ರಾಗ ಭೈರವಿ ಏಕತಾಳ
ಬಿಡು ಭಗಿನಿಯೆ ದುಗುಡವನು | ಬಡ | ಹುಡುಗನಿಂದ ಭಂಗವನು ||
ಪಡಿಸಿದ ನಿರ್ಜರ ಕುಲವ | ಸದೆ | ಬಡಿದಾಳುವೆ ಸುರಪುರವ ||೬೨||
ಹರಿಹರ ಬ್ರಹ್ಮಾದಿಗಳ | ತ | ನ್ನರಸಿ ಸಹಿತ ಸುರಪಾಲ ||
ಮರೆಹೊಕ್ಕರು ಎಳೆತಂದು | ನಾ | ವರಿಸದೆ ಬಿಡೆನೆಂದೆಂದು ||೬೩||
ವಿರಚಿಸಿ ಮಂತ್ರೌಷಧವ | ನೀ | ನಿರು ಎಂದಟ್ಟುತ ಬಲವ ||
ನೆರಹಿಸುತಿರೆ ಮುರ ಬಂದು | ಪದ | ಕೆರಗುತ ಪೇಳಿದನಂದು ||೬೪||
ರಾಗ ಭೈರವಿ ಅಷ್ಟತಾಳ
ವಿಪರೀತವೇನೆಮಗೆ | ಬಂತಿಂದು ನೀ | ಕುಪಿತನಾಗುತ್ತ ಹೀಗೆ ||
ಅಪರಿಮಿತದ ಸೇವೆ ನೆರಹಲೇತರ ಕಾರ್ಯ | ಕೃಪೆಯಿಂದ ಪೇಳೆನಗೆ ||೬೫||
ಸುರಮುನಿ ಪೇಳ್ದಂದದಿ | ಶಚಿಯ ಕರೆ | ತರಲು ಭಗಿನಿ ಶೀಘ್ರದಿ ||
ತೆರಳುತ್ತ ಕರವಿಕ್ಕೆ ತುಂಡರಿಸಿದ ನಿರ್ಜ | ರರ ನಿಲಗೊಡೆಕ್ಷಣದಿ ||೬೬||
ಇನಿತಾಯ್ತೆ ಕಾರ್ಯಗಳು | ದಿವಿಜರೆಮ | ಗನುಚರರಾಗಿರಲು ||
ಬಿನುಗರ ದಂಡಿಸದುಳಿವುಡೆ ಬಿಡೆ ನಾನು | ರಣಕೆ ನಿನ್ನೊತ್ತಿನೊಳು ||೬೭||
ಕಂದ
ನುಡಿಯಿಂದುಬ್ಬುತ ನರಕಂ |
ಪೊಡವಿಯು ನಡನಡುಗುವಂತೆ ಮಾರ್ಬಲ ಸಹಿತಂ ||
ನಡೆತರೆ ನಾಕಕೆ ಪರಿಕಿಸಿ |
ಕಡು ತವಕದಿ ಸುರವರಂಗೆ ಚರರಿಂತೆಂದರ್ ||೬೮||
Leave A Comment