ಬಿ.ಆರ್. ಪಂತುಲು
July 26
೨೬.೭.೧೯೧೧ ೮.೧೦.೧೯೭೪ ಪ್ರಖ್ಯಾತ ರಂಗಭೂಮಿಯ ಕಲಾವಿದರಾದ ಪಂತುಲು ರವರು ಹುಟ್ಟಿದ್ದು ಬಂಗಾರುಪೇಟೆಯ ಸಮೀಪದ ಬುಡುಗೂರು ಗ್ರಾಮದಲ್ಲಿ. ತಂದೆ ಕಲಾ ಪ್ರೇಮಿ, ನಾಟಕ ಪ್ರಿಯರಾಗಿದ್ದ ವೆಂಕಟಾಚಲಯ್ಯ, ಮಾತೃಭಾಷೆ ತೆಲುಗಾದರೂ ತಮಿಳು, ಕನ್ನಡ ಭಾಷೆಯನ್ನು ಲೀಲಾಜಾಲವಾಗಿ ಪ್ರಯೋಗಿಸುವ ಕಲೆಗಾರಿಕೆ. ಮದರಾಸಿನಲ್ಲಿ ವ್ಯಾಸಂಗ ಮುಗಿಸಿದ ನಂತರ ಕುಪ್ಪಂನಲ್ಲಿ ಶಾಲಾ ಉಪಾಧ್ಯಾಯರಾಗಿ ವೃತ್ತಿಜೀವನ ಆರಂಭ. ನಾಟಕಾಭಿನಯದ ಗೀಳು ಹತ್ತಿ ಹೊರಟಿದ್ದು ಬೆಂಗಳೂರಿಗೆ. ಮಹಮದ್ ಪೀರ್ ರವರ ಚಂದ್ರಕಲಾ ನಾಟಕ ಸಂಸ್ಥೆ ಸೇರಿ ಹಲವಾರು ನಾಟಕಗಳಲ್ಲಿ ಅಭಿನಯ. ಷಾಜಹಾನ್ ನಾಟಕದ ಅಭಿನಯದಿಂದ ಪಡೆದ ಖ್ಯಾತಿ. ಸಂಸಾರನೌಕಾದ ಸುಂದರ, ಸದಾರಮೆಯ ಪುರೋಹಿತ, ರಾಮಾಯಣದ ರಾವಣ, ಗುಲೇಬಕಾವಲಿಯ ನಾಯಕನಟರಾಗಿ ಪಡೆದ ಜನಮೆಚ್ಚುಗೆ. ಸಂಸಾರನೌಕಾನಾಟಕವು ಬೆಂಗಳೂರು ಒಂದರಲ್ಲೆ ೧೨೫ ಪ್ರದರ್ಶನ ನೀಡಿ ಪಡೆದ ಖ್ಯಾತಿ. ಪೀರ್ ಕಂಪನಿ ಬಿಟ್ಟು ಸೇರಿದ್ದು ಗುಬ್ಬಿ ಕಂಪನಿ. ಆಶಾ-ಪಾಶ, ಕೃಷ್ಣಗಾರುಡಿ ನಾಟಕಗಳಲ್ಲಿ ಪ್ರಮುಖಪಾತ್ರ. ಎಂ. ಮಾಧುರಾಯರ ಜೊತೆಗೂಡಿ ಸ್ಥಾಪಿಸಿದ ಸ್ವಂತ ನಾಟಕ ಸಂಸ್ಥೆ ‘ಕಲಾಸೇವಾಮಂಡಲಿ’. ಸಂಸಾರ ನೌಕಾ, ಸದಾರಮೆ, ರಾಮಾಯಣ, ಗುಲೇಬಕಾವಲಿ ನಾಟಕಗಳಿಂದ ಪಡೆದ ಜನಪ್ರಿಯತೆ. ಆಂಧ್ರ, ಮದರಾಸಿನಲ್ಲೂ ನಾಟಕಗಳ ಪ್ರದರ್ಶನ. ಕೆಲಕಾಲ ಬಿ.ಆರ್. ಮಹಾಲಿಂಗಂ ನಾಟಕ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆ. ಎಚ್.ಎಲ್.ಎನ್. ಸಿಂಹ ನಿರ್ದೇಶನದ ಸಂಸಾರನೌಕಾ ಚಲನಚಿತ್ರದ ಮೂಲಕ ಚಲನಚಿತ್ರನಟನ ಪಟ್ಟ. ರಾಧಾರಮಣ ಚಲನಚಿತ್ರದ ನಾಯಕ. ಸ್ವತಂತ್ರ ಚಿತ್ರ ಸಂಸ್ಥೆಯಿಂದ ಹಲವಾರು ಚಿತ್ರಗಳ ನಿರ್ಮಾಣ. ಮೊದಲತೇದಿ, ನಂಬೆಕ್ಕ, ಮೊದಲು ನಿರ್ದೇಶಿಸಿದ ಚಿತ್ರ ರತ್ನಗಿರಿ ರಹಸ್ಯ. ಸ್ಕೂಲ್ಮಾಸ್ಟರ್ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಾಲಿನಲ್ಲಿ ಅಖಿಲಭಾರತ ಮಟ್ಟದಲ್ಲಿ ಭಾರತೀಯ ಭಾಷಾ ಚಿತ್ರಗಳಿಗೆ ನೀಡುವ ಅರ್ಹತಾ ಪತ್ರ ಪಡೆದ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆ. ಹಲವಾರು ಐತಿಹಾಸಿಕ ಚಿತ್ರಗಳ ನಿರ್ಮಾಣ. ಕಿತ್ತೂರು ಚೆನ್ನಮ್ಮ ಹಾಗೂ ಕೃಷ್ಣದೇವರಾಯ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ, ತಿಮ್ಮರಸು ಪಾತ್ರಕ್ಕೆ ದೊರೆತ ಶ್ರೇಷ್ಠನಟ ಪ್ರಶಸ್ತಿ ಇದೇ ದಿನ ಹುಟ್ಟಿದ ಕಲಾವಿದರು ಸಯ್ಯದ್ಜಾನ್. ಟಿ.ಎಲ್ – ೧೯೩೬ ಯದುಗಿರಿ ಎಚ್.ಎಸ್ – ೧೯೪೨ ಶ್ಯಾಮಲಕೃಷ್ಣ ಜಿ. ಕುಲಕರ್ಣಿ – ೧೯೫೨
* * *