ಬಾಣಾಸುರನ ಕಾಳಗ
ಕಂದ
ಶ್ರೀಮಾಕಾಂತಂ ಸದ್ಗುಣ |
ಧಾಮಂ ಸುರವರಪೂಜಿತಾಂಘ್ರಿಸರೋಜಂ ||
ಸೋಮಾರ್ಕಾನಲನೇತ್ರಂ |
ಪ್ರೇಮದೊಳೆನಗೀಗೆ ಮತಿಯನತಿ ಸೌಖ್ಯದೊಳಂ ||೧||
ರಾಗ ಶಂಕರಾಭರಣ ತ್ರಿವುಡೆತಾಳ
ಶ್ರೀಗಣಪ ಗಜವಕ್ತ್ರ ಹರಸುತ | ನಾಗವಾಹನವಂದಿತ ||
ಭೋಗಿ ಭೂಷಣ ಷಣ್ಮುಖಾಗ್ರಜ | ಯೋಗಿಜನಸುಮನಸಕುಜ ||೨||
ತರಣಿ ಕೋಟಿಪ್ರಕಾಶ ಶಶಿಧರ | ಕರುಣವಾರಿಧಿ ಶುಭಕರ ||
ಉರಗವೈರಿಯ ವಾಹನನ ಸಖ | ಪರಮಮಂಗಲದಾಯಕ ||೩||
ಗಿರಿಸುತಾತ್ಮಜ ಶರಣಪೋಷಣ | ದುರಿತಸಂಕುಲನಾಶನ ||
ಸುರುಚಿರಾಲಂಕಾರರಂಜಿತ | ಹರಿತನೂಭವ ಪೂಜಿತ ||೪||
ವಾರ್ಧಕ
ಹರನ ಪದಪದ್ಮಗಳಿಗೆರಗುತಾ ಗಿರಿಜೆ ಸಿರಿ |
ಸರಸ್ವತಿಯರಂಘ್ರಿಗಾನತನಾಗಿ ಅನಿಮಿಷರ |
ನೆರೆ ಭಕ್ತಿಯಿಂ ನಮಿಸುತಿರದೆ ದಿಕ್ಪಾಲರಂ ಧ್ಯಾನಿಸುತೆ ಮನ್ಮನದೊಳು ||
ಪರಮಋಷಿಗಳ್ವ್ಯಾಸ ಶುಕರ ತಾ ನೆನೆವುತಂ |
ಗುರುವಿ ನಡಿದಾವರೆಗೆ ತಲೆವಾಗಿ ದೈನ್ಯದಿಂ |
ಧರೆಯ ಕವಿಜನಸಮೂಹಕೆ ಮಣಿದು ಮಾನಂದದಿಂದುಸಿರ್ವೆನೀ ಕಥೆಯನು ||೫||
ದ್ವಿಪದಿ
ಘನಮಹಿಮ ಶುಕಮುನಿಯ ಪಾದವನು ನುತಿಸಿ |
ಕನಕದಾಸರ ಚರಣಯುಗಳವನು ಸ್ಮರಿಸಿ ||೬||
ಮುದದಿ ಭಾಗವತಾಖ್ಯ ಪೌರಾಣದೊಳಗೆ |
ಪ್ರದ್ಯುಮ್ನ ಬಾಣನಾ ಕರವನ್ನು ಧರೆಗೆ ||೭||
ಇಳುಹಿದಾ ಕಥನವನು ಯಕ್ಷಗಾನದಲಿ |
ನಳಿನಭವಪುರದೆರೆಯ ಹರನ ಕರುಣದಲಿ ||೮||
ಪೇಳುವೆನು ತಿಳಿದಂತೆ ಧರೆಯ ಸಜ್ಜನರು |
ಕೇಳಿ ತಪ್ಪನು ತಿದ್ದಿ ಮೆರಸಿ ಬಲ್ಲವರು ||೯||
ವಚನ
ಈ ಪ್ರಕಾರದಿಂದ ದೇವ ಋಷಿ ಕವಿಗಳಂ ಭಾವಿಸಿ ತತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ –
ರಾಗ ಸೌರಾಷ್ಟ್ರ ತ್ರಿವುಡೆತಾಳ
ಹರಿಕುಲೋದ್ಭವ ವರಪರೀಕ್ಷಿತ | ಧರಣಿಪತಿಗಾ ಶುಕಮುನೀಂದ್ರನು |
ಕರುಣದಿಂ ಭಾಗವತ ಕಥನವ | ನೊರೆವುತಿರಲು ||೧೦||
ಒಂದು ದಿನ ಭೂವರನು ಋಷಿಪಗೆ | ವಂದಿಸುತ ಬೆಸಗೊಂಡ ಬಾಣನ |
ನಂದನೆಯು ಸ್ಮರಸುತಗೆ ಸತಿಯಾ | ದಂದವನ್ನು ||೧೧||
ಪ್ರೇಮದಿಂ ಪೇಳೆನಲು ಮುನಿಪತಿ | ಭೂಮಿಪನ ಭಕ್ತಿಯನು ಕಾಣುತ |
ಕಾಮಜನಕನ ನೆನೆದು ಪೇಳ್ದನು | ತಾ ಮುದದೊಳು ||೧೨||
ರಾಗ ಭೈರವಿ ಝಂಪೆತಾಳ
ಭೂರಮಣ ಲಾಲಿಸೈ ದ್ವಾರಕಾಪಟ್ಟಣದಿ |
ಶ್ರೀರಮಣನಿರ್ದ ಶತಸೂರ್ಯತೇಜದಲಿ ||೧೩||
ವನಜಾಕ್ಷತನುಜ ಸ್ಮರಗನಿರುದ್ಧನೆಂಬ ಸುತ |
ಜನಿಸಿ ಬೆಳೆವುತ್ತಿರ್ದ ಘನಸೊಬಗಿನಿಂದ ||೧೪||
ಇರಲಿತ್ತ ಬಲಿಗಾತ್ಮಜರು ಜನಿಸಿದರು ನೂರ |
ವರು ಶೂರರವರೊಳಗೆ ಪಿರಿಯ ಬಾಣಾಖ್ಯ ||೧೫||
ಹರನ ಮೆಚ್ಚಿಸಿ ಜಗದ ಧೊರೆತನ ಸಹಸ್ರಕರ |
ವರಗಳನು ಪಡೆದು ಘನ ಹರುಷದಿಂ ಬಳಿಕ ||೧೬||
ಭಕ್ತಿಯಿಂ ಶೋಣಿತಾಪಟ್ಟಣದೊಳಾ ಬಾಣ |
ದೈತ್ಯನಿರುತಿರೆ ಕಂಡು ಚಿತ್ತಜಾಂತಕನು ||೧೭||
ದನುಜನರಮನೆಯ ಬಾಗಿಲ ಕಾಯ್ವುತಿರ್ದನಿ |
ನ್ನೆನಿತು ಸುಕೃತಿಯೊ ಖಳನು ಜನಪ ಕೇಳ್ ನೀನು ||೧೮||
ಭಾಮಿನಿ
ಇನ್ನು ಪೇಳುವುದೇನು ದಾನವ |
ನುನ್ನತದ ಗರ್ವವನು ಧರಿಸುತ |
ಲಿನ್ನು ಶಂಕರ ಕಾಯ್ವ ತನ್ನಯ ಮನೆಯ ಬಾಗಿಲನು ||
ಉನ್ನತಿಕೆಯಿಂದಿರುವೆ ತಾನಿಂ |
ದೆನ್ನೊಳಿದಿರಾರೆನುತ ಲೋಕಗ |
ಳನ್ನು ಬಾಧಿಸಿ ಸೆಳೆದುಕೊಂಡನು ಸಕಲ ಸಂಪದವ ||೧೯||
ವಾರ್ಧಕ
ದುರುಳ ಖಳನೀ ಪರಿಯೊಳಿರುತಿರಲ್ಕಾತನಂ |
ಸುರನರೋರಗರು ಬಂದೋಲೈಸುತಿರ್ದರವ |
ನುರುತರೈಶ್ವರ್ಯಮಂ ಬಣ್ಣಿಪರೆ ಪನ್ನಗಾಧಿಪ ಗರಿದು ಆ ಸಮಯದಿ ||
ತರಳೆಯೋರ್ವಳು ಜನಿಸಿದಳ್ ಮಿಸುನಿಬೊಂಬೆಯಂ |
ತಿರದೆ ದಿನದಿನಕೆ ಯೌವನವು ಮೊಳೆದೋರಲುರೆ |
ಹರುಷದಿಂದವಳ ನೊಂದರಮನೆಯೊಳಿಟ್ಟು ಅತಿ ಸಂಭ್ರಮದೊಳಿರುತಿರ್ದನು ||೨೦||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಒಂದು ದಿನ ಬಾಣಾಖ್ಯನೀಶನ | ಚಂದದಿಂದರ್ಚಿಸುವೆ ತಾನೆನು |
ತಂದು ಯೋಚಿಸಿ ಚರರ ಕರೆದಿಂ | ತೆಂದನಾಗ ||೨೧||
ಖಳರು ಕೇಳಿರೊ ಹರನ ಪೂಜೆಗೆ | ಚೆಲುವಿನಿಂ ಸನ್ನಹವ ಮನದೊಳ |
ಗಲಸದೆಯ ನೀವು ಮಾಡಿರೆನೆ ಕೇ | ಳ್ದೊಲವಿನಿಂದ ||೨೨||
ಬಂದು ಪೂಜೆಗೆ ತಕ್ಕ ಸನ್ನಹ | ವಂದದಿಂದಲೆ ರಚಿಸಿ ಮಗುಳೈ |
ತಂದು ಬಿನ್ನೈಸಿದರೊಡೆಯ ತೆರ | ಳೆಂದು ಬೇಗ ||೨೩||
ಕೇಳುತಲೆ ದನುಜೇಂದ್ರ ಹರುಷವ | ತಾಳಿ ಪೂಜಾಗೃಹಕೆ ಬಂದತಿ |
ಲೀಲೆಯಿಂದರ್ಚಿಸಿದನಾಗ ಕ | ಪಾಲಧರನ ||೨೪||
ವಚನ
ಈ ರೀತಿಯಿಂ ಬಾಣಾಖ್ಯನೇಕಭಾವದಿಂ ಪರುಹರನ ಪೂಜಿಸಿ ಮಂಗಳಾರತಿಯನೆತ್ತಿದನದೆಂತೆನೆ –
ರಾಗ ನಾದನಾಮಕ್ರಿಯೆ ಆದಿತಾಳ
ಆರತಿ ಬೆಳಗಿದನು | ಬಾಣನು | ಮಾರಹರಗೆ ತಾನು || ಪ ||
ಮುರಹರಪ್ರಿಯನಿಗೆ | ಈಶಗೆ | ಗಿರಿತನುಜಾಧವಗೆ ||
ಶರಣಾರಕ್ಷಣಗೆ | ಭವಗೆ | ಪರಮಾತ್ಮರೂಪನಿಗೆ ||೨೫||
ವ್ಯಾಳಕುಂಡಲಧರಗೆ | ಬಾಲೇಂದು | ಮೌಳಿಗೆ ಭವಹರಗೆ ||
ಕಾಲಕಾಲಗೆ ಶಿವಗೆ | ಆನತಜನ | ಪಾಲಗೆ ಪುರಹರಗೆ ||೩೬||
ಮನುಮಥನಾಶನಿಗೆ | ಅಂಬರ | ಮಣಿಶತಭಾಸನಿಗೆ ||
ಮುನಿಜನಪೋಷನಿಗೆ | ಸಾಮಜ | ದನುಜಸಂಹಾರನಿಗೆ ||೨೭||
ಭಾಮಿನಿ
ಶಿವನೆ ಪರಮಾನಂದರೂಪನೆ |
ಶಿವನೆ ಪಾರ್ವತಿಧವನೆ ಭರ್ಗನೆ |
ಶಿವ ಚರಿತ್ಯಘಕುಲವಿನಾಶನೆ ವಿಶ್ವಮೂರುತಿಯೆ ||
ಶಿವಶರೀರನೆ ದುರಿತದೂರನೆ |
ಶಿವವಿಭೂಷನೆ ದುರಿತನಾಶನೆ |
ಶಿವಕರನೆ ನೀನೊಲಿದು ಪಾಲಿಸು ಎನಗೆ ಸುಮತಿಯನು ||೨೮||
ರಾಗ ಕಾಂಭೋಜಿ ಝಂಪೆತಾಳ
ಈ ಪರಿಯೊಳಾ ದಾನವೇಂದ್ರ ನುತಿಗೈವುತಿರ |
ಲಾ ಪಾರ್ವತೀಶ ಸಂಭ್ರಮದಿ ||
ತಾಪಸಾದ್ಯರಿಗಗೋಚರನಾದ ಪರಬ್ರಹ್ಮ |
ರೂಪುದೋರಿಯೆ ಮುದದೊಳಾಗ ||೨೯||
ಸಚ್ಚಿದಾನಂದನೆಂದನು ಬಾಣ ಕೇಳ್ ನಿನಗೆ |
ಮೆಚ್ಚಿದೆನು ತವ ಭಕ್ತಿಗಿಂದು ||
ಇಚ್ಛೆಯಾಗಿರುವುದೇನುಂಟು ಪೇಳೆನ್ನೊಡನೆ |
ಉಚ್ಚರಿಸಲೀವೆನಾ ಕ್ಷಣದಿ ||೩೦||
ಎಂದು ಹರ ಪೇಳ್ದಡಾ ನುಡಿ ಕೇಳಿ ಬಾಣಖಳ |
ನೆಂದನಘಹರ ಕೇಳು ನೀನು ||
ಹಿಂದೆ ಸಾಹಸ್ರಹಸ್ತವನಿತ್ತೆ ಮತ್ತೆ ನೀ |
ನಿಂದು ಬಾಗಿಲನು ಕಾಯ್ದಿರುವೆ ||೩೧||
ಇಂತು ನೀ ದಯೆಗೈದ ಮೇಲೆ ನಾ ನಿನ್ನೊಡನೆ |
ಮುಂತೆ ಕೇಳುವುದೇನು ದೇವ ||
ಕಂತುಸಂಹರನೆ ಮಾರಾಂತು ಸಮರಾಂಗಣದಿ |
ನಿಂತು ಕಾದುವರ ತೋರೆಂದ ||೩೨||
ಭಾಮಿನಿ
ವೀರ ಖಳನಿಂತೆನಲು ಕೇಳುತ |
ಮಾರಮಣನುಸಿರಿದನು ನಿನ್ನ ಮ |
ಯೂರಕೇತನ ಮುರಿದು ಭೂಮಿಗೆ ಬಿದ್ದ ದಿವಸದಲಿ ||
ವಾರಿಜಾಕ್ಷನೊಳೈದೆ ಸಮರವು |
ದೋರುವುದು ನಿನಗೆಂದು ಪುರಹರ |
ಭೂರಿ ಸಂತಸದಿಂದ ಲಂತರ್ಧಾನಮಂ ತಳೆದ ||೩೩||
ರಾಗ ಕೇದಾರಗೌಳ ಅಷ್ಟತಾಳ
ಇಂತೆಂದು ಭವನೈದಲಿತ್ತ ಬಾಣಾಖ್ಯನ | ತ್ಯಂತ ಸೌಖ್ಯದೊಳಿರಲು ||
ದಂತಿಗಮನೆ ದೈತ್ಯಸುತೆಯುಷೆ ತಾನಾಗ | ಲಂತರಂಗದಿ ಯೋಚಿಸಿ ||೩೪||
ಕರೆದು ಮಂತ್ರಿಜೆಗೆಂದಳ್ ಸಖಿ ಕೇಳು ಪ್ರಾಯದಿ | ಮೆರೆವ ವೇಳ್ಯಕೆ ಪಿತನು ||
ಪರಿಣಯವನು ಮಾಡಲಿಲ್ಲ ಸುಖದೊಲಿರ್ಪ | ಪರಿಯೆಂತೆಂದೆನಲೆಂದಳು ||೩೫||
ಕನಕಾಂಗಿ ಕೇಳೆಮ್ಮ ಉದ್ಯಾನದೊಳು ಹರ | ನನುದಿನ ನೆಲೆಸಿರ್ಪನು ||
ಚಿನುಮಯಾತ್ಮಿಕೆ ಸದಾಶಿವೆಯಿಹಳಲ್ಲಿ ನೀ | ಘನ ವೇಗದಿಂದ ಲೈದಿ ||೩೬||
ಹರಿವಾಹಿನಿಯ ಚರಣಾಬ್ಜಕೆರಗಿ ಪರಿ | ಪರಿಯಿಂದ ಸಂಸ್ತುತಿಸಿ ||
ಹರುಷದಿ ಬೇಡಿಕೊಂಡರೆ ಮನದಿಷ್ಟವು | ಅರೆನಿಮಿಷದೊಳಹುದು ||೩೭||
ಎನಲುಷೆ ಪೇಳ್ದಳು ಕೇಳು ಮಾನಿನಿಯೆನ್ನ | ಜನಕನಿದ್ದೆಡೆಗೆ ಪೋಗಿ ||
ಮನುಮಥಾರಿಯ ನೋಡಿ ಬರ್ಪೆವೆಂದವನೊಳ | ಪ್ಪಣೆಗೊಂಡು ಬಾರೆ ಈಗ ||೩೮||
ಕಂದ
ಎಂದಾ ಮಾತಂ ಕೇಳು |
ತ್ತಂದದೊಳಾ ಚಿತ್ರಲೇಖೆಯತಿ ಭರದಿಂದಂ ||
ಬಂದಾ ಬಾಣನ ಬಳಿಗಂ |
ವಂದಿಸೆ ಪಿಡಿದೆತ್ತಿ ಪರಸುತಾ ಖಳನೆಂದಂ ||೩೯||
ರಾಗ ತೋಡಿ ಅಷ್ಟತಾಳ
ಸರಸವಂತೆ ಮಂತ್ರಿಜಾತೆ | ತರಳೆ ಎನ್ನೆಡೆಗೈತಂದ |
ಪರಿಯದೇನೆಂದು ನೀನೀಗ | ಅರುಹೆನಲಿಂತೆಂದಳಾಗ ||೪೦||
ದನುಜಾಧೀಶ ಕೇಳು ನಿನ್ನ | ತನುಜೆ ಹರನ ನೋಡಲಿಂದು |
ಜನಕನ ನೇಮವನು ಕೊಂಡು | ವಿನಯದಿ ಬಾರೆಂದಳಯ್ಯ ||೪೧||
ಮಂದಯಾನೆ ಲಾಲಿಸೆನ್ನ | ನಂದನೆಯ ಸಹಿತ ನೀನು |
ಚಂದದಿಂದ ಶಂಕರನ್ನ | ಇಂದು ನೋಡಿ ಬಾರೆ ಈಗ ||೪೨||
ಕಂದ
ದನುಜಾಧಿಪನೆಂದುದನುಂ |
ವನಜಾಂಬಕಿ ಕೇಳುತಾಗಳುರು ಸಂಭ್ರಮದಿಂ ||
ವನಿತಾಮಣಿಯುಷೆಯೆಡೆಗಂ |
ಘನ ವೇಗದೊಳೈದಿ ಪೇಳ್ದಳತಿ ಸಂತಸದಿಂ ||೪೩||
Leave A Comment