Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ವೀರೇಶ್ವರ ಪುಣ್ಯಾಶ್ರಮ

ಶ್ರೀ ವೀರೇಶ್ವರ ಪುಣ್ಯಾಶ್ರಮ ೧೯೪೨ರಲ್ಲಿ ಪಂ. ಪಂಚಾಕ್ಷರಿ ಗವಾಯಿಗಳಿಂದ ಸ್ಥಾಪಿಸಲ್ಪಟ್ಟಿತು. ಆರಂಭದಲ್ಲಿ ಇದು ದಾನಿ ಬಸರಿಗಿಡದ ವೀರಪ್ಪನವರು ದಾನವಾಗಿ ನೀಡಿದ ಗದಗಿನ ಮಸಾರಿಯಲ್ಲಿ ಆರಂಭಗೊಂಡಿತು. ಅಂಧ ಕಲಾವಿದರಿಗೆ ವಿಶೇಷವಾಗಿ ಶಿಕ್ಷಣ ನೀಡಲು ಸ್ಥಾಪಿಸಿದ ಈ ಸಂಸ್ಥೆ ಇತರರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತು.ಹೀಗಾಗಿ ಈ ಸಂಸ್ಥೆಯಿಂದ ಆನೇಕ ಗಾಯಕರು ಪ್ರಸಿದ್ಧಿಗೆ ಬಂದಿದ್ದಾರೆ ಸರ್ವಶ್ರೀ ಅರ್ಜುನ ಸಾ ನಾಕೋಡ, ಸಿದ್ದರಾಮ ಜಂಬಲದಿನ್ನಿ, ಅರ್.ವಿ ಶೇಷಾದ್ರಿ ಗವಾಯಿ, ಸೋಮನಾಥ ಮರಡೂರ ಚಂದ್ರಶೇಖರ್ ಸ್ವಾಮಿ ಪುರಾಣೀಕ ಮಠ ಮುಂತಾದವರು ಪ್ರಮುಖರು.
ಅಂಧಗಾಯಕ ವಾಧಕ ಡಾ|| ಪುಟ್ಟರಾಜಕವಿ ಗವಾಯಿಗಳು ಪುಣ್ಯಾಶ್ರಮ ಸೇರಿದಾಗ ತಮಗೆ ಸರಿಯಾದ ಉತ್ತರಾಧಿಕಾರಿಯಾಗುನೆಂಬ ನಂಬಿಕೆ ಬಂದು ಆತನಿಗೆ ಆಶ್ರಮದ ಸಕಲ ಉಸ್ತುವಾರಿಯನ್ನು ವಹಿಸಿದರು ೧೯೪೫ರಲ್ಲಿ ಪಂಚಾಕ್ಷರಿ ಗವಾಯಿಗಳು ಶಿವೈಕ್ಯರಾದ ನಂತರ ಪುಟ್ಟರಾಜ ಗವಾಯಿಗಳೇ ಅದರ ಅಧಿಕಾರ ವಹಿಸಿಕೊಂಡರು. ಆಶ್ರಮ ಇದ್ದ ಸ್ಥಳದಲ್ಲಿ ಪಂಚಾಕ್ಷರಿ ಗವಾಯಿಗಳ ಸಮಾಧಿ ಮಾಡಿ ಪ್ರಸ್ತುತ ಇರುವ ಕಟ್ಟಡದಲ್ಲಿ ಆಶ್ರಮ ಸ್ಥಾಪಿತವಾಯಿತು. ಪುಟ್ಟರಾಜ ಗವಾಯಿಗಳ ಸತತ ಪರಿಶ್ರಮದ ಫಲವಾಗಿ ಇಂದು ಇದು ಒಂದು ಬೃಹತ್ ಸಂಸ್ಥೆಯಾಗಿ ಬೆಳೆದು ಅಲ್ಲಿನ ಶಿಷ್ಯ ಪರಂಪರೆಯಿಂದ ಭಾರತಾದ್ಯಂತ ಅನೇಕ ಶಾಖೆಗಳನ್ನು ಹೊಂದಿದ, ಆನೇಕ ಶೈಕ್ಷಣಿಕ ಅಂಗ ಸಂಸ್ಥೆಗಳನ್ನು ಹೊಂದಿದೆ.
ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಅಂಧ ವಸತಿಗೃಹ ಪಿ.ಪಿ.ಜಿ. ವಸತಿ ಬೈಲ್ ಶಾಲೆ, ಸಂಸ್ಕೃತ ಪಾಠಶಾಲೆ, ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠಶಾಲೆ, ಪಿ.ಪಿ.ಜಿ. ಕಲಾ ಮಹಾವಿದ್ಯಾಲಯ, ಸಂಗೀತ ಮಹಾವಿದ್ಯಾಲಯ ಮುಂತಾದ ಸಂಸ್ಥೆಗಳು ಗದಗಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಶ್ರೀವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಅಮೇರಿಕದ ರೋಟರಿ ಸಂಸ್ಥೆಯ ನೆರವಿನಿಂದ ೨೫ ಲಕ್ಷರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ಗೃಹವೊಂದನ್ನು ಅಂಧ ಮಕ್ಕಳಿಗಾಗಿಯೇ ನಿರ್ಮಿಸಲಾಗಿದೆ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತಮ್ಮ ೮೭ರ ಹರೆಯದಲ್ಲಿಯೂ ಸನ್ಯಾಸ ಧರ್ಮವನ್ನು ಪರಿಗ್ರಹಿಸಿ ಆಹರ್ನಿಶಿ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಈ ಸಂಗೀತ ಮಹಾವಿದ್ಯಾಲಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಸಂಸ್ಥೆಯಾಗಿದೆ.