Categories
ಇತಿಹಾಸ ಕರ್ನಾಟಕ ಇತಿಹಾಸ ಜನಪದ ಸಾಹಿತ್ಯ ವ್ಯಕ್ತಿಸಾಹಿತ್ಯ ಸಾಹಿತ್ಯ

ವ್ಯಕ್ತಿಸಾಹಿತ್ಯ – ಕೊಮಾರ ರಾಮಯ್ಯನ ಚರಿತ್ರೆ

ಪ್ರಾಚೀನ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಂಪಿಲರಾಜ್ಯದ ನಾಶ, ವಿಜಯನಗರ ಸಾಮ್ರಾಜ್ಯದ ನಿರ್ಮಾಣ- ನಾಶಗಳು ತುಂಬ ಇಕ್ಕಟ್ಟಿನ ಸಂದರ್ಭಗಳೆನಿಸಿವೆ. ಇಂಥ ಸಂದರ್ಭಗಳನ್ನು ನಿಯಂತ್ರಿಸುವಲ್ಲಿ ಕಾಲ ಮತ್ತು ದೇಶಗಳು ಮಹತ್ವದ ಪಾತ್ರವಹಿಸುತ್ತವೆ.

‘ಕಾಲ’ ದೃಷ್ಟಿಯಿಂದ ಹೇಳುವುದಾದರೆ ೧೨ನೆಯ ಶತಮಾನದಲ್ಲಿ ದೇವಾಲಯ ನಾಶ-ಮತಾಂತರಗಳಂಥ ಚಟುವಟಿಕೆಗಳನ್ನೊಳಗೊಂಡ ಮುಸಲ್ಮಾನರ ಹೊಸಬಗೆಯ ಆಕ್ರಮಣ ಕೇವಲ ರಾಜಕೀಯ ದಾಳಿಯಾಗಿ ಉಳಿಯದೆ, ಸಾಂಸ್ಕೃತಿಕ ದಾಳಿಯಾಗಿ ಬೆಳೆಯಿತು. ಉತ್ತರದಿಂದ ಆರಂಭವಾದ ಈ ದಾಳಿಗೆ ದಕ್ಷಿಣ ಚಕ್ರವರ್ತಿಗಳಾದ ಈಗಿನ ಮಹಾರಾಷ್ಟ್ರದ ದೇವಗಿರಿ ಯಾದವರು ೧೩೦೭ ರಲ್ಲಿ, ಆಂದ್ರಪ್ರದೇಶದ ಕಾಕತೀಯರು ೧೩೦೯ ರಲ್ಲಿ, ಕರ್ನಾಟಕದ ಹೊಯ್ಸಳರು ೧೩೧೨ ರಲ್ಲಿ ಸೋತು ಶರಣಾಗತರಾದರು. ಇಂಥ ಅರಕ್ಷಕ ಸ್ಥಿತಿಯ ಇಕ್ಕಟ್ಟಿನಲ್ಲಿ ಕಂಪಿಲರಾಜ್ಯ ಕನ್ನಡಿಗರ ಏಕೈಕ ರಕ್ಷಣೆಯಾಗಿ ನಿಂತಿತು. ಆ ಕಡೆ ಎಲ್ಲಾ ಹಿಂದೂ ರಾಜ್ಯಗಳು ಹಾಳಾದ, ಈ ಕಡೆ ಹಿಂದೂ ರಾಜ್ಯವಾದ ವಿಜಯನಗರ ಹುಡ್ಡದ ಸಂಧಿಕಾಲದಲ್ಲಿ ಮುಸಲ್ಮಾನರನ್ನು ಎರಡು ಸಲ ಸೋಲಿಸಿ, ಕೊನೆಯ ಮೂರನೆಯ ಯುದ್ಧದಲ್ಲಿ ದುರಂತಕ್ಕೆ ಗುರಿಯಾಯಿತು. ಈ ದುರಂತ ಸಂಭವಿಸಿದುದು ೧೩೨೬ ರಲ್ಲಿ, ಮುಂದೆ ವಿಜಯನಗರ ಸಾಮ್ರಾಜ್ಯ ಹುಟ್ಟಿದುದು ೧೩೩೬ ರಲ್ಲಿ. ಅಂದರೆ ಕಾಲದೃಷ್ಟಿಯಿಂದ ಕೇವಲ ೧೦ ವರ್ಷಗಳ ಅಂತರದಲ್ಲಿಯೇ ಕಂಪಿಲರಾಜ್ಯದ ನಾಶದಲ್ಲಿ ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಯಿತು.

‘ದೇಶ’ ದೃಷ್ಟಿಯಿಂದ ಹೇಳುವುದಾದರೆ ಕಂಪಿಲರಾಜ್ಯದ ರಾಜಧಾನಿ ಕುಮ್ಮಟದುರ್ಗ, ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ- ಇವುಗಳ ನಡುವಿನ ಅಂತರ ಕೇವಲ ೧೦ ಮೈಲು. ಹೀಗಾಗಿ ಕಂಪಿಲ ರಾಜ್ಯದ ನಾಶವನ್ನು ಕಣ್ಣಾರೆ ಕಂಡಿದ್ದ, ಮತ್ತು ಅಲ್ಲಿ ಭಂಢಾರಿಯಾಗಿ ರಾಜಕೀಯ ತರಬೇತಿ ಪಡೆದಿದ್ದ ಹುಕ್ಕ-ಬುಕ್ಕರಿಗೆ ವಿಜಯನಗರ ಸಾಮ್ರಾಜ್ಯದ ನಿರ್ಮಾಣ ಸಾಧ್ಯವಾಯಿತು. ಈಗ ಕಂಪಿಲ ರಾಜ್ಯದ ಮರುಸ್ಥಾಪನೆಯೆಂಬಂತೆ ಅಲ್ಲಿ ಪಡೆದ ಅನುಭವದ ಅವಶೇಷಗಳಿಂದಲೇ ವಿಜಯನಗರ ಸಾಮ್ರಾಜ್ಯದ ನಿರ್ಮಾಣವಾಯಿತೆನ್ನಬಹುದು. ಅಥವಾ ೧೦ ವರ್ಷಗಳ ಹಿಂದೆ ಕಿವಿಯಾರೆ ಕೇಳಿದ್ದ, ೧೦ ಮೈಲುಗಳ ಅಂತರದಲ್ಲಿ ಕಣ್ಣಾರೆ ಕಂಡಿದ್ದ ಕಂಪಿಲರಾಜ್ಯದ ಮುಂದುವರಿಕೆಯೇ ವಿಜಯನಗರ ಸಾಮ್ರಾಜ್ಯವೆನ್ನಬಹುದು.

ಹೀಗೆ ನಿರ್ಮಾಣಕ್ಕೆ ಕಾರಣವಾದಂತೆ ನಾಶಕ್ಕೂ ‘ದೇಶ’ ಕಾರಣವಾಗುವುದಕ್ಕೆ ಈ ಮನೆತನಗಳೇ ಉದಾಹರಣೆಯೆನಿಸಿವೆ. ಈ ಎರಡೂ ರಾಜ್ಯಗಳು ಅಸ್ತಿತ್ವಕ್ಕೆ ಬಂದುದು ಕರ್ನಾಟಕದ ಗಡಿ ಪ್ರದೇಶದಲ್ಲಿ. ಈ ಪ್ರದೇಶಕ್ಕೆ ಹೊಂದಿಕೊಂಡಿರುವ ತೆಲುಗನಾಡಿನ ತೆಲುಗರ ಪಾತ್ರವನ್ನು ಇಲ್ಲಿ ಕಡೆಗಣಿಸುವಂತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ತೆಲುಗರ ಬೆಂಬಲದಿಂದ ಕರ್ನಾಟಕಮೂಲದ ಕುಮಾರರಾಮನ ರುಂಡ ಕತ್ತರಿಸಿದ ಮುಸಲ್ಮಾನರು ಕನ್ನಡಿಗರ ಬೆಂಬಲದಿಂದ, ತೆಲುಗು ಮೂಲದವನಾಗಿ ಕನ್ನಡ ರಾಜ್ಯವನ್ನಾಳುತ್ತಿದ್ದ ರಾಮರಾಯನ ರುಂಡ ಕತ್ತರಿಸಿದರು. ಅಂದರೆ ದಿಲ್ಲಿ ಮುಸಲ್ಮಾನರನ್ನು ಬಳಸಿಕೊಂಡು ಒಮ್ಮೆ ತೆಲುಗರು ಕನ್ನಡಿಗರ ನಾಶಕ್ಕೆ ಕಾರಣವಾದರೆ, ಇನ್ನೊಮ್ಮೆ ವಿಜಾಪುರ ಮುಸಲ್ಮಾನರನ್ನು ಬಳಸಿಕೊಂಡು ಕನ್ನಡಿಗರು ತೆಲುಗರ ನಾಶಕ್ಕೆ ಕಾರಣವಾದರು. ಆದುದರಿಂದ ಬಾಹ್ಯದಲ್ಲಿ ಹಿಂದೂ-ಮುಸಲ್ಮಾನ ಯುದ್ಧಗಳಂತೆ ತೋರಿದರೂ ಇವು ಆಂತರ್ಯದಲ್ಲಿ ಕನ್ನಡಿಗ ಮತ್ತು ತೆಲುಗರ ಯುದ್ಧಗಳೇ ಆಗಿವೆ. ಇವುಗಳಲ್ಲಿ ಒಮ್ಮೆ ಹೊರಗಿನ ತೆಲುಗರು ಒಳಗಿನ ಕನ್ನಡಿಗರ ವಿಷಯವಾಗಿ ನಡೆದುಕೊಂಡುದು ಅನ್ಯಾಯ ರೂಪದ್ದು, ಇನ್ನೊಮ್ಮೆ ಒಳಗಿನ ಕನ್ನಡಿಗರು ಹೊರಗಿನ ತೆಲುಗರ ವಿಷಯವಾಗಿ ನಡೆದುಕೊಂಡುದು ಅನಿವಾರ್ಯ ರೂಪದ್ದೆಂದು ತೀರ್ಮಾನಿಸಬಹುದಾಗಿದೆ. ಇದರಿಂದ ಗಡಿನಾಡಿನವರ ವಿಷಯದಲ್ಲಿ ನೆರೆನಾಡಿನವರ ವರ್ತನೆ ಯಾವ ಕಾಲಕ್ಕೂ ತೂಗುವ ಖಡ್ಗ ಮಾದರಿಯದೆಂದೇ ಹೇಳಬಹುದಾಗಿದೆ. ಇದನ್ನು ಗಮನಿಸಿದರೆ ಕಂಪಿಲರಾಜ್ಯ, ವಿಜಯನಗರ ಸಾಮ್ರಾಜ್ಯಗಳು ಗಡಿನಾಡಿಗೆ ಬದಲು ಒಳನಾಡಿನಲ್ಲಿ ಸ್ಥಾಪಿತವಾಗಿದ್ದರೆ ಇವು ಬೇಗ ನಾಶವಾಗುತ್ತಿರಲಿಲ್ಲವೇನೋ ಅಥವಾ ಇವುಗಳ ನಾಶ ಬೇರೆ ರೀತಿಯಲ್ಲಿ ಘಟಿಸಬಹುದಿತ್ತೇನೋ ಎನಿಸುತ್ತದೆ.

ಮುಸಲ್ಮಾನರ ದೈತ್ಯದಾಳಿಯನ್ನು ದಕ್ಷಿಣ ಭಾರತದಲ್ಲಿ, ಏಕಾಂಗ ವೀರನಾಗಿ ತಡೆಗಟ್ಟಿದ, ಮಲತಾಯಿಯ ಮೋಹ ನಿರಾಕರಣೆಯಲ್ಲಿ ನಲುಗಿದ, ಕೊನೆಗೂ ಮಾದಿಗಿತ್ತಿಯೆಂಬ ಹೆಣ್ಣಿನ ಕೈಯಲ್ಲಿ ಹತನಾದ- ಈ ಎಲ್ಲ ವಿಶಿಷ್ಟ ಘಟನೆಗಳು ಕಾರಣವಾಗ ಬಾಲವೀರ ಅಭಿಮನ್ಯುವಿನಂತೆ kuಕುಮಾರರಾಮ ಕನ್ನಡಿಗರ ಮನಸ್ಸಿನಲ್ಲಿ ಅಂದಿನಿಂದ ಇಂದಿನವರೆಗೂ ಜೀವಂತನಾಗಿದ್ದಾನೆ. ಮಯೂರವರ್ಮ, ಪುಲಿಕೇಶಿ, ವಿಕ್ರಮಾಧಿತ್ಯ, ವಿಷ್ಣುವರ್ಧನ, ಏಕೆ ಕೃಷ್ಣದೇವರಾಯನಂಥ ಪ್ರಸಿದ್ಧ ಅರಸರ ಹೆಸರನ್ನು ಮರೆತ ಕನ್ನಡ ಜನಸಮುದಾಯ ಕುಮಾರರಾಮನನ್ನು ಮರೆಯದೆ ಒಬ್ಬ ಸಾಂಸ್ಕೃತಿಕ ವೀರನನ್ನಾಗಿ ಬೆಳೆಸಿಕೊಂಡು ಬಂದರು. ಇದರ ಫಲವಾಗಿ ಇವನ ವಿಷಯದಲ್ಲಿ ಕಾಲಕಾಲಕ್ಕೆ ಭೌತಿಕ, ಅಭೌತಿಕ ಆಕರ ಸಾಮಾಗ್ರಿ ಅಪಾರ ಪ್ರಮಾಣದಲ್ಲಿ ಹುಟ್ಟಿಕೊಂಡಿತು. ರಾಜಕೀಯ, ಸಾಮಾಜಿಕ, ಆಚರಣಾತ್ಮಕ, ಭಾಷಿಕ ಅವಶೇಷಗಳು ನೂರಾರು ಸಂಖ್ಯೆಯಲ್ಲಿ ಹುಟ್ಟಿಕೊಂಡವು. ಸಾಲದುದಕ್ಕೆ ತೆಲಗು, ತಮಿಳು, ತುಳು ಭಾಷೆಗಳಲ್ಲಿಯೂ ಆಕರಗಳು ಸೃಷ್ಟಿಯಾಗುತ್ತ ಬಂದವು.

ರಾಜಕೀಯ ಅವಶೇಷಗಳನ್ನು ಕುರಿತು ಹೇಳುವುದಾದರೆ ಇಂದಿಗೂ ಕುಮ್ಮಟದುರ್ಗದಲ್ಲಿ ಕೋಟೆ, ರಾಮನ ಡೊಣೆ, ಕಾಟಪ್ಪನ ಗುಡ್ಡ, ಬೊಲ್ಲನ ಗುಂಡು, ಬಾದೂರನ ಬಂಡೆ, ಮಾದಿಗ ಹಂಪಯ್ಯನ ಗುಡ್ಡಗಳನ್ನು, ಹೊಸಮಲೆದುರ್ಗದಲ್ಲಿ (ಇಂದಿನ ರಾಮಗಡ) ಕೋಟೆ, ಬೊಲ್ಲನ ಬಂಡೆ, ಟಗರಿನ ಬಯಲು, ಬೊಲ್ಲನ ಹೆಜ್ಜೆ, ಕಾಟಣ್ಣ ಶಿಲ್ಪ, ಕುಮಾರರಾಮನ ಹಟ್ಟಿ, ಮಾದಿಗ ಹಂಪಯ್ಯನ ಕಲ್ಲು, ಹರಿಯಾಲಾದೇವಿ ಬಚ್ಚಲು, ರತ್ನಾಜಿ ಮಡಿಲು ಇತ್ಯಾದಿ ಸ್ಮಾರಕಗಳು ಸಿಗುತ್ತವೆ. ಹೊಳಲಗುಂದಿ (ಆದವಾನಿ ತಾಲೂಕು)ಯ ಸಿದ್ದೇಶ್ವರ ದೇವಾಲಯದ ಗೋಡೆಯ ಮೇಲೆ ಕುಮಾರರಾಮನ ಚೆಂಡಿನಾಟದ ಬಣ್ಣದ ಚಿತ್ರ ಬಿಡಿಸಲಾಗಿದ್ದು, ಇದರ ಕೆಳಗೆ ‘ರಾಮಣ್ಣ’ ಎಂಬ ಬರಹವೂ ಇದೆ.ಇದು ೧೮ನೆಯ ಶತಮಾನದ ಕಲಾಕೃತಿಯಾಗಿದೆ. ಸಾಲದುದಕ್ಕೆ ಕುದುರೆಯ ಮೇಲೆ ಕುಳಿತ ಕುಮಾರರಾಮನ ಶಿಲ್ಪಗಳು ಅಲ್ಲಲ್ಲಿ ಸಿಗುತ್ತveವೆ. ಸಾಮಾಜಿಕವಾಗಿ ಹೇಳುವುದಾದರೆ ರತ್ನಾಜಿ ಪರಂಪರೆಯ ‘ದೊಂಬರು’ ಹೆಸರಿನ ಒಂದು ಜನಾಂಗವೇ ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುತ್ತದೆ. ಬೇಡರು ಮೊದಲಾದ ಹಿಂದುಳಿದ ವರ್ಗದವರು ಇವನನ್ನು ಅಭಿಮಾನದಿಂದ ಆರಾಧಿಸುತ್ತಾರೆ.

ಆಚರಣೆಗೆ ಬಂದರೆ ಕುಮ್ಮಟ ಮತ್ತು ಹೊಸಮಲೆ ದುರ್ಗಗಳಲ್ಲಿ ಕುಮಾರರಾಮನ ಗುಡಿಗಳಿವೆ. ದರೋಜಿ ಸಮೀಪದ ರಾಮಪುರ ಮತ್ತು ಕುಮ್ಮಟದುರ್ಗಗಳಲ್ಲಿ ಕುಮಾರರಾಮನ ಜಾತ್ರೆ, ಅನೇಕ ಬಿಡಿ ಆಚರಣೆಗಳು ಕಂಡುಬರುತ್ತವೆ. ಕುಮಾರರಾಮನ ರುಂಡದ ಮೆರವಣಿಗೆ, ಪೂಜೆ, ಯುದ್ಧದ ತುಣುಕು ಇತ್ಯಾದಿಗಳು ಇಲ್ಲಿ ಇನ್ನೂ ಜೀವಂತವಾಗಿವೆ. ನಾಡಿನ ಅನೇಕ ಕಡೆಗಳಲ್ಲಿ ರಾಮಸ್ವಾಮಿ, ಕುಮಾರದೇವರು, ರಾಮೇಶ್ವರ ಹೆಸರುಗಳಿಂದ ಈತ ಪೂಜೆಗೊಳ್ಳುತ್ತಲಿದ್ದಾನೆ.

ಭಾಷಿಕ ರಚನೆಗಳು ಅಂದಿನಿಂದ ಇಂದಿನವರೆಗೂ ಹುಟ್ಟುತ್ತಲಿವೆ. ಇದು ಮೌಖಿಕ ಮತ್ತು ಲಿಖಿತವೆಂದೂ, ಮೌಖಿಕದಲ್ಲಿ ವದಂತಿಕ, ಸಾಹಿತ್ಯಕವೆಂದೂ, ಲಿಖಿತದಲ್ಲಿ ದಾಖಲಾತ್ಮಕ, ಸಾಹಿತ್ಯಕವೆಂದೂ ಬಿಚ್ಚಿಕೊಂಡಿದೆ. ಮೌಖೀಕ ವಲಯದ ವದಂತಿಗೆ ಸಂಬಂಧಪಟ್ಟಂತೆ ಅಲ್ಲಲ್ಲಿ ಅನೇಕ ಹೇಳಿಕೆಗಳು ಕೇಳಿ ಬರುತ್ತಿದ್ದರೆ, ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ನೂರಾರು ಜನಪದ ಹಾಡುಗಳು ಸಿಗುತ್ತವೆ. ಲಿಖಿತ ವಲಯದ ದಾಖಲೆಗಳಿಗೆ ಸಂಬಂಧಪಟ್ಟಂತೆ ಕೈಪಿಯತ್ತು, ಶಾಸನಗಳು ಲಭ್ಯವಿದ್ದರೆ  ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಸಾಂದರ್ಭಿಕ ಉಲ್ಲೇಖಗಳೂ, ಸ್ವತಂತ್ರ ಕಾವ್ಯಗಳೂ ಸಿಗುತ್ತವೆ. ಈ ಎಲ್ಲ ಶಾಖೋಪಶಾಖೆಗಳ ಶೋಧ, ಸಂಗ್ರಹ, ಅಧ್ಯಯನಗಳ ಸಮಗ್ರ ಯೋಜನೆಯೊಂದು ಅಸ್ತಿತ್ವಕ್ಕೆ ಬರಬೇಕಾಗಿದೆ. ಈ ಸಮಗ್ರದ ಒಂದು ಭಾಗವೆಂಬಂತೆ ಕುಮಾರರಾಮನನ್ನು ಕುರಿತ ಸಾಹಿತ್ಯ ಕೃತಿಗಳು ಹೀಗೆ ಹುಟ್ಟಿಕೊಂಡಿವೆ:

ಕುಮಾರರಾಮನನ್ನು ಕುರಿತ ಲಿಖಿತ ಸಾಹಿತ್ಯ

ಕುಮಾರರಾಮನನ್ನು ಕುರಿತು ಪ್ರಾಸಂಗಿಕ ಉಲ್ಲೇಖದ ಕಾವ್ಯಗಳು, ಸ್ವತಂತ್ರ ಕಾವ್ಯಗಳು ಕಂಡುಬರುತ್ತವೆ. ಚೆನ್ನಬಸವ ಪುರಾಣ, ಇಮ್ಮಡಿ ಚಿಕ್ಕಭೂಪಾಲನ ಸಾಗಂತ್ಯ, ನವರತ್ನ ಮಾಲಿಕೆ ಮೊದಲಾದ ಕೃತಿಗಳಲ್ಲಿ ಕುಮಾರರಾಮನ ಪ್ರಾಸಂಗಿಕ ಪ್ರಸ್ತಾಪ ಬರುತ್ತದೆ.

ನೇರವಾಗಿ ಕುಮಾರರಾಮನನ್ನು ಕುರಿತು ಹುಟ್ಟಿದ ಸ್ವತಂತ್ರ ಕಾವ್ಯಗಳ ಸಂಖ್ಯಾನಿರ್ಣಯ ಇನ್ನೂ ಚರ್ಚೆಯ ವಸ್ತುವಾಗಿ ಉಳಿದಿದೆ. ಈ ವಿಷಯವಾಗಿ ಮೊದಲು ತಲೆ ಕೆಡಿಸಿಕೊಂಡವರು ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರು. ಅವರ ಪ್ರಕಾರ ಈತನನ್ನು ಕುರಿತು ಕಾವ್ಯ ಬರೆದವರು ೫ ಜನ. ೧) ನಂಜುಂಡ, ೨) ಪಾಂಚಾಳಗಂಗ, ೩) ಗಂಗ, ೪) ನಾಗಸಂಗಯ್ಯ, ೫) ಮಹಾಲಿಂಗಸ್ವಾಮಿ. ಈ ಸಮಸ್ಯೆಯನ್ನು ಪಿ.ಎಚ್.ಡಿ ಅಧ್ಯಯನದಗಂಗ, ನಾಗಸಂಗಯ್ಯ ಹೆಸರಿನಲ್ಲಿರುವ ಕೃತಿಗಳು ಒಂದೇ ಪಠ್ಯದ ವಿಸ್ತೃತ, ಸಂಕೋಚ ಆವೃತ್ತಿಗಳೆಂದು ಹೇಳುತ್ತ, ಇವುಗಳ ಸಂಖ್ಯೆಯನ್ನು ೫ ರಿಂದ ೩ ಕ್ಕೆ ಇಳಿಸಿದ್ದಾರೆ.

ಇಂಥ ಸಂದರ್ಭದಲ್ಲಿ ಈ ಸಮಸ್ಯೆಗೆ ಕೈಹಾಕಿದ ನಮಗೆ ಮೇಲುಕೋಟೆಯ ‘ಸಂಸ್ಕೃತ ಸಂಶೋಧನ ಸಂಸತ್’ ದಲ್ಲಿ ‘ಹಳೆಯ ಕುಮಾರರಾಮನ ಸಾಂಗತ್ಯ’[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”][1] ಹೆಸರಿನ ತಾಳೆಗರಿ ಪ್ರತಿ, ಕಂಪಲಿಯ ಶ್ರೀ ದೊಡ್ಡನಗೌಡರ ಮನೆಯಲ್ಲಿ ‘ಹೊಸ ಕುಮಾರರಾಮನ ಸಾಂಗತ್ಯ’[2] ಹೆಸರಿನ ಕಾಗದ ಪ್ರತಿ ಲಭ್ಯವಾದವು. ಇವು ಲಿಪಿಕಾರರು ಬರೆದ ಹೆಸರುಗಳಾಗಿದ್ದು, ಇವೆರಡರ ಸಂಧಿ, ಪದ್ಯ ಸಂಖ್ಯೆ ಮತ್ತು ಅಂತರ್ಗತ ವಿಷಯ ಹೀಗಿದೆ:

ಹಳೆಯ ಕುಮಾರರಾಮನ ಸಾಂಗತ್ಯ (ಮೇಲುಕೋಟೆ ಸಂಸ್ಕೃತ ಸಂಶೋಧನ ಸಂಸತ್ ಪ್ರತಿ)

ಸಂಧಿ ಪದ್ಯ ಸಂಖ್ಯೆ
೧. ಹೊಸಮಲೆದುರ್ಗ ವರ್ಣನೆ ೯೩
೨. ಕುಮ್ಮಟದುರ್ಗ ವರ್ಣನೆ ೮೦
೩. ಬಹಾದೂರನು ಕುಮ್ಮಟಕ್ಕೆ ಬಂದುದು ೮೦
೪. ನೇಮಿಯ ಕಾಳಗ ೧೪೩
೫. ಓರುಗಲ್ಲು ಯುದ್ಧ ೨೫೬
೬. ನೀರಾಟ-ಚಂಡಿನಾಟ-ರತ್ನಾಜಿ ವ್ಯಾಮೋಹ ೪೪೩
೭. ನೆಲಮಾಳಿಗೆಯಲ್ಲಿ ಕುಮಾರರಾಮ ೨೦೮
೮. ನೇಮಿಯ ಕಾಳಗ-ಸೋಲು ೧೬೩
೯. ಮಾದಿಗಿತ್ತಿ ಕಾಳಗ ೧೮೦
೧೦. ತೆಲುಗರ ಸಂಚು-ರಾಮನ ಮರಣ ೧೫೪
ಒಟ್ಟು  ೧೮೦೦

 

ಹೊಸ ಕುಮಾರರಾಮನ ಸಾಂಗತ್ಯ (ಕಂಪಲಿ ಶ್ರೀ ದೊಡ್ಡನಗೌಡರ ಪ್ರತಿ)

ಸಂಧಿ ಪದ್ಯ ಸಂಖ್ಯೆ
೧. ದೇವಗಿರಿ ಯಾದವರಲ್ಲಿ ಮುಮ್ಮಡಿಸಿಂಗ ೬೬
೨. ರಾಯದುರ್ಗದಲ್ಲಿ ಮುಮ್ಮಡಿಸಿಂಗ-ಕಂಪಿಲ ೧೦೨
೩. ಕುಮಾರರಾಮನ ಜನನ-ಹೊಸಮಲೆಯಲ್ಲಿ ಕಂಪಿಲ ೧೦೩
೪. ಗುತ್ತಿಯ ಜಗದಪ್ಪನೊಡನೆ ಕಾಳಗ ೮೬
೫. ಓರುಗಲ್ಲ ಪ್ರವೇಶ ೧೪೭
೬. ಓರುಗಲ್ಲ ಯುದ್ಧ ೧೩೭
೭. ಶೂಲದ ಹಬ್ಬ-ರತ್ನಾಜಿ ವ್ಯಾಮೋಹ ೧೧೨
೮. ಕುಮ್ಮಟದುರ್ಗ ನಿರ್ಮಾಣ ೧೦೦
೯. ನೀರಾಟ-ಚಂಡಿನಾಟ-ರತ್ನಾಜಿ ವ್ಯಾಮೋಹ ೫೪೦
೧೦. ನೆಲಮಾಳಿಗೆಯಲ್ಲಿ ಕುಮಾರರಾಮ ೨೮೫
೧೧. ನೇಮಿಯ ಕಾಳಗ-ಸೋಲು ೪೬೨
೧೨. ಮಾದಗಿತ್ತಿ ಕಾಳಗ – ರಾಮನ ವೀರಮರಣ ೩೧೩
­ಒಟ್ಟು ೨೪೮೯

ಈ ಎರಡೂ ಯಾದಿಯಲ್ಲಿ ಇವುಗಳ ವ್ಯತ್ಯಾಸ ತಕ್ಕಮಟ್ಟಿಗೆ ಸ್ಪಷ್ಟವಾಗುತ್ತದೆ. ಹಳೆಯ ಕುಮಾರರಾಮನ ಸಾಂಗತ್ಯದ ಕಥೆ ನೇರವಾಗಿದೆ. ಹೊಸ ಕುಮಾರರಾಮನ ಸಾಂಗತ್ಯದ ಆರಂಭದಲ್ಲಿ ಮುಮ್ಮಡಿಸಿಂಗ ದೇವಗಿರಿ ಯಾದವರಲ್ಲಿ ರಾಜಸೇವೆಗೆ ನಿಂತನೆಂಬ, ಅಲ್ಲಿಂದ ಮಲೆಪಲ್ಲಿ ದೇಶದ ರಾಯದುರ್ಗದಲ್ಲಿ ಆಳಿದನೆಂಬ ಎರಡು ಸಂಧಿಗಳನ್ನು ಹೊಸದಾಗಿ ಸೇರಿಸುವ ಮೂಲಕ ಕಥೆಯನ್ನು ಒಂದಿಷ್ಟು ಹಿಂದಕ್ಕೆ ಒಯ್ಯಲಾಗಿದೆ. ಬಾದೂರನು ಕುಮ್ಮಟದುರ್ಗಕ್ಕೆ ಬಂದ ವಿವರವನ್ನು, ನೇಮಿಯ ಮೊದಲನೆಯ ಕಾಳಗವನ್ನು ಕೈಬಿಟ್ಟು, ಶೂಲದ ಹಬ್ಬದ ವಿವರವನ್ನು ಹೊಸದಾಗಿ ಸೇರಿಸಲಾಗಿದೆ. ಕುಮ್ಮಟದುರ್ಗದ  ಹಳೆಯ ಕುಮಾರರಾಮನ ಸಾಂಗತ್ಯದಲ್ಲಿ ೨ನೆಯ ಸಂಧಿಯಾಗಿ ಬಂದರೆ, ಹೊಸ ಕುಮಾರರಾಮನ ಸಾಂಗತ್ಯದಲ್ಲಿ ೮ನೆಯ ಸಂಧಿಯಷ್ಟು ದೂರ ಬಂದಿದೆ. ಇನ್ನೂ ಕೆಲವು ಸಣ್ಣ ಪುಟ್ಟ ಘಟನೆಗಳನ್ನು (ರಾಮದೇವರಾಯನ ಆಸ್ಥಾನದಲ್ಲಿ ಚಾಮಿದೇವನ ಡೊಂಬರಾಟ, ರತ್ನಾಜಿಯ ತವರು ಮನೆ ವಿವರ ಇತ್ಯಾದಿ) ಅಲ್ಲಲ್ಲಿ ಹೆಚ್ಚಿಗೆ ಸೇರಸಲಾಗಿದೆ. ಸುಮಾರು ೩೦೦ ಪದ್ಯಗಳು ಎರಡರಲ್ಲಿಯೂ ಸಮಾನವಾಗಿದೆ. ಹೀಗಿದ್ದೂ ಕೃತಿಶಿಲ್ಪ, ಹೊಸಪದ್ಯಗಳ ಪ್ರಮಾಣ ಇತ್ಯಾದಿಗಳನ್ನು ಗಮನಿಸಿದರೆ ಇವೆರಡೂ ಸ್ವತಂತ್ರ ಕೃತಿಗಳೇ ಆಗಿವೆಯೆಂಬುದು ಸ್ಪಷ್ಟವಾಗುತ್ತದೆ.

ಈ ಎರಡೂ ಕೃತಿಗಳಿಗೆ ಕವಿ ಇಟ್ಟ ಹೆಸರೇನು? ಎಂಬುದು ಈಗ ಬಗೆಹರಿಯದ ಸಮಸ್ಯೆಯಾಗಿದೆ. ಆದರೆ ಪ್ರಾಚೀನ ಕಾಲದಲ್ಲಿ ಒಂದನ್ನು ‘ಹಳೆಯ’, ಇನ್ನೊಂದನ್ನು ‘ಹೊಸ’ ವಿಶೇಷಣದಿಂದ ಕರೆಯುವುದು ರೂಢಿಯಲ್ಲಿದ್ದತೆಂಬುದು ಕುತೂಹಲದ ಸಂಗತಿಯಾಗಿದೆ.

ಹೀಗೆ ಈ ಕೃತಿಗಳ ಜಿಜನಾಮದಂತೆ, ಇವುಗಳ ಕವಿನಾಮವೂ ಚರ್ಚೆಗೆ ಎಡೆಮಾಡಿಕೊಡುತ್ತದೆ. ಎರಡರಲ್ಲಿಯೂ

ಕನ್ನಡ ದೇಶಕ್ಕೆ ರನ್ನದ ಪದಜಾತಿ
ಇನ್ನು ಮುನ್ನಿನ ಪಾಂಚಾಳ |
ಚಿನ್ನ ಭುಜಂಗನ ಪುತ್ರ ಗಂಗಯ್ಯ ಸಂ
ಪನ್ನ ಹೇಳಿದನೀ ಕೃತಿಯ ||

ಎಂಬ ಪದ್ಯವಿದೆ. ಇದು, ಈ ಎರಡರಲ್ಲಿ ಮೂಲತಃ ಯಾವ ಕೃತಿಗೆ ಸಂಬಧಿಸಿದೆ? ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಈವರೆಗೆ ವಿದ್ವಾಂಸರು ಭಾವಿಸಿದಂತೆ, ಈ ಪದ್ಯದಿಂದ ಇದನ್ನೊಳಗೊಂಡ ಕಾವ್ಯದ ಕರ್ತೃ ಪಾಂಚಾಳಗಂಗನೆಂಬ ಅರ್ಥ ಹೊರಡುವುದಿಲ್ಲ. ಈ ಮೊದಲು ಪಾಂಚಾಳಗಂಗನೆಂಬುವನು (‘ಇನ್ನು ಮುನ್ನಿನ’ ಗಮನಿಸಿರಿ. ಕೆಲವು ಪ್ರತಿಗಳಲ್ಲಿ ‘ಇನ್ನು ಮುನ್ನಿನಲಿ’ ಎಂದು ಸ್ಪಷ್ಟವಾಗಿಯೇ ಇದೆ.) ಆದುದರಿಂದ ಇದು ಹೊಸ ಕುಮಾರರಾಮನ ಸಾಂಗತ್ಯಕ್ಕೆ ಸಂಬಂಧಿಸಿದ ಪದ್ಯವೆಂದು ನಮ್ಮ ಭಾವನೆ. ಹಾಗಿದ್ದಲ್ಲಿ ಹಸ್ತಪ್ರತಿಗಳಲ್ಲಿ ಗಂಗನನ್ನು ಪ್ರಸ್ತಾಪಿಸುವ

ಪದ ಜಾತಿಗೆ ಪಾಂಚಾಳ ಗಂಗಯ್ಯನು
ಮುದದಿ ಪೇಳಿದನು ಈ ಕೃತಿಯ
|
ಸುಧೆಯ ಸೋನೆಯೊ ಮಾನಿತ ಮಂತ್ರದೇಳಿಗೆಯೊ
ಚದುರ ಸೊಬಗಿನಾ ಗರುವ
||

          ಗುರಿಯಿಲ್ಲದಂಬುದನು ಐನೂರು ಎಚ್ಚರೆ
ಗುರಿಯ ತಾಕುವದೆ ಲೋಕದೊಳು
|
ಗರಿಗಣೆ ಸುದ್ದ ರಾಮನ ಕೃತಿಬಾಣದಿ
ಉರವಿಯೊಳೆಚ್ಚ ಗಂಗಯ್ಯ
||

ಈ ಪದ್ಯಗಳು ಮಾತ್ರ ಪಾಂಚಾಳ ಗಂಗಯ್ಯ ಬರೆದ ಹಳೆಯ ಕುಮಾರರಾಮನ ಸಾಂಗತ್ಯಕ್ಕೆ ಸಂಬಧಿಸಿವೆಯೆಂದು ಹೇಳಬಹುದಾಗಿದೆ. ಈವರೆಗಿನ ಚರ್ಚೆಯಿಂದ ಹಳೆಯ ಕುಮಾರರಾಮನ ಚರಿತ್ರೆಯ ಕರ್ತೃ ಪಾಂಚಾಳಗಂಗ, ಹೊಸ ಕುಮಾರರಾಮನ ಸಾಂಗತ್ಯದ ಕರ್ತೃ ಗೊತ್ತಿಲ್ಲವೆಂದು ಒಪ್ಪಿಕೊಳ್ಳಬೇಕಾಗುತ್ತದೆ.[3] ಅದೇನೇ ಇದ್ದರೂ, ಬಹುಶಃ ಪಾಂಚಾಳ ಗಂಗನನ್ನು ಹೊರತುಪಡಿಸಿ ಎಲ್ಲ ಕವಿಗಳೂ ವೀರಶಯವರಾಗಿರುವುದು ಒಂದು ವಿಶೇಷ. ‘ಪಾಂಚಾಳ’ ಎಂಬುದಕ್ಕೆ ಪಾಠಾಂತರಗಳಿರುವುದರಿಂದ, ಶೈವವಾತಾವರಣ ತುಂಬಿಕೊಂಡಿರುವುದರಿಂದ ಗಂಗನ ಕೃತಿಯೂ ಅದರ ಕರ್ತೃ ವೀರಶೈವನೆಂಬ ಸೂಚನೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಹೊಸ ಕುಮಾರರಾಮನ ಸಾಂಗತ್ಯದ ಕರ್ತೃವೂ ವೀರಶೈವನೆನ್ನಬೇಕಾಗುತ್ತದೆ.

ಈ ಎರಡು ಕೃತಿಗಳ ಬಗೆಗೆ ಸ್ಪಷ್ಟಮಾಡಿಕೊಂಡು ಮುಂದುವರಿಯುವಲ್ಲಿ ಚಿತ್ರದುರ್ಗ ಪ್ರೊ. ಬಿ. ರಾಜಶೇಖರಪ್ಪ ಅವರಿಂದ ಕುಮಾರರಾಮನನ್ನು ಕುರಿತ ಒಂದು ತಾಳೆಗರಿ ಹಸ್ತಪ್ರತಿ ನಮೆಗೆ ಲಭಿಸಿತು. ಇದು ಈ ಹಿಂದೆ ಹುಲ್ಲೂರು ಶ್ರೀನಿವಾಸ ಜೋಯಿಸರು ಹೆಸರಿಸಿದ ನಾಗಸಂಗಯ್ಯನ ಕೃತಿ ಸಂತಾನವೇ ಆಗಿದೆ. ಜೋಯಿಸ ಅವರಿಗೆ ಸಿಕ್ಕಿದ್ದ ಕಾಗದ ಪ್ರತಿಯ ನಕಲು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿದೆ. ತಮ್ಮ ಹತ್ತಿರದ ಕಾಗದ ಪ್ರತಿಯಲ್ಲಿಯ

ಅಧಾರವಿಡಿದು ಹೇಳಿದ ನಾಗಸಂಗಯ್ಯ
ಈ ಧರೆಯ ವಿದ್ವಾಂಸರೊಳಗೆ
|
ಸಾಧಿಸಿ ಅವರ ಸೇವಕನಾಗಿ ಪೇಳ್ವೆನು
ಯಾದವಸಖ ಪಾರ್ಥ ಕಥೆಯ
||

ಎಂಬ ಪದ್ಯವನ್ನು ಗಮನಿಸಿ, ಹಲ್ಲೂರ ಅವರು, ಇದು ಸ್ವತಂತ್ರ ಕೃತಿಯೆಂದೂ, ಇದರ ಕರ್ತೃ ನಾಗಸಂಗಯ್ಯನೆಂದೂ ಪ್ರಚುರಪಡಿಸಿದ್ದಾರೆ. ಆದರೆ ಇದು ಗಂಗನ ವಿಸ್ತೃತ ಪಾಠವೇ ಹೊರತು ಸ್ವತಂತ್ರ ಕೃತಿಯಲ್ಲವೆಂದು ಡಾ. ವರದರಾಜರಾವ್ ಹೇಳುತ್ತಾರೆ. ಇಲ್ಲಿ ಒಂದಿಷ್ಟು ಚರ್ಚೆ ಅವಶ್ಯ. ಪ್ರೊ. ರಾಜಶೇಖರಪ್ಪ ಅವರಿಂದ ಬಂದ ತಾಳೆಪ್ರತಿಯಲ್ಲಿ ‘ಆಧಾರವಿಡಿದು ಹೇಳಿದ ನಾಗಸಂಗಯ್ಯ’ ಎಂಬುದಕ್ಕೆ ಬದಲು ‘ಆಧಾರವಿಡಿದು ಪೇಳಿದನಾಗ ಗಂಗಯ್ಯ’ ಎಂಬ ಪಾಠವಿದೆ. ಗಂಗಯ್ಯನೆಂಬುವನು (ಐತಿಹಾಸಿಕ) ಆಧಾರಗಳನ್ನವಲಂಬಿಸಿ ಪೂರ್ವ ಕಾಲದಲ್ಲಿ ಕೃತಿಯೊಂದನ್ನು ಬರೆದಿರುವನೆಂದು ಈ ಪದ್ಯ ಸೂಚಿಸುವಂತಿದೆ. ಆತ ಪಾಂಚಾಳ ಗಂಗನೇ ಆಗಿದ್ದಾನೆ. ’ಅವರ ಸೇವಕನಾಗಿ ಪೇಳ್ವೆನು’ ಅಂದರೆ ನಾನು ಆ ಪಾಂಚಾಳ ಗಂಗನ ಸೇವಕನಾಗಿ ಈ ಕೃತಿ ಬರೆಯುತ್ತೇನೆ-ಎಂಬುದು ಇಲ್ಲಿಯ ಆಶಯ. ಇವನ ಹೊಸತನವೆಂದರೆ, ಇದರಲ್ಲಿ ಪಾರ್ಥನ ಕಥೆಯನ್ನು ಸಮೀಕರಿಸುತ್ತೇನೆ- ಎಂಬುದು. ಈ ಹೇಳಿಕೆಯಿಂದ ಅರ್ಜುನನೇ ಕುಮಾರರಾಮನಾಗಿ, ರಂಭೆಯೇ ರತ್ನಾಜಿಯಾಗಿ ಹುಟ್ಟಿದಳೆಂಬ ತಂತ್ರ ಬಳಸಿ ತನ್ನ ಕಾವ್ಯವನ್ನು ಈತ ಬರೆದಿದ್ದಾನೆ. ಈ ವಿವರಣೆಯ ಹಿನ್ನಲೆಯಲ್ಲಿ ಶ್ರೀ ಹುಲ್ಲೂರು ಅವರು ಒಪ್ಪಿಕೊಂಡ ನಾಗಸಂಗಯ್ಯನ ಹೆಸರನ್ನು ಕೈ ಬಿಡಬೇಕಾಗುತ್ತದೆ. ಆದರೆ ಈ ಕವಿ ತನ್ನ ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಸದ್ಯ ಕಾಲ, ದೇಶಗಳ ವಿಷಯವಾಗಿ ಏನೂ ಹೇಳುವಂತಿಲ್ಲ. ಕೃತಿನಾಮವನ್ನೂ ನಿರ್ದಿಷ್ಟವಾಗಿ ಉಲ್ಲೇಖೀಸಿಲ್ಲ. ಲಿಪಿಕಾರ ಸೂಚಿಸಿದ ‘ಕೊಮಾರ ರಾಮಯ್ಯನ ಚರಿತ್ರೆ’ ಎಂಬುದನ್ನು ನಾವು ಸ್ವೀಕರಿಸಿದ್ದೇವೆ.

ಈ  ಮೂರು ಕೃತಿಗಳಲ್ಲದೆ ಹಂಪೆಯ ಮಹಾಲಿಂಗಸ್ವಾಮಿ ಬೇರೊಂದು ಕೃತಿ ಬರೆದುದು (ವರದರಾಜರಾವ್ ಪ್ರಕಾರ ಇದರ ಹೆಸರು ‘ಬಾಲ ಕುಮಾರರಾಮನ ಸಾಂಗತ್ಯ’) ಎಲ್ಲರಿಗೂ ಗೊತ್ತು. ಇವುಗಳಲ್ಲದೆ ಕುಮಾರರಾಮನನ್ನು ಕುರಿತು ನಂಜುಂಡ ಬರೆದ ‘ರಾಮನಾಥ ಚರಿತೆ’ ಸರ್ವಶ್ರುತ. ಆದುದರಿಂದ ಮೇಲೆ ವಿವೇಚಿಸಿದಂತೆ ಈವರೆಗೆ ಕುಮಾರರಾಮನನ್ನು ಕುರಿತು ಹೀಗೆ ೫ ಕೃತಿಗಳು ಹುಟ್ಟಿವೆ:

೧. ಹಳೆಯ ಕುಮಾರರಾಮನ ಸಾಂಗತ್ಯ – ಪಾಂಚಾಳ ಗಂಗ

೨. ಹೊಸ ಕುಮಾರರಾಮನ ಸಾಂಗತ್ಯ – ಅನಾಮಧೇಯ ಕವಿ-೧

೩. ಕೊಮಾರರಾಮಯ್ಯನ ಚರಿತ್ರೆ – ಅನಾಮಧೇಯ ಕವಿ-೨

೪. ಬಾಲ ಕೊಮಾರರಾಮನ ಸಾಂಗತ್ಯ – ಮಹಾಲಿಂಗಸ್ವಾಮಿ

೫. ರಾಮನಾಥ ಚರಿತೆ- ನಂಜುಂಡ

ಈ ಐವರಲ್ಲಿ ನಂಜುಂಡನ ಕೃತಿ ಮಾತ್ರ ಪ್ರಕಟವಾಗಿದ್ದುತು. ಕಳೆದ ವರ್ಷ ಅನಾಮಧೇಯ ಕಿಯ ’ಹೊಸ ಕುಮಾರರಾಮನ ಸಾಂಗತ್ಯ’ ನನ್ನಿಂದ ಪರಿಷ್ಕರಿಸಲ್ಪಟ್ಟು ಪ್ರಕಟವಾಗಿದ್ದು, ಈಗ ಇನ್ನೊಬ್ಬ ಅನಾಮಧೇಯ ಕವಿಯ ‘ಕೊಮಾರ ರಾಮಯ್ಯನ ಚರಿತ್ರೆ’ ಬೆಳಕು ಕಾಣುತ್ತಲಿದೆ.

ಕೊಮಾರ ರಾಮಯ್ಯನ ಚರಿತ್ರೆ

ಮೇಲೆ ವಿವರಿಸಿದಂತೆ ಈ ಕವಿಯ ಹೆಸರಾಗಲೀ, ಕೃತಿಯ ಹೆಸರಾಗಲೀ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಶ್ರೀ ಹುಲ್ಲೂರ ಅವರು ಹೆಸರಿಸಿರುವ ‘ನಾಗಸಂಗಯ್ಯ’ ಎಂಬುದು ಲಿಪಿಕಾರರು ಸೃಷ್ಟಿಸಿದ ಪಾಠಭೇದದಿಂದ ಮತ್ತು ವಿದ್ವಾಂಸರು ತಪ್ಪಾಗಿ ಓದುವುದರಿಂದ ಹುಟ್ಟಿದುದಾಗಿದೆ. ಆದುದರಿಂದ ಕನ್ನಡದ ಅನೇಕ ಕೃತಿಗಳಂತೆ ಈ ಕೃತಿ ಕರ್ತೃವಿನ ಹೆಸರೂ ಅಜ್ಞಾತವೆಂದು ಹೇಳಬಹುದಾಗಿದೆ. ಹೀಗೆ ಕರ್ತೃನಾಮ ನಮೂದಿಸದೇ ಇರುವುದಕ್ಕೆ ಗದುಗಿನ ಭಾರತ, ಪ್ರಭುಲಿಂಗಲೀಲೆ ಕರ್ತೃಗಳ ಧೋರಣೆಗಿಂತ, ಜನಪದ ಕೃತಿಕರ್ತೃಗಳ ಧೋರಣೆ ಕಾರಣವಾಗಿರುವಂತಿದೆ. ಆದುದರಿಂದ ಜನಪದ ಕೃತಿಯ ಕವಿನಾಮ ಜೀವಿತ ಕಾಲಗಳಂತೆ ಈ ಕೃತಿಯ ಕವಿನಾಮ ಜೀವಿತಕಾಲ ಸಿಗುವುದಿಲ್ಲವೆಂದೇ ತೋರುತ್ತದೆ. ಕವಿನಾಮ ಬಿಟ್ಟರೂ ಕಾಲ ವಿಷಯವಾಗಿ ಆಂತರಿಕ ಆಧಾರಗಳೂ ಸಿಗುವುದಿಲ್ಲ. ಆರಂಭದ ‘ಶ್ರೀ ಗಿರಿಜಾಸ್ಯಾಂಬುಜ ದಿನನಾಯಕ’ ಎಂಬ ಪದ್ಯ ಹಳೆಯ ಕುಮಾರರಾಮನ ಸಾಂಗತ್ಯ, ಬಾಲ ಕುಮಾರರಾಮನ ಸಾಂಗತ್ಯಗಳನ್ನು ಹೊರತುಪಡಿಸಿ ಮಿಕ್ಕ ಮೂರರಲ್ಲಿಯೂ ಅಂದರೆ ರಾಮನಾಥ ಚರಿತೆ, ಕುಮಾರರಾಮಯ್ಯನ ಚರಿತ್ರೆಗಳ ಎಲ್ಲ ಸಂಧಿಗಳ ಆದಿಯಲ್ಲಿ, ಹೊಸ ಕುಮಾರರಾಮನ ಸಾಂಗತ್ಯದ ಕೆಲವು ಸಂಧಿಗಳ ಆಧಿಯಲ್ಲಿ ಕಂಡುಬರುತ್ತದೆ. ಹೀಗಾಗಿ ಮೂಲತಃ ಈ ಪದ್ಯ ಯಾರದು? ಸ್ಪಷ್ಟವಾಗುವದಿಲ್ಲ. ನಂಜುಂಡದೆನ್ನಬೇಕೆಂದರೆ ಅವನ ಕೃತಿಯ ಕೆಲವು ಹಸ್ತಪ್ರತಿಗಳಲ್ಲಿಯೂ ಕೆಲವೊಮ್ಮೆ ಈ ಪದ್ಯ ಕಂಡುಬರುವುದಿಲ್ಲ. ಹೀಗಾಗಿ ಇವರಲ್ಲಿ ಯಾರು ಮೊದಲು, ಯಾರು ಆಮೇಲೆ ಎಂದು ನಿಕರವಾಗಿ ನಿರ್ಣಯಿಸುವುದು ಕಷ್ಟ. ಹೀಗಿದ್ದೂ ಹಳೆಯ ಕುಮಾರರಾಮನ ಸಾಂಗತ್ಯ, ಹೊಸ ಕುಮಾರರಾಮನ ಸಾಂಗತ್ಯ, ಕೊಮಾರ ರಾಮಯ್ಯನ ಚರಿತ್ರೆ, ರಾಮನಾಥ ಚರಿತ್ರೆ-ಎಂದು ಕಾಲಕ್ರಮವನ್ನು ಹೇಳಬಹುದಾದರೂ, ಮಹಾಲಿಂಗಸ್ವಾಮಿ ಈ ಕ್ರಮದಲ್ಲಿ ಎಲ್ಲಿ ನಿಲ್ಲುವನೆಂಬುದು ಸ್ಪಷ್ಟವಾಗುವುದಿಲ್ಲ. ಕೊನೆಯಪಕ್ಷ ಎಲ್ಲರಿಗೂ ಮೂಲವಾಗಿರುವ ಗಂಗನ ಕಾಲವೂ ಗೊತ್ತಾಗುವುದಿಲ್ಲ. ಇದೇ ರೀತಿ ಈ ಕವಿಯ ಸ್ಥಳವಾಗಲೀ, ಮಿಕ್ಕ ವಿವರಗಳಾಗಲೀ ಸಿಗುವುದಿಲ್ಲ.

ಕೃತಿಆಕೃತಿಸಂಸ್ಕೃತಿ

ಜೀವನವೆನ್ನುವುದು ಕ್ರಿಯಾ ಸರಣಿಯಾಗಿರುವುದರಿಂದ ಪ್ರತಿಯೊಬ್ಬನ ಜೀವನ ಬೃಹತ್ ‘ಕೃತಿ’ ಎನಿಸುತ್ತದೆ. ಶಸನಗಳಲ್ಲಿ ಕುಮಾರರಾಮನ ‘ಜೀವನಕೃತಿ’ಗೆ ಸಂಬಂಧಪಟ್ಟ ವಿವರಗಳು ಕಡಿಮೆ. ಜನಪದ ಸಾಹಿತ್ಯದಲ್ಲಿ ಒಂದಿಷ್ಟು ವಿವರಗಳಿದ್ದರೂ ಅದು ಬಾಯಿಯಿಂದ ಬಾಯಿಗೆ ಬದಲಾಗುತ್ತ ಬಂದ ಪಾಠ. ಆದುದರಿಂದ ಕವಿಯ ಕಾಲದಷ್ಟು ಹಿಂದೆ ದಾಖಲಾಗಿರುವ ಮತ್ತು ತುಂಬ ವಿವರಣಾತ್ಮಕವಾಗಿರುವ ಕಾವ್ಯಗಳಲ್ಲಿ ಮಾತ್ರ ಅದು ವಿಸ್ತಾರವಾಗಿ ಮೂಡಿರುತ್ತದೆ.

ಕೃತಿ

ಕುಮಾರರಾಮನನ್ನು ಕುರಿತು ಹುಟ್ಟಿರುವ ಐದು ಕಾವ್ಯಗಳಲ್ಲಿ ಚರಿತ್ರೆಯ ಚಿತ್ರಣ ಒಂದಿಷ್ಟು ವಿಭಿನ್ನವಾಗಿದೆ. ಕಾವ್ಯವಾಗಿರುವ ಕೊಮಾರ ರಾಮಯ್ಯನ ಚಿರಿತ್ರೆ ತನ್ನ ಅಳವಿಗೆ ಸಿಕ್ಕಷ್ಟು, ನಿಲವಿಗೆ ಗಕ್ಕಷ್ಟು ಸೆರೆಹಿಡಿದಿರುವ ಇವನ ‘ಜಿವನಕೃತಿ’ ಹೀಗಿದೆ.



[1] ಈ ಹಸ್ತಪ್ರತಿಯ ಆರಂಭದಲ್ಲಿ “ಹಳೆ ಕುಮಾರರಾಮನ ಚರಿತೆ” ಎಂಬ ಪಾಠವಿದೆ. ಇದನ್ನು ನಾವು “ಹಳೆಯ ಕುಮಾರರಾಮನ ಸಾಂಗತ್ಯ” ಎಂದು ಇಟ್ಟುಕೊಂಡಿದ್ದೇವೆ.

[2] ಈ ಹಸ್ತಪ್ರತಿಯು ಅಂತ್ಯದಲ್ಲಿ “ಹೊಸ ರಾಮ ಸಾಂಗತ್ಯ”, “ಹೊಸ ರಾಮನ ಸಾಂಗತ್ಯ” ಎಂಬ ಪಾಠಗಳಿವೆ. ಇವನ್ನು ನಾವು  “ಹೊಸ ಕುಮಾರರಾಮನ ಸಾಂಗತ್ಯ” ಎಂದು ಇಟ್ಟುಕೊಂಡಿದ್ದೇವೆ.

[3] ಶ್ರೀ ಎಸ್. ಆರ್. ಕೂಡ್ಲಿಗಿ ಅವರು ಇದರ ಕರ್ತೃ ಗಂಗಾಧರ ಎಂದು ಹೇಳುತ್ತಾರೆ (ಜಯಕರ್ನಾಟಕ, ಜೂನ್ ೧೯೪೨). ಇದಕ್ಕೆ ಆಧಾರ ಕೊಟ್ಟಿಲ್ಲ. ಗಂಗ ಎಂಬುದನ್ನೇ ಗಂಗಾಧರ ಎಂದು ಸುಧಾರಣೆ ಮಾಡಿರುವರೇ?

ಕುಮಾರರಾಮನ ಸಾಂಗತ್ಯವನ್ನು ಕುರಿತು ಹುಲ್ಲೂರ ಶ್ರೀನಿವಾಸ ಜೋಯಿಸರು ವಾಗ್ಬೂಷಣದಲ್ಲಿ (೧೯೪೮) ಲೇಖನ ಬರೆದಿರುವರೆಂದೂ, ಇದರಲ್ಲಿ ೮ ಸಂಧಿ, ೧೮೮೫ ಪದ್ಯಗಳಿದ್ದು, ಇದನ್ನು ಬೂದಿಹಾಳ ಗಂಗ ಬರೆದಿರುವನೆಂದೂ ಹೇಳಿರುವರೆಂದು ತಿಳಿದುಬರುತ್ತದೆ. ಗಂಗಾಧರ ಮತ್ತು ಬೂದಿಹಾಳ ಇವೆರಡೂ ಪರಿಶೀಲನಾರ್ಹವಾಗಿವೆ.

[/fusion_builder_column][/fusion_builder_row][/fusion_builder_container]