ಶ್ರೀ ಗುರು ವರವಿರೂಪಾಕ್ಷನ ಪಾದವ
ನೀಗಲೆ ಕರದಿಂದ ಪಿಡಿವುತಲಿ ಶಿರ
ಬಾಗಿ ಹರುಷದಿಂದ ನಮಿಸುತಲಿ ಒಳ್ಳೆ
ಯೋಗಿಹೃದಯವಾಸನೆಂಬುತಲಿ ಬಿಡ
ದೀಗಲೆ ಸ್ತುತಿಸುವೆ ಬೇಗನೆ ಬಂದೆನ್ನ ಜಿ
ವ್ಹಾಗ್ರದೊಳ್ ನಿಂತು ಸಾಗಿಸೀ ಕೃತಿಯ ॥
ಮುಂದಾಗಿ ಶ್ರೀಗಣಪತಿಪಾದ ಬಲಗೊಂಡು
ಚೆಂದದಿ ಪೇಳುವೆ ಜಗದೊಳಗೆ ಇದ
ರ್ಹೊಂದಿಕಿ ತಿಳಿವುದು ಮನದೊಳಗೆ ಬಾಳ
ಸಂದೇಹ ಬಾರದಂತೆ ಜನದೊಳಗೆ ಮುದ
ದಿಂದಲಿ ಚಂದ್ರನ ಸುತೆಯಂತಪೂರ್ವಳ
ಅಂದವ ಪೇಳ್ವೆ ಮತಿಗೆ ತಿಳಿದಂತೆ ॥
ಭೂಮಿಯೊಳಗೆ ಸ್ಮರರಾಣಿಯಂತಿರುವ
ಕಾಮಿನೀ ಶೃಂಗಾರ ಏನು ಪೇಳಲಿ ಬಾಳ
ಪ್ರೇಮದಿ ಪೇಳುವೆ ನಯದಿಂದಲಿ ನೀವು
ತಾಮಸಗುಣಗಳ ಅಳಿವುತಲಿ ಪರಿ
ಣಾಮದಿ ಕೇಳ್ವುದು ಭಾಮಿನಿ ಮುಖಪದ್ಮ
ಸೋಮನಂದದಿ ಕಣ್ಗೆಸೆದು ರಾಜಿಪುದು ॥
ಎಷ್ಟಂತ ಹೇಳಲಿ ಪಟ್ಟ ಪಟ್ಟಾವಳಿ
ಉಟ್ಟಾಳು ಚಂದ್ರಕಾಳಿ ಸೀರಿಯ ಆಗ
ತೊಟ್ಟಾಳು ಕುಪ್ಪಸ ಜರತಾರಿಯ ಫಣಿ
ಗಿಟ್ಟಾಳು ಕುಂಕುಮದ ರೇಖೆಯ ಮತ್ತೆ
ಕಟ್ಟಾಣಿ ಕರಿಮಣಿ ಮುತ್ತಿನ ಸರಗಿಯ
ಒಟ್ಟಾಗಿ ಕೊರಳೊಳಗಿಟ್ಟಾಳ ಭರತಿ ॥
ವಾರಿಜಮುಖಿಯಳು ಇಟ್ಟಂಥ ವಸ್ತ
ತೋರ ಕಂಕಣ ಕೈಯ ಕಟ್ಟುಗು ನಾರಿ
ಗೀರ ಬಂಗಾರ ಬಳಿ ಇಟ್ಟಿಹಳು ಮತ್ತೆ
ಮೀರಿ ಮೇಲೆಸೆವಂಥ ಕಡಗಗಳು ಇಂಥ
ನಾರಿಯ ವರ್ಣಿಸಲಾರದೆ ಕವಿ ತಾನು
ನೀರಜೋದ್ಭವಶಿರಕರ ಪಾಲಿಸೆಂದ ॥
ಬುಗುಡಿ ಬಾವಲಿ ಗಿಳಿಗಳ ಹಚ್ಚಿದಲ್ಲಿ
ಮಿಗಿಲಾಗಿ ಇಟ್ಟಿಹ ಜಮಿಕಿಗಳು ಮತ್ತೆ
ಬಿಗಿಸೀದ ಸುತ್ತಲಿನ ಮುತ್ತುಗಳು ಕಡು
ಅಗಲದಂತಿಟ್ಟಹ ವಸ್ತುಗಳು ಬಾಳ
ಬಗಿಬಗಿಯಿಂದಲಿ ಸುಗುಣಿ ತಾ ಬರುವಂಥ
ಸೊಗಸನು ಎನ್ನಿಂದ ಹೊಗಳಲಿಕ್ಕಳವೆ ॥
ಗೊತ್ತಿನಿಂದ್ಹೇಳುವೆ ಮತ್ತೆ ಕೇಳರಿ ನೀವು
ನಿತ್ತಿಯೊಳಗಿಟ್ಟಂಥ ವಸ್ತವನು ಬಿಡ
ದೆತ್ತಿ ಹೇಳುವೆ ಸೂರ್ಯಪಾನವನು ಅದ
ರೊತ್ತಿಲಿಟ್ಟ ಹೂವ ತಿರುಪವನು ಕಂಡು
ಮತ್ತೆ ಸಂತೋಷದಿ ಕ್ಯಾದಿಗಿಗಳನಿಟ್ಟು
ಚಿತ್ತಜ ಪಿಡಿದಿಹ ಕತ್ತಿಯಂತಿಹಳೂ ॥
ಕಾಲ ಕಡಗ ರುಳಿ ಗೆಜ್ಜೆ ಪೈಜಣ ಲುಲ್ಲು
ಮೇಲಾದ ಪಾಡಗವಿಟ್ಟಿಹಳು ನಾರಿ
ಕಾಲುಂಗ್ರ ಒಲಿದಿಟ್ಟ ಪಿಲ್ಲಿಗಳು ಮೇಲೆ
ಪೊಲ ಮೆಂಟಕಿ ಮಿಂಚು ಮೀನಗಳು ಬಾಲೆ
ಎಲ್ಲ ವಸ್ತವ ತಾ ಮೆಲ್ಲಡಿಯೊಳಗಿಟ್ಟು
ನಿಲ್ಲದೆ ಬರುತಿರೆ ನಲ್ಲೆ ತಾ ಮುದದಿ ॥
ಸತ್ಯಭಾಮೆಯಂತೆ ಮತ್ತೆ ಮೂಗಿನೊಳಿಹ
ಮುತ್ತಿನ ಮುಕುರದ ಭರ್ತಿಯಲಿ ಕೊಳ್ಗೆ
ಮತ್ತೆ ಕಟ್ಟಿಹ ಗುದಾಳಿಯಲಿ ಅದ
ರೊತ್ತಿಲಿರುವ ಗೆಜ್ಜಿ ಟಕ್ಕಿಯಲಿ ಬಿಡ
ದೆತ್ತಲಿ ಗೊತ್ತಲಿ ಸುತ್ತಲಿ ಗೆಳತೇರ
ಮೊತ್ತದಿ ಜೆತ್ತಿಲಿ ಬಂದಾಳ್ಬಜಾರಕೆ ॥
ಮಡಿದಿಯು ತಾ ಬಲು ಬಡಿವಾರದಲಿ ಒಳ್ಳೆ
ನಡುವಿಗೆ ಡಾಬವನಿಟ್ಟಿಹಳು ಮತ್ತೆ
ಬಿಡದೆ ಹೇಳುವೆ ಕೇಳು ಬೆರಳಿನೊಳು ಹರ
ಳ್ಜಡಿತವಾಗಿರುವಂಥ ಉಂಗ್ರಗಳು ಇಂಥ
ಸೆಡಗರದಿಂ ಪ್ಯಾಟಿ ನಡುಮಧ್ಯದೊಳು ನಾರಿ
ಒಡನೆ ತಾ ಬರುವಂಥ ಖಡಕೇಟು ಪೇಳ್ವೆ ॥
ಸೊಕ್ಕಿದಾನೆಯ ಪರಿಯಂದದಿ ಸುದತಿಯು
ಗಕ್ಕನೆ ಓಣಿಯೋಳ್ಬರುತಿರಲು ಜನ
ಕಕ್ಕುಲತೆಯಲಿ ಬೆನ್ಹತ್ತಿರಲು ತಮ್ಮ
ರೊಕ್ಕದ ಪರವೆಯ ಮರೆತಿರಲು ನಾರಿ
ಕಕ್ಕಸ ಕುಚವನು ಚಕ್ರವಕ್ಕಿಯು ಕಂಡು
ಧಿಕ್ಕಾರವಾಗುತ ಹೊಕ್ಕವಾ ಕೊಳವ ॥
ನುಡಿಗೇಳಿ ಗಿಳಿಗಳು ಗಿಡಗಳ ಸೇರ್ಯಾವು
ಕುಡಿಹುಬ್ಬು ಕಾಣುತ ಮನ್ಮಥನು ಕೈಯೊ
ಳ್ಪಿಡಿದದನು ಬೆನ್ನೋಳಿರಿಸಿದನು ಆಕಿ
ಅಡಿಗಾವಿ ನಾಚಿ ಹರಿತು ಮಡನ ಬಲು
ಬಡನಡುವನು ಕಂಡು ನಾಚುತ ಸಿಂಹವು
ಬಿಡದಿರಲಾರದೆ ಅಡವಿಯ ಸೇರಿತು ॥
ಉಡುರಾಜಮುಖಿಯಳ ಧ್ವಜಿಗೇಳಿ ಕೋಗಿಲೆ
ಬಿಡದೆ ಹಾರಿದುದು ವನಂತರಕೆ ಸಖಿ
ಮುಡಿ ಕಂಡು ನವಿಲು ಕಾನಾಂತರಕೆ ಬಾಲೆ
ಜಡಿಗೆ ನಾಚುತಲಿ ಸರ್ಪನು ಹುತ್ತಕೆ ಇಂಥ
ಕಡು ಚೆಲ್ವಮಡದಿಯ ತೊಡಿತೋಳ ಕಾಣುತ
ಬಿಡದೆ ಬಾಡುತ ಬಾಳಿವನ ಶಿರಬಾಗೆ ॥
ದಂತವ ಕಂಡು ದಾಳಿಂಬರ ನಾಚುತ
ಚಿಂತೆಯಿಂದಲಿ ಬಾಯ ಬಿಟ್ಟಿಹುದು ಮುಖ
ಕಾಂತಿಗೆ ಚಂದ್ರ ಕಪ್ಪಾಗಿಹುದು ಭೃಂಗ
ಕುಂತಳ ಕಂಡು ಕಮಲದೊಳಿಹುದು ಇಂಥ
ಪಂಥದ ನಾರಿಯ ಪ್ರಾಂತದೊಳಗೆ ಕಾಣೆ
ನೆಂತೆನುತಲಿ ಕುಕ್ಕುಟನು ಬೇಗ ಕೂಗೆ ॥
ವಲ್ಲಭೆ ನೋಟಕ್ಕೆ ಹುಲ್ಲೆಯು ನಾಚುತ
ನಿಲ್ಲದೆ ಸೇರೀತಡವಿಯೊಳು ಜಾಜಿ
ಮಲ್ಲಿಗಿ ಮುಡಿಯೊಳಗಿಟ್ಟಿಹಳು ಕೊಳ್ಗೆ
ನಿಲ್ಲದೆ ಶಂಖ ಸಮುದ್ರದೊಳು ಬಿದ್ದು
ನಲ್ಲೆಯ ಗಲ್ಲಕ್ಕೆ ನಾಚುತ ಕನ್ನಡಿ
ನಿಲ್ಲದೆ ಹೋಗಿ ತಾ ಮರದೊಳು ಸೇರೆ ॥
ರಾಜವದನೆ ಬಲು ಮೋಜಿನಿಂದಲಿ ಪ್ಯಾಟಿ
ಬಾಜಾರದೊಳು ತಾನು ಬರುತಿರಲು ಒಳ್ಳೆ
ಮೋಜುಗಾರರು ಬೆರಗಾಗಿರಲು ಮಣಿ
ಸೂಜಿ ಮಾರುವರು ಕನ್ನಡಿ ತೋರಲು ಇಂಥ
ಸೋಜಿಗವಾದಂಥ ಸುಗುಣಿಯ ಕಾಣುತ
ಈ ಜಗದೊಳಗೆಲ್ಲ ವಿಪರೀತವೆನುತ ॥
ಜಡಜಲೋಚನೆ ಬಲು ಸಡಗರದಿ ಪ್ಯಾಟಿ
ನಡುಮಧ್ಯದಲಿ ಬರುತಿರಲು ಕಂಡು ಬೇಗ
ಕಡುಜಾಣರುಗಳ ಬಾಯಿ ತವಡುಗೊಂಡು ಈಕಿ
ಬೆಡಗ ಕಾಣುತ ಬಾಯ ತೆರೆದುಕೊಂಡು ಇಂಥ
ಕಡುಜವ್ವನಿಯಳ ಕಾಣುತ ಕಂಚಗಾರ
ತಡೆಯದೆ ಭಾಂಡೇದ ಗೊಡವಿಲೆ ಪೋದ ॥
ಪತ್ತಾರ ತಂದು ಮುತ್ತಿನ ವಸ್ತಗಳ
ಒತ್ತಿಯನಿಟ್ಟನು ಧನಿಕರಲಿ ಅಯ್ಯ
ತತ್ತರಿಸುತ ತನ್ನ ಮನಸಿನಲಿ ಬೆನ್ನ
ಹತ್ತಿಹ ಗೌಡ ತಾ ಪ್ರೀತಿಯಲಿ ಅಯ್ಯ
ಮತ್ತೆಲ್ಲಿ ಕಾಣೆನೆನುತಲಿ ಬಣಜೀಗ
ಎತ್ತ ಹೇರುದ ಬಿಟ್ಟು ಮತ್ತೋಡಿ ಬಂದ ॥
ಅಷ್ಟರೊಳಗೆ ಮತ್ತೆ ಹೊಟ್ಟೆಯ ಚೀಲವ
ಕಟ್ಟದ ಬಂದನು ಚಿನಿವಾರನು ಕೈಯ
ಬಿಟ್ಟು ಬಂದನು ಆಗ ಬಳಿಗಾರನು ಬೇಗ
ತಟ್ಟನೆದ್ದೋಡಿದ ಎಲಿಗಾರನು ನಾಯಿ
ನ್ನೆಷ್ಟಂತ ಹೇಳಲಿ ಸೆಟ್ಟಿಸಾವ್ಕಾರರು
ಇಟ್ಟ ಲೆಕ್ಕದ ವೋಹಿ ಬಿಟ್ಟೋಡಿ ಬರಲು ॥
ಬಾಜಾರವಿಡಿದು ಆ ರಾಜವದನೆ ಬಲು
ಮೋಜಿನಿಂದಲಿ ಆಕಿ ಬರುವದನು ಕಂಡು
ಮೋಜುಗಾರನು ಒಬ್ಬ ತರುಬಿದನು ನಿಲ್ಲೆ
ಏ ಜಾಣಿ ಎಲ್ಲಿ ಹೋಗುತಿ ಎಂದನು ನಿನ್ನ
ಮೋಜಿಗೆ ಸಮನಿನ್ನು ಈ ಜಗದೊಳು ಕಾಣೆ
ಸೋಜಿಗವಾದೀತು ಸುಗುಣಿ ಕೇಳೆಂದ ॥
ನಿನ್ನ ನಡಿಗಿ ಮದದಾನೆಯ ಮರಿಯಂತೆ
ನಿನ್ನ ತೋಳು ತಾವರೆಯ ನಾಳದಂತೆ ನಾರಿ
ನಿನ್ನಧರವು ತೊಂಡಿ ಹಣ್ಣಿನಂತೆ ಸಖಿ
ನಿನ್ನ ನಾಭಿ ಬಾಳಿಸುಳಿಗಳಂತೆ ಕೇಳು
ನಿನ್ನ ನಾಸಿಕವು ಸಂಪಿಗಿಯ ಪೋಲ್ವುದು ಆಹ
ಕನ್ನೆ ಶಿರೋಮಣಿ ಎನ್ನುತ ನುಡಿದಾ ॥
ಹುಡುಗತನದ ಬುದ್ಧಿ ಪರಮಡದೇರ
ನಡು ಪ್ಯಾಟಿಯೊಳು ಬಂದು ತರುಬುವರೆ ಇಂಥ
ಬೆಡಗಿನ ಬುದ್ಧಿಯ ಕಲಿಯುವರೆ ಎನ್ನ
ಒಡಹುಟ್ಟಿದಣ್ಣಗಳ್ ಕೇಳಿದರೆ ನಿನ್ನ
ಕಡಿದು ಹಾಕುವರೆನ್ನ ಗೊಡವೆಯ ಬಿಡು ನಿನ್ನ
ಮಡದಿಯೊಳಗೆ ಸುಖಬಡು ಹೋಗೊ ಮೂಢಾ ॥
ಒಡಹುಟ್ಟಿದಣ್ಣನ ಗೊಡವಿಯ ಬಿಡು ನಿನ್ನ
ಬೆಡಗಿಗೆ ನಾ ಮರುಳಾದೆನಲ್ಲೆ ನನ್ನ
ಮಡದಿಯ ಸಾಕ್ಷಿಯ ಹೇಳೋದಲ್ಲೆ ಮತ್ತೆ
ಕೊಡುವೆನು ನೀನು ಬೇಡಿದ್ದ ನಲ್ಲೆ ಇಂಥ
ಸೆಡವಿನ ಮಾತನು ಆಡಿದಾಕ್ಷಣ ನಿನ್ನ
ಕಡೆಗಿನ್ನು ಬಿಟ್ಟರೆ ಹುಡುಗ ನಾನಲ್ಲಾ ॥
ದುಷ್ಟತನದಿ ಬಂದು ಎಟ್ಟಿ ಮಾತುಗಳ ನೀ
ಇಷ್ಟು ಪರಿಯಲಿಂದ ಆಡುವರೆ ನಿನ್ನ
ಗೆಷ್ಟು ಹೇಳಲಿ ಎನ್ನ ಪತಿ ಕಂಡರೆ ನಿನ್ನ
ರಟ್ಟಿಯೆರಡ ಮರಕೇರ್ಗಟ್ಟರೆ ಮತ್ತೆ
ಪಟ್ಟು ಗುಡುಮ ನಿನ್ನ ಹೊಟ್ಟಿ ಹೊರೆವುದ
ಬಿಟ್ಟು ಬರುವರೇನೊ ಭ್ರಷ್ಟ ಮನುಜನೆ ॥
ಪುರುಷನಂಜಿಕಿಯ ಯಾರಿಗ್ಹೇಳುತಿ ನಿನ್ನ
ಸ್ಥಿರ ಮನಸಿನ ಬಿಂಕ ಬಿಡಬಾರದೆ ಬೇಗ
ಹುರಷದಿಂದ್ಹೆಗಲೊಳ್ಕೈಯ ಇಡಬಾರದೆ ಈಗ
ಸರಸದಿ ಚುಂಬನ ಕೊಡಬಾರದೆ ಎಂದು
ಪರಿಪರಿಯಿಂದಲಿ ಸುಗುಣ ತಾ ಪೇಳಲು
ಪರಮ ಸಂತೋಷದಿ ಹೇಳಿದಳು ಕಥೆಯ ॥
ಸರಸದಿಂ ರಾಮನ ಚಿರಂಜೀವಿ ಲಕ್ಷ್ಮಣ
ವರ ಸೀತೆ ಸಹಿತದಿಂದ ವನದೊಳಗೆ ಇರು
ತಿರಲು ರಾವಣ ಬಂದು ರಥದೊಳಗೆ ಸೀತೆ
ಪುರಕೆ ಕೊಂಡೊಯಿದಾನು ಹಿತದೊಳಗೆ ಅತಿ
ಭರದಿಂದೆ ರಾಮನು ರಾವಣನ ಕೊಂದ
ಪರಿಯನು ಅರಿಯೇನೊ ಮರಳ ಮಾನವನೆ ॥
ಈ ಕ್ಷಿತಿಯೊಳು ಇಂಥ ವಿಪರೀತ ಕಥೆಯ
ಸಾಕ್ಷಿಯ ನೀನು ಯಾರಿಗೆ ಹೇಳುವೆ ಧರೆ
ರಕ್ಷಿಪ ಕೃಷ್ಣನು ಸುಖದೊಳಿಲ್ಲವೆ ಇಂಥ
ಮೋಕ್ಷದ ಹಾದಿಯ ಬಿಡು ನಿನ್ನ ಹವಣೆಯ
ನೀಕ್ಷಿಸುವೆನು ಕಮಲಾಕ್ಷಿ ಕೇಳೆಂದನು ॥
ಕನ್ನೆಯಳಾದಂಥ ಚನ್ನೆ ದ್ರೌಪದಿಯನು
ಮುನ್ನ ಕೀಚಕ ಹಿಡಿದೆಳೆಯಲಾಗಿ ಆಕೆ
ಸೊನ್ನಿಯಿಂ ಭೀಮನೊಳ್ ಪೇಳಲಾಗಿ ಅವ
ಉನ್ನತ್ತ ಕೋಪವ ತಾಳಲಾಗಿ ಬೇಗ
ಅನ್ಯೋನ್ಯದಿಂ ಪೋಗಿ ಕೀಚಕನನು ಕೊಂದ
ಇನ್ನಾರು ಅರಿಯರೊ ಕುನ್ನಿ ಮನುಜನೆ ॥
ಯಾರ್ಗೊಡವೆ ಯಾತಕೆ ಮಾರ್ಗೊಡುವೆನು ಮನ
ಸೂರ್ಗೊಡು ಬೇಗ ನೀ ಪ್ರೀತಿಯಲಿ ದ್ರವ್ಯ
ತೋರ್ಗೊಡುವೆನು ನಿನಗೆ ಹರುಷದಲಿ ನಿನ್ನ
ಜಾರ್ಗುಣವನು ಕಂಡು ಮರುಳಿನಲಿ ಬಂದು
ಕೂರ್ಗೊಡೆ ಎನ್ನಂಥ ವಾಗಿಯ ಪುರುಷನ
ದೋರ್ಗಣ್ಣಿಲಿ ನೋಡ್ವರೆ ನಿರ್ಗುಣಮಣಿಯೆ ॥
ಮೂಳ್ಮನುಜನೆ ಕೇಳು ಜಾಳ್ಮಾತಿನವರನು
ಬಾಳ್ಮಂದಿ ಬಲ್ಲೆ ನಿನ್ನಂಥವರ ಬಾಳ
ಸುಳ್ಮಾತ ಹೇಳುವಂಥವರ ದ್ರವ್ಯ
ಹಾಳ್ಮಾಡಿ ಸನ್ಯಾಸ್ಯಾಗುವಂಥವರ ಇಂಥ
ಪೊಳ್ಮಾತು ನಮ್ಮಲ್ಲಿ ಎಳ್ಮಾತ್ರ ತರವಲ್ಲ
ಸುಳ್ಮಾತ ಬಿಡು ಎಂದು ಗೀಳ್ಮಾಡಿ ನುಡಿಯೆ ॥
ಇಂತು ಪರಿಯಲಿಂದೆ ಕಾಂತೆ ನುಡಿವರೇನೆ
ಭ್ರಾಂತಿ ಎನಗೆ ಹತ್ತಿ ನಿಂತಿಹೆನೆ ನಿನ್ನ
ತಂತ್ರಕ್ಕೆ ನಾ ಮರುಳಾಗಿಹೆನೆ ಅತಿ
ಚಿಂತೆ ಮಾಡ್ವದು ಕರುಣಿಲ್ಲವೇನೆ ಗುಣ
ವಂತೆ ಬಾರೆಲೆ ರತ್ನದ್ಹಾರ ಕೊಡುವೆಯೆಂದು
ಕಾಂತೆಗೆ ಸ್ಮರರೂಪನುಸುರಲಾಕ್ಷಣಕೆ ॥
ನಲ್ಲನಾಡಿದ ನುಡಿ ಕೇಳುತ್ತ ಸಖಿಯಳು
ನಿಲ್ಲದೆ ತಾ ಮುಗುಳ್ನಗೆಯಿಂದಲಿ ಆಗ
ಚೆಲ್ವಗಾಲಿಂಗನ ಮಾಡುತಲಿ ಬಾಳ
ಉಲ್ಹಾಸದಿಂದೆ ಕೈ ಹಿಡಿವುತಲಿ ಮತ್ತೆ
ಸೊಲ್ಲಿನಿಂದಲಿ ತಾನು ಪುರುಷನ ಕರಕೊಂಡು
ವಲ್ಲಭೆ ಬಂದಾಳು ಮಲ್ಲಿಗಿಗಂಧೀ ॥
ಮನಸಿಜ ರೂಪನ ಮನಸಿಗೆ ಕರೆದು ತಂದು
ವಿನಯದಿ ಗಂಧೆಣ್ಣೆ ಪೂಸಿದಳು ಮತ್ತೆ
ಮನದಣಿವಂತೆ ನೀರ್ಹಣಿಸಿದಳು ಅಲ್ಲಿಂ-
ದನುನಯದಿಂದಲಿ ಇಳಿಸಿದಳು ಅತಿ
ಉನ್ನತವಾದಂಥ ರನ್ನದ ಮಣಿಯೊಳು
ಚೆನ್ನಿಗ ಪುರುಷನು ಚೆನ್ನಾಗಿ ಕುಳಿತ ॥
ಕೆನೆವಾಲು ಸಕ್ಕರೆ ಘೃತಗಳು ಇನಿತೆಲ್ಲ
ಘನ ಹರಿವಾಣದೊಳಿರಿಸಿದಳು ಮೇಲೆ
ಗೊನೆಯ ಬಾಳಿಯ ಹಣ್ಣ ತಿನಿಸಿದಳು ಬಾಳ
ಮನ ಹರುಷದಲಿ ಉಪಚರಿಸಿದಳು ಬೇಗ
ಇನಿಯಗೆ ಕರ್ಪುರ ವಿಳ್ಯೇವ ಕೊಟ್ಟಂತೆ
ಮನುಮಥನಾಟಕ್ಕೆ ಅನುವಿನಿಂ ನಡೆಯೆ ॥
ಕೋಲ್ಮಿಂಚಿನಂತೆ ಕಣ್ತಿರುವುವ ಸುದತೆಯು
ಬಲ್ಮುಗುಳ್ನಗೆಗಳ ನಗುವುತಲಿ ಮತ್ತೆ
ಮೇಲ್ಮಂದಿರಕೆ ತಾ ನಡೆವುತಲಿ ಸುವಿ-
ಶಾಲ್ಮಂಚದಲ್ಲಿ ಕುಳ್ಳಿರಿಸುತಲಿ ಬೇಗ
ಸೋಲ್ಮುಡಿ ಸಖಿ ಬಾಳ ಜಾಲ್ಮಾತುಗಳನಾಡಿ
ಲೋಲ್ಮಾರನಾಟ ಕುಶಾಲ್ಮಾಡುವದಕೆ ॥
ಸ್ಮರರೂಪ ಪರುಷಗೆ ಇರದೆ ಮನ್ಮಥನಾಗ
ಗುರಿ ಮಾಡಿ ಬಾಣದಿಂದ್ಹೊಡಿಯಲಾಗ ಚಮ
ತ್ಕರದಿ ಕುಚಗಳನ್ನು ಪಿಡಿಯಲಾಗ ಬಾಳ
ಭರದಿ ಚೆಂದುಟಿಯನ್ನು ಕಡಿಯಲಾಗ ಮತ್ತೆ
ಪರಿಪರಿ ಬಂಧದಿಂ ಉಪರತಿ ಸಮರತಿ
ಸುರಿಕವೆಂಬುವ ಶರಧಿಯೊಳ್ಮುಳುಗಿರಲು ॥
ಹರುಷದಿ ಕೇಳಿರಿ ಸ್ಮರಶರವದನೆಯು
ಪುರುಷನ ಮನೆಗತ್ತ ಕಳುಹಿದಳು ಮೇಲೆ
ಗುರುಪಯೋಧರಿಯು ಮಾಡಿದ ಕಥೆಗಳ ಒಳ್ಳೆ
ಧರೆಯೊಳಗಧಿಕ ಉಜ್ಜಯನಿ ಪುರದೊಳು ಅಲ್ಲಿ
ಮೆರೆವ ಮರುಳಸಿದ್ಧೇಶನ ವರದಿ ಪೇಳ್ದೆನು
ಹರುಷದಿ ಪುರುಷರು ಹರಸಿ ಮಾಡುವದು. ॥
* * *
Leave A Comment