ವಾರ್ಧಕ
ವಜ್ರಮುಖನೆಂಬಸುರ ಬೀಳಲ್ಕೆ ದಾನವರ |
ಗರ್ಜನೆಯೊಳೈ ತಂದನಾ ಪ್ರಲಂಭಾಸುರಂ |
ಪ್ರಜ್ವಲಿಪ ಶಿಖಿಯಂತೆ ತೋರ್ದನಾ ಕಪಿ ಬಲದೊಳರ್ಧಚಂದ್ರಾಕೃತಿಯೊಳೂ ||
ನೊರ್ಜುಗಳಿಂಗಜುವುದೆ ಮಹಮೇರುಪರ್ವತವು |
ವಜ್ರದಿಂ ಸಲೆ ಜಯಿಸಲೊಲ್ಲದೊಡೆ ಮಿಕ್ಕದರೊ |
ಳು ಜಯವಾಗದೆಂದೆನುತನಿಲಜಂ ನಿಮಿಷದೊಳ್ ಕೊಂದನೇಳರ್ಬುದವನೂ ||209||
ಭಾಮಿನಿ
ಮಾರುತಿಯ ಕರಹತಿಗೆ ದುರುಳನ |
ಭೂರಿ ಸೇನೆಯು ಕಾಲನೂರನು |
ಸೇರೆ ರೋಷಾವೇಶದಿಂದ ಪ್ರಲಂಭಾಸುರನೂ ||
ಭಾರಿ ಶಸ್ತ್ರಾಸ್ತ್ರಗಳ ಧರಿಸುತ |
ಘೋರ ದೈತ್ಯನು ಸೆರಿ ಬರುತಿರೆ |
ಮಾರುತಿಯ ಕಂಡಾಗ ತ್ವರಿತದಲಸುರಗಿದಿರಾದಾ ||210||
ರಾಗ ನಾದನಾಮಕ್ರಿಯೆ ಅಷ್ಟತಾಳ
ಯಾತಕೆ ವಜ್ರನೆಂಬಸುರನಾ | ಕೊಂದ |
ಪಾತಕಿ ಸಿಕ್ಕಿದೆಅಡಗಿಹನಾ ||
ಭೀತಿಯಿಲ್ಲದೆ ಸೀಳ್ವೆನೂ | ಎಂದು |
ಖಾತಿಯೊಳ್ನುಡಿದಪ್ರಲಂಭನೂ ||211||
ಹತ್ತು ಸಾವಿರ ಶರಗಳನೂ | ಮದೋ |
ನ್ಮತ್ತಹನುಮನಿಗೆಸದನೂ ||
ಮತ್ಯುವ ನಿನಗೀವನೆಂದನೂ | ವಾಯು |
ಪುತ್ರ ಬಿಡದೆ ತಾ ಮುರಿದನೂ ||212||
ಉಂಡು ಸೊಕ್ಕಿದ ಖೂಳ ನಿನ್ನ | ಬಾರೆಲೊ |
ರುಂಡವೀಗಿಳಿಸುವೆ ಕೇಳೆಲೊ ||
ಭಂಡ ರಕ್ಕಸ ನಿನ್ನಸುವನೂ | ಯಮ |
ಕುಂಡಕೆ ನೂಕಿಸಿ ಬಿಡುವೆನೂ ||213||
ರಾಗ ಪಂತುವರಾಳಿ, ರೂಪತಾಳ
ಎಲವೂ ಖೂಳ ಸುರರೊಳ್ಕಾದಿ |
ಗೆಲುವ ಕಾಣದಂಜುತೋಡಿ |
ತಲೆಯೆ ಮರೆಸಿಕೊಂಡು ವಿತಳ | ದಲ್ಲಿ ಹರುಷದೀ ||
ನಿಳಯವನ್ನುರಚಿಸಿಕೊಂಡು |
ಬಳಗ ಸಹಿತಲಿರ್ದು ಮತ್ತೆ |
ಖಳನಿಗಾಗಿ ವ್ಯರ್ಥನಮಗೆ ತಲೆಯ ತೆರುವೆಯಾ ||214||
ಬರಿದೆ ಸಾಯಬೇಡವಿನ್ನು |
ಕರವ ಮುಗಿದು ರಾಮನೊಡನೆ |
ಚರಣಕೆರಗಿ ಬೇಡಿಕೊಳಲು | ಪೊರವ ಕರುಣದೀ ||
ಧುರಸಮರ್ಥನಾದಡೀಗ |
ಪರಮ ಶಸ್ತ್ರಗಳನುಪಿಡಿದು |
ಭರದಿ ರಥವನೇರಿ ಕೈಯ | ಗುರಿಯ ತೋರೆಲೋ ||215||
ಅಷ್ಟರೊಳಗೆ ಧನುಜ ರಥವ |
ಥಟ್ಟನೇರಿ ಪೊಯ್ಪುತಿರಲು |
ಸಿಟ್ಟಿನಿಂದಹನುಮ ರಥವ | ಮೆಟ್ಟಿ ಮುರಿದನೂ ||216||
ಆಗ ಪ್ರತಿ ರಥವನೇರ್ದು |
ತಾಗಲದರ ಮೆಟ್ಟಿ ಮುರಿಯೆ |
ಬೇಗದಿಂದ ತೇರನಡರೆ | ರೇಗಿ ಮುರಿದನೂ ||217||
ಭಾಮಿನಿ
ಕನಕರಥ ಹದಿನೆಂಟು ಸಾವಿರ |
ವನಿತುವಜಿಗಿಜಿಯಾಗುತಿರಲಾ |
ಅಕನ ಯೋಚಿಸುತಿರ್ದ ತನ್ನಯ ತನುವನುರೆ ಮರೆದೂ ||
ಧನುಜ ರಾವಣನನ್ನು ಮನದಲಿ |
ನೆನೆದು ಯೋಚಿಸುತಿರಲಿಕಾಕ್ಷಣ |
ಚಿನಿಮಯಾತ್ಮಕಭಕ್ತ ಪೊಯ್ದನು ಮರನ ಕೊಂಬೆಯಲೀ ||218||
ರಾಗ ಪಂಚಾಗತಿ, ಮಟ್ಟೆತಾಳ
ರಥವ ಮುರಿಯಲಾಗ ಧನುಜ |
ಪ್ರತಿರಥವನೇರಿಕೊಂಡು |
ಖತಿಯೊಳೆಚ್ಚನಾಗ ದಿವ್ಯ | ವಜ್ರದೇಹನಾ ||219||
ವಿತಳದೇಶದರಸ ನನುಜ |
ಪ್ರತಿಭಟಾಖ್ಯ ಬಂದೆನಿದಕೊ |
ಗತಿಯ ತೋರ್ಪೆನೆನುತಹನುಮ | ಖತಿಯೊಳ್ಪೊಯ್ದನೂ ||220||
ಭಳಿರೆ ಹನುಮ ಸಹಸವನ್ನು |
ತಿಳಿಯದಾದೆನುತ್ತ ಚಾಪ |
ವೆಳೆದು ಸುರಿದನಾಗ ಕೋಲ | ಮಳೆಯ ಗಜರುತಾ ||221||
ತಿಳಿಯದಾದೆನಹುದೊ ನಿನ್ನ |
ತಿಳಿವಪರಿಯ ನೋಡೆನ್ನುತ್ತ |
ಮುಳಿದು ಮುಷ್ಟಿಯಿಂದ ತಿವಿದ | ಖಳನಉದರವಾ ||222||
ಭೂರಿರೋಷದಿಂದ ಹನುಮ |
ಭಾರಿ ಮರದಿಪೊಡೆಯೆ ರಕುತ |
ಕಾರಿ ಬಿದ್ದನಾಗ ದನುಜ | ಧಾರುಣೀಯಲೀ ||223||
ಭಾಮಿನಿ
ಕುಶನೆ ಕೇಳಿನ್ನೇನ ಹೇಳುವೆ |
ನಸುರ ಮಾರೀಮುಖನ ಅನುಜರು |
ಅಸುವ ತೊಲಗಿದ ಬಳಿಕ ಚರರಿಗೆ ಬರೆದು ಸುಣ್ಣವನೂ ||
ಉಸುರಿ ನಿಮ್ಮಯ ದೊರೆಗೆ ಸಂಗರ |
ವೆಸಗದಿರೆ ಪಟ್ಟಣವನಗ್ನಿಯ |
ವಶಗೊಳಿಪೆನೆಂದಟ್ಟೆ ಮಾರೀಮುಖಗೆ ಪೇಳಿದರೂ ||224||
ರಾಗ ಸಾರಂಗ, ಆದಿತಾಳ
ಲಾಲೀಸು ಬಿನ್ನಪವಾ | ಸಂಗರದೊಳೀಗಾ
ಲಾಲೀಸು ಬಿನ್ನಪವಾ || ಪಲ್ಲವಿ ||
ದೊರೆಯೆ ಪೇಳುವುದಿನ್ನೇನೂ | ಸಂಗರದಿಂದ |
ಹರಣವುಳಿದು ಬಂದೇವೂ ||
ಅರಹುವುದೇನಿನ್ನು ವಜ್ರಮುಖನ ಕುಟ್ಟಿ |
ಭರದಿಪ್ರಲಂಭನ ಶಿರವನರಿದು ಮತ್ತೆ ||225||
ಪರಿಕಿಸಿ ನೀ ನೋಡಯ್ಯ | ನಮಗಾದ ಭಂಗ |
ವಿವರಿಸಲಳವವೆ ಜೀಯಾ ||
ಬರೆದು ಮೂಗಿಗೆಸುಣ್ಣ ತರುಚರನಟ್ಟಿದ |
ಧೊರೆಯೊಳಗರುಹಿ ನೀವೆನುತ ಪೇಳಿದ ಮತ್ತೆ ||226||
ಅರುಹಿ ನಿಮ್ಮೊಡೆಯನಿಗೆ | ಸಂಗರಕವ
ಬರಲಿಯೆಂದೆನುತ ಹೀಗೆ |
ಕರೆದು ಪೇಳಿದನೀಗ | ತೆರಳಾದೆ ಕುಳಿತರೆ |
ಪುರವನುರಿಪೆನೆಂದು ಭರದಿಂದಲಟ್ಟಿದಾ ||227||
ಭಾಮಿನಿ
ಚರರ ವಾಕ್ಯವ ಕೇಳ್ದು ಮನದೊಳು |
ಮರುಗಿ ತನ್ನಯ ತರಳರನುಜರ |
ಮರಣವನು ನೆನೆನೆನೆದು ಕರೆಸಿದ ವರ ಘಟೋದರಿಯಾ ||
ತರಳೆ ಕೇಳಿಂದಿನಲಿ ರಾಮನು |
ವರಕುಮಾರರ ಸಹಿತಲನುಜರ |
ಶಿರವರಿದು ಮೆರೆದಿಹನು ಹನನವ ಗೈದು ಬಾರೀಗಾ ||228||
ರಾಗ ಭೈರವಿ, ಝಂಪೆತಾಳ
ತಂದೆ ನೀವಿನಿತ್ಯಾಕೆ | ನೊಂದುಕೊಳುವಿರಿ ಮನದಿ |
ಬಂದ ಕಪಿಗಳನೆಲ್ಲ | ತಿಂದು ತೇಗುವೆನೂ ||229||
ಪತಿ ನಿನ್ನೆ ರಾಘವನ | ಖತಿಯೊಳಗೆ ಪಿಡಿತಂದು |
ಕ್ಷಿತಿಯೊಳಗೆ ಮತ್ತೋರ್ವ | ರರಿಯದಂದದಲೀ ||230||
ಮಡಗಿರಲು ದುರುದುಂಡಿ | ನುಡಿದು ಮರುತಜನೊಡನೆ |
ಕಡೆಗೆ ಕೊಲಿಸಿದಳೆನ್ನ | ಒಡಯನಿರುಳಿನಲೀ ||231||
ಒಡಗೊಂಡುರಾಘವನ | ನಡೆದ ಮರುತಜನಿಂಗೆ |
ಬಿಡುವೆನೇ ನಾನಾವನ | ಕೊಡು ತನಗೆ ನೇಮಾ ||232||
ರಾಘವನ ಸೇನೆಯನು | ಸಾಗಿಸುತ ಯಮಪುರಿಗೆ |
ಈಗ ಪಿಡಿತಹೆನೆನುತ | ಸಾಗಿದಳು ಬೇಗಾ ||233||
ವಾರ್ಧಕ
ಲವನೆ ಕೇಳ್ಬಳಿಕಲೈರಾವಣಾಖ್ಯನ ಸತಿಯು |
ತವಕದಲಿವರ ಘಟೋದರಿಯೆಂಬ ದಾನವಿಯು |
ಭುವನದಂತ್ಯದ ಸಿಡಿಲ ರವದಂತೆ ಘರ್ಜಿಸುತ ರಣಕಾಗಿ ನಡೆತಂದಳೂ ||
ದಿವಿಜರೆಲ್ಲರು ಭೀತಿಯಿಂದಲೋಡುತಲಿರಲು |
ಅವನಿಪತಿ ಶ್ರೀರಾಮನೆಂತು ಜಯಿಸುವೆನೆನುತ |
ಕವ ಕವಿಸುತಿರಲಿತ್ತ ದಾನವಿಯು ಹರಿತರಲ್ಪ್ರಳಯಭೈರವಿಯಂದದೀ ||234||
ಕಂದ
ರಕ್ಕಸಿ ಕಾಣುತ ಮನದೊಳ್ |
ಶಿಕ್ಕಿದರಿವರೆಂದೆನುತಲಿ ಬಲುತೋಷಿಸುತಂ ||
ಅಕ್ಕರದಲಿ ತಾ ರಾಮನ |
ತೆಕ್ಕರುಳನು ತಿನ್ನುವೆನೆನುತೈತರಲಾಗಂ ||235||
ರಾಗ ಭೈರವಿ ಏಕತಾಳ
ದೂರದಿ ಬಹ ರಕ್ಕಸಿಯಾ | ಕಪಿ |
ವೀರರು ಕಾಣುತಚ್ಚ ರಿಯಾ ||
ವಾರಿಜಭವನೆಂತಿವಳಾ | ಧರೆ |
ಭಾರಕೆ ರಚಿಸಿದನಿವಳಾ ||236||
ತೋರುವದೇನಿದು ಗಿರಿಯೊ | ಖಳ |
ನಾರಿಯ ಹದಯದ ಮೊಲೆಯೊ ||
ಸಾರುತ ಬೃಹಳು ದಾನವಳೂ | ಒಂದೇ |
ಬಾರಿಗೆ ಪಿಡಿದು ತಿನುವಳೂ ||237||
ಹಲುಗಳು ನೋಡಿದರಿವಳಾ | ಕಪಿ |
ಕುಲಗಳು ಒಂದೆ ಕಬಳಾ ||
ಬಲು ಕೋಪದಿಯಡ್ಡಗಟ್ಟಿ | ಬರೆ |
ಕಲಿ ಹನುಮನು ಭುಜ ತಟ್ಟಿ ||238||
ನಳ ನೀಲಾಂಗದರುಮರೂ | ಶತ |
ಬಲಿ ಗವಯನು ಜಾಂಬವರೂ ||
ಬಲುತರ ಕೋಪದಿ ಹನುಮಾ | ರಿರೆ |
ನಿಲಿಸಿದನಾ ರಾಮಾ ||239||
ಬಲುಹುಳ್ಳ ಭಟರೆ ಕೇಳಿ | ನಿಮ್ಮ |
ಬಲುಮೆಗೆ ಸರಿಯೆ ನಿವಾಳಿ ||
ಕೊಲುವುದುಚಿತವಿದಲ್ಲಾ | ಮಾನ |
ವಳಿದರೆ ಮತವಹುದಲ್ಲಾ ||240||
ಗಂಡನ ಕಳಕೊಂಡಿಹಳೂ | ಸ್ವಾಮಿ |
ದಿಂಡೆತನದಿ ಬಾಳುವಳೂ ||
ಕೊಂದಲ್ಲದೆ ಬಿಡೆ ನಾವೂ | ಇವ |
ಳಂದವ ನೋಡಿರಿ ನೀವೂ | ||241||
ಇಂದಿರೆಯರಸನೆ ರಾಮಾ | ಈಗ |
ಸಂದರೆ ಇವಳತಿ ಕ್ಷೇಮಾ ||
ಬಂದ ದಾರಿಯ ನಾ ತೋರಿ | ಇವಳ |
ಕೊಂದು ಹರಹುವೆವೀಸಾರಿ ||242||
ಅಟ್ಟುತನಿವಳನು ಭರದಿ | ಬೇಗ
ತಟ್ಟನೆ ಕೊಲುವೆನು ರಣದಿ ||
ಕುಟ್ಟುವೆ ತಲೆಯನು ಬೇಗಾ | ಎನೆ |
ಸೃಷ್ಟಿಪ ನಿಲಿಸಿದನಾಗ | ||243||
ವಚನ
ರಘುವರನಿಂತೆನೆ ಕೇಳ್ದು ಕಪಿವರರೆಲ್ಲರು ಸುಮ್ಮನೆ ಇರುತಿರಲಾಗಳ್ |
ಮುಗದೆ ದಾನವಿ ತಾನು ಜಗದುದರನೊಳ್ ವಾಚಿಸುತೀರ್ದಳದಂತನೆ ||243||
ರಾಗ ಘಂಟಾರವ, ಆದಿತಾಳ
ಯಾರೆಲೊ ಮನುಜ ನೀನೀಗಾ | ಬಂದ |
ವಾರೆತೆಯನು ಕೇಳಿಬಂದೆ ನಾನೀಗಾ || ಪಲ್ಲವಿ ||
ಜಾರಿ ಹೋಗಲು ಬಿಡೆನೀಗಾ | ನಿನ್ನ |
ಪಾರಣೆಯನು ಮಾಡಿಬಿಡುವೆ ನಾನೀಗಾ || ಅನುಪಲ್ಲವಿ ||
ನರಮಾಂಸ ವನು ನಾನು ಮೆಲ್ಲದೆ || ಆರು |
ವರುಷಗಳಾಯಿತು ತುಡುವೆದ್ದುನಲಿವೆ ||
ಕರದೊಯ್ವೆನಿವರನು ಕೊಲ್ಲದೆ | ನಾನು |
ಭರದಿ ಪಿಡಿದೆನೆಂದುತಂದೆಯೊಳೊರೆವೆ | ||244||
ಮನೆದೇವತೆಯ ಪೂಜೆಮಾಡ್ದು | ನಾನು |
ಘನವಾಗಿ ಮಾಂಸಗಳನು ಪಾಕ ಮಾಡ್ದು ||
ನೆನೆದ ಕಾರ್ಯವ ಕೈ ಗೊಡ್ದು | ಎನ್ನ |
ಮನದಿಷ್ಟವೀಯೆಂದು ಶಿರವ ಚಂದಾಡ್ದು | ||245||
ಹೊಟ್ಟೆ ಕರುಳನೆ ತೆಗೆವೆ | ತಾನು |
ತಟ್ಟನೆ ರಕ್ತದೋಕುಳಿಯ ಲೋಲಾಡ್ವೆ ||
ನೆಟ್ಟೆನೆ ಚರ್ಮವ ಸುಲಿವೆ | ಅದರ |
ಮೊಟ್ಟೆಯಂದದಿ ಯೆಣ್ಣೆಲಿಕ್ಕಿ ಹುರಿವೆ ||246||
ಎದೆಯ ಗುಂಡಿಗೆಯನ್ನೆ ಮುರಿದೂ | ಬಲು
ವಿಧದಿ ಪಾಕವ ಮಾಡಿ ನಲಿದೂ ||
ಮದುವೆಯಾದನ ಬೇಗ ನೆನದೂ | ಮತ್ತೇ |
ಚದುರತನದಿ ತಿಂಬೆ ನಲಿದೂ ||247||
ಎಂಟು ಭಾಗವ ಮಾಡಿ ಕೊರೆವೆ | ಮುಂದೆ |
ಶುಂಠಿ ಸಂಭಾರ ಸಾಸಿವೆಯನು ಬೆರೆವೆ ||
ನೆಂಟರಿಷ್ಟರನೆಲ್ಲ ಕರೆವೆ | ಇಂದು |
ಪಂಟಿಯ ಮಾಡಿ ಸಂತೋಷದಿಂದರುವೆ ||248||
ಎನುತ ರಕ್ಕಸಿ ಪೇಳಲಾಗಾ | ರಾಮಾ |
ಮನದಿ ಹಿಗ್ಗುತಶೂರ್ಪನಖಿ ಯೆಂದೀಗಾ ||
ಅನುಜ ಲಕ್ಷ್ಮಣ ನೋಡು ಬೇಗಾ | ನೀನು |
ಧನುವ ಪಿಡಿದು ಇತ್ತ ಬಾರೆಂದನಾಗಾ ||249||
ಭಾಮಿನಿ
ಇತ್ತ ನೋಡೈಯನುಜ ಮೊದಲಲಿ |
ಸತ್ತ ತಾಟಕಿಯಲ್ಲಲೇಯೆನು |
ತೆತ್ತಿ ಕರಗಳ ನೆಗಹಿ ನುಡಿದ ಸುಮಿತ್ರೆಯಾತ್ಮಜಗೇ ||
ಮತ್ತೆ ಬಂದಿದೆ ನಿನ್ನ ಭಾಗದ |
ಮತ್ಯು ನೋಡೈ ಅನುಜ ಇವಳನು |
ಸತ್ತು ಹೋಗದ ತೆರದಿ ನಾಸಿಕ ಕೆತ್ತಿಬಿಸುಡೆಂದಾ ||250||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಅಣ್ಣನಾಜ್ಞೆಯ ಕೇಳಿ ಲಕ್ಷ್ಮಣ |
ಕಣ್ಣಿನೊಳು ಕಿಡಿಸೂಸೆರೋಷದಿ |
ಮಣ್ಣುಗೂಡಿಸಿ ಬಿಡುವೆನಸುರರ | ಹೆಣ್ಣನೀಗಾ ||251||
ಕಣ್ಣಿಗಚ್ಚರಿಯಾದ ಕೌತುಕ |
ಯೆಣ್ಣಿಸುತ ಶಾಕಿನಿಗೆ ಔತಣ |
ಉಣ್ಣ ಬಡಿಸುವೆನಸುರ ಮಾಂಸದೊ | ಳಣ್ಣ ಕೇಳೂ ||252||
ಹುಣ್ಣಿಮೆಯ ಶಶಿಯಡಗಿ ಪೊದರು |
ಪುಣ್ಯವಾರುಧಿ ವಿತಳಕಿಳಿದರು |
ಗಣ್ಯವೇ ಎನಗೀಗ ನಿಮ್ಮಯ | ಪುಣ್ಯಬಲದೀ ||253||
ರಾಗ ನೀಲಾಂಬರಿ, ಮಟ್ಟೆತಾಳ
ಅನುಜ ಲಕ್ಷ್ಮಣಾ | ಮಮ ಮನೋಹರಾ |
ದನುಜ ಜನ್ಮದಾ | ತರುಣಿಯಲ್ಲವೆ ||254||
ಕೊಲಲು ಬಾರದು | ಕೊಂದರೀಗದು |
ಕುಲಕೆ ಕುಂದಯ್ಯ | ಮಾತ ಕೇಳಯ್ಯ ||255||
ರಾಗ ನೀಲಾಂಬರಿ, ರೂಪಕತಾಳ
ಅಣ್ಣ ರಾಘವಾ ಅಸುರೆ ತಾಟಕಿ |
ಗಣ್ಯವಿಲ್ಲದೆ ಅರಣ್ಯ ಮಧ್ಯದಿ ||
ಕಣ್ಣ ಹಬ್ಬವ ಮಾಡಿ ಮುನಿಗಳಾ |
ಮನ್ನಿಸುತ್ತಲೆ ಕೊಂದುದಿಲ್ಲವೆ ||256||
ಮುನಿಪ ಕೌಶಿಕ ಪೇಳ್ದ ಮಾತಿಗೆ |
ಘನಮದಾಂಧೆಯ ಕೊಂದೆನಾಕೆಯಾ |
ಇನಿತುಮಲ್ಲದೆ ಮಮ ಸ್ವತಂತ್ರದಿ |
ದನುಜೆಯಾಕೆಯಾ ಕೊಂದುದಿಲ್ಲಯ್ಯ ||257||
ಪುಣ್ಯವಾರುಧಿ ನಿಮ್ಮನುಜ್ಞೆಯೊಳ್ |
ಹೆಣ್ಣೂಮೂಳಿಯ ಕೊಲ್ವೆನೀಕ್ಷಣಾ ||
ಅಣ್ಣ ದೇವನೆ ಅಲಸವೇತಕೊ |
ಮಣ್ಣಿಗಿಕ್ಕುವೆ ಭ್ರಷ್ಟೆ ದನುಜೆಯಾ ||258||
ಘನಪರಾಕ್ರಮಿ ಕೇಳು ಅಸುರೆಯಾ |
ಘನಕುಚದ್ವಯಗಳನು ನಾಸೆಯಾ ||
ಕನಲಿ ಕೊಯ್ವದು ಉಳಿದ ಕಿವಿಗಳಾ |
ಎನಗೆ ಸನುಮತವೆನುತಪೇಳ್ದನೂ ||259||
ಭಾಮಿನಿ
ಅಗ್ರಜನ ನೇಮದಲಿ ಲಕ್ಷ್ಮಣ |
ಶೀಘ್ರದಲಿ ದಾನವಿಯ ಕುಚವಕ |
ರಾಗ್ರದಿಂ ಪಿಡಿದೆತ್ತಿ ಕೆತ್ತಿದನಾಗ ಕಿವಿಮೂಗಾ ||
ನಿಗ್ರಹಿಸಿ ಬಿಡಲಾಗ ದಾನವ |
ವರ್ಗದಲಿ ತಾ ಜನಿಸಿದಾದಡಿ |
ವರ್ಗೆ ಬಿಡುವೆನೆನುತ್ತ ಹಾಯ್ದಳು ತನ್ನ ಪಿತನೆಡಗೇ ||260||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಅತ್ತಲಾ ದಾನವಿಯು ಭಾಷೆಯ |
ಹೊತ್ತು ತೆರಳಲಿಕಾಗ ಲಕ್ಷ್ಮಣ |
ನಿತ್ತ ರಾಮನ ಚರಣದೆಡೆಗೈ | ವುತ್ತಲಾಗಾ ||261||
ಅತ್ಯಧಿಕ ಹರುಷದಲಿ ವರ ಕಪಿ |
ಮೊತ್ತ ಸಹಿತಾ ರಾಮನಿರುತಿರ |
ಲತ್ತ ದಾನವನಿರ್ದನಸುರರ | ಮೊತ್ತವೆರಸೀ ||262||
ಭಾಮಿನಿ
ಅತ್ತಲಾ ದನುಜೇಶ ಮುತ್ತಿನ |
ಸತ್ತಿಗೆಯ ನೆರಳಿನಲಿ ಖಳನೆಂ |
ಭತ್ತು ಸಾವಿರ ರಥಿಕರೊಡನುನ್ಮತ ಹರುಷದಲೀ ||
ಚಿತ್ತದಲಿ ರಾಘವನ ಜಯಿಸುವ |
ಯತ್ನವೇನೆಂದೆನುತಲಿರಲಾ |
ಸತ್ಯದಿಂದೈತಂದು ನುಡಿದಳು ಮತ್ಯುರೂಪಿನಲೀ ||263||
ಕಂದ
ಘೋರಾರ್ಭಟೆಯಿಂದೊದರು |
ತ್ತ ರಕ್ಕಸಿಯೈದೆ ವೇಗದಲಾತನ ಬಳಿಗಂ ||
ನೀರೆಯರೊಳ್ ತಾನಿವಳಾ |
ರರರೆನುತಚ್ಚರಿಯೋಳ್ಕರೆದು ತಾನುಸುರ್ದಂ ||264||
ರಾಗ ಭೈರವಿ, ಝಂಪೆತಾಳ
ಯಾರೆ ದಾನವಿ ನೀನು | ಘೋರಾಕಾರವಿದೇನು |
ಸೋರುವಾರುಣವೇನು | ಕಾರಣವಿದೇನೂ ||265||
ಅನುಮಾನವನು ಮಾಡ | ದೆನಗೆಸಾಂಗದಿ ಪೇಳು |
ಮಾನ ಸೂರೆಯಗೊಂಡು | ಶಿರವರಿವೆನವನಾ || ||266||
ಏನಹೇಳುವೆನಪ್ಪ | ಮಾನವರ ಹಿಡಿತಪ್ಪ |
ಜ್ಞಾನದಿಂದಿರುತ್ತಿಪ್ಪ | ದನುವರಿತರಪ್ಪಾ ||267||
ಹುಡುಗನೋರುವನಿಪ್ಪ | ನೋಡಿದರೆ ಕಂದರ್ಪ |
ಕಡೆಯಮಾತೇನಪ್ಪ | ಕುಚಕೊಯ್ದನಪ್ಪಾ ||268||
ಕಿವಿ ಮೂಗುಗಳಕೊಯ್ದ | ಬವಣೆಬಡಿಸುತ ಬೈದು |
ನಡೆ ನಡೆಯೆನುತೊಯ್ದು | ನುಡಿದು ಬಿಸುಸುಯ್ದೂ ||269||
ಉರಿ ಬಹಳ ಎನಗೀಗ | ಕರೆಸು ವೈದ್ಯನ ಬೇಗಾ |
ಬರಿಸು ಬೆಂಬಲಕೀಗ | ರಥಿಕರನು ಬೇಗಾ ||270||
ಹೆಂಗುಸಿವಳಿಗೆ ಮಾನ | ಭಂಗವೆಸಗಿದ ಮೇಲೆ |
ವಿಂಗಡದಿ ನಾವಿದ್ದು | ಇನ್ನೇನು ಸಫಲಾ ||271||
ನೋಡು ನಿನ್ನಯ ಕುವರ | ರೀರ್ವರಾ ಶಿರಗಳನು |
ಕೆಡದಿಹನ ನೋಡೆನುತ | ನೀಡಿದಳು ಬೇಗಾ ||272||
ಭಾಮಿನಿ
ಶಿರವ ಕಾಣುತ ಖಳನು ತನ್ನ ಕು |
ವರರ ಶಿರವಹುದೆನುತಲೀಕ್ಷಿಸಿ |
ಕರದಿ ನೇವರಿಸುತ್ತ ಮುದ್ದಿಸಿ ಮರುಗಿ ಬಿಸುಸುಯ್ದೂ ||
ತರಳರೀರ್ವರು ಮಡಿದರೇ ವರ |
ತರಳೆಯಭಿಮಾನವನು ಕಳೆದರೆ |
ಹರ ಹರಾಯೆನುತೊಡನೆ ಮೂರ್ಛಿಸುತಾಗಲೆಚ್ಚರ್ತೂ ||273||
Leave A Comment