ಭಾಮಿನಿ
ವರವಿಭೀಷಣನೆಂದ ಮಾತಿನೊ |
ಳರಿತು ರಾವಣನೆದೆಯೊಳಿಹ ಸುಧೆ |
ಸುರಿದು ದಶಶಿರವುರುಳುವಂದದೊಳೆಚ್ಚನಾ ರಾಮ ||
ಭರದೊಳಾ ರಾವಣನು ವಿಶ್ವಂ |
ಭರನ ರೂಪವ ನೋಡಿ ವೈಷ್ಣವ |
ಶರಕೆ ದೇಹವ ತೆತ್ತನನಿಮಿಷನಿಕರ ನಲಿದಾಡೆ || ೧ ||
ಕೃಷ್ಣಾವತಾರ
ರಾಗ ಕಾಂಬೋಧಿ ಝಂಪೆತಾಳ
ಭೂಮಿಪತಿ ಕೇಳ್ಬಳಿಕ | ದಾಮೋದರನು ಕೃಷ್ಣ | ನಾಮದಿಂ ಜನಿಸಲೀ ಜಗದಿ ||
ಆ ಮಹಾ ಕಂಸನೃಪ | ನಾಮಧುರೆಯಲಿ ದುಷ್ಟ | ನೇಮದಿಂದರ್ದನರಸಾಗಿ || ೧ ||
ನಗಧರನು ದೇವಕಿಯ | ಮಗನಾಗಿ ಹುಟ್ಟಿತಲೆ | ತೆಗೆವನೆಂಬಾ ಮಾತ ಕೇಳಿ ||
ಅಗಣಿತ ಕುಮಾರಕರ | ಬಗಿದು ನೋಡಿದರು ಹಗೆ | ಸಿಗದಾಯಿತಲ್ಲ ಧರೆಯೊಳಗೆ || ೨ ||
ನಂದಗೋಕುಲದೊಳಿಹ | ನೆಂದು ತಿಳಿದಾ ಕಂಸ | ನೆಂದನಕ್ರೂರನನು ಕರೆದು ||
ನಂದಗೋಕುಲಕೈದಿ | ಚಂದದಲಿ ಕರೆದು ತಾ | ಕಂದರಹ ರಾಮಲಕ್ಷ್ಮಣರ || ೩ ||
ಬರುವಾ ಚತುದರ್ಶಿಗೆ | ವರಬಿಲ್ಲ ಹಬ್ಬವನು | ಮೆರೆಸಬೇಕೈ ಮಹೋತ್ಸವದಿ ||
ಹರುಷದಿಂದೊರೆದು ಕರ | ತರುವಾಪ್ತರಲಿ ಶಿರೋ | ಭರಣ ನೀನಹೆ ನಮ್ಮ ಕುಲದಿ || ೪ ||
ಒಡೆಯ ! ನಿನ್ನಪ್ಪಣೆಯ | ನಡೆಸದಿರೆ ದ್ರೋಹಬಂ | ದಡಸುವುದೆನುತ್ತ ನೇಮವನು ||
ಪಡೆದನಕ್ರೂರ ತಾ | ಜಡಜಾಂಬಕನ ಸ್ಮರಿಸಿ | ನಡೆದನೈ ಕೃಷ್ಣನೋಲಗಕೆ || ೫ ||
ರಾಗ ಮಾಧ್ಯಮಾವತಿ ತ್ರಿವುಡೆತಾಳ
(ವೀರ ದಶರಥ ನೃಪತಿ ಇನಕುಲ)
ಬಂದು ಮಣಿದಕ್ರೂರನನು ಗೋ | ವಿಂದ ತಾಬಿಗಿಯಪ್ಪಿಕೊಂಡಾ |
ನಂದದಲಿ ಕೇಳಿದನು ಗುರು ಬುಧ | ಬಂಧು ಬಾಂಧವರೆಲ್ಲರೂ | ಸುಖವೆ | ಎನುತ || ೧ ||
ದೇವ ! ನೀ ಸರ್ವೇಶನಾಗಿರೆ | ಭೂ ವಿಚಾರವನೆಲ್ಲ ತಿಳಿದಿರೆ |
ಈ ವಿನೋದಗಳೇಕೆ ನಿನ್ನೊಡ | ನಾವುದನು ವಿಸ್ತರಿಸಲೀ | ತಿಳಿಯದೆನಗೆ || ೨ ||
ಆದರೊರೆದಪೆನೈ ! ಚತುರ್ದಶಿ | ಯಾದಿನದೊಳಿದೆ ಬಿಲ್ಲಹಬ್ಬವು |
ಭೇದವಿಲ್ಲದೆ ಕರೆಯಲಟ್ಟಿದ | ನಾದುರಾತ್ಮನು ಕಂಸನು | ಎನ್ನನೀಗ || ೩ ||
ಲೇಸು ಲೇಸಾಯ್ತಯ್ಯ ! ಬಹಳವಿ | ಲಾಸ ವೈತಹೆವೈಸೆ ಭಕ್ತರೊ |
ಳೇಸುಧನ್ಯನೊ ! ನೀನು ದುಷ್ಟನಿ | ವಾಸದಲಿ ಶ್ರೀಗಂಧದ | ಗುಣದೊಳೆನುತ || ೪ ||
ಭಕ್ತರೊಳಗುತ್ತಮನು ಶುದ್ಧಚ | ರಿತ್ರ ನಿನ್ನಾದರ್ಶನದಿ ಸುಖ | ವಾಯ್ತು ನಡೆ
ಹೋಗುವರೆ ಸಿದ್ಧವೆ | ನುತ್ತ ಹೊರಟನು ರಾಮನ | ಕೂಡಿಕೊಂಡು || ೫ ||
ರಾಗ ಕೇದಾರಗೌಳ ಅಷ್ಟತಾಳ
ಮರುಗಿ ಕೊಂಡೈತಹ | ತರುಣಿಯರಿಗೆ ಧೈರ್ಯ | ವೊರೆದು ವಿನೋದದಿಂದ ||
ಸರಿಯುತಿರಲು ಕೃಷ್ಣ ತೋರ್ದನಕ್ರೂರಗೆ | ವರ ವಿಶ್ವರೂಪವನು || ೧ ||
ಬಂದನು ಮಧುರೆಗಾ | ನಂದದಿ ರಜಕನ | ಸಂಧಿಸಿ ಕುಂಬುಜೆಯನು ||
ಚಂದದಿ ತಿದ್ದುತ | ಮುಂದರಿದನು ರಾಜ | ಮಂದಿರವಿದ್ದೆಡೆಗೆ || ೨ ||
ಬಾಗಿಲೊಳಿದಿರಾಗಿ | ಕುವಲಯಾಪೀಡವೆಂ | ಬಾಗಜ ಮದವುಕ್ಕುತ ||
ಬೀಗುತ್ತ ಬರುತಿ | ರುವಾಗ ಮುಕುಂದನೆ | ಸಾಗಿ ಕೊಂದಿಕ್ಕಿದನು || ೩ ||
ರಾಗ ಪಂತುವರಾಳಿ ಮಟ್ಟೆತಾಳ
ದುಷ್ಟ ಬಾಲರೇ ! ವಿರೋಧ | ಕಟ್ಟಿ ಪೋಪಿರೇ ||
ತಟ್ಟೆ ನೆಮ್ಮ ಮುಟ್ಟಿಯುದ್ಧ ಕೊಟ್ಟು ನಡೆಯಿರೇ ||
ಶ್ರೇಷ್ಠರಾದಿರೇನು | ಬಹಳ | ಇಷ್ಟವೆನ್ನುತ ||
ಮುಷ್ಟಿಕಾದ್ಯರಿದರು ನಿಂದ | ರೊಟ್ಟುಗಜರುತ || ೧ ||
ಎನಲು ರಾಮಕೃಷ್ಣರವರ | ಘನತೆ ಕಂಡರು ||
ಕುಣಿದು ಹಾರಿ ಕಟ್ಟಿ ಸೆರಗ | ಕಣಕೆ ಬಂದರು ?
ಎನುವುದೇನಗಾಧ ಸತ್ವ | ಗುಣದಿ ಹೊಯ್ದರು ||
ದಣಿದು ಜಟ್ಟಿ ಜನರು ಪ್ರಾಣ | ಹೆಣಗಿಕೊಟ್ಟರು || ೨ ||
ಬಳಿಕ ಕೃಷ್ಣ ಕಂಸನೇರಿ | ಕುಳಿತ ಪೀಠದ ||
ಬಳಿಗೆ ಬಂದುನಿಂದು ಕೈಯ | ಚಳಕ ತೋರಿದ ||
ಗಳಿಲನಾರ್ದು ಕಂಸ ಮಹಾ | ಬಲರೆ ! ಬಂದಿರೇ ? ||
ಕೊಲದೆ ಬಿಡೆನು ಕರುಳಮಾಲೆ | ಸೆಳೆವೆ ನೋಡಿರೆ || ೩ ||
ಭಾರಿ ಸದರವೇನೊ ನಮ್ಮೊ | ಳೇರಿ ಬರುವುದೇ ||
ತೇರು ಗೂಳಿಯನ್ನು ಮುರಿದ | ದಾರಿ ಬೇರಿದೆ ||
ದಾರಿಯಿದುವೆ ಮಾರಿಮಸಣ | ಸೇರಿ ಹೋಹುದೇ ? |
ತೋರು ಸತ್ವವೆಂದನಾ ಮು | ರಾರಿ ವೇಗದೇ || ೪ ||
ಭಾಮಿನಿ
ದುರುಳ ಕಂಸನ ಕೊಂದಮೇಲ್ ಯದು |
ವರರಿಗಭಯವನಿತ್ತು ಕೃಷ್ಣನು |
ಶರಧಿಯಲಿ ಪಟ್ಟಣವ ನಿರ್ಮಿಸಿ ಸುಖದೊಳಿರುತಿರಲು ||
ಪರಮ ಧಾರ್ಮಿಕನಾ ಯುಧಿಷ್ಠಿರ |
ವಿರಚಿಸಿದನಾ ರಾಜಸೂಯಾ |
ಧ್ವರ ಸಮಾಪ್ತಿಯ ಕಾಲದೊಳು ಗಾಂಗೇಯಗಿಂತೆಂದ || ೫ ||
ರಾಗ ಸಾಂಗತ್ಯ ರೂಪಕತಾಳ
ಅಜ್ಜಯ್ಯ ! ಕೇಳಗ್ರಪೂಜೆಗೆ ತಕ್ಕಂಥ | ಪ್ರಾಜ್ಞರಾರಿ ಸಭೆಯೊಳಗೆ ||
ದುರ್ಜಯರಾಗಿಹ ರಾಜರ ಮಧ್ಯದಿ | ಪೂಜ್ಯರೆನ್ನಿಸೆ ಕಷ್ಟವಲ್ತೇ || ೧ ||
ಸರ್ವಶಾಸ್ತ್ರವ ಬಲ್ಲ | ಸರ್ವಜ್ಞ ನೀನಿರೆ | ಪೂರ್ವಜನೆಂದು ಕೇಳುವೆಯಾ ? ||
ಸರ್ವ ಶಕ್ತನು ಕೃಷ್ಣ | ನೋರ್ವನಿರಲುಮತ್ತೆ | ಇರ್ವರುಂಟೆ ? ಸಭೆಯೊಳಗೆ || ೨ ||
ದೇವವೃಂದದಿ ಮಹಾ | ದೇವನು ಆದ್ಯಂತ | ವಾವುದಿಲ್ಲದ ಪರದೈವ ||
ಕಾವಕರ್ತನು ಭಕ್ತಿ | ಗೀವನಂತರ್ಯದಿ | ತಿವಿಕೊಂಡಿಹನು ಸರ್ವತ್ರ || ೩ ||
ಎನಲೆದ್ದು ಸಹದೇವ | ಘನಪೀಠಾಗ್ರಕೆ ತಂದು | ವಿನಯದೊಳೆತ್ತಿ ಕುಳ್ಳಿರಿಸಿ ||
ವನಧಿ ಶಾಯಿಯ ಪೂಜೆ | ಯನುಗೊಳಿಸಲ್ಕೆ ತಾ | ಕನಲುತೆಂದನು ಶಿಶುಪಾಲ || ೪ ||
ರಾಗ ಭೈರವಿ ಏಕತಾಳ
ಮರುಳಾದೆಯ ಸಹದೇವ ? ನೀ-ಮುರಿದೈ ನೃಪರಾಳ್ತವನ ||
ದೊರೆಗಿರಲು ಸನ್ಮಾನ | ಆ – ದುರುಳಗೆ ಕೊಡಬಹುದೇನು ? || ೧ ||
ನೀರಲಿ ಜನಿಸಿದನೀತ | ನೀ – ರ್ನೆರವಿನೊಳಿರುವನು ಆತ |
ಓರೋರ್ವರಿಗಿದೆ ಜೋಡಿ | ನೀ-ಕೋರೈಸಿದೆಯೆಲಾ ಖೋಡಿ || ೨ ||
ನಗೆಗೆಡೆ ಮಾಡಿದೆಯಲ್ಲಾ | ಈ – ಬಗೆಯಿಂ ಸದ್ಗತಿ ಸಲ್ಲ |
ಸುಗುಣರು ಪಾಂಡವರೆನುತ | ಈ – ಜಗವೆಂಬಾ ನುಡಿ ವ್ಯರ್ಥ || ೩ ||
ಕಾಗೆಯು ಹಂಸಕೆ ಸರಿಯೆ ? ಮೇಣ್ – ಗೂಗೆಯ ಖಗಪತಿಗೆಣೆಯೇ ?
ಈ ಗೊಲ್ಲನು ಪೀಠವನು | ಏ – ರ್ದಾಗಳೆ ನಮಗೆಣೆಯೆನು ? || ೪ ||
ಗುರುಹಿರಿಯರೊ ಕ್ಷತ್ರಿಯರೋ | ಮುನಿ-ವರರೋ ಸುಜ್ಞಾನಿಗಳೋ |
ಇರುತಿರೆ ಕಳ್ಳನಿಗಿಂತು | ಕೊಡು – ವರೆ ಪೂಜೆಯ ಹುಲು ಭ್ರಾಂತು || ೬ ||
ಎನುತ ಕರೂಶಾಧಿಪನು | ಭೋಂ-ಕನೆ ಎದ್ದಾ ಕೃಷ್ಣನನು |
ಠೊಣೆಯಲು ಮುಂದರಿಯಲ್ಕೆ | ಶಂ-ತನಸುತನೆಂದನು ಕ್ಷಣಕೆ || ೬ ||
ಭಾಮಿನಿ
ಮರುಳೆ ಕ್ಷತ್ರಿಯರಾಯರಿರ ಮುಂ |
ದರಿದು ಜರೆಯುವಿರೇಕೆ ಕೃಷ್ಣನ |
ಚರಿತೆಯನು ಬಣ್ಣಿಸಲು ಫಣಿಪತಿಗಾದರಸದಳವು ||
ತರಳತನದಲಿ ಶಕಟ ಮುಖ್ಯರ |
ತರಿದು ಕಂಸನ ಮುರಿದು ಸುಜನರ |
ಪೊರೆವ ಶ್ರೀ ಪರಮಾತ್ಮನಲಿ ನಿಮಗಹಿತವೇ ಎಂದ || ೧ ||
ರಾಗ ಮಾರವಿ ಅಷ್ಟತಾಳ
(ಜಾಣನಹುದಹುದೋ ರಾಘವ)
ವೀರನೈ ಭಳಿರೆ ! ಕಳ್ಳರೊಳತಿ – ಧೀರನೈ ಭಳಿರೆ |
ವೀರನಹುದು ಗೊಲ್ಲ | ಕೇರಿಯ ಮನೆ ಮನೆ | ಯಾರಿಲ್ಲದಾಗ ಹೊಕ್ಕು |
ಬೆಣ್ಣೆಯ ಮೆದ್ದ -ಚೋರನಿಂಗೇನು ಸೊಕ್ಕು | ಹೆಂಗಳ ಮುಂದೆ –
ತೋರಲು ಬಲ್ಲೆ ಠಕ್ಕು | ವೀರನೈ || ೧ ||
ಮಡಿಕೆ ಕುಡಿಕೆ ಯೊಡೆವುದಕೆ | ಹೆಂಗ-ಳೊಡನೆ ಹೋರಾಡಿಗೆಲ್ವುದಕೆ |
ಮಡದಿಯರಪಹಾಸ್ಯ | ವುಡುವ ಸೀರೆಯ ಕದ್ದು | ಹೊಡೆತವನುಂಬುದಕೆ |
ಜಾರೆಯರೊಡ-ನಡಗಿ ಕೊಂಡಾಡಲಿಕೆ |
ಕಲ್ತುದು ಎಲ್ಲ-ನಡೆಯದೆಮ್ಮೊಡನೆ ಜೋಕೆ | ವೀರ || ೨ ||
ನೀತಿನ್ಯಾಯಗಳುಂಟೆ ನಿನೆಗೆ | ಕುಲಜಾತಿ ಧರ್ಮವ ಬಿಟ್ಟನಗೆ |
ಪಾತಕ ಕೃತ್ಯದಿ ಮಾಯೆ ಮಾಟಗಳಿಂದ | ಸ್ವಾತಿಶಯವ ಪಡೆದೈ |
ನೀರೊಳು ಮನೆ – ಭೀತಿಯಿಲ್ಲದೆ ಕಟ್ಟೆದೈ | ವೀರ || ೩ ||
ಭಾಮಿನಿ
ಸಾಕ ಮಾಡೆಲೆ ಚೈದ್ಯ ಮಾತಿನೊ |
ಳೇಕೆ ತಪ್ಪನು ಗೈವೆ ಸುಡುಸುಡು |
ಈ ಕುಬುದ್ಧಿಗೆ ಸೈರಿಸಿದೆ ನಾನಿತ್ತ ನುಡಿಯಂತೆ ||
ಸಾಕೆನಿಸಿದರೆ ಮತ್ಸ್ಯ ಮೊದಲಾ |
ದಾಕೃತಿಯೊಳಸುರಾವಳಿಯ ತರಿ |
ದಾ ಕಥೆಯ ನಾ ಮೆರಸದಿರೆನೆಂದನು ಮುರಧ್ವಂಸಿ || ೧ ||
ರಾಗ ಸೌರಾಷ್ಟ್ರ ತ್ರಿವುಡೆ ತಾಳ
ಅಷ್ಟರೊಳಗಾ ದಂತವಕ್ರನು | ವಿಷ್ಟರನೇರಿದೊಡೆ ಶಾಶ್ವತ |
ಪಟ್ಟಬಂತೇ ಮರಣವಾರಿಗೆ | ತಟ್ಟಿತೆಂದ || ೧ ||
ಮಾನಬಿಟ್ಟ ನೃಪಾಲರಿಂಧರೆ | ಗೇನು ಚಂದವೊ ? ನ್ಯಾಯಪಾಲನೆ |
ಗಾನು ಹೋರದೆ ಬಿಡೆನು ಕೃಷ್ಣನ | ತ್ರಾಣ ನೋಳ್ಪೆ || ೨ ||
ಚೈದ್ಯನೆಂದನು ಕ್ರೋಧದಲಿ ಹರಿ | ಯಿದ್ದ ತಾಣಕೆ ನೆಗೆದು ಸಭೆಯಲಿ |
ಬುದ್ಧಿ ಕೆಟ್ಟವರಾರು ? ಕೊಲುವಾ | ರುದ್ರನಹೆಯಾ ? || ೩ ||
ನೀರೊಳಗೆ ಮೀನಾಗಿ ಬಹೆಯಾ ? | ಕೂರುಮನೊ ? ವಾರಾಹನೊ ? ತೆಗೆ |
ನಾರಸಿಂಹನೆ ಬಂದರರಿವೆನು | ಬಾರಿಸಲ್ಕೆ || ೪ ||
ಸುಡು ಸುಡೆಲೊ ವಟುವಾಗಿ ಬಲಿಯನು | ಕೆಡಹಿದೆಯೆಲಾ ? ತಾಯತಲೆಯನು
ಕಡಿದ ಪಾಪಿಯೆ ! ಕ್ಷತ್ರಿಯರಿಗೇ | ಕೊಡಲಿಯಾದೈ || ೫ ||
ನಾಡನುಳಿದಾ ಹೇಡಿ | ಕಪಿಗಳ | ಕೂಡಿಕೊಂಡಾಖೋಡಿ ! ವಾಲಿಯ |
ಮೋಡಿಯಲಿ ಗೆಲಿದಂಥ ಮೋರೆಯ | ನೋಡಲಹುದೇ ? || ೬ ||
ಇಂತೆನಲು ತಾನಿತ್ತ ಭಾಷೆಯು | ಸಂತೆನುತ್ತಾ ಕೃಷ್ಣನನಿಬರ |
ಸಂತಯಿಸುತಿದಿರೆದ್ದನಾಗ ಕೃ | ತಾಂತನಂತೆ || ೭ ||
ಫಡ ದುರುಳ ದುಷ್ಟಾತ್ಮರಿರ ! ಬಾ | ಯ್ಬಡಿದು ಏನೇನೊದರುವಿರೆಲಾ |
ಮಡಿವ ಕಾಲವಿದೆಂದು ತಳಿಗೆಯ | ಹಿಡಿದು ನಿಂದ || ೮ ||
ಎತ್ತಿ ಬಿಸುಟಾಭರಕೆ ಪೂಜಾ | ಪಾತ್ರೆಯೇ ಹರಿಚಕ್ರವಾಗಿಯೆ |
ಕತ್ತರಿಸಿ ಹಾರಿತ್ತು ಚೈದ್ಯನ | ಮಸ್ತಕವನು || ೯ ||
ಭಾಮಿನಿ
ದೇವ ವಾದ್ಯಗಳೆಲ್ಲ ಮೊಳಗಲು |
ದೇವ ಮುನಿಗಳು ಸಹಿತ ಕೃಷ್ಣನ |
ಪಾವನಂಘ್ರಿಯ ಸ್ಮರಿಸಲಾಯ್ತಾ ಯಾಗ ಸಂಪೂರ್ಣ ||
ಭೂವಲಯದಲಿ ಶಾಂತಿಯೊದಗ |
ಲ್ಕಾ ವಿರೋಧಿಗಳನ್ನು ಮುರಿದಾ |
ದೇವ ದೇವನು ಕೃಷ್ಣಲೀಲೆಯ ತೋರಿ ಮರೆಯಾದ || ೧ ||
ಬೌದ್ಧಾವತಾರ
ರಾಗ ಕೇತಾರಗೌಳ ಅಷ್ಟತಾಳ
ಧಾರಿಣೀಶ್ವರನೆ ಕೇ | ಳಾರಮಾಧವನು ಸಂ | ಹಾರಗೈಯಲು ಖಳರ ||
ತೋರಿದನೈ ಬೌದ್ಧಾ | ಕಾರವ ತನ್ನ ಶ | ರೀರದಿಂದಳವಡಿಸಿ || ೧ ||
ಕರೆದು ಪೇಳಿದನು ತ್ರಿ | ಪುರರ ಪಟ್ಟಣಕಾಗಿ | ತೆರಳಿ ವೇದಾದಿಗಳ ||
ಜರೆದು ನಾಸ್ತಿಕ ತತ್ವ | ವರುಹಲು ಬೇಕಯ್ಯ | ದುರುಳರ ವಧೆಗೋಸುಗ || ೨ ||
ಎಂದು ಮಾಯಾವಿದ್ಯೆ | ಯಂದವ ಬೋಧಿಸ | ಲಂದು ಶಿಷ್ಯರ ಕೂಡುತ ||
ಬಂದಿಳಿದನು ತ್ರಿಪು | ರೇಂದ್ರನ ಪಟ್ಟಣ | ದೊಂದು ನಿವೇಶದಲಿ || ೩ ||
ಭಾಮಿನಿ
ಹರಿದ ಬಟ್ಟೆಯ ಕರದ ಪಾತ್ರೆಯ |
ಧರಿಸಿದತಿಶಯ ಮುನಿಯ ರೂಪದಿ |
ಕರೆ ಕರೆದು ಬೋಧಿಸಿದನಾ ಪಾಷಂಡ ಧರ್ಮವನು ||
ಮೆರೆಯದಿರಲಾ ವಿದ್ಯೆ ಮಾಯಾ |
ದರುಶನವು ಹರಭಕ್ತರೆಡೆಯಲಿ |
ಹರಿಯ ನೇಮದಿ ಬಂದನಾ ನಾರದನು ತತ್ಪುರಕೆ || ೧ ||
ರಾಗ ಕಾಂಬೋಧಿ ಝಂಪೆತಾಳ
ನಾರದನ ನೋಡಿ ಮುದ | ವೇರಿ ತ್ರಿಪುರೇಶ್ವರನು | ವೀರಾಸನದಲಿ ಕುಳ್ಳಿರಿಸಿ ||
ಸ್ವಾರಿಯೆತ್ತಣದು ನ | ಮ್ಮೂರಿಗೈತಂದ ಹೊಸ | ವಾರತೆಯನರುಹಬೇಕಂದ || ೧ ||
ಅರಿಯದಾಯಿತೆ ? ಮಹಾ | ಪುರುಷರಹ ಯೋಗಿಗಳು | ಭರದೊಳಿಲ್ಲಿಗೆ ಬಂದ ಸ್ಥಿತಿಯೆ ||
ದರುಶನವಗೈದು ಸ | ಚ್ಚರಿತನಾಗಲು ಪುಣ್ಯ | ದೊರೆವುದೆಂದನು ದೇವಋಷಿಯು || ೨ ||
ಎನಲು ದೈತ್ಯೇಂದ್ರನಾ | ಮುನಿಯ ಹತ್ತಿರಕೈದಿ | ಮಣಿದೆಂದನರುಹನಾ ಪದಕೆ ||
ಘನ ನೀತಿ ತತ್ವ ಬೋ | ಧನೆಯಿಂದಲೆಮ್ಮವರ | ಜನುಮ ಸಾರ್ಥಕಗೈವುದೆಂದ || ೩ ||
ದನುಜರಿರ ಕೇಳಿರೈಕ್ಷಣಿಕವಾಗಿರೆ ಲೋಕ | ಬಣಗು ದೈವವ ನಂಬಲೇಕೆ ? ||
ಎನುವೆನಷ್ಟಾಂಗ ಜೀ | ವನ ಮಾರ್ಗದಲಿ ಸೌಖ್ಯ | ವನುಭಸಿರೆಂದನಾ ಯತಿಯೂ || ೪ ||
ಭಾಮಿನಿ
ಮತ್ತೆ ದಾನವರೆಲ್ಲ ಮಾಯಾ |
ಶಾಸ್ತ್ರಗಳ ಪಠಿಸುತ್ತ ದೈವದ |
ಭಕ್ತಿವಿರಹಿತರಾಗಿ ನಾಸ್ತಿಕವಾದವನೆ ಹಿಡಿದು ||
ಮತ್ತರಾಗಿರಲಿತ್ತ ಪರಶಿವ |
ನಿತ್ತನಾಜ್ಞೆಯ ಸುರಸಮೂಹಕೆ |
ಮುತ್ತಿ ತ್ರಿಪುರರ ಪಟ್ಟಣವ ಹುಡಿ ಮಾಳ್ಪುದೆಂದನುತ || ೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳಿ ತಾಪಸರಿತ್ತಲಾ ಖಳ | ಜಾಲದೊಡನಾ ತಾರಕಾಕ್ಷನು |
ಕಾಳ ರಾತ್ರಿಯೊಳೆದ್ದು ನುಡಿದನು | ಓಲಗದಲಿ || ೧ ||
ಸೋಲದಲಿ ಬೆಂಡಾಗಿ ಸ್ವರ್ಗದ | ಬಾಳುವೆಯ ನೀಡಾಡಿ ತ್ರಿದಶರ |
ಜಾಲವೇ ಮೊರೆಯಿಟ್ಟುದೈ ಕಂ | ಕಾಳ ಧರಗೆ || ೨ ||
ಬಂದ ಬಹುಭಂಗಗಳ ತಾಬಗೆ | ದಂದು ಸುರರ ಸಮೂಹದೊಡನೈ |
ತಂದನಿಲ್ಲಿಗೆ ಸಮರಕೆನುತಾ | ಇಂದುಧರನು || ೩ ||
ಬರಲಿ ಸಮರಕೆ ಮೃತ್ಯುಹರನೇ | ಮೆರೆಸಬಲ್ಲನೆ ? ವಿಜಯವೆಮ್ಮಾ |
ಕರತಳದೊಳಿರೆ ಮೃತ್ಯು ಬ್ರಹ್ಮನ | ವರಬಲದಲಿ || ೪ ||
ಎನುತ ಕೊನೆಮೀಸೆಯನು ತಿರುಹುತ | ದನುಜನೈದಿದನಸ್ತ್ರಶಸ್ತ್ರದ |
ದೊಣೆಯನೇರಿಸಿಕೊಂಡು ರಾಕ್ಷಸ | ಗಣವನೆರಹಿ || ೫ ||
ರಾಗ ಮಾರವಿ ಏಕತಾಳ
ಹರನಾಗಳೆ ಸುರ | ಗಿರಿ ಚಾಪವ ಝೇಂ | ಕರಿಸಲು ಮೂಲೋಕ ||
ತಿರುಗಿತು ತಿರ್ರನೆ | ದುರುಳರ ತ್ರಿಪುರವು | ಭರದಿಂದೊಡಗೂಡೆ || ೧ ||
ಮತ್ತಾ ಹೂಂಕೃತಿ | ವೆತ್ತು ಬಲಿದಕೈ | ಯೆತ್ತಲು ಗಗನದಲಿ ||
ಮುತ್ತಿತು ಹೊಗೆ ಕಾ | ರ್ಗತ್ತಲೆ ಸಾಗರ | ವತ್ತಿತು ನೀರಸದಿ || ೨ ||
ತಾರಕ ಸುತನಿಂ | ತಾರೌದ್ರವ ಕಂ | ಡೇರಿದ ಕ್ರೋಧದಲಿ ||
ಕಾರುತ ಕೆಂಗಿಡೆ | ಘೋರಾಕಾರದೊ | ಳಾರುಭಟಿಸುತೆಂದ || ೩ ||
ಸ್ಮರಹರನಿತ್ತಲು | ಬರುವಸುರರ ಕಂ | ಡುರಿಯುಗುಳುತ ಬೇಗ ||
ಮುರಹರನನು ತಾ | ಪರಿಕಿಸಿ ಬ್ರಹ್ಮನ | ಕರೆದೆಚ್ಚರಿಸಿದನು || ೪ ||
ಕ್ರೂರದನುಜರೇಂ | ಕಾರುವಿರೇ ಛಲ | ಬಾರದು ಜಯ ನಿಮಗೆ ||
ಭೋರನೆ ಹಿಂದಕೆ | ಸಾರಿರಿ ಎನಲಾ | ತಾರಕ ಸುತನೆಂದ || ೫ ||
ರಾಗ ಕೇತಾರಗೌಳ ಝಂಪೆತಾಳ
ಹರ ಹರಾ ! ಇದು ಚೋದ್ಯವು | ನಮ್ಮೊಡನೆ – ದುರಕೆ ನೀವ್ ಬಂದ ಪರಿಯೂ ||
ಸರುವೇಶನಾಗಿ ಜಗಕೆ | ಸುರಪಕ್ಷ – ವೆರಸಿನಡೆತಹುದೆ ಹೀಗೆ || ೧ ||
ನೀತಿ ನ್ಯಾಯವ ಶೋಧಿಸೆ | ನಿಷ್ಪಕ್ಷ-ಪಾತವೇ ನಮ್ಮದೈಸೆ |
ಪಾತಕಿಗಳಾಗೆ ನೀವು | ಬಲ ಸಹಿತ – ವೈತಂದೆವಿಲ್ಲಿಗಾವು || ೨ ||
ಹಿರೆಭಾಗದೊಡೆತನವನು | ತ್ರಿದಶರಿಗೆ – ಕರೆದಿತ್ತ ನ್ಯಾಯವೇನು ?
ಮರಣವಿರದಂತೆ ಗೈದು | ನಮ್ಮವರ – ತರಿಯುವಿರೆ ನೀತಿಯುಳಿದು || ೩ ||
ಪಾಪ ಕೃತ್ಯಖಳರಿಗೆ | ಮೃತ್ಯುವಿನ – ರೂಪಾಗಿ ಬಹುದು ಮೇಗೆ |
ಆಪತ್ತಿನಲಿ ಕರಗುತ | ಸೊಕ್ಕುಬರೆ – ಕಾಪಥದಿ ಸಾಯ್ವಿರತ್ತ || ೪ ||
ಎನಿತು ನ್ಯಾಯವ ಪೇಳ್ದರು | ಉದ್ದುರುಟು – ತನ ವಿರಲು ಕೇಳ್ವರಾರು |
ಕಣೆಯೌಷಧಿಯೆ ತಾಗಲು | ತಿಳಿವುದೆಂ – ದಣಿದನಾ ಕಣೆಯ ಸಾಲು || ೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ತ್ರಿಪುರದ ಅಮೃತ ಕೂಪವು | ಬತ್ತಿಹೋಗಲು ರಾಕ್ಷಸರಪಡೆ |
ಮೃತ್ಯು ವಶವಾಯಿತ್ತು ಶಿವನೆ | ಚ್ಚ ಸ್ತ್ರದಿಂದ || ೧ ||
ಸಾಲು ಸಂದಣಿಗೊಂಡು ಕೆಡೆದಾ | ಖೂಳ ದೈತ್ಯರ ನೋಡಿ ತ್ರಿಪುರರು |
ಭಾಳನೇತ್ರನ ಮುತ್ತಿದರು ಕ | ಟ್ಟಾಳುತನದಿ || ೨ ||
ಮರುಳು ದೇವನೆ | ನಿಲ್ಲು ಭಕ್ತರಿ | ಗೆರಡೆಣಿಸಿದಾ ಬಿರುದು ಮೋಸವ |
ಮುರಿವೆವೀಕ್ಷಣವೆಂದು ಹಾಯ್ದರು | ಸರಭಸದಲಿ || ೩ ||
ಹರನದಾಗಳೆ ರೌದ್ರರೂಪವ | ಧರಿಸಿ ನಾರಾಯಣನ ಬಾಣವ |
ಭರದೊಳೆಚ್ಚನು ಮೇರು ಚಾಪವ | ಕರದೊಳೆತ್ತಿ || ೪ ||
ಮೂರು ಜಗವಲ್ಲಾಡಿತೊಂದೇ | ಭಾರಿಯೊಳು ತ್ರಿಪುರಂಗಳುರಿಯಲು |
ಧಾರಿಣಿಯೊಳೊರಗಿದರು ಮೂವರು | ಕ್ರೂರ ಖಳರು || ೫ ||
ಸುರರು ಜಯಜಯವೆನುತ ಹೂಮಳೆ | ಗರೆಯೆ ದುಂದುಭಿ ಘೋಷದಲಿ ವಿ ||
ಸ್ತರಿಸಿತಂದಿಗೆ ತ್ರಿಪುರ ಮಥನದ | ಚರಿತೆಯಿಳೆಗೆ || ೬ ||
ಕಲ್ಕ್ಯವತಾರ
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತಲಾ ಕಲಿಪುರುಷ ರಾಕ್ಷಸ | ಧೂರ್ತಕಾಮ ಕ್ರೋಧ ಮುಖ್ಯರ |
ಮೊತ್ತ ಕೂಡಿಸಿ ತನ್ನ ಮಹಿಮೆಯ | ಬಿತ್ತುತಿರ್ದ || ೧ ||
ನಡೆವುದೇ ತನ್ನಾಜ್ಞೆ ಜಗದಲಿ | ಪಡೆವರೇ ಶಕ್ತಿಯಲಿ ಭಾಗ್ಯವ |
ತಡೆದು ದೈವವ ಪೌರುಷದ ಮೇ | ಲಡರು ತಿಹರೇ ? || ೨ ||
ಪಂಚ ಭೂತಗಳಾಟವನು ತ | ನ್ನಂಚಿನಲಿ ಹಿಡಿದಾಡಿಸುವರೇ ? |
ಸಂಚರಿಪಗ್ರಹತಾರೆಗಳ ಮೇ | ಲ್ಮಿಂಚುತಿಹರೇ ? || ೩ ||
ಸತ್ವಸರಿಸಮ ಯುಕ್ತಿ ಸಾಹಸ | ವೃತ್ತಿ ಧರ್ಮಾಚರಣೆಯಲಿ ಜನ |
ರೆತ್ತಿಹರೆ ? ಕಾದಾಟದಲಿ ಜಯ | ಸ್ವಾರ್ಥ ಬಿಡದೆ || ೪ ||
ಇಂತು ಕಲಿಯಪ್ಪಣೆಯೊಳಾ ಭುವ | ನಾಂತರವೆ ಕಂಗೆಡಲು ನಾರದ |
ಕಂತು ಪಿತನಿಂಗರುಹಿದನು ವಿ | ಭ್ರಾಂತನಾಗಿ || ೫ ||
ರಾಗ ದೇಶಿ ಅಷ್ಟತಾಳ
ಏನಿದು ಸ್ವಾರಿ ಏನಿದು || ಪಲ್ಲವಿ ||
ಏನಿದು ನಾರದ ಬಲು ವ್ಯಸನದಲೀ | ಕ್ಷೀಣನಾದೈ ಏನೇನಾಯ್ತು ಲೋಕದಲಿ || ಅ.ಪ ||
ಲಾಲಿಸೊ ದೇವರದೇವ ಶ್ರೀಲೋಲ | ಹಾಳಾಯ್ತು ಲೋಕದ ನಡೆನುಡಿಯೆಲ್ಲ
ತಾಳಲರಿದು ಕಷ್ಟ ಭೂದೇವಿಗಿನ್ನು | ಕೇಳುವರಾರಿಲ್ಲ ನೀಹೊರತಿನ್ನು || ೧ ||
ಘನ ಶಾಸ್ತ್ರಾದಿಗಳೆಲ್ಲ ಕೇಳದೆ ಹೋಯ್ತು | ಮನೆಮನೆ ಜೂಜು ಸುರೆಯ ಸೂರೆಗಾಯ್ತು ||
ಜನ ಜನರಲ್ಲಿ ಬಂಧು ಬಾಂಧವರಲ್ಲಿ | ಸೆಣಸಾಟವಲ್ಲದಿಲ್ಲವು ಸ್ನೇಹಕೇಳಿ || ೨ ||
ಸುರಮುನಿಪನೆ ! ನಿನ್ನೊಳೊರೆಯಲೇನುಂಟು | ಧರೆಯಪಾಲನೆಗಿನ್ನೊಂದವತಾರ ಉಂಟು ||
ದುರುಳ ಕಲಿಯ ಮಹಾತ್ಮ್ಯೆಯ ನೋಡುತಿಹೆನು | ಧರಿಸಿ ಬರುವೆನಿದೊ ಕಲ್ಕಿ ರೂಪವನು || ೩ ||
ರಾಗ ಮಾರವಿ ಅಷ್ಟತಾಳ
ಬಂದನಾ ಹರಿಯು | ಕಲ್ಕಿಯ ರೂಪ – ದಿಂದ ನರಹರಿಯು || ಪಲ್ಲವಿ ||
ಬಂದನಾ ಮಾಧವನು ಭಾರ್ಗವ | ನಿಂದ ವಿದ್ಯೆಯನೋದಿ ಪುರಹರ |
ನಂದು ಕೊಟ್ಟಾಶಸ್ತ್ರ ಧರಿಸುತ | ಮಂದಮತಿಗಳನಟ್ಟಿ ಬೆರಸುತ || ಅನು ಪಲ್ಲವಿ ||
ಘನಕುದುರೆಯನೇರಿ ಬಂದ | ಖಡ್ಗ – ವನು ಝಳಪಿಸುತಲೈತಂದ |
ತ್ರಿಣಯನಂತಾ ರೌದ್ರರೂಪದಿ | ಕನಲುತೈತರಲಾಗ ಧಿಮ್ಮನೆ |
ಘನಮದಾಂಧರು ದುಷ್ಟ ಚೇಷ್ಟೆಯ | ಮನೆಮುರುಕರಲ್ಲಲ್ಲಿ ಹಾಯೆನೆ || ೧ ||
ಓಡಿದನತ್ತಿತ್ತ ಬೇಗ | ಕಲಿ ನೋಡಿದ ಕಲ್ಕಿಯ ವೇಗ |
ಹೇಡಿಯಂದದಿ ತಿರುತಿರುಗಿ ಖಯ | ಖೋಡಿ ಮಾಯಾ ಮಂತ್ರ ಶಕ್ತಿಯೊ |
ಳೋಡಿದನು ಕಾಮಾದಿಸಚಿವರ | ಕೂಡಿ ಕಲಹಾದಿಗಳ ಕೆರಳಿಸಿ || ೨ ||
ಮೋಸ ವಂಚನೆ ದ್ರೋಹಾದಿಗಳು | ಪರ-ದೂಷಣೆ ದ್ವೇಷಾಸೂಯೆಗಳು |
ಲೇಸುಗಾಣದೆ ನಾಶವಾಗಲು | ಆಶೆ ಪಾಶಗಳಡಗಿ ಹೋಗಲು |
ಆಸುರಾಳಿಯ ದೂಷ್ಯಕುಲಗಳ | ನಾಶಗೈದಾವೇಶದಿಂದಲಿ || ೩ ||
ಕಂದ ಪದ್ಯ
ದುಷ್ಟಾತ್ಮರು ಮರೆಯಾಗಲು |
ಸೃಷ್ಟಿಯು ಮೆರೆವಂತೆ ಸತ್ಯಧರ್ಮಾದಿಗಳಂ |
ಸೃಷ್ಟಿಸಿ ನಾರಾಯಣ ತ |
ನ್ನಿಷ್ಟದೊಳಿರ್ದಂ ದಶಾವತಾರವಂ ತೋರಿಸುತಾ || ೧ ||
ಸೃಗ್ಧರಾ ವೃತ್ತ
ಇಂತೀ ಲೋಕ ಹಿತಾರ್ಥಮಾಗಿ ಹರಿ ತಾನೀರೈದು ರೂಪಂಗಳ
ತ್ಯಂತೋತ್ಸಾಹದೊಳಾಂತು ದಿವ್ಯ ವಿಭವಂ ತೋರ್ದಾ ಕಥಾ ಚಿತ್ರಮಂ
ಸಂತೋಷಂ ಪಡೆವಂತು ವರ್ಣಿಸಿದೆನೀಕಾವ್ಯಂ ಕಲಾ ಪ್ರೇಮದಿಂ
ದೆಂತೆಂತೋ ನೆರೆದೋದಲೀವನಭವಂ ಸೌಖ್ಯಂ ಸದಾ ಮಂಗಲಂ || ೧ ||
– ಮಂಗಲ ಪದ –
ಮಂಗಲಂ ಜಯ ಮಂಗಲಂ | ಶ್ರೀ ರಂಗಗೆ – ನೀಲಾಂಗಗೆ |
ಮಂಗಲಂ ವೇದಾಂಗ ವೇದ್ಯ ಶು | ಭಾಂಗಗೆ ನರ – ಸಿಂಗಗೆ || ೧ ||
ಸೋಮಧರ ಪ್ರಿಯ ಬಲಿಯದರ್ಪ ವಿ | ರಾಮಗೆ – ಸುಖಧಾಮಗೆ |
ಕಾಮಜನಕ ಸುನಾಮ ಭಾರ್ಗವ | ರಾಮಗೆ – ಶ್ರೀರಾಮಗೆ || ೨ ||
ಭೂರಿಭುವನಾಧಾರ ಧರ್ಮೊ | ದ್ಧಾರಿಗೆ – ಕಂಸಾರಿಗೆ
ಭಾರತಾಹವ ಗೆಲಿಸಿದಾ ಶ್ರೀ | ಶೌರಿಗೆ – ಗಿರಿಧಾರಿಗೆ || ೩ ||
ಶೀಲಜನ ಪರಿಪಾಲ ಗೋಪೀ | ಬಾಲಗೆ – ಗೋಪಾಲಗೆ
ವ್ಯಾಳ ಶಯನ ವಿಶಾಲ ಲಕ್ಷ್ಮೀ | ಲೋಲಗೆ – ವನಮಾಲಿಗೆ || ೪ ||
ಧನುಜ ಕುಲ – ಸಂಹನನ ಮಾಯಾ | ಮನುಜಗೆ – ಯದು ತನುಜಗೆ
ಕಣಿಪುರಾಧಿಪ ಕೃಷ್ಣ ಕರುಣಾ | ವನಧಿಗೆ – ಗುಣವನಧಿಗೆ || ೫ ||
ಕಂದ ಪದ್ಯ
ಕೃತಿಪತಿಯುಡುಪತಿ ಕೃಷ್ಣಂ |
ಕೃತಿ ವಿಷಯಂ ವಿಷ್ಣುಲೀಲೆ ಭಗವತ್ ಚರಿತಾ
ಮೃತಮಿಂತು ಯಕ್ಷಗಾನದ
ಕೃತಿಪೇಳ್ದಂ ವಿಷ್ಣು ಶರ್ಮಕವಿ ಕನ್ನಡದೊಳ್ || ೧ ||
ಅಂತೂ ಪದ್ಯಗಳು ೩೪೧ ಕ್ಕೆ ಶ್ರೀ ಮನ್ಮಹಾ ವಿಷ್ಣುಲೀಲೆ
ದಶಾವತಾರ ಯಕ್ಷಗಾನ ಪ್ರಬಂಧಂ ಪರಿಸಮಾಪ್ತವಾದುದು
ಮಂಗಳ ಮಹಾ ಶ್ರೀ | ಶ್ರೀ | ಶ್ರೀ |
Leave A Comment