದಿರು ಸಾಕೆಂದಳು ನಯೋಕ್ತಿಯಲಿ ||
ರಾಗ ಘಂಟಾರವ ಝಂಪೆತಾಳ
ಜಾತ ಕೇಳೈ ನಿನ್ನ ತಾತನೆಬ್ಬಿಸುವುದಕೆ |
ಪಾತಾಳಗೊಳಗಿಹುದು | ಮತ್ತೆ ಸಂಜೀವ ||೪೨೩||
ದಕ್ಷಮುಖಭಂಗನೊಳು | ತಕ್ಷಕಾದ್ಯರು ಕೂಡಿ |
ರಕ್ಷಣೆಗೆ ಕೊಂಡಿಹರು | ಪಕ್ಷೀಂದ್ರಭಯದಿ ||೪೨೪||
ನರರಿಗಸದಳವಲ್ಲಿ | ನಾಗಲೋಕವನಿಳಿದು |
ತರುವ ವೀರರ ಕಾಣೆ | ತೀವ್ರ ಫಣಿಯೊಡನೆ ||೪೨೫||
ಭಾಮಿನಿ (ಅರ್ಧ)
ಮಾತೆಯಂಘ್ರಿಗೆ ನಮಿಸಿ ಚಿಂತೆಗ |
ಳೇತಕಂಜದಿರೆಂದು ಕರ್ಣಜ |
ಪಾರ್ಥರನು ಜೀವಿಸುವೆ ನೇಮವ ಪಾಲಿಸೆನಗೆಂದ ||
ರಾಗ ಸೌರಾಷ್ಟ್ರ ಝಂಪೆತಾಳ
ಲೇಸು ಕಾರ್ಯವ ತೋರಿದೆ | ಎನಗವ್ವ | ಈ ಸುಗುಣನೆಬ್ಬಿಸುವೆ ||
ಈಶನಾ ಪಣೆಯೊಳಿರಲಿ | ಸಂಜೀವ | ವಾಸವನ ಮರೆಯೊಳಿರಲಿ ||೪೨೬||
ತಾರದಿರೆ ನಿನ್ನ ಸುತನೆ | ನಾನಲ್ಲ | ಸರಸಿಜೋದ್ಭವ ತಡೆವನೆ ||
ಒರಗಿಸುವೆ ನಿಮಿಷದೊಳಗೆ | ಈಯದಿರೆ | ಉರಿಸುವೆನು ನಾಗಕುಲವ ||೪೨೭||
ತಮ್ಮ ಕರ್ಣಜಪಾರ್ಥರ | ಹರಿಸುತರ | ನೊಮ್ಮೆಯೆಬ್ಬಿಸದಿರ್ದರೆ ||
ಧರ್ಮಜನ ಯಜ್ಞ ತಡೆದ | ಭವವೆನಗೆ | ಬ್ರಹ್ಮನಿರುವನಕ ಬಿಡದು ||೪೨೮||
ಭಾಮಿನಿ
ಮಗನೆ ಮರುಳಾಗದಿರು ನಿನ್ನನು |
ಬಗೆವನಲ್ಲಾ ಶೇಷರಾಜನು |
ಬಗೆಯು ಬೇರುಂಟೆಂದು ಕರೆದಳು ಪುಂಡರಿಕಫಣಿಯ ||
ಸುಗುಣೆ ಶಿರ ಕೆಡದಂತೆ ಕಚ್ಚಿಸಿ |
ಮಿಗೆಯು ಶೇಷಂಗಿತ್ತು ಗುರುತವ |
ವಿಗಡ ಸಂಜೀವನವ ತಾರೆಂದಟ್ಟಿದಳು ತರಳೆ ||೪೨೯||
ರಾಗ ಮಾರವಿ ಆದಿತಾಳ
ಲೂಪಿಯೊಳಪ್ಪಣೆಗೊಂಡು | ಉರಗ ತಾ ನಡೆತಂದು |
ಅಪರಿಮಿತ ಸಭೆಯಲ್ಲಿ | ಉರಗೇಂದ್ರನೊಡನೆ ||೪೩೦||
ಕಂಡೊಡೆಯಗೆರಗಿ | ಪುಂಡರೀಕ ಗುರುತದ |
ಕುಂಡಲವ ಮುಂದಿಟ್ಟು ಉ | ದ್ದಂಡದೊಳ್ ನುಡಿದ ||೪೩೧||
ದೇವ ಪಾಂಡವರು ಕೌ | ರವರ ಮರ್ದಿಸಿ ಯಜ್ಞ |
ಭಾವ ಕೃಷ್ಣನನುಜ್ಞೆ | ಯಿಂದ ರಚಿಸಲು ||೪೩೨||
ತುರಗದೊಡನರ್ಜುನನು | ತಿರುಗಿ ಬಭ್ರುವಾಹನನ |
ಪುರದಿ ವಾಜಿಯ ಬಿಟ್ಟು | ರಣದೊಳು ಮಡಿದ ||೪೩೩||
ನಿನ್ನ ಮಗಳು ಲೂಪಿ | ತನ್ನ ದುಃಖದಿಂದಲಿ |
ಎನ್ನನಟ್ಟಿದಳ್ ಸಂಜೀ | ವನವ ತಾರೆನುತ ||೪೩೪||
ಭಾಮಿನಿ
ಖಂಡಪರಶುವು ಮೂರು ಲೋಕದ |
ಗಂಡನರ್ಜುನನಿಳೆಯ ಕಪ್ಪವ |
ಕೊಂಡು ವಾಜಿಯ ಬಿಟ್ಟು ಮಡಿದನೆ ಬಭ್ರುವಹನನಲಿ ||
ದಂಡಧರ ಹಿರಿಯಯ್ಯ ಮೃತ್ಯುವ |
ಕಂಡು ನಮಿಸುವ ನಮಗೆ ರಾಜ್ಯವ |
ಕೊಂಡು ಕೊಡಿಸಿದ ಕೃಷ್ಣಸಾರಥಿ ವಜ್ರಕವಚವಲಾ ||೪೩೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳಿದನು ಕೌಂತೆಯನ ಭಂಗವ | ತಾಳಿದನು ಕುಂಡಲವ ದುಃಖವ |
ಭಾಳ ಸಭೆಯಲಿ ಶೇಷ ನುಡಿದನು | ವ್ಯಾಳಕುಲಕೆ ||೪೩೬||
ನೋಡಿದಿರೆ ಧೃತರಾಷ್ಟ್ರ ಮುಖ್ಯರು | ಬೇಡುವರು ಸಂಜೀವಮಣಿಯನು |
ನೀಡುವೆನು ನಮ್ಮಳಿಯ ಜೀವನ | ಮಾಡುವುದಕೆ ||೪೩೭||
ವಚನ
ಇಂತೆಂದು ಶೇಷರಾಜನು ನುಡಿಯಲಾಗಿ, ಧೃತರಾಷ್ಟ್ರ ಉರಗನು ಏನೆಂದನು ಎಂದರೆ –
ರಾಗ ದೇಶಿ ಏಕತಾಳ
ಆಗದಾಗದು ಫಣಿಪಾಲ | ಸಾಧನವನಿ |
ತ್ತಾಗಲೆ ಬಂತೆಮಗೆ ಕಾಲ ||
ಈಗ ಸಂಜೀವನ ನರರಿಗೆ ಕೊಟ್ಟರೆ |
ನಾಗವೈರಿಯು ಕೊಲುವಾಗ ಬರುವುದೆ || ಆಗದಾಗದು || ಪ ||
ಮರೆವು ಮನುಜರಿಗೆ ಗಾಢ | ತಂದ ವಸ್ತುವ |
ಮರಳೀಯಬೇಕೆಂದು ನೋಡಾ ||
ಸರಸಿಜಭವ ಫಣೆಯಲಿ ಬರೆದ ಲಿಪಿ |
ಬರೆಸಿ ಮುನಿಗಳಂತೆ ಸ್ಥಿರದಿ ಬಾಳುವರೆ || ಆಗದಾಗದು ||೪೩೮||
ನರಲೋಕದವರಲ್ಪಾಯುಷ್ಯದವರು | ಸಜ್ಜನರಂತೆ |
ಪರರುಪಕಾರವನರಿಯರು ||
ಧುರದೊಳಳಿದ ಲೂಪಿವರನ ರಕ್ಷಿಸದೀಗ |
ನರನ ಸಾರಥಿ ಮುರಹರನು ಬಿಡುವನೆ || ಆಗದಾಗದು ||೪೩೯||
ಭಾಮಿನಿ
ದುಷ್ಟ ಧೃತರಾಷ್ಟ್ರುರಗಮಂತ್ರಿಗೆ |
ವಿಷ್ಣುರೂಪನನಂತ ಕೋಪಿಸಿ |
ಕಷ್ಟವನು ಗಳಿಸುತ್ತ ಕೆಡಿಸುವಿರುರಗಲೋಕವನು ||
ನಷ್ಟವಾಗದು ನರನ ಪ್ರಾಣವು |
ಕೃಷ್ಣರಾಯನ ಕಯ್ಯೊಳಿಹುದೆಲೆ |
ಭ್ರಷ್ಟ ಹೋಗೆಂದೆನುತ ಕರೆದನು ಪುಂಡರಿಕಫಣಿಯ ||೪೪೦||
ರಾಗ ತೋಡಿ ಏಕತಾಳ
ಪುಂಡರೀಕ ನೀ ಬಾರಯ್ಯ | ಪೋಗಿ ಲೂಪಿಗೆ |
ಕುಂಡಲಂಗಳ ತೋರಯ್ಯ ||
ಕಂಡೆಯ ನಮ್ಮುಕ್ತಿಗಳ ಕೇಳದಿರುವ |
ಪುಂಡು ಫಣಿಗಳು ಮಣಿಯ ಕೊಡದಿಹ ಪಾಡು |
ನೀ ನೋಡು | ಬಹ ಕೇಡು | ಲೂಪಿಯೊಳ್ ಮಾತಾಡು ||೪೪೧||
ಒಪ್ಪಿ ಉರಗ ನಡೆದ | ರಣದೊಳು ಕಾ |
ದಿಪ್ಪ ಲೂಪಿಯೊಳ್ ನುಡಿದ ||
ಒಪ್ಪುಗೊಡದಿರುವ ಫಣಿಗಳ ಸಂಗತಿ |
ತಪ್ಪದೆ ಬಭ್ರುವಾಹನನು ಲಾಲಿಸಿ ಕೇಳಿ |
ಫಣಿಚಾಳಿ | ರೋಷವ ತಾಳಿ | ಕೆಟ್ಟಿತೀಹಾಳಿ ||೪೪೨||
ಭಾಮಿನಿ
ಕುಂಡಲದ ಕುರುಹವನು ಕಾಣುತ |
ಪುಂಡು ಫಣಿಗಳಿಗ್ಹಾಸ್ಯವಾಯಿತೆ |
ಹಿಂಡಿ ಕಳೆವೆನು ಕರ್ಣದೋಲೆಯ ನಾಗಹೆಂಡಿರನು ||
ಕೆಂಡವನು ಕಾರುತ್ತರೋಷದಿ |
ಚಂಡವಿಕ್ರಮಿ ಪಾರ್ಥಿ ಧನು ಕೈ |
ಗೊಂಡು ಚಾಪವನೆರಗಿ ಜನನಿಗೆ ಪೊರಟನಾ ಕ್ಷಣಕೆ ||೪೪೪||
ರಾಗ ನೀಲಾಂಬರಿ ಅಷ್ಟತಾಳ
ತಾಯಿಗೊಂದಿಸಿ ಬಿಲ್ಲ ಪಿಡಿದನು | ಅಶ್ವ |
ಲಾಯಕೆರಗಿ ಮೀಸೆಗಡಿದನು ||೪೪೫||
ಮೂರು ಲೋಕದ ವೀರ ಮಡಿದರೆ | ಮಣಿ |
ಕ್ರೂರ ಫಣಿಗಳು ಕೊಡದೆ ತಡೆದರೆ ||೪೪೬||
ನಾಗನಗರವನು ಸುಟ್ಟು ತರಿಸುವೆ | ರತ್ನ |
ಈಗ ಪಾರ್ಥನ ಪ್ರಾಣ ಬರಿಸುವೆ ||೪೪೭||
ಎಣಿಸದಿರವ್ವ ಬಹಳ ಪರಿಯನು | ಶೇಷ |
ಮಣಿ ಸಹಿತಲೆ ಕೊಂಡು ಬರುವೆನು ||೪೪೮||
ಬಿಡದೆ ಸೈನ್ಯವ ಪಾರ್ಥಿ ನಡೆಸಿದ | ಬೇಗ |
ಸಡಗರದಲಿ ಮಾರ್ಗ ಬಿಡಿಸಿದ ||೪೪೯||
ಭಾಮಿನಿ
ಭೂಮಿಯನು ಹೊಡೆದಬ್ಬರಕೆ ದಿಗು |
ಸ್ತೋಮ ಬೆದರಿತು ದಿಗ್ಗಜಾವಳಿ |
ತಾಮಸಕೆಯೆದೆ ಬಿರಿದು ಕೂರ್ಮನು ಬಳಲಿ ಬಸವಳಿದ ||
ಆ ಮಹಾನಾಗರಿಕ ಕುಲ ನಿ |
ಸ್ಸೀಮ ಫಲುಗುಣಿಯೆಚ್ಚು ತರಿದನು |
ಭೀಮಬಲ ಶೇಷಂಗೆ ದೂರಿತು ಅಖಿಳ ಫಣಿನಿಕರ ||೪೫೦||
ದ್ವಿಪದಿ
ಜೀಯ ಜಗದೊಳಗಿಲ್ಲ ಜೋಡು ಅರ್ಜುನಿಗೆ |
ಕಾಯಲಾಗದೆ ನಮ್ಮ ಕಣೆಯ ಪ್ರಜ್ವಲಕೆ ||೪೫೧||
ಧೃತರಾಷ್ಟ್ರ ಮರೆಗೊಂಡು ಧುರದಿ ಬಸವಳಿದು |
ಅತಿಶಯದ ಫಣಿಸೇನೆ ಹೇರಾಳ ಅಳಿದು ||೪೫೨||
ಗರಳ ಸುರಿವುತ ನಾವು ಗೆಲಿದವನ ಪಡೆಯ |
ಸರಳನೊಡ್ಡಿನೊಳಿಪ್ಪತ್ತೊಂದು ಸಾವಿರವ ||೪೫೩||
ನರನ ಮಗ ಕೋಪಿಸುತ ನಾಗಸಂತತಿಯ |
ಸರಳಿನಲಿ ಸಂಹರಿಸಿ ತುಂಬಿದನು ಕ್ಷಿತಿಯ ||೪೫೪||
ಸಿತವಾಹನಗೆ ಸಂಜೀವನವ ಕೊಡಿರೆನುತ ||
ಪ್ರೀತಿಯಹುದೆಮಗಿನ್ನು ಕೃಷ್ಣನೊಡನೆನುತ ||೪೫೫||
ಆ ಮಣಿಯು ಪಾರ್ಥನಿಗೆ ಮಾಧವನು ಇರಲು |
ಈ ಮಣಿಯ ನೆವದಿಂದ ನಮ್ಮ ಕೊಲುತಿರಲು ||೪೫೬||
ಎಂದ ಮಾತಿಗೆ ಅಹಿಪನಂಜದಿರಿಯೆನುತ |
ಮಂದಮತಿ ಧೃತರಾಷ್ಟ್ರನೊಡನೆ ಕೋಪಿಸುತ ||೪೫೭||
ಧರ್ಮ ಉಪಕಾರಗಳ ತಡೆದ ದುಷ್ಟರಿಗೆ |
ಕರ್ಮವುಣಿಸದೆ ಬಿಡದು ಕೇಳಿರೈ ಕಡೆಗೆ ||೪೫೮||
ಭಾಮಿನಿ (ಅರ್ಧ)
ಫಣಿಪನಹಿಗಳ ಬಯ್ದು ಸಂಜೀ |
ವನ ಸುವಸ್ತುವ ಕೊಂಡು ಮೊಮ್ಮನ |
ಗುಣ ಪರಾಕ್ರಮ ಪೊಗಳಿ ಪೊರಟನು ಆ ರಣಾಂಗಣಕೆ ||
ರಾಗ ಶಂಕರಾಭರಣ ಏಕತಾಳ
ಶೇಷನೆದ್ದು ಸಿಂಗರಿಸಿ | ಆ ಸುರತ್ನವನ್ನು ಕೊಂಡು |
ಸಾಸಿರ ಚಕ್ರಂಗಳಿಂದ ಬಿಜಯಂಗೆಯ್ದನು ||೪೫೯||
ಬಭ್ರುವಾಹನನ್ನು ನೋಡಿ | ಬಹಳ ಪ್ರೀತಿಯನ್ನು ಮಾಡಿ |
ಇಬ್ಬರೊಂದಾಗಿ ಪೋದರಿಳೆಯ ಭೂಮಿಗೆ ||೪೬೦||
ಭಾಮಿನಿ
ಚಿತ್ತವಿಸು ಭೂಪಾಲ ಸಕಲ ಸು |
ವಸ್ತು ಮಣಿಸಹಿತಾಗಿ ಶೇಷನು |
ಪೌತ್ರನನು ಕರೆಕೊಂಡು ಕೃಷ್ಣಾರ್ಜುನರ ದರುಶನಕೆ ||
ಅತ್ತಲಾ ಧೃತರಾಷ್ಟ್ರ ಉರಗನು |
ಕೌಂತೆಯರ ಶಿರವನ್ನು ಮಾಯದಿ |
ಉತ್ತರಾಬ್ಧಿಯೊಳಡಗಿ ಸಿಟ್ಟನು ನಾಚಿ ಖತಿಗೊಂಡು ||೪೬೧||
ರಾಗ ನೀಲಾಂಬರಿ ತ್ರಿವುಡೆತಾಳ
ಶಿರವ ಕಾಣದೆ ಚಿತ್ರಾಂಗದೆ ತಾನು | ಲೂಪಿ |
ಯರಸಿದಳೆಂಟು ದಿಕ್ಕುಗಳನ್ನು ||
ಮಗನ ದೂರುವುದಿನ್ನು ಸುಮ್ಮನೆ | ಅಕ್ಕ |
ಪಗೆಯವರೊಯ್ದರೊ ಘಮ್ಮನೆ ||೪೬೨||
ಏನು ವಿಘ್ನಗಳೆಂದು ತಿಳಿಯದು | ತಂಗಿ |
ಮುತ್ತೈದೆತನ ನಮಗುಳಿಯದು ||
ತಾಳಬಲ್ಲೆವೆ ಈ ವೈಧವ್ಯವ | ತಂಗಿ |
ಕೇಳೀಗ ಜೀವವುಳಿಯದು ಕಾಣೆ ||೪೬೩||
ಕ್ಲೇಶವ ಬಿಡುತ ಮನದೊಳಗಂದು | ಶೇಷ |
ಬಂದನೊ ಇಲ್ಲವೊ ತಿಳಿಯದು |
ಕೇಶವ ತಾ ಬಾರನೆನುತಲಿ | ಶೇಷ |
ಬಭ್ರುವಾಹನಸಹಿತಲೆ ಬಂದು ||೪೬೪||
ಭಾಮಿನಿ (ಅರ್ಧ)
ನಾಗರಾಜನ ಕಾಣುತಬಲೆಯ |
ರಾಗ ಕ್ಲೇಶವ ಬಿಟ್ಟು ನಡೆದರು |
ಬಾಗಿ ಪೊಡವಂಟಾತ್ಮಜನ ಬಿಗಿದಪ್ಪಿ ಶೋಕದಲಿ ||
ರಾಗ ಆನಂದಭೈರವಿ ಏಕತಾಳ
ಬಂದನೆ | ಶೇಷ | ಬಂದನೆ ||
ಬಂದನೆ ಶೇಷಾಂಘ್ರಿಗೆರಗಿ | ನಂದನೆಯರು ದುಃಖದಿ || ಬಂದನೆ || ಪ ||
ತಂದೆ ಲಾಲಿಸಯ್ಯ ಪಾರ್ಥನ | ಕಂದ ಕೈ ಮಾಡಿದ ಶಿರವು |
ತೋರದು | ಕಯ್ಗೆ | ಸೇರದು ||೪೬೫||
ಮುತ್ತಿ ಕಾದಿದ್ದೆವು ಪೆಣನ | ಸುತ್ತಲೂ ದೀಪಗಳಿಂದ |
ಒಯ್ದರು | ಬಾಯ | ಹೊಯ್ದರು ||೪೬೬||
ಇಷ್ಟಾದ ಮೇಲೆಮ್ಮ ರಮಣ | ನೊಟ್ಟಿಗೆ ಸುಡುವಂತೆ ಕಾಯ |
ಬಿಡುವೆವು | ಅಗ್ನಿಗೆ | ಕೊಡುವೆವು ||೪೬೭||
ಭಾಮಿನಿ (ಅರ್ಧ)
ಭಂಗವನು ಕಾಣುತ್ತಲಾ ಚಿ |
ತ್ರಾಂಗದೆಯ ಪಿಡಿದೆತ್ತಿ ಲೂಪಿಯ |
ಕಂಗಳುದಕವನೊರಸಿ ತಾನಿಂತೆಂದ ಫಣಿರಾಜಾ ||
ರಾಗ ಮಧ್ಯಮಾವತಿ ತ್ರಿವುಡೆತಾಳ
ಮಗಳೆ ಮರುಗುವುದೇಕೆ ಸುಮ್ಮನೆ |
ಪಗೆಯವರು ಕೊಂಡೊಯ್ದರಾಯಿತೆ |
ನಗಧರನು ತರಿಸಿತ್ತು ನಿನ್ನಯ |
ಮೊಗಕೆ ಮಂಗಳ ಮಾಳ್ಪನು ||೪೬೮||
ಮನುಜನೇ ಮಾರುತಿ ಸಹೋದರ |
ವನಜನೇತ್ರನ ಪ್ರತಿಶುಭಾಕರ ||
ದನುಜಹರನೀಕ್ಷಿಸದೆ ತನ್ನಯ |
ಅನುಜೆಯಾಳ್ದನ ಬಿಡುವನೆ ||೪೬೯||
ಬಾಲೆ ನಿನ್ನಾತ್ಮಜನು ಬಿಡುವನೆ |
ಕಾಲನಂದದಿ ತರಿದು ಫಣಿಗಳ ||
ಸೋಲಿಸೆಮ್ಮಯ ಮಣಿಯ ಕೊಂಡನು |
ಲೋಲನಾಭನ ಕರುಣದಿ ||೪೭೦||
ಭಾಮಿನಿ
ಇಂತು ನುಡಿದುದ ಕೇಳಿ ಫಲುಗುಣಿ |
ಯಂತರಂಗವ ತಿಳಿದು ಕರ್ಣಜ |
ಕೌಂತೆಯರ ಜೀವಿಸುವೆನೀ ಕ್ಷಣಕೆಂದು ಗರ್ಜಿಸಿದ ||
ಕುಂತಿ ಗಜಪುರದೊಳಗೆ ಕಂಡಳು |
ಕೌಂತೆಯರು ಮಡಿದಂತೆ ಸ್ವಪ್ನವ |
ನಂತಕಾತ್ಮಜ ಕೃಷ್ಣ ಭೀಮಾದಿಗಳಿಗುಸಿರಿದಳು ||೪೭೧||
ರಾಗ ಕಲ್ಯಾಣಿ ಅಷ್ಟತಾಳ
ಕಂಡೆ ಕನಸಿನೊಳು | ಶ್ರೀಕೃಷ್ಣನೊಲಿದು | ಖಂಡಿತವನು ಪೇಳು ||
ದಂಡ ಧರನ ದೇಶಕಾಗಿ ಕತ್ತೆಯನೇರಿ |
ಖಂಡಲಾತ್ಮಜ ಪೀತವಸನವನುಟ್ಟುದ || ಕಂಡೆ || ಪ ||
ದಾಸಣಕುಸುಮಮಾಲೆ | ಕಂಠದೊಳಿಟ್ಟು |
ಪೂಸಿ ಗೋಮಯ ಮೆಯ್ಯೊಳು ||
ಸೂಸಿ ತೈಲವ ಪಣೆಯೊಳಗೆ ಮೃತ್ತಿಕೆ ಬೊಟ್ಟು |
ವೇಷವ ಮರೆಸಿದ ಫಲುಗುಣನು || ಕಂಡೆ ||೪೭೨||
ಒಡಲುರಿವುತಿದೆನ್ನಯ ಮೆಯ್ಯ | ಮಮಕಾರದಿ |
ಸುಡುವುತಿದ್ಯಾತಕಯ್ಯ ||
ಮಡದಿ ಸುಭದ್ರೆ ಕಂಗಳ ನೀರಲಪಜಯ |
ಕಡಲಶಯನ ಕೇಳುತಲಂಜದಿರೆಂದ || ಕಂಡೆ ||೪೭೩||
ಭಾಮಿನಿ (ಅರ್ಧ)
ಇಂತು ಸ್ವಪ್ನದ ಬಗೆಯನೆಲ್ಲವ |
ಕುಂತಿ ಪೇಳುತಲಿರಲು ಧರ್ಮಜ |
ಚಿಂತೆಯಿಂದಲಿಯಳುತ ನುಡಿದನು ಮತ್ತೆ ಮುರಹರಗೆ ||
Leave A Comment