ಮಲೆನಾಡ ವಲಯದ ಸಾಂಸ್ಕೃತಿಕ, ಸಾಹಿತ್ಯಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ವಲಯದಲ್ಲಿ ಚಿರಪರಿಚಿತರು ಶ್ರೀಮತಿ ಗೌರಮ್ಮ ಬಸವೇಗೌಡ ಅವರು.
ಸಕಲೇಶಪುರದ ಬೆಚ್ಚುವಳ್ಳಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ೧೯೩೩ ರಲ್ಲಿ ಜನನ, ಶಾಸಕ ಶ್ರೀ ಬಸವೇಗೌಡರ ಪತ್ನಿಯಾಗಿ ಮಹಾಮನೆಯ ಗೃಹಿಣಿಯಾಗಿ ಆತಿಥ್ಯಕ್ಕೆ ಹೆಸರಾದವರು. ಮಹಿಳಾ ಜಾಗೃತಿ ಸಂಘದ ಸ್ಥಾಪಕರು ಹಾಗೂ ಚಿಕ್ಕಮಗಳೂರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಜಿಲ್ಲಾಸ್ಪತ್ರೆ ವಿಸ್ತರಣೆ, ದೂರದರ್ಶನ ಮರುಪ್ರಸಾರ ಕೇಂದ್ರಕ್ಕೆ ಒತ್ತಡ ಹೇರಿ ಯಶಸ್ವಿಯಾದವರು. ಸಾಮೂಹಿಕ ವಿವಾಹ, ನಿರ್ಮಲ ಚಿಕ್ಕಮಗಳೂರು, ಸಂತ್ರಸ್ತರಿಗೆ ನೆರವು ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ಶ್ರೀಮತಿ ಗೌರಮ್ಮ ಬಸವೇಗೌಡ ಅವರ ವೈವಿಧ್ಯಮಯ ಸೇವೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಹಾಸನದ ಕನ್ನಡ ಸಂಘ ಮುಂತಾದ ಹಲವು ಸಂಸ್ಥೆಗಳು ‘ಮಲೆನಾಡ ರತ್ನ’ ಮುಂತಾದ ಪ್ರಶಸ್ತಿ ನೀಡಿ ಸನ್ಮಾನಿಸಿವೆ.
ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ರಚನಾತ್ಮಕ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಮಾಜಿಕ ಕಾರ್ಯಕರ್ತರು ಶ್ರೀಮತಿ ಗೌರಮ್ಮ ಬಸವೇಗೌಡ ಅವರು.
Categories