ರಾಗ ಬೇಗಡೆ ಆದಿತಾಳ
ಹಿಂದೆ ಕಾಶೀಪತಿಯ ಸುತೆಯರನು | ತಂದಿರ್ಪನನುಜಗೆ |
ಅಂದಗೆಡಿಸುತ ಸಕಲ ಭೂಪರನು ||
ಮಂದಮತಿಯೊಳಗಂಬೆಯೆನ್ನನು | ಚಂದದಿಂವರಿಸೆನಲು ಪೇಳಿದೆ |
ತಂದೆಗೋಸುಗ ಬ್ರಹ್ಮಚರ್ಯವ | ಪೊಂದಿಹೆನು ನಾನೆನಲು ಸುದತಿಯು || ೪೬೭ ||
ಮನವನಿರಿಸಿಹೆ ಸಾಲ್ವನೊಳು ನಾನು | ತೆರಳುವೆನೆಂದು |
ವನಿತೆ ಪೊರಡಲು ಕಳುಹಿಕೊಟ್ಟಹೆನು ||
ದನುಜನುಲ್ಲಂಘಿಸಲು ಸುದತಿಯು | ಘನತೆಯೊಳು ವರಿಸೆಂದು ಕಾಡಲು |
ಮನದ ನಿಶ್ಚಯ ಬಿಡೆನು ವ್ರತವೆನೆ | ವನಕೆ ಪೋದಳು ಶಪಥಗೈಯ್ಯುತ || ೪೬೮ ||
ದುರುಳೆ ತನ್ನಭಿಮತವ ನಡೆಸೆಂದು | ಭೃಗುಜಾತನಾಗಿಹ |
ಪರಶುರಾಮಗೆ ನಮಿಸಿ ಬಲವಂದು ||
ಕರೆದು ತಂದಳು ಧುರಕೆ ಮಹಿಮನ | ನಿರತವೀ ಕ್ಷೇತ್ರದಲಿ ಹಳಚುತ |
ತೆರಳಿತಿಪ್ಪತ್ತೊಂದು ದಿವಸವು | ಗುರುವರೇಣ್ಯನ ಗೆಲಿದೆನಂತ್ಯದಿ ||೪೬೯||
ಭಾಮಿನಿ
ಎರಡನೆಯ ಜನ್ಮದಲಿ ನಿನ್ನಯ |
ಕೊರಳ ಕೊಯ್ಯುವೆನೆನುತ ದುರುಳೆಯು |
ಭರದಿ ಪಾವಕನೊಳಗೆ ತನ್ನಯ ತನುವ ನೀಗಿದಳು ||
ತರುಣಿಯೇ ಬಂದೀಗ ದ್ರುಪದನ |
ತರಳೆಯಾಗುದ್ಭವಿಸಿ ಕಡೆಯೊಳು |
ಧರಿಸಿದಳು ವಿಧಿ ವಶದಿ ಪುಂಸತ್ವವನು ಕಡು ದುರುಳೆ || ೪೭೦ ||
ರಾಗ ಕೇದರಾಗೌಳ ಅಷ್ಟತಾಳ
ಅವಸಾನಕಾಲದಿಚ್ಛೆಗಳಂತೆ ಪ್ರಾಣಿಗೆ | ಭವಗಳು ನಿಶ್ಚಯವು |
ಯುವತಿಯೆನಗೆ ಮೃತ್ಯುವಾಗಿ ಶಿಖಂಡಿಯು | ಬವರಕೆ ನಿಂದಿಹಳು || ೪೭೧ ||
ತರುಣಿಯರಿದಿರಸ್ತ್ರ ಪೂಡೆನೆಂಬುವ ಭಾಷೆ | ಧರಿಸಿಹೆನದರಿಂದಲಿ ||
ಶರವ ಪೂಡೆನು ದೇಹ ತ್ಯಜಿಸಿ ಪೋಪೆನು ಸುರ | ಪುರಕೆಂದು ನೆನೆಯೆ ಭೀಷ್ಮ || ೪೭೨ ||
ಅನಿತರೊಳಂಬರದೊಳಗಷ್ಟವಸುಗಳು | ಘನತರ ಘೋಷದಿಂದ ||
ಮನದಿ ನಿಶ್ಚಯಿಸಿದಂದದಿ ಬೇಗ ಬಾರೆಂದು | ಸುರಿದರು ಸುಮಮಳೆಯ || ೪೭೩ ||
ಹರುಷದಿಂದಂತರಿಕ್ಷವ ನೋಡಿ ಭೀಷ್ಮನು | ಸುರರಿಷ್ಟದಂತೆ ನಾನು ||
ತೆರಳುವುದೊಳ್ಳಿತು ಹರಿಯ ಮೂರ್ತಿಯನೊಮ್ಮೆ | ಪರಿಕಿಪೆನೆಂದೆನುತ || ೪೭೪ ||
ರಾಗ ಜಂಜೂಟಿ ಅಷ್ಟತಾಳ
ಮುರಹರ ಕುಳಿತಿಹನಿಲ್ಲಿ | ಪುರಂ | ದರನಾತ್ಮಭವರಥದಲ್ಲಿ ||
ಕೊರಳ ಕೌಸ್ತುಭ ವೈಜಯಂತಿವಿರಾಜಿತ |
ವರಚತುರ್ಭುಜಶಂಖಚಕ್ರಾಂ || ಬುರುಹಗದೆ ಸರಸಿರುಲೋಚನ || ೪೭೫ ||
ಕಸ್ತೂರಿತಿಲಕಲಲಾಟ | ಭಕ್ತ | ಚಿತ್ತಾಪಹರಣನೋಟ |
ಮುಕ್ತಿದಾಯಕ ದೇವ ಧನ್ಯನಾದೆನು ಪಾರ್ಥ |
ನಸ್ತ್ರದೊಳಗೆನಗಿತ್ತು ಮುನ್ನಿನ | ಕೃತ್ಯದೊಳು ನೆಲೆಗೊಳಿಸು ಬೇಗನೆ || ೪೭೬ ||
ಶರಧಿಶಯನ ದೇವದೇವ | ಪರ | ತರವಸ್ತು ಕಾರುಣ್ಯಭಾವ |
ಶರಣರಂತರ್ಯಾಮಿ ಭವರೋಗಭಂಜನ |
ಪರಮಮಹಿಮನೆ ಜಯ ಜಯೆನ್ನುತ | ಸುರನದೀಸುತನೆಂದ ಪಾರ್ಥಗೆ || ೪೭೭ ||
ಭಾಮಿನಿ
ತರುಣ ಕೇಳೈ ಪಾರ್ಥ ನಿನ್ನಯ |
ಹಿರಿಯ ತಾತನ ಮೇಲೆ ಕರುಣಗ |
ಳಿರಲು ಶರಪುಷ್ಪಕದೊಳಂಬರಗತಿಗೆ ಕಳುಹೀಗ ||
ನೆರೆದ ರಾಯರ ಮುಂದೆ ಭೀಷ್ಮನ |
ತರಿವೆ ನಾನೆಂದನುತ ಪೂರ್ವದೊ |
ಳೊರೆದ ಭಾಷೆಗಳೆಲ್ಲಿ ಕ್ಷಾತ್ರಿಯೊಳಧಮನಾಗದಿರು || ೪೭೮ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಂದ ಮಾತನು ಕೇಳಿ ಮರುಕವ | ಕೊಂಡು ಪಾರ್ಥನು ಶಿರವ ತಗ್ಗಿಸಿ |
ನಿಂದಿರಲು ಮುರಹರನು ಪೇಳಿದ | ನೆಲವೊ ಮರುಳೆ || ೪೭೯ ||
ಮರುಕವಿರೆ ನಿನಗೀಗ ಭೀಷ್ಮನೊ | ಳರುಹು ಪಿಡಿದಿಹ ಚಕ್ರಮುಖದಲಿ |
ಕೊರಳನರಿದೀ ಕ್ಷಣವೆ ಕುರುಕುಲ | ದಹಿಪೆ ನೋಡು || ೪೮೦ ||
ಸ್ಥಿರಗೊಳಿಪೆ ಧರ್ಮಜಗೆ ಧರಣಿಯ | ತೆರಳುವೆನು ಶಿರವೆತ್ತಿ ನಿನ್ನನು |
ಪರಿಕಿಸೆನು ಗೆಯ್ದಿರ್ದ ಶಪಥಕೆ | ಹಿಂದೆ ಸರಿದೆ || ೪೮೧ ||
ಮೂರು ಲೋಕದಿ ಕೀರ್ತಿ ಪಡೆದಿಹ | ಧೀರನೆಂಬುವ ಬಿರುದದೆಲ್ಲಿದೆ |
ಧಾರಿಣೀಶರು ನಗರೆ ನಾಚಿಕೆ | ಬಾರದೇಕೊ || ೪೮೨ ||
ರಾಗ ಘಂಟಾರವ ಏಕತಾಳ
ಎಂದ ಮಾತನು ಕೇಳುತ್ತ ಪಾರ್ಥನು |
ಅಂಧಕಾರಿಯ ತೆರದಿ ಖತಿಯೊಳು | ಸಂಧಿಸಿದ ಕೂರ್ಗಣೆಯನು || ೪೮೩ ||
ಭರದಿ ಭೀಷ್ಮನು ಪರಶುವನೆಗಹುತ್ತ |
ತಿರುಹಿ ಬರೆ ಖಂಡಿಸಿದ ಪಾರ್ಥನು | ಪರಮ ರೋಷಾವೇಶದಿ || ೪೮೪ ||
ಕೆರಳಿ ತೋಮರ ಭಿಂಡಿವಾಲಗಳನ್ನು |
ಸುರನದೀಸುತನೆತ್ತಿ ಪೊಯ್ಯುವ | ಭರಕೆ ಮುರಿದನು ಪಾರ್ಥನು || ೪೮೫ ||
ಕೆರಳುತಕ್ಷಯಶರವಭಿಮಂತ್ರಿಸಿ |
ನರನೆಸೆಯೆ ಗಾಂಗೇಯನಂಗವು | ಶರದ ಪಂಜರವಾಯಿತು || ೪೮೬ ||
ಬಂದನಾಗ ಶಿಖಂಡಿಯು ಭೀಷ್ಮನ |
ಮುಂದೆ ನಿಲ್ಲುತ ಶರವನೆಸೆಯಲು | ನೊಂದು ವ್ಯಾಕುಲದಿಂದಲಿ || ೪೮೭ ||
ಭಾಮಿನಿ
ಸುರತರಂಗಿಣಿತನಯ ಯೋಚಿಸಿ |
ತರುಣಿಜನ್ಮ ಶಿಖಂಡಿಯಸ್ತ್ರಗ |
ಳೆರಗಿದಾ ಕ್ಷಣ ತೊಡುವೆ ಶರಸಂನ್ಯಾಸವೆಂದೆನುತ ||
ವಿರಚಿಸಿದ ಶಪಥಂಗಳಂದದಿ |
ನಿರತವೊದಗಿತು ಪಾರ್ಥನಸ್ತ್ರವು |
ಕೊರೆವುತಿದೆ ರೋಮಾಂಚನಂಗಳನಿರೆನು ಧರಣಿಯಲಿ || ೪೮೮ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಂದು ನಿಶ್ಚಯಿಸುತ್ತ ಭೀಷ್ಮನು | ಸ್ಯಂದನದಿ ಶಸ್ತ್ರಗಳ ಧರಿಸದೆ |
ನಿಂದನದ ಕಾಣುತ್ತ ಕುರುಪತಿ | ದ್ರೋಣಕೃಪರು || ೪೮೯ ||
ಕೆರಳಿ ವಮ್ಮಡಿಯಾಗಿ ಪ್ರಾರ್ಥನ | ಪರಿಘದೊಳು ಮಾರ್ಮಲೆಯುತಯ್ತರೆ |
ಶರಮಯವ ತೂರಿದನು ಭೋರ್ಗರೆ | ದಾ ಕಿರೀಟಿ || ೪೯೦ ||
ನಿಲ್ಲಲಾರೆವೆನುತ್ತ ದಿಗ್ದೆಸೆ | ಗೆಲ್ಲ ಧನುಶರ ಬಿಸುಡುತೋಡಲು |
ಮೆಲ್ಲನಸ್ತಾಚಲಕೆ ಭಾಸ್ಕರ | ತೆರಳಲಾಗ || ೪೯೧ ||
ಅರಿತು ತನ್ನೊಳು ಭೀಷ್ಮನೀ ದಿನ | ಶರಶಯನಕುತ್ತರೆಯ ಫಲ್ಗುಣಿ |
ಪರಮಮಾರ್ಗಶಿರಾಚ್ಛ ಸಪ್ತಮಿ | ಯೊಳ್ಳಿತೆನುತ || ೪೯೨ ||
ನರನ ಶರ ಸರ್ವಾಂಗ ಜರ್ಝರಿ | ಕರಿಸುತಿದೆ ಹರಿಯೆಂದು ಧರೆಯೊಳು |
ಶಿರವು ಪ್ರಾಙ್ಮುಖವಾಗಿ ಭೀಷ್ಮನು | ಪವಡಿಸಿದನು || ೪೯೩ ||
ವಾರ್ಧಕ
ಸುರಿವ ನೇತ್ರೋದಕದಿ ಗುರುಕೃಪಾಶ್ವತ್ಥಾಮ |
ಕುರುರಾಯ ದುಶ್ಯಾಸನಾದಿಗಳ್ ಮೊರೆಯಿಡುತ |
ತೆರಳಿಸುತೆ ಸಕಲ ಸೇನೆಯನೆಲ್ಲ ಬಿಡದಿಗಂ ಧನುಶರಾವಳಿ ಬಿಸುಡುತ ||
ಶರತಲ್ಪದೆಡೆಗಾಗಿ ಬರಲಿತ್ತ ಯಮಜಾತ |
ವರವೃಕೋದರ ಪಾರ್ಥ ಮಾದ್ರೇಯರಾ ಕ್ಷಣದಿ |
ಮರುಗುತಾನೀಕಮಂ ಕಳುಹಿ ಪಿಂದಕೆ ಭೀಷ್ಮನಿರುವಲ್ಲಿಗಯ್ತಂದರು || ೪೯೪ ||
ಭಾಮಿನಿ
ಸುರಿವ ಕಣ್ಣೀರಿನಲಿ ಧರ್ಮಜ |
ನೆರಗಿ ತಾತನೆ ಎಮ್ಮ ಸಲಹುವ |
ಕರುಣನಿಧಿ ನಿನ್ನಗಲಿ ನಾವಿನ್ನೆಂತು ಬಾಳುವೆವು ||
ಒರೆಯುವವರಾರೆಮಗೆ ಬುದ್ಧಿಯ |
ತೊರೆದು ಪೋಪೆಯ ಪ್ರಾಜ್ಞ ಗುಣನಿಧಿ |
ಧರಣಿಯಾಸೆಗೆ ನಿನ್ನ ನೀಗಿದೆವಕಟ ನಾವೆಂದ || ೪೯೫ ||
ರಾಗ ಕಾಂಭೋಜಿ ಝಂಪೆತಾಳ
ಮೊರೆಯ ಕೇಳುತಲಾಗ | ಸುರನದಿಜ ಪೇಳಿದನು |
ತೊರೆವುದಿಲ್ಲೀ ದೇಹ ದಕ್ಷಿಣಾಯನದಿ |
ಬರಲು ಪೂಷನುದೀಚಿ ಸಮಯವನು ನಿರುಕಿಸುತ |
ಶರತಲ್ಪದೊಳಗಿರುವೆ ಮರುಗದಿರಿ ನೀವು || ೪೯೬ ||
ಬನ್ನಿರೈ ಪಾಂಡವರು ಬನ್ನಿರೀ ಕಡೆಗೀಗ |
ಬನ್ನಿರೈ ದ್ರೋಣ ಕೃಪ ಶಲ್ಯಾದಿ ಭಟರು |
ಬನ್ನಿರೈ ಗಾಂಧಾರಿತನಯರೆಲ್ಲರು ನೀವು |
ಬನ್ನಿ ನಿಮ್ಮನು ನೋಳ್ಪ ತವಕವಿಹುದೆನಗೆ || ೪೯೭ ||
ದೂರದಲಿ ನಿಂತಿರುವುದೇಕೆ ಬಾರೆಲೊ ಕರ್ಣ |
ಶೂರಾಗ್ರಗಣ್ಯಬಾರಿತ್ತ ಸುಕುಮಾರ |
ವೀರ ಪಾರ್ಥನ ಶರವು ತಲ್ಪವಾಯಿತು ಎನಗೆ |
ಧಾರಿಣಿಗೆ ಜೋಲುತಿದೆ ಶಿರಕೆ ದಿಂಬಿಲ್ಲ || ೪೯೮ ||
ಕುರುಪತಿಯೆ ರಚಿಸಯ್ಯ ತಲೆದಿಂಬ ದಯದಿಂದ |
ಶಿರವೆತ್ತಿ ನಿಮ್ಮನುರೆ ಪರಿಕಿಪೆನು ನಾನು ||
ಒರೆಯಲಂಜುವೆ ನಿನಗೆ ಧುರದಿ ಜಯಪೊಂದಿಸದೆ |
ಒರಗಿದೆನು ನರನಸ್ತ್ರಪರ್ಯಂಕದೊಳಗೆ || ೪೯೯ ||
ರಾಗ ರೇಗುಪ್ತಿ ಅಷ್ಟತಾಳ
ಕುರುಕುಲಾಧಿಪನದ ಕೇಳಿ | ಪದ | ಕೆರಗಿ ಮನದಿ ಶೋಕತಾಳಿ |
ತರಿಸಿದ ಪಟ್ಟೆಪೀತಾಂಬರದೊಳು ಗೆಯ್ದ | ಸುರುಚಿರವಾದ ದಿಂಬುಗಳನ್ನು ವೇಗದಿ || ೫೦೦ ||
ನೋಡಿ ಗಾಂಗೇಯನಾ ಕ್ಷಣದಿ | ಬೇಡ | ಬೇಡಿದು ಯೋಗ್ಯವೆ ಧುರದಿ |
ಮಾಡಿರುತಿಹ ವೀರಶಯನಕ್ಕೆ ಸರಿಯಲ್ಲ | ಗಾಢದಿ ಫಲುಗುಣ ರಚಿಸು ದಿಂಬುಗಳೀಗ || ೫೦೧ ||
ಎನೆ ಹಸಾದಗಳೆನ್ನುತಾಗ | ತನ್ನ | ಧನುವೆತ್ತಿ ಶರಗಳ ಬೇಗ |
ಕ್ಷಣದೊಳು ಧರಣಿಗೆ ಪೂಡಿ ದಿಂಬನುಗೆಯ್ದು | ವಿನಯದಿ ಭೀಷ್ಮನ ಶಿರವೆತ್ತಿ ನಿಲಿಸಿದ || ೫೦೨ ||
ಪರಿತೋಷವಾಯಿತೆಂದೆನುತ | ಗಂಗಾ | ತರಳ ನಿಂದಿಹರ ನೋಡುತ್ತ ||
ನರನಸ್ತ್ರದುರಿಯಿಂದಲೊಣಗಿತು ಜಿಹ್ವೆಯು | ಕುರುರಾಯ ತರಿಸೀಯಬೇಕು ಗಂಗೋದಕ || ೫೦೩ ||
ರಾಗ ಶಂಕರಾಭರಣ ತ್ರಿವುಡೆತಾಳ
ತರಿಸಿದನು ಎಳೆನೀರು ಶರ್ಕರೆ | ಮಿಶ್ರದಮೃತದ ಪಾನಕ ||
ಭರಿತ ಕ್ಷೀರದ ಭಾಂಡಭಾಂಡವ | ನಿರುಕಿಸುತ ನದಿತನಯನು || ೫೦೪ ||
ಬೇಡ ಬೇಡೆನಗಿಂಥ ಭೋಗವು | ರೂಢಿಪಾಲರಿಗ್ಯೋಗ್ಯವು ||
ಮಾಡಿಹೆನು ಪ್ರಾಯೋಪವೇಶವ | ಮೂಢತನಗಳಿದೇತಕೊ || ೫೦೫ ||
ತರಳ ತರಿಸೈ ಪಾರ್ಥ ವೇಗದಿ | ಭರಿತ ತೃಷೆಯಾಗಿರ್ಪುದು ||
ತ್ವರಿತವೆನೆ ವಂದಿಸುತಲೇರಿದ | ನಿರದೆ ಅನಲನ ರಥವನು || ೫೦೬ ||
ಹೂಡಿದನು ಗಾಂಡೀವಕಸ್ತ್ರವ | ನೋಡಿಭುವನಕೆ ಸೆಳೆಯುತ ||
ಗಾಢದಿಂ ಬಿಡಲಾಗ ಗಂಗೆಯು | ಓಡಿ ಬಂದಳು ಮೇಲಕೆ || ೫೦೭ ||
ವದನವನು ತೆರೆದಾಗ ಭೀಷ್ಮನು | ಮುದದಿ ಪಾನವ ಗೆಯ್ಯುತ ||
ಸದಮಲಾತ್ಮಕ ತೃಪ್ತಿಪಡುತಲೆ | ತಿರುಗಿ ನೋಡಿದ ಕುರುಪನ || ೫೦೮ ||
ರಾಗ ಸಾಂಗತ್ಯ ರೂಪಕತಾಳ
ಪರಿಕಿಸು ಕೌರವ ನರನ ಸಾಹಸಗಳ | ನರಿತು ಮೂರ್ಖತೆಯಾಕೊ ನಿನಗೆ ||
ಧುರದ ಬುದ್ಧಿಯು ಬೇಡ ಸಾರಿದೆ ಸುರನರ | ಗರುಡರೊಳಿವಗೆಣೆಗಾಣೆ || ೫೦೯ ||
ನಿಮ್ಮ ದ್ವೇಷವ ಬಿಟ್ಟು ಸಮ್ಮತಿಯೊಳು ರಾಜ್ಯ | ಧರ್ಮಜಂಗರ್ಧವನಿತ್ತು ||
ಒಮ್ಮನದೊಳಗಿರೆ ಕುರುರಾಜ್ಯಕೀರ್ತಿಯು | ಬ್ರಹ್ಮಾಂಡ ತುಂಬುವುದಯ್ಯ || ೫೧೦ ||
ದುರುಳರ ಬೋಧೆಯೊಳಿರಿಸುತ್ತ ಚಿತ್ತವ | ಕುರುಕುಲೇಂದ್ರನೆ ಕೆಡಬೇಡ ||
ಹರಿಯು ಪಾಂಡವಪಕ್ಷಕಿಹನು ಸಾರಿದೆನೀಗ | ಧುರ ಬೇಡ ತ್ಯಜಿಸೆನ್ನ ಮುಂದೆ || ೫೧೧ ||
ಕ್ಷಿತಿಯ ಬಿಟ್ಟಯ್ದಿದರಲ್ಲೆನ್ನ ಮನಕಿದು | ವ್ಯಥೆಯಾಪುದದಕೆ ಜೀವನದಿ ||
ಸತತ ನಾನಿರಲಿಂದೆ ನಿಮ್ಮ ವೈರಗಳನ್ನು | ಹಿತದಿ ಬಿಟ್ಟರೆ ಲೇಸು ಮನಕೆ || ೫೧೨ ||
ಭಾಮಿನಿ
ಎಷ್ಟು ಪೇಳಿದರಾನು ಪೊಡವಿಯ |
ಕೊಟ್ಟು ಸಂಗರ ಬಿಡೆನು ಜಗದೊಳು |
ದುಷ್ಟನೆಂದೆನಲೆನಗೆ ಚಿಂತೆಗಳಿಲ್ಲ ಕಾಡದಿರು ||
ತೊಟ್ಟ ಕ್ಷತ್ರಿಯ ಛಲವ ತ್ಯಜಿಸೆನು |
ಸೃಷ್ಟಿಯೊಳು ಋಣವಿರಲು ಬಾಳುವೆ |
ಬಿಟ್ಟರಸುವನು ಪಡೆವೆ ವೀರಸ್ವರ್ಗಸಂಪದವ || ೫೧೩ ||
ರಾಗ ಕೇದಾರಗೌಳ ಅಷ್ಟತಾಳ
ಕುರುರಾಯ ನಿನ್ನೊಳಗೇನೆಂಬೆ ಮನಬಂದ | ತೆರನ ಮಾಡುವುದೊಳ್ಳಿತು ||
ಅರಿಗಳೊಡನೆ ಸತ್ಯಯುದ್ಧ ಗೆಯ್ದರೆ ಮನ | ಹರುಷಗೊಂಬುದು ಎನಗೆ || ೫೧೪ ||
ವಂದಿಸುತಾಗ ಸುಯೋಧನನೆಂದನು | ಮುಂದೆನ್ನ ಸೇನೆಯನ್ನು ||
ಚಂದದಿ ರಕ್ಷಿಸಿಕೊಂಬರ್ ಯಾರಿಗೆ ಪಟ್ಟ | ವಿಂದು ನಾನೆಸಗುವುದು || ೫೧೫ ||
ಸುರನದಿಸುತನಾಗಲೆಂದನು ದ್ರೋಣಗೆ | ಹರುಷದಿ ಪಟ್ಟಗಟ್ಟು ||
ನರನಿದಿರೊಳು ಕಾದಲರಿವಾತನವನೆನೆ | ಚರಣಕೆ ನಮಿಸಿದನು || ೫೧೬ ||
ದೂರ ಪೋಗಿ ಸ್ವಲ್ಪ ನೀವೆಂದು ಕಳುಹುತ್ತ | ಸೂರಿಯಾತ್ಮಜನ ನೋಡಿ ||
ಪಾರಮಾರ್ಥದಿ ಭೀಷ್ಮನಪ್ಪಿ ವ್ಯಾಮೋಹವ | ಬೀರುತಿಂತೆಂದನಾಗ || ೫೧೭ ||
ರಾಗ ರೇಗುಪ್ತಿ ಅಷ್ಟತಾಳ
ಮಾತ ಕೇಳೆಲೊ ಕರ್ಣ ನೀನು | ಕುಂತಿ | ಜಾತ ಮಾರ್ತಾಂಡಸಂಭವನು ||
ಖ್ಯಾತನಾಗಿಹೆ ಕೃಷ್ಣಪಾರ್ಥರ ಸರಿಸಮ | ಪ್ರೀತಿಯನೆಸಗಲುಬೇಕು ಪೇಳುವೆನೊಂದ || ೫೧೮ ||
ಅನುಜಾತ ಕೌಂತೇಯರನ್ನು | ನೀನು | ಘನತೆಯೊಳ್ ಕೂಡಿ ಕೀರ್ತಿಯನು ||
ದಿನದಿನಕಭಿವೃದ್ಧಿಗೊಳಿಸು ಕೌರವರೊಳು | ಸನುಮತವಲ್ಲ ಸೌಹಾರ್ದದೊಳಿಹುದಿನ್ನು || ೫೧೯ ||
ನುಡಿ ಕೇಳಿ ಕರ್ಣನಾ ಕ್ಷಣದಿ | ಭೀಷ್ಮ | ನಡಿಗೆರಗುತ ಪೇಳ್ದ ಮುದದಿ ||
ಪೊಡವಿಪ ಕೌರವನೊಳು ಜೀವ ಪೊರೆದಿಹೆ | ಬಿಡೆ ನಿಂದ್ಯವಾಪುದು ಕಡೆಗೆ ದುರ್ಗತಿಯಹುದು || ೫೨೦ ||
ಹರಿಸಹಾಯದಿ ಕೌಂತೇಯರಿಗೆ | ಜಯ | ವಿರುವುದಲ್ಲದೆ ಮಿಕ್ಕಾದರಿಗೆ ||
ಸರುವಥಾ ಗೆಲುವಿಲ್ಲ ಹುಟ್ಟಿದವಗೆ ಮೃತ್ಯು | ಬರದೆ ನಿಲ್ಲವುವುದುಂಟೆ ತೊರೆಯೆ ಕೌರವನನ್ನು || ೫೨೧ ||
ಪುಟ್ಟಿದೆ ಕ್ಷತ್ರಿಯಾನ್ವಯದಿ | ಛಲ | ವಿಟ್ಟು ಕಾದಲು ದಿವಂಗತದಿ |
ಶ್ರೇಷ್ಠವಾಗಿಹ ವೀರ ಸ್ವರ್ಗ ಕೈಗೊಂಬೆನು | ಥಟ್ಟನೀ ಕ್ಷಣ ಧುರಕಪ್ಪಣೆ ಕೊಡುವುದು || ೫೨೨ ||
ವಾರ್ಧಕ
ತರಣಿಸುತ ಕೇಳ್ ನೀನು ವ್ಯರ್ಥ ಕಲಹವನಿಕ್ಕಿ |
ಧುರವೆಸಗುವಂದಮಂ ಗೆಯ್ದುದಕೆ ಕೋಪಿಸಿದೆ |
ನಿರತ ಸತ್ಯದಿ ಕಾದಿ ಸತ್ಕೀರ್ತಿ ಪಡೆಯೆನುತ ಕಳುಹಿಯಮಜನೊಳೆಂದನು ||
ತರಳ ಕೇಳೈ ನಿನಗೆ ಪರಮಾತ್ಮನನುಗ್ರಹದಿ |
ಧುರದಿ ಜಯವೊದಗುವುದು ವ್ಯಥಿಸದಿರು ಪೋಗೀಗ |
ಬರುವ ಮಾಘದ ಶುಕ್ಲವಷ್ಟಮಿಯೊಳೀ ತನುವನುಳಿದುಪೋಗುವೆ ಸ್ವರ್ಗಕೆ || ೫೨೩ ||
ರಾಗ ಕಾಂಭೋಜಿ ಝಂಪೆತಾಳ
ಧರಣಿಪಟ್ಟವನೆಸಗಿ ಕೊಂಡೆನ್ನ ಬಳಿಗಾಗ | ಬರೆ ಧರ್ಮಬೋಧೆಗಳ ತಿಳಿದುದನು ಪೇಳ್ವೆ ||
ಮುರಹರನು ಕಾಯುವನು ಪೋಗು ಧರ್ಮಜಯೆನುತ | ತೆರಳಿಸಿದ ಸಕಲರನು ಹರಿಯ ನೆನೆನೆನೆದು || ೫೨೪||
ಪರಮತೇಜಃ ಪುಂಜಮೂರುತಿಯ ನಾಸಾಗ್ರ | ವಿರಿಸಿ ನಿರ್ಮಲಮನದೊಳುಪನಿಷತ್ತುಗಳ ||
ಹರುಷದಿಂದಲೆ ಪಠಿಸುತಿರ್ದ ಶರತಲ್ಪದಲಿ | ಕುರುರಾಯ ಮುಂತಾಗಿ ಶಿಬಿರಸಾರಿದರು || ೫೨೫ ||
ವಾರ್ಧಕ
ವೀರಪಾಂಡವರೆಲ್ಲ ಜಯನಿನಾದದ ವಾದ್ಯ |
ಭೋರಿಡುತಲಯ್ತಂದು ಶಿಬಿರಮಂ ಪೊಕ್ಕಾಗ |
ವಾರಿಜಾಕ್ಷಗೆ ನಮಿಸಿ ನಿನ್ನ ಕಾರುಣ್ಯದೊಳ್ ಧೀರ ಭೀಷ್ಮನ ಗೆಲಿದೆವು ||
ಭಾರತೇಯರ ಪೊರೆವ ದ್ವಾರಕಾವಾಸಿ ಹರಿ |
ಶ್ರೀ ರಮಣ ಜಯ ಜಯಾ ಜಯತೆಂದು ಸೌಖ್ಯದೊಳ್ |
ಶೂರ ಪಾಂಡವರಿತ್ತ ಬಂಧುಬಾಂಧವರೊಡನೆ ಶಿಬಿರದೊಳ್ ನೆಲಸಿರ್ದರು || ೫೨೬ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತು ಭಾರತಕಥೆಯ ಮುನಿಪತಿ | ಸಂತಸದಿ ಜನಮೇಜಯಾಖ್ಯಗೆ |
ಪಿಂತೆಯುಸಿರಿದ ತೆರದಿ ಕೃತಿಗಳ | ಗೆಯ್ದೆ ನಾನು || ೫೨೭ ||
ಪರಿಸಮಾಪ್ತಿಯು ಸೌಮ್ಯವತ್ಸರ | ಶರಧಿಸಖಸುತವಾರ ಶ್ರಾವಣ |
ಪರಮ ಶುಕ್ಲತೃತೀಯವೇಕಾ | ದಶಿಯ ಕೃತಿಯು || ೫೨೮ ||
ಪರಮತುಂಗಾತೀರ ಪನಸಾ | ಪುರದ ನಾಗೇಂದ್ರಾಖ್ಯತನುಜನು |
ನರಹರಿಯ ನಾಮಕನು ಗೆಯ್ದಿಹ | ಕೃತಿಗಳಿದನು || ೫೨೯ ||
ಒಪ್ಪುತಪ್ಪುಗಳಿರಲು ವಿಬುಧರು | ಒಪ್ಪದಿಂದಲೆ ತಿದ್ದಿ ಮನಸಿನೊ |
ಳಿಪ್ಪ ದೋಷವ ಮಾಜದೆನ್ನೊಳು | ತಿಳುಹಿ ದಯದಿ || ೫೩೦ ||
ಮಂಗಲ
ರಾಗ ಢವಳಾರ ಆದಿತಾಳ
ಮಂಗಲಂ | ಜಯ | ಮಂಗಲಂ || ಪ ||
ಮಂಗಲ ಕಸ್ತುರಿ ತಿಲಕನಿಗೆ | ಜಯ
ಮಂಗಲ ವೇಣುವಿನೋದನಿಗೆ ||
ಮಂಗಲ ಅಘಹರಪುರದ ನಿವಾಸಿಗೆ |
ಮಂಗಲ ಶ್ರೀಗೋಪಾಲನಿಗೆ ||
ಮಂಗಲಂ | ಜಯ | ಮಂಗಲಂ || ೫೩೧ ||
ಮಂಗಲಂ ಮತ್ಸ್ಯವತಾರ ಕಚ್ಛಪಗೆ |
ಮಂಗಲ ವರಹ ಶ್ರೀನರಸಿಂಹಗೆ |
ಮಂಗಲ ವಾಮನ ಭಾರ್ಗವ ರಾಮಗೆ |
ಮಂಗಲ ಕೃಷ್ಣ ಬೌದ್ಧ ಕಲ್ಕ್ಯರಿಗೆ ||
ಮಂಗಲಂ | ಜಯ | ಮಂಗಲಂ || ೫೩೨ ||
ತರಳ ಪ್ರಹ್ಲಾದನ ಪೊರೆದವಗೆ |
ದುರುಳ ಹಿರಣ್ಯನ ತರಿದವಗೆ ||
ನರಕೇಸರಿಯವತಾರ ಸ್ತಂಭೋದ್ಭವ |
ಸಿರಿಯರಸಗೆ ಶ್ರೀನರಸಿಂಹಗೆ ||
ಮಂಗಲಂ | ಜಯ | ಮಂಗಲಂ || ೫೩೩ ||
ಯಕ್ಷಗಾನ ಭೀಷ್ಮಾರ್ಜುನರ ಕಾಳಗ ಮುಗಿದುದು
Leave A Comment