ರಾಗ ನೀಲಾಂಬರಿ ರೂಪಕತಾಳ
ಮಾನಿನಿ ಏನಿದು ಹದನ ನಿ | ಧಾನಿಸಿ ಪೇಳೆನಗೆ |
ಆ ನಂದ ಕುಮಾರನು ಕಡೆ | ಗೇನೆಂದನು ನಿನಗೆ || ಪಲ್ಲವಿ ||
ತರುಣಿಯೆ ನೀನೆನಗಂತ | ಸ್ಕರುಣದವಳೆ ಸರಿ ಎನ್ನುತ |
ನೆರೆನಂಬಿರಲೆಡೆಯೊಳು ಈ | ಪರಿ ಎಸಗುವ ಗುಣವೆ ||
ಗುರುತುಗಳಿದೆ ಪ್ರತ್ಯಕ್ಷದಿ | ಮರೆಮಾಜದು ಆ ರಂಗನು |
ನೆರೆದಿಹ ಭಾವವು ತೋರ್ಪುದು | ತರವೆ ನಿನಗೆ ಜಾರೆ || ಮಾನಿನಿ ||೭೬||
ಅಂಬುಜದಳ ನೇತ್ರ ನೀ | ರಂಜಿಸಿ ಬರಿಸೆಂದಟ್ಟಲು |
ಸಂಭ್ರಮದೊಳೆಗಾತಾ | ರಂಭಕೆ ಭೋಗಸುಖ ||
ಹಂಬಲಿಸುವದಾಯಿತು ವಿ | ಶ್ವಂಭರನನು ಈ ಕ್ಷಣ ತಹೆ |
ನೆಂಬವರ್ಯಾರಿಹರು ಸ | ಯಂಬರದ ಲಿಪಿಯು || ಮಾನಿನಿ ||೭೭||
ನೀರೆಯೆ ಬಡಿವಾರವ ಬಿಡು | ಸಾರತ್ತಲೆನುತ ರಾಧೆಯು |
ಶ್ರೀ ರಮಾಧವ ನಾರಾಯಣ | ಕ್ಷೀರಾಂಬುಧಿ ಶಯನ ||
ಮಾರಜನಕ ಭಕ್ತರ ಸಂ | ಸಾರಿಕ ರಕ್ಷಿಸೊ ಎಂದಾ |
ನಾರಿಯು ಮನ ಮರುಗುತ ಸಮಯದಿ | ನಾರದ ನಡೆ ತಂದ ||೭೮||
ರಾಗ ಮೆಚ್ಚು ಏಕತಾಳ
ಹೋ ಹೋ ಸೈರಿಸು ಯಾಕೆ ಮರುಗುವೆ |
ಆ ಹದನವು ಪೇಳ್ ನೀನ್ಯಾಕೆಯೊದರುವೆ || ಹೋ ಹೋ || ಪಲ್ಲವಿ ||
ಜರೆದನೆ ರಮಣ | ತೊರೆದೆಯೊ ಭುವನಾ |
ವರ ನದಿ ತೀರದೊಳ್ಯಾರದೇಕೆ ಮರುಗುವೆ || ಹೋ ಹೋ ||೭೯||
ಹಾರ ಪದಕವೂ ಸಾರ | ಸಾರಲಂಕೃತವೂ |
ಸೇರಿಸಿ ಕೆಲಕೆ ನೀನ್ಯಾಕೆ ಮರುಗುವೆ || ಹೋ ಹೋ ||೮೦||
ಅಳಲದಿರಬಲೆ | ತಿಳಿದುಕೊ ಸುಪಲೆ |
ಒಲಿವ ರಮಾಪತಿ ಯಾಕೆ ಮರುಗುವೆ || ಹೋ ಹೋ ||೮೧||
ರಾಗ ಮುಖಾರಿ ಏಕತಾಳ
ಏನ ಹೇಳಲಿ ಮುನಿಯೇ | ಸೌಭಾಗ್ಯವು | ಏನ ಹೇಳಲಿ ಮುನಿಯೆ |
ಎನ್ನಭಿಮಾನ | ಏನ ಹೇಳಲಿ ಮುನಿಯೇ || ಪಲ್ಲವಿ ||
ಸರಸಗಳಾಡಿ ಮುನ್ನ | ಶ್ರೀರಂಗ ಧಾಮಾ |
ಮರುಳು ಮಾಡುತಲಿ ಎನ್ನ ||
ಸ್ಮರನ ಶಸ್ತ್ರಾಗ್ನಿಯ | ನುರಿಯು ಮುದ್ರಿಸುತೀಗ |
ಮರುಕನಲ್ಲೈ ಮೋಹನ || ಆ ಸುಪ್ರಸನ್ನಾ ||೮೨||
ಕರೆಯಲಟ್ಟಿದರೀಕೆಯ | ಈ ಚದುರೆಯ |
ನೆರೆದನಂತಲ್ಲೊ ಪ್ರಿಯಾ ||
ಪರಮ ಪುರುಷರೊಳು ಜಾ | ಲ್ವರಿದು ಮೇಲ್ವಾಯ್ದುದ |
ಥರವೆ ಈ ಹೆಣ್ಣಿನಾಟಾ | ಎನ್ನ ಲಲಾಟ ||೮೩||
ಜಾಣ ಶ್ರೀ ರಮಾಧವನಾ | ಒಂದೇ ಕ್ಷಣ |
ಕಾಣದೆ ನಿಲ್ಲದು ಪ್ರಾಣಾ ||
ಮೀನಕೇತನನು ಬಲ್ ತ್ರಾಣದಿ ಎಸೆವ ಪೂ |
ಬಾಣವಾಯ್ತೆನಗೆ | ಘನ ಸೈರಿಸೆ ನಾ ||೮೪||
ರಾಗ ಕಾಂಭೋಜಿ ಅಷ್ಟತಾಳ
ಅಳಲಬೇಡ ಎಲೆ ರಾಧೆ | ತಿಳುಹಿ ರಂಗನ ತವ |
ಬಳಿಗೆ ಕಳುಹಿಸುವೆ | ಬಳಲ ಬೇಡ ಎಲೆ ರಾಧೆ || ಪಲ್ಲವಿ ||
ನೆರದನೆಂದಿವಳನು | ಜರೆಯದಿರು ಸುದತಿ |
ಯ ರೊಳವನಿಗೆ ಹೊಸ | ಪರಿ ವಿಶ್ವಾಸವು || ಅಳಲ ||೮೫||
ಸುಳ್ಳು ಈ ಸಖಿ ನುಡಿ | ನಲ್ಲೆಯರಾಟವು |
ಒಲ್ಲೆನೆಂಬುದ ತಾ | ನಿಲ್ಲ ಈ ಜನ್ಮಕು || ಅಳಲ ||೮೬||
ನಂಬಿಕೊಳ್ಳೆ ಸೌ | ರಂಬ ಮಾಧವನೊಳು |
ಇಂಬು ನೋಳ್ಪೆನೆನು | ತಂಬರಕಡರಿದದ || ಅಳಲ ||೮೭||
ಚೌಪದಿ
ತ್ವರಿತದಿಂ ವೃಂದಾವನಕೆ ಬರುತಲಾಗ |
ಕರುಣಾರ್ಣವನ ಕಾಣುತೆರಗುತತಿ ಬೇಗ ||
ಸ್ಮರಿಸುವದಕಂಡು ಮುನಿಪತಿಗೆ ಕೈಕೊಡುತ |
ಹರುಷದಿಂ ಕುಳ್ಳಿರಿಸುತೆಂದ ಹರಿ ನಗುತ ||೮೮||
ರಾಗ ತೋಡಿ ಏಕತಾಳ
ಗಮನವೆಲ್ಲಿ ಮೌನಿ ಏನಿದು | ಹಾ ಹಾ | ಗಮನವೆಲ್ಲಿ ಮೌನಿ ಏನಿದು
ಶ್ರಮಿಸಿ ಬಂದೆಯಾ | ಗಮವುಸುರೆನಗದು | || ಪಲ್ಲವಿ ||
ಧನ್ಯನಾದೆ ನಾ ನಿನ್ನ ದರ್ಶನದಿ |
ಮಾನ್ಯಸಾರಸಸನ್ನಕುಮಾರಕ || ಗಮನ ||೮೯||
ಯಾರಿಗ್ಯಾರಿಗೆ ಈ | ಸಾರಿ ಗಂಟಿಕ್ಕಲು |
ಭೋರನೆದ್ದಿರೆ | ನಾರದ ಮಹಾಮುನಿ || ಗಮನ ||೯೦||
ನಗುತ ಪೇಳ್ದ ಮಾ | ತಿಗೆ ತೋಷದಿ ಕೈ |
ಮುಗಿದು ರಮಾಧವ | ನಿಗೆ ಮಗುಳರುಹಿದ || ಗಮನ ||೯೧||
ರಾಗ ಆನಂದ ಭೈರವಿ ಅಷ್ಟತಾಳ
ಇದ್ಯಾವ ನಡತೆಯೊ ರಂಗ | ಆಹಾ | ನಿನಗಿದ್ಯಾವ ನಡತೆಯೊ ರಂಗ |
ನಿಧಾನಿಸಯ್ಯ ಈ ಪ್ರಸಂಗ || ಪಲ್ಲವಿ ||
ರಾಧೆಯು ನಿನ್ನ | ಕಾದಿಹಳ್ಮುನ್ನಾ |
ನೀ ದಯ ಮಾಡದಿರು ಆ ಭಾವ ||೯೨||
ಕರೆವರೆ ಸತಿಯ | ಕಳುಹಲಿ ಸ್ಥಿತಿಯ |
ನರಿತು ಅವಳ ನೆರದೆಯ ರಂಗಯ್ಯ ||೯೩||
ಲಲನೆಯ ಪ್ರಾಣಾ | ಉಳುಹಿಸೊ ಜಾಣಾ |
ಘಳಿಲನೆ ಪೋಗು ರಮಾಧವ | ಹೇ ದೇವ ||೯೪||
ಭಾಮಿನಿ
ಮುನಿ ಲಲಾಮನೆ ಕೇಳು ತವ ನೃತ |
ವನು ತಿರಸ್ಕರಿಸುವೆನೆ ನಾ ನೀ |
ಕ್ಷಣದಿ ಪೋಪೆನೆನುತ್ತ ಮನ್ನಿಸಿ ಋಷಿಯ ಬೀಳ್ಕೊಟ್ಟು ||
ಘನ ಸರಾಗದಿ ರಾಧೆ ಎಡೆಗೈ |
ದನುಸರಿಸಿ ಕಾತುರದಿ ಕ್ಷಿತಿಯೊಳು |
ತನು ಮರೆತು ಬಿದ್ದಿಹಳ ನೆಗಹುತ ನಗುತ ಹರಿ ನುಡಿದ ||೯೫||
ರಾಗ ಕೇದಾರಗೌಳ ಅಷ್ಟತಾಳ
ಕ್ರಮ ಇದೇನೆ ಸಂತಾಪ | ಶ್ರಮಿಸಬೇಡವೆ ನಿನ್ನಾ | ಭ್ರಮಿಸಿ ಬಂದೆನು ನೋಡೆ ರಾಧೆ ||
ಭ್ರಮಿಸುವಾತನೆ ಸೈ ಸೈ | ಎನುತ ಸ್ನೇಹವೆ ಸಾಕು ಪೋಗಯ್ಯ ರಂಗಧಾಮ ||೯೬||
ಮನದಿ ಬೇಸರವೆ ಎ | ಳ್ಳಿನಿತು ಎನ್ನಪರಾಧವನು ತೋರಿದಡೆ ಮುದ್ದು ರಾಧೆ ||
ಎನಗೆ ಭಾಷೆಯನಿತ್ತ ನಿ | ತನ್ಯಳನು ಭೋಗಿಸುವಂತ | ಘನತೆ ಸಾಕಯ್ಯ ರಂಗಧಾಮ ||೯೭||
ಕರೆಯಬಂದವಳೆ ಕಾತುರದಿ ಎನ್ನಮರ್ದಪ್ಪಿ | ದರೆ ಏನ ಮಾಡಲಿ ರಾಧೆ ||
ಸರಸವಾಡದಿರು ನೀ | ಸರಿಸವೆನಗೆ ಕೋಪ | ತೆರಳು ಸುಮ್ಮನೆ ರಂಗಧಾಮ ||೯೮||
ಕರ್ಪೂರಗಂಧಿ ಇ | ನ್ನೀರ್ಪೆ ನಿನ್ನಗಲದೆ | ಸರ್ಪಭೂಷಣನಾಣೆ ರಾಧೆ |
ಒಪ್ಪುವುದೆಂತು ಸ | ಮರ್ಪಿಸಿದೆ ನೀ ಮುನ್ನ ಕಂ | ದರ್ಪನಸ್ತ್ರಕೆ ರಂಗಧಾಮ ||೯೯||
ಹಲವು ಮಾತೇನು ಏ | ಲಲನೆ ರಕ್ಷಿಸುತೀಗ | ವಲಿದು ರಮಿಪೆ ಮುದ್ದು ರಾಧೆ ||
ಚಲುವ ನೀನೀಸು | ಪೇಳಿದ ಮೇಲೆ ನಾ ನಿನ್ನ | ವಳೆ ಶ್ರೀ ರಮಾಧವ ರಂಗಧಾಮ ||೧೦೦||
ವಾರ್ಧಕ
ಪರಮಪಾವನ ರಾಧೆಗೊರೆದ ಭಾವವನರಿತು |
ಭರದಿ ಬಿಗಿಯಪ್ಪಿ ಮುದ್ದಾಡಿ ಸುರತಾನಂದ |
ಸರಸ ಸುಖದೋರಲಾ ತರುಣಿ ತನ್ಮಯವಾದಳರವಿಂದನಾಭನೊಡನೆ ||
ನೆರದ ನದಿ ಬಳಿಯದುಪವನದಿ ಸಂತೋಷದೊಳ |
ಗಿರಲೀರ್ವರಿತ್ತಲಾ ನಂದಗೋಪನ ಮನೆಯ |
ಮೆರೆವ ರಾಜಾಂಗಣದೊಳಿಳಿದ ನಾರದ ಮುನಿಯು ಹರಿ ಕೃಷ್ಣ ಕೃಷ್ಣ ಎನುತ ||೧೦೧||
ಸವಾಯಿ
ತಟ್ಟನೆ ಎದ್ದಾಕ್ಷಣದಿ ಮುನಿಯ ಪದ |
ಮುಟ್ಟಿ ಭಕ್ತಿಯೊಳೆರಗುತಾ ನಂದಾ ||
ವಿಷ್ಟರವೇರಿಸಿ ಪೂಜಿಸಿ ನಿಲಲಾ |
ಸೃಷ್ಟಿಗೊಡೆಯನ ಕುವರನೆಂದ ||೧೦೨||
ನಾದನಾಮಕ್ರಿಯೆ ಏಕತಾಳ
ಕ್ಷೇಮವೇನೊ ಗುಣಶೀಲಾ | ನೇಮಿಸು ನಂದನೃಪಾಲಾ |
ಸುಕ್ಷೇಮವೇನೊ || ಪಲ್ಲವಿ ||
ಆಲಯ ಸತಿಸೋದರ ಬಾಂಧವ ಜನ | ಜಾಲ ಸಹಿತ ಗೋಕುಲದೀ ||
ಬಾಲಕೃಷ್ಣನ ಮಹಾದೂಳಿಗ ಘನವದ | ಕೇಳಲಿಲ್ಲವೆನ್ನುತ ಪೇಳಬಂದೆ ನಿನ್ನೊಳು ||೧೦೩||
ಸ್ಮರನ ಬಾಧೆಯೊಳು ಹೊರಳುವ ರಾಧೆಯ | ನಿರವ ಕಂಡು ನಾ ಮನದಿ ||
ಕರೆಸಿ ಧೈರ್ಯವಿತ್ತಾ ರಂಗನಿಗರುಹಿ | ತರಳೆ ಎಡೆಗೆ ತೆರಳಿಸಿ ಬಂದೆನು ||೧೦೪||
ಒರೆದ ಕಂಡುದನು ಪರಸ್ತ್ರೀಯರಲಿ ಈ | ಪರಿಯೆಸಗಿದಡೆ ಉಚಿತವೆ ||
ತರಳಬೇಕೆ ಯಮುನಾ ನದಿ ತೀರದೊ | ಳಿರುವ ರಮಾಧವನ ಕರೆಸು ನೀ ನೀಕ್ಷಣ ||೧೦೫||
ರಾಗ ಮಾಧವಿ ಏಕತಾಳ
ಏನುಸುರಲಿ ಮುನಿಪಾಲ | ಸ್ವಾಮಿ | ಮಾನನಿಧಿಯೆ ಗುಣಶೀಲ || ಪಲ್ಲವಿ ||
ಬಾಲಕೃಷ್ಣನು ಕ್ಷಣ ಮನೆಯೊಳಗಿಲ್ಲ | ಲೀಲೆ ಸ್ತ್ರೀಯರೊಳಾಯಿತಲ್ಲ ||೧೦೬||
ಅವರೊಳಗಿಂದು ರಾಧೆಯು ದೊರಕಿದಳೆ || ಚದುರೆಯವಳುತಾನಿನ್ನಿವನ ಬಿಡುವಳೆ ||೧೦೭||
ಶ್ರೀ ರಮಾಧವನ ಬರಿಸಲು ನಿನ್ನೊಡನೆ | ಚಾರರಟ್ಟಿಸುವೆ ತೋರಿಸು ಋಷಿವರನೆ ||೧೦೮||
ರಾಗ ಶಂಕರಾಭರಣ ಏಕತಾಳ
ಆಹಾ ಬಲುಚಂದವಾತೈ | ಅಹುದಹುದಿದು ಏನಂದಾ ||
ವಿಹಿತ ಶ್ರೀ ಹರಿಯ ನಾ ತೋರ್ಪುದು ಸತ್ಯ ಆನಂದಾ || ಪಲ್ಲವಿ ||
ಕಂಡಹದನ ಪೇಳ್ದರಿದನು | ಕಂಡು ಮರೆಯಲಾಯ್ತು |
ಕೊಂಡೆಯಾಡಿ ಚರರಕೂಡಿ | ಕೊಂಡು ಪೋಪಂತಾಯ್ತು ||೧೦೯||
ಚಿತ್ತದಿ ಬೇಸರಿಸದಿರೈ | ಉತ್ತಮ ಶ್ರೀ ಗುರುವೆ |
ಪ್ರತ್ಯಕ್ಷ ಹರಿ ಈರ್ಪ ಠಾವ | ಭೃತ್ಯರ್ಗೆ ತೋರದುವೇ ||೧೧೦||
ಚರರು ಶ್ರೀರಮಾಧವನಿ | ಗರುಹಿಕರೆದು ತಾರಯ್ಯ |
ತಹುದೆಂದು ಮುನಿಗೆರಗಿ ಭಟರ್ಗೆ | ನೊರೆದ ನಂದರಾಯ ||೧೧೧||
ಭಾಮಿನಿ
ನಡೆಯಿರೈ ಹರಿಯೀರ್ಪ ತಾವನು |
ಬಿಡದೆ ತೋರುವರೀ ಮಹಾ ಮುನಿ |
ಯೊಡಗೊಳುತ ಗಮಿಸುತಲಿ ರಂಗನೊಳರುಹಿ ಕರೆತಹುದು ||
ಕಡು ಸರಾಗದೊಳೆಂದು ಭಟರೊಳು |
ನುಡಿದ ಋಷಿಯೊಡಗೂಡಿ ಕಳುಹಲು |
ತಡೆದ ಮಾರ್ಗದೊಳಂದು ಕಮಲಜ ಪಡೆದವಗೆ ಚರರು ||೧೧೨||
ರಾಗ ಮಾರವಿ ಏಕತಾಳ
ಎಲ ತಡಿಯೋ | ನಮ್ಮ ಸ್ವಾಮಿ ಹರಿಯ ತೋರಿಸೈ | ಎಲತಡಿಯೋ || ಪಲ್ಲವಿ ||
ಏನ್ಮೇ ವೀಣಾಧರ ಮೀಟಿ ಬ | ಲ್ವಿನೋದ ದೋರಿ ||
ಸುಳ್ಮಾಡು ಕಲ್ಲಿವರದೆ ನೆ | ಲ್ಮೂರಾರಿ ನಿಲ್ಮ್ಯಾಪಾರ್ವ || ಎಲಾ ||೧೧೩||
ಸುಮ್ಗೆ ಚಾಡಿಯಾಡಿ ಕಣ್ಣ ಕಣ್ಣ | ಬಿಮ್ಗೆ ಬಿಡುವೆ ಯಾಕೊ ||
ನಮ್ಕೂಡಿ ಗಜಮ್ಕೆ ನಿನಗೆ | ಶಿಮ್ಕಿ ಬಿಡಲೆ ಮುಸುಡಿಗೆ ||೧೧೪||
ಆಳ್ಕ ಬೇಡ ಸಿಕ್ಕಿದೆ ಎಲಾ | ಪಲ್ಗಿರಿಯಲಿನ್ಯಾಕೊ ||
ಘಲ್ಕನೆ ರಮಾಧವ ಕೇ | ವಲ ಕೃಪಾಬ್ದಿಯನೆ ತೋರೆಲ ||೧೧೫||
ರಾಗ ಕೇತಾರಗೌಳ ಅಷ್ಟತಾಳ
ಗಲಭೆ ಇದೇನೊ ಸೈರಿಸೆಂದೆನುತ ಮುನಿ | ಕಳುವದೆ ಬರಲು ಮುಂದೆ ||
ಲಲನೆ ರಾಧೆಯು ಅತ್ತ ನಳಿನನೇತ್ರನು ತನ | ಗೊಲಿದನೆಂಬುವ ಗರ್ವದಿ ||೧೧೬||
ಇರಲಿತ್ತಲನಿಬರ ದೂರದಿ ಕಾಣುತ್ತ | ಹರಿಯಿದ ನೆರೆ ಎಣಿಸಿ ||
ಪರಮ ಭಕ್ತರ ಮನದಿರವ ನೀಕ್ಷಿಸಲಾಗಿ | ಸರಿದನದೃಶ್ಯನಾಗಿ ||೧೧೭||
ಭೋರನೆ ಚರರಗೂಡುತ ಮುನಿ ಯಮುನೆಯ | ತೀರದಿ ಬರಲು ಬೇಗ ||
ಶ್ರೀ ರಮಾಧವನು ಕಾಣದಿರಲ್ಮನದೊಳು | ನಾರದನರಿತನಾಗ ||೧೧೮||
ಭಾಮಿನಿ
ಅರಿಯದೇ ನಾರದ ಮಹಾ ಮುನಿ |
ಪರಮ ಸುಜ್ಞಾನಿಯು ಕಣಾ ಶ್ರೀ |
ಹರಿಯು ತನ್ನಾಶ್ರಿತೆಯು ರಾಧೆಯ ಗರುವನಪಹರಿಸಿ ||
ತಿರೆಯನುದ್ಧರಿಸುತ ನಿರಂತರ |
ಸರಸದಿಂ ಪಾಲಿಸಲು ಸರಿದುದ |
ನರಿತು ತಾಪಸಕುಲಶಿರೋಮಣಿಯೊರೆದನಬಲೆಯೊಳು ||೧೧೯||
ರಾಗ ಕಾಂಭೋಜಿ ಏಕತಾಳ
ಏನಮ್ಮಾ | ರಾಧೆ | ಏನಮ್ಮಾ || ಮಾನವಂತೆ ಮೌನದೊಳಿರುವೆ || ಇದೇನಮ್ಮಾ || ಪ ||
ಚಿತ್ತಜನಸ್ತ್ರನೆದೆ | ಗೊತ್ತಿತೆನುತ ನಿನ್ನ |
ಹತ್ತಿರೆ ಕಳುಹಲಿ | ನ್ನೆತ್ತ ಪೋದ ಹರಿ ||೧೨೦||
ನಂದಗೋಪನೆಡೆ | ಗಿಂದು ಪೋಗಿ ಪೇಳಿದೆ |
ಬಂದರಿದಕೊ ಎನ್ನ | ಹಿಂದೆ ನೋಡು ಚರರು ||೧೨೧||
ಜಾಣರಮಾಧವ ನಾ | ಕಾಣಿಸದನಕರ |
ಮಾಣದೆ ಬಿಡರಿವ | ರೇನ ಮಾಡುವೆನು ||೧೨೨||
ರಾಗ ದ್ವಿಜಾವಂತಿ ಅಷ್ಟತಾಳ
ಮಾನನಿಧಿಯೆ ಸ್ವಾಮಿ | ಆ ನಂದ ರಾಜನೊ | ಳೇನೆಂದೊರೆದೆ ಮುನಿಪಾಲಕಾ ||
ಮುಚ್ಚುಮರೆಯ ಬಾಲೆ | ಹೆಚ್ಚು ಕುಂದರಿಯೆನು | ನಿಶ್ಚಯನೊರೆದೆ ನಾ ರಾಧೆಯೇ ||೧೨೩||
ಗುಪಿತಕಾಮಗಳ ಆ | ನೃಪಗೆ ಪೇಳಬಹುದೇ | ವಿಪರೀತವಾಯ್ತು ಮುನಿಪಾಲಕ ||
ಕಪಟ ನಾಟಕದೊಳು | ಚಪಳೆ ನೀ ನೊಲಿದುದ | ವಿಪರೀತವಲ್ಲವೆ ರಾಧೆಯೇ ||೧೨೪||
ಗಂಡನುಳ್ಳ ಗರತಿ | ಮಂಡಲದೊಳು ಲಜ್ಜೆ | ಭಂಡೆಯಿನ್ನಾದೆ ಮುನಿಪಾಲಕ |
ಗರತಿಯಾದರೆ ಯದು | ವರನ ಬರಿಸೆನುತ | ಒರದೆ ಎನ್ನೊಳಿನ್ಯಾಕೆ ರಾಧೆಯೆ ||೧೨೫||
ಕರೆಯಲಟ್ಟಿದವಳ | ನೆರೆದನೆಂದರುಹಲೀ | ಪರಿಯ ಮಾಡಿದೆಮುನಿಪಾಲಕ ||
ಜರೆದು ದೂತಿಯ ಕಡೆ | ಗಿರಿಸಿ ನೀನೆಸಗಿದ | ಸರಸ ಲೇಸವೆ ಭಲೆ ರಾಧೆಯೆ ||೧೨೬||
ಹರಿಯ ಕಂಡಿದನೆಲ್ಲ | ಮರೆವೆನೆಂದರೆ ಸ್ವಾಮಿ | ಸರಿದನಲ್ಲೋ ಮುನಿಪಾಲಕ ||
ಗುರುವತನವ ಬಿಟ್ಟು | ವರ ರಮಾಧವನ ಬೇಗ | ಸ್ಮರಿಸು ಇನ್ನಾದರೆ ರಾಧೆಯೆ ||೧೨೭||
ವೃತ್ತ
ವರಗೋಪಾಲ ಸದಾಜ್ಜಭೃಂಗ ಶ್ರೀಶಿತಂ ಪರಿಪೂರ್ಣ ಕೃಪೆದೋರುತ |
ಅರುಹಲ್ ಭಾವಕಿ ರಾಧೆಯಾಗಾನರಿತಳ್ ಸರಿಗರ್ಪಿಸಿದೆ ಎನ್ನುತ |
ಬರಿದೆಹಂಕೃತಿವಿತ್ತೆ ಯಾಕೋ ತನಗೆ ಹರಿಕೃಷ್ಣ ನಾರಾಯಣ
ಕರುಣಾಂಬುಧಿ ಪಾಲಿಸೆಂದು ಮರುಗಲ್ ಚರರೆಂದರ್ ಪರಾಕ್ರಮ ||೧೨೮||
ರಾಗ ಮಾಂಡ್ ಏಕತಾಳ
ಬೋಲ್ ಬೇಗಿಂ ಬೊಲ್ ಬೇಗಿ ಲಿರೆ ತೆರೆ ಬಲೆಹುವಾ
ಮೇರೆ ಭಗವಾನ್ ಕಾಬೋಲ್ ಬೇಗೀ || ಪಲ್ಲವಿ ||
ಚೋರಿ ಬಲೆ ತೇರಿವಾಂ ಹವಾಳ್ದಿ ಸ |
ರ್ದಾರ್ ಕಿತೆ ತಾದೆರೆಚಪಾದಿಯೆ ||೧೨೯||
ಪರಮೆ ಸರಕಿ ಸನುಮೈರ್ದೆದೆಕೆ | ತೆರೆ ಸರಿಯಿಂಜಾನ್ ||
ಮೆರಹ ಜಿರತ್ ಕಿ ಖಾದಾಗ್ | ಮೈತು ಹಜಾತ್ |
ಕರೆ ನಹಿ ತೆರೆದೇಕ್ ಬಲೆ ತಮಸ್ತಾ ||೧೩೦||
ಮೀಟಾ ಸರಕಿ ಬಾತ್ ಜೂಟೇಯ | ಭಟ್ಕನೆ ಸಚ್ಚಿತು ಬೋಲ್ದಿಯೇ |
ಘಟಿವುಟೋದೇಕ ತೆಂತೆ ಲಟಕನಹಿಗೆ | ಮೇರಿ ವಿಜಲ ಸಾಮಿಕಿತ್ತೆ |
ಮೋಟಿಬುವುಲು ಸುನ್ನಾ ಬೋಲ್ ಜೇ ||೧೩೧||
ಆರ್ಯಸವಾಯಿ
ಇಂತುಸುರಿದ ಚಾರರ್ಗೊರೆದು ಮುನಿ | ಶಾಂತದಿ ರಾಧೆಗೊರೆವುತಲಿಂತೆಂದ ||
ಚಿಂತೆಯ ಬಿಡು ವೈಕುಂಠಾಧಿಪ ಶ್ರೀ | ಕಾಂತನ ನೆನೆ ಬೇಗದೊಳೆಂದ ||೧೩೨||
ಯಾಕಿನಿತೆಸಗಿದಹಂಕೃತಿಯನು ನಿ | ರಾಕರಿಸೆಲೆ ಭಾವಕಿ ಬೇಗ ||
ಏಕೋಭಾವದಿ ಸ್ಮರಿಸಲು ಶ್ರೀಹರಿ | ತಾ ಕರುಣಿಸದೆ ಬಿಡನು ಬೇಗ ||೧೩೩||
ಯಮಿ ಎಂದುದ ಕೇಳ್ದಾಕ್ಷಣ ರಾಧೆಯು | ನಮಿಸಿ ಧ್ಯಾನಿಸಿದಳು ಮಾಧವನ ||
ಅಮಿತ ಸಹಸ್ರಾಪರಾಧಗಳೆನ್ನದು | ಕ್ಷಮಿಸಿ ಮೈದೋರೆಂದಳು ಲಲನೆ ||೧೩೪||
ರಾಗ ಮೋಹನ ಅಷ್ಟತಾಳ
ಬಾರೊ ಶ್ರೀಹರಿಯೆ ಬೇಗ | ಬಾರೋ ಬಾರೋ ಬೇಗ |
ಮೈದೋರೊ ದಯಾನಿಧಿ || ಬಾರೊ || ಪಲ್ಲವಿ ||
ಅರಿಯದಾದೆ ತವ | ಕರುಣದಳಕೆ ಎನ್ನ |
ಗರುವಿಕೆ ಕ್ಷಮಿಸಯ್ಯ | ಶರಣ ರಕ್ಷಾಮಣಿ || ಬಾರೊ ||೧೩೫||
ರೂಢಿಯೊಳಗೆ ನಗೆ | ಗೇಡ ಮಾಡದಿರು |
ಗಾಢ ಈ ಜನರನು | ಓಡಿಸು ತ್ವರಿತದಿ ||೧೩೬||
ವೇದವೈದ್ಯ ಸನ | ಕಾದಿ ವಿನುತ ಶ್ರೀ ರ |
ಮಾಧವ ಎನ್ನ ಮರಿ | ಯಾದೆಯು ನಿನ್ನದೈ ||೧೩೭||
ರಾಗ ಕಾಂಭೋಜಿ ಅಷ್ಟತಾಳ
ಮೈ ದೋರಿದನು ಮುರಾರಿ | ಚಾರು ಸುದರ್ಶನಧಾರಿ |
ಮೈದೋರಿದನು ಮುರಾರಿ || ಪಲ್ಲವಿ ||
ಅಜಭವ ಸುರನರ | ಭುಜಗಾದಿ ಭಜಕ |
ವ್ರಜನುತ ಕುಜನ ಕುಠಾರಿ || ಹರಿ ಮೈ ||೧೩೮||
ಇದಕೊ ನಾ ಬಹೆ | ಬೆದರದಿರೆನುತ |
ರಾಧೆಯ ಬದಿ | ಗೊದಗಿದನು ಕಂಸಾರಿ ||೧೩೯||
ತರಳೆ ಮರುಗದಿ | ರೆನುತ ಮಾಧವ ಮುನಿ |
ಗೊರೆದ ಗೋವರ್ಧನೋದ್ಧಾರಿಗೆ ||೧೪೦||
ಚೌಪದಿ
ಏನಿದೇನಿದು ಹದನವೆಂದು |
ಶ್ರೀನಾಥ ಕೇಳುತಿರಲಂದು ||
ಮೌನಿವರ ನಗುತಲಾಕ್ಷಣದಿ |
ತಾನೊರದ ಹರ್ಷಿಸುತ ಮನದಿ ||೧೪೧||
ರಾಗ ಆನಂದ ಭೈರವಿ ಅಷ್ಟತಾಳ
ಏನುಸುರಲಿ ದೇವ | ಮಹಾನುಭಾವ | ಏನುಸುರಲಿ ದೇವ || ಪಲ್ಲವಿ ||
ಏನುಸುರಲಿ ನಂದನಿಳೆಯದಿ | ನೀನೂಳಿಗಲಿರುಹಲಿ |
ಕಾನಂದವದಾಯಿತೇನುಸುರಲಿ ||೪೨||
ಎಷ್ಟಿವಳೊಡನೆ ವಿ | ಶೇಷ ಸ್ನೇಹ ಹರಿ |
ಕೃಷ್ಣ ಈ ವಾರಕೆ | ಸೃಷ್ಟಿಯೊಳಾತಿನ್ನೇನುಸುರಲಿ ||೧೪೩||
ಮಾನನಿಧಿಯೆ ಅವ | ಮಾನದೊಡೆಯ
ನಮ್ಮನು ಉಳುಹಿ ಸಮ್ಮಾನಿಸೊ ಮಾಧವ || ಏನು ||೧೪೪||
ವಾರ್ಧಕ
ಚಂದವಾತಿದುವೆ ಮುನಿಯೆಂದರುಹಿ ಮಗುಳೆ ಗೋ |
ವಿಂದ ಚರರನು ಕರೆದು ಮುಂದೆನಡಿರೆಂದಟ್ಟಿ |
ಚಂದ್ರಮುಖಿ ರಾಧೆಯಾನನ ವೀಕ್ಷಿಸುತಲಿ ಆನಂದದಿಂ ಬಿಗಿದಪ್ಪುತ ||
ಸೌಂದರಾಂಗಿಯೆ ನಿನ್ನ ವಂದೇ ಕ್ಷಣಕೆ ಅಗಲಿ |
ನಿಂದಿರೆನೆನುತ ಭಾಷೆಯಿತ್ತು ತೆರಳಿಸಿ ಪುರಕೆ |
ಪಿಂದಣಿಂದಮರ ಮುನಿಗೊಲಿದು ಕೈವಿಡಿದು ಹರಿನಂದಗೋಕುಲ ಪೊಕ್ಕನು ||೧೪೫||
ಚೌಪದಿ
ಅರರೆ ಹರಿದರ್ಶನಂಗಸ್ಪರುಷವೆನಗೆ |
ದೊರಕಿತೆಂದುಲ್ಲಾಸ ಪೇರ್ಚಿ ಮನದೊಳಗೆ ||
ಅರಿತು ಪುಣ್ಯಾತ್ಮರೆಂದೆನುತಲಾಘಳಿಗೆ |
ವರಮುನಿಯು ಪೇಳ್ದ ನಂದ ಯಶೋದೆಯರಿಗೆ ||೧೪೬||
ರಾಗ ಮಧ್ಯಮಾವತಿ ಅಷ್ಟತಾಳ
ಧನ್ಯರಹುದು ಭಲೆ | ಧನ್ಯರಹುದು ಭಲೆ ||
ಧನ್ಯರು ನೀವು ನಂದ ಯಶೋದ |
ಮಾನ್ಯರಖಿಳ ಬ್ರಹ್ಮಾಂಡಧರನ ಮಗುವೆನ್ನುತ ಮುದ್ದಾಡುವಿರಿ ಸದಾ || ಪಲ್ಲವಿ ||
ಸತ್ವರಜತಮೋಗುಣಕಾಧಾರನು | ಪುತ್ರ ನಿಮಗೆ ಇವನೆ ಅಮಮ ||
ಸೂತ್ರಧರನ ಬಾಗೊತ್ತುತ ಮೊಲೆಯ | ಉಣಿಸುತ್ತ ನೋಡುವಿರಿ ಚಿತ್ರವಲೆ ||೧೪೭||
ಜನನಿ ಜನಕರೆಂದೆನುತ ಕಣ್ಮನ | ದಣಿಯೆ ನೋಡುತ ಕುಣಿಸ್ಯಾಡುವಿರಿ ||
ಇನಿತು ಪುಣ್ಯೋದಯ ಕಾರಣ | ಸನಕಾದಿಗಳಿಗಸಾಧ್ಯವಿದನು || ಭಲೆ ||೧೪೮||
ಸಂದುದೆ ನುಡಿ ಮಾಧವನು ಮನೆಗೆ ಇಕೊ | ಬಂದನೆ ನೋಡು ಎನುತಲಿ ಮುನಿಪನು ||
ಮಂದರಧರ ಮುಚುಕುಂದ ವರದ ಗೋ | ವಿಂದಗೆರಗಿ ನಭಕಡರಿದನು ||೧೪೯||
ವಾರ್ಧಕ
ಸುರಮುನಿಯು ತೆರಳಲಿತ್ತಲು ನಂದಗೋಕುಲದಿ |
ಸರಸ ಲೀಲಾ ವಿನೋದವುದೋರಿ ಶ್ರೀಹರಿಯು |
ಪರಮ ಸೌಖ್ಯದಿ ರಾಧೆಗೊರೆದು ಅನವರತದಿಂದಿರ್ದ ತವ ಸತ್ಕೃತಿಯನು ||
ಬರೆದೋದಿ ಕೇಳ್ವ ಮಾನವರ ದಾರಿದ್ರ್ಯ ಪರಿ |
ಹರಿಸಿ ಸುಖಸರ್ವ ಸೌಭಾಗ್ಯಗಳನೀವ ಶ್ರೀ |
ಕರ ನಮ್ಮ ಕುಲದೇವತಾ ದೇವಕೀ ಕೃಷ್ಣ ಕರುಣದಿ ರಮಾಕಾಂತನು ||೧೫೦||
ಮಂಗಲಚರಣ
ಮಂಗಲಂ ಭಗವಾನ್ ವಿಷ್ಣುಂ | ಮಂಗಲಂ ಮಧುಸೂದನ |
ಮಂಗಲಂ ದೇವಕೀಪುತ್ರೋ | ಮಂಗಲಂ ಗರುಡಧ್ವಜ ||೧೫೧||
ಯಕ್ಷಗಾನ ರಾಧಾವಿಲಾಸ ಮುಗಿದುದು
Leave A Comment