[ಕುರುಕ್ಷೇತ್ರ ಶ್ಮಶಾನದ ಒಂದು ಭಾಗದಲ್ಲಿ ಪಾಂಡವ ಪಕ್ಷದವರ ಚಿತೆ. ಭೀಮ, ಅರ್ಜುನ, ಧರ್ಮರಾಯ, ದ್ರೌಪದಿ — ಎಲ್ಲರೂ ಶೋಕ ವಿಹ್ವಲರಾಗಿ ನಿಂತಿದ್ದಾರೆ. ಸೂಡಿನ ಮೇಳೆ ಅಭಿಮನ್ಯು ಘಟೋತ್ಕಚರೇ ಮೊದಲಾದವರ ಶವಗಳಿವೆ. ಇದುವರೆಗೂ ಕಲ್ಮನಸ್ಸಿನಿಂದಿದ್ದ ಭೀಮನಿಗೆ ಇಂದು ಸೂಡಿನ ಮೆಲಿದ್ದ ಘಟೋತ್ಕಚನ ಶವವನ್ನು ನೋಡಿ ಮರುಕ ಮಿತಿಮೀರಿಹೋಗಿದೆ. ಆಸ್ಪಷ್ಟರೋದನ ಧ್ವನಿ ಎಲ್ಲೆಲ್ಲಿಯೂ ವ್ಯಾಪಿಸಿದೆ.]
ಧರ್ಮರಾಯ — ಭೀಮಸೇನ, ಮೊದಲ್ಗಯ್ದ ಕಜ್ಜಮಂ ಗೊನೆಗಾಣ್ಚು.
ಆದುದಾಯಿತು; ಚಿಂತೆಯಿಂದೇನ್? ಸೂಡಿಂಗೆ
ಬೆಂಕಿಯಿಡು. (ಭೀಮನು ಗೋಳಿಡುತ್ತಾನೆ.)
ನೀನಿಂತು ಗೋಳಾಡಿದೊಡೆ, ಭೀಮ,
ಉಳಿದರು ಸಂತಯ್ಪರಾರ್?
ಭೀಮ — ಅಣ್ಣಾ,
ಕೊಲೆಗಾರನ್ ಆನ್ ಎಂಬುದನ್ ಈಗಳರಿತೆನ್,
ಈ ಎನ್ನ ಮುದ್ದು ಶಿಶುಗಳ ಪೆಣಗಳೆಡೆ ನಿಂತು
ಗಾಂಧಾರಿ ಧೃತರಾಷ್ಟ್ರರಳಲಾಳಮಂ ತಿಳಿದೆನ್.
(ಅರ್ಜುನ ಮೊದಲಾದವರು ಅವನೊಡನೆ ರೋದಿಸುತ್ತಾರೆ)
ಧರ್ಮರಾಯ — (ಸ್ವಗತ) ಬೀರರಾದೊಡಮೇನ್? ಸ್ಥಿತಪ್ರಜ್ಞರಲ್ಲದೀ
ಮಾನವರ್ ಕೋಪಮನೆ ಕೆಚ್ಚೆಂದು ಭ್ರಮಿಸುವರ್.
ಕೋಪಂ ಬತ್ತಲೊಡನೆ ಕೆಚ್ಚುಂ ಕರಗುವುದು.
ಕೋಪಮೆಂಬಾ ಮಧ್ಯಪಾನಮಿಲ್ಲದೆ ಇವರ್
ಕೊಲೆಗೆ ಕೈಯಿಡಲರಿದು! — ಚೆತೆಗೆ ನಾನೇ
ಬೆಂಕಿಯಿಡುವೆನ್. — (ಬೆಂಕಿ ಇಡಲು ಹೋಗಿ ನಿಲ್ಲುತ್ತಾನೆ.೦
ಅದಾರಲ್ಲಿ ಬರ್ಪವರ್?
ಮಾತೆ ಕುಂತಿದೇವಿ! ಸೋದರನ್ ಸಹದೇವನ್!
ಆರನೋ ಪೊತ್ತು ತಂದಪರಲ್ತೆ?
(ಕುಂತಿ ಸಹದೇವರು ಕರ್ಣನನ್ನು ತರುತ್ತಾರೆ. ಎಲ್ಲರೂ ಆ ಕಡೆ ತಿರುಗಿ ನಿಲ್ಲುತ್ತಾರೆ. ಭೀಮನು ಮರುಕವನ್ನು ತೆಗೆದೊಗೆದು ನಿಂತು ಹುಬ್ಬು ಗಂಟಿಕ್ಕಿಕೊಂಡು ದುರುದುರನೆ ಕರ್ಣನ ಶವವನ್ನು ನೋಡುತ್ತಾನೆ.)
ಧರ್ಮರಾಯ — ಸಹದೇವ, ಇದೇನಯ್?
ಕುಂತಿ — ಓ ಮಗೂ, ಯುದಿಷ್ಠಿರಾ, ಕರ್ಣನನ್ ಇದರೊಳೇ
ದಹನಂ ಗೈವಂತೆನಗೆ ಕೃಪೆಮಾಡೈ.
ಧರ್ಮರಾಯ — ತಾಯೆ,
ಸುಡುವ ಬೆಂಕೆಗೆ ಕರುಣೆಯಿಲ್ಲ, ಕರುಬಿಲ್ಲ.
ಆದೊಡಂ, ಇದರರ್ಥಮೇನ್? ತಿಳಿಯಲೆಳಸುವೆನ್.
ಕುಂತಿ — ಕಂದಾ, ನಾನಾವುದುಮಂ ಪೇಳಲಾರೆನ್;
ಎನ್ನಾಸೆಯಂ ನೀನ್ ನಡೆಸಿಕೊಡವೇಳ್ಕುಂ.
ಭೀಮ — (ರೋಷದಿಂದ)
ಏಂ ಮಾಳ್ಕೆಯಿದು, ತಾಯೆ? ಎಮ್ಮ ಕುಲಘಾತುಕನ್
ಈತನನ್ ನಾವುರಿಪುವುದೆ? ನೋಡು, ನೋಡಿದನ್:
ಇವನೆ ಕೊಲೆಗೈದಿರ್ಪ ಅಭಿಮನ್ಯು ಘಟೋತ್ಕಚರ್.
(ಕಣ್ಣು ಅರಳಿಸಿ ಸಹದೇವನನ್ನು ನೋಡಿ)
ಸಹದೇವ, ಇದೇನನ್ ನೀನೆಸಗಿರ್ಪೆ! ತೊಲಗಿಸಿಲ್ಲಿಂ
ಈ ಮಿಗದ ಪೆಣಮಂ ! (ಕುಂತಿ ಆಳುತ್ತಾಳೆ.)
ಧರ್ಮಜಾ, ರೋದನಕೆ
ನೀನಳುಕಿದೊಡೆ ವಿಲಯಮಹುದಿಂದೆ!
ಅರ್ಜುನ — ಅಣ್ಣಾ,
ಅಭಿಮನ್ಯುವನ್ ಬೇಳ್ವ ಬೆಂಕೆ ಕರ್ಣನನ್
ಸುಡಲಾಗದು. — ಈ ಕರ್ಣನಿವನಾರ್ ನಮಗೆ?
ಭೀಮ — ಪಗೆಯ ಕೆಳೆ! ಅಭಿಮನ್ಯುವನ್ ಘಟೋತ್ಕಚನನ್
ಮೋಸದಿಂದಿರಿದವನ್!
ಕುಂತಿ — (ಮರುಗಿ) ಓ ಭೀಮ, ಓ ಆರ್ಜುನ,
ಓ ಎನ್ನ ಕಂದಗಳಿರಾ, ಕೈಮುಗಿದು ಬೇಡುವೆನ್,
ಸೆರಗೊಡ್ಡಿ ಬೇಡುವೆನ್ ಎನ್ನಾಸೆಯಂ ಸಲಿಸಿಂ!
ನಾನ್ ನಿಮಗೆ ತಾಯಿ ಅಹುದಾದೊಡೆ —
ಭೀಮ — ತಾಯೆಂದೆ
ತಿಳಿದಿಂತು ಪೇಳ್ದಪೆನ್.
ಕುಂತಿ — ನಾನ್ ನಿಮಗೆ ತಾಯಲ್ತು;
ಮೇಣಿವಂಗೆ ತಾಯೆಂದು ತಿಳಿದೆನ್ನ ಬಯಕೆಯಂ
ದಕ್ಯಾಯಿಂ. ವಾದಿಸದಿರಿಂ, ಓ ನನ್ನ ಪುತ್ರರಿರಾ!
(ಅಶ್ವತ್ಥಾಮನು ಬರುತ್ತಾನೆ.)
ಅಶ್ವತ್ಥಾಮ — ಓ ಧರ್ಮಪುತ್ರಾ,
ವೀರನೊರ್ವನ ಕಟ್ಟಕಡೆ ಬಯಕೆಯಂ ಸಲಿಸೆ
ಇಲ್ಲಿಗೈತಂದಿಹೆನ್. ವೀರರಾಗಿಹ ನೀವು
ಎನಗೆ ನೆರವಾಗದಂ ನೆರವೇರಿಸಲೆವೇಳ್ಕುಂ.
ಕೌರವೇಂದ್ರನ್ ಮಡಿವ ಮೊದಲೆನ್ನನ್ ಕರೆದು
ಕರ್ಣನನ್ ತನ್ನೊಡನೆ ಸೂಡುಗೈಯಲ್ ಬಸಸಿ
ಪೋದನ್. ಪೋದವರ ಬಯಕೆಯಂ ಇರ್ಪವರ್
ಕೈಗೂಡಿಪುದೆ ಧರ್ಮಂ!
ಭೀಮ — ಅಶ್ವತ್ಥಾಮ, ಕರ್ಣನನ್
ಕೊಂಡುಪೋಗಯ್, ನೀನಿವಂಗೆ ಸಂಸ್ಕಾರಂ
ಎಸಗುವುದೆ ಧರ್ಮಂ!
ಕುಂತಿ — ಓ ಅಶ್ವತ್ಥಾಮ,
ಕರ್ಣನನ್ ಈ ಎಮ್ಮ ಚಿತೆಯೊಳೇ ದಹಿಪುದಯ್
ಎನ್ನಾಸೆ. ಆ ಬಯಕೆಗಡ್ಡ ಬರಬೇಡಯ್ , ತಂದೆ.
ಅಶ್ವತ್ಥಾಮ — ದೇವಿ, ಕೌರವನಾಶೆ! ಮೇಣೆನ್ನ ಬಾಸೆ!
ಕೈಮುಗಿದು ಕೇಳ್ವೆನ್; ಬೀಳ್ಕೊಡಿಂ ಕರ್ಣನನ್.
ಭೀಮ — ತಡಮೇನ್? ಕೊಂಡುಪೋಗಯ್, ಅಶ್ವತ್ಥಾಮ!
ಕುಂತಿ — (ಭೀಮನ ಕಡೆ ತಿರುಗಿ ಹೇಳುತ್ತಾಳೆ.)
ಓ ಭೀಮ,
ತಾಯಿಗೋಸುಗಮಾದೊಡಂ ಕರಗಲಾರೆಯೇನ್?
ಬೆಂದೊಡಲ್ಗಿಂತು ಕರ್ಬ್ಬುನಂ ಚುರ್ಚುವರೇನ್?
(ಆಶ್ವತ್ಥಾಮನು ಕರ್ಣನನ್ನು ಕೊಂಡುಹೋಗುತ್ತಾನೆ. ಕುಂತಿ ತಿರುಗಿ ನೋಡಿ
ಬಿದ್ದು ಗೋಳಾಡುತ್ತಾಳೆ.)
ಓ ಕಂದಾ, ಓ ಕರ್ಣಾ, ನಿನ್ನನಿದಕಾಗಿಯೇ
ಪೆತ್ತೆನೇನ್? ಸುಮ್ಮನಿರ್ದಪೆ ಏಕೆ, ಓ ಸಹದೇವ?
ಧರ್ಮರಾಯ — ಇದೇನಿದು ಸಹದೇವ? ತಾತಿ ಕರ್ಣನನ್
ಪಡೆದೆನ್ ಎಂದಳಲ್ವಳಲ್ಲಾ!
ಸಹದೇವ — ಮನ್ನಿಸೆನ್ನನ್, ಅಣ್ಣಾ;
ತಾಯಿಯೊಡಲೊಳೆ ಬಂದ ರಾಧೇಯನೆಮಗೆಲ್ಲ
ಪಿರಿಯಣ್ನನ್!
ಧರ್ಮರಾಯ — (ಸಿಡಿಲೆರಗಿದವನಂತೆ) ಏನನ್ ಪೇಳ್ದಯ್?
ಭೀಮ — ಪುಸಿಯಾಡದಿರ್!
ಅರ್ಜುನ — ಅಯ್ಯೋ ಏನಾದುದು ಕಡೆಗೆ?
ಸಹದೇವ — ವಿವರಂ ಅನಂತರಂ. ನಾನ್ ಪೇಳ್ದುದದು ದಿಟಂ!
ಕುಂತಿ — ಓ ಎನ್ನ ಕಂದಾ, ಓ ಕರ್ಣಾ,
ಈಗಳಿವರೆಲ್ಲರುಂ ನಿನ್ನವರೆ. ನಾನೆ,
ಪಾಪಿ ಪರಕೀಯಳಾದೆನಲ್ತೆ?
ಲೋಕಮಿವರಾರನುಂ ನಿಂದಿಸದು, ಎನ್ನನೋ,
ಮಗನ ಕೊಲೆಯಂಗೈದ ಕಡುಪಾಪಿ ಎಂದು
ಪೇಸುವುದು! (ಅಳುತ್ತಾಳೆ.)
ಧರ್ಮರಾಯ — ತಾಯೇ, ಏನನೆಸಗಿರ್ಪೆ ನೀನ್?
ಅರ್ಜುನ — ಓ ಕೃಷ್ಣಾ, ಪುಸಿವೇಳ್ದು ಕೊಲಿಸಿದೆಯಾ!
ಭೀಮ — ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!
(ದೃಶ್ಯ ಮಾಯವಾಗುತ್ತದೆ.)
Leave A Comment