ಏಳುತಲೇ ಎದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೋಳಾ-ಭೂಮಿತಾಯ
ಎದ್ದೊಂದು ಗಳಿಗೆ ನೆನೆದೇನು
ಹೊತ್ತನಂತೆ ಎದ್ದು ಯಾರ್ಯಾರ ನೆನೆದೇನು
ಕಲ್ಲು ಕಾವೇರಿ ಕಪಿನೀಯ-ನೆನೆದಾರೆ
ಮೇಲಿದ್ದ ಪಾಪ ಪರಿಹಾರ
ಏಳುವಾಗ ನೆನೆವೇನು ಭಾಳಲೋಚನದವನ
ಜೋಳೀಗೆ ಹೊನ್ನ ಮಳೆಗರೆದ-ಕೈಲಾಸ್ದ
ದೇವ ಮಲ್ಲಯನ ನೆನವೇನು
ಎಳ್ಳು ಹೊಲದಾಗಿರುವ ದೊಳಹೊಟ್ಟೆ ಬೆನವಣ್ಣ
ಎಳ್ಳೆಲೆ ತುಪ್ಪ ತಿಳಿದುಪ್ಪ-ಸಲಿಸುವೆ
ದೊಳಹೊಟ್ಟೆ ಬೆನವ ಕೊಡು ಮತಿಯ
ಮೊದಲಾಗಿ ನೆನವೇನು ಮದನ ಗೋವಿಂದನ
ಹದಿನೆಂಟು ನಾಮದೊಡೆಯನ-ನೆನೆದಾರೆ
ಹೊತ್ತಿದ್ದ ಪಾಪ ಪರಿಹಾರ
ಏಳುತಲೆ ಶಿವ ಎನ್ನಿ ಬೀಳುತಲೆ ಶಿವ ಎನ್ನಿ
ಯಾಳೆ ಬಂದಾಗ ಶಿವ ಎನ್ನಿ-ಯೋಳ್ಹೆಡೆಯ
ಸರಪ ಬಂದಾಗ ಶಿವ ಎನ್ನಿ
Leave A Comment