Categories
e-ದಿನ

ಏಪ್ರಿಲ್-29

ಪ್ರಮುಖಘಟನಾವಳಿಗಳು:

1910: ಯುನೈಟೆಡ್ ಕಿಂಗ್ಡಂನ ಪಾರ್ಲಿಮೆಂಟು ಬ್ರಿಟಿಷ್ ಇತಿಹಾಸದಲ್ಲೇ ಮೊದಲಬಾರಿಗೆ ಸಂಪತ್ತನ್ನು ಬ್ರಿಟಿಷ್ ಜನರಿಗೆ ಹಂಚುವ ಆಶಯವುಳ್ಳ ಜನಪರ ಬಜೆಟ್ ಮಂಡಿಸಿತು.

1953: ಅಮೆರಿಕದ ಪ್ರಥಮ 3 ಡಿ ಟೆಲಿವಿಷನ್ ಕಾರ್ಯಕ್ರಮವಾದ ‘ಸ್ಪೇಸ್ ಪೆಟ್ರೋಲ್’ ಪ್ರಸಾರಗೊಂಡಿತು.

1986: ಅಮೆರಿಕ ಮತ್ತು ಯೂರೋಪಿನ ಬೇಹುಗಾರಿಕೆ ಉಪಗ್ರಹಗಳು ಚೆರ್ನೋಬಿಲ್ ದುರಂತದಲ್ಲಿ ನಾಶಗೊಂಡ 4ನೇ ರಿಯಾಕ್ಟರಿನ ಅವಶೇಷಗಳನ್ನು ಸೆರೆಹಿಡಿದವು.

1991: ಬಾಂಗ್ಲಾದೇಶದ ಚಿಟ್ಟಗಾಂಗ್ನಲ್ಲಿ ಉಂಟಾದ ಗಂಟೆಗೆ 249 ಕಿಲೋಮೀಟರ್ ವೇಗದ ಭೀಕರ ಸೈಕ್ಲೋನಿನಲ್ಲಿ 1,38,000 ಜನ ಹತರಾಗಿ ಕೋಟಿ ಜನ ವಸತಿ ಕಳೆದುಕೊಂಡರು.

1993: ರಾಸಾಯನಿಕ ಶಸ್ತ್ರಾಸ್ತ್ರಗಳ 1993ನೇ ಅಧಿವೇಶನದ ನಿರ್ಣಯ ಜಾರಿಗೊಂಡು, ಆ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದು ಮತ್ತು ಪೇರಿಸಿಟ್ಟುಕೊಳ್ಳುವುದನ್ನು ಕಾನೂನು ಬಾಹಿರವನ್ನಾಗಿ ಮಾಡಲಾಯಿತು.

2001: ಅಮೆರಿಕದ ಕೋಟ್ಯಾಧಿಪತಿಯಾದ ಡೆನ್ನಿಸ್ ಟಿಟೋ ಅವರು ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎನಿಸಿದರು.

2008: ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.

2009: ಅಮೆರಿಕದ ಪ್ರತಿಷ್ಠಿತ ‘ಹೂವರ್’ ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಏಷ್ಯಾದ ಪ್ರಥಮ ವ್ಯಕ್ತಿ ಕಲಾಂ.

2009: ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಟಗಾರರ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರವುಗೊಳಿಸಿತು. ಆದರೆ ಮೇ 31ರೊಳಗೆ ಐಸಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅದು ಆಟಗಾರರಿಗೆ ಸೂಚಿಸಿತು.

2016: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈದಿನ ಚಾಲನೆ ನೀಡಿದರು.

ಪ್ರಮುಖಜನನ/ಮರಣ:

1848: ಪ್ರಸಿದ್ಧ ಕಲಾವಿದರಾದ ರಾಜಾ ರವಿವರ್ಮ ಅವರು ಟ್ರಾವನ್ಕೂರ್ ಸಂಸ್ಥಾನದ ಕಿಲಿಮನೂರ್ ಎಂಬಲ್ಲಿ ಜನಿಸಿದರು.

1856: ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರಾದ ದಿವಾನ್ ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರು ಬೆಂಗಳೂರಿನ ಕೃಷ್ಣರಾಜಪುರದಲ್ಲಿ ಜನಿಸಿದರು. ಇವರಿಗೆ ಮೈಸೂರು ಮಹಾರಾಜರ ‘ರಾಜ್ಯಸಭಾ ಭೂಷಣ’ ಪ್ರಶಸ್ತಿ, ಭಾರತ ಸರ್ಕಾರದ ‘ದಿವಾನ್ ಬಹದ್ದೂರ್’ ಪ್ರಶಸ್ತಿ, 1917ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು 1925ರ ವರ್ಷದಲ್ಲಿ ‘ಕೈಸರ್ ಹಿ ಹಿಂದ್’ ಪದಕ, ಬ್ರಿಟಿಷ್ ಸರ್ಕಾರದ ‘ಸರ್’ ಬಿರುದು ಸಂದಿದ್ದವು. 1921ರಲ್ಲಿ ನಡೆದ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1936ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.

1891: ತಮಿಳು ಕವಿ ಮತ್ತು ಸಾಮಾಜಿಕ ಹೋರಾಟಗಾರ ‘ಭಾರತೀದಾಸನ್’ ಕಾವ್ಯನಾಮದ ಕನಕಸಭಾಯ್ ಸುಬ್ಬುರತ್ನಂ ಅವರು ಪಾಂಡಿಚೇರಿಯಲ್ಲಿ ಜನಿಸಿದರು.

1893: ಅಮೆರಿಕದ ರಸಾಯನ ಶಾಸ್ತ್ರಜ್ಞ ಹೆರಾಲ್ಡ್ ಉರೆಯ್ ಅವರು ಇಂಡಿಯಾನದ ವಾಕರ್ಟನ್ ಎಂಬಲ್ಲಿ ಜನಿಸಿದರು. ‘ಡಿಯೋಟೆರಿಯಂ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1934 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.

1919: ತಬಲಾ ವಾದನದಲ್ಲಿ ಮಾಂತ್ರಿಕರೂ, ತಾಳ ವಾದ್ಯಕ್ಕೆ ವಿಶ್ವದಲ್ಲೇ ಪ್ರತಿಷ್ಟಿತ ಸ್ಥಾನವನ್ನು ತಂದುಕೊಟ್ಟ ಉಸ್ತಾದ್ ಅಲ್ಲಾ ರಖಾ ಅವರು ರತನ್ ಘರ್ ಎಂಬಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

1929: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿಸು ಸಂಗಮೇಶ ಎಂಬ ಕಾವ್ಯನಾಮದಿಂದ ಹೆಸರಾದ ಸಂಗಮೇಶ ಸಿದ್ದಾಮಪ್ಪನಗೊಂಡ ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಜನಿಸಿದರು. ಆದರ್ಶ ಶಿಕ್ಷಕ ಪ್ರಶಸ್ತಿ, ‘ನನ್ನ ಮನೆ’ ಮತ್ತು ‘ನನ್ನ ಗೆಳೆಯ ಜಪಾನದ ಟಾರೊ’ ಕೃತಿಗೆ ರಾಷ್ಟ್ರಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮಾವೇಶದ ಸರ್ವಾಧ್ಯಕ್ಷತೆ. ಭೂಪಾಲದಲ್ಲಿ ನಡೆದ ಅಖಿಲ ಭಾರತ ಭಾಷಾ ಸಮ್ಮೇಳನದ ‘ಭಾರತ ಭಾಷಾ ಭೂಷಣ ಪ್ರಶಸ್ತಿ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1936: ಪಾಶ್ಚಾತ್ಯ ಸಂಗೀತ ಸಾಧಕರಲ್ಲಿ ಪ್ರಮುಖ ಭಾರತೀಯರಾದ ಜುಬಿನ್ ಮೆಹ್ತಾ ಅವರು ಮುಂಬೈನಲ್ಲಿ ಜನಿಸಿದರು. ಇಸ್ರೇಲ್ ದೇಶದ ಗೌರವ, ಲಾರಿಯೇಟ್ ಆಫ್ ವುಲ್ಫ್ ಪ್ರೈಜ್ ಇನ್ ಆರ್ಟ್ಸ್ವ, ಯುಕ್ತ ರಾಷ್ಟ್ರಗಳ ಒಕ್ಕೂಟದ ‘ಶಾಂತಿ ಮತ್ತು ಸೌಹಾರ್ದತೆಯ ಜೀವಮಾನ ಸಾಧನೆಗಾಗಿನ ಗೌರವ’, ಭಾರತ ಸರ್ಕಾರದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಗೌರವಗಳು ಇವರಿಗೆ ಸಂದಿವೆ.

1958: ಭಾರತೀಯ ಇತಿಹಾಸಜ್ಞ ರಾಮಚಂದ್ರ ಗುಹಾ ಅವರು ಡೆಹ್ರಾಡೂನ್ ಪಟ್ಟಣದಲ್ಲಿ ಜನಿಸಿದರು. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಗಳಲ್ಲದೆ ಅನೇಕ ಅಂತರರಾಷ್ಟ್ರೀಯ ಗೌರವಗಳೂ ಇವರಿಗೆ ಸಂದಿವೆ.

1236: ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತರಾದರು. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.

1937: ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.