ಭಾಮಿನಿ
ಎಂದೆನುತ ಭೂಮಿಪನು ಪೊರಮಡು |
ವಂದವನು ಕಾಣುತ್ತ ಸಚಿವನ |
ಕಂದ ಚಿತ್ರಧ್ವಜನು ತಿಳಿದಾ ನೃಪನ ಸಮ್ಮುಖಕೇ ||
ಬಂದು ಬಿನ್ನವಿಸಿದನು ಭೂಪಗೆ |
ತಂದೆ ಕೇಳ್ ನೀವೇಕೆ ಪೊರಟಿರಿ |
ಪಂದೆಭೂಪನ ಗೆಲುವಡೆನುತಿಂತೆಂದನವನೊಡನೇ ||೭೮||
ರಾಗ ಮಾರವಿ ಏಕತಾಳ
ನುಡಿಯನು ಲಾಲಿಸು ಪೊಡವಿಪ ನೀ ಪೊರ | ಮಡುವದಿದೇನ್ ಘನವೂ ||
ಬಡಕುರಿಯನು ಗೆಲುವಡೆ ಕೇಳ್ ಮೃಗಗಳ | ಒಡೆಯನು ತೆರಳುವದೇ ||೭೯||
ಅಪ್ಪಣೆಯಿತ್ತರೆ ಕ್ಷಿಪ್ರದಿ ಭೂಪನ | ನಪ್ಪಳಿಸುತ ಬಳಿಕಾ ||
ತಪ್ಪದೆ ಹಿಡಿದೆಳತಪ್ಪೆನು ನಿಮಿಷದಿ | ಬೊಪ್ಪನೆ ಇದು ದಿಟವೂ ||೮೦||
ಕುನ್ನಿ ನೃಪಾಲನ ಗಣ್ಯಕೆ ತರುವೆನೆ | ಮಣ್ಣಿಗೆ ಕೂಡಿಸುತಾ ||
ಕನ್ಯೆಯ ತರುವೆನು ಸಣ್ಣವನೆನುತಲಿ | ಖಿನ್ನತ್ವವನು ಬಿಡೂ ||೮೧||
ಭಾಮಿನಿ
ಕೇಳುತಲಿ ಮುದವಾಂತು ಭೂಪನು |
ವೀಳೆಯವ ತಾನಿತ್ತು ಕಳುಹಲು |
ಮೇಲೆ ಚಿತ್ರಧ್ವಜನು ಪೊರಟಾತಾಯಿಗಭಿನಮಿಸೀ |
ಪೇಳಿದನು ಕೇಳ್ಜನನಿಯಂಗ ನೃ |
ಪಾಲನಲ್ಲಿಗೆ ಕಲಹಕೈದುವೆ |
ಲೀಲೆಯಿಂದಾಶೀರ್ವದಿಪುದೆನಗೆಂದನವಳೊಡನೇ || ||೮೨||
ರಾಗ ನೀಲಾಂಬರಿ ಏಕತಾಳ
(ಧಾಟಿ : ತಪ್ತತೈಲದಿ ದೂಡುವರೆಲೆ ಇವನಾ)
ಅರಿತೆ ನಿನ್ನಯ ಮನವಾ | ಸುಮ್ಮನೆ ಭೂಮಿ | ಪರೊಳು ಕಾಳಗವಗೈವಾ ||
ಪರಿಯ ತಿಳಿಯದೆ ವ್ಯರ್ಥಾ | ಪೋಗುವೆನೆಂದು | ತೆರಳುವದೇನು ಸ್ವಾರ್ಥಾ ||೮೩||
ಕರಿಸಂಕುಲವ ಗೆಲುವೇ | ನೆನ್ನುತ ಪೋಪ | ಮರಿಸಿಂಹದೋಲ್ ಮಗುವೇ ||
ಧುರಧೀರರೊಡನೆ ನೀನೂ | ಕಾದುವೆನೆಂಬು | ದರಿದಾಗಿ ತೋರ್ಪುದಿನ್ನೂ ||೮೪||
ಭಾಮಿನಿ
ತನಯ ಕೇಳದರಿಂದ ಕದನಕೆ |
ಮನವಮಾಡದೆ ಕ್ಷೀರಕದಳಿಗ |
ಳನು ನಿರಂತರ ಸವಿವುತಲೆ ಮನೆಯೊಳಗೆ ಇರುತಿಹುದೂ ||
ಎನುತ ದುಗುಡದೊಳಪ್ಪಿ ಮುದ್ದಿಪ |
ಜನನಿಯನು ಕಾಣುತ್ತ ನುಡಿದನು |
ಸನುಮತವೆ ನೀ ತಾಯೆ ಎನ್ನನು ತಡೆವುದೆಂದೆನುತಾ ||೮೫||
ರಾಗ ನವರೋಜು ಏಕತಾಳ
ಅಮ್ಮಯ್ಯಾ ಬಿಡು ದುಗುಡಾ | ನೀ | ಸುಮ್ಮಗೆ ಯೋಚಿಸಬೇಡಾ ||
ಬೊಮ್ಮಾಮರರನು | ಒಮ್ಮೆಗೆ ಗಣಿಪೆನೆ | ಘಮ್ಮನಾ ಭೂಪನ | ಹಮ್ಮನು ನಿಲಿಸುವೇ ||೮೬||
ಉಪ್ಪನ್ನಾ ಧರಣಿಪನೂ | ಇ | ತ್ತಿಪ್ಪ ಕಾರಣ ನಾನೂ |
ಒಪ್ಪದೆ ಪೋದರೆ ತಪ್ಪಲ್ಲವೆ ಮೇಣ್ | ತಪ್ಪುವ ದಾರಿಗೆ ಬಪ್ಪ ಬವಣೆಗಳೂ || ||೮೭||
ಇದರಿಂದ ಕೇಳವ್ವಾ | ನಾ | ನಿದಕೋ ಪೋಗುವೆ ಗೆಲುವಾ ||
ಹದನವನೆಲ್ಲವ ಮೊದಲೇ ತಿಳಿದಿಹೆ | ಬದಲೆಣಿಸದೆನೀ ಮುದದೊಳಗಿರುವುದು ||೮೮||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಾತೆಯೊಡನಿಂತುಸುರುತಲಿ ವಿ | ಖ್ಯಾತ ಚಿತ್ರಧ್ವಜನು ಸಂಗರ |
ಕಾತುರದಿ ಪೊರಮಟ್ಟ ತಾ ನಿ | ರ್ಭೀತಿಯಿಂದಾ ||೮೯||
ಮಂದಿಮಾರ್ಬಲ ತುರಗ ಕರಿಗಳ | ಸಂದಣಿಯನೊಡಗೊಂಡು ಸಚಿವನ |
ನಂದನನು ಕಳೆಕಳೆದು ದುರ್ಗವ | ಮುಂದೆ ಬರುತಾ ||೯೦||
ಧರಣಿಪತಿ ದೃಢವರ್ಮರಾಯನ | ಪುರವ ಮುತ್ತುತ್ತಿರಲು ಕಂಡಾ |
ಚರರು ಬಳಿಕೋಡುತ್ತ ಪೇಳ್ದರು | ದೊರೆಯ ಕೂಡೇ ||೯೧||
ರಾಗ ಮುಖಾರಿ ಏಕತಾಳ
ಕೇಳಯ್ಯಾ ದೃಢವರ್ಮ ಭೂನಾಥಾ | ನಾವೆಂಬ ಮಾತಾ
ಜಾಲಾವಲ್ಲಿದು ಲೋಕ ವಿಖ್ಯಾತಾ ||
ಪೇಳುವದೇನ್ ಭೂ | ಪಾಳರ ಸೈನ್ಯವು |
ಪಾಳೆಯಗೊಟ್ಟಿಹು | ದೇಳೈ ಈ ಕ್ಷಣ ||೯೨||
ಪುರವಾ ಮುತ್ತುತ ನಮ್ಮನ್ನೆಲ್ಲಾ | ಲಾಲಿಸು ಸುಳ್ಳಲ್ಲಾ |
ಬೆರಸೀ ಕಳುಹಿರ್ಪರವರನಿತೆಲ್ಲಾ |
ದೊರೆಯೊಡನುಸುರುತ | ಕರೆತಹುದೆನುತಲಿ |
ಒರೆದೀರ್ಪರು ಭೂ | ಪರು ಇದನೆಲ್ಲಾ ||೯೩||
ಕಂದ
ಚರರೆಂದುದ ಕೇಳುತಲಾ |
ಧರಣಿಪ ನಿಜಮಂತ್ರಿಯ ಕರೆದವನೊಡನಾಗಂ ||
ವೊರೆದನು ಕೇಳೈ ಸಚಿವನೆ |
ಪರನೃಪರೆಮ್ಮಯ ಪುರಕೈತಂದಿಹರೆನುತಂ ||೯೪||
ರಾಗ ಸೌರಾಷ್ಟ್ರ ಅಷ್ಟತಾಳ
ಲಾಲಿಸು ನಿನ್ನೊಡನೆಂಬುವ ವಚನವಾ | ಮಂತ್ರಿ ಕೇಳೂ | ಭೂಮಿ |
ಪಾಲರು ಗೈದಿರುವನುಚಿತ ಕಾರ್ಯವಾ | ಮಂತ್ರಿ ಕೇಳೂ ||೯೫||
ಕಳ್ಳರ ತೆರದಲ್ಲಿ ಪುರವ ಮುತ್ತಿಹರಂತೆ ಮಂತ್ರಿ ಕೇಳೂ | ತಾವು |
ಮಲ್ಲಸಾಹಸಿಗಳೆಂದೆಂಬ ಹಮ್ಮಿಹುದಂತೆ | ಮಂತ್ರಿ ಕೇಳೂ ||೯೬||
ವೀರಭುಜಾನ್ವಿತ ಧರಣಿಪರಾದರೆ | ಮಂತ್ರಿ ಕೇಳೂ | ಇಂತು |
ಚೋರರ ತೆರೆದೊಳು ಬರುವ ಪದ್ಧತಿಯುಂಟೆ | ಮಂತ್ರಿ ಕೇಳು || ||೯೭||
ಕರೆಸೀಗ ನಮ್ಮಯ ಭೂರಿಮಾರ್ಬಲವನ್ನು | ಮಂತ್ರಿ ಕೇಳೂ | ಹಯ |
ಕರಿಪದಾತಿಗಳ ಸಮೂಹವ ತಡೆಯದೆ | ಮಂತ್ರಿ ಕೇಳೂ ||೯೮||
ವಾರ್ಧಕ
ಅರಸನಪ್ಪಣೆಯನ್ನು ತಿಳಿದಾಗ ಮಂತ್ರಿತಾ |
ಕರೆಸಿದಂ ಗಜಸೇನೆ ಮಂದಿಮಾರ್ಬಲ ಸಹಿತ |
ಪುರವ ಮುತ್ತಿಹ ವೀರರಂ ಗೆಲ್ದು ಪಟ್ಟಣದ ಸಿರಿಯ ರಕ್ಷಿಪಡೆ ಬಳಿಕಾ ||
ಧರಣಿಪಾಲಕನಿತ್ತಲಸ್ತ್ರಶಸ್ತ್ರಾದಿಗಳ |
ಕರತಳದಿಧರಿಸಿ ಬೆಂಬಲವ ತಾನೊಡಗೊಂಡು |
ಬರುತ ಸಂಗರಕೆ ಮುಂದೆಸೆವ ಪರಸೈನ್ಯಮಂ ಚದರಿಸಿದ ಕಡುಹಿನಿಂದಾ ||೯೯||
ಕಂದ
ಸೈನ್ಯವು ಚದುರುತ್ತಿಹ ಪರಿ |
ಯನ್ನೀಕ್ಷಿಸಿ ಚಿತ್ರಧ್ವಜಬಲು ಧೈರ್ಯದೊಳಂ ||
ತನ್ನಯ ಮಾರ್ಬಲಕಭಯವ |
ಮುನ್ನೀವುತಲಿರಲರಿತಾ ಭೂಪತಿಯೊರೆದಂ ||೧೦೦||
ರಾಗ ಭೈರವಿ ಏಕತಾಳ
ಆರೆಲೊ ಫಡನೃಪ ಕುವರಾ | ಹುಲು | ಚೋರರ ತೆರದೊಳು ಪೋರಾ ||
ಭೂರಿ ಬಲವ ಸಹಿತಿಂದೂ | ಬಹ | ಕಾರಣವುಸುರೇನೆಂದೂ ||೧೦೧||
ತರಳನೆ ನಿನಗಿದು ಹಿತವೇ | ಯಮ | ಪುರಕೈದುವದುಯುಕುತವೇ ||
ತೆರಳಿದರಿಂದ ನೀ ಪಿಂತೇ | ಮೇಣ್ | ತೆರಳಿಸು ಪಿತನನು ಮುಂತೇ ||೧೦೨||
ಮರುಳುನೃಪನೆ ಕೇಳಿತ್ತಾ | ನಾವ್ | ತೆರಳಿಬಂದಿಹಪರಿ ಮತ್ತಾ ||
ತರಳೆ ನಿನ್ನಣುಗೆಯನೊದು | ಭೂ | ವರ ಭದ್ರಾಖ್ಯಗಿತ್ತಪುದೂ ||೧೦೩||
ಎನುತ ಮುತ್ತಿಹೆವೈ ನಿನ್ನಾ | ಸುತೆ | ಯನು ಕರದೊವುತಲಿನ್ನಾ ||
ಜನಪತಿಗೊಪ್ಪಿಸಿ ಕಡೆಗೇ | ಪಿತ | ನನು ಕಳುಹುವೆ ನಿನ್ನೆಡೆಗೇ ||೧೦೪||
ಭಳಿರೆ ಶಭಾಸು ಮೆಚ್ಚಿದೆನೂ | ದಶ | ಗಳ ರಾವಣ ಸೀತೆಯನೂ ||
ಕಳವಿನೊಳೊದೆಮಪುರಿಗೇ | ತಾ | ತೆರಳಿದುದರಿಯೆಯಾ ಹೀಗೆ ||೧೦೫||
ಪರ ಸತಿ ಪರ ಧನಗಳಲೀ | ಮನ | ವಿರಿಸುತ ನರಕಂಗಳಲೀ ||
ಹೊರಳುತಲಿಹುದೇನ್ ಸ್ವಾರ್ಥಾ | ಯೇ | ತರಳನೆ ಕೆಡದಿರುವ್ಯರ್ಥಾ ||೧೦೬||
ಧರ್ಮವಿಚಾರವನರಿಯೇ | ದೃಢ | ವರ್ಮ ನಾವ್ ಬಂದಿಹ ಪರಿಯೇ ||
ಸುಮ್ಮನೆ ಬಾಯ್ಗಳಹದಿರೂ | ನೀ | ನಮ್ಮೊಳಗಿದನುಸುರದಿರೂ ||೧೦೭||
ಹುಡುಗನೆ ಕೇಳ್ ಕಡು ಜಡಗೇ | ಮ | ದ್ದೊಡನೀಯಳು ನಾಲಿಗೆಗೇ ||
ಕೊಡುವುದೆರುಚಿಯಿದರಂತೆ | ನಾವ್ | ನುಡಿದುದು ಸೊಗಸುವದೆಂತೇ ||೧೦೮||
ಪೊಡವಿಪ ಲಾಲಿಸು ಬರಿದೇ | ಈ | ಬಡಿವಾರದಿ ಫಲವಿಹುದೇ |
ಬಿಡುವೆಯ ಕುವರಿಯ ಬೇಗಾ | ನೀ | ತೊಡಗುವೆಯಾ ರಣವೀಗಾ ||೧೦೯||
ರಾಗ ಭೈರವಿ ಅಷ್ಟತಾಳ
ತರಳನೆಂದೆನುತ ಬಿಡೇ | ಗರ್ವವು ನಿನ್ನ | ಶಿರಕಡರಿಹುದು ನೋಡೆ ||
ಅರೆ ನಿಮಿಷದಿ ನಿನ್ನ | ತರಿಯುತ್ತ ಶೈಮಿನಿ | ಪುರಕೆ ಸೇರಿಸುವೆ ನೋಡೈ ||೧೧೦||
ಧುರಧೀರ ನೃಪನೆನ್ನುತಾ | ಬಲ್ಲೆನು ನಾನು | ತರಳನಾದಡೇನ್ ಮತ್ತಾ ||
ಸರಳಿನ ಮೊನೆಗಿನ್ನು | ಕೊರತೆ ಹೊಂದಲಿಕುಂಟೆ | ಪರಿಕಿಸಬಹುದೀಗಳೂ ||೧೧೧||
ಸಾರಿ ಕೊಲ್ಲಲು ಪಾಪವೂ | ಹೊದ್ದುದು ಎಂಬ | ಕಾರಣವಾಗಿ ನಾವೂ ||
ಈ ರೀತಿಯುಸುರಲು | ಪೋರನೆ ಮದಗರ್ವ| ವೇರಿತದನು ಭಂಗಿಪೇ ||೧೧೨||
ಎನುತಗ್ನಿ ಶರವೆಸೆಯೇ | ಚಿತ್ರಧ್ವಜ | ವನಶರದಿಂತರಿಯೇ ||
ಫಣಿಯನು ಗರುಡನಿಂ | ಘನತರ ಗಿರಿಶರ | ವನು ಕುಲಿಶದಿ ಖಂಡಿಸೇ ||೧೧೩||
ಪೊಡವಿಪ ರೋಷದಿಂದಾ | ತಿಮಿರ ಶರ | ಬಿಡಲದ ನಿಮಿಷದಿಂದಾ ||
ಕಡಿಯಲು ದ್ಯುಮಣಿಯಿಂ | ವಡನೆ ಖಡ್ಗವಗೊಂಡು | ಪೊಡೆಯಲು ಕುವರನಿತ್ತಾ ||೧೧೪||
ತುಂಡಿಸಲದ ಕಾಣುತ್ತಾ | ಕನಲಿ ಗದೆ | ಗೊಂಡು ಭೂಮಿಪನ ಮತ್ತಾ ||
ಮಂಡೆಯೊಳೆರಗಲು | ಚಂಡವಿಕ್ರಮನದ | ಖಂಡನೆ ಗೈದನಾಗಾ ||೧೧೫||
ಭಾಮಿನಿ
ಈ ತೆರದಿ ಶಸ್ತ್ರಾಸ್ತ್ರಗದೆಗಳು |
ರೀತಿಗೆಡೆ ಹುಡುಗನೊಳು ಪೃಥ್ವೀ |
ನಾತನಾಯುಧಹೀನನಾದನು ಕಣನ ಮಧ್ಯದೊಳೂ ||
ಸೋತುದನು ತಿಳಿದಾಗ ಚಿತ್ರಸು ||
ಕೇತ ಭೂಪನ ಸೆರೆವಿಡಿಯೆ ವಿ |
ಖ್ಯಾತ ನರಪತಿಯಳಲಿದನು ಬಲು ತರದ ದುಗುಡದಲೀ ||೧೧೬||
ರಾಗ ನೀಲಾಂಬರಿ ರೂಪಕತಾಳ
ಹರ ಹರವೀ ಸಮರದಿ ನಾ | ತರಳನೊಡನೆ ಕಾದಿ ವ್ಯರ್ಥ |
ಸೆರೆಯ ಬಿದ್ದೆಯನ್ನೊಳಿನಿತು | ಕರುಣ ತೊರೆದೆಯಾ || ಕರುಣ ತೊರೆದೆಯಾ ||೧೧೭||
ಯಾತಕಾಗಿ ಸುತೆಯನು ಭೂ | ನಾಥ ವತ್ಸಗೀವೆನೆನುತ |
ಮಾತು ಕೊಟ್ಟೆ ನಕಟ ಎನಗೆ | ಪ್ರೀತನೆನುತಲೀ || ಪ್ರೀತನೆನುತಲೀ ||೧೧೮||
ಆರು ಎನಗಿನಿಹರು ಕಾವ | ಧೀರರೆನುತ ಮನದಿ ಮರುಗಿ |
ಧಾರುಣೀಂದ್ರ ನೆನದ ತನ್ನಾ | ಪೂರ್ವ ಮಿತ್ರನಾ || ಪೂರ್ವಮಿತ್ರನಾ ||೧೧೯||
ವಿಂಧ್ಯಕೇತನೆಂಬ ಶಬರ | ವಂದ್ಯಮಿತ್ರನೀರ್ದನವ ಮ |
ದಾಂಧತನದೊಳೆಂತು ಎನ್ನ | ಬಂದು ಕಾವನೂ || ಬಂದು ಕಾವನೂ ||೧೨೦||
ಅಷ್ಟಭಾಗ್ಯವಿರಲು ನಮಗೆ | ಇಷ್ಟ ಮಿತ್ರರೆಲ್ಲರಿಹರು |
ಕಷ್ಟ ಬರಲು ಮಾತ್ರ ನಮ್ಮ | ಮುಟ್ಟಿನೋಳ್ಪರೇ || ಮುಟ್ಟಿನೋಳ್ಪರೇ ||೧೨೧||
ಕರುಣ ಶರಧಿ ನಿನ್ನ ಪದದ | ಶರಣನೆಂಬ ಮಮತೆ ಇರಲು |
ಪೊರೆಯದೇಕೆ ಬಳಲಿಸುವೆಯ | ಬರಿದೆ ಎನ್ನನೂ || ಬರಿದೆ ಎನ್ನನೂ ||೧೨೨||
ಭಾಮಿನಿ
ಭೂಮಿಪತಿ ಇಂತಳಲುವದ ನಿ |
ಸ್ಸೀಮ ವಿಂಧ್ಯಾಧಿಪನು ತಿಳಿಯುತ
ತಾ ಮನದಿ ಯೋಚಿಸಿದ ಬಲುತರ ಬವಣೆಗಳ ಮತ್ತೆ ||
ಅಮಹಾ ದೃಢವರ್ಮನೆಂಬುವ |
ಗೋಮಿನಿಪಗೊದಗಿರಲು ನಮ್ಮೋಲ್ |
ಪ್ರೇಮಿಗಳು ಇದ್ದೇನು ಫಲ ಫಲವಿರದ ಮರನಂತೇ ||೧೨೩||
ಕಂದ
ಎನುತಂ ಯೋಚಿಸಿ ತನ್ನಯ |
ವನಿತೆಯ ಕರೆದಿನಿತುಸುರಿದನಂಗ ನೃಪಾಲಂ ||
ಗನುಪಮ ಬವಣೆಯು ಬರಲವ |
ನೆನದಿಹ ಎನ್ನನು ತೆರಳುವೆ ಕಾಳಗಕೆನುತಂ ||೧೨೪||
ರಾಗ ಕೇತಾರಗೌಳ ಝಂಪೆತಾಳ
ದ್ವಿಪರಾಜ ಗಮನೆ ಬಾಲೇ | ಕೇಳ್ ಸರಿ | ಸೃಪವೇಣಿ ಮದನ ಲೊಲೇ ||
ಚಪಲಾಕ್ಷಿ ದೃಢವರ್ಮನೂ | ವೈರಿಯಹ | ನೃಪರೊಡನೆ ಕಾದಲಿನ್ನೂ ||೧೨೫||
ಸೋತ ಕಾರಣ ಎನ್ನನೂ | ನೆನದರಿಂ | ಶೀತಾಂಶೂ ವದನೆ ನಾನೂ ||
ಈ ತತೂಕ್ಷಣ ತೆರಳುವೇ | ವೈರಿ ಬಲ | ವ್ರಾತವನು ಸದೆ ಬಡಿಯುವೇ ||೧೨೬||
ಜಾಣೆ ಕೇಳ್ ಮಿತ್ರನವನೂ | ಪೂರ್ವದೊಳು | ಪ್ರಾಣ ಸಲಹಿಧೀರನೂ ||
ಯೇಣಾಂಬಕಿಯೆ ಹೀಗಿರೇ | ಪೊರಮಡದೆ | ಮಾಣಲೆಂತುಸುರು ನೀರೇ ||೧೨೭||
ಕಾಂತ ಲಾಲಿಪುದು ನಿನಗೇ | ಸಖನವನು | ಯೆಂತೆಂಬುದಿದನು ಎನಗೇ ||
ನಿಂತರುಹುತಲಿ ಕದನಕೇ | ತೆರಳಯ್ಯ | ಸಂತಸವ ಬಡಿಸಿ ಮನಕೇ ||೧೨೮||
ಕಳಕೀರವಾಣಿ ಇದನೂ | ವಿವರಿಸಲ್ | ಕುಳಿತಿರಲು ಸಮಯವನ್ನೂ ||
ಕಳೆವೆ ತಾನಾದಡೆಲೆಗೇ | ಸಂಕ್ಷೇಪ | ದೊಳು ಪೇಳ್ವೆ ಸಲಹಿದ ಬಗೇ ||೧೨೯||
ವಾರ್ಧಕ
ನಾರಿಮಣಿ ಕೇಳ್ ಪೂರ್ವದೊಳು ನಮ್ಮ ತಪ್ಪಲನು |
ಕ್ರೂರ ದೌಂಷ್ಟಕನೆಂಬ ನಿಶಿಚರನು ಮುತ್ತಿರಲು |
ಭೂರಿ ಮಾರ್ಬಲ ಸಹಿತ ವೀರ ದೃಢವರ್ಮನೀ ವಾರತೆಯನರಿತು ಬರುತಾ ||
ಘೋರ ರಕ್ಕಸನ ಸಂಹರಿಸಿ ಬಳಿಕವನ ಪರಿ |
ವಾರವನು ದೆಸೆಗೆಡಿಸಿ ನಮ್ಮ ಶಿರ ಕಾದಿಹ ಉ |
ದಾರ ಕ್ಷೋಣಿಪಗೊದಗದಿರಲು ಮಿತ್ರನೆ ಎನ್ನ ದೂರಲಾರನೆ ದುಗುಡದೀ ||೧೩೦||
ರಾಗ ಆನಂದ ಭೈರವಿ ಏಕತಾಳ
ಚದುರೆ ಚಂಪಕಸುನಾಸೆ | ಮದಿರನಯನೆಮಂದಹಾಸೆ |
ವದಗಿನೋಳ್ ಮಾರ್ಬಲದ ಕೂಡೆ | ಕದನಕಾಗಿ ಪೋಪೆ ಪ್ರೌಢೆ ||೧೩೧||
ಪ್ರಾಣಕಾಂತಾ ಲಾಲಿಸಿನ್ನಾ | ಕ್ಷೋಣಿಪ ನೀ ಪರಿಯೋಳ್ ನಿನ್ನಾ |
ತಾನೆ ಸಲಹಿರಲ್ಕೆ ಪಿತ ಸ | ಮಾನನವನ ಕಾವುದೈಸೆ ||೧೩೨||
ಇನಿಯ ಕೇಳ್ ನೀ ಶೀಘ್ರದೊಳಗೆ | ಮನವ ಮಾಳ್ಪುದಿತ್ತ ಕಡೆಗೇ |
ಕ್ಷಣ ನಿನ್ನಗಲಿ ಬಾಳಲಾರೇ | ಯೆನುತ ಪೇಳಲ್ಯಾಕೆ ಬ್ಯಾರೆ ||೧೩೩||
ಭಾಮಿನಿ
ಕಾಮಿನಿಯು ಇನಿತುಸುರಿ ತನ್ನಯ |
ಪ್ರೇಮದರಸನಿಗಸ್ತ್ರ ಶಸ್ತ್ರಗ |
ಳಾ ಮಹಾಗದೆಖಡ್ಗ ತೋಮರ ಕುಂತ ಮುದ್ಗರವಾ ||
ತಾ ಮುದದಿ ತಂದಿತ್ತು ಬಳಿಕಾ |
ಹೇಮದಾರತಿಯೆತ್ತುತರಸಗೆ |
ಭಾಮಿನಿಯು ಕಳುಹಿದಳು ವೈರಿಯ ಜಯಿಸಿ ಬಹುದೆನುತಾ ||೧೩೪||
ಕಂದ
ಇತ್ತಲು ಕಾಂತೆಯು ಕಳುಹಲು |
ಮತ್ತಾ ವಿಂಧ್ಯಾಧಿಪ ರಥವೇರುತ ಭರದಿಂ ||
ಮಿತ್ರನ ಮಂಡಲ ರಜದಿಂ |
ಮುತ್ತುವ ತೆರದೋಳ್ ನಡದಂ ಪಟು ಭಟರೊಡನಂ ||೧೩೫||
ರಾಗ ಭೈರವಿ ತ್ರಿವುಡೆತಾಳ
ಬಂದನಾಗಾ | ಸಮರಕೈ ತಂದನಾಗಾ || ಪಲ್ಲವಿ ||
ಬಂದನಾ ಶಬರೇಶ ಹಯಕರಿ | ಸಂದಣಿಯನೊಡಗೊಂಡು ಮಣಿಮಯ |
ಸ್ಯಂದನವನೇರುತ್ತಲರಿಗಳ | ವೃಂದವನು ಸದೆಬಡಿದು ಮತ್ತೈಮ |
ಮಂದಿರಕೆ ಕಳುಹುವೆನು ನೋಡೆನು | ತಂದು ಹೂಂಕರಿಸುತ್ತ ಘರ್ಜಿಸಿ |
ಮುಂದರಿಸುತಲಿ ರಥಿಕರನು ಧರ | ಣೇಂದ್ರನಲ್ಲಿಗೆ ವಿಂಧ್ಯಕೇತನು ||
ಬಂದನಾಗಾ | ಸಮರಕೈ ತಂದನಾಗಾ ||೧೩೬||
ಭಾಮಿನಿ
ಧಾರುಣೀಶ್ವರ ಲಾಲಿಸಿತ್ತಲು |
ವೀರ ದೃಢವರ್ಮಕನು ಬಂದಿಹ |
ಶೂರರನು ನೋಡುತ್ತ ತೋಷಿಸುತವರ ಮನ್ನಿಸುತಾ ||
ಭೂರಿ ವೈಭವದಿಂದಲವನು ವಿ |
ಚಾರಿಸಿದ ವಿಂಧ್ಯೇಶ್ವರನೆ ತವ |
ನಾರಿಮಿತ್ರರು ಕುಶಲಿಗರೆಯೆನಲೆಂದನವನೊಡನೇ ||೧೩೭||
ಚಿತ್ತವಿಸು ಕ್ಷೋಣಿಪನೆ ತನ್ನಯ |
ಮಿತ್ರ ಮಂಡಳಿ ಕ್ಷೇಮದಿಂದಲಿ |
ರುತ್ತಿಹರು ನಿನ್ನಯ ಕಟಾಕ್ಷದಿ ಕುಶಲವಾರ್ತೆಗಳೂ ||
ಅತ್ತಿರಲಿ ಸೆರೆವಿಡಿದ ಖಳ ತಾ |
ನೆತ್ತಲಿಹ ತೋರೆನುತ ಘುರ್ಜಿಸೆ |
ಚಿತ್ರಕೇತನು ತಿಳಿದು ಮಾರ್ಮಲೆತುಸುರಿದನು ಭರದೀ ||೧೩೮||
ರಾಗ ಮೆಚ್ಚು ಅಷ್ಟತಾಳ
ಫಡಕುಳಿಂದಕ ಕೇಳ್ ಮದಾಂಧನೇ | ಇಂಥಾ | ಬಡಿವಾರವ್ಯಾತಕೊ ಸುಮ್ಮನೇ ||
ಪೊಡವಿಪನನು ಯುದ್ಧ ಕಣದೊಳೂ | ಸೆರೆ | ವಿಡಿದೀರ್ಪ ವೀರ ತಾನಹೆ ಕೇಳೂ ||೧೩೯||
ಹುಡುಗ ಮುಚ್ಚೆಲೆ ಬಾಯ ಹೊಸುವೇ | ನಿನ್ನ ಹೊಡೆದು ಮಾರಿಗೆ ಹಬ್ಬ ಉಣಿಸುವೇ ||
ಒಡನೆ ಮಿತ್ರಗೆ ತೋಷ ಬಡಿಸುವೇ | ನೋಡು | ಕಡುಗಲಿತನವೀಗ ನಿಲಿಸುವೇ ||೧೪೦||
ಮಿತ್ರನೆನ್ನುತ ಪಡೆವೆರಸುತಾ | ಬಂದು | ಪೃಥ್ವಿಪಗೆಣೆಯಾದ ಕೇಳಿತ್ತಾ ||
ಧೂರ್ತನೆ ಶಿರವ ತುಂಡಿಸುತೀಗಾ | ನಿನ್ನ | ಮಿತ್ರಸುತಗೆ ಒಪ್ಪಿಸುವೆ ಬೇಗ ||೧೪೧||
ಸಾಕು ಸಾಕೆಲೊ ಇಂಥಾ ಹಮ್ಮಿನಾ | ಬರಿ | ಕಾಕು ಮಾತೇನು ಪ್ರಯೋಜನಾ ||
ಜೋಕೆಯೋಳ್ ಪೋಗು ನೀ ಬಂದಂತೇ | ಪೋಗಿ | ಸಾಕಿದವಗೆ ಪೇಳು ಬರುವಂತೇ ||೧೪೨||
ನದವನ್ನುತ್ತರಿಸದ ಪಿಸುಣನೂ | ಮಹೋ | ದಧಿಯ ದಾಟುವದೆಂತು ಉಸುರಿನ್ನೂ ||
ಮೊದಲೆನ್ನ ಕದನದಿ ಗೆಲು ನೀನೂ | ಸಲ | ಹಿದವರ ಬಗೆಯದಕಿನ್ನೇನೂ ||೧೪೩||
ಮಾತಿನೋಳ್ ಚಪಳನೆನ್ನುತ ನಾನು | ಮನಃ | ಪೂರ್ತಿ ಬಲ್ಲೆನು ಕೇಳು ನಿನ್ನನೂ ||
ಘಾತಿಸದಿರೆ ನಾನು ಶಬರನೇ | ಮೇಣೀ | ಭೂತಳದೊಳು ಮೊಗದೋರ್ಪೆನೇ ||೧೪೪||
ರಾಗ ಶಂಕರಾಭರಣ ಮಟ್ಟೆತಾಳ
ಫಾತಿಸುವ ಸಹಾಸಿಯೆಂಬು | ದರಿತೆ ಕೇಳೆಲೋ ||
ಈ ತತೂಕ್ಷಣದಲಿ ನಿನ್ನ | ಗೆಲುವೆ ನೋಡೆಲೋ ||೧೪೫||
ಬರಿದೆ ಪಂಥವ್ಯಾಕೊ ನಿನಗೆ | ತರಳ ಸುಮ್ಮನೇ ||
ಹರಣಕಾವ ಭಟನದಾರೊ | ಒರೆಯೊ ಘಮ್ಮನೇ ||೧೪೬||
ಎನುತಲಸ್ತ್ರ ತತಿಯ ಬಿಡಲು | ಚಿತ್ರಕೇತನೂ ||
ಕನಲಿ ಘರ್ಜಿಸುತ್ತಲದನು | ಪುಡಿಯ ಗೈದನೂ ||೧೪೭||
ಭಳಿರೆ ವೀರನಹೆಯೊ ಎನುತ | ವಿಂಧ್ಯಕೇತನೂ ||
ಬಳಿಕ ನೂರು ಶರದೊಳವನ | ಧನುವ ಕಡಿದನೂ ||೧೪೮||
ರಾಗ ಭೈರವಿ ಏಕತಾಳ
ಚಾಪವಕಡಿಯಲ್ಕಾಗಾ | ಪ್ರತಿ | ಚಾಪವ ಕೊಂಡತಿ ಬೇಗಾ ||
ಭಾಪೆನುತಲಿ ಶಬರನಿಗೆ | ಬಲು | ಕೋಪಿಸಿ ಶರಬಿಡಲಾಗೇ ||೧೪೯||
ಕಂಡಾಕ್ಷಣ ವಿಂಧ್ಯೇಶಾ | ನದ | ಖಂಡಿಸುತಲಿ ಬಲು ರೋಷಾ ||
ಗೊಂಡಾಪೊಸ ಚಾಪವನೂ | ಮೂರ್ | ತುಂಡಿಸಿ ಕೆಡಹಿದನದನೂ ||೧೫೦||
ಖೂಳ ಕಿರಾತ ಕೇಳಿತ್ತಾ | ಧನು | ಬೀಳಲ್ಕೇನ್ ಘನಮತ್ತಾ ||
ತೋಳಿನ ಬಲ ನೋಡೆಂದೂ | ಬಲು | ತಾಳುತ ರೋಷವನಂದೂ ||೧೫೧||
ಗದೆಯನು ಗೋಳುತಾಕ್ಷಣದೀ | ಮ | ತ್ತದ ಶಭರೇಂದ್ರನ ಶಿರದೀ ||
ಒದಗಿಲಿ ಚಿತ್ರಧ್ವಜನೂ ಹೊಡೆ | ವುದ ತಿಳಿದಾಕ್ಷಣಕವನೂ ||೧೫೨||
ಸೆಳೆಯಲ್ ಶಬರೇಶ್ವರನೂ | ಇದ | ತಿಳಿಯುತ ಚಿತ್ರಧ್ವಜನೂ ||
ಝಳಪಿಸಿ ಖಡ್ಗವ ಭರದೀ | ಶಿರ | ಕಳಚುವೆ ನೋಡೀ ಧುರದೀ ||೧೫೩||
ಎಂದಾಕ್ಷಣ ಹೂಂಕರಿಸೀ | ಬರು | ವಂದವ ತಿಳಿದಾ ಸಹಸೀ ||
ಬಂದವ ಕಸಕೂಳೆ ಜವದೀ | ಮೇಲ್ | ಕಂದ ಕೈ ಸೋತನು ಕಣದೀ ||೧೫೪||
ಕಂದ
ಇದನರಿತಾ ಶಬರೇಶಂ |
ಕದನದಿ ತರಳನ ಗೆಲಿದೆನು ತಾನೆಂದೆನುತಂ ||
ಮದಗರ್ವವ ತಾಳುತಲೊದ |
ರಿದ ಬಳಿಕಾ ಸಚಿವನ ಕುವರನೊಳತಿ ಭರದಿಂ ||೧೫೫||
Leave A Comment