ಕೋಲು ಮಾತಾಡುತಾವೆ-ಹೂವಿನ
ಗೆಜ್ಜೆ ಮಾತಾಡುತಾವೆ || ಸೊಲ್ಲು ||
ಹೊಳೆಯಲ್ಲಿ ನೀರು ತುಂಬಿ ಹೊಲದಲ್ಲಿ ಬೆಳೆ ತುಂಬಿ
ಊರೂರಿನ ಗುಡಿ ಮನೆತುಂಬಿ | ಹೂವಿನ |
ಊರೂರಿನ ಗುಡಿ ಮನೆತುಂಬಿ ಜನತುಂಬಿ
ಸಂಕ್ರಾಂತಿ ಬಂತು ಸಿರಿತುಂಬಿ | ಹೂವಿನ |
ಸಂಕ್ರಾಂತಿ ಹಬ್ಬದಲ್ಲಿ ಸಂಭ್ರಮವೇನಮ್ಮ
ದೇವೇಂದ್ರನೈಭೋಗ ಧರೆಯಲ್ಲಿ | ಹೂವಿನ |
ದೇವೇಂದ್ರನೈಭೋಗ ಧರೆಯಲ್ಲಿ ನೋಡುಬಾರೆ
ಬೆಳೆದು ಬೀಗ್ಯಾಳೆ ಭೂಮಿತಾಯಿ | ಹೂವಿನ |
ಭೂಮಿಯು ನಮ್ಮ ತಾಯಿ ತಂದೇಯು ಬಸವಣ್ಣ
ಅವರಿತ್ತ ಸಿರಿಯ ನೋಡ ಬನ್ನಿ | ಹೂವಿನ |
ಸುಗ್ಗಿ ಬಂದಿದೆ ಬನ್ನಿ ಹಿಗ್ಗ ತಂದಿದೆ ಬನ್ನಿ
ಸಗ್ಗವಾಗಿದೆ ಭೂಮಿ ನೋಡ ಬನ್ನಿ | ಹೂವಿನ |
ಎಳ್ಳು ಬೆಲ್ಲವ ಕೊಟ್ಟ ಒಳ್ಳೆ ಬಾಳನು ಕೊಟ್ಟ
ಎಲ್ಲರಿಗು ಸಂಪತ್ತ ಶಿವಕೊಟ್ಟ | ಹೂವಿನ |
ಗೊನೆಯಿಳ್ಸಿ ತಂದ ಬತ್ತ ಕುಟ್ಟೀದ ಹೊಸಅಕ್ಕಿ
ಉಕ್ಕೀಸಿ ಹೆಚ್ಚಾದ ಬೆಲ್ಲದನ್ನ | ಹೂವಿನ |
ಉಕ್ಕೀಸಿ ಹೆಚ್ಚೀದ ಬೆಲ್ಲದನ್ನ ಬಸವಯ್ಗೆ
ಪಡುಸೋಗ ಸಂಕ್ರಾಂತಿ ಸುಕುವಾಯ್ತು |
ಬಾರೋ ಬಾರೋ ಅಣ್ಣ ಕೋಲು ಕೋಲೆ
ಬಂಗಾರ್ದ ದಿನ ಬಂತು ಕೋಲುಕೋಲೆ || ಸೊಲ್ಲು ||
ಸಿಂಗಾರ್ದ ಸಿರಿ ಬಂತು
ಸಂಕ್ರಾಂತಿ ಹಬ್ಬ ಬಂತು
ಎಳ್ಳು ಬೆಲ್ಲಕ್ಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು |
ಊರ ಸೀಮೆಯ ನೋಡು
ಊರೂರ ಚೆಲ್ವ ನೋಡು
ನಾಡ ಅಂದವ ನೋಡು
ನಾಡ ಚಂದವ ನೋಡು |
ಬೆಳೆದ ಬೆಳೆಯ ನೋಡು
ಸುಗ್ಗೀಯ ಸಿರಿನೋಡು
ಹಸಿರ ಹಬ್ಬವ ನೋಡು
ಉಸಿರು ಬಂದಾದೆ ಜನಕೆ |
ನಾಡ ಸಂಪತ್ತ ನೋಡು
ನೋಡಲು ಶಿವ ಬಂದ್ರು
ಕಾಡ ಸಂಪತ್ತ ನೋಡು
ಕೋಟಿ ದೇವರು ಬಂದ್ರು |
ಹರುಷದ ಹೆಜ್ಜೆ ಮಡಗಿ
ಗೆಜ್ಜೆ ಗಿಲಿಗಿಲಿ ಅಂದೊ
ಎಳ್ಳುಬೆಲ್ಲಕೆ ಬಂತು
ಒಳ್ಳೆ ಸಂಕ್ರಾಂತಿ ಹಬ್ಬ ಬಂತು |
ಓಲಿಗ್ಯೊ ಓಲಿಗ್ಯೊ ಓಲಿಗ್ಯೊ |
ಹಿಗ್ಗಾಳಿ ಮುಗ್ಗಾಳಿ ಬರದಿರು ಕಣಕೆ
ಕುಗ್ಗೀದ ಗುಣವ ಕೊಡದೀರು ಮನಕೆ | ಸೊಲ್ಲು |
ಮೂಡಾಲಗಾಳಿಗೆ ಏನು ಬಂತೊ ಮಾಯ
ನೋಡಿ ನೀ ದಯ ಮಾಡೊ ದೇವ ಶಿವರಾಯ
ಕೂಡೀದ ರಾಸಿಗೆ ಬಡಿಸೇನು ಕಾಯ
ಕಾಡಿಸಿಕೊಳ್ಳದೆ ಕೊಡುವೇನು ಆಯ | ಓಲಿಗ್ಯೊ |
ಎತ್ತೀನ ಪಾದದ ಮುತ್ತೀನ ಜೋಳ
ಸುತ್ತ ಗುಡಿಸೇನು ಹವಳದ ಕಾಳ
ಅತ್ತಿಗಕ್ಕಯ್ಯಾರ ಬಳೆಗಳ ತಾಳ
ಹೊತ್ತಾತು ತರಬೇಕು ನೂರಾರು ಆಳ | ಓಲಿಗ್ಯೊ |
ಮಾಯಾದ ಗಾಳಿಬಂತು ಬರ್ರಾನೆ ಬೀಸಿ
ಶ್ರೀಶೈಲ ಶಿಖರಕ್ಕೆ ಸಮನಾದ ರಾಶಿ
ಮನ್ದೇವ್ರಿಗೋಗಾಕೆ ಬಲುದೂರ ಕಾಸಿ
ಮಲ್ಲೀಗಿ ದಂಡೇಲಿ ಪೂಜೀವು ರಾಸಿ | ಓಲಿಗ್ಯೊ |
ಹಸೆಗೆದ್ದು ಬಾ
ನೀಲಮೇಘ ಶ್ಯಾಮ |
ದಶರಥ ಕಂದ
ರಾವಣಾನ ಕೊಂದ
ಸೀತೆಯನು ತಂದ
ಲೋಕಕೆ ಆನಂದ |
ವನವಾಸವಾಂತ
ಭೂಜಾತೆ ಕಾಂತ
ಲಕ್ಷ್ಮಣ ಸಮೇತ
ಲಕ್ಷ್ಮಿದೇವಿ ಪ್ರೀತ |
ಈ ಬಿಲ್ಲು ಬಾಣ
ಹುಸಿಯದಂತ ಜಾಣ
ಜಾನಕೀರಮಣ
ನೀನೆ ಜಗದ ಪ್ರಾಣ |
ರಂಗಯ್ಯಸ್ವಾಮಿ ರಂಗಯ್ಯಸ್ವಾಮಿ
ಕಾವೇಟಿ ರಂಗಯ್ಯ ಗೋವಿಂದೋ |
ಬಿಲ್ಲ ತಕ್ಕೊಂಡು ಬಾಣ ಹೂಡುಕೊಂಡು
ಕತ್ತಿ ಹಿಡುಕೊಂಡು ಗೋವಿಂದೊ
ಕತ್ತಿ ಹಿಡುಕೊಂಡು ಕಾವೇಟಿ ರಂಗಯ್ಯ
ಬ್ಯಾಟೆಗೊರಟಾನೋ ಗೋವಿಂದೋ |
ಕಾವೇಟಿ ರಂಗಯ್ಯ ಕೆಂದ್ಗುದ್ರೆ ಏರ್ಕೊಂಡು
ಬ್ಯಾಟೆಗೊರಟಾರೊ ಗೋವಿಂದೋ
ಬೆಳಗಾನ ಬ್ಯಾಟೆಗೊರಟಾರೊ ರಂಗಯ್ಯ
ಹುಲಿ ಬ್ಯಾಟೆ ಗೆದ್ದ ಗೋವಿಂದೋ |
ಕಾವೆಟಿ ರಂಗಯ್ಯ ಕಾವಳ್ದಲೊರುಟವ್ರೆ
ಕಾವೇರಿ ದಂಡೆ ಗೋವಿಂದೋ
ಕಾವೇರಿ ದಂಡೆಯ ಕಾಡಲ್ಲಿ ಮಿಕಗಳ
ಕಾದು ನಿಂತವುರೆ ಗೋವಿಂದೋ |
* * *
ಹುಯ್ಯಿರೋ ಹುಯ್ಯಿರೋ
ಹುಯ್ಯಾರೆ ಹುಯ್ಯಿರೋ |
ನಗಾರಿ ಹುಯ್ಯಿರೋ
ನರಿಯನ್ನು ಹುಯ್ಯಿರೋ |
ತಮಟೆಯ ಹುಯ್ಯಿರೊ
ತಂಟೆಹುಲಿ ಹುಯ್ಯಿರೊ |
ಕಡಕತ್ತಿ ಹುಯ್ಯಿರೊ
ಕರಡೀಯ ಹುಯ್ಯಿರೊ |
ಕಠಾರಿ ಹುಯ್ಯಿರೊ
ಕಾಡುಕೊತ್ತಿ ಹುಯ್ಯಿರೊ |
ಕೊಡಲೀಯ ಹುಯ್ಯಿರೊ
ಕಡವೆಯ ಹುಯ್ಯಿರೊ |
ಈಟೀಯ ಹುಯ್ಯಿರೊ
ಕಾಟೀಯ ಹುಯ್ಯಿರೊ |
ಮಚ್ಚುಗಳ ಹುಯ್ಯಿರೊ
ಪಚ್ಚೋತಿ ಹುಯ್ಯಿರೊ |
ಬಾಣಗಳ ಹುಯ್ಯಿರೊ
ಬಳ್ಳುಗಳ ಹುಯ್ಯಿರೊ |
ಕಂದಲನ್ನು ಹುಯ್ಯಿರೊ
ಹಂದಿಯನ್ನು ಹುಯ್ಯಿರೊ |
ಬಾಕುವನ್ನು ಹುಯ್ಯಿರೊ
ಬರ್ಕಗಳ ಹುಯ್ಯಿರೊ |
ಬಲ್ಲೇಯ ಹುಯ್ಯಿರೊ
ಹುಲ್ಲೆಗಳ ಹುಯ್ಯಿರೊ |
ಹೆಬ್ಬಾರೆ ಹುಯ್ಯಿರೊ
ಹೆಬ್ಬಾವ ಹುಯ್ಯಿರೊ |
* * *
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ
ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರ ತಾಯಿ ಬಾರೇ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು
ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು
ಪದ್ಮನಾಭನೆ ಪರಂಧಾಮನೆ
ಮದ್ದುರ ಶ್ರೀ ನಾರಸಿಂಹನೆ
ಮುದ್ದುವರಗಳ ಕೊಡುವ ನಿಮಗೆಯು
ನಮೋ ನಮೋ ಮಂಗಳಂ
* * *
ಎತ್ತು ಎನಬವುದೆ ಎಡಚೋರಿ ಬಸವನ
ಸುತ್ತೇಳು ಲೋಕ ಸಲವೋನ – ಬಸವನ
ಸತ್ವ ಮೊರೆಯೋದು ಧರಿಯಲ್ಲಿ |
ಮೂಡಲ ಹೋರಿಗೆ ಮುರಗಿಯ ಕೋಡಣಸು
ಕಣಗೆಜ್ಜೆ ಕೊರಳ ಸರಪಳಿ – ಕಟಿಕೊಂಡು
ಸವನಾಗಿ ಹಮತ ತುಳಿದಾನೊ |
ಹೊತ್ತುನಂತೆ ಎದ್ದು ಯಾರ್ಯಾರ ನೆನಯಾಲಿ
ಕರುಣಿ ಕಲ್ಯಾಣದ ಬಸವನ
ಕರುಣಿ ಕಲ್ಯಾಣದ ಬಸವಣ್ಣ ದೇವರ
ಹೊತ್ತುನಂತೆ ಎದ್ದು ನೆನೆದೇವು |
ತುಂಬಿದ ಹೊಳೆಯಾಗೆ ಕೊಂಬು ಕಾಣಿಸುತಾವೆ
ಇಂಬುಳ್ಳ ಇಣಿಲ ಬಸವಣ್ಣ – ಬರುವಾಗ
ಗಂಗೆದ್ದು ಕೈಯ ಮುಗಿದಾಳು |
ಕಸವ ಹೊಡೆದ ಕೈಯಿ ಕಸ್ತೂರಿ ನಾತವು
ಬಸವಣ್ಣ ನಿನ್ನ ಸೆಗಣೀಯ – ಬಳಿದ ಕೈ
ಎಸಳ ಯಾಲಕ್ಕಿ ಗೊನೆನಾತ |
Leave A Comment