ತಾಯಿ ಮತ್ತು ಹಿರಯರು
ಭಾಗವತ : ಬೆಳಕು ಹರಿದವು ಸೇರಿ ಹಿರಿಯರು
ಸರ್ವದೇವರ ಪಾದ ಪೂಜಿಸಿ
ಸೀಳಿದರು ಸುಕುಮಾರನನು ಹೂಳಿದರು ಹೂವಿನಲಿ |
ತೆರೆದು ನೋಡಲು ಅರರೆ ಏನಿದು
ಉರಿವ ಸೂರ್ಯನ ಥರದ ಹೆಡೆಮಣಿ
ಮೊರದಗಲ ಹೆಡೆಯಿಂದಲೊಪ್ಪುವ ಸರ್ಪ ಮಿಂಚಿರಲು ||
ಸರಿ ಫಡಾ ಎನುತೆಲ್ಲ ಚದರುತ
ಹೊಡೆಯೋ ಬಡಿಯೆಂದೆರಗಿ ಬಂದರು
ಎದುರು ನಿಲ್ಲದೆ ಕಾಡಿನಲಿ ಕಣ್ಮರೆಗೆ ನುಸುಳಿತಲಾ
ಚಿಂತೆಯಲಿ ಮತ್ತೊಂದು ಮಡಕೆಯ–
ನೆತ್ತಿ ತೆರೆದರು ಶಿವಗೆ ವಂದಿಸಿ
ಉತ್ತಮೋತ್ತಮ ರಾಜಕುವರನು ನಗುತ ಹೊರಬಂದ ||
ರಾಜಕುಮಾರ : ದೀಪದ ಮೊಲ್ಲೆ ಎಲ್ಲಿ?
ತಾಯಿ : ಏನಿದು ಭ್ರಾಂತಿ ಮಗನೆ? ನಿನ್ನ ಹುಡುಗು ಬುದ್ಧಿಯ ದುಡುಕು ಮಾತು ಕೇಳಿ ಮಾಡಬಾರದ ಕೆಲಸಗಳನ್ನೆಲ್ಲಾ ಮಾಡಿಯಾಯಿತು. ಇದೆಲ್ಲವೂ ವಂಶದ ಪ್ರಾರಬ್ಧವಲ್ಲದೆ ಮತ್ತೇನು? ಕುಲದೇವರ ಆಶೀರ್ವಾದದಿಂದ ನೀನಾದರೂ ಮರುಜನ್ಮ ಪಡೆದು ಬಂದೆಯಲ್ಲ. ಅದೇ ಸಾಕು.
ರಾಜಕುಮಾರ : ಯಾಕೆ? ಇನ್ನೊಂದು ಮಡಕೆಯಿಂದ ದೀಪದ ಮೊಲ್ಲೆ ಬರಲೇ ಇಲ್ಲವೆ?
ಹಿರಿಯ ೧ : ಬಂದದ್ದು ಅಕರಾಳ ವಿಕರಾಳ ಭೂತ !
ಹಿರಿಯ ೨ : ಕೆಟ್ಟ ಹುಳು !
ಹಿರಿಯ ೩ : ಪಿಶಾಚಿ!
ರಾಜಕುಮಾರ : ಮೋಸವಾಯ್ತು….
ತಾಯಿ : ಯಾರಿಗೆ? ನಮಗೆ. ದೈವ ಪರೀಕ್ಷೆ ಮಾಡಿದ್ದಕ್ಕೆ ಸಾವಿರ ಬಲಿಯ ತಪ್ಪು ದಂಡ ಕೊಟ್ಟು, ಬೇರೆ ಮದುವೆಯ ವ್ಯವಸ್ಥೆಯ ಮಾಡೋಣವಾಗಲಿ ಸಮಸ್ತರೆ.
Leave A Comment