ಭಾಮಿನಿ
ಪರಿಕಿಸುತ ನಾಲ್ದೆಸೆಯ ಪುರಹರ |
ತೆರಳಿತೆಲ್ಲಿಗೆ ಪ್ರಮಥಸೇನೆಯು |
ಅರರೆ ಯೇನಾಶ್ಚರ್ಯವೆನ್ನುತ ಲರಿತು ವೇಗದಲಿ ||
ಧುರವು ಸಂಘಟಿಸಿಹುದು ನಾನೀ |
ಪುರದೊಳೀರ್ದುದಕೇನು ಸಾರ್ಥಕ |
ಬರುವದಪಕೀರ್ತಿಗಳೆನುತ್ತಲಿ ಪೊರಟು ಘರ್ಜಿಸುತಾ || ೩೧೪ ||
ರಾಗ ಭೈರವಿ ಝಂಪೆತಾಳ
ಏರಿ ವೃಷಭನ ಚಂದ್ರಚೂಡ ಭಾಗೀರಥಿಯು |
ತೋರ ಜಟೆಯೊಳಗೆ ರಂಜಿಸಲು ||
ಭಾರಿ ಶೂಲವ ಧರಿಸಿ ಗಜಚರ್ಮದೊಸನದೊಳು |
ಭೋರನೈತಂದನಾ ಹವಕೆ || ೩೧೫ ||
ಶರಣನಾಗಿಹ ವೀರಮಣಿಯೊಡನೆ ಸಂಗರಕೆ |
ಹರಿತಂದನ್ಯಾರು ಪಟುಭಟನು ||
ಅರಿಯನೇ ನಾನೀತನಳಿಯನೀ ಪುರವರದಿ |
ಸ್ಥಿರದಿ ನೆಲಸಿಹನೆಂಬ ಪರಿಯಾ || ೩೧೬ ||
ಯಾವ ಭಟನೆನಗಿದಿರು ಮಾರಾಂತು ನಿಲ್ಲುವನು |
ಕೇವಲ ಮದಾಂಧ ಶತ್ರುಹನೂ ||
ಸಾವ ನಿಶ್ಚೈಸೀರ್ಪನರರೆಯೆನ್ನೊಡನೀತ |
ನ್ಯಾವಕಾಲಕು ಗೆಲುವದುಂಟೆ || ೩೧೭ ||
ತುರಗ ಮೇಧದ ಕಪ್ಪಕೆನುತ ಬಂದವನೆನ್ನೊ |
ಳ್ವರಿಯದೆ ತಾ ಬಂದ ಸ್ಥಿತಿಯಾ |
ಧುರಗೈದು ಎಮ್ಮವರ ಕೆಡಹಿದನೆ ವೀರಮಣಿ |
ಹರನೀರ್ಪನೆಂದು ನಂಬೀರ್ದ || ೩೧೮ ||
ಶರಣನಾಗಿಹ ವೀರಮಣಿಗೆಯಪಜಯಮಾಗೆ |
ಧರೆಯೊಳಾರೆನ್ನ ನಂಬುವರು ||
ಬರಿದೆಯಪವಾದಪೊಂದಿದೆನರರೆ ಸಂಗರದಿ |
ಕೊರವೆನೀತನ ಕಂಠವೆನುತಾ || ೩೧೯ ||
ಕಾಲಾಗ್ನಿ ರುದ್ರನಾಗುತ್ತ ಫಣೆಗಣ್ಣಿನೊಳು |
ಜ್ವಾಲೆ ಧಗಧಗಿಸೆ ಹೂಂಕರಿಸಿ ||
ಕಾಳಗಕೆ ಮಾರಾಂತು ಶತ್ರುಹನ ಕರೆದೆಂದ |
ಶೂಲವನು ತಿರುಹಿ ಖಾತಿಯಲಿ || ೩೨೦ ||
ರಾಗ ಮಾರವಿ ಏಕತಾಳ
ಎಲೆಲೇ ಶತ್ರುಹ ನಾನ್ಯಾರೆಂಬುದ | ಘಳಿಲನೆ ಪರಿಕಿಸೆಲಾ ||
ಕಲಹದಿ ಮಮ ಕಿಂಕರನನು ಮಡುಹಿದ | ಬಲವತಿಕೆಯ ತೋರೊ || ೩೨೧ ||
ಅರಿತಿಹೆ ನಿನ್ನನು ಶ್ರೀ ರಘುರಾಮನ | ತುರಗವ ಬಂಧಿಸುತಾ ||
ಧುರಕೈತಂದಿಹ ಖೂಳನ ಮಡುಹಿದೆ | ಹರ ನಿನಗಂಜುವೆನೆ || ೩೨೨ ||
ಮೊದಲೆನ್ನೊಡನಿದನರುಹಿರೆ ನೃಪನೊಳು | ಕದನಗಳಿರುತಿಹುದೆ ||
ಮುದದೊಳು ಕಪ್ಪವ ಕೊಡಿಸುತಲೀರ್ದೆನು | ಮದಮುಖನಾದೆಯಲಾ || ೩೨೩ ||
ಶರಣರ ಪೊರೆಯುವ ಬಿರುದಿರೆ ನಿನ್ನಲಿ | ಹರಿತಂದಾದಿಯೊಳು ||
ದರುಶನವೀಯುತ ಕರವನು ಕೊಡಿಸಿರೆ | ಧುರಕನುವಾಗುವೆನೆ || ೩೨೪ ||
ಶೂಲದಿ ಹೃದಯವ ಭೇದಿಪೆನೀ ಕ್ಷಣ | ಜಾಲತ್ವದ ನುಡಿಯಾ ||
ಪೇಳುವದ್ಯಾತಕೊ ಸಲಿಗೆಗಳಾದುದೆ | ತಾಳೆನು ಕ್ಷಮೆಗಳನೂ || ೩೨೫ ||
ದಶಶಿರ ಮಥನನ ಕರುಣಗಳಿರುತಿರೆ | ವ್ಯಸನಗಳೇನಿಹುದು ||
ಶಶಿಜೂಟನೆ ತಾಳೆನ್ನುತ ಪರಿಪರಿ | ವಿಶಿಖವ ತೂರಿದನೂ || ೩೨೬ ||
ರಾಗ ಶಂಕರಾಭರಣ ಮಟ್ಟೆತಾಳ
ಹರಿಯ ನಾದದೊಳ್ಕಪರ್ದಿ | ಬರುವ ಶರವ ತುಂಡಿಸುತ್ತ |
ಮರುಳೆ ತೋರು ನಿನ್ನ ಸಹಸ | ನೋಳ್ಪೆನೆಂದನೂ || ೩೨೭ ||
ಭರದಿ ಬ್ರಹ್ಮಾಸ್ತ್ರವನ್ನು | ತಿರುಹಿನೊಳಗೆ ಪೂಡುತಾಗ |
ಗುರಿಯನೋಡುತೆಸೆಯೆ ಭರ್ಗ | ಮುರಿದು ಕೆಡಹಿದ || ೩೨೮ ||
ಸ್ಮರಿಸಿ ರಾಮತಾರಕಾಖ್ಯ | ಪರಮ ಮಂತ್ರವನ್ನು ದಿವ್ಯ |
ಶರದೊಳೈಕ್ಯಗೊಳಿಸಿ ಚಂದ್ರ | ಚೂಡಗೆಸದನೂ || ೩೨೯ ||
ಉರಿಯಸೂಸಿ ತ್ರಿಪುರಮಥನ | ಶರವ ಶೂಲದೊಳಗೆ ಮುರಿದು |
ಪರಿಘದಿಂದಲೆರಗೆ ಶಿರಕೆ | ಧರಣಿಗುರುಳಿದ || ೩೩೦ ||
ಭಾಮಿನಿ
ಬರಿದೆ ಗರ್ವದಿ ತರಳತನದೊಳು |
ಧುರಕೆ ನಿಂದುದಕಾಯ್ತ ವಿಧಿ ನಾ |
ಪರಿಕಿಪೆನು ಮತ್ತಾರು ಬಹರೆಂದೆನುತಲಿರೆ ಹರನು ||
ಮರುತಸುತನೈತಂದು ಮುಂದೆಸೆ |
ಧರೆಯೊಳಗೆ ಬಿದ್ದಿರುವ ಶತ್ರುಹ |
ಭರತಜನ ಕಂಡಾಗ ಹಮ್ಮೈಸುತ್ತಲಿಂತೆಂದ || ೩೩೧ ||
ರಾಗ ಘಂಟಾರವ ಅಷ್ಟತಾಳ
ಆರು ಎಮ್ಮಯ ಪುಷ್ಕಳ ಶತ್ರುಹ |
ವೀರರೀರ್ವರ ಕೆಡಹಿದಾತನ | ಭೋರನಸುವನೆ ತೊಲಗಿಪೆ || ೩೩೨ ||
ತುರಗ ಬೆಂಬಲಕಾಗಿ ಎಮ್ಮೆಲ್ಲರ |
ತೆರಳಿಸುವ ಕಾಲದಲಿ ರಾಘವ | ಕರೆದು ಪೇಳಿಹನೆನ್ನೊಳು || ೩೩೩ ||
ಜನಕ ಜಾತೆಯನರಸಿ ಲಂಕೆಯಸುಟ್ಟು |
ದನುಜಕೋಟಿಯ ತರಿದವನು ನೀ | ನೆನಗೆ ಪ್ರಿಯತಮ ಭಕ್ತನೂ || ೩೩೪ ||
ನಿನ್ನ ವಿಕ್ರಮನಂಬಿ ಶತ್ರುಹ ಮುಖ್ಯ |
ರನ್ನು ಕಳುಹುವೆ ಪೊರೆವುದೆಂದನು | ಎನ್ನದೇವ ದಯಾನಿಧೆ || ೩೩೫ ||
ಅನುಜನೇನಾದನೆಂದೆನ್ನ ಕೇಳ್ದರೆ |
ಚಿನುಮಯಾತ್ಮನಿಗೇನನುಸುರಲಿ | ಘನವೆ ಎನ್ನಯ ಬಾಳ್ವೆಗೆ || ೩೩೬ ||
ಭಾಮಿನಿ
ಕುಟ್ಟಿ ಬ್ರಹ್ಮಾಂಡವನೆ ಚೂರ್ಣಿಪೆ |
ದುಷ್ಟನಾರೆಲ್ಲಿಹನು ನಮ್ಮಯ |
ದಿಟ್ಟ ಶತ್ರುಹರನ್ನು ಕೆಡಹಿದನಸುವ ಹಿಂಡುವೆನು ||
ದೃಷ್ಟಿಗೋಚರಮಾಗೆ ಬಿಡೆನೆಂ |
ದಟ್ಟಹಾಸದೊಳಿರಲು ತ್ರಿನಯನು |
ದುಷ್ಟ ಕೋಡಗ ನಿಲ್ಲು ನಿಲ್ಲೆಂದೆನುತಲಿದಿರಾದ || ೩೩೭ ||
ರಾಗ ಭೈರವಿ ಅಷ್ಟತಾಳ
ಎಲವೋ ಮದಾಂಧ ನೀನು | ನಿಷ್ಕಾರಣ | ದೊಳಗೀಗ ದ್ವೇಷವನ್ನು |
ಗಳಿಸಿಕೊಂಡಿಹುದೇಕೆ ಪೇಳು ಪೇಳೆಲೊ ಬೇಗ | ಫಲವನುಭವಿಸುವೆಯಾ || ೩೩೮ ||
ಧುರಕೆ ಶತ್ರುಹನೆನ್ನೊಳು | ಮಾರ್ಮಲೆತಿಹ | ಪರಿಗಾಗಿ ವೇಗದೊಳು |
ಧರೆಯೊಳು ಕೆಡಹಿದ ಶೂರನಾಗಿಹೆ ನಾನು | ಪರಿಕಿಸೆಲವೊ ಧೂರ್ತನೆ || ೩೩೯ ||
ಸೀತಾವಲ್ಲಭಗೆ ನೀನೂ | ದುಃಖವನಿತ್ತು | ಘಾತವ ಗೈದವನು |
ಖ್ಯಾತವಾಗಿಹ ತ್ರೈಮೂರ್ತಿಯೊಳಿಹೆನೆಂದು | ಈತೆರ ಗೈದಿಹೆಯಾ || ೩೪೦ ||
ವನದೊಳು ಮೆರೆದಿರುವ | ಕೋಡಗನಿಂಗೆ | ಮನುಜರೊಳ್ ಸುಸ್ನೇಹವಾ |
ಎಣಿಸಲಾಶ್ಚರ್ಯವು ರಾಮನೊಳ್ ನಿನಗಿಂಥ | ಕನಿಕರವ್ಯಾತಕೀಗ || ೩೪೧ ||
ಅರಿಯೆಯ ರಘುವರನಾ | ಸದ್ಭಕ್ತನಾ | ಗಿರುತಿಹ ಹನುಮಂತನಾ |
ಪರಿಕೆಸೆಲವೊ ನಾನೆಯಾತನ ಕಿಂಕರ | ಬರಿದ್ಯಾತಕಿಂತು ಪೇಳ್ವೆ || ೩೪೨ ||
ರೂಢಿಯೊಳಗೆ ಶೂರನೂ | ಅನ್ಯರ ಸೇವೆ | ಮಾಡಲು ನಿಂದೆಯನ್ನೂ |
ಗಾಢದಿ ಪೊಂದುವನದಕೆನೀ ಷಂಡನೊ | ಕೋಡಗ ಪೇಳೆನಗೆ || ೩೪೩ ||
ವೀರಮಣಿಯ ಪುರದಿ | ನಿನ್ನಯ ಪರಿ | ವಾರದೊಡನೆ ಮೋದದಿ |
ಯಾರ ಸೇವೆಯಗೈವ | ನೆವದೊಳು ವಸತಿಯು | ಭೋರನೆ ಪೇಳೆನಗೆ || ೩೪೪ ||
ಶರಣವತ್ಸಲನಹೆನು | ಈ ಪುರವರ | ದರಸನೆನ್ನಯ ಭಕ್ತನು |
ವರವ ಕೊಟ್ಟಿಹೆ ನಿನ್ನ ಪುರದೊಳಗಿಹೆನೆಂದು | ತೆರಳಿ ಬಂದಿಹೆನದಕೆ || ೩೪೫ ||
ರಾಗ ಮಾರವಿ ಏಕತಾಳ
ಪರಮಾತ್ಮನ ಸದ್ಭಕ್ತನು ಎಂಬುವ | ಬಿರುದಿಹ ಕಾರಣದಿ ||
ಸ್ಥಿರಗೊಳಿಸಲು ರಘುನಾಥನ ಪಾದವ | ಪರಿಸೇವಿಸುತಿಹೆನೂ || ೩೪೬ ||
ಆರಕಿಂಕರ ನೀನಾದರೇನಾಯಿತು | ಕ್ರೂರತ್ವದೊಳೀಗ ||
ಮಾರಾಂತಿಹ ಕಾರಣಗಳ ಪೇಳೆಲೊ | ಭೋರನೆ ಮರ್ಕಟನೆ || ೩೪೭ ||
ದಿವನಿಶಿಯೊಳುನೀ ಭಜಿಸುವೆ ರಾಮನ | ಭವರದಿ ಶತ್ರುಹನಾ ||
ಅವನಿಯೊಳ್ಕೆಡಹಿದ ಕಾರಣ ಶಿಕ್ಷಿಪ | ನೆವದೊಳು ನಿಂದಿಹೆನು || ೩೪೮ ||
ಅತಿಬಲ ತ್ರಿಪುರರ ಪಿಂದಕೆ ಧ್ವಂಸೀ | ಕೃತವನೆ ಗೈದಿರುವ ||
ಶಿತಿಕಂಠನ ಪರಿಯರಿಯೆಯ ಕೋಡಗ | ಮತಿಹೀನನೆ ಭಲರೆ || ೩೪೯ ||
ಬಲಿವರೆ ಸೇತುವ ಕೈಲಾಸವನಾ | ನಲುಗಿಸಿ ಕಿತ್ತಿರಲು ||
ಘಳಿಲನೆ ನೀ ಬಂದೆನ್ನನು ಸ್ತುತಿಸಿದ | ನೊಲವನೆ ಮರೆತಿಹೆಯ || ೩೫೦ ||
ರಾಗ ಕೇತಾರಗೌಳ ಝಂಪೆತಾಳ
ಪಿಂದೆ ರಾಮನ ಕಾರ್ಯದಿ | ದೂತತ್ವ | ಕೆಂದು ಲಂಕೆಗೆ ಗರ್ವದಿ |
ಮಂದಮತಿ ಪೋಗಿರ್ದೆಯಾ | ಬಾಲ ಸುಡ | ಲಂದು ಬಲ್ಲೆನು ಶಕ್ತಿಯಾ || ೩೫೧ ||
ದುರುಳ ಭಸ್ಮಾಸುರನಿಗೆ | ವರವಿತ್ತು | ಭರದೊಳೋಡಿದ ಲಂಡಿಗೆ |
ಸಿರಿಯರಸನುಪಕೃತಿಯನೂ | ಗೈದಿಹುದ | ನರಿತೀರ್ಪೆನಲ್ಲೊ ನಾನು || ೩೫೨ ||
ವನದೊಳಗೆ ತರುವಡರುತಾ | ಫಲಪಣ್ಣ | ಘನತೆಯಿಂದಲಿ ಮೆಲ್ಲುತಾ |
ಕುಣಿದು ಕೂಗುವ ಪ್ಲವಗನೂ | ಮಾರ್ಮಲೆತು | ರಣಗೈವದುಂಟೆ ನೀನೂ || ೩೫೩ ||
ಕೊಳೆತು ನಾರುವ ಚರ್ಮವಾ | ವಸನವಾ | ಗಳವಟ್ಟು ಬಹುಭಸ್ಮವಾ |
ಬಳಿದುಕೊಂಡು ಸ್ಮಶಾನದಿ | ಬಿದ್ದಿರುವ | ಕಲಿಯು ನೀನಹೆ ಶೌರ್ಯದಿ || ೩೫೪ ||
ಅಂಧಕಾಸುರನೆಂಬನೂ | ದೇವರ್ಕ | ಳಂದಗೆಡಿಸಿದ ಧೂರ್ತನೂ |
ಕೊಂದಿಹೆನು ಕ್ಷಣಮಾತ್ರದೀ | ನಿನಗರಿದು | ಮಂದಮತಿ ಪೇಳ್ವೆ ಮದದಿ || ೩೫೫ ||
ಬಲ್ಲೆ ಮೂರ್ಖತ್ವದೊಳಗೆ | ಇರುವ ಪ್ರಿಯ | ವಲ್ಲಭೆಯ ನೆತ್ತಿಯೊಳಗೆ |
ಮೆಲ್ಲನಾಸನವೀಯುತಾ | ಕುಳ್ಳಿರಿಸಿ | ಮಲ್ಲನಂಬೆಯ ನಲಿಯುತಾ || ೩೫೬ ||
ಭಾಮಿನಿ
ಅರಸನಾದ ಭಗೀರಥಾಖ್ಯನ |
ಪರಮ ತಪಸಿಗೆ ಮೆಚ್ಚಿ ಗಂಗೆಯು |
ಸುರನಗರಪಥದಿಂದ ಬೀಳುವ ಭರಕೆ ಧಾರುಣಿಯು ||
ಬಿರಿದು ಪೋಪುದೆನುತ್ತ ದೃಢವಹ |
ಶಿರವನೊಡ್ಡಿಹೆನಿದರನರಿಯದೆ |
ಮರುಳೆ ನಿಂದಿಪುದೇಕೆನುತ್ತಲಿ ಗಜರಿ ಘರ್ಜಿಸಿದಾ || ೩೫೭ ||
ರಾಗ ಶಂಕರಾಭರಣ ಮಟ್ಟೆತಾಳ
ಬರಿದೆ ಮಾತಿನೊಳಗೆ ಸ್ವಾರ್ಥ | ವಿರದು ತಾಳೆನುತ್ತ ಹನುಮ |
ತರುವನೊಂದ ತೂಗಿ ಬಡಿದ | ಗಿರಿಜೆಯರಸನಾ || ೩೫೮ ||
ಕೆರಳಿ ಭೂತನಾಥ ತರುವ | ಮುರಿದು ಕೆಡಹಿ ಶೂಲದಿಂದ |
ಲಿರಿಯೆ ಮರುತ ತನಯ ಕಸಿದು | ಬಿಸುಟನಾ ಕ್ಷಣ || ೩೫೯ ||
ಕೃತ್ತಿವಾಸನಾಗ ಪರಶು | ವೆತ್ತಿ ಪೊಯ್ಯಲಾಗ ಹನುಮ |
ಪೃಥ್ವಿಯೊಳಗೆ ಚೂರ್ಣಗೈದು | ಕೆಡೆದ ಭರದಲಿ || ೩೬೦ ||
ಖತಿಯ ತಾಳುತಂಧಕಾರಿ | ಯತಿಬಲಾಢ್ಯನಹುದೊ ಭಳಿರೆ |
ಹತಿಯ ತಾಳೆನುತ್ತ ಖೇಟ | ದಿಂದ ತಿವಿದನೂ || ೩೬೧ ||
ರಾಗ ಭೈರವಿ ಏಕತಾಳ
ಎಲೆ ಜಂಗಮ ನಿನ್ನೀಗಾ | ನಾ | ಕೊಲುವೆನು ನೋಡೆನುತಾಗ |
ಬಲಿಯುತ ಮುಷ್ಟಿಯ ಭರದಿ | ಖತಿ | ಗೊಳುತಲೆಯೆರಗಿದ ರವದಿ || ೩೬೨ ||
ಸಿಡಿಲಂದದಿ ಭೋರ್ಗುಡಿಸೀ | ಆ | ಮೃಡನಕ್ಷಿಯೊಳ್ ಖಿಡಿವೆರಸಿ |
ಬಡಿದನು ಖಟ್ವಾಂಗದೊಳು | ಪ | ಲ್ಗಡಿಯುತ ಹೂಂಕಾರದೊಳು || ೩೬೩ ||
ಮರುತಜ ಕನಲುತಲಾಗ | ಮಹ | ಗಿರಿಯನೆ ಕೀಳುತ ಬೇಗಾ |
ಪುರಹರಗೆಸೆಯಲು ಭರದಿ | ಧೂ | ಳೆರಗಿತು ರಣಮಂಡಲದಿ || ೩೬೪ ||
ಭಾಮಿನಿ
ಪುರಹರನು ಮನದೊಳಗೆ ಯೋಚಿಸಿ |
ಧುರವೆಸಗೆ ನಾವುಭಯರೆಂದಿಗು |
ಬರದು ಜಯವೀರ್ವರಿಗೆ ಸಾಸಿರ ವರುಷ ಹೆಣಗಿದಡೆ ||
ಸರಿಯಿದಲ್ಲವೆನುತ ಕ್ಷಮೆಯನು |
ಧರಿಸಿ ಪವನಜನನ್ನು ವಿನಯದಿ |
ಕರೆದು ಪೇಳಿದನಾಗಲತಿ ಮಾಧುರ್ಯ ವಚನದಲಿ || ೩೬೫ ||
ರಾಗ ಮಧುಮಾಧವಿ ತ್ರಿವುಡೆತಾಳ
ವೀರ ಬಾ ಶ್ರೀರಾಮ ಕಿಂಕರ | ಮಾರುತಾತ್ಮಜ ತಾಳು ಸೈರಣೆ |
ವೀರಮಣಿ ಶತ್ರುಹನವಾಹಿನಿ | ಧಾರುಣಿಯೊಳೀಗೊರಗಿದೆ || ೩೬೬ ||
ಆರಿಗೋಸುಗವೆಮ್ಮ ಕದನವು | ಬಾರದೆಂದಿಗು ನಮ್ಮೊಳಗೆ ಜಯ |
ಮೂರು ಕಲ್ಪವು ಹೆಣಗಿದರು ಕೇಳ್ | ಸಾರುವೆನುನಾ ನಿಶ್ಚಯಾ ||೩೬೭||
ಒಲಿದಿರುವೆ ನಾ ನಿನಗೆ ವರವನು | ಘಳಿಲನೀಕ್ಷಣ ಕೇಳು ಕೊಡುತಿಹೆ |
ಕಲಹಬೇಡೆನಲಾಗ ಸೈರಣೆ | ಗೊಳುತಲೆಂದ ||೩೬೮||
ರಾಗ ಸುರುಟಿ ಏಕತಾಳ
ವರವ್ಯಾತಕೊ ಎನಗೆ | ರಾಮನ | ಕರುಣಾರಸದೊಳಗೆ |
ಇರುತಿಹೆ ನಿನ್ನಯ ಹಂಗೆನಗೇತಕೆ | ತೆರಳೆಲೊ ಬಂದಿಹ ಪಥವನೆ ಪಿಡಿಯುತ ||೩೬೯||
ಮರುತಜ ಖತಿಬೇಡಾ | ಕೇಳೈ | ವರವನುನೀ ಗಾಢಾ |
ಬಿರುದಿದೆ ಮೆಚ್ಚಿದ ಮೇಲಕೆ ವಾಂಛವ | ಕರುಣಿಪುದೆನ್ನೊಳು ಕಪಿಕುಲಪುಂಗವ ||೩೭೦||
ಒಲಿದಿರೆ ಬೇಡುವೆನು | ದ್ರೋಣಾ | ಚಲದೆಡೆಗೈದುವೆನೂ |
ಘಳಿಲನೆ ಸಂಜೀವನವನು ತರುತಿಹೆ | ನೆಲದೊಳಗುರುಳಿಹ ಪೆಣಗಳ ಕಾದಿರು ||೩೭೧||
ಅಳಿದಿಹ ಸೇನೆಯೊಳು | ನ್ಯೂನತೆ | ಗೊಳಿಸದೆ ಜತನದೊಳು |
ನಿಲಬೇಕೀಯೆಡೆ ನಿನ್ನಯ ವರವಿದು | ಚಲಿಸಲು ಬಿಡೆನಾನೆಂದಿಗು ತಿಳಿದಿರು ||೩೭೨||
ಹರನದಕಸ್ತೆನುತಾ | ನಿಂದಿರೆ | ಮರುತಜ ಪೊರಮಡುತಾ |
ಭರದೊಳು ದ್ರೋಣಾಚಲಕುಪ್ಪರಿಸುತ | ಹರುಷದಿ ಸಂಜೀವನವನೆ ತಂದನು ||೩೭೩||
ಭಾಮಿನಿ
ಚಾರುಸಂಜೀವಿನಿಯ ತಂದಿಹ |
ಮಾರುತಿಯ ಕಾಣುತ್ತ ಪುರಹರ |
ಧೀರ ನೀನಹೆ ತಾಳು ಎನಗೊಂದುಂಟು ಸಂಶಯವು ||
ಪಾರಮಾರ್ಥದಿ ಕೇಳ್ವೆ ಮನದೊಳು |
ತಾರದಿರು ಖತಿಗಳನು ಮಡಿದಿಹ |
ಭೂರಿಸೇನೆಯನೆಲ್ಲವನು ಜೀವಿಪೆಯ ಪೇಳೆನಗೆ ||೩೭೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭರದೊಳೆಮ್ಮಯ ಸೇನೆಯನುನಾ | ಹರುಷದಿಂದೆಬ್ಬಿಸುವದಲ್ಲದೆ |
ಅರಿಬಲವ ಜೀವಿಸೆನು ಕೇಳೆಂ | ದೊರೆದನಾಗ ||೩೭೫||
ಮಾರುತಾತ್ಮಜ ಕೇಳು ನೀನೀ | ವೀರಮಣಿ ಪಡೆಯನ್ನು ಜೀವಿಸೆ |
ಕ್ರೂರನಾದಡೆ ಕಪ್ಪತುರಗವು | ಬಾರದಯ್ಯಾ ||೩೭೬||
ಒಳಿತು ಸಕಲರನೆಬ್ಬಿಸುವೆನಾ | ಕಲಹ ಗಂಟಿಕ್ಕುವದು ಪುನರಪಿ |
ಹಳಚದಂದದಿ ಮಾಳ್ಪೆಯಾ ನೀ | ತಿಳಿದು ಪೇಳು ||೩೭೭||
ಧರಣಿಪತಿಗಾನಿತ್ತೆ ವರವನು | ಸರಸಿಜಾಂಬಕ ರಾಮ ನಿನ್ನಯ |
ಪುರಕೆಬಹ ಪರಿಯಂತ ನಾನಿ | ಲ್ಲಿರುವೆನೆನುತಾ ||೩೭೮||
ಇತ್ತಿಹಳು ಶಕ್ತಿಯನು ಯೋಗಿನಿ | ಶತ್ರುಹಗೆ ಪೂರ್ವದಲಿಯದರಿಂ |
ಭಕ್ತಿ ರಾಮನೊಳಹುದು ನೃಪಗೆ | ನ್ನುತ್ತವಳೂ ||೩೭೯||
ಉರುಳಿರುವನಾ ಶಕ್ತಿಯಲಿ ನೃಪ | ಮರಳಿ ಜೀವಿಸೆ ಭಕ್ತಿಭಾವವು |
ಬರುತಿಹುದು ಶ್ರೀರಾಮನಲಿ ಖತಿ | ವೆರಸನಯ್ಯಾ ||೩೮೦||
ಬರಿಸು ರಾಮನನಿಲ್ಲಿಗೀ ಕ್ಷಣ | ಮರುತ ಸುತನೀ ಭಜಿಸು ಕಡೆಯೊಳು |
ಹರುಷದಿಂದೆಬ್ಬಿಸುವದೆಲ್ಲರ | ತ್ವರಿತವೆಂದ ||೩೮೧||
ಎನೆಹಸಾದವೆನುತ್ತ ಮಾರುತಿ | ಮನವ ಸುಸ್ಥಿರಮಾಗಿ ನಿಲಿಸುತ |
ಘನತೆಯೊಳು ಕುಳ್ಳಿರ್ದು ವಿನಯಾ | ವನತನಾಗಿ ||೩೮೨||
ರಾಗ ನವರೋಜು ಏಕತಾಳ
ರಾಮ ದಯಾನಿಧೆ ಪಾಹಿ | ಜಯ | ರಾಮನಿರಂಜನ ತ್ರಾಹಿ |
ಕಾಮಿತ ವರದಾಯಕ ಸೀತಾಪತೆ | ರಾಮ ರಾಮ ಭರತಾಗ್ರಜ ಜಯ ಜಯ ||೩೮೩||
ಸರಸಿರುಹದಳ ನಯನ | ಕಡು | ದುರುಳ ರಾವಣ ಮಥನ |
ಧರಿಸಿ ಕೋದಂಡವ ಚೀರಾಂಬರದೊಳು | ತೆರಳಿ ದಂಡಕದಲಿ ಮುನಿಗಳ ಪೊರೆದಿಹೆ ||೩೮೪||
ಸಿರಿಚರಣ ದರ್ಶನವ | ನೀ | ಕರುಣಿಸು ಕಿಂಕರ ಮನವ |
ಹರುಷವ ಪಡಿಸಲು ಬೇಡುವೆ ದೈನ್ಯದಿ | ಶಿರ ಸಾಷ್ಟಾಂಗಪ್ರಣಾಮದಿ ಜಯ ಜಯ ||೩೮೫||
ಭಾಮಿನಿ
ಮರುತ ತನಯನ ಭಕ್ತಿಗೊಲಿಯುತ |
ಭರದೊಳಗೆ ಶ್ರೀರಾಮನೈತರೆ |
ಎರಗಿದನು ಜಯರಾಮ ಜಯತೆಂದೆನುತ ಚರಣದಲಿ ||
ಪುರಮಥನ ಸನ್ನುತಿಸಿ ನಮಿಸುತ |
ಧುರದ ಕಥನವನರುಹಿ ಹನುಮನು |
ತೆರಳಿ ಸಂಜೀವನವ ತಂದಿಹನೆನುತ ಪೇಳಿದನು ||೩೮೬||
ರಾಗ ಸುರುಟಿ ಏಕತಾಳ
ಕರುಣದಿ ಶರಣನನು | ಮನ್ನಿಸಿ | ಸರಸಿರುಹಾಂಬಕನು |
ಹರನನು ಪರಿಪರಿ ಪೊಗಳುತ ಸ್ನೇಹದಿ | ವರದನು ಮರುತಜನೊಡನೆ ವಿನೋದದಿ ||೩೮೭||
ಧುರದೊಳಗಳಿದರನೂ | ಎಬ್ಬಿಸು | ವರ ಸಂಜೀವವನು |
ಕರಿ ತುರಗಾದಿಗಳುಭಯ ಬಲಕೆ ನೀ | ತ್ವರೆಯೊಳು ಮುಟ್ಟಿಸಲೆನಲಭಿವಂದಿಸಿ ||೩೮೮||
ಪವನಜ ಮೋದದೊಳು | ಯೋಜನ | ವಿವರದ ಧಾತ್ರಿಯೊಳು |
ಶ್ರವಮಯಮಾಗಿರೆ ಸಂಜೀವನಿಯನು | ತವಕದಿ ರಾಮನ ನೆನೆಯುತ ಮುಟ್ಟಿಸೆ ||೩೮೯||
ವಾರ್ಧಕ
ಭರದೊಳುಭಯದ ಬಲಗಳೆದ್ದು ಹರಿನಾದದಿಂ |
ದರರೆ ತಮ್ಮಹಿತರ್ಯಾವೆಡೆಯಿರ್ಪರೆಂದೆನುತ |
ಲರಸುತಿರೆ ಶೌರ್ಯದೊಳ್ ಶತ್ರುಹಾದ್ಯರು ರಾಮನಿರಲು ಮುಂಗಡೆ ನಮಿಸಲು ||
ಅರಿಬಲವ ಸಂಹರಿಪೆನೆಂದಾಗ ವೀರಮಣಿ |
ಕರದಿ ಧನುಶರವಾಂತು ಮುಂದಕೈತರಲಾಗ |
ಹರನವನ ಪಿಡಿದು ಸಂತೈಸುತ್ತ ರಾಮನಂ ಪರಿಕಿಸೆನ್ನುತ ತೋರ್ದನು ||೩೯೦||
ಭಾಮಿನಿ
ಪರಮ ತೇಜಃಪುಂಜಮೂರ್ತಿಯ |
ಪರಿಕಿಸಿದ ಮಾತ್ರದಲೆಯಂತಃ |
ಕರಣವಾವಿರ್ಭವಿಸೆ ವಿಸ್ಮಿತನಾಗಿ ಭ್ರಮಿಸುತಲಿ ||
ಧರೆ ಚತುರ್ದಶವೀತನುದರದಿ |
ಪೊರಟು ವಿಸ್ತರಿಸೀರ್ಪುದೆಂಬುವ |
ತೆರನ ಕಾಂಬುದೆನುತ್ತ ರಘುವರಗೆರಗಿ ಕೈಮುಗಿದೂ ||೩೯೧||
ರಾಗ ಆಹೇರಿ ಆದಿತಾಳ
ದಶರಥನೃಪನಂದನಾ | ಪುಂಡರಿಕಾಕ್ಷ | ದಶಶಿರ ಖಳಭಂಜನ |
ಶಶಿ ಮುಖಿ ವೈದೇಹಿ | ಪ್ರಾಣವಲ್ಲಭ ರಾಮ |
ವಸುದಾಧಿಪತಿ ಭವ | ದೂರ ಸರ್ವಾತ್ಮಕ ||೩೯೨||
ಹರಿತಂದ ವಾಜಿಯನ್ನೂ | ಬಂಧಿಸಿ ನಾನು | ಧುರಕನುವಾಗಿಹೆನೂ |
ಪರಿಪರಿಯೊಳು ನಿನ್ನ | ನಿಂದೆಗೈದಿಹೆ ದೇವ |
ಚರಣಕೊಂದಿಪೆನೀಗ | ಕರುಣಿಸು ಮೋಕ್ಷವ ||೩೯೩||
ಸ್ಥಿರಚರಂಗಳ ಮಧ್ಯದೀ | ವಿಶ್ವಾತ್ಮಕ | ನಿರುವೆಯೊ ಚೈತನ್ಯದಿ
ತರುಶಿಲ ಜಲಗಳು | ಪರಮಾಣುಂಗಳು ನೀನೆ |
ಶರಣರಕ್ಷಕನೆಂಬು | ದರಿಯದಾದೆನು ದೇವಾ ||೩೯೪||
ನೀನೆ ಗಂಗಾಧರನೂ | ದ್ರುಹಿಣನು ವಿಷ್ಣು | ನೀನೆ ಚಂದ್ರನು ಸೂರ್ಯಾನು |
ನೀನೆ ಇಂದ್ರಾದಿ ದಿಕ್ಪಾಲಕನೆಂಬುದ |
ನಾನರಿಯದೆ ಪೋದೆ ಸಲಹೊ ದಯಾನಿಧೆ ||೩೯೫||
ಭಾಮಿನಿ
ಪರಿಪರಿಯ ಸನ್ನುತಿಪ ಭೂಪನ |
ಶಿರವನೆಗಹುತಲಾಗ ರಘುಪತಿ |
ಪೊರೆಯುವೆನು ನಿನ್ನೆನುತಲಭಯವನೀಯಲಾ ಕ್ಷಣದಿ ||
ಹರನುಡಿದನೀವರೆಗೆ ಎನ್ನಯ |
ಶರಣನಾಗಿಹನಿನ್ನು ನಿನ್ನವ |
ಕರುಣವಿರಿಸುವದೆನಲು ನೀರಜನಯನನಿಂತೆಂದ ||೩೯೬||
ರಾಗ ಸಾಂಗತ್ಯ ರೂಪಕತಾಳ
ಪುರಹರ ಕೇಳು ನಿನ್ನವರು ನನ್ನವರೆಂಬ | ಪರಿಭೇದವಿಲ್ಲ ಭಕ್ತರಲಿ ||
ನಿರುತಸದ್ಗುಣ ಸತ್ಯಸಂಧನೀತನ ನೋಡೆ | ಹರುಷವಾಯಿತು ಎಂದರಾಮ ||೩೯೭||
ಅನಿತರೊಳ್ಪುರಹರ ಜನಪತಿಯೊಡನೆಂದ | ಘನತೆಯೊಳ್ಕಪ್ಪವನಿತ್ತು |
ಚಿನುಮಯನಶ್ವವನೊಪ್ಪಿಸೆಂದೆನುತಲೆ | ಕ್ಷಣದೊಳಂತಂರ್ಧಾನಗೈದ ||೩೯೮||
ಹರುಷದಿ ನೃಪನು ಕಪ್ಪವನಿತ್ತು ರಾಮನ | ಪರಿಪರಿ ಪೂಜಿಸುತಾಗ ||
ತುರಗವನೊಪ್ಪಿಸೆ ಸಾಕೇತನಗರಿಗೆ | ತೆರಳಿದ ರಘುವೀರನಂದೂ ||೩೯೯||
ಪೊರಡಲು ತುರಗ ಮುಂದೆಸೆಯೊಳು ಶತ್ರುಹ | ಭರಿತ ಮಾರ್ಬಲದೊಡಗೂಡಿ ||
ತೆರಳಿದರ್ಮುಂದೆ ದಿಗ್ವಿಜಯಕೆನ್ನುತ ಶೇಷ | ನೊರೆದನು ಮುನಿ ವಾತ್ಸಾಯನಗೆ ||೪೦೦||
ರಾಗ ಕೇತಾರಗೌಳ ಅಷ್ಟತಾಳ
ಪರಮಾತ್ಮ ಶ್ರೀರಾಮನಧ್ವರ ಕಥನವ | ನರಿತಂತೆ ಕೃತಿಗೈದೆನು |
ಅರಿತವರಿದರೊಳು ನ್ಯೂನವಿರಲು ತಿದ್ದಿ | ಮೆರೆಸಬೇಹುದು ದಯದಿ ||೪೦೧||
ಪನಸಾಖ್ಯಪುರದುರಗೇಂದ್ರಶಾಸ್ತ್ರಿಯ ಸುತ | ಮನುಜಕಂಠೀರವನು |
ಚಿನುಮಯ ದಯದಿ ಗೈದಿಹ ವಿಂಶತಿಯ ಕೃತಿ | ಯನು ಸರ್ವರೋದುವದು ||೪೦೨||
ನಳ ಸಂವತ್ಸರದ ಶ್ರಾವಣ ಕೃಷ್ಣ ಪಂಚಮಿ | ಯೊಳು ಸ್ಥಿರವಾಸರದಿ |
ಜಲಜಾಕ್ಷ ರಾಮನನುಗ್ರಹದಿಂದ ಮಂ | ಗಲಗೈದೆನೀ ಕೃತಿಯಾ ||೪೦೩||
ಮಂಗಲ ಪದ
ದಶರಥ ಭೂಪನ ತನಯನಿಗೆ | ಕುಶಿಕನಧ್ವರ ಸಂರಕ್ಷನಿಗೆ |
ಶಶಿಮುಖಿ ಸೀತೆಯನೊರಿಸಿ ಸಾಕೇತದಿ | ಕುಶಲದೊಳೀರ್ದ ಶ್ರೀರಾಮನಿಗೆ |
ಮಂಗಲಂ | ಜಯ | ಮಂಗಲಂ ||೪೦೪||
ಜನಕನಾಜ್ಞೆಯನನುಸರಿಸಿದಗೆ | ವನಿತೆಯೊಡನೆ ವನಕೈದನಿಗೆ |
ಇನಸುತ ಸಖ್ಯದಿ ಮಘವಾತ್ಮಜನನು | ಹನನ ಗೈದ ಶ್ರೀ ರಘುವರಗೆ ||
ಮಂಗಲಂ | ಜಯ | ಮಂಗಲಂ ||೪೦೫||
ಶರಧಿಗೆ ಸೇತುವ ಕಟ್ಟಿದಗೆ | ದುರುಳ ದಶಾಸ್ಯನ ಕುಟ್ಟಿದಗೆ |
ಶರಣ ವಿಭೀಷಣಗಖಿಳ ಸಂಪದವಿತ್ತು | ಧರಣಿಯನಾಳ್ದ ಸೀತಾಪತಿಗೆ ||
ಮಂಗಲಂ | ಜಯ | ಮಂಗಲಂ ||೪೦೬||
Leave A Comment