Categories
ಅಂಕಣಗಳು ಕನ್ನಡ ಶಿಕ್ಷಣ

ವಿಶ್ವ ಪುಸ್ತಕ ದಿನ ಅಥವಾ ಗ್ರಂಥ ಸ್ವಾಮ್ಯ ದಿನಾಚರಣೆ

ಪುಸ್ತಕಗಳು ಯಾವತ್ತೂ ನಮ್ಮ ಜೀವಸಖರಂತೆ ಎಂಬ ಮಾತು ಸತ್ಯ. ಬಂಧುಗಳು, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಬರಬಹುದು, ಹೋಗಬಹುದು ಆದರೆ ಪುಸ್ತಕಗಳಿವೆಯಲ್ಲಾ ಯಾವತ್ತಿಗೂ ಜೊತೆಗಿರುವ ಸ್ನೇಹಿತರು. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನಪರಂಪರೆಯನ್ನು ಮುಂದುವರೆಸಿಕೊಂಡು ಬರುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ಈ ಅಂಶವನ್ನು ಮನಗಂಡ ಯುನಿಸ್ಕೋ 1995ರಲ್ಲಿ ಏಪ್ರಿಲ್ 23ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಕಾಪಿರೈಟ್ ಕಾಯ್ದೆ (ಗ್ರಂಥಸಾಮ್ಯ)ಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಯುನಿಸ್ಕೋ ವಿಶ್ವ ಪುಸ್ತಕ ದಿನವನ್ನಾಗಿ ಗುರುತಿಸುವುದಕ್ಕೆ ಮುಂಚೆ 1923ರಲ್ಲಿ ಸೈನ್(ಸ್ಪಾನಿಶ್) ನಲ್ಲಿ ಪುಸ್ತಕ ವ್ಯಾಪಾರಿಗಳು ಪುಸ್ತಕ ದಿನವನ್ನಾಗಿ ಆಚರಿಸುತ್ತಿದ್ದ ಬಗೆಗೆ ನಮಗೆ ದಾಖಲೆಗಳು ದೊರೆಯುತ್ತವೆ. ಇದಕ್ಕಿಂತ ಮುಂಚೆ 1436ರ ಸುಮಾರಿನಲ್ಲಿ ಗುಲಾಬಿ ದಿನವನ್ನಾಗಿ ಆಚರಿಸುತ್ತಿದ್ದುದು ಕಂಡುಬರುತ್ತದೆ. ವಿಶ್ವಪ್ರಸಿದ್ಧ ಬರಹಗಾರ ಸರ್ವಾಂಟೀಸ್ನ ನೆನಪಿನಲ್ಲಿ ಪುಸ್ತಕಗಳನ್ನು ಗುಲಾಬಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ಧತಿ ಇತ್ತು. ಮತ್ತೊಬ್ಬ ಶೇಷ್ಠ ನಾಟಕಕಾರ, ದಾರ್ಶನಿಕ ವಿಲಿಯಂ ಶೇಕ್ಸ್ಪಿಯರ್ನ ಹುಟ್ಟಿದ ಮತ್ತು ಮರಣದ ದಿನವೂ ಏಪ್ರಿಲ್ 23 ಆದುದರಿಂದ ವಿಶ್ವ ಪುಸ್ತಕ ದಿನಾಚರಣೆಗೆ ಹೆಚ್ಚಿನ ಮಹತ್ವ.

ಓದುವ ಅಭಿರುಚಿ: ಸಂಸ್ಕೃತಿಯ ಪ್ರಸರಣೆಯಲ್ಲಿ ಮುಖ ಪಾತ್ರ ಪುಸ್ತಕಗಳದ್ದು. ಅದು ಶಾಸನಗಳಿಂದ, ತಾಳೆ ಓಲೆಗಳಿಂದ, ಈಗ ನಾವು ಓದುತ್ತಿರುವ ಪುಸ್ತಕಗಳು ಮತ್ತು ಇ-ಪುಸ್ತಕಗಳಿರಹುದು. ಕಾಲದಿಂದ ಕಾಲಕ್ಕೆ ಸಮಾಜ, ತಂತ್ರಜ್ಞಾನ ಬೆಳೆದಂತೆಲ್ಲ ಅದರ ಬಾಹ್ಯ ಸ್ವರೂಪ ಬದಲಾಗಿದ್ದರೂ ಆಂತರಂಗಿಕವಾದ ಉದ್ದೇಶ ಒಂದೇ ಆಗಿದೆ. ಶಿಕ್ಷಣ ನಮ್ಮನ್ನು ಅಕ್ಷರಸ್ತರನ್ನಾಗಿ ಮಾಡಬಹುದು ಆದರೆ ಪುಸ್ತಕಗಳು ಮಾತ್ರ ಸಂಸ್ಖೃತಿಯ ವಕ್ತಾರರನ್ನಾಗಿ, ವಾರಸುದಾರರನ್ನಾಗಿ ಮಾಡುತ್ತವೆ. ದಿನಪತ್ರಿಕೆಯಿಂದ ಆರಂಭವಾಗುವ ಓದು ಮುಂದೆ ಪ್ರಪಂಚದ ಅತ್ಯುತ್ತಮ ಕೃತಿಗಳನ್ನು ಓದುವ, ಗ್ರಹಿಸುವ, ವಿಶ್ಲೇಶಿಸುವ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು. ಪ್ರಜ್ಞಾವಂತರಾದ ಎಲ್ಲರ ಕರ್ತವ್ಯ. ಮನುಷ್ಯ ಜೀವಿತದ ಬಹುಪಾಲು ಅವಧಿಯ ಅಂದರೆ 6 ವರ್ಷಕ್ಕೆ ಆರಂಭವಾಗುವ ಓದಿನ/ಕಲಿಕೆಯ ಪ್ರಕ್ರಿಯೆ ಸರಾಸರಿ 60 ವರ್ಷದವರೆವಿಗೂ ಸಾಗುತ್ತದೆ (ಕೆಲವರು 100 ದಾಟಿದರೂ ಈ ಆಭ್ಯಾಸವನ್ನು ಮುಂದುವೆರೆಸುತ್ತಾರೆ). ಹೀಗಾಗಿ ಓದುವಿಕೆ ಎನ್ನುವುದು ಮನುಷ್ಯನ ಬಹಳ ಮುಖ್ಯವಾದ ಒಂದು ಅಂಶ.

ಪುಸ್ತಕೋದ್ಯಮ: ಲೇಖಕ, ಪ್ರಕಾಶಕ ಮತ್ತು ಓದುಗ ಇವು ಮೂರೂ ತ್ರಿವೇಣಿ ಸಂಗಮವಿದ್ದಂತೆ ಎಂಬ ಮಾತನ್ನು ನಿವೃತ್ತ ಗ್ರಂಥಾಲಯ ಅಧಿಕಾರಿಯೊಬ್ಬರು ಆಗಾಗ ಹೇಳುತ್ತಿದ್ದರು. ಈ ಮೂವರೂ ಪರಸ್ಪರ ಪ್ರೇರಕರು ಮಾತ್ರವಲ್ಲ ಪೂರಕರು. ಅಂದರೆ ಲೇಖಕರಿಲ್ಲದೆ ಓದುಗರನ್ನು, ಓದುಗರಿಲ್ಲದೆ ಲೇಖಕರನ್ನು, ಇವರಿಬ್ಬರೂ ಇಲ್ಲದ ಪ್ರಕಾಶಕರನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಓದುಗ ಮತ್ತು ಲೇಖಕರ ನಡುವಿನ ಕೊಂಡಿ ಪ್ರಕಾಶಕ. ಇವರೆಲ್ಲರ ನಡುವೆ ಸೌಹಾರ್ಧಯುತವಾದ ಸಂಬಂಧವಿರಬೇಕು. ಹಾಗಿಲ್ಲದಿದ್ದರೆ ಕೊಂಡಿಗಳನ್ನು ಕಳಚಿದ ಸರಪಣಿಯಂತೆ.

ಕೃತಿಸಾಮ್ಯ ಕಾಯ್ದೆ: ಮೊದಲು ಕೃತಿಸಾಮ್ಯ ಅಥವಾ ಕಾಪಿರೈಟ್ ರಕ್ಷಣೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದದ್ದು 1886ರಲ್ಲಿ. ಆದರೆ 1800ರ ಸುಮಾರಿನಲ್ಲಿಯೇ ಒಬ್ಬ ಲೇಖಕನ ಕೃತಿ ಮತ್ತೊಂದು ದೇಶದಲ್ಲಿ ಅನುಮತಿ ಇಲ್ಲದೆಯೇ ಪ್ರಕಟವಾಗಿ ಲೇಖಕ ಮತ್ತು ಪ್ರಕಾಶಕನಿಗೆ ನಷ್ಟವಾಗುತ್ತಿದ್ದುದನ್ನು ತಡೆಯಲು ಪ್ರೆಂಚ್ ಲೇಖಕ ವಿಕ್ಟರ್ ಹ್ಯೂಗೋ ಪ್ರಮುಖ ಲೇಖಕರನ್ನೊಳಗೊಂಡ ಇಂಟರ್ ನ್ಯಾಷನಲ್ ಲಿಟರ್ರಿ ಅಂಡ್ ಆರ್ಟಿಸ್ಟಿಕ್ ಅಸೋಸಿಯೇಶನ್ ಮೂಲಕ ಸ್ವಿಡ್ಜರ್ ಲ್ಯಾಂಡಿನಲ್ಲಿ ಸಮ್ಮೇಳನವನ್ನು ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಕಾರಣನಾದ. ಮುಂದೆ ಈ ನಿರ್ಣಯಗಳೇ ಬರ್ನ್ ಕನ್ವೆನ್ಷನ್ ಎಂದು ಪ್ರಖ್ಯಾತವಾಯಿತು. 1971ರಲ್ಲಿ ಪರಿಷ್ಕರಣೆಗೊಂಡ ಬರ್ನ್ ಕನ್ವೆನ್ಷನ್ ನಿಯಮಗಳನ್ನೇ ಭಾರತ ಸೇರಿದಂತೆ ಬಹುಪಾಲು ಎಲ್ಲ ದೇಶಗಳು ಒಪ್ಪಿವೆ.

ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ಇಂಗ್ಲಿಂಡಿನಲ್ಲಿದ್ದ ಕಾಪಿರೈಟ್ ಕಾಯ್ದೆಯನ್ನೇ 1847ರಲ್ಲಿ ಜಾರಿಗೊಳಿಸಿತು. ಆಗ ಒಂದು ಕೃತಿಯ ಗ್ರಂಥಸಾಮ್ಯವು ಒಟ್ಟಾರೆ 47 ವರ್ಶಕ್ಕೆ ಸೀಮಿತವಾಗಿತ್ತು. ಸಮಾಜದಲ್ಲಿನ ರೀತಿ ನಿಯಮಾವಳಿಗಳಿ ಬದಲಾದಂತೆ ಹಲವು ತಿದ್ದುಪಡಿಗಳನ್ನು ತರಲಾಯಿತು. ಕೃತಿಸಾಮ್ಯ ಕಾನೂನನ್ನು 1957ರಲ್ಲಿ (ಜೂನ್ 7)ಆಂಗೀಕೃತಗೊಂಡು 1958ರ ಜನವರಿ 21ರಿಂದ ಜಾರಿಗೆ ತರಲಾಗಿದ್ದರೂ 1983,1984, 1994, 1999, 2010ರಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಲಾಗಿದೆ.

ಕಾಪಿರೈಟ್ ಕಾಯ್ದೆಯ ಪ್ರಕಾರ ಯಾವುದೇ ಲೇಖಕನ ಕೃತಿಯು ಅವನ ಮರಣ ದಿನಾಂಕದಿಂದ 60 ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತದೆ. ಲೇಖಕ ಮತ್ತು ಪ್ರಕಾಶಕನ ನಡುವಿನ ಒಪ್ಪಂದ ಈ ಪ್ರಕ್ರಿಯೆಯಲ್ಲಿ ಬಹಳ ಮುಖ್ಯ. ಒಂದು ವೇಳೆ ಕಾಪಿರೈಟ್ ಉಲ್ಲಂಘನೆಯಾದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳನ್ನು ಹೂಡಲು ಅವಕಾಶವಿದೆ. ಮೊದಲು ಕೇವಲ ಸಾಹಿತ್ಯ ಕೃತಿಗಳಿಗಿದ್ದ ಈ ಕಾಯ್ದೆಯನ್ನು ಸಂಗೀತ, ಕೃತಿ, ಬಾನುಲಿ ಪ್ರಸಾರ, ನಾಟಕ, ಚಲನಚಿತ್ರದಂಥ ಕಲೆಗಳಿಗೂ ಅನ್ವಯಿಸಿ ಬೌದ್ಧಿಕ ಆಸ್ತಿ ಹಕ್ಕು ಎಂದು ಕರೆಯಲಾಗಿದೆ.

ಆಯಾ ರಾಜ್ಯಗಳು, ಕಾಪಿರೈಟ್ ಕೇಂದ್ರಗಳು ಮತ್ತು ಸಮಿತಿಗಳನ್ನು ಹೊಂದಿದ್ದು ಕರ್ನಾಟಕದಲ್ಲಿ ಕಬ್ಬನ್ ಪಾರ್ಕಿನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ರಾಜ್ಯ, ಕೇಂದ್ರ ಗ್ರಂಥಾಲಯವು ಗ್ರಂಥ ಸಾಮ್ಯ ಕೇಂದ್ರವಾಗಿದ್ದು ಈ ಕಾಯ್ದೆಯ ಪ್ರಕಾರ ನೋಂದಣಿಯನ್ನು ಮಾಡುತ್ತಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ಈ ಕಾಯ್ದೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ಕೆಲಸ ನಿರ್ವಹಿಸುತ್ತಿದೆ. ನಮ್ಮಲ್ಲಿ ಈ ಕಾಪಿರೈಟ್ ಕಾಯ್ದೆಯ ಉಲ್ಲಂಘನೆಯ ಹಲವು ಪ್ರಕರಣಗಳಿದ್ದರೂ ನೇರವಾಗಿ ದಾವೆ ಹೂಡಿದ ಪ್ರಸಂಗಗಳು ಕಡಿಮೆ. ಇದಕ್ಕೆ ಲೇಖಕನಿಗೆ ಮತ್ತು ಪ್ರಕಾಶಕನಿಗೆ ಹೆಚ್ಚಿನ ಅರಿವು ಇಲ್ಲದಿರುವುದೇ ಕಾರಣಾವಾಗಿದೆ. ಹೀಗಾಗಿ ಈ ಕಾಯ್ದೆಯ ರೂಪುರೇಷಗಳ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಉದ್ದೇಶವೂ ವಿಶ್ವ ಪುಸ್ತಕ ದಿನದ ಆಶಯಗಳಲ್ಲೊಂದಾಗಿದೆ.

ವಿಶ್ವ ಪುಸ್ತಕ ದಿನವನ್ನು ಹಲವು ಬಗೆಗಳಲ್ಲಿ ಆಚರಿಸಲಾಗುತ್ತಿದ್ದು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಪ್ರಕಾಶಕರ ಸಂಘ ಮುಂತಾದ ಸಂಸ್ಥೆಗಳು ನಿರಂತರವಾಗಿ ವಿಚಾರ ಸಂಕಿರಣ, ಹಿರಿಯ ಪ್ರಕಾಶಕರಿಗೆ ಗೌರವಾರ್ಪಣೆ ಪುಸ್ತಕೋದ್ಯಮಕ್ಕೆ ಸಂಬಂಧಿಸಿದಂತೆ ಕಾರ್ಯಶಿಬಿರಗಳು (ಕರಡು ತಿದ್ದುವಿಕೆ, ಕೃತಿ ಸಾಮ್ಯ ಇತ್ಯಾದಿ) ಉಚಿತ ಪುಸ್ತಕ ಹಂಚುವಿಕೆ, ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸುವುದು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಪುಸ್ತಕಗಳ ಕಡೆಗೆ ಜನಸಮುದಾಯದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇವತ್ತಿನ ದಿನಗಳಲ್ಲಿ ಆಧುನಿಕ ಬದುಕಿನ ಒತ್ತಡ, ವೇಗದ ಮತ್ತು ನಿದಿಷ್ಟ ಗುರಿಯ ಜೀವನ ಕ್ರಮಗಳಿಂದಾಗಿ ಹಾಗೂ ನಮ್ಮ ಶಿಕ್ಷಣ ಕ್ರಮದಲ್ಲಿನ ಬದಲಾವಣೆಗಳು ಹಾಗೂ ಇತರ ಆಕರ್ಷಣೆಗಳಿಂದಾಗಿ ಪುಸ್ತಕೋದ್ಯಮ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಪ್ರಜ್ಞಾವಂತರಾದ ಎಲ್ಲರೂ ಮಕ್ಕಳಿರುವಾಗಲೇ ಓದುವ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ಅತ್ಯಂತ ಜರೂರಾಗಿ ಮಾಡಬೇಕಿದೆ. ವಿಶೇಷವಾಗಿ ಪುಸ್ತಕ ಮುದ್ರಣ ನಿರ್ವಹಣೆ, ಪ್ರಸಾರಣೆಯ ಹಲವು ಹಂತಗಳಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆ ಸಾಧ್ಯವಾಗಿಲ್ಲ. ಆಧುನಿಕ ಉಪಕರಣಗಲಾದ ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳು, ಮೊಬೈಲ್ಗಳ ಮೂಲಕವೂ ಪುಸ್ತಕ ಪ್ರೀತಿಯನ್ನು ವಿಸ್ತರಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕಿದೆ. ಆ ಕೆಲಸಕ್ಕೆ ಸಿದ್ಧರಾಗಲು ಇಂದೇ ಶುಭದಿನ.